Tag: Five States

  • ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ಎಚ್ಚರಿಕೆಯ ಗಂಟೆ- ಅಣ್ಣಾ ಹಜಾರೆ

    ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ಮೋದಿಗೆ ಎಚ್ಚರಿಕೆಯ ಗಂಟೆ- ಅಣ್ಣಾ ಹಜಾರೆ

    ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಇನ್ನಾದರೂ ಮೋದಿ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂದು ಹಿರಿಯ ಸಾಮಾಜಿಕ ಹೋರಾಟಗಾರ ಹಾಗೂ ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

    ಪಂಚರಾಜ್ಯಗಳ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಸರ್ಕಾರ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಚುನವಣಾ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿ ನಾಯಕರು ಮರೆತಿದ್ದಾರೆ. ಹೀಗಾಗಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹಿಡಿತದಲ್ಲಿದ್ದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‍ಗಡ ರಾಜ್ಯಗಳಲ್ಲಿ ಬಿಜೆಪಿ ಸೋತಿದೆ. ಈ ಮೂಲಕ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

    ಮೋದಿ ಸರ್ಕಾರ ಚುನಾವಣೆಗೂ ಮುನ್ನ ಕಪ್ಪುಹಣವನ್ನು ದೇಶಕ್ಕೆ ವಾಪಾಸ್ ತರುವ ವಿಚಾರ, ರೈತರ ಬೆಳೆಗೆ ಬೆಂಬಲ ಬೆಲೆ, ಕೃಷಿ ಉತ್ಪಾದನೆಗಳಿಗೆ ಪ್ರೋತ್ಸಾಹ, ಅಧಿಕಾರದಲ್ಲಿ ಜನರ ಭಾಗವಹಿಸುವಿಕೆ ಸೇರಿದಂತೆ ಇನ್ನೂ ಮುಂತಾದ ಆಶ್ವಾಸನೆಗಳನ್ನು ನೀಡಿದ್ದರು. ಆದರೆ ಇದೂವರೆಗೂ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಕೊಟ್ಟ ಮಾತನ್ನು ಅವರು ಮರೆತಿರಬಹುದು. ಆದರೆ ಮೋದಿಯವರ ಮೇಲೆ ಭರವಸೆ ಇಟ್ಟು ಮತ ಹಾಕಿದ್ದ ಜನ ಎಂದಿಗೂ ಅದನ್ನು ಮರೆಯುವುದಿಲ್ಲ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮೋದಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಮುಂಬರುವ ಲೋಕಸಭಾ ಚುನಾವಣಾ ವೇಳೆಗೆ ತಾನು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸದಿದ್ದರೇ, ಇದೇ ರೀತಿಯ ಫಲಿತಾಂಶ ಮತ್ತೆ ಮರುಕಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಪ್ರಧಾನಿ ಮೋದಿಯವರ ನೋಟು ನಿಷೇಧ ನಿರ್ಧಾರದ ಕುರಿತು ಮಾತನಾಡಿ, ನೋಟು ನಿಷೇಧ ಮೋದಿ ಸರ್ಕಾರದ ತಪ್ಪು ನಡೆಯಾಗಿದೆ. ಅದನ್ನು ಯಾವ ಉದ್ದೇಶದಿಂದ ಜಾರಿಗೆ ತಂದರೋ, ಅದು ಇದೂವರೆಗೂ ಈಡೇರಿಲ್ಲ. ಕಪ್ಪುಹಣವನ್ನು ಬಯಲಿಗೆಳೆಯುವ ಅವರ ಉದ್ದೇಶ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ? ಆರ್‍ಬಿಐ ಮಾಹಿತಿಗಳ ಪ್ರಕಾರ ನೋಟು ಅಮಾನ್ಯೀಕರಣದ ಬಳಿಕ ಶೇ.99ರಷ್ಟು ನಿಷೇಧಿತ ನೋಟುಗಳು ಬ್ಯಾಂಕುಗಳಲ್ಲಿ ಸಂಗ್ರಹವಾಗಿದೆ. ಹಾಗಾದರೆ ಕಪ್ಪುಹಣ ಎಲ್ಲಿಗೆ ಹೋಯಿತು? ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನುರಿತ ತಜ್ಞರೊಂದಿಗೆ ಪ್ರಧಾನಿ ಚರ್ಚೆ ನಡೆಸಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ರಾಮಮಂದಿರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ರಾಮಮಂದಿರ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ ರಾಮಮಂದಿರಕ್ಕಿಂತಲೂ ಗಂಭೀರ ಸಮಸ್ಯೆಗಳು ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿವೆ. ಶ್ರೀರಾಮ ಮಂದಿರದಲ್ಲಿ ಇಲ್ಲ. ಬಡವರ ಮನಸ್ಸಿನಲ್ಲಿದ್ದಾನೆ. ಬಡವರನ್ನು ಉದ್ಧಾರ ಮಾಡಿದಾಗ ಮಾತ್ರ, ರಾಮನಿಗೆ ತೃಪ್ತಿ ಸಿಗುತ್ತದೆ. ನಾವು ಮಾಡುವ ಒಳ್ಳೆಯ ಕೆಲಸದಲ್ಲೇ, ಶ್ರೀರಾಮನನ್ನು ಕಾಣಬೇಕು. ಇದನ್ನೇ ಶ್ರೀರಾಮ ಕೂಡ ಹೇಳಿದ್ದಾನೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಲೋಕಸಭೆಗೆ ದಿಕ್ಸೂಚಿಯಾಗಲಿರುವ ಪಂಚರಾಜ್ಯಗಳ ಫಲಿತಾಂಶ ಮಂಗಳವಾರ ಪ್ರಕಟ

    ಲೋಕಸಭೆಗೆ ದಿಕ್ಸೂಚಿಯಾಗಲಿರುವ ಪಂಚರಾಜ್ಯಗಳ ಫಲಿತಾಂಶ ಮಂಗಳವಾರ ಪ್ರಕಟ

    ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭೆಯ ದಿಕ್ಸೂಚಿ, ಮಿನಿ ಮಹಾಸಮರ ಅಂತಲೇ ಬಿಂಬಿತವಾಗಿರೋ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ಮಿಜೋರಾಂ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ.

    ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ನಡೆಯಲಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ರಾಜಸ್ಥಾನದಲ್ಲಿ ಕಾಂಗ್ರೆಸ್ ಏಕಚಕ್ರಾಧಿಪತ್ಯ ಸಾಧಿಸಲಿದ್ದರೆ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್ ಇದ್ದು, ಮಿಜೋರಾಂನಲ್ಲಿ ಮಿಜೋರಾಂ ನ್ಯಾಷನಲ್ ಫ್ರಂಟ್-ಕಾಂಗ್ರೆಸ್ ನಡುವೆ ಫೈಟ್ ಇದೆ.

    ಛತ್ತೀಸ್‍ಗಢದಲ್ಲಿ ಕುದುರೆ ವ್ಯಾಪಾರದ ಭೀತಿಯಲ್ಲಿರೋ ಕಾಂಗ್ರೆಸ್, ತನ್ನೆಲ್ಲಾ ಶಾಸಕರು ಒಂದೆಡೆ ಇರುವಂತೆ ಆದೇಶಿಸಿದೆ. ಅಲ್ಲದೆ ತೆಲಂಗಾಣದಲ್ಲಿ ಟಿಆರ್‍ಎಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದ್ರೆ, ಬಹುಮತ ಸಿಗೋದು ಅನುಮಾನ ಎಂದು ಸಮೀಕ್ಷೆಗಳು ತಿಳಿಸಿವೆ

    ಕರ್ನಾಟಕದಲ್ಲಿ ಬಹುಮತ ಇಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಮೊದಲು ಆಹ್ವಾನ ನೀಡಿದ ಘಟನೆಯಿಂದ ಕಾಂಗ್ರೆಸ್-ಟಿಡಿಪಿ ನೇತೃತ್ವದ `ಮಹಾಕೂಟಮಿ’ ಪಕ್ಷಗಳು ಎಚ್ಚೆತ್ತಿವೆ. ನಾವು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದೇವೆ. ಫಲಿತಾಂಶ ಬಂದ ಕೂಡಲೇ ಸರ್ಕಾರ ರಚನೆಗೆ ನಮ್ಮನ್ನು ಆಹ್ವಾನಿಸಬೇಕು ಅಂತ ರಾಜ್ಯಪಾಲ ಇಎಸ್‍ಎಲ್ ನರಸಿಂಹನ್ ಅವರಿಗೆ ಮನವಿ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಕೆಸಿಆರ್‍ಗೆ ಬೆಂಬಲ ನೀಡೋದಾಗಿ ಎಂಐಎಂನ ಓವೈಸಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv