Tag: fines

  • ಕೊಪ್ಪಳ ಜಿಲ್ಲಾಧಿಕಾರಿಗೆ 6 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

    ಕೊಪ್ಪಳ ಜಿಲ್ಲಾಧಿಕಾರಿಗೆ 6 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

    ಕೊಪ್ಪಳ: ತಮ್ಮ ಕಚೇರಿ ನೌಕರನ ವಿಮಾ ಕಂತು ಪಾವತಿಸುವಲ್ಲಿ ನಿರ್ಲಕ್ಷಿಸಿ, ಕರ್ತವ್ಯ ಲೋಪ ಎಸಗಿರುವ ಕೊಪ್ಪಳ ಜಿಲ್ಲಾಧಿಕಾರಿಗಳು 6 ಲಕ್ಷ ರೂಪಾಯಿ ವಿಮೆಯನ್ನು ನೀಡಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

    ವಿಮೆಯ ಕ್ಲೇಮ್ 6 ಲಕ್ಷ ರೂಪಾಯಿ, ಮಾನಸಿಕ ಹಿಂಸೆಗೆ 10 ಸಾವಿರ ರೂಪಾಯಿ ಪರಿಹಾರ ಹಾಗೂ ಕೋರ್ಟ್ ವೆಚ್ಚಕ್ಕೆ 2500 ರೂಪಾಯಿ ಸೇರಿ ಒಟ್ಟು 6,10,2500 ರೂ.ಗಳನ್ನು ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಕನಕವಲ್ಲಿ ಅವರಿಗೆ ತಿಳಿಸಲಾಗಿದೆ.

    ಏನಿದು ಕೇಸ್?: ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ನೌಕರ ಮಂಜುನಾಥ್ ಅಳವಂಡಿ ಎಂಬವರು 2014ರ ಮಾರ್ಚ್ 28 ರಂದು ಎಲ್‍ಐಸಿ ವಿಮೆ ಮಾಡಿಸಿದ್ದರು. ಇದು ವೇತನ ಉಳಿತಾಯ ಪಾಲಿಸಿ ಆಗಿದ್ದರಿಂದ ಪ್ರತಿ ತಿಂಗಳ ವೇತನದಲ್ಲೇ ವಿಮಾ ಕಂತು ಕಡಿತಗೊಂಡು ಪಾವತಿಯಾಗುತ್ತಿತ್ತು. ಆದರೆ 2014ರ ಮೇ ತಿಂಗಳ ವಿಮಾ ಕಂತು ಪಾವತಿಯಾಗಿಲ್ಲ. ಮಂಜುನಾಥ 2015ರ ಅಕ್ಟೋಬರ್ 1 ರಂದು ಮಂಜುನಾಥ ಅಳವಂಡಿ ಅಪಘಾತದಲ್ಲಿ ಮೃತಪಟ್ಟಿದ್ದು, ನಾಮಿನಿಯಾಗಿದ್ದ ಮಂಜುನಾಥ್ ಅವರ ಪತ್ನಿ ಶಿಲ್ಪಾ ವಿಮೆಯ ಹಣಕ್ಕೆ ಅರ್ಜಿ ಸಲ್ಲಿಸಿದ್ದರು.

    ಎಲ್‍ಐಸಿ ಕಚೇರಿ ನಿಮ್ಮ ಪಾಲಸಿ ಕಂತು ಪಾವತಿಯಾಗದ್ದರಿಂದ ಪಾಲಿಸಿ ಲ್ಯಾಪ್ಸ್ ಆಗಿದೆ ಎಂದು ವಿವರಣೆ ನೀಡಿ ಕೈ ತೊಳೆದುಕೊಂಡಿತ್ತು. ಆಗ ಶಿಲ್ಪಾ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಗ್ರಾಹಕರ ನ್ಯಾಯಾಲಯ, ಎಲ್‍ಐಸಿ ಮತ್ತು ಡಿಸಿಗೆ ನೋಟೀಸ್ ನೀಡಿತ್ತು. ನ್ಯಾಯಾಲಯಕ್ಕೆ ಹಾಜರಾದ ಎಲ್‍ಐಸಿ ಅಧಿಕಾರಿಗಳು, ಮಂಜುನಾಥ ವಿಮಾ ಕಂತು ಪಾವತಿ ಮಾಡದ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದನ್ನು ತಿಳಿಸಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ನ್ಯಾಯಾಲಯದ ನೋಟಿಸ್ ಗೆ ಯಾವುದೇ ಉತ್ತರವನ್ನು ನೀಡಿರಲಿಲ್ಲ. ಇದೆಲ್ಲವನ್ನೂ ಗಮನಿಸಿದ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯ ಅಧ್ಯಕ್ಷೆ ಎಚ್.ಡಿ. ಏಕತಾ ಹೆಗ್ಡೆ, ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪ ಕಾಣುತ್ತಿದೆ ಎಂದು ತೀರ್ಮಾನಿಸಿ ದಂಡವನ್ನು ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ.

  • ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂಗೆ ಸುಪ್ರೀಂನಿಂದ 25 ಲಕ್ಷ ರೂ. ದಂಡ

    ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂಗೆ ಸುಪ್ರೀಂನಿಂದ 25 ಲಕ್ಷ ರೂ. ದಂಡ

    ಬೆಂಗಳೂರು: ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ದುರ್ಬಳಕೆ ಮಾಡಿದ್ದಕ್ಕೆ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಅವರಿಗೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ.

    ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡುವ ಸಂಬಂಧ ಅಬ್ರಾಹಂ ಪಿಐಎಲ್ ಸಲ್ಲಿಸಿದ್ದರು. ಖಾಸಗಿಯವರು ಜಾಗ ನೀಡಿದ್ದರೂ ಸರ್ಕಾರಿ ಜಾಗದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಬ್ರಾಹಂ ಪಿಐಎಲ್‍ನಲ್ಲಿ ದೂರಿದ್ದರು.

    ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ಪಿಐಎಲ್ ದುರ್ಬಳಕೆ ಮಾಡಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ 25 ಲಕ್ಷ ರೂ. ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ದಂಡವನ್ನು ಎರಡು ವಾರದಲ್ಲಿ ಕಟ್ಟುವಂತೆ ಸೂಚಿಸಿದೆ. ಪ್ರಕರಣ ಸಂಬಂಧಪಟ್ಟಂತೆ ರಾಜ್ಯದ ಪರ ಅಡ್ವೋಕೇಟ್ ಜನರಲ್ ಮಧುಸೂದನ್ ವಾದ ಮಂಡಿಸಿದ್ದರು.

    ಏನಿದು ಪ್ರಕರಣ?: ಅಳಂದ ಪಟ್ಟಣದ ಸಮೀಪ ನಗರದ ವ್ಯಕ್ತಿಯೊಬ್ಬರು ಸರ್ವೆ ನಂ. 264 ರ ಜಾಗದಲ್ಲಿ ಮಿನಿವಿಧಾನ ಸೌಧ ನಿರ್ಮಾಣ ಮಾಡಲು ದಾನವಾಗಿ ನೀಡಿದ್ದರು. ಆದರೆ ನಗರದಿಂದ 8 ಕಿ.ಮೀ. ದೂರದಲ್ಲಿರುವ 8 ಕಿ.ಮೀ ದೂರದಲ್ಲಿ ಸೇರಿದ ಸರ್ವೆ ನಂ 696 ರಲ್ಲಿ ಸೌಧ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.