Tag: floodrelieffunds

  • ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

    ಪ್ರವಾಹ ಪರಿಹಾರ ಪಡೆಯದ ಸಂತ್ರಸ್ತರು ದಡ್ಡರು- ಸಂಸದ ಬಸವರಾಜು

    ತುಮಕೂರು: ನೆರೆ ಪರಿಹಾರಕ್ಕಾಗಿ ಸಂತ್ರಸ್ತರೇ ಮುಂದೆ ಬರುತ್ತಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಸದ ಸಂಸದ ಜಿ.ಎಸ್ ಬಸವರಾಜು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಲ್ಲಿ ಮೂರು ವರ್ಗಗಳಿವೆ. ಇಂಟೆಲೆಕ್ಚುವಲ್(ಬೌದ್ಧಿಕ), ವಿದ್ಯಾವಂತರು ಮತ್ತು ದಡ್ಡರು. ಈ ದಡ್ಡರಿಗೆ ಏನೂ ಗೊತ್ತಿರಲ್ಲ. ಅವರಿಗೆ ಯಾರೂ ಗೈಡ್ ಮಾಡಲ್ಲ. ಅಂತವರು ಪರಿಹಾರ ಪಡೆಯಲು ಬರುತ್ತಿಲ್ಲ. ಅವರನ್ನು ನಾವೇ ಕರೆದುಕೊಂಡು ಬಂದು ಅರ್ಜಿ ಹಾಕಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿದೆ ಎಂದು ಸಂಸದರು ತಿಳಿಸಿದ್ದಾರೆ.

    ಕೇಂದ್ರದಿಂದ ನೆರೆಪರಿಹಾರ ಬಂದಿರೋದು ಪ್ರಾಥಮಿಕ ಹಂತ ಅಷ್ಟೇ. ಮುಂದಿನ ದಿನದಲ್ಲಿ ಹೆಚ್ಚಿನ ಪರಿಹಾರ ಬರಲಿದೆ. ಹಿಂದಿನ ಸರ್ಕಾರ ರಾಜ್ಯದ ಬೊಕ್ಕಸ ಖಾಲಿ ಮಾಡಿ ಹೋಗಿತ್ತು. ಈಗ ಯಡಿಯೂರಪ್ಪ ಬಂದ ಮೇಲೆ ಖಜಾನೆ ಸಮತೋಲನ ಕಾಪಾಡಿಕೊಂಡಿದೆ. ಅತ್ಯುತ್ತಮ ರೀತಿಯಲ್ಲಿ ತೆರಿಗೆ ಹಣ ಬರುತ್ತಿದೆ ಎಂದರು. ಇದನ್ನೂ ಓದಿ: ನೆರೆ ಪರಿಹಾರ ಪಡೆಯಲು ಸಂತ್ರಸ್ತರೆ ಮುಂದೆ ಬರುತ್ತಿಲ್ಲ: ಮಾಧುಸ್ವಾಮಿ

    ಇದೇ ವೇಳೆ ಬಸವರಾಜು ಅವರನ್ನ ಕಳ್ಳ ಮತ್ತು ಅಯೋಗ್ಯ ಎಂದು ಕರೆದಿದ್ದ ಎಸ್.ಆರ್ ಶ್ರೀನಿವಾಸ್ ಮೇಲೆ ಹರಿಹಾಯ್ದ ಸಂಸದರು, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಗೆ ತಲೆಕೆಟ್ಟಿದೆ. ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಹಾಗಾಗಿ ದೇವೇಗೌಡರಿಗೂ ಅವರು ಬೈತಾರೆ. ನಾನು ಅವರಷ್ಟು ಕೀಳುಮಟ್ಟಕ್ಕೆ ಇಳಿದು ಮಾತನಾಡಲ್ಲ. ನಾನು ಏನು ಸಹಾಯ ಮಾಡಿದ್ದೇನೆಂದು ಶ್ರೀನಿವಾಸ್ ಅವರ ಅಪ್ಪನಿಗೂ ಗೊತ್ತು. ಆಗ ಇವನು ಚಡ್ಡಿ ಹಾಕಿಕೊಂಡು ತಿರುಗುತ್ತಿದ್ದನು. ಆತ ನನ್ನ ಮುಂದೆ ಬಂದು ಮಾತನಾಡಲಿ ಎಂದು ಕಿಡಿಕಾರಿದರು.

    ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನನ್ನ ಫೋನ್ ಕೂಡ ಕದ್ದಾಲಿಕೆ ಆಗಿದೆ. ಕುಮಾರಸ್ವಾಮಿ ಅವಧಿಯಲ್ಲಿ ಸ್ವಾಮೀಜಿ, ರಾಜಕಾರಣಿಗಳು ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಹೀಗೆ ಎಲ್ಲರ ಎಲ್ಲಾ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಏನಕ್ಕೆ ಮಾಡಿದ್ದಾರೆ ಎಂದು ಅವರನ್ನೇ ಹೋಗಿ ಕೇಳಿ. ನಾನು ಎಚ್‍ಡಿಕೆ ತಂದೆಯ ಎದುರಾಳಿಯಾಗಿದ್ದಕ್ಕೆ ಲೋಕಸಭಾ ಎಲೆಕ್ಷನ್ ಸಮಯದಲ್ಲಿ ನನ್ನ ಫೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ ಎಂದು ಸಿಡಿಮಿಡಿಗೊಂಡರು.

  • ಮಾಧ್ಯಮಕ್ಕೆ ಹೋಗದ ರೀತಿಯಲ್ಲಿ ನೆರೆಪರಿಹಾರದ ಕರ್ತವ್ಯ ಮಾಡಿದ್ದೇವೆ – ರಾಘವೇಂದ್ರ

    ಮಾಧ್ಯಮಕ್ಕೆ ಹೋಗದ ರೀತಿಯಲ್ಲಿ ನೆರೆಪರಿಹಾರದ ಕರ್ತವ್ಯ ಮಾಡಿದ್ದೇವೆ – ರಾಘವೇಂದ್ರ

    – ಬೆಂಗ್ಳೂರಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ

    ಶಿವಮೊಗ್ಗ/ಬೆಂಗಳೂರು: ನೆರೆ ಪರಿಹಾರವನ್ನು ಎಲ್ಲಿ, ಯಾವ ರೀತಿ ಮಾಡಿದ್ದೇವೆ ಎಂಬುದರ ಬಗ್ಗೆ ಮಾಧ್ಯಮದ ಮುಂದೆ ಹೋಗದ ರೀತಿಯಲ್ಲಿ ಎಲ್ಲ ಸಂಸದರು ತಮ್ಮ ಕರ್ತವ್ಯವನ್ನು ಮಾಡಿದ್ದೇವೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ಹೇಳಿದ್ದಾರೆ.

    ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ಪರಿಹಾರದ ನೆರವಿಗೆ ನಮ್ಮ ಕರ್ತವ್ಯ ಯಾವ ರೀತಿ, ಎಲ್ಲಿ ಮಾಡಬೇಕೋ ಆ ರೀತಿ ರಾಜ್ಯದ ಸಂಸದರು ಮಾಡಿದ್ದೇವೆ. ಆದರೆ ಮಾಧ್ಯಮದ ಮುಂದೆ ಹೋಗಿಲ್ಲ ಅಷ್ಟೇ ಎಂದರು.

    ಇಡೀ ದೇಶದಲ್ಲಿ 16 ರಾಜ್ಯಗಳಲ್ಲಿ ಪ್ರವಾಹ ಬಂದು ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಇನ್ನೆರಡು ಮೂರು ದಿನದಲ್ಲಿ ಪರಿಹಾರ ಬಿಡುಗಡೆಯಾಗುತ್ತದೆ ಎಂದು ಸಿಎಂ ಅವರು ಕೂಡ ಹೇಳಿದ್ದಾರೆ. ಹೀಗಾಗಿ ಆದಷ್ಟು ಬೇಗ ಪರಿಹಾರ ಬಿಡುಗಡೆ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದರು.

    ಇತ್ತ ರಾಜ್ಯದ ನೆರೆ ಪರಿಹಾರದ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ಖಂಡಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಮಮಂದಿರ ಗ್ರೌಂಡ್ ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿಗೆ ನಿವೃತ್ತ ಪೋಲಿಸ್ ಮಹಾನಿರ್ದೇಶಕ ಶಂಕರಿ ಬಿದರಿ ಚಾಲನೆ ನೀಡಿದ್ದಾರೆ.

    ಪ್ರತಿಭಟನೆ ವೇಳೆ ಮಹಾ ಸಂಘದ ಅಧ್ಯಕ್ಷ ಶಿವಕುಮಾರ್ ಮೇಟಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾಗದ ಸಂಸದರು ಶಾಸಕರು, ಸಚಿವರು, ಡಿಸಿಎಂ, ಮಾಜಿ ಸಿಎಂ ಅನ್ನು ಕ್ಷೇತ್ರದಲ್ಲೇ ಕಟ್ಟಿ ಹಾಕುತ್ತೇವೆ ಎಂದಿದ್ದಾರೆ. ಅಲ್ಲದೆ ಸಂಸದ ತೇಜಸ್ವಿ ಸೂರ್ಯ ಯಾಕೆ ದುಡ್ಡು ಅಂತ ಕೇಳ್ತಾರೆ. ಸಾಯುವ ಜನರಿಗೆ ಪರಿಹಾರ ಸಿಗಬೇಕಿದೆ. ದಸರಾ ಒಳಗೆ ಪರಿಹಾರ ಕೊಡದಿದ್ರೆ ಖಂಡಿತಾ ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ ಎಂದು ಖಡಕ್ಕಾಗಿ ನುಡಿದಿದ್ದಾರೆ.

    ಇದೇ ವೇಳೆ ಶಂಕರ್ ಬಿದರಿ ಮಾತನಾಡಿ, ಕಳೆದ 70 ವರ್ಷಗಳ ಕಾಲದಲ್ಲಿ ಈ ರೀತಿಯ ಪ್ರವಾಹ ಯಾವತ್ತೂ ಆಗಿಲ್ಲ. ನಮ್ಮ ಉತ್ತರ ಕರ್ನಾಟಕದ ಜನ ಪ್ರವಾಹದಿಂದ ನಲುಗಿಹೋಗಿದ್ದಾರೆ. ಪ್ರವಾಹವಾಗಿ 60 ದಿನಗಳು ಆದರೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ. ನಮ್ಮ ಕೇಂದ್ರ ಸರ್ಕಾರ, ಸಂಸದರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ನಮ್ಮ ಉತ್ತರ ಕರ್ನಾಟಕದ ಜನ ಮುಗ್ಧರು, ದೈವ ಭಕ್ತರು. ಯಾವುದೇ ಸಹಾಯ ಮಾಡದ ಸಂಸದರನ್ನ ಆಯ್ಕೆ ಮಾಡಿದ್ದು ನಮ್ಮ ತಪ್ಪು. ಇಂಥವರನ್ನು ಆಯ್ಕೆ ಮಾಡಿದ ನಮಗೆ ನಾವೇ ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು. ಜನರಲ್ಲಿ ಪ್ರಜಾಪ್ರಭುತ್ವ ಜಾಗೃತಿ ಆಗೋ ಕೆಲಸವಾಗಬೇಕು ಎಂದರು.