Tag: FloodLights

  • ‌ಪಾಕ್‌ ಮೈದಾನದಲ್ಲಿ ಫೀಲ್ಡಿಂಗ್‌ ವೇಳೆ ಹಣೆಗೆ ಬಡಿದ ಚೆಂಡು – ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ

    ‌ಪಾಕ್‌ ಮೈದಾನದಲ್ಲಿ ಫೀಲ್ಡಿಂಗ್‌ ವೇಳೆ ಹಣೆಗೆ ಬಡಿದ ಚೆಂಡು – ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ

    – ಚಾಂಪಿಯನ್ಸ್‌ ಟ್ರೋಫಿಗೆ ಗೈರು ಸಾಧ್ಯತೆ

    ಲಾಹೋರ್‌: ಇದೇ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿರುವ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಕಿವೀಸ್‌ ಸ್ಟಾರ್‌ ಆಟಗಾರ ಬೆಂಗಳೂರು ಮೂಲದ ರಚಿನ್‌ ರವೀಂದ್ರ (Rachin Ravindra) ಹಣೆಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಪಾಕಿಸ್ತಾನದ ಕ್ರಿಕೆಟ್‌ ಅಂಗಳದಲ್ಲಿ ಕ್ರಿಕೆಟ್‌ ಫ್ಲಡ್‌ ಲೈಟ್‌ (Floodlights) ವ್ಯವಸ್ಥೆ ಸರಿಯಾಗಿ ಕೆಲಸ ಮಾಡ್ತಿದೆಯೇ? ಎನ್ನುವ ಪ್ರಶ್ನೆಯೂ ಎದ್ದಿದೆ.

    ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ತನ್ನ ವ್ಯವಸ್ಥೆ ಎಲ್ಲವೂ ಸರಿಯಾಗಿದೆಯೆಂದು ಜಗತ್ತಿನೆದುರು ಖಾತ್ರಿ ಪಡಿಸಲು ನ್ಯೂಜಿಲೆಂಡ್ (New Zealand), ದಕ್ಷಿಣ ಆಫ್ರಿಕಾ ತಂಡದೊಂದಿಗೆ ತ್ರಿಕೋನ ಸರಣಿ ಏರ್ಪಡಿಸಿದೆ. ಪಾಕಿಸ್ತಾನದಲ್ಲಿ ಆಡುವುದಿಲ್ಲ ಎಂದು ಪಟ್ಟು ಹಿಡಿದು ತನ್ನ ಪಂದ್ಯಗಳನ್ನು ದುಬೈಗೆ ಸ್ಥಳಾಂತರ ಮಾಡಿಸಿಕೊಂಡ ಭಾರತಕ್ಕೆ ಛಾಟಿಯೇಟು ನೀಡುವ ಉದ್ದೇಶವೂ ಈ ಗಡಿಬಿಡಿಯ ಟೂರ್ನಿಯಲ್ಲಿ ಇತ್ತು ಎಂಬುದು ಸ್ಪಷ್ಟ. ಆದ್ರೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗಲೇ ಆ ಘಟನೆ ನಡೆದು ಹೋಗಿದೆ. ಪಿಸಿಬಿ ಅರೆಬರೆ ಕಾರ್ಯಗಳ ಕಡೆಗೆ ಕೈ ತೋರಿಸುವಂತೆ ಆಗಿದೆ.

    ಲಾಹೋರ್‌ ಮೈದಾನದಲ್ಲಿ ಆಗಿದ್ದೇನು?
    ಪಾಕಿಸ್ತಾನದ ಇನ್ನಿಂಗ್ಸ್‌ನ 38ನೇ ಓವರ್ ನಲ್ಲಿ ರಚಿನ್ ರವೀಂದ್ರ ಅವರು ಸ್ಕ್ವೇರ್‌ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಪಾಕಿಸ್ತಾನದ ಖುಷ್ದಿಲ್ ಶಾ ಹೊಡೆದ ಸ್ವೀಪ್ ಶಾಟ್ ನೇರವಾಗಿ ರಚಿನ್ ರವೀಂದ್ರ ಅವರ ಕಡೆಗೆ ಹೋಗಿತ್ತು. ಮಾಮಾಲಿ ಫೀಲ್ದರ್ ಅಲ್ಲಿದ್ದಿದ್ದರೂ ಕ್ಲೀಯರ್ ಕ್ಯಾಚ್ ಆಗುತ್ತಿತ್ತು. ಹಾಗೆಯೇ ಗುಡ್‌ ಫೀಲ್ಡರ್‌ ಕೂಡ ಆಗಿರುವ ರಚಿನ್‌ ಕ್ಯಾಚ್‌ ಕ್ಲಿಯರ್‌ ಮಾಡುತ್ತಾರೆ ಎಂಬ ವಿಶ್ವಾಸ ಕಿವೀಸ್‌ ಆಟಗಾರರಿಗೂ ಇತ್ತು. ಆದ್ರೆ ಅಲ್ಲಿ ಆಗಿದ್ದೇ ಬೇರೆ.

    ಕ್ಯಾಚ್‌ ಅಗಿ ಕೈಸೇರಬೇಕಾದ ಚೆಂಡು ನೇರವಾಗಿ ಹೋಗಿ ರಚಿನ್ ರವೀಂದ್ರ ಅವರ ಹಣೆವಗೆ ಬಡಿಯಿತು. ಅವರಿಗೆ ಚೆಂಡು ಬಂದ ದಾರಿಯನ್ನು ಕೊಂಚವೂ ಅಂದಾಜಿಸಲು ಸಾಧ್ಯವಾಗಿಲ್ಲ. ಚೆಂಡು ಹಣೆಗೆ ಬಡಿಯುತ್ತಿದ್ದಂತೆ ಅಲ್ಲಿಯೇ ರಚಿನ್‌ ಕುಸಿದು ಬಿದ್ದಿದ್ದಾರೆ. ಏನಾಗುತ್ತಿದೆ ಎಂದು ಎಲ್ಲರೂ ಗಾಬರಿಯಾಗಬೇಕಾದರೆ ಅವರ ಮುಖದಿಂದ ರಕ್ತ ಸೋರುತ್ತಿತ್ತು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ನ್ಯೂಜಿಲೆಂಡ್ ತಂಡದ ಫಿಸಿಯೋ ಮತ್ತು ಮೈದಾನದಲ್ಲಿದ್ದ ರಕ್ಷಣಾ ಸಿಬ್ಬಂದಿ ಅವರ ಮುಖವನ್ನು ಟವೆಲ್‌ನಿಂದ ಮುಚ್ಚಿಕೊಂಡು ಮೈದಾನದಿಂದ ಹೊರ ನಡೆದರು.

    ರಚಿನ್ ರವೀಂದ್ರ ಅವರ ಹಣೆಯಿಂದ ರಕ್ತ ಸೋರುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದೀಗ ಅವರ ಗಾಯದ ಪ್ರಮಾಣ ಏನು ಎಂದು ತಿಳಿದು ಬಂದಿಲ್ಲ. ಗಾಯದ ತೀವ್ರತೆ ನೋಡಿದರೆ ಅವರು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಡುವುದೂ ಅನುಮಾನ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನ್ಯೂಜಿಲೆಂಡ್ ತಂಡದ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಈವರೆಗೂ ಹೊರಬಿದ್ದಿಲ್ಲ.

    ಪಾಕ್‌ ಕ್ರೀಡಾಂಗಣದ ವಿರುದ್ಧ ಟೀಕೆ:
    ರಚಿನ್‌ ರವೀಂದ್ರರು ಗಾಯಗೊಳ್ಳಲು ಗಡಾಫಿ ಸ್ಟೇಡಿಯಂನಲ್ಲಿ ಅಳವಡಿಸಲಾದ ಕಳಪೆ ಗುಣಮಟ್ಟದ ಫ್ಲಡ್‌ ಲೈಟ್‌ ವ್ಯವಸ್ಥೆಯೇ ಕಾರಣ ಎಂಬ ಟೀಕೆಯೂ ವ್ಯಕ್ತವಾಗಿದೆ. ಲೈಟಿಂಗ್ಸ್‌ ಸಮಸ್ಯೆಯಿಂದಾಗಿಯೇ ಚೆಂಡನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕೆಲವರು ಹೇಳಿದ್ದಾರೆ.

  • ಒಂದ್ಕಡೆ ಜನರಿಲ್ಲ, ಇನ್ನೊಂದ್ಕಡೆ ಸ್ಟೇಡಿಯಂನಲ್ಲಿ ಲೈಟೇ ಇಲ್ಲ- ನಗೆಪಾಟಲಿಗೀಡಾದ ಪಾಕ್

    ಒಂದ್ಕಡೆ ಜನರಿಲ್ಲ, ಇನ್ನೊಂದ್ಕಡೆ ಸ್ಟೇಡಿಯಂನಲ್ಲಿ ಲೈಟೇ ಇಲ್ಲ- ನಗೆಪಾಟಲಿಗೀಡಾದ ಪಾಕ್

    ಇಸ್ಲಾಮಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ 10 ವರ್ಷದ ಬಳಿಕ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವೆ ಸೋಮವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಒಂದೆಡೆ ಪಂದ್ಯ ವೀಕ್ಷಣೆಗೆ ಜನರಿರಲಿಲ್ಲ, ಇನ್ನೊಂದೆಡೆ ಕ್ರೀಡಾಂಗಣದಲ್ಲಿದ್ದ ಲೈಟ್ಸ್ ಗಳು ಕೂಡ ಕೈಕೊಟ್ಟ ಕಾರಣ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

    ಹೌದು, ಭದ್ರತಾ ಕಳವಳದ ನಡುವೆ ಕ್ರಿಕೆಟ್ ಆಯೋಜಿಸುವ ಮೂಲಕ ವಿಶ್ವಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಪಾಕಿಸ್ತಾನ ಹೊರಟಿದೆ. ಆದರೆ ಪಾಕಿಸ್ತಾನದ ಮೊದಲ ಪ್ರಯತ್ನಕ್ಕೆ ಭಾರೀ ಹಿನ್ನಡೆ ಎದುರಾಗಿದೆ. ಕರಾಚಿಯಲ್ಲಿ ಸೋಮವಾರ ನಡೆದ ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯವನ್ನು ವೀಕ್ಷಿಸಲು ಭಾರೀ ಸಂಖ್ಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಜನರಿಲ್ಲದೆ ಸ್ಟೇಡಿಯಂ ಬಿಕೋ ಎನ್ನುತ್ತಿತ್ತು. ಅಷ್ಟೇ ಅಲ್ಲದೆ ಹೊನಲು ಬೆಳಕಿನ ಪಂದ್ಯದ ನಡುವೆ ಎರಡನೇ ಬಾರಿ ಕ್ರೀಡಾಂಗಣದ ಫ್ಲಡ್‍ಲೈಟ್ಸ್ ಆಫ್ ಆಗಿ ಪಂದ್ಯಕ್ಕೆ ಅಡಚಣೆ ಉಂಟಾಯಿತು.

    ಈ ಕಾರಣಗಳಿಗೆ ಈಗ ಪಾಕಿಸ್ತಾನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಬಹುವರ್ಷದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಪಾಕಿಸ್ತಾನದ ಮೇಲೆ ಅಲ್ಲಿನ ಪ್ರಜೆಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಪಾಕಿಸ್ತಾನ ಚೆನ್ನಾಗಿ ಪಂದ್ಯ ನಡೆಸಿ ಯಶಸ್ವಿಯಾಗಿ ಟೀಕೆಗಳಿಗೆ ಬ್ರೇಕ್ ಹಾಕುತ್ತೆ ಎಂದುಕೊಂಡಿದ್ದರು. ಆದರೆ ಕ್ರೀಡಾಂಗಣ ನಿರ್ವಹಣಾ ಮಂಡಳಿ ನಿರ್ಲಕ್ಷ್ಯ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಲಕ್ಷ್ಯ ಹಾಗೂ ಸರಿಯಾಗಿ ವಿದ್ಯುತ್ ಪಾವತಿಸದ ಕಾರಣಕ್ಕೆ ಈ ಲೈಟ್ಸ್ ಗಳು ಆಫ್ ಆಗಿದೆ. ಸರಿಯಾಗಿ ಕೆಲಸ ಮಾಡದೇ ದೇಶದ ಮರ್ಯಾದೆ ಕಳೆಯುತ್ತಿದ್ದೀರ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

    ಹಾಗೆಯೇ ಪಂದ್ಯದ ಮಧ್ಯೆ ಫ್ಲಡ್‍ಲೈಟ್ಸ್ ಕೈಕೊಟ್ಟ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಪಾಕಿಸ್ತಾನವನ್ನು ಟ್ರೋಲ್ ಆಗುತ್ತಿದೆ. ಬೇರೆ ದೇಶದ ಆಂತರಿಕ ವಿಚಾರದಲ್ಲಿ ಮೂಗುತೂರಿಸುವ ಬದಲು ನಿಮ್ಮ ದೇಶದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಿ ಎಂದು ನೆಟ್ಟಿಗರು ಪಾಕಿಸ್ತಾನವನ್ನು ಗೇಲಿ ಮಾಡುತ್ತಿದ್ದಾರೆ. ಮೊದಲು ವಿದ್ಯುತ್ ಬಿಲ್ ಕಟ್ಟಿ ಆಮೇಲೆ ಪಂದ್ಯ ಆಯೋಜಿಸಿ ಎಂದು ಟೀಕಿಸುತ್ತಿದ್ದಾರೆ. ನೀವು ಓಡಿಐ ಆಯೋಜಿಸಿಲ್ಲ, ಗಲ್ಲಿ ಕ್ರಿಕೆಟ್ ಆಡಿಸುತ್ತಿದ್ದೀರ ಎಂದು ಕಾಲೆಳೆದಿದ್ದಾರೆ.

    ಹಾಗೆಯೇ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಶ್ರೀಲಂಕಾ ನಿರ್ಧರಿಸಿ, ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಗೆ ಹೊಸ ನಾಯಕರುಗಳನ್ನೇ ಹೆಸರಿಸಿತ್ತು. ಜೊತೆಗೆ ಮೈದಾನಕ್ಕೆ ತೆರಳುವಾಗ, ಆಟಗಾರರು ತಂಗುವ ಹೋಟೆಲ್ ಕೊಠಡಿ ಸೇರಿದಂತೆ ಕರಾಚಿ ನಗರದ್ಯಾಂತ ಶ್ರೀಲಂಕಾ ತಂಡಕ್ಕೆ ಬಿಗಿ ಭದ್ರತೆಯನ್ನು ನೀಡಲಾಗುತ್ತಿದೆ.

    ಈ ಮೊದಲು ಕರಾಚಿಯಲ್ಲಿ ನಡೆಯಬೇಕಾಗಿದ್ದ ಪ್ರಥಮ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. 2009ರಲ್ಲಿ ಲಾಹೋರ್ ನಲ್ಲಿ ಶ್ರೀಲಂಕಾದ ಬಸ್ ಮೇಲೆ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಕರಾಚಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.

    ಸದ್ಯ ಸೋಮವಾರದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ 67 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಪಂದ್ಯದಲ್ಲಿ ಪಾಕಿಸ್ತಾನ 305 ರನ್ ಗಳಿಸಿದ್ದರೆ, ಶ್ರೀಲಂಕಾ 238 ರನ್‍ಗೆ  ಸರ್ವಪತನಗೊಂಡು ಸೋಲನ್ನು ಒಪ್ಪಿಕೊಂಡಿತು.

    ಹೀಗಾಗಿ ಶ್ರೀಲಂಕಾ ಪಂದ್ಯದಲ್ಲಿ ಸೋಲಲು ಕ್ರೀಡಾಂಗಣದ ಲೈಟ್ಸ್ ಆಫ್ ಆಗಿ ಅಡಚಣೆಯಾಗಿದ್ದೇ ಕಾರಣ. ಇಲ್ಲದಿದ್ದರೆ ಶೆಹನ್ ಜಯಸೂರ್ಯ 96 ರನ್‍ಗಳ ಬದಲು ಶತಕ ಬಾರಿಸುತ್ತಿದ್ದರು ಎಂದು ಶ್ರೀಲಂಕಾ ಅಭಿಮಾನಿಗಳು ಪಾಕ್ ವಿರುದ್ಧ ಕಿಡಿಕಾರಿದ್ದಾರೆ.