Tag: family

  • ಮಗ, ಸೊಸೆ, ಪತ್ನಿ ಸಮೇತ ಹೆಚ್‍ಡಿಕೆ ಪ್ರವಾಸ

    ಮಗ, ಸೊಸೆ, ಪತ್ನಿ ಸಮೇತ ಹೆಚ್‍ಡಿಕೆ ಪ್ರವಾಸ

    ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ.ಕುಮಾರಸ್ವಾಮಿ ಕುಟುಂಬ ಸಮೇತರಾಗಿ ಪ್ರವಾಸದಲ್ಲಿದ್ದು, ಕೆಲಕಾಲ ಹಾಸನದ ಖಾಸಗಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ಪಡೆದಿದ್ದಾರೆ.

    ಇತ್ತೀಚೆಗಷ್ಟೇ ಕುಟುಂಬ ಸಮೇತ ಮಡಿಕೇರಿಗೆ ಪ್ರವಾಸ ತೆರಳಿದ್ದ ಕುಮಾರಸ್ವಾಮಿಯವರು, ಅಲ್ಲಿ ಒಂದು ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಈಗ ಹಾಸನದ ಬೇಲೂರು, ಹಳೆಬೀಡು, ಗೊರೂರಿಗೆ ಭೇಟಿ ನೀಡುವ ಸಲುವಾಗ ಪತ್ನಿ, ಮಗ, ಸೊಸೆ ಜೊತೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ.

    ಕಳೆದ ಎರಡು ದಿನದ ಹಿಂದೆ ಮಾಜಿ ಸಚಿವ ಹೆಚ್‍ಡಿ ರೇವಣ್ಣ ವಿರುದ್ಧ ಅರಕಲಗೂಡು ಶಾಸಕ ಎಟಿ.ರಾಮಸ್ವಾಮಿ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ರೇವಣ್ಣ ಸರ್ವಾಧಿಕಾರಿ ಮನೋಭಾವನೆಯನ್ನು ಬಿಡಬೇಕು ಎಂದು ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇಂದು ಗೊರೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅರಕಲಗೂಡು ಶಾಸಕರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

  • ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    – ಒಂದೇ ಕುಟುಂಬದ ಆರು ಜನರು
    – ನದಿ ದಡದಲ್ಲಿ ಕುಟುಂಬಸ್ಥರ ಆಕ್ರಂದನ
    – ಗ್ರಾಮದಲ್ಲಿ ಸ್ಮಶಾನ ಮೌನ

    ಚಂಡೀಗಢ: ಒಂದೇ ಕುಟುಂಬದ ಆರು ಜನ ನದಿಯಲ್ಲಿ ಮುಳುಗಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಜಲ್ಮಾನಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಕುಟುಂಸ್ಥರು ಯಮುನಾ ನದಿ ದಡದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ಜನರಲ್ಲಿ ಮೂವರ ಶವ ಪತ್ತೆಯಾಗಿದ್ದು, ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದೆ.

    ನದಿ ದಡದಲ್ಲಿ ವಾಯು ವಿಹಾರಕ್ಕಾಗಿ ಸುಶೀಲ್ ಕುಟುಂಬದವರ ಜೊತೆ ತೆರಳಿದ್ದರು. ಸುಶೀಲ್ ಜೊತೆಯಲ್ಲಿ ಪತ್ನಿ ಸೋನಿಯಾ (32), ಮಕ್ಕಳಾದ ಸಾಗರ್ (15), ಪಾಯಲ್ (12), ಸಂಬಂಧಿ ಸರೀತಾ (18), ಸಂಬಂಧಿಯ ಮಕ್ಕಳಾದ ಬಾದಲ್ (18) ಮತ್ತು ಗರ್ವ್ (16) ಜೊತೆಯಾಗಿ ವಾಕಿಂಗ್ ಗೆ ಬಂದಿದ್ದರು. ಈ ವೇಳೆ ಮಕ್ಕಳು ನದಿಯಲ್ಲಿ ಸ್ನಾನ ಮಾಡೋದಾಗಿ ಹಠ ಹಿಡಿದಿದ್ದರಿಂದ ಸುಶೀಲ್ ನದಿ ದಡದಲ್ಲಿಯೇ ಕುಳಿತುಕೊಂಡಿದ್ದರು.

    ಪತ್ನಿ ಸೋನಿಯಾ ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಇಳಿದಿದ್ದರು. ಮಕ್ಕಳು ನದಿ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಸೋನಿಯಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಸರೀತಾ ಸಹ ನದಿಯಲ್ಲಿ ಮುಳಗಲಾರಂಭಿಸಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಆರು ಜನ ಯುಮುನೆಯ ಪಾಲಾಗಿದ್ದಾರೆ. ಇನ್ನು ದಡದಲ್ಲಿ ಕುಳಿತಿದ್ದ ಸುಶೀಲ್ ಸಹಾಯಕ್ಕಾಗಿ ಕೂಗಿ ಕೂಗಿ ಜ್ಞಾನ ತಪ್ಪಿದ್ದಾರೆ.

    ಮಕ್ಕಳ ಧ್ವನಿ ಕೇಳಿದ್ದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಕುರಿಗಾಹಿ ನದಿಗೆ ಧುಮುಕಿದ್ರೂ ಯಾರನ್ನ ಉಳಿಸಲು ಸಾಧ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಹಲವು ಯುವಕರು ನದಿಗೆ ಧುಮುಕಿ ಆರು ಜನರಿಗಾಗಿ ಶೋಧ ನಡೆಸಿದ್ದಾರೆ. ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಈಜು ತಜ್ಞರ ಮೂಲಕ ಹುಡುಕಾಟ ನಡೆಸಿದ್ದರು. ಬೆಳಗ್ಗೆ 11 ಗಂಟೆಗೆ ಘಟನಾ ಸ್ಥಳದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಸೋನಿಯಾ, ಸರೀತಾ ಮತ್ತು ಬಾದಲ್ ಶವ ಪತ್ತೆಯಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ.

    ಡಿಸಿ ಧಮೇಂದ್ರ ಸಿಂಗ್, ಡಿಎಸ್‍ಪಿ ಪ್ರದೀಪ್ ಕುಮಾರ್, ಡಿಆರ್‍ಓ ಚಂದ್ರಮೋಹನ್, ತಹಶೀಲ್ದಾರ್ ನರೇಶ್ ಕೌಶಲ್ ಘಟನಾ ಸ್ಥಳದಲ್ಲಿದ್ದಾರೆ. ಬೋಟ್, ಮುಳುಗು ತಜ್ಞರ ಸಹಾಯದ ಮೂಲಕ ಉಳಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆ ಸುತ್ತಲಿನ ಗ್ರಾಮಗಳ ಈಜುಗಾರರು ಮತ್ತು ನಾವಿಕರನ್ನ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ನದಿ ದಡದಲ್ಲಿಯೇ ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ.

  • ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

    ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

    – ಮಾವ ಸಾವು, ಗಂಭೀರ ಸ್ಥಿತಿಯಲ್ಲೇ ಉಳಿದ ಸೋದರತ್ತೆ

    ಚಂಡೀಗಢ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರ ಸೋದರತ್ತೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಮೂವರು ದರೋಡೆಕೋರರನ್ನು ಪಂಜಾಬ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕಳೆದ ಆಗಸ್ಟ್ 28ರ ರಾತ್ರಿ ರೈನಾ ಸೋದರತ್ತೆ ಕುಟುಂಬದ ಮೇಲೆ ತಂಡವೊಂದು ದಾಳಿ ಮಾಡಿತ್ತು. ಮನೆಯ ಮಹಡಿಯ ಮೇಲೆ ಮಲಗಿದ್ದ ಕುಟುಂಬದ ಎಲ್ಲರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ರೈನಾರ ಸೋದರ ಮಾವ ಸಾವನ್ನಪ್ಪಿದ್ದರು. ಅತ್ತೆಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದರು. ಜೊತೆಗೆ ಅವರ ಮಕ್ಕಳಿಬ್ಬರು ಕೂಡ ಹಲ್ಲೆಗೊಳಗಾಗಿದ್ದರು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಪಂಜಾಬಿನ ಡಿಜಿಪಿ ದಿನಕರ್ ಗುಪ್ತಾ, ಬಂಧಿತರು ಹೊರರಾಜ್ಯದವರಾಗಿದ್ದಾರೆ. ಇವರ ಗ್ಯಾಂಗಿನಲ್ಲಿ 11 ಮಂದಿ ಇದ್ದು ಎಲ್ಲರನ್ನು ಪತ್ತೆ ಮಾಡಲಾಗಿದೆ. ಆದರೆ ಸದ್ಯ ಮೂವರು ಸಿಕ್ಕಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಹುಡುಕಲು ನಮ್ಮ ಸಿಬ್ಬಂದಿ ಶೋಧಕಾರ್ಯ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಬಂಧಿತರು ಪಠಾಣ್ ಕೋಟ್ ರೈಲ್ವೆ ನಿಲ್ದಾಣದಲ್ಲಿರುವ ಕೊಳೆಗೇರಿಯಲ್ಲಿ ವಾಸವಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದೆ. ಆರೋಪಿಗಳು ಇದೇ ರೀತಿಯಲ್ಲಿ ಉತ್ತರ ಪ್ರದೇಶ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಲ್ಲಿ ದರೋಡೆ ಮತ್ತು ಕೊಲೆ ಮಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಇವರು ಶ್ರೀಮಂತರ ಮನೆ ನೋಡಿ ದರೋಡೆ ಮಾಡುತ್ತಿದ್ದರು. ತಡೆಯಲು ಬಂದವರನ್ನು ರಾಡುಗಳಿಂದ ಹೊಡೆದು ಕೊಲೆ ಮಾಡುತ್ತಿದ್ದರು ಎಂದು ಗುಪ್ತಾ ತಿಳಿಸಿದ್ದಾರೆ.

    ಘಟನೆ ನಡೆದ ಆ.28ರ ರಾತ್ರಿ ರೈನಾ ಅವರ ಕುಟುಂಬದ ಮೇಲೆ ಹಲ್ಲೆ ಮಾಡುವ ಮೊದಲು, ಬೇರೆ ಮನೆಯಲ್ಲಿ ದರೋಡೆ ಮಾಡಲು ಪ್ರಯತ್ನ ಮಾಡಿದ್ದಾರೆ. ಆದರೆ ಮೂರು ಮನೆಯಲ್ಲಿ ಪ್ರಯತ್ನಿಸಿದರೂ ಆಗಿಲ್ಲ. ಕೊನೆಗೆ ನಾಲ್ಕನೇಯದಾಗಿ ರೈನಾ ಅವರ ಸೋದರತ್ತೆ ಮನೆಗೆ ಬಂದಿದ್ದಾರೆ.

    ಮನೆಗೆ ಏಣಿ ಹಾಕಿ ಮೇಲೆ ಹೋಗಿದ್ದಾರೆ. ಮೊದಲಿಗೆ ಮಹಡಿ ಮೇಲೆ ಮಲಗಿದ್ದ ನಾಲ್ವರನ್ನು ರಾಡುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಂತರ ಮನೆಯೊಳಗೆ ನುಗ್ಗಿ ಮನೆಯಲಿದ್ದ ಒಡವೆ ಮತ್ತು ಹಣವನ್ನು ದೋಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಪಠಾಣ್ ಕೋಟ್ ರೈಲ್ವೆ ನಿಲ್ದಾಣಕ್ಕೆ ಬಂದ ಕದ್ದ ಚಿನ್ನ ಮತ್ತು ಹಣವನ್ನು ಸಮನಾಗಿ ಹಂಚಿಕೊಂಡು, ಅದೇ ಕೊಳಗೇರಿಯಲ್ಲಿ ಬೇರೆ ಬೇರೆ ವಾಸ ಮಾಡಲು ಪ್ರರಂಭಿಸಿದ್ದಾರೆ. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಮಾರಕಾಸ್ತ್ರಗಳು ಮತ್ತು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.

    ಈ ವಿಚಾರವಾಗಿ ಅಂದು ಟ್ವೀಟ್ ಮಾಡಿದ್ದ ರೈನಾ, ಪಂಜಾಬ್‍ನಲ್ಲಿ ನನ್ನ ಕುಟುಂಬದವರಿಗೆ ಆಗಿರುವುದು ಭಯಾನಕತೆಯನ್ನು ಮೀರಿದೆ. ನನ್ನ ಸೋದರಮಾವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನನ್ನ ಸೋದರತ್ತೆ ಮತ್ತು ನನ್ನ ಸೋದರತ್ತೆಯ ಮಕ್ಕಳ ಮೇಲೂ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ದುರಾದೃಷ್ಟವಶಾತ್ ನನ್ನ ಸೋದರತ್ತೆ ಮಗನೋರ್ವ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದಾರೆ. ನನ್ನ ಸೋದರತ್ತೆ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದರು.

    ಜೊತೆಗೆ ಇದೂವರೆಗೂ ಅಂದು ರಾತ್ರಿ ಏನಾಯಿತು ಮತ್ತು ಯಾರೂ ಮಾಡಿದರು ಎಂಬುದು ಏನೂ ಗೊತ್ತಿಲ್ಲ. ನಾನು ಪಂಜಾಬ್ ಪೊಲೀಸರಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಾವು ಕೊನೆ ಪಕ್ಷ ಈ ಘೋರ ಕೃತ್ಯವನ್ನು ಯಾರು ಮಾಡಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ. ಆ ಅಪರಾಧಿಗಳು ಇನ್ನೊಂದು ಕೃತ್ಯ ಮಾಡಲು ನಾವು ಬಿಡಬಾರದು ಎಂದು ರೈನಾ ಟ್ವೀಟ್ ಮೂಲಕ ಕೇಳಿಕೊಂಡಿದ್ದರು.

  • ವಿಷ ಸೇವಿಸಿ ಮೂರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ

    ವಿಷ ಸೇವಿಸಿ ಮೂರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ

    -ಅಪಾರ್ಟ್‍ಮೆಂಟ್‍ನಲ್ಲಿ ಐವರ ಶವ ಪತ್ತೆ
    -ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ

    ಭೋಪಾಲ್: ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ದಾಹೋಡ್ ನಲ್ಲಿ ನಡೆದಿದೆ. ದಾಹೋಡ್ ನಗರದ ಸುಜೈ ಬಾಗ್ ರಸ್ತೆಯಲ್ಲಿರುವ ಅಪಾರ್ಟ್‍ಮೆಂಟ್ ನಲ್ಲಿ ಕುಟುಂಬ ವಾಸವಾಗಿತ್ತು.

    ಸೈಫಿ ದುಧಿಯಾವಾಲಾ ಕುಟುಂಬದ ಶವಗಳು ಪತ್ತೆಯಾಗಿವೆ. ಸೈಫಿ ಪ್ಲಾಸ್ಟಿಕ್ ಡಿಸ್‍ಪೋಸಲ್ ವ್ಯವಹಾರ ಮಾಡಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಗ್ರಾಮದಿಂದ ಬಂದ ಕುಟುಂಬ ದಾಹೋಡ್ ನಲ್ಲಿ ವಾಸವಾಗಿತ್ತು. ಡೋರ್ ಬೆಲ್ ಮತ್ತು ಫೋನ್ ಮಾಡಿದಾಗ ಕುಟುಂಬಸ್ಥರು ಮನೆಯಿಂದ ಹೊರ ಬಾರದ ಹಿನ್ನೆಲೆ ನೆರೆಹೊರೆಯವರು ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರು ಬಾಗಿಲು ತೆರೆದು ನೋಡಿದಾಗ ಕೋಣೆಯೊಂದರಲ್ಲಿ ಮೂವರು ಹೆಣ್ಣು ಮಕ್ಕಳು ಮತ್ತು ಮಹಿಳೆ ಶವ, ಕಿಚನ್ ಬಳಿ ವ್ಯಕ್ತಿಯ ಶವ ಕಾಣಿಸಿದೆ. ಕಿಚನ್ ಸಿಂಕ್ ಬಳಿ ಕುಟುಂಬಸ್ಥರು ಸೇವನೆ ಮಾಡಿದ್ದಾರೆ ಎನ್ನಲಾದ ಕೆಮಿಕಲ್ ಬಾಟಲ್ ಪತ್ತೆಯಾಗಿದೆ. ಪೊಲೀಸರು ಕೆಮಿಕಲ್ ಬಾಟಲ್ ವಶಕ್ಕೆ ಪಡೆದು ಫಾರೆನಿಸಿಕ್ ಲ್ಯಾಬ್ ಗೆ ಕಳುಹಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ದುಧಿಯಾವಾಲಾ ಲಾಕ್‍ಡೌನ್ ಆದಾಗಿನಿಂದ ಆರ್ಥಿಕ ಸಂಕಷ್ಟದಲ್ಲಿದ್ದರು. ಹಲವರ ಬಳಿ ಸಾಲಕ್ಕಾಗಿ ಅಲೆದಾಡುತ್ತಿದ್ದರು. ದುಧಿಯಾವಾಲ ಸೋದರ ಸಹ ಎರಡು ವರ್ಷಗಳ ಹಿಂದೆ ಸಾಲ ಮರು ಪಾವತಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದರಿಂದ ಕುಟುಂಬಸ್ಥರು ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋದು ತಿಳಿದು ಬಂದಿದೆ. ವೈದ್ಯರು ಸಹ ವಿಷ ಸೇವನೆಯಿಂದ ಸಾವು ಆಗಿರೋದನ್ನ ಖಚಿತಪಡಿಸಿದ್ದಾರೆ. ಮರೋಣತ್ತರ ಪರೀಕ್ಷೆ ಬಳಿಕ ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಹಿತೇಶ್ ಜಾಯ್ಸರ ತಿಳಿಸಿದ್ದಾರೆ.

  • ಆನ್‍ಲೈನ್ ಕ್ಲಾಸಿಗೆ ನೆಟ್‍ವರ್ಕ್ ಪ್ರಾಬ್ಲಂ – ಹಳ್ಳಿ ತೊರೆಯುತ್ತಿರೋ ಮಲೆನಾಡಿಗರು

    ಆನ್‍ಲೈನ್ ಕ್ಲಾಸಿಗೆ ನೆಟ್‍ವರ್ಕ್ ಪ್ರಾಬ್ಲಂ – ಹಳ್ಳಿ ತೊರೆಯುತ್ತಿರೋ ಮಲೆನಾಡಿಗರು

    ಚಿಕ್ಕಮಗಳೂರು: ಕೊರೊನಾ ಕಾಲದ ಆನ್‍ಲೈನ್ ಶಿಕ್ಷಣಕ್ಕಾಗಿ ಮಲೆನಾಡಿಗರು ಅಜ್ಜ-ಮುತ್ತಜ್ಜನ ಕಾಲದಿಂದ ಬದುಕಿ-ಬಾಳಿದ ಮನೆ-ಮಠ ಬಿಟ್ಟು ಮಕ್ಕಳ ಭವಿಷ್ಯಕ್ಕಾಗಿ ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ.

    ಹೌದು. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದ ಆಸು-ಪಾಸಿನಲ್ಲಿ ಹತ್ತಾರು ಗ್ರಾಮಗಳಿವೆ. ಅವರೆಲ್ಲಾ ಬಿ.ಎಸ್.ಎನ್.ಎಲ್. ನೆಟ್‍ವರ್ಕ್ ಅವಲಂಭಿಸಿದ್ದರು. ಆದರೆ ಈಗ ಈ ನೆಟ್ ವರ್ಕ್ ಹೆಸರಿಗಷ್ಟೆ ಸೀಮಿತವಾಗಿದೆ. ಇತ್ತೀಚಿನ ದಿನಗಳಲ್ಲಿ ನೆಟ್‍ವರ್ಕ್ ಇರಲ್ಲ. ಬೇಸಿಕ್ ಮೊಬೈಲ್‍ಗೂ ನೆಟ್ ವರ್ಕ್ ಸಿಗುತ್ತಿಲ್ಲ. ಇದ್ದರೂ ಫ್ರಿಕ್ವೆನ್ಸಿ ಇರಲ್ಲ. ಮಳೆ-ಗಾಳಿ ಬಂದರೆ ಇರೋ ನೆಟ್ ವರ್ಕ್ ಕೂಡ ಹೋಗುತ್ತೆ. ಪುನಃ ಬಂದರೆ ಬಂತು, ಇಲ್ಲವಾದ್ರೆ ಇಲ್ಲ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಮಲೆನಾಡಿಗರು ಹಳ್ಳಿ ಬಿಟ್ಟು ನಗರ ಪ್ರದೇಶಗಳತ್ತ ಮುಖ ಮಾಡುತ್ತಿದ್ದಾರೆ.

    ಮುತ್ತೋಡಿ ಅರಣ್ಯ ವಲಯದ ಆಸುಪಾಸಿನ ಗಾಳಿಗುಡ್ಡೆ ಎಂಬ ಗ್ರಾಮದ ಕಲ್ಲೇಶ್ ಕುಟುಂಬ ಇದೀಗ ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ಕಲ್ಲೇಶ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬರು ಸಾಫ್ಟ್ ವೇರ್ ಉದ್ಯೋಗಿ. ಮತ್ತೊಬ್ಬರು ಮೈಸೂರಿನಲ್ಲಿ ಫೈನಲ್ ಇಯರ್ ಬಿಎಸ್‍ಸಿ ಓದುತ್ತಿದ್ದಾರೆ. ಇಬ್ಬರಿಗೂ ನೆಟ್‍ವರ್ಕ್ ಸಮಸ್ಯೆ ಎಂದು ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದಾರೆ. ಈಗಾಗಲೇ ಮಗಳಿಗೆ ಆನ್‍ಲೈನ್ ಕ್ಲಾಸ್ ಎಂದು ಹೇಳಿದ್ದಾರೆ. ತರಗತಿ ಇನ್ನೂ ಆರಂಭವಾಗಿಲ್ಲ. ಹಾಗಾಗಿ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ನಗರದಲ್ಲಿ ಮನೆ ಮಾಡಿದ್ದಾರೆ.

    ಅಜ್ಜ-ಮುತ್ತಜ್ಜನ ಕಾಲದಿಂದಲೂ ಬದುಕಿ-ಬಾಳಿದ ಮನೆ-ತೋಟ, ಹುಟ್ಟಿ ಬೆಳೆದ ಊರು ಎಲ್ಲವನ್ನೂ ಬಿಟ್ಟು ನೆಟ್ ವರ್ಕ್‍ಗಾಗಿ ನಗರ ಪ್ರದೇಶದತ್ತ ಮುಖ ಮಾಡಿದ್ದಾರೆ. ಸರ್ಕಾರ ಹಾಗೂ ಜನನಾಯಕರು ಇದು ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಆದರೆ ಇದೇನಾ ಡಿಜಿಟಲ್ ಎಂದು ಹಳ್ಳಿಗರು ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಪ್ರಶ್ನಿಸಿದ್ದಾರೆ. ನೆಟ್ ವರ್ಕ್‍ಗಾಗಿ ಊರನ್ನ ಬಿಟ್ಟು ಬಂದಿರೋ ಕುಟುಂಬ ನಗರ ಪ್ರದೇಶದಿಂದಲೇ ಹಳ್ಳಿಗಳಿಗೆ ಓಡಾಡ್ತಿದ್ದಾರೆ. ಹಳ್ಳಿಗೆ ಹೋಗಿ ಸಂಜೆವರೆಗೂ ಹೊಲಗದ್ದೆ-ತೋಟಗಳಲ್ಲಿ ಕೆಲಸ ಮಾಡಿಸಿ ಸಂಜೆ ವೇಳೆಗೆ ಮತ್ತೆ ಸಿಟಿಯತ್ತ ಮುಖ ಮಾಡ್ತಿದ್ದಾರೆ.

    ಕೆಲವರು ಮಕ್ಕಳನ್ನ ನಗರದಲ್ಲಿ ಬಿಟ್ಟು ಆಗಾಗ್ಗೆ ಬಂದು ಹೋಗ್ತಿದ್ದಾರೆ. ಆರ್ಥಿಕವಾಗಿ ಅನುಕೂಲಸ್ಥರು ಹೀಗೆ ನಗರ ಪ್ರದೇಶಗಳಿಗೆ ಬಂದು ಮನೆ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಕೆಲ ಕುಟುಂಬಗಳಿಗೆ ಮಕ್ಕಳಿಗೆ ಮೊಬೈಲ್ ಕೊಡಿಸೋದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ. ಅಂತದ್ದರಲ್ಲಿ ಅವರು ಮಕ್ಕಳ ಭವಿಷ್ಯಕ್ಕೆ ಏನು ಮಾಡುತ್ತಾರೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಹೇಗೋ ಸಾಲ-ಸೋಲ ಮಾಡಿ ಮೊಬೈಲ್ ಕೊಡಿಸಬಹುದು. ಆದರೆ ನೆಟ್‍ವರ್ಕ್ ಹಳ್ಳಿ ಬಿಟ್ಟು ಬಂದು ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡು ಮಕ್ಕಳಿಗೆ ಓದಿಸೋದು ಕಷ್ಟಸಾಧ್ಯ. ಹೀಗಿರುವಾಗ ಮಧ್ಯಮ ವರ್ಗ ಹಾಗೂ ಬಡಕುಟುಂಬ ಮಕ್ಕಳ ಭವಿಷ್ಯದ ಬಗ್ಗೆ ಯಾವ ಏನು ಮಾಡ್ತಾರೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

    ಇಷ್ಟೆ ಅಲ್ಲ ಚಿಕ್ಕಮಗಳೂರು ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಇರುವ ಊರು. ಜಿಲ್ಲೆಯಲ್ಲಿ ಇಂತಹ ನೂರಾರು ಕುಗ್ರಾಮಗಳಿವೆ. ನೀರು, ಕರೆಂಟ್, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮಗಳು ಮಲೆನಾಡಲ್ಲಿ ಇಂದಿಗೂ ಜೀವಂತ. ಅಲ್ಲಿನ ಮಕ್ಕಳು ಹೇಗೆ ಆನ್‍ಲೈನ್ ಕ್ಲಾಸಿಗೆ ಮುಂದಾಗುತ್ತಾರೋ ದೇವರೇ ಬಲ್ಲ. ನಮ್ಮದು ಡಿಜಿಟಲ್ ಭಾರತ ಅನ್ನೋ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಹಳ್ಳಿಗರು ಇದೇನಾ ಡಿಜಿಟಲ್ ಭಾರತ ಎಂದು ಪ್ರಶ್ನಿಸಿಸಿದ್ದಾರೆ. ಸರ್ಕಾರ ಆನ್‍ಲೈನ್ ಕ್ಲಾಸ್ ಜಾರಿಗೆ ತರೋ ಮುನ್ನ ಮಕ್ಕಳಿಗೆ ಬೇಕಾದ ಸೂಕ್ತ ಸೌಲಭ್ಯವನ್ನ ಕಲ್ಪಿಸಲಿ ಅನ್ನೋದು ಮಲೆನಾಡಿಗರ ಆಗ್ರಹವಾಗಿದೆ.

  • ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಕೊಲೆ

    ಬೆಂಕಿ ಹಚ್ಚಿ ಒಂದೇ ಕುಟುಂಬದ ಮೂವರ ಕೊಲೆ

    -ಕೊಲೆಗೈದು, ಶವಗಳಿಗೆ ಬೆಂಕಿ ಹಚ್ಚಿರೋ ಶಂಕೆ

    ಲಕ್ನೋ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ನಾಗ್ಲಾ ಕಿಶನ್‍ಲಾಲ್ ಇಲಾಖೆಯಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಮಗ ಮೂವರ ಶವಗಳು ಮನೆಯಲ್ಲಿ ದೊರೆತಿವೆ.

    ರಘುವೀರ್ (55), ಮೀರಾ ಮತ್ತು ಬಬ್ಲೂ (22) ಮೃತ ಕುಟುಂಬಸ್ಥರು. ರಘುವೀರ್ ದಿನಸಿ ಅಂಗಡಿ ನಡೆಸುತ್ತಿದ್ದರು. ಭಾನುವಾರ ಸಂಜೆ ರಘುವೀರ್ ಸಂಬಂಧಿಕರ ಊರಿನಿಂದ ಹಿಂದಿರುಗಿದ್ದರು. ಇಂದು ಬೆಳಗ್ಗೆ ಮನೆ ಬಾಗಿಲು ಹಾಕಿದ್ದರಿಂದ ನೆರೆಹೊರೆಯವರು ಕಿಟಕಿಯಲ್ಲಿ ಇಣುಕಿ ನೋಡಿದಾಗ ಮೂವರ ಶವಗಳ ಕಂಡಿವೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೊಂದು ಕೊಲೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

    ಬೆಳಗ್ಗೆ ಹಾಲಿನ ವ್ಯಕ್ತಿ ಬಂದ್ರೂ ಯಾರು ಬಾಗಿಲು ತೆರೆದಿಲ್ಲ. ಬಬ್ಲೂ ಪ್ರತಿನಿತ್ಯ ಬೆಳಗ್ಗೆ 5 ಗಂಟೆಯ ಆಸುಪಾಸಿನಲ್ಲಿ ಅಂಗಡಿ ತೆರೆಯುತ್ತಿದ್ದ. ಆದ್ರೆ ಇಂದು ಅಂಗಡಿ ತೆರೆದಿರಲಿಲ್ಲ. ಕಿಟಕಿಯಲ್ಲಿ ನೋಡಿದಾಗ ರಘುವೀರ್ ಕುತ್ತಿಗೆಯಲ್ಲಿ ಹಗ್ಗವಿತ್ತು. ಇತ್ತ ಮೀರಾ ಮತ್ತು ಬಬ್ಲೂ ಕೈಗಳನ್ನು ಕಟ್ಟಲಾಗಿತ್ತು. ಒಂದು ವೇಳೆ ಬೆಂಕಿ ಹಚ್ಚಿಕೊಂಡಿದ್ದರೆ ಅವರ ಚೀರಾಟ ನಮಗೆ ಕೇಳಿಸಬೇಕಿತ್ತು. ಆದ್ರೆ ನಮಗೆ ಯಾವ ಧ್ವನಿಯೂ ಕೇಳಿಸಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

  • ಮಟಮಟ ಮಧ್ಯಾಹ್ನ ಬರ್ತಾರೆ – ಫೇಕ್ ದಾಖಲೆ ಹಿಡಿದು ಮನೆ ಧ್ವಂಸ ಮಾಡ್ತಾರೆ

    ಮಟಮಟ ಮಧ್ಯಾಹ್ನ ಬರ್ತಾರೆ – ಫೇಕ್ ದಾಖಲೆ ಹಿಡಿದು ಮನೆ ಧ್ವಂಸ ಮಾಡ್ತಾರೆ

    ಬೆಂಗಳೂರು: ಕೊರೊನಾ ಸಮಯದಲ್ಲಿಯೇ ಡೆಡ್ಲಿ ಗ್ಯಾಂಗ್ ಒಂದು ಸಿಲಿಕಾನ್ ಸಿಟಿಗೆ ಎಂಟ್ರಿಯಾಗಿದೆ. ಸುಳ್ಳು ದಾಖಲೆ ಸೃಷ್ಟಿಸಿ ಮನೆ ಧ್ವಂಸ ಮಾಡಿದ ಘಟನೆ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿ ಮುನೇಶ್ವರ ಟೆಂಪಲ್ ಬಳಿ ನಡೆದಿದೆ.

    ಹೌದು. ಖದೀಮರ ತಂಡವೊಂದು ಮಟಮಟ ಮಧ್ಯಾಹ್ನವೇ ಬಂದು ಜೆಸಿಬಿ ಮೂಲಕ ಮನೆ ಕೆಡವಿ ಮನೆಯಲ್ಲಿದ್ದ ಹಣ, ಒಡವೆ, ವಸ್ತುಗಳನ್ನ ಕದ್ದೊಯ್ದಿದೆ. ಈ ವೇಳೆ ಪ್ರಶ್ನೆ ಮಾಡಿದ ಮನೆಯಲ್ಲಿದ್ದ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಸಿದ್ದಲ್ಲದೆ, ಹಲ್ಲೆ ಮಾಡಿದ ಆರೋಪ ಕೂಡ ಕೇಳಿ ಬಂದಿದೆ.

    ಸದ್ಯ ಮನೆ ಕಳೆದುಕೊಂಡು ಕುಟುಂಬ ಬೀದಿಗೆ ಬಿದ್ದಿದ್ದು, ರಾತ್ರಿ ಇಡೀ ಮಹಿಳೆಯರು ಬೀದಿಯಲ್ಲೇ ಮಲಗಿದ್ದಾರೆ. ಈ ಸಂಬಂಧ ಎಫ್‍ಐಆರ್ ಕೊಟ್ಟರೂ ವೈಯಾಲಿಕಾವಲ್ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಕುಟುಂಬ ಪೊಲೀಸರ ವಿರುದ್ಧವೂ ಆಕ್ರೋಶ ಹೊರಹಾಕಿದೆ.

    ಗಂಗಮ್ಮ (53) ಮತ್ತು ಅವರ ಮಕ್ಕಳು ಪ್ಯಾಲೆಸ್ ಗುಟ್ಟಹಳ್ಳಿಯ 4ನೇ ಕ್ರಾಸ್ ಮುನೇಶ್ವರ ಬ್ಲ್ಯಾಕ್ ನಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದರು. 2008 ರಲ್ಲಿ ಕೃಷ್ಣಸ್ವಾಮಿ ಪಿಳ್ಳೆ ಎಂಬವರು ಈ ಮನೆಯನ್ನ ಗಂಗಮ್ಮ ಅವರಿಗೆ ಜಿಪಿಎ ಮಾಡಿಕೊಟ್ಟಿದ್ರು. ಈ ಸ್ವತ್ತಿನ ಮೇಲೆ ಸಿಟಿ ಸಿವಿಲ್ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆಯೇ ಭಾನುವಾರ ಮಧ್ಯಾಹ್ನ ವೇಣು, ರಮೇಶ್, ಮಹೇಶ್ ಎಂಬವರು ಮನೆಗೆ ನುಗ್ಗಿ, ಮನೆಯಲ್ಲಿರುವ ವಸ್ತುಗಳನ್ನ ಕದ್ದು ಜೆಸಿಬಿಯಿಂದ ಮನೆಯನ್ನ ನೆಲಸಮ ಮಾಡಿದ್ದಾರೆ.

    ಇತ್ತ ಘಟನಾ ಸ್ಥಳಕ್ಕೆ ಪಬ್ಲಿಕ್ ಟಿವಿ ಬರುತ್ತಿದ್ದಂತೆ ಪೊಲೀಸರು ಎದ್ನೋ ಬಿದ್ನೋ ಅಂತ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆರೋಪಿಗಳನ್ನ ಯಾಕೆ ಇನ್ನೂ ಬಂಧಿಸಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಗೆ ಇನ್ಸ್‍ಪೆಕ್ಟರ್ ಕ್ಲಾಸ್ ಮಾಡದ ಪ್ರಸಂಗವೂ ನಡೆಯಿತು.

    ಮಹಿಳೆಯ ಮೇಲೆ ಹಲ್ಲೆ ಮಾಡಿ ಮನೆಯಲ್ಲಿ ಅಡಗಿ ಕೂತಿದ್ದ ಮೊದಲ ಆರೋಪಿ ವೇಣುವನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎರಡನೇ ಆರೋಪಿ ಮಹೇಶ್, ಮೂರನೇ ಆರೋಪಿ ಮಹೇಶ್ ಪರಾರಿಯಾಗಿದ್ದಾರೆ. ಎರಡನೇ ಆರೋಪಿ ಮಹೇಶ್ ನಕಲಿ ದಾಖಲೆಗಳನ್ನ ಮಾಡಿಕೊಡುವ ವಿಚಾರದಲ್ಲಿ ಸಿಸಿಬಿಯಿಂದ ಅರೆಸ್ಟ್ ಆಗಿದ್ದ ಎಂಬ ಆರೋಪವಿದೆ.

    ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

    ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ

    – ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಗೆ ಮಿಡಿದ ಬಾಲಿವುಡ್ ನಟ

    ಯಾದಗಿರಿ: ತ್ರಿವಳಿ ಮಕ್ಕಳ ಜನನದಿಂದಾಗಿ ಚಿಂತೆಗೀಡಾಗಿದ್ದ ಕುಟುಂಬಕ್ಕೆ ಬಾಲಿವುಡ್ ನಟ ಸೋನು ಸೂದ್ ನೆರವಿನ ಹಸ್ತ ಚಾಚಿದ್ದಾರೆ.

    ಯಾದಗಿರಿ ತಾಲೂಕಿನ ರಾಮ ಸಮುದ್ರ ಗ್ರಾಮದ ಪದ್ಮಾ ಆಗಸ್ಟ್ 22 ರಂದು ಮೂವರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಪತಿ ನಾಗರಾಜ್ ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸ ಬಿಟ್ಟು ವಾಪಸ್ ಊರಿಗೆ ಬಂದಿದ್ದರು. ಊರಲ್ಲಿ ಕೆಲಸ ಸಿಗದೆ ನಾಗರಾಜ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನೂ ಓದಿ: ಪಬ್ಲಿಕ್ ಟಿವಿ ಡಿಜಿಟಲ್ ಇಂಪ್ಯಾಕ್ಟ್- ತ್ರಿವಳಿ ಮಕ್ಕಳಿಗೆ ಹರಿದು ಬಂತು ನೆರವಿನ ಮಹಾಪೂರ

    ಇಂತಹ ಸಂಕಷ್ಟದ ನಡುವೆ ನಾಗರಾಜ್ ಪತ್ನಿ ಪದ್ಮಾ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ತಾಯಿ ಮಕ್ಕಳು ಆರೋಗ್ಯವಾಗಿರೋದು ನಾಗರಾಜ್‍ಗೆ ಖುಷಿ ತಂದಿದೆ. ಈಗಾಗಲೇ ಪತ್ನಿ ಹೆರಿಗೆ ಖರ್ಚಿಗೆಂದು 30 ಸಾವಿರ ರೂ. ಕೂಡ ಸಾಲ ಪಡೆದಿದ್ದರು. ಹೀಗಾಗಿ ನಾಗರಾಜ್ ಕುಟುಂಬ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ.

    ನಾಗರಾಜ್ ಮೊದಲಿನ ಹೆಣ್ಣು ಮಗು ಸೇರಿದಂತೆ ನಾಲ್ವರು ಮಕ್ಕಳ ಭವಿಷ್ಯದ ಬಗ್ಗೆ ತೀವ್ರ ಚಿಂತೆಯಲ್ಲಿ ಸಹಾಯ ಹಸ್ತ ಕೇಳಿದ್ದರು. ಆಗ ಕೆಲ ಸ್ಥಳೀಯರು ಕೂಡ ಆರ್ಥಿಕ ಸಹಾಯ ಮಾಡಿದರು. ಈ ಸುದ್ದಿ ಪಬ್ಲಿಕ್ ಟಿವಿ ವೆಬ್ ಸೈಟ್‍ನಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಜಿಲ್ಲೆಯ ಹತ್ತಿಕುಣಿ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ ಎಂಬವರು ವೆಬ್ ಸೈಟ್ ಕಟಿಂಗ್‍ಗಳನ್ನು, ಸೋನು ತಂಡಕ್ಕೆ ಮೆಸೇಜ್ ಮಾಡಿ ನಾಗರಾಜ್ ಪರಿಸ್ಥಿತಿ ಬಗ್ಗೆ ವಿವರಿಸಿದರು.

    ಕೂಡಲೇ ನಾಗರಾಜ್ ಜೊತೆ ಮಾತಾಡಿದ ಸೋನು ಸೂದ್ ತಂಡದ ಸದಸ್ಯ ಗೋವಿಂದ್ ಅಗರ್ವಾಲ್, ಎಲ್ಲಾ ಮಾಹಿತಿ ಪಡೆದು ನೆರವಿನ ಭರವಸೆ ನೀಡಿದ್ದಾರೆ. ಸದ್ಯ ಮೂರು ತಿಂಗಳ ದಿನಸಿ ಪದಾರ್ಥ ನೀಡಲು ಮುಂದಾಗಿರೋ ಸೋನು ತಂಡ, ಭವಿಷ್ಯದಲ್ಲಿ ಮಕ್ಕಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ತಿಳಿಸಿದೆ. ನೆರವು ನೀಡಲು ಮುಂದಾಗಿರುವ ತಂಡಕ್ಕೆ ನಾಗರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ.

    ಮಲ್ಲಿಕಾರ್ಜುನ ರೆಡ್ಡಿ ಈ ಬಗ್ಗೆ ನಟ ಸೋನು ಸೂದ್ ಜೊತೆ ಮಾತನಾಡಿ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ನಂತರ ಸೋನು ಸೂದ್ ಕೂಡ ಮಲ್ಲಿಕಾರ್ಜುನ ರೆಡ್ಡಿ ಅವರ ಜೊತೆ ಮಾತನಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ತ್ರಿವಳಿ ಮಕ್ಕಳ ಪೋಷಕರ ನೋವಿಗೆ ನಟ ಸೋನು ಸೂದ್ ಕಾಳಜಿ ತೋರಿ ನೆರವಿನ ಭರವಸೆ ನೀಡಿದ್ದು, ಬಡ ಕುಟುಂಬಕ್ಕೆ ಖುಷಿಕೊಟ್ಟಿದೆ.

  • ಕೊರೊನಾ ವರದಿ ನೆಗೆಟಿವ್ – ಐಸೊಲೋಷನ್ ವಾರ್ಡಿನಲ್ಲಿ ಇಡೀ ಕುಟುಂಬ ಡ್ಯಾನ್ಸ್

    ಕೊರೊನಾ ವರದಿ ನೆಗೆಟಿವ್ – ಐಸೊಲೋಷನ್ ವಾರ್ಡಿನಲ್ಲಿ ಇಡೀ ಕುಟುಂಬ ಡ್ಯಾನ್ಸ್

    – ಸುಶಾಂತ್ ನಟನೆಯ ಹಾಡಿಗೆ ನೃತ್ಯ

    ಭೋಪಾಲ್: ಕೊರೊನಾ ವರದಿ ನೆಗೆಟಿವ್ ಬಂದಿದಕ್ಕೆ ಇಡೀ ಕುಟುಂಬದ ಸದಸ್ಯರು ಐಸೊಲೇಷನ್ ವಾರ್ಡಿನಲ್ಲಿ ಮಸ್ತ್ ಡ್ಯಾನ್ಸ್ ಮಾಡಿರುವ ಘಟನೆ ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದಿದೆ.

    ಕೊರೊನಾ ಐಸೊಲೇಷನ್ ವಾರ್ಡಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಜನರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವಿಶೇಷವೆಂದರೆ ಅವರು ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಚಿಂಚೋರೆ ಸಿನಿಮಾದ ಹಾಡಿಗೆ ನೃತ್ಯ ಮಾಡಿದ್ದಾರೆ.

    https://twitter.com/Anurag_Dwary/status/1295622996694986752

    ಈ ವಿಚಾರದ ಬಗ್ಗೆ ಮಾತನಾಡಿರುವ ಕಟ್ನಿ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಯಶವಂತ್ ವರ್ಮಾ, ಆಗಸ್ಟ್ 8ರಂದು ಈ ಕುಟುಂಬದ 19 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರು ನಮ್ಮ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 15ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದ ಕಾರಣ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕುಟುಂಬದವರು ಯಾವಾಗ ಈ ರೀತಿ ನೃತ್ಯ ಮಾಡಿದರು ಎಂಬುದು ನಮಗೆ ಗೊತ್ತಿಲ್ಲ ಎಂದಿದ್ದಾರೆ.

    ಮಧ್ಯಪ್ರದೇಶದಲ್ಲಿ ಈವರೆಗೆ 46 ಸಾವಿರಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಇವರ ಪೈಕಿ 35 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸೇರಿದಂತೆ ಅವರ ಮಂತ್ರಿ ಮಂಡಲದ ನಾಲ್ವರು ಮಂತ್ರಿಗಳು ಕೊರೊನಾ ಪಾಸಿಟಿವ್ ಬಂದಿದ್ದು, ಇದರಲ್ಲಿ ಮುಖ್ಯಮಂತ್ರಿ ಮತ್ತು ಮೂವರು ಮಂತ್ರಿಗಳು ಕೊರೊನಾದಿಂದ ಗುಣಮುಖರಾಗಿದ್ದಾರೆ.

  • ವಿಷ ಕುಡಿದ ಒಂದೇ ಕುಟುಂಬದ 8 ಮಂದಿ- ಓರ್ವ ಮಹಿಳೆ ಸಾವು

    ವಿಷ ಕುಡಿದ ಒಂದೇ ಕುಟುಂಬದ 8 ಮಂದಿ- ಓರ್ವ ಮಹಿಳೆ ಸಾವು

    ಮಂಡ್ಯ: ಆಸ್ತಿ ಹಂಚಿಕೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಇಂದು ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಒಂದು ಕುಟುಂಬದ ಇಬ್ಬರು ಮಹಿಳೆಯರು ವಿಷ ಸೇವಿದಿದ್ದಾರೆ. ಇದ್ರಿಂದ ಹೆದರಿದ ಮತ್ತೊಂದು ಕುಟುಂಬ ಸೀಮೆ ಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಕೇವಲ ಮೂರು ಗುಂಟೆ ಭೂಮಿ ವಿಚಾರಕ್ಕೆ ವಿಷ ಸೇವಿಸಿ ಓರ್ವ ಮಹಿಳೆ ಪ್ರಾಣ ಕೆಳೆದುಕೊಂಡು, ನಾಲ್ವರು ಆಸ್ಪತ್ರೆ ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರೊ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಜರುಗಿದೆ.

    ದೇಶ, ವಿದೇಶಗಳಿಂದ ಸಂತಾನೋತ್ಪತ್ತಿಗಾಗಿ ಬರುವ ವಿವಿಧ ಪ್ರಬೇಧಗಳ ಪಕ್ಷಿಗಳ ಕಲರವ ಕೇಳುತ್ತಿದ್ದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಕೇವಲ ಮೂರು ಗುಂಟೆ ಜಮೀನು ವಿಚಾರದಲ್ಲಿ ಆರಂಭವಾದ ಗಲಾಟೆ ಒಂದು ಪ್ರಾಣ ಕಸಿದುಕೊಂಡಿದೆ. ಅಂದಹಾಗೆ ಹತ್ತಿರದ ಸಂಬಂಧಿಗಳಾದ ಸಿದ್ದೇಶ್ ಹಾಗೂ ನಾರಾಯಣ್ ಕುಟುಂಬದ ನಡುವೆ ಜಮೀನು ವಿವಾದ ವಿತ್ತು. ನಾರಾಯಣ್ ಎಂಬುವರ ತಾಯಿ, ಸಿದ್ದೇಶ್ ತಂದೆಯಿಂದ 26 ಗುಂಟೆ ಜಮೀನನ್ನು 1986ನೇ ಇಸಿವಿಯಲ್ಲಿ ಖರೀದಿಸಿದ್ರಂತೆ. ಅದ್ರಲ್ಲಿ 10 ಗುಂಟೆ ಜಮೀನಿನ ದಾಖಲೆ ಸಿದ್ದೇಶ್ ಅಜ್ಜಿ ಹೆಸರಿನಲ್ಲೇ ಇದೆ. ಇದ್ರಿಂದ 10 ಗುಂಟೆ ಜಮೀನು ತಮ್ಮದೆಂದು ಕೆಲವು ತಿಂಗಗಳಿಂದ ಸಿದ್ದೇಶ್ ಕ್ಯಾತೆ ತೆಗೆದಿದ್ರಂತೆ. ಆ ವಿಚಾರಕ್ಕೆ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಲೇ ಇತ್ತು.

    ಇಂದು ಬೆಳಿಗ್ಗೆ ಆ ಜಾಗದಲ್ಲಿ ಸಿದ್ದೇಶ್ ಕುಟುಂಬ ಶೆಟ್ ಹಾಕಿಕೊಳ್ಳಲು ಮುಂದಾಗಿತ್ತು. ಈ ವೇಳೆ ವೆಂಕಟೇಶ್ ಕುಟುಂಬದವರು ತಡೆದಿದ್ದಾರೆ. ಜಗಳ ನಿಲ್ಲೋ ಲಕ್ಷಣಗಳು ಕಾಣದಿದ್ದಾಗ ಬೇಸರಗೊಂಡು ವೆಂಕಟೇಶ್ ಪತ್ನಿ ಶೈಲಾ ಹಾಗೂ ಅಕ್ಕ ವಿಷ ಸೇವಿಸಿದ್ದಾರೆ. ಇದ್ರಿಂದ ಹೆದರಿದ ಸಿದ್ದೇಶ್ ಸೇರಿ ಆತನ ಕುಟುಂಬದ ಮೂವರು ಸಿಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇನ್ನು ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದ್ರೆ ವಿಷ ಸೇವಿಸಿ ತೀವ್ರ ಅಶ್ವಸ್ಥಗೊಂಡಿದ್ದ ವೆಂಕಟೇಶ್ ಪತ್ನಿ ಶೈಲಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.