Tag: Food Fair

  • ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ

    ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) 2025ರ ಅಂಗವಾಗಿ ಸೋಮವಾರ (ಸೆ.22) ಜನಪ್ರಿಯ ಆಹಾರ ಮೇಳ ಹಾಗೂ ದೀಪಾಲಂಕಾರಕ್ಕೆ ಚಾಲನೆ ನೀಡಲಾಯಿತು.

    ದೀಪಾಲಂಕಾರ:
    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್ ದೀಪಾಲಂಕಾರಕ್ಕೆ ಇಂಧನ ಸಚಿವರಾದ ಕೆ.ಜೆ.ಜಾರ್ಜ್ (KJ George) ಅವರು ಚಾಲನೆ ನೀಡಿದರು.

    ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ವತಿಯಿಂದ ದಸರಾ ದೀಪಾಲಂಕಾರ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು ಆಕರ್ಷಣೀಯವಾಗಿ ಈ ಬಾರಿಯ ದೀಪಾಲಂಕಾರ ಕಂಗೊಳಿಸಲಿದೆ. ಈ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರು 21 ದಿನಗಳ ಕಾಲ ದೀಪದ ಬೆಳಕಿನಲ್ಲಿ ಮಿನುಗಲಿದೆ.ಇದನ್ನೂ ಓದಿ: Photo Gallery | ಹೂವು ಚೆಲುವೆಲ್ಲಾ ತನ್ನದೆನ್ನುತ್ತಿದೆ.. ಸಂಗೀತ ಝೇಂಕಾರ ಮನಮುಟ್ಟುತ್ತಿದೆ – ದಸರಾ ಸೊಬಗು ಕಣ್ತುಂಬಿಕೊಳ್ಳಿ

    136 ಕಿ.ಮೀ ದೀಪಾಲಂಕಾರ:
    ದಸರಾ ಹಿನ್ನೆಲೆಯಲ್ಲಿ ಈ ಬಾರಿ ನಗರದ 136 ಕಿ.ಮೀ ವ್ಯಾಪ್ತಿಯ ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದರೊಂದಿಗೆ ನಗರದ ಪ್ರಮುಖ ಕಡೆಗಳಲ್ಲಿ ಎಲ್‌ಇಡಿ ಬಲ್ಬ್ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ನಿಗದಿಯಂತೆ ಸೆ.22ರಿಂದ ಅ.2ರವರೆಗೆ ವಿದ್ಯುತ್ ದೀಪಾಲಂಕಾರ ನಡೆಯಲಿದ್ದು, ಇದರೊಂದಿಗೆ ಮುಖ್ಯಮಂತ್ರಿಗಳ ನಿರ್ದೇಶನದಂತೆ 10 ದಿನಗಳು ವಿಸ್ತರಣೆ ಮಾಡಿಲಾಗಿದೆ, ಈ ಮೂಲಕ ಒಟ್ಟು 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ಇದಕ್ಕಾಗಿ 300 ಕಿ.ಲೋ ವ್ಯಾಟ್‌ಗಳ, 2,57,520 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿದೆ.

    ಕೋಲ್ಕತ್ತಾ ಲೈಟಿಂಗ್ ಮೆರಗು :
    ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಬಾರಿ ಕೋಲ್ಕತ್ತಾ ಮಾದರಿ ಲೈಟಿಂಗ್ ಸಹ ಅಳವಡಿಸಲಾಗಿದೆ. ಇದರ ಮೂಲಕವಾಗಿ ನಗರದ ಹಲವು ಕಡೆಗಳಲ್ಲಿ ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುವ ಮೂಲಕ ದಸರಾ ವಿದ್ಯುತ್ ದೀಪಾಲಂಕಾರದ ಮೆರಗು ಹೆಚ್ಚಿಸಲಾಗಿದೆ.

    ಕಂಗೊಳಿಸುತ್ತಿದೆ ಮೈಸೂರು:
    ಇಡೀ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಪ್ರಮುಖವಾಗಿ ಅರಮನೆ ಸುತ್ತಲಿನ ರಸ್ತೆಗಳು ಸೇರಿದಂತೆ ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿರಸ್ತೆ, ಹೊರವಲಯದಲ್ಲಿನ ಪ್ರಮುಖ ಹೆದ್ದಾರಿಗಳಿಗೂ ದೀಪಾಲಂಕಾರ ಮಾಡಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಪ್ರಮುಖ ವೃತ್ತಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿದೆ. ಇದಲ್ಲದೆ ದೊಡ್ಡಕೆರೆ ಮೈದಾನ, ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ ವಿವಿಧೆಡೆ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದೆ.ಇದನ್ನೂ ಓದಿ: ಮೈಸೂರು ರೇಷ್ಮೆ ಸೀರೆ, ಮಲ್ಲಿಗೆ ಮುಡಿದು ಚಾಮುಂಡಿ ತಾಯಿಯ ಸೀರೆ ಪಡೆದ ಬಾನು ಮುಷ್ತಾಕ್‌

    ಅಗತ್ಯ ಸುರಕ್ಷತಾ ಕ್ರಮಗಳು:
    ದಸರಾ ವಿದ್ಯುತ್ ದೀಪಾಲಂಕಾರದಲ್ಲಿ ಸೆಸ್ಕ್ ವತಿಯಿಂದ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಆ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ದೀಪಾಲಂಕಾರದ ಕಂಬಗಳನ್ನು ಮುಟ್ಟದೆ, ಅಂತರ ಕಾಯ್ದುಕೊಳ್ಳುವುದು, ದೀಪಾಲಂಕಾರದ ಕಂಬಗಳ ಹತ್ತಿರ ನಿಂತು ಫೋಟೋ/ವಿಡಿಯೋ ಶೂಟ್ ಮಾಡುವುದನ್ನು ತಪ್ಪಿಸುವುದು, ಮಳೆ ಸಂದರ್ಭದಲ್ಲಿ ವಿದ್ಯುತ್/ದೀಪಾಲಂಕಾರದ ಕಂಬಗಳ ಹತ್ತಿರ ಹೋಗದೆ ಎಚ್ಚರವಹಿಸುವುದು, ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರಕ್ಕಾಗಿ ಕಂಬಗಳನ್ನು ಅಳವಡಿಸಿದ್ದು, ವಾಹನ ಸವಾರರು ಈ ಬಗ್ಗೆ ನಿಗಾವಹಿಸಿ ಸುರಕ್ಷಿತವಾಗಿ ಸಂಚರಿಸುವಂತೆ, ವಿದ್ಯುತ್ ಸಂಬಂಧಿತ ದೂರು/ದೀಪಾಲಂಕಾರದಿಂದ ತೊಂದರೆ ಆದಲ್ಲಿ ಸಹಾಯವಾಣಿ 1912 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.

    ಆಕರ್ಷಕ ಡ್ರೋನ್ ಶೋ:
    ದಸರಾ ಮಹೋತ್ಸವದ ಹೊಸ ಆಕರ್ಷಣೆಯಾಗಿರುವ ಡ್ರೋನ್ ಪ್ರದರ್ಶನ ಈ ಬಾರಿ ಮತ್ತಷ್ಟು ವರ್ಣರಂಜಿತವಾಗಿರಲಿದೆ. ಕಳೆದ ಬಾರಿ 1,500 ಡ್ರೋನ್ ಬಳಸಿಕೊಂಡು ನಡೆಸಲಾಗಿದ್ದ ಡ್ರೋನ್ ಪ್ರದರ್ಶನದಲ್ಲಿ ಈ ಬಾರಿ 3,000 ಸಾವಿರ ಡ್ರೋನ್ ಬಳಸಿಕೊಂಡು ನಡೆಸಲಾಗುತ್ತದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೆ.28, 29 ಮತ್ತು ಅಕ್ಟೋಬರ್ 1 ಮತ್ತು 2ರಂದು ಡ್ರೋನ್ ಪ್ರದರ್ಶನ ನಡೆಯಲಿದೆ.

    ಆಹಾರ ಮೇಳ:
    ಮಹಾರಾಜ ಕಾಲೇಜು ಮೈದಾನದಲ್ಲಿ “ರುಚಿಯೊಂದಿಗೆ ಸ್ವಚ್ಛತೆಯ ಸಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಜನಪ್ರಿಯ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಉದ್ಘಾಟಿಸಿದರು.

    ಈ ಮೇಳದಲ್ಲಿ ಒಟ್ಟು 160ಕ್ಕೂ ಹೆಚ್ಚು ಮಳಿಗೆಗಳು ತೆರೆದಿದ್ದು, ಅವುಗಳಲ್ಲಿ 121 ಸಸ್ಯಾಹಾರಿ ಹಾಗೂ 39 ಮಾಂಸಾಹಾರಿ ಮಳಿಗೆಗಳಿವೆ. ಇಲ್ಲಿ ಸ್ಥಳೀಯವಾಗಿ ಮೈಸೂರಿನ ವಿಶೇಷ ಆಹಾರ ಶೈಲಿ, ಬುಡಕಟ್ಟು, ಮಲೆನಾಡು, ಕೊಡವ, ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಪಾಕಶೈಲಿಗಳ ಜೊತೆಗೆ ಗುಜರಾತಿ, ರಾಜಸ್ಥಾನಿ, ಹೈದರಾಬಾದಿ, ಕೇರಳ, ಚೈನೀಸ್ ಮತ್ತು ಅಂತಾರಾಷ್ಟ್ರೀಯ ಪಾಕಶೈಲಿಗಳನ್ನು ಪರಿಚಯಿಸಲಾಗಿದೆ.

    ಈ ಮೇಳಕ್ಕೆ ಪ್ರವಾಸಿಗರು ಮತ್ತು ಸಾರ್ವಜನಿಕರು ತಮ್ಮ ಕುಟುಂಬ ಸಮೇತ ಭೇಟಿ ನೀಡಿ, ವಿವಿಧ ಶೈಲಿಯ ಆಹಾರ ಪದ್ಧತಿಗಳ ಪರಿಚಯ ಪಡೆದು, ತಮಗೆ ಇಷ್ಟವಾದ ಭೋಜನಗಳನ್ನು ಸವಿಯಲು ಒಂದು ಅಪೂರ್ವ ಅವಕಾಶವನ್ನು ಒದಗಿಸುತ್ತದೆ.ಇದನ್ನೂ ಓದಿ: Mysuru Dasara | ನೀಲಿ ಜರಿ ಸೀರೆಯಿಂದ ಕಂಗೊಳಿಸುತ್ತಿರುವ ಚಾಮುಂಡಿ ದೇವಿ

  • ಇಂದಿನಿಂದ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ 2ನೇ ಆವೃತ್ತಿಯ ಆಹಾರ ಮೇಳ

    ಇಂದಿನಿಂದ ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ 2ನೇ ಆವೃತ್ತಿಯ ಆಹಾರ ಮೇಳ

    -ಆಹಾರ ಮೇಳಕ್ಕೆ ಬನ್ನಿ, ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

    ಬೆಂಗಳೂರು: ಆಹಾರ ಪ್ರಿಯರಿಗೊಂದು ಸಿಹಿ ಸುದ್ದಿ. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುವ ಆಹಾರ ಮೇಳ ಮತ್ತೆ ಬಂದಿದೆ. ಮೊದಲನೇ ವರ್ಷದ ಅಹಾರ ಮೇಳ ಯಶಸ್ವಿಯಾದ ಬಳಿಕ ನಿಮ್ಮ ಪಬ್ಲಿಕ್ ಟಿವಿ ಎರಡನೇ ವರ್ಷ ಆಹಾರ ಮೇಳವನ್ನು ಆಯೋಜಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಆಹಾರ ಮೇಳ ನಡೆಯಲಿದೆ.

    ಒಂದನೇ ವರ್ಷದ ಆಹಾರ ಮೇಳ ಯಶಸ್ವಿಯಾದ ಬಳಿಕ ಪಬ್ಲಿಕ್ ಟಿವಿ ಎರಡನೇ ವರ್ಷದ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಜನವರಿ 25 ಮತ್ತು 26 ಅಂದರೆ ಇಂದಿನಿಂದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಈ ಆಹಾರ ಮೇಳ ಇರಲಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 30ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

    ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು. ಆಹಾರ ಮೇಳ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜ.25 ರಂದು ಮಹಿಳೆಯರಿಗೆ ಪಾನಿಪುರಿ, ಜ.26 ರಂದು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್ ಗಳನ್ನು ಗೆಲ್ಲಬಹುದಾಗಿದೆ.

    ಆಹಾರ ಮೇಳದಲ್ಲಿ ಏನಿರಲಿದೆ?
    * 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರಗಳ ಪ್ರದರ್ಶನ
    * ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳ ಪ್ರದರ್ಶನ
    * ಸ್ಥಳದಲ್ಲೇ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಲೈವ್ ಕೌಂಟರ್
    * ಪ್ರತಿ 30 ನಿಮಿಷಕ್ಕೆ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಸಿಗಲಿದೆ ಗಿಫ್ಟ್

    ಆಹಾರ ಮೇಳದ ಮೊದಲ ದಿನವೇ ರಂಗೋಲಿ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗಾಗಿ ಈ ರಂಗೋಲಿ ಸ್ಫರ್ಧೆ ಆಯೋಜನೆ ಮಾಡಿದ್ದು, ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಚಿತ್ರಗಳನ್ನ ಬಿಡಿಸಬಹುದಾಗಿದೆ. ಮಲ್ಲೇಶ್ವರದ 6ನೇ ಕ್ರಾಸ್‍ನಲ್ಲಿ ಜನವರಿ 25 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 96209 40365 ನಂಬರಿಗೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಹೆಸರು ನೋಂದಾಯಿಸಬೇಕು. ಮೊದಲು ಹೆಸರು ನೋಂದಾಯಿಸಿದವರಿಗೆ ಮತ್ತು 100 ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಸಿಗಲಿದೆ.

    ಇಂದಿನಿಂದ ಎರಡು ದಿನಗಳಿಂದ ಕಾಲ ಆಹಾರ ಮೇಳ ನಡೆಯಲಿದ್ದು. ಹಲವಾರು ಖಾದ್ಯ ಪ್ರದರ್ಶನಗಳ ಜೊತೆಗೆ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡಲಾಗಿದೆ. ಎರಡು ದಿನ ವೀಕೆಂಡ್ ಮತ್ತು ಸರ್ಕಾರಿ ರಜೆ ಇದ್ದು ಪಬ್ಲಿಕ್ ಟಿವಿ ಆಯೋಜನೆಯ ಆಹಾರ ಮೇಳಕ್ಕೆ ಭೇಟಿ ನೀಡಿ ನಿಮಗೆ ಇಷ್ಟವಾದ ಖಾದ್ಯವನ್ನ ಸೇವಿಸಿ.

  • ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಧರೆಗಿಳಿದ ಕೇಕ್ ಲೋಕ

    ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಧರೆಗಿಳಿದ ಕೇಕ್ ಲೋಕ

    ಬೆಂಗಳೂರು: ದೇಶ-ವಿದೇಶಗಳಲ್ಲಿ ಹೆಸರು ವಾಸಿಯಾದ ಬಾಣಸಿಗರು ಹಲವು ಬಗೆಯ ಡಿಶೆಸ್ ರೆಡಿ ಮಾಡಿ ಡಿಸೈನ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಕೇಕ್ ಲೋಕ ಧರೆಗಿಳಿದಿದೆ. ಭಾನುವಾರದವರೆಗೆ ದಕ್ಷಿಣ ಭಾರತದ ಅತೀ ದೊಡ್ಡ ಆಹಾರ ಮತ್ತು ಆತಿಥ್ಯ ಮೇಳ ಆಯೋಜಿಸಲಾಗಿದೆ. ಇಲ್ಲಿ ದೇಶದ 150ಕ್ಕೂ ನಳಪಾಕ ಪ್ರವೀಣರು, ವಿವಿಧ ಡಿಸೈನ್‍ಗಳನ್ನು ತಯಾರಿಸಿ ಕೇಕ್‍ನಲ್ಲೇ ಕಮಾಲ್ ಮಾಡಿದರು.

    ರಂಗು ರಂಗಾಗಿರುವ ಹ್ಯಾಂಗಿಗ್ ಕೇಕ್ಸ್, ಕ್ಯೂಟ್ ಕ್ಯೂಟ್ ಆಗಿ ಪೋಸ್ ಕೊಡುತ್ತಿರುವ ಕಪಲ್ಸ್ ಕೇಕ್, ಪುಟಾಣಿಗಳನ್ನು ಆಕರ್ಷಿಸುತ್ತಿರುವ ಹಾರ್ಸ್, ಎಲೆಫೆಂಟ್, ಸೀ ಕ್ವೀನ್, ಇವೆಲ್ಲವುಗಳನ್ನು ಕಣ್ಣು ಕುಕ್ಕುವಂತೆ ಯುವತಿಯರು ರೆಡಿ ಮಾಡುತ್ತಿದ್ದಾರೆ.

    ಕೇಕ್‍ನಲ್ಲಿಯೇ ಭ್ರೂಣಾವಸ್ಥೆಯಿಂದ 10 ತಿಂಗಳ ಮಗುವನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ತೂಗು ಉಯ್ಯಾಲೆಯ ವೆಡ್ಡಿಂಗ್ ಕೇಕ್ಸ್, ಸಾಂಪ್ರದಾಯಿಕವಾಗಿ ಮಿಂಚುತ್ತಿರುವ ನವಜೋಡಿ ಎಲ್ಲರನ್ನೂ ಅಟ್ರಾಕ್ಟ್ ಮಾಡುತ್ತಿವೆ. ಜೊತೆಗೆ ಎಪಿಜೆ ಅಬ್ದುಲ್ ಕಲಾಂ, ಅಬ್ರಹಾಂ ಲಿಂಕನ್ ಪ್ರತಿಮೆಗಳು ನೋಡುಗರ ಮನಸೂರೆಗೊಳಿಸುತ್ತಿವೆ. ಒಟ್ಟಿನಲ್ಲಿ ಈ ಆಹಾರ ಮೇಳದಲ್ಲಿ ಇರುವ ಒಂದೊಂದು ಕೇಕ್‍ಗಳು ಒಂದೊಂದು ಕತೆ ಹೇಳುತ್ತಿವೆ.

  • ಕಾರವಾರದ ಆಹಾರ ಮೇಳಕ್ಕೆ ಸಖತ್ ರೆಸ್ಪಾನ್ಸ್- ಬಿರಿಯಾನಿ, ಕಬ್ಬಿನ ಹಾಲಿನ ದೋಸೆ, ಮೀನಿನ ಖಾದ್ಯಗಳನ್ನ ಸವಿದ ಜನ

    ಕಾರವಾರದ ಆಹಾರ ಮೇಳಕ್ಕೆ ಸಖತ್ ರೆಸ್ಪಾನ್ಸ್- ಬಿರಿಯಾನಿ, ಕಬ್ಬಿನ ಹಾಲಿನ ದೋಸೆ, ಮೀನಿನ ಖಾದ್ಯಗಳನ್ನ ಸವಿದ ಜನ

    ಕಾರವಾರ: ಕರಾವಳಿ ಎಂದಕೂಡಲೇ ಬಗೆಬಗೆಯ ಮೀನಿನ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಮೀನಿನ ಖಾದ್ಯಗಳೇ ಇಲ್ಲಿ ಪ್ರಸಿದ್ಧ. ಇಂತಹ ಖಾದ್ಯಗಳ ಬಗ್ಗೆ ಪ್ರಚಾರ ಮಾಡೋ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಕರಾವಳಿ ಆಹಾರ ಮೇಳವನ್ನು ಆಯೋಜಿಸಿತ್ತು.

    ಕಾರವಾರದ ಕೋಡಿಬಾಗನ ಕಾಳಿನದಿ ತಡದಲ್ಲಿರುವ ಕಾಳಿ ರಿವರ್ ಗಾರ್ಡನ್‍ ನಲ್ಲಿ ಆಹಾರ ಮೇಳವನ್ನು ಆಯೋಜಿಸಲಾಗಿತ್ತು. ಜಿಲ್ಲಾಡಳಿತದ ಸಹಯೋಗದೊಂದಿಗೆ 5 ದಿನಗಳ ಕರಾವಳಿಯ ವಿವಿಧ ಸಂಪ್ರದಾಯಿಕ ಖಾದ್ಯಗಳ ಆಹಾರ ಮೇಳವನ್ನು ಸಿದ್ಧಪಡಿಸಲಾಗಿದ್ದು, 18 ಮಳಿಗೆಗಳನ್ನು ತೆರೆಯಲಾಗಿದೆ.

    ಜಿಲ್ಲೆಯಿಂದಲ್ಲದೇ ಹೊರ ಜಿಲ್ಲೆಯಿಂದಲೂ ಜನರು ಆಹಾರ ಮೇಳಕ್ಕೆ ಆಗಮಿಸಿದ್ದು, ಕರಾವಳಿಯ ಸಂಪ್ರದಾಯಿಕ ಆಹಾರಗಳ ಅನಾವರಣ ಮಾಡಲಾಯಿತು. ಆಹಾರ ಮೇಳದಲ್ಲಿ ಸಾವಿರಾರು ಜನರು ಭಾಗವಹಿಸಿ ರುಚಿ ರುಚಿಯಾದ ಸಂಪ್ರದಾಯಿಕ ಆಹಾರವನ್ನು ಆಸ್ವಾದಿಸಿದ್ರು. ಕರಾವಳಿಯ ಬಿರಿಯಾನಿ, ತಟ್ಟೆಇಡ್ಲಿ, ಕಬ್ಬಿನ ಹಾಲಿನ ದೋಸೆ, ಮೀನಿನ ಖಾದ್ಯಗಳು, ಪಾನಿಪುರಿ ಹೀಗೆ ಹತ್ತು ಹಲವು ವಿವಿಧ ಖಾದ್ಯಗಳು ಮೇಳದಲ್ಲಿ ಇದ್ದವು. ಎಲ್ಲಾ ಆಹಾರಗಳು ಜನರನ್ನು ಆಕರ್ಷಣೆ ಮಾಡಿದ್ದು, ಸಂಗೀತದ ಜೊತೆ ಆಹಾರವನ್ನು ಸವಿದು ಎಂಜಾಯ್ ಮಾಡಿದ್ರು.

    ಒಂದೆಡೆ ಆಹಾರ ಮೇಳಕ್ಕೆ ಮುಗಿಬೀಳುತ್ತಿರೋ ಜನ, ಇನ್ನೊಂದೆಡೆ ಬಂದ ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ಮಾಡಿಕೊಡುತ್ತಿರೋ ಬಾಣಸಿಗರು. ಐದು ದಿನಗಳವರೆಗೆ ನೆಡೆಯುವ ಈ ಮೇಳ ಮೊದಲ ದಿನವೇ ಸಾವಿರಾರು ಆಹಾರಪ್ರಿಯರನ್ನ ಆಕರ್ಷಿಸಿದೆ. ಮೊದಲಬಾರಿಗೆ ಜಿಲ್ಲಾಡಳಿತದ ಪ್ರಯತ್ನಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಮುಗಿಬಿದ್ದು ಖಾದ್ಯಗಳ ಸವಿ ಸವಿಯುತ್ತಿದ್ದಾರೆ.