ನೆಲಮಂಗಲ: ಕಟಾವಿಗೆ ಬಂದಿದ್ದ ತೊಗರಿಬೆಳೆಯನ್ನ ಜೆಸಿಬಿ ಯಂತ್ರದ ಮೂಲಕ ನಾಶ ಮಾಡುತ್ತಿದ್ದ ವೇಳೆ ತಡೆಯಲು ಮುಂದಾದ ಯುವಕನ ಮೇಲೆ ಕೋಲು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹೇಶ್ (28) ಹಲ್ಲೆಗೊಳಗಾದ ಯುವಕ. ತೊಗರಿಬೆಳೆ ನಾಶ ಮಾಡುತ್ತಿರುವವನ್ನು ತಡೆಯಲು ಹೋದ ವೇಳೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬರಗೇನಹಳ್ಳಿ ಗ್ರಾಮ ಸೋಂಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮ, ಇಲ್ಲಿ ಒಂದೊಂದು ಅಡಿಗೂ ಬಂಗಾರದ ಬೆಲೆ ಇದೆ. ಇದನ್ನ ಕಬಳಿಸುವ ನಿಟ್ಟಿನಲ್ಲಿ ಈ ಘಟನೆ ನಡೆದಿದೆ.
ಐದಾರು ಕಾರುಗಳಲ್ಲಿ ಬಂದಿದ್ದ ಸುಮಾರು 15-20 ಜನರ ತಂಡ ಉದ್ದೇಶ ಪೂರ್ವಕವಾಗಿ ಬೆಳೆಯನ್ನ ನಾಶ ಮಾಡಿದ್ದಾರೆ. ಕಾರುಗಳಲ್ಲಿ ರಾಡು, ಬಡಿಗೆಗಳನ್ನ ತಂದು ತೊಗರಿಬೆಳೆಯನ್ನ ಸಂಪೂರ್ಣ ನಾಶಮಾಡಿದ್ದು, ಜಮೀನು ಕಬಳಿಸುವ ದುರುದ್ದೇಶದಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗಾಯಗೊಂಡ ಯುವಕ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ನ್ಯಾಯಯುತವಾಗಿ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡ ಯುವಕ ಆಗ್ರಹಿಸಿದ್ದಾರೆ.
– ನಿಯಮ ಮೀರಿ ಸ್ಫೋಟಕ ಬಳಸಿ ಕಲ್ಲು ಗಣಿಗಾರಿಕೆ – ಅಟ್ಟಹಾಸವನ್ನು ಯಾರೂ ಪ್ರಶ್ನಿಸುವಂತಿಲ್ಲ
ಬೆಂಗಳೂರು: “ಏನ್ ಮಾಡ್ಕೋತ್ತಿಯೋ ಮಾಡ್ಕೋ, ನಿನ್ನನ್ನ ಸುಮ್ನೆ ಬಿಡಲ್ಲ” ಇದು ನಿಯಮ ಮೀರಿ ಸ್ಫೋಟಕ ಬಳಸಿ ಗಣಿಗಾರಿಕೆ ಮಾಡುತ್ತಿರುವ ಗ್ಯಾಂಗ್ ಸದಸ್ಯರು ನೆಲಮಂಗಲದ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಹಾಕಿದ ಧಮ್ಕಿಯ ಪರಿ.
ನೆಲಮಂಗಲದ ಕಲ್ಲುನಾಯ್ಕನಪಾಳ್ಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ನಿಯಮ ಮೀರಿ ಸ್ಫೋಟಕಗಳ ಬಳಕೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವರದಿಗಾರ ಪ್ರಕಾಶ್ ಅವರು ಗಣಿಗಾರಿಕೆ ನಡೆಯುತ್ತಿರುವ ಜಾಗಕ್ಕೆ ವರದಿಗೆಂದು ತೆರಳಿದ್ದರು. ಈ ವೇಳೆ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಗಳ ಜೊತೆ ಮಾಹಿತಿಗಾಗು ಪ್ರಶ್ನೆ ಕೇಳಿದ್ದಕ್ಕೆ ಧಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ.
ಜನ ಹೇಳಿದ್ದು ಏನು? ಗಣಿಗಾರಿಕೆಯಿಂದ ಮನೆಗಳು ಬಿರುಕು ಬಿಡುತ್ತಿವೆ. ಸ್ಫೋಟಕದ ಅಬ್ಬರಕ್ಕೆ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ನಿಯಮ ಮೀರಿ ಸ್ಫೋಟಕ ಬಳಕೆ ಮಾಡಲಾಗುತ್ತಿದೆ. ಕಲ್ಲುನಾಯ್ಕನಪಾಳ್ಯದಲ್ಲಿ ಗಣಿಗಾರಿಕೆಯಿಂದಾಗಿ 5 ವರ್ಷದ ಮಗುವಿನ ಜೀವ ಅಪಾಯಕ್ಕೆ ಸಿಲುಕಿಕೊಂಡಿದೆ. ಜಿಲೆಟಿನ್ ಸಿಡಿದ ಅಬ್ಬರಕ್ಕೆ ಬಾಲಕಿಗೆ ಅಂಗವಿಕಲತೆ ಉಂಟಾಗಿದೆ. ಜಿಲೆಟಿನ್ ಸಿಡಿದ ಪರಿಣಾಮ ಮಗು ಸಾವು ಬದುಕಿನ ಹೋರಾಟ ನಡೆಸುತ್ತಿದೆ ಎಂದು ಜನ ಹೇಳಿದ್ದರು.
ಜನರ ಮನವಿಗೆ ಸ್ಪಂದಿಸಿ ಸ್ಫೋಟಕ ಗಣಿಗಾರಿಕೆ ನಡೆಸುತ್ತಿರುವ ಜಾಗಕ್ಕೆ ತೆರಳಿದಾಗ ಪ್ರಭಾವಿ ಕಾಂಗ್ರೆಸ್ ನಾಯಕನ ಆಪ್ತರು ಬೆದರಿಕೆ ಹಾಕಿದ್ದಾರೆ. ಆಪ್ತರಾದ ತಿರುಮಲೇಶ್, ಸೋಮಶೇಖರಯ್ಯ, ರಾಮಕೃಷ್ಣನಿಂದ ಗಣಿ ಗೂಂಡಾಗಿರಿ ಮಾಡಿದ್ದಾರೆ. ಪುಂಡರ ಗುಂಪೊಂದು,”ಏನ್ ಮಾಡ್ಕೋತ್ತಿಯೋ ಮಾಡ್ಕೋ, ನಿನ್ನನ್ನ ಸುಮ್ನೆ ಬಿಡಲ್ಲ” ಎಂದು ಮೊಬೈಲ್ ಕಸಿದುಕೊಂಡಿದ್ದಾರೆ. ಡಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕ್ರಮ ಜರುಗಿಸಲು ಸೂಚನೆ: ಪಬ್ಲಿಕ್ ಟಿವಿ ವರದಿಗಾರನ ಮೇಲೆ ಹಲ್ಲೆ ಕುರಿತಾಗಿ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನೆಲಮಂಗಲ ವ್ಯಾಪ್ತಿಯಲ್ಲಿ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಹಲ್ಲೆಯನ್ನು ಖಂಡಿಸ್ತೇನೆ. ವರದಿಗಾರನ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ, ಅದು ಅಪರಾಧ ಆಗುತ್ತದೆ. ಪ್ರಕರಣದ ವಸ್ತುಸ್ಥಿತಿ ಏನು ಅಂತ ಸಂಪೂರ್ಣ ವರದಿ ತರಿಸಿಕೊಳ್ಳುತ್ತೇನೆ. ಕೂಡಲೇ ಕ್ರಮ ಜರುಗಿಸಲು ಪೊಲೀಸರಿಗೆ ನಾನು ಸೂಚನೆ ಕೊಡುತ್ತೇನೆ. ಈ ಕುರಿತಾಗಿ ಬೆಂಗಳೂರು ಗ್ರಾಮಾಂತರ ಪೊಲೀಸ್ ಅಧಿಕಾರಿಗಳಿಂದ ವರದಿ ತರಿಸಿಕೊಳ್ತೇನೆ. ಜಿಲೆಟಿನ್ ಅಕ್ರಮ ಸಂಗ್ರಹದ ಬಗ್ಗೆಯೂ ಮಾಹಿತಿ ತರಿಸಿಕೊಳ್ತೇನೆ. ಕಾನೂನು ಪ್ರಕಾರ ಕ್ರಮಕ್ಕೆ ಸೂಚನೆ ಕೊಡ್ತೇನೆ ಎಂದು ತಿಳಿಸಿದ್ದಾರೆ.
ಮಂಡ್ಯ: ತಾಯಿ ಮಗುವಿಗೆ ಊಟ ಮಾಡಿಸಿ ಕೈ ತೊಳೆಯಲು ಹೋದ ವೇಳೆ ಮೂರು ವರ್ಷದ ಕಂದಮ್ಮ ಮಹಡಿಯ ಮೇಲಿಂದ ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಂಡ್ಯ ನಗರದ ರಾಜಕುಮಾರ್ ಬಡಾವಣೆಯ ನಿವಾಸಿ ಸತೀಶ್ ಹಾಗೂ ಶೃತಿ ದಂಪತಿಯ ಮಗಳು ಧನುಶ್ರೀ (3) ಮೃತ ದುರ್ದೈವಿ. ರಾಜಕುಮಾರ್ ಬಡಾವಣೆಯಲ್ಲಿ ಸತೀಶ್ ಅವರದ್ದು ಮಹಡಿಯ ಮನೆಯಾಗಿದೆ. ಎಂದಿನಂತೆ ಶೃತಿ ತಮ್ಮ ಮಗಳು ಧನುಶ್ರೀಯನ್ನು ಆಟವಾಡಿಸಿಕೊಂಡು ಮನೆಯ ಮುಂಭಾಗ ಊಟ ಮಾಡಿಸಿದ್ದಾರೆ. ನಂತರ ಮಗುವನ್ನು ಬಿಟ್ಟು ಒಳಗೆ ಕೈ ತೊಳೆಯಲು ಹೋಗಿದ್ದಾರೆ.
ಈ ವೇಳೆ ಮಹಡಿಯ ಮೇಲಿನ ಸಂದಿಯಲ್ಲಿ ಮಗು ಇಣುಕಿ ನೋಡಲು ಹೋಗಿದೆ. ಆಗ ಮಗು ಮುಗ್ಗರಿಸಿ ಕೆಳಗೆ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಮೂರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ.
ಮಗುವನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಬಿಲ್ಡಿಂಗ್ನಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ
– ಕಟ್ಟಡಗಳು ಬೀಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರು: ಕಪಾಲಿ ಚಿತ್ರಮಂದಿರದವರು ಮಾಡಿದ ಎಡವಟ್ಟಿನಿಂದ ಸಿಲಿಕಾನ್ ಸಿಟಿಯ ಮೆಜೆಸ್ಟಿಕ್ ನಲ್ಲಿ ಎರಡು ಕಟ್ಟಡಗಳು ಬಿದ್ದು ನೆಲಸಮವಾಗಿವೆ.
ಇತ್ತೀಚೆಗೆ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಮಲ್ಟಿಪ್ಲೆಕ್ಸ್ ಕಟ್ಟಡ ನಿರ್ಮಿಸಲು ಕಪಾಲಿ ಥಿಯೇಟರ್ ಅನ್ನು ಒಡೆದು ಹಾಕಲಾಗಿತ್ತು. ಈಗ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಹೊಸ ಮಲ್ಟಿಪ್ಲೆಕ್ಸ್ ಕಟ್ಟಡ ಕಟ್ಟಲಾಗುತ್ತದೆ. ಆದರೆ ಈ ಕಟ್ಟಡ ನಿರ್ಮಿಸಲು 80 ಅಡಿ ಆಳದಲ್ಲಿ ಗುಂಡಿ ತೆಗೆಯಲಾಗಿದೆ.
ಮಲ್ಟಿಪ್ಲೆಕ್ಸ್ ಕಟ್ಟಡಕ್ಕೆ ಅಡಿಪಾಯ ಹಾಕಲು 80 ಅಡಿ ಆಳವಾಗಿ ಗುಂಡಿಯನ್ನು ತೆಗೆಯಲಾಗಿತ್ತು. ಪರಿಣಾಮ ಪಕ್ಕದಲ್ಲಿ ಇದ್ದ ಕಟ್ಟಡಗಳಿಗೆ ಹಾನಿಯಾಗಿತ್ತು. ಕಟ್ಟಡ ಪಕ್ಕ ಆಳವಾದ ಗುಂಡಿ ತೆಗೆದ ಕಾರಣ ಕಟ್ಟಡಗಳು ಬಿರುಕು ಬಿಟ್ಟಿದ್ದವು. ಸಂಜೆ ವೇಳೆಗೆ ಪಕ್ಕದಲ್ಲಿದ್ದ ಎರಡು ಕಟ್ಟಡಗಳು ನೋಡ ನೋಡುತ್ತಿದ್ದಂತೆ ನೆಲಸಮವಾಗಿವೆ. ಈ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.
ಈಗ ಕಟ್ಟಡ ಕಪಾಲಿ ಥಿಯೇಟರ್ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಿದ್ದಿದ್ದು, ಅದರ ಅಡಿಯಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಲ್ಟಿಪ್ಲೆಕ್ಸ್ ಕಟ್ಟಡ ಕಾಮಗಾರಿ ರಾತ್ರಿ ವೇಳೆಯೂ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಹೀಗಾಗಿ ಕಟ್ಟಡ ಬಿದ್ದ ಸಮಯದಲ್ಲಿ ಅಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಬೆಂಗಳೂರು: ಲಾಕ್ಡೌನ್ ಸಮಯದಲ್ಲಿ ರೈತರೊಬ್ಬರು ಕಳೆದುಕೊಂಡಿದ್ದ 2 ಲಕ್ಷ ರೂ. ಚೆಕ್ ಅನ್ನು ಬೆಂಗಳೂರು ಹೊರವಲಯ ನೆಲಮಂಗಲದ ಸ್ನೇಕ್ ಲೋಕೇಶ್ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ನೆಲಮಂಗಲದ ರೈತ ಮಹದೇವಪ್ಪ ಅವರು 2 ಲಕ್ಷ ರೂ. ಚೆಕ್ ಅನ್ನು ಕಳೆದುಕೊಂಡಿದ್ದರು. ಇದೇ ಸಮಯದಲ್ಲಿ ಸ್ನೇಕ್ ಲೋಕೇಶ್ ಅವರು ಹಾವೊಂದನ್ನು ರಕ್ಷಣೆ ಮಾಡಿ, ಮನೆಗೆ ವಾಪಸ್ ಹೋಗುತ್ತಿದ್ದರು. ಈ ವೇಳೆ ಸೊಂಡೆಕುಪ್ಪ ಗ್ರಾಮದ ಬಳಿ ಸ್ನೇಕ್ ಲೋಕೇಶ್ ತಮ್ಮ ಬೈಕ್ನಲ್ಲಿ ಬರುವಾಗ ದಾರಿ ಮಧ್ಯೆ 2 ಲಕ್ಷ ಮೌಲ್ಯದ ಚೆಕ್ ದೊರೆತ್ತಿದೆ. ಈ ಚೆಕ್ ಹಿಂಬದಿಯಲ್ಲಿ ಇದ್ದ ಪೋನ್ ನಂಬರ್ಗೆ ಕರೆಮಾಡಿ ವಿಷಯ ತಿಳಿಸಿ, ಪೊಲೀಸರಿಂದ ಮಹದೇವಪ್ಪ ಅವರಿಗೆ ಚೆಕ್ ಹಸ್ತಾಂತರಿಸಿ ಸಹಾಯ ಮಾಡಿದ್ದಾರೆ.
ಸ್ನೇಕ್ ಲೋಕೇಶ್ ಕಾರ್ಯಕ್ಕೆ ನೆಲಮಂಗಲ ಟೌನ್ ಪಿಎಸ್ಐ ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮಹಾಮಾರಿ ಕೊರೊನಾ ವೈರಸ್ನ ಲಾಕ್ಡೌನ್ ವೇಳೆ ಜನರು ಹಸಿವು ಹಾಗೂ ನಾನಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಲೋಕೇಶ್ ಸಿಕ್ಕ ಚೆಕ್ ಅನ್ನು ದುರುಪಯೋಗ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಅದನ್ನು ಹಿಂದಿರಿಗಿಸಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಬೆಂಗಳೂರು: ಆಸ್ಪತ್ರೆಯಲ್ಲಿ ರೋಗಿ ನೋಡುವ ನೆಪದಲ್ಲಿ ಬಂದ ಕಳ್ಳನೊಬ್ಬ ಮೊಬೈಲ್ ಹಾಗೂ ಪರ್ಸ್ ಎಗರಿಸಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ನೆಲಮಂಗಲ ಪಟ್ಟಣದ ಲೋಹಿತ್ ನಗರದ ಪಾಷ ಅವರ ಸಂಬಂಧಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ರೋಗಿ ನೋಡಿಕೊಳ್ಳಲು ಪಾಷ ಆಸ್ಪತ್ರೆಯಲ್ಲಿಯೇ ಇದ್ದರು.
ಈ ವೇಳೆ ರಾತ್ರಿ ಒಂದು ಗಂಟೆ ಸುಮಾರಿಗೆ ಪಕ್ಕದ ಹಾಸಿಗೆಯಲ್ಲಿದ್ದ ರೋಗಿ ನೋಡಲು ಸಂಬಂಧಿಕರು ಬಂದಿದ್ದರು. ಅವರ ಜೊತೆಯಲ್ಲಿಯೇ ಬಂದಿದ್ದ ಚಾಲಕಿ ಕಳ್ಳ ಕರೆ ಮಾಡಲು ಪಾಷ ಅವರಿಂದ ಮೊಬೈಲ್ ತಗೊಂಡು ಹಾಗೆಯೇ ಮಾತನಾಡುತ್ತ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ಇದೇ ವೇಳೆ ಪಕ್ಕದ ಬೆಡ್ ರೋಗಿಯಿಂದ ಪರ್ಸ್ ಮತ್ತು ಎರಡು ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾನೆ. ಈ ಕುರಿತು ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ನೋ: ಅಪಾರ್ಟ್ ಮೆಂಟಿನ 4ನೇ ಮಹಡಿಯಿಂದ ಟಿವಿ ಆ್ಯಂಕರ್ ಒಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಈ ಘಟನೆ ಗುರುವಾರ ರಾತ್ರಿ ನಡೆದಿದ್ದು, ರಾಧಿಕಾ ಕೌಶಿಕ್ ಮೃತಪಟ್ಟ ಟಿವಿ ಆ್ಯಂಕರ್. ಈಕೆ ಗುರುವಾರ ರಾತ್ರಿಯೇ ಮಹಡಿಯಿಂದ ಬಿದ್ದಿದ್ದು, ಇಂದು ನಸುಕಿನ ಜಾವ ಸುಮಾರು 3:30ಕ್ಕೆ ಮೃತಪಟ್ಟಿದ್ದಾರೆ.
ಮೃತ ಕೌಶಿಕ್ ನೋಯ್ಡಾದ ಅಂಟಾರ್ಶ್ ಅಪಾರ್ಟ್ ಮೆಂಟ್ ಸೆಕ್ಟರ್ 77ರಲ್ಲಿ ವಾಸಿಸುತ್ತಿದ್ದರು. ಇವರ ಜೊತೆ ಸಹೋದ್ಯೋಗಿ ಕೂಡ ಇದ್ದು, ಇಬ್ಬರು ಒಂದೇ ಪ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಗುರುವಾರ ರಾತ್ರಿ ಮಹಡಿಯ ಮೇಲೆ ನಿಂತು ಮಾತನಾಡುತ್ತಿದ್ದರು. ಬಳಿಕ ಸಹೋದ್ಯೋಗಿ ಶೌಚಾಲಯಕ್ಕೆ ಹೋದಾಗ ರಾಧಿಕಾ ಕೌಶಿಕ್ 4ನೇ ಮಹಡಿಯಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಸುಕಿನ ಜಾವ 3.30ಕ್ಕೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತ ಆಂಕರ್ ತಾನೇ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃತ ಸಹೋದ್ಯೋಗಿಯನ್ನು ವಶಕ್ಕೆ ಪಡೆದು, ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಬಿದ್ದಿದ್ದಾರೋ ಎನ್ನುವುದನ್ನು ವಿಚಾರಣೆ ಮಾಡುತ್ತಿದ್ದಾರೆ.
ಮೃತ ನಿರೂಪಕಿ ಮೂಲತಃ ರಾಜಸ್ಥಾನದವರಾಗಿದ್ದು, ಪೊಲೀಸ್ ಅಧಿಕಾರಿಗಳು ಕುಟುಂಬದ ಸದಸ್ಯರಿಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇತ್ತ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಪನಾಮಾ: ಸೆಲ್ಫಿ ತೆಗೆಯುವಾಗ ಮಹಿಳೆಯೊಬ್ಬಳು 27ನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆಯೊಂದು ದಕ್ಷಿಣ ಅಮೆರಿಕದ ಪನಾಮದಲ್ಲಿ ನಡೆದಿದೆ.
ಸಂದ್ರಾ ಮನ್ಯೂಲಾ ಡಾಕೋಸ್ಟಾ ಮೆಕೆಡೋ(27) ಸೆಲ್ಫಿ ತೆಗೆಯುವಾಗ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ. ಸಂದ್ರಾ ಬಾಲ್ಕನಿಯ ಕಂಬಿಗೆ ಒರಗಿಕೊಂಡು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಳು. ಈ ವೇಳೆ ಕಾಲು ಜಾರಿ 27ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಮಹಿಳೆ ಮಹಡಿಯಿಂದ ಬಿಳುತ್ತಿರುವುದನ್ನು ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುವಾಗ ಅವಳಿಗೆ ಹುಚ್ಚು ಹಿಡಿದಿದೆ ಅನಿಸುತ್ತದೆ. ಆಕೆಯನ್ನು ನೋಡು. ಅವಳು ಕೆಳಗೆ ಬೀಳುತ್ತಿದ್ದಾಳೆ ಎಂದು ಅಲ್ಲಿದ್ದ ಜನರು ಹೇಳುತ್ತಾ ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.
ಸಂದ್ರಾ 27ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ನಂತರ ಈ ವಿಷಯವನ್ನು ಆಕೆಯ ಗೆಳೆತಿಗೆ ಮಾಹಿತಿ ನೀಡಲಾಯಿತು. ಆಗ ಆಕೆಯ ಸ್ನೇಹಿತರೊಬ್ಬರು ಸಂದ್ರಾ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಸಂದ್ರಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಆಕೆ ಪನಾಮದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಸದ್ಯ ಪೊಲೀಸರು ಈ ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಮಹಿಳೆ ಗಾಳಿಯ ರಭಸಕ್ಕೆ ಆಯತಪ್ಪಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಂಗಳೂರು: ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಮಂಗಳೂರಿನ ಶಕ್ತಿನಗರದಲ್ಲಿ ನಡೆದಿದೆ.
ಶಾನೆಲ್ ಜೆನಿಶೀಯಾ ಡಿಸೋಜಾ (5) ಮೃತ ದುರ್ದೈವಿ. ವಿಲ್ಸನ್ ಮತ್ತು ಆಲಿತಾ ದಂಪತಿಯ ಮಗು ಶಾನೆಲ್. ಇವರು ಶಕ್ತಿನಗರದ ಫ್ಲಾಟ್ ನ ಎಂಟನೇ ಮಹಡಿಯಲ್ಲಿ ವಾಸವಿದ್ದರು. ಇಂದು ಬಾಲಕಿ ಡಿಸೋಜಾ ಸ್ಲೈಡರ್ ಕಿಟಕಿ ಮೂಲಕ ಕೆಳಗೆ ಇಣುಕಿದ್ದಾಳೆ. ಆಗ ಆಯತಪ್ಪಿ ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಘಟನೆ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಟಕಿಗೆ ರಾಡ್ ಅಳವಡಿಸದೇ ಇರುವುದರಿಂದ ಈ ಅನಾಹುತ ಸಂಭವಿಸಿದೆ.