ಕನ್ನಡ ಪರ ಹೋರಾಟಗಾರರು ನಾಳೆ ಕರ್ನಾಟಕ ಬಂದ್ (Karnataka Bandh) ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಈ ವಾರ ಸಿನಿಮಾಗಳನ್ನು ಬಿಡುಗಡೆ ಮಾಡದಂತೆ ಕರ್ನಾಟಕ ನಿರ್ಮಾಪಕರ ಸಂಘದ ಉಮೇಶ್ ಬಣಕಾರ್ ತಿಳಿಸಿದ್ದಾರೆ. ಈಗಾಗಲೇ ಸಂಬಂಧ ಪಟ್ಟ ನಿರ್ಮಾಪಕರ ಜೊತೆ ಮಾತನಾಡಲಾಗಿದೆ. ಅವರು ಕೂಡ ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಇಂದು ಜಗ್ಗೇಶ್ ನಟನೆಯ ತೋತಾಪುರಿ 2 ಸಿನಿಮಾ ರಿಲೀಸ್ ಆಗುತ್ತಿದೆ. ನಾಳೆ ಗಣೇಶ್ ನಟನೆಯ ಬಾನದಾರಿಯಲ್ಲಿ ಚಿತ್ರ ಬಿಡುಗಡೆ ಆಗಬೇಕಿತ್ತು. ಅಲ್ಲದೇ, ಇನ್ನೂ ಹಲವು ಚಿತ್ರಗಳು ಬಿಡುಗಡೆ ಆಗಲು ತಯಾರಿ ಮಾಡಿಕೊಂಡಿದ್ದವು. ಬಂದ್ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶನಿವಾರ ಸಿನಿಮಾಗಳನ್ನು ರಿಲೀಸ್ ಮಾಡಲು ಹೊರಟಿದ್ದಾರೆ ನಿರ್ಮಾಪಕರು.
ನಾಳೆ ಸ್ಯಾಂಡಲ್ ವುಡ್ (Sandalwood) ಕೂಡ ತನ್ನ ಕೆಲಸ ನಿಲ್ಲಿಸಲಿದೆ. ಕಲಾವಿದರು ಕೂಡ ಬೀದಿಗೆ ಇಳಿದು ಹೋರಾಟ ಮಾಡಲಿದ್ದಾರೆ. ಬಹುತೇಕ ಶೂಟಿಂಗ್ ನಿಲ್ಲಿಸಲಾಗಿದೆ. ಸಿನಿಮಾ ಸಂಬಂಧಿ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ, ಬಂದ್ ನಲ್ಲಿ ಭಾಗಿಯಾಗಲಿದ್ದಾರೆ. ಇದರ ನೇತೃತ್ವವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber) ವಹಿಸಿದೆ.
ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್ (Karnataka Bandh) ಗೆ ಸ್ಯಾಂಡಲ್ ವುಡ್ ಬೆಂಬಲ ವ್ಯಕ್ತ ಪಡಿಸಿದೆ. ಅಂದು ಚಿತ್ರೋದ್ಯಮ ಬಂದ್ ಮಾಡಿ ಹೋರಾಟದಲ್ಲಿ ನಟ ನಟಿಯರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಅಧ್ಯಕ್ಷ ಎನ್.ಎಮ್. ಸುರೇಶ್ (NM Suresh) ತಿಳಿಸಿದ್ದಾರೆ. ಕರ್ನಾಟಕ ಬಂದ್ ಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸಾ.ರಾ ಗೋವಿಂದ್ ಹೇಳಿದ್ದೇನೆ
ಕರ್ನಾಟಕದಲ್ಲಿ ಕಾವೇರಿದ ಕಾವೇರಿ ಹೋರಾಟ (Cauvery Protest) ಈ ಬೆನ್ನಲ್ಲೇ ಸೆ.29ರ ಬಂದ್ ಚರ್ಚಿಸಲು ಫಿಲ್ಮ್ ಚೇಂಬರ್ಗೆ ಕನ್ನಡ ಪರ ಹೋರಾಟಗಾರ ಸಾ ರಾ ಗೋವಿಂದು (Sa Ra Govindu) ಆಗಮಿಸಿ, ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಯೋಜನೆಗಾಗಿ ಹಿಂದಿನಿಂದಲೂ ದೊಡ್ಡ ಹೋರಾಟ ಮಾಡಿದ್ದೇವೆ. ಅಕ್ಟೋಬರ್, ನವೆಂಬರ್ ಬಂದರೆ ಸಾಕು ಬರೀ ಹೋರಾಟದ ಕೆಲಸ ಆಗಿದೆ. ಈ ವರ್ಷ ಮಳೆಗಾಲ ಇಲ್ಲ ಅಂತ ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು ಎಂದು ಸಾ ರಾ ಗೋವಿಂದು ಮಾತನಾಡಿದರು. ನಮ್ಮ ಸರ್ಕಾರ ಕೂಡ ತಮಿಳುನಾಡಿಗೆ ನೀರು ಬಿಟ್ಟು ರೈತರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಗೋವಿಂದು ಖಡಕ್ ಆಗಿ ಮಾತನಾಡಿದರು. ಇದು ನಮ್ಮ ನಾಡಿನ ಪ್ರಶ್ನೆ ಮತ್ತು ರೈತರ ಪ್ರಶ್ನೆಯಾಗಿದೆ. ಕರ್ನಾಟಕದವರು ಸತ್ತಿಲ್ಲ ಇನ್ನೂ ಬದುಕಿದ್ದೇವೆ.
ಮೋದಿಯವರು ಕಾವೇರಿ ವಿಚಾರದಲ್ಲಿ ಸೇರಿಕೊಂಡಿದ್ದಾರೆ. ಕಾವೇರಿ ಪ್ರಾಧಿಕಾರಕ್ಕೆ ನೀರು ಬಿಡಿ ಅಂತ ಹೇಳಿದ್ದಾರೆ ಎಂದು ನೇರವಾಗಿ ಕುಟುಕಿದ್ದಾರೆ. ಹಾಗಾಗಿಯೇ ಈ ರಾಜ್ಯದ ಜನ ಈ ಬಾರಿ ಬಿಜೆಪಿ ಕೈ ಹಿಡಿದಿಲ್ಲ ಅನ್ಮೋದು. ಈಗ ಕಾವೇರಿ ಪ್ರಾಧಿಕಾರವನ್ನ ಕರ್ನಾಟಕದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಈ ವಿಚಾರದಲ್ಲಿ ಮೋದಿ, ಅಮಿತ್ ಶಾ ಎಲ್ಲರೂ ಇದ್ದಾರೆ ಎಂದು ಗೋವಿಂದು ವಿರೋಧಿಸಿದ್ದಾರೆ.
ರಾಜಕೀಯ ಅಧಿಕಾರಕ್ಕಾಗಿ ಇಂತಹ ಕೆಲಸ ಮಾಡಬೇಡಿ. ಮೋದಿಯವರೇ ನೀವು ಇದೇ ತರ ಆಟ ಆಡಿದರೆ, ನಿಮ್ಮ ಪಕ್ಷ ನಾಶ ಆಗುತ್ತೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ರೈತರ ಕನ್ನಡಿಗರ ಶಾಪ ನೆನಪಿಟ್ಟುಕೊಳ್ಳಿ ಎಂದು ಮಾತನಾಡಿದ್ದಾರೆ.
ಕಾವೇರಿ ನದಿ ನೀರು ವಿಚಾರವಾಗಿ ಹೋರಾಟ ಮಾಡುತ್ತಿರುವ ರೈತರ ಪರ ನಿಲ್ಲಲು ಕರ್ನಾಟಕ ಚಲನಚಿತ್ರ ವಾಣಿಜ್ಯ (Film Chamber) ಮಂಡಳಿ ನಿರ್ಧರಿಸಿದೆ. ನಾಳೆ ನಡೆಯುತ್ತಿರುವ ಬೆಂಗಳೂರು (Bangalore) ಬಂದ್ ಗೆ ಬೆಂಬಲವನ್ನೂ ನೀಡಿರುವ ವಾಣಿಜ್ಯ ಮಂಡಳಿಯು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ಚಿತ್ರಮಂದಿರಗಳು ತೆರೆಯುವುದಿಲ್ಲ. ಬೆಂಗಳೂರಿನಲ್ಲಿ ಯಾವುದೇ ಸಿನಿಮಾ ಚಿತ್ರೀಕರಣ ಕೂಡ ಇರುವುದಿಲ್ಲ ಎಂದಿದ್ದಾರೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಮ್. ಸುರೇಶ್.
ಕಾವೇರಿ ವಿಚಾರ (Cauvery Protest) ಗಂಭೀರವಾದ ವಿಚಾರ. ಇದಕ್ಕಾಗಿ ನಮ್ಮ ಸಂಪೂರ್ಣ ಬೆಂಬಲ ಇರುತ್ತೆ. ಚಿತ್ರರಂಗದ ಎಲ್ಲಾ ಅಂಗ ಸಂಸ್ಥೆಗಳ ಜೊತೆ ಚರ್ಚೆ ಮಾಡಬೇಕು. ಕಲಾವಿದರನ್ನು ಭೇಟಿ ಮಾಡಬೇಕು. ಸಮಯದ ಅಭಾವ ತುಂಬಾ ಇದೆ. ಹೀಗಾಗಿ ರೂಪುರೇಷೆಯನ್ನು ಸಾಯಂಕಾಲ ತಿಳಿಸುತ್ತೇವೆ. ರೈತರ ಸಮಸ್ಯೆ ಇದು. ನೀರಿನ ಸಮಸ್ಯೆಗೆ ಸ್ಪಂದಿಸೋದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಮನದಟ್ಟು ಆಗಬೇಕಂದ್ರೆ ಸಮಯಾವಕಾಶ ಬೇಕು ಎಂದಿದ್ದಾರೆ.
ನಾಳೆಯ ಬೆಂಗಳೂರು ಬಂದ್ ಗೆ ಬೆಂಬಲವನ್ನೂ ಸೂಚಿಸಿರುವ ವಾಣಿಜ್ಯ ಮಂಡಳಿ, ಬೆಂಗಳೂರು ಸಿಟಿಯಲ್ಲಿ ಶೂಟಿಂಗ್ ನಡೆಯುವುದಿಲ್ಲ. ಬೆಂಗಳೂರು ಬಿಟ್ಟು ಹೊರಗೆ ಶೂಟಿಂಗ್ ಮಾಡ್ತಿರೋರಿಗೆ ತೊಂದರೆ ಇಲ್ಲ. ನಡ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗು ಚಿತ್ರಮಂದಿರಗಳನ್ನ ಬಂದ್ ಮಾಡ್ತೀವಿ ಎಂದಿದ್ದಾರೆ ಅಧ್ಯಕ್ಷರು.
ರಾಜ್ಯದಲ್ಲಿ ವರುಣ ಕೃಪೆಯಿಲ್ಲದೆ ಕಾವೇರಿ ನೀರಿನ ಪ್ರಮಾಣ ಇಳಿಕೆಯಾಗಿದೆ ಈ ನಡುವೆ ತಮಿಳುನಾಡಿಗೆ ನೀರನ್ನು ಹರಿಯಲು ಬಿಟ್ಟಿದ್ದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ವಿವಿಧ ರೈತ ಹಾಗೂ ಸಂಘಟನೆಗಳು ಹೋರಾಟ ನಡೆಸುತಿದ್ದು, ಕಾವೇರಿ ಹೋರಾಟಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಹಿರಿಯ ನಟಿ ಎಂ.ಲೀಲಾವತಿ ಇಳಿದಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಮನೆಯಲ್ಲಿ ಮಾತನಾಡಿದ ಅವರು, ಕಾವೇರಿ ನಮ್ಮದು ಎಂದು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ನಾನು ಸಹ ಕಾವೇರಿ ಹೋರಾಟಕ್ಕೆ ಹೊರಡುವೆ ನಮ್ಮ ಜಲ, ನಮ್ಮ ನೆಲ, ನಮ್ಮ ನುಡಿ, ಎಲ್ಲಾ ಕನ್ನಡಕೊಸ್ಕರ. ಕಾವೇರಿ ನೀರಿಗಾಗಿ ನಾನು ಹೋರಾಟಕ್ಕೆ ಬರುವೆ’ ಎಂದಿದ್ದಾರೆ. ನೆಲಮಂಗಲದ ಮನೆಯಿಂದ ಮಂಡ್ಯ ಪ್ರತಿಭಟನೆ ಸ್ಥಳಕ್ಕೆ ಮಗ ವಿನೋದ್ ರಾಜ್ ಜೊತೆಗೆ ಹೊರಟಿದ್ದಾರೆ.
ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಚಿತ್ರರಂಗದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಸಾಥ್ ನೀಡುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಈ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾತನಾಡಿದ್ದಾರೆ.
ಕಾವೇರಿ ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಸಿನಿಮಾ ರಂಗದವರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಈ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಎಂ ಸುರೇಶ್ (N.M Suresh) ಕಾವೇರಿ ಹೋರಾಟದ ಕುರಿತು ಮಾತನಾಡಿದ್ದಾರೆ.
ಕನ್ನಡ ಸಿನಿಮಾ ರಂಗ ಯಾವತ್ತಿಗೂ ರೈತರ ಪರವಾಗಿ ಇದೆ. ಕಾವೇರಿ ಹೋರಾಟ (Cauvery Protest) ಸೇರಿದಂತೆ ನಾಡು, ನುಡಿಗೆ ಸಂಬಂಧಿಸಿದ ಎಲ್ಲ ಹೋರಾಟಗಳಲ್ಲೂ ಚಿತ್ರರಂಗ ಭಾಗಿಯಾಗಿದೆ. ರೈತರ ಪರವಾಗಿ ನಿಂತು, ಅವರಿಗೆ ಸಪೋರ್ಟ್ ಮಾಡಲಿಲ್ಲ ಎಂದು ನಮ್ಮ ಜನ್ಮ ಸಾರ್ಥವಾಗಲ್ಲ ಎಂದಿದ್ದಾರೆ. ಶೀಘ್ರದಲ್ಲೇ ಈ ಕುರಿತು ಚರ್ಚೆ ಮಾಡಿ, ಒಂದು ನಿರ್ಧಾರಕ್ಕೆ ಬರುವುದಾಗಿಯೂ ಅವರು ತಿಳಿಸಿದ್ದಾರೆ.
ತಮ್ಮ ಗೆಲುವಿನ ಕುರಿತು ಮಾತನಾಡದ ಸುರೇಶ್, ‘ಈಗ ತಾನೇ ಗೆದ್ದು ಆಯ್ಕೆ ಆಗಿದ್ದೇನೆ ಸಂತೋಷವಾಗಿದೆ. ಇದು ವಾಣಿಜ್ಯ ಮಂಡಳಿಯ ಚರಿತ್ರೆಯಲ್ಲಿ ಬರೆಯೋ ಚುನಾವಣೆ. ನಾನು ನಾಲ್ಕು ಅಭ್ಯರ್ಥಿಗಳ ಮಧ್ಯೆ ಹೆಚ್ಚು ಮತ ಪಡೆಯೋಕೆ ಕಾರಣ ನನ್ನ ಗುರುಗಳಾದ ಸಾ.ರಾ ಗೋವಿಂದು ಅವರು. ಅವರ ಮಾರ್ಗದರ್ಶನದಲ್ಲಿ ಗೆದ್ದಿದ್ದೀನಿ. ಅವ್ರಿಗೆ ಭಾರಿ ಸಂತೋಷವಾಗಿದೆ. ನನ್ನ ಗೆಲುವಿಗೆ ಕಾರಣವಾದ ಎಲ್ಲಾ ನಿರ್ಮಾಪಕರಿಗೆ, ವಿತರಕರಿಗೆ ಹಾಗೂ ಪ್ರದರ್ಶಕರಿಗೆ ಧನ್ಯವಾದಗಳು ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಚುನಾವಣೆ (Election) ಪ್ರಕ್ರಿಯೆ ಶುರುವಾಗಿದೆ. ಬೆಳಗ್ಗೆಯಿಂದ 65ನೇ ವಾರ್ಷಿಕ ಸಭೆ ಆರಂಭವಾಯಿತು. ಹಲವಾರು ಚರ್ಚೆಗಳನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ನಂತರ ಮಧ್ಯಾಹ್ನ 2 ಗಂಟೆ ಮತದಾನ ಪ್ರಕ್ರಿಯೆ ನಡೆದಿದ್ದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಇಂದೇ ರಾತ್ರಿ ಫಲಿತಾಂಶ ಹೊರ ಬೀಳಲಿದೆ.
ಈ ಬಾರಿ ಅಧ್ಯಕ್ಷ (President) ಸ್ಥಾನಕ್ಕೆ ನಾಲ್ವರ ಮಧ್ಯ ತೀವ್ರ ಸ್ಪರ್ಧೆ ನಡೆದಿದ್ದು ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್, ಎಂ.ಎನ್. ಸುರೇಶ್ ಮತ್ತು ಎ.ಗಣೇಶ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ನಾಲ್ಕು ಬಣಗಳ ನಡುವೆ ತುರುಸಿನ ಮತದಾನ ನಡೆಯುತ್ತಿದೆ. ಇಂದು ರಾತ್ರಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂದು ಕಾದು ನೋಡಬೇಕು.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಹಲವು ಸ್ಥಾನಗಳಿಗೂ ಇಂದು ಚುನಾವಣೆ ನಡೆದಿದೆ. ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಇಂದು ಇವರುಗಳನ್ನು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಜಿದ್ದಾಜಿದ್ದಿನ ಕಣದಲ್ಲಿರುವ ಅಭ್ಯರ್ಥಿಗಳು ಮಂಡಳಿಯ ಚುನಾವಣಾ (Election) ರಣಕಣದಲ್ಲಿ ಯುದ್ದಕ್ಕೆ ಸಜ್ಜಾಗಿದ್ದಾರೆ. 2023ರ ಚುನಾವಣೆಯಲ್ಲಿ ಮಂಡಳಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾರುವ ಹಿರಿಯ ನಿರ್ಮಾಪಕ ಎನ್. ಎಂ. ಸುರೇಶ್ (M.N. Suresh)ಸುದ್ದಿಗೋಷ್ಠಿ ನಡೆಸಿ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ತಮ್ಮ ಯೋಜನೆಗಳನ್ನು ವಿವರಿಸಿದರು. ತಮ್ಮ ನೇತೃತ್ವದ ತಂಡಕ್ಕೆ ಬೆಂಬಲ ಕೇಳುವುದರ ಜೊತೆಗೆ ವಾಣಿಜ್ಯ ಮಂಡಳಿಯ ಸಮಗ್ರ ಅಭಿವೃದ್ದಿಗೆ ಜೊತೆಯಾಗಿ ಎಂದು ಮನವಿ ಮಾಡಿಕೊಂಡರು. ಸುದ್ದಿಗೋಷ್ಠಿಯ ಆರಂಭದಲ್ಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸದ್ಯ ಉಂಟಾಗಿರುವ ಸಮಸ್ಯೆಗೆ ತಮ್ಮ ತಂಡದ ಸಂಪೂರ್ಣ ಬೆಂಬಲ ಇದೆ ಎಂದು ಹಿರಿಯ ನಿರ್ಮಾಪಕ ಎನ್ ಎಂ ಸುರೇಶ್ ಘೋಷಿಸಿದರು. ‘ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಕಾವೇರಿಗಾಗಿ ಹಿಂದೆ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಚುನಾವಣಾ ಕಣದಲ್ಲಿರುವ ನಮ್ಮ ತಂಡ, ಸದಾ ಈ ಕನ್ನಡ ನಾಡಿನ ಅಸ್ಮಿತೆಯ ವಿಚಾರಗಳಿಗೆ ಬೆಂಬಲವಷ್ಟೆ ಅಲ್ಲದೆ ಯಾವುದೇ ಹಂತದ ಹೋರಾಟ ಅಥವಾ ತ್ಯಾಗಕ್ಕೆ ಸಿದ್ದರಿದ್ದೇವೆ’ ಎಂದು ಕಾವೇರಿ ಸಮಸ್ಯೆಗೆ ಬಹಿರಂಗ ಬೆಂಬಲ ಘೋಷಿಸಿದರು.
ಚುನಾವಣೆ ಎಂದರೆ ಕೇವಲ ಅಧಿಕಾರ ಅಥವಾ ಹುದ್ದೆಯ ನಿರೀಕ್ಷೆಯಷ್ಟೆ ಅಲ್ಲ, 75 ವರ್ಷಗಳ ಇತಿಹಾಸ ಇರುವ ನಮ್ಮ ಕನ್ನಡ ಚಲನಚಿತ್ರೋದ್ಯಮದ ಸಮಗ್ರ ಅಭಿವೃದ್ದಿ, ಆಧುನಿಕತೆ, ತಂತ್ರಜ್ಞಾನ, ಹಾಗೂ ಹಿರಿಯ ಅನುಭವಿಗಳ ಸೂಕ್ತ ಸಲಹೆಗಳೊಂದಿಗೆ ಮಂಡಳಿಯ ಸಮಗ್ರ ಅಭಿವೃದ್ದಿಯನ್ನ ವಾಸ್ತವಿಕವಾಗಿ ಕಟ್ಟಿಕೊಡೋ ಕೆಲಸವಾಗಿದೆ. 30 ವರ್ಷಗಳಿಂದ ಚಿತ್ರೋದ್ಯಮದಲ್ಲಿರುವ ನಾನು ಕೇವಲ ಹುದ್ದೆಯ ಆಕಾಂಕ್ಷಿಯಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಬದಲಿಗೆ ಈ ಚುನಾವಣೆಯ ಸದಾವಕಾಶವನ್ನು ಬಳಸಿಕೊಂಡು ದಶಕಗಳಿಂದ ಇರುವ ವಾಣಿಜ್ಯ ಮಂಡಳಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುವ ಸದುದ್ದೇಶ ಹೊಂದಿದ್ದೇವೆ’ ಎಂದು ತಿಳಿಸಿದರು. ಚಿತ್ರರಂಗದ ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ದೇಶದದಲ್ಲೇ ಒಂದು ಮಾದರಿ ಮಂಡಳಿಯನ್ನಾಗಿಸುವುದೇ ನಮ್ಮ ಗುರಿಯಾಗಿದೆ. ಚಿತ್ರರಂಗದಲ್ಲಿನ ನೌಕರರ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ನಟ ನಟಿಯರ ಗೌರವ ಹೆಚ್ಚಿಸುವ ವೇದಿಕೆ ಸೃಷ್ಟಿ ಮಾಡಬೇಕಿದೆ. ಅಲ್ಲದೆ ನೆಲ,ಜಲ,ಭಾಷೆ ವಿಚಾರಕ್ಕೆ ಕನ್ನಡ ಚಿತ್ರರಂಗ ಸದಾ ಸೇತುವೆಯಂತೆ ಕೆಲಸ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದರು.
‘ಈಗಾಗಲೇ ನನಗೆ ಸಿಕ್ಕಿರುವ ಸೇವೆಯ ಅವಕಾಶ ಬಳಸಿಕೊಂಡು ಹೊಂಬಾಳೆ ಫಿಲ್ಮ್ ಸಂಸ್ಥೆಯಿಂದ ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣಕ್ಕೆ 50 ಲಕ್ಷ ದೇಣಿಗೆ ತಂದಿದ್ದೇವೆ. ಮಲ್ಲೇಶ್ವರಂ ಕೋ ಆಪರೇಟಿವ್ ಬ್ಯಾಂಕ್ ನಿಂದ 3 ಕೋಟಿ ಸಾಲ ಮಂಜೂರು ಮಾಡಿಸಿ ಕಟ್ಟಡ ಕಾಮಗಾರಿಗೆ ತ್ವರಿತ ರೂಪ ನೀಡಿದ್ದೇವೆ. ಇದು ಸೇವೆಗಾಗಿ ಸಿಕ್ಕ ವೇದಿಕೆಯಾಗಿದೆ. ಚಿತ್ರರಂಗದ ಋಣ ನನ್ನ ಮೇಲೆ ಸಾಕಷ್ಟು ಇದೆ, ಆದರೆ ಅದನ್ನ ಸ್ವಲ್ಪ ಮಟ್ಟಿಗಾದರೂ ತೀರಿಸುವ ಕೆಲಸವನ್ನು ಈ ಚುನಾವಣೆಯ ಮೂಲಕ ಮಾಡುವ ಉದ್ದೇಶ ಹೊಂದಿದ್ದೇನೆ’ ಎಂದು ಹಿರಿಯ ನಿರ್ಮಾಪಕ ಎಂ.ಎನ್.ಸುರೇಶ್ ಹೇಳಿದರು. ಇದನ್ನೂ ಓದಿ:ಸಲ್ಲು, ಶಾರುಖ್ ಖಾನ್ ಮನೆಯಲ್ಲಿ ಗಣೇಶ ಹಬ್ಬ: ಮೆಚ್ಚಿಕೊಂಡ ಫ್ಯಾನ್ಸ್
ಚಿತ್ರೋಧ್ಯಮಕ್ಕೆ ಆಧುನಿಕತೆ, ತಂತ್ರಜ್ಞಾನದ ಜೊತೆಗೆ ಹೊಸತನ ಜೊತೆಯಾದಾಗ ಅಷ್ಟೇ ಪ್ರಮಾಣದಲ್ಲಿ ಹೊಸ ಹೊಸ ಸವಾಲುಗಳು ಎದುರಾಗುತ್ತವೆ. ಅದು ನಟ, ನಟಿಯರಿಗೆ, ತಂತ್ರಜ್ಞರಿಗೆ, ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಸಂಬಂಧಿಸಿದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಹೊಸ ಕನಸುಗಳೊಂದಿಗೆ ಚಿತ್ರರಂಗಕ್ಕೆ ಬರುವ ಹೊಸಬರಿಗಾಗಿ ಹಲವು ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಈ ಎಲ್ಲಾ ಕಾರಣದಿಂದ ಈ ಬಾರಿಯ ಚುನಾವಣೆಯಲ್ಲಿ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದ್ ಅವರ ಮಾರ್ಗದರ್ಶನಲ್ಲಿ ಚುನಾವಣೆಗೆ ಸಜ್ಜಾಗಿರುವ ನಮ್ಮ ತಂಡವನ್ನು ಬೆಂಬಲಿಸಿ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಶ್ರೇಯೋಭಿವೃದ್ದಿಗೆ ಸಹಕರಿಸಬೇಕು’ ಎಂದು ವಿನಂತಿಸಿಕೊಂಡರು.
ಎಂ.ಎನ್.ಸುರೇಶ್ ನೇತೃತ್ವದ ಈ ತಂಡಕ್ಕೆ ಮಾರ್ಗದರ್ಶಕರಾಗಿ ಹಿರಿಯ ನಿರ್ಮಾಪಕ, ಹೋರಾಟಗಾರ ಸಾ.ರಾ.ಗೋವಿಂದ್ ನಿಂತಿದ್ದಾರೆ. ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ವಿತರಕ ವಲಯದಿಂದ ಜಿ.ವೆಂಕಟೇಶ್ ಚಿಂಗಾರಿ ಬಿ ಮಹದೇವ್ ಹಾಗೂ ಪ್ರದರ್ಶಕರ ವಲಯದಿಂದ ಎಂ. ನರಸಿಂಹಲು ಸ್ಪರ್ಧೆಗಿಳಿದಿದ್ದಾರೆ. ಕಾರ್ಯದರ್ಶಿ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ರಾಜೇಶ್ ಬ್ರಹ್ಮಾವರ್, ವಿತರಕ ವಲಯದಿಂದ ಕೆ ಪಾರ್ಥ ಸಾರಥಿ, ಖಜಾಂಚಿ ಸ್ಥಾನಕ್ಕೆ ದಯಾಳ್ ಪದ್ಮನಾಭನ್ ಸ್ಪರ್ಧೆ ಮಾಡುತ್ತಿದ್ದು ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲರೂ ಸುದ್ದಿಗೋಷ್ಠಿಯಲ್ಲಿ ಹಾಜರಾಗಿ ಚುನಾವಣೆಗೆ ಬೆಂಬಲ ಕೇಳಿದರು.
ಜಾತಿ ನಿಂದನೆ (caste abuse) ಆರೋಪ ಎದುರಿಸುತ್ತಿರುವ ನಟ ಉಪೇಂದ್ರ (Upendra) ಅವರನ್ನು ಸಿನಿಮಾ ರಂಗದಿಂದ 5 ವರ್ಷ ಬ್ಯಾನ್ ಮಾಡಬೇಕು ಎಂದು ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ (film chamber) ಮಂಡಳಿಗೆ ದೂರು ನೀಡಿದ್ದಾರೆ. ಭೈರಪ್ಪ ಹರೀಶ್ ಕುಮಾರ್ ನೇತೃತ್ವದಲ್ಲಿ ವಾಣಿಜ್ಯ ಮಂಡಳಿಗೆ ಆಗಮಿಸಿದ್ದ ಕಾರ್ಯಕರ್ತರು ಉಪೇಂದ್ರ ಅವರನ್ನು ಬ್ಯಾನ್ (ban) ಮಾಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೈರಪ್ಪ ಹರೀಶ್ ಕುಮಾರ್, ‘ದಲಿತಕೇರಿ, ಊರಲ್ಲಿ ಯಾರು ಯಾರು ಇರಬೇಕು ಅಂತಾ ಹೇಳಬೇಕು. ಇವರೆಲ್ಲ ಸಿನಿಮಾಗಳಲ್ಲಿ ಮಾತ್ರ ನಾಯಕರು. ನಿಜವಾದ ನಾಯಕ ಓಡಿ ಹೋಗೋದಲ್ಲ. ಸ್ಟೇ ತರೋದು, ಓಡಿ ಹೋಗೋದಲ್ಲ. ಜಾತಿ, ಕೇರಿಗಳ ಬಗ್ಗೆ ಮಾತನಾಡುವವರನ್ನು ಬ್ಯಾನ್ ಮಾಡಬೇಕು’ ಎಂದು ಮಾತನಾಡಿದರು.
ದೂರು ಸ್ವೀಕರಿಸಿದ ಹಿರಿಯ ನಟ ಹಾಗೂ ಕರ್ನಾಟಕ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಸುಂದರ್ ರಾಜ್, ‘ನಟ ಉಪೇಂದ್ರ ಅವರು ಬೇಕಂತ ಮಾತನಾಡಿದ್ದು ಅಂತಾ ಅನಿಸತ್ತಾ ಇಲ್ಲ. ಸಮಾಜಮುಖಿಯಾಗಿ ಯೋಚನೆ ಮಾಡಬೇಕು. ಫಿಲ್ಮ್ ಚೇಂಬರ್ ಗೆ ಬ್ಯಾನ್ ಮಾಡೋ ಹಕ್ಕಿಲ್ಲ. ನಾವು ಸಂಧಾನ ಮಾಡ್ತೇವೆ, ಸಂಹಾರ ಮಾಡಲ್ಲ. ಕಾರ್ಯದರ್ಶಿಯಾಗಿ ಬ್ಯಾನ್ ಮಾಡಬೇಕೆಂಬ ಮನವಿ ಸ್ವೀಕರಿಸಿದ್ದೇನೆ. ಬ್ಯಾನ್ ಮಾಡಲು ಕೋರ್ಟ್ ಅನುಮತಿ ಕೊಡಲ್ಲ. ಉಪೇಂದ್ರ ಅವರನ್ನು ಕರೆಸಿ ಮಾತನಾಡುತ್ತೇವೆ’ ಎಂದರು.
ನಿರ್ಮಾಪಕ ಎನ್.ಕುಮಾರ್ (N. Kumar) ಮಾಡಿದ ಆರೋಪದ ಕುರಿತಂತೆ ಎಲ್ಲ ಮಾತುಗಳು ಅಲ್ಲಲ್ಲೇ ನಿಲ್ಲುತ್ತಿವೆ. ಕೋರ್ಟ್ (Court) ಗಿಂತ ಬೆಸ್ಟ್ ಯಾವುದೇ ಇಲ್ಲ ಎನ್ನುವ ಕಾರಣಕ್ಕಾಗಿ ನಾನು ನ್ಯಾಯಾಲಯಕ್ಕೆ ಬಂದಿದ್ದೇನೆ ಎಂದು ಮೊನ್ನೆಯಷ್ಟೇ ಕಿಚ್ಚ ಸುದೀಪ್ (Sudeep) ತಿಳಿಸಿದ್ದರು. ಈ ಮೂಲಕ ಸಂಧಾನದ ಮಾತೇ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಸ್ಪಷ್ಟ ಪಡಿಸಿದರು. ಅದರಲ್ಲೂ ಮಧ್ಯಸ್ಥಿಕೆಯ ವಿಚಾರವಾಗಿ ತಮಗೆ ಇಷ್ಟವಿಲ್ಲ ಎನ್ನುವುದನ್ನೂ ಅವರು ಸೂಚ್ಯವಾಗಿ ಹೇಳಿದ್ದರು.
ಸುದೀಪ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆಯೇ ನಿರ್ಮಾಪಕ ಕುಮಾರ್ ಮತ್ತೆ ಸಂಧಾನದ ಮಾತುಗಳನ್ನು ಆಡಿದ್ದಾರೆ. ನಾನು ಸಂಧಾನಕ್ಕೆ ಸಿದ್ಧನಾಗಿದ್ದೇನೆ. ಫಿಲ್ಮ್ ಚೇಂಬರ್ ನಲ್ಲೇ ಕೂತು ಮಾತನಾಡೋಣ ಎಂದು ಮತ್ತೆ ಹೇಳಿಕೆ ನೀಡಿದ್ದಾರೆ. ಸುದೀಪ್ ಅವರ ಮಾನಹಾನಿ ಮಾಡುವಂತಹ ಯಾವುದೇ ಮಾತುಗಳನ್ನು ಆಡಿಲ್ಲ. ನನ್ನ ನೋವುಗಳನ್ನು ನಾನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ರಿಲೀಸ್ಗೂ ಮುನ್ನವೇ ಬರೋಬ್ಬರಿ 32 ಕೋಟಿಗೆ ಸೇಲ್ ಆಯ್ತು ರಶ್ಮಿಕಾ ಮಂದಣ್ಣ ಸಿನಿಮಾ
ನಿನ್ನೆಯಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಮುಂದಿರುವ ಡಾ.ರಾಜ್ ಕುಮಾರ್ ಪ್ರತಿಮೆಯ ಬಳಿ ಎನ್.ಕುಮಾರ್ ಹೋರಾಟಕ್ಕೆ ಕೂತಿದ್ದಾರೆ. ಹಲವರು ಅವರಿಗೆ ಸಾಥ್ ಕೂಡ ನೀಡಿದ್ದಾರೆ. ಆ ಹೋರಾಟ ಇವತ್ತು ಮುಂದುವರೆದಿದೆ. ಈ ವಿಷಯದಲ್ಲಿ ಶಿವರಾಜ್ ಕುಮಾರ್ (Shivaraj Kumar) ಮಧ್ಯ ಪ್ರವೇಶ ಮಾಡಬೇಕು ಎಂದು ಕುಮಾರ್ ಮನವಿ ಮಾಡಿಕೊಂಡಿದ್ದಾರೆ. ಇಂದು ಕೂಡ ಈ ಕುರಿತಂತೆ ಚರ್ಚೆ ನಡೆಯಲಿದೆ.
ಫಿಲ್ಮ್ ಚೇಂಬರ್ ಮತ್ತು ನಿರ್ಮಾಪಕರ ಸಂಘವು ಇಂದು ಮತ್ತೆ ಸಭೆ ನಡೆಸಲಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡುವ ಕುರಿತು ಮಾತುಕತೆ ನಡೆಯಲಿದೆಯಂತೆ. ಒಂದು ವೇಳೆ ಶಿವಣ್ಣನ ಭೇಟಿಯು ಫಲ ಕೊಡುತ್ತಾ ಅಥವಾ ಕೋರ್ಟಿನಲ್ಲೇ ಇದು ತೀರ್ಮಾನ ಆಗುತ್ತಾ ಕಾದು ನೋಡಬೇಕು.
ಕಿಚ್ಚ ಸುದೀಪ್ ತಮ್ಮ ವಿರುದ್ಧ ಕೋರ್ಟಿನಲ್ಲಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸುತ್ತಿದ್ದಂತೆಯೇ ನಿರ್ಮಾಪಕ ಎನ್.ಕುಮಾರ್ ನ್ಯಾಯಕ್ಕಾಗಿ ಫಿಲ್ಮ್ ಚೇಂಬರ್ (Film Chamber) ಮುಂದೆ ಪ್ರತಿಭಟನೆ (Protest) ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದಿರುವ ಡಾ.ರಾಜ್ ಕುಮಾರ್ (Dr. Raj Kumar) ಪ್ರತಿಮೆಯ ಬಳಿ ಅವರು ಪ್ರತಿಭಟನೆಗೆ ಕೂರಲಿದ್ದಾರೆ. ತಮಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕು ಎನ್ನುವುದು ಅವರು ಆಗ್ರಹವಾಗಿರಲಿದೆಯಂತೆ.
ನಿರ್ಮಾಪಕ ಎನ್.ಕುಮಾರ್ (N. Kumar) ವಿರುದ್ದ ಕಾನೂನು ಸಮರಕ್ಕೆ ಮೊನ್ನೆ ಸುದೀಪ್ (Kiccha Sudeep) ಅಧಿಕೃತವಾಗಿ ಇಳಿದಿದ್ದಾರೆ. ಬೆಂಗಳೂರಿನ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಅವರು, ನಿರ್ಮಾಪಕ ಎನ್.ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ (Defamation) ಪ್ರಕರಣ ದಾಖಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್, ‘ನಾನು ಯಾರಿಗೆ ಉತ್ತರ ಕೊಡಬೇಕಿದೆಯೋ, ಅದನ್ನು ಕೋರ್ಟಿನಲ್ಲಿ (Court) ಕೊಡುವೆ’ ಎಂದಿದ್ದರು. ಇದನ್ನೂ ಓದಿ:ಜೈಲೂಟ ಫಿಕ್ಸ್ ಆದ್ರೂ ತಾನು ತಪ್ಪೇ ಮಾಡಿಲ್ಲ ಅಂತಿರೋ ವಂಚಕಿ ನಿಶಾ ನರಸಪ್ಪ!
ಈ ಕುರಿತು ನಿರ್ಮಾಪಕ ಎನ್.ಕುಮಾರ್ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ‘ಅವರು ಈ ಹಿಂದೆ ನನಗೆ ಕಳುಹಿಸಿದ್ದ ನೋಟಿಸ್ ಜುಲೈ 13ಕ್ಕೆ ಸಿಕ್ಕಿದೆ. ಅದು ಇಂಗ್ಲಿಷಿನಲ್ಲಿತ್ತು. ನನಗೆ ಇಂಗ್ಲಿಷ್ ಬರುವುದಿಲ್ಲ. ಹಾಗಾಗಿ ಇಂದು ವಕೀಲರನ್ನು ಭೇಟಿ ಮಾಡಲು ಸಮಯ ನಿಗದಿ ಮಾಡಿದ್ದೆ. ಅಷ್ಟರಲ್ಲೇ ಅವರು ಕೋರ್ಟಿಗೆ ಹೋಗಿದ್ದಾರೆ. ನನ್ನ ಮೇಲೆ ಏನೆಲ್ಲ ಆರೋಪ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಾನೂನು ಸಲಹೆ ಪಡೆದುಕೊಂಡು ನಾನು ಪ್ರತಿಕ್ರಿಯೆ ಮಾಡುತ್ತೇನೆ’ ಎಂದಿದ್ದಾರೆ.
ನಾನು ತುಂಬಾ ತಾಳ್ಮೆ ಇರುವಂತಹ ನಿರ್ಮಾಪಕ. ನನಗೆ ಆದ ನೋವನ್ನು ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದೇನೆ. ನಾನು ನಿರ್ಮಾಪಕನಾಗಿ ಮೂವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ವಿತರಕನಾಗಿ ನೂರಾರು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಸರಿ ತಪ್ಪುಗಳು ನನಗೂ ಅರ್ಥವಾಗುತ್ತವೆ. ನಾನು ಮತ್ತು ಸುದೀಪ್ ಇಬ್ಬರ ಮಧ್ಯ ನಡೆದ ಮಾತುಕತೆಗೆ ಅವರು ಬದ್ಧರಾಗಲಿ ಎಂದಷ್ಟೇ ಹೇಳುತ್ತೇನೆ’ ಎಂದಿದ್ದಾರೆ ಕುಮಾರ್.
ನಮಗೆ ಏನೇ ತೊಂದರೆಯಾದರೂ ನಾವು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೊರೆ ಹೋಗುತ್ತೇವೆ. ನಾನು ಅಲ್ಲಿಗೇ ಹೋಗಿದ್ದು. ವಾಣಿಜ್ಯ ಮಂಡಳಿಯಲ್ಲಿ ಕೂತು ಮಾತನಾಡೋಣ ಬನ್ನಿ ಎಂದು ಕರೆದರೂ ಅವರು ಬರಲಿಲ್ಲ. ಕೋರ್ಟಿಗೆ ಹೋಗಿದ್ದಾರೆ. ನಾನು ಈ ಕುರಿತು ನನ್ನ ವಕೀಲರನ್ನು ಸಂಪರ್ಕಿಸುತ್ತೇನೆ ಎನ್ನುವುದು ಕುಮಾರ್ ಮಾತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber) ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ ಚಲನಚಿತ್ರೋದ್ಯಮದ ಬೆಳವಣಿಗೆಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದು, ಯಾವತ್ತೂ ಚಿತ್ರೋದ್ಯಮವು ತಮ್ಮನ್ನು ಅತ್ಯಂತ ಪೂಜ್ಯ ಸ್ಥಾನದಲ್ಲಿ ಗೌರವಿಸುತ್ತಾ ಬಂದಿರುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಚಲನಚಿತ್ರೋದ್ಯಮದ ಕೆಳಕಂಡ ಬೇಡಿಕೆಗಳನ್ನು ಈಡೇರಿಸಿಕೊಡುವ ಮೂಲಕ ಕನ್ನಡ ಚಿತ್ರರಂಗವು ಉಳಿದು, ಬೆಳೆಯಲು ಸಹಕರಿಸಬೇಕು’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ (Bha.Ma. Harish) ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಇದೇ ವೇಳೆ ಮಂಡಳಿಯ ಪದಾಧಿಕಾರಿಗಳಾದ ಹೆಚ್ ಸಿ ಶ್ರೀನಿವಾಸ, ಸುಂದರ್ ರಾಜ್, ಕುಶಾಲ್, ಮಾಜಿ ಅಧ್ಯಕ್ಷರಾದ ಚಿನ್ನೇಗೌಡ್ರು, ಕೆವಿ ಚಂದ್ರಶೇಖರ್ ಉಪಸ್ಥಿತರಿದ್ದರು.
ನಿರ್ಮಾಪಕರು ಚಿತ್ರ ತಯಾರಿಸಿ, ಪಕ್ಕದ ರಾಜ್ಯದದಲ್ಲಿ ಪ್ರದರ್ಶನಕ್ಕೆ ಬೇಕಾಗುವಂತಹ ಡಿಜಿಟಲ್ ಡಿಸಿಪಿ ಪಡೆಯಬೇಕಾಗಿದ್ದು, ಇಂದಿಗೂ ನಿರ್ಮಾಪಕರಿಗೆ ಕಷ್ಟಕರವಾಗಿದೆ. ವರ್ಷಕ್ಕೆ ಅಂದಾಜು 350 ಕನ್ನಡ ಚಲನಚಿತ್ರಗಳು ನಿರ್ಮಾಣಗೊಂಡು ಬಿಡುಗಡೆಗೊಳ್ಳುತ್ತಿವೆ. ಆದಕಾರಣ ಸರ್ಕಾರದಿಂದ ಸ್ಥಾಪಿತವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಅಳವಡಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಡಿಯಲ್ಲಿ 20 ಕೋಟಿ ವೆಚ್ಚದಲ್ಲಿ ಡಿಜಿಟಲ್ ಯಂತ್ರೋಪಕರಣಗಳನ್ನು ಸ್ಥಾಪಿಸಲು ಆಯ ವ್ಯಯದಲ್ಲಿ ಹಣ ನಿಗದಿಪಡಿಸಿಕೊಡಬೇಕಾಗಿ ವಿನಂತಿಸುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆ’ ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ನಟಿ, ಡೆಲಿವರಿ ಆಗ್ತಿದ್ದಂತೆ ಶೂಟಿಂಗ್ ಹಾಜರಾದ ಮಮತಾ
ರಾಜ್ಯದ ಚಿತ್ರಮಂದಿರಗಳಲ್ಲಿನ ಪ್ರೊಜೆಕ್ಟರ್ಗಳು ವಿದೇಶದಿಂದ, ಅದರಲ್ಲೂ ಒಬ್ಬರು ಇಬ್ಬರು. ಸರ್ವೀಸ್ ಪ್ರೊವೈಡರ್ನಿಂದ ಪಡೆಯಬೇಕಾಗಿದೆ. ಈ ಕ್ರಮದಿಂದ ಚಿತ್ರಮಂದಿರಗಳು ಇಂದಿಗೂ ಬಾಡಿಗೆ ರೂಪದಲ್ಲಿ ಪಡೆದು ಪ್ರದರ್ಶನ ನಡೆಸುತ್ತಿದ್ದು, ಸ್ವಂತ ಪ್ರೊಜೆಕ್ಟರ್ ಖರೀದಿಸಲು 40-50 ಲಕ್ಷ ರೂ. ಬಂಡವಾಳ ಹೂಡಬೇಕಾಗುತ್ತದೆ. ಈ ರೀತಿಯ ಪ್ರೋತ್ಸಾಹಕ್ಕೆ ತಲಾ ಒಂದು ಪ್ರೊಜೆಕ್ಟರ್ ಖರೀದಿಗೆ 10 ರಿಂದ 15 ಲಕ್ಷ ರೂಪಾಯಿ ಸಹಾಯಧನ ನೀಡಿದರೆ ಪ್ರದರ್ಶಕರು ಸ್ವಾವಲಂಬಿಯಾಗಿ ಉದ್ಯಮವನ್ನು ಬೆಳೆಸಲು ಸಹಾಯವಾಗುತ್ತದೆ. ಆದಕಾರಣ ಪ್ರಾರಂಭಿಕ ಹಂತದಲ್ಲಿ 20 ಕೋಟಿ ರೂಪಾಯಿ ಹಣವನ್ನು ನಿಗದಿಪಡಿಸಿ ಕೊಡಬೇಕಾಗಿ ಕೋರುತ್ತೇವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ’ ಎಂದು ವಾಣಿಜ್ಯ ಮಂಡಳಿ ಅರ್ಜಿಯಲ್ಲಿ ತಿಳಿಸಿದೆ.
ಎಲ್ಲಾ ಸಮಸ್ಯೆಗಳಿಗೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಸ್ಪಂದಿಸಿದ್ದಾರೆ. ಕಲಪ ಮುಗಿದ ಬಳಿಕ ವಾಣಿಜ್ಯ ಚಲನಚಿತ್ರ ಮಂಡಳಿಯಲ್ಲಿಯೇ ಕುಳಿತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.