Tag: False News

  • ಸಂಬಂಧಿಕರಿಗೆ ಕೊರೊನಾ – ಗಾಳಿಸುದ್ದಿ ನಂಬಿ ಮಹಿಳೆ ಆತ್ಮಹತ್ಯೆ

    ಸಂಬಂಧಿಕರಿಗೆ ಕೊರೊನಾ – ಗಾಳಿಸುದ್ದಿ ನಂಬಿ ಮಹಿಳೆ ಆತ್ಮಹತ್ಯೆ

    ಚಿಕ್ಕೋಡಿ: ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿ ಕೇಳಿ ಆಘಾತಕ್ಕೊಳಗಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊರೊನಾ ಭೀತಿಗೆ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಷಾರಿಲ್ಲದ್ದಕ್ಕೆ ಯೋಗಕ್ಷೇಮ ವಿಚಾರಿಸಿ ಬಂದಿದ್ದ ಸಂಬಂಧಿಕರಿಗೆ ಕರೊನಾ ತಗುಲಿದೆ ಎಂಬ ಗಾಳಿ ಸುದ್ದಿಯನ್ನು ಕೇಳಿ ಶೋನಾಬಾಯಿ ಪುಂಡಲೀಕ ಪಾಟೋಳ(57) ಆತ್ಮಹತ್ಯೆಗೆ ಶರಣಾಗಿದ್ದಾರೆ.

    ತಾನು ಭೇಟಿಯಾಗಿ ಬಂದವರಿಗೆ ಪಾಸಿಟಿವ್ ಇದೆಯೋ ಇಲ್ಲವೋ ಎಂಬುದು ಖಚಿತವಾಗದ್ದಕ್ಕೆ ಆತಂಕಕ್ಕಿಡಾಗಿ, ತನಗೂ ಕೊರೊನಾ ತಗುಲಿದರೆ ಮುಂದೆ ಸಂಸಾರದ ಗತಿ ಏನು ಎಂಬ ಚಿಂತೆಯಿಂದ ಮಹಿಳೆ ಅತ್ಮಹತ್ಯೆಗೆ ಶರಣಾಗಿದ್ದಾರೆ. ತನಗೆ ಕೋವಿಡ್-19 ಸೋಂಕು ತಗುಲಿದರೆ ಸೊಸೆಯಂದಿರು, ಮೊಮ್ಮಕ್ಕಳಿಗೂ ಸೋಂಕು ಹರಡುತ್ತದೆ ಎಂದು ಮನೆಯವರ ಪರಿಸ್ಥಿತಿ ನೆನೆದು, ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೈಲ್ವಾನ್ ವಿರುದ್ಧ ಅಪಪ್ರಚಾರ – ನಾನು ಖುಷಿಯಾಗಿದ್ದೇನೆ ಎಂದ ಕಿಚ್ಚ

    ಪೈಲ್ವಾನ್ ವಿರುದ್ಧ ಅಪಪ್ರಚಾರ – ನಾನು ಖುಷಿಯಾಗಿದ್ದೇನೆ ಎಂದ ಕಿಚ್ಚ

    ಬೆಂಗಳೂರು: ಪೈಲ್ವಾನ್ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿತ್ರ ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಪ್ಯಾನ್ ಇಂಡಿಯಾ ಒಳ್ಳೆಯ ಒಪನಿಂಗ್ ಪಡೆದುಕೊಂಡಿದೆ.

    ಕೆಲವರು ಕಿಚ್ಚನ ವಿರುದ್ಧ ಮಸಲತ್ತು ಶುರುಮಾಡಿಕೊಂಡಿದ್ದಾರೆ. ಖಾಲಿ ಇರುವ ಥೀಯೇಟರ್ ಗಳ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಸಿನಿಮಾ ನೋಡೊದಕ್ಕೆ ಜನರಿಲ್ಲ ಎನ್ನುತ್ತಾ ಕಾಲೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಈ ಒಂದು ವಿಚಾರ ಸುದೀಪ್ ಕಿವಿಗೂ ಬಿದ್ದಿದ್ದು ವೈರಲ್ ಆಗಿರುವ ವಿಡಿಯೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮೈಸೂರಿನ ಗಾಯಿತ್ರಿ ಚಿತ್ರಮಂದಿರದಲ್ಲಿ ಹೌಸ್ ಪ್ರದರ್ಶನ ಕಾಣುತ್ತಿದೆ. ಯಾರು ಕೆಟ್ಟ ಸುದ್ದಿಗಳನ್ನು ಹರಡಿಸುತಾರೋ ಅವರಿಂದ ನಾನು ಖುಷಿಯಾಗಿ ಇದ್ದೇನೆ. ನಾನು ಒಳ್ಳೆಯ ಕೆಲಸಗಳನ್ನು ಮಾಡಿದಾಗಲೇ ಕೆಟ್ಟದನ್ನು ಹಬ್ಬಿಸೋದಕ್ಕೆ ಸಾಧ್ಯ ಎನ್ನುವ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಕಿಡಿಗೇಡಿಗಳಿಂದ ದೂರವಿರುವಂತೆ ಕಿವಿಮಾತನ್ನು ಹೇಳಿದ್ದಾರೆ.

    ಈ ಹಿಂದೆ ಪೈಲ್ವಾನ್ ಚಿತ್ರದ ಹಿಂದಿ ವರ್ಷನ್‍ಗೆ ಸೆನ್ಸಾರ್ ಸಿಕ್ಕಿಲ್ಲ ಹಿಂದಿ ವರ್ಷನ್ ಒಂದು ದಿನ ತಡವಾಗಿ ಬಿಡುಗಡೆಯಾಗವ ಸಾಧ್ಯತೆ ಇದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಆದರೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಕೃಷ್ಣ ಸೆನ್ಸಾರ್ ಸಿಕ್ಕಿದೆ ಸೆನ್ಸಾರ್ ಮಂಡಳಿ ಸೆನ್ಸಾರ್ ಕಾಪಿ ಸಹ ನೀಡಿದ್ದಾರೆ. ಸೆನ್ಸಾರ್ ಆಗಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸದಂತೆ ಮನವಿ ಮಾಡಿಕೊಂಡಿದ್ದಾರೆ.

    ಈ ಚಿತ್ರವನ್ನು ಎಸ್ ಕೃಷ್ಣ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಬಾಲಿವುಡ್‍ನ ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಮತ್ತು ಸುಶಾಂತ್ ಸಿಂಗ್ ನಟನೆ ಮಾಡಿರುವ ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

  • ಫೇಕ್ ನ್ಯೂಸ್ ಹರಡಬೇಡಿ – ಸುಳ್ಳು ಸುದ್ದಿ ಪತ್ತೆ ಹಚ್ಚುವ ಸುಲಭ ವಿಧಾನ ತಿಳಿದುಕೊಳ್ಳಿ

    ಫೇಕ್ ನ್ಯೂಸ್ ಹರಡಬೇಡಿ – ಸುಳ್ಳು ಸುದ್ದಿ ಪತ್ತೆ ಹಚ್ಚುವ ಸುಲಭ ವಿಧಾನ ತಿಳಿದುಕೊಳ್ಳಿ

    ಬೆಂಗಳೂರು: ಸಾಮಾಜಿಕ ಜಾಲತಾಣ, ಮೆಸೆಂಜಿಂಗ್ ಅಪ್ಲಿಕೇಶನ್‍ಗಳಿಂದಾಗಿ ಇಂದು ಬಹಳ ವೇಗವಾಗಿ ಸುದ್ದಿ ಸಿಗುತ್ತಿದೆ. ಎಷ್ಟು ವೇಗ ಅಂದರೆ ಆ ಸುದ್ದಿ ವಾಹಿನಿ/ ಪತ್ರಿಕೆಗಳಲ್ಲಿ ಬರುವ ಮೊದಲೇ ಜನರಿಗೆ ತಿಳಿದಿರುತ್ತದೆ.

    ಜನರಿಗೆ ವೇಗವಾಗಿ ಸುದ್ದಿಗಳು ತಲುಪುತ್ತಿರುವುದರಿಂದ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಾರೆ. ಈ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಸುದ್ದಿಯ ರೂಪದಲ್ಲಿ ಇರುವ ಕಾರಣ ಇದು ನಿಜವಾದ ಸುದ್ದಿ ಎಂದು ಹಲವು ಜನರು ನಂಬಿ ಶೇರ್ ಮಾಡುತ್ತಾರೆ.

    ನಾವು ಶೇರ್ ಮಾಡಿರುವ ಸುದ್ದಿ ಸುಳ್ಳು ಎಂದು ಬಳಕೆದಾರರಿಗೆ ಗೊತ್ತಾಗುವಷ್ಟರಲ್ಲಿ ಹಲವು ಮಂದಿಗೆ ಆ ಸುದ್ದಿ ತಲುಪಿ ಆಗಿರುತ್ತದೆ. ಬರೆಯುವ ಮುನ್ನ ಯೋಚಿಸಿ ಎನ್ನುವಂತೆ ಈಗ ಶೇರ್ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಾಗುತ್ತದೆ. ಸುಳ್ಳು ಸುದ್ದಿಯನ್ನು ಶೇರ್ ಮಾಡಿದರೆ ವ್ಯಕ್ತಿಗಳು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ನಂಬಿಕೆಯನ್ನು ಉಳಿಸಬೇಕಾದರೆ ನೀವು ಹಲವು ಬಾರಿ ಆ ಪೋಸ್ಟ್ ಅನ್ನು ಚೆಕ್ ಮಾಡಬೇಕಾಗುತ್ತದೆ. ಆ ಪೋಸ್ಟ್ ನಲ್ಲಿರುವ ವಿಚಾರ ಸತ್ಯವೇ? ಸುಳ್ಳೋ ಎನ್ನುವುದಕ್ಕೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗಿದ್ದು, ಈ ಮೂಲಕ ನೀವು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಬಹುದು.

    1. ಹೆಡ್‍ಲೈನ್ ಗಮನಿಸಿ:
    ಸಾಮಾನ್ಯವಾಗಿ ಆಶ್ಚರ್ಯ ಸೂಚಕ ಚಿಹ್ನೆ ಮತ್ತು ಕ್ಯಾಚಿ ಹೆಡ್‍ಲೈನ್‍ಗಳು ಸುಳ್ಳು ಸುದ್ದಿಯಲ್ಲಿರುತ್ತದೆ. ಹೆಡ್‍ಲೈನ್‍ನಲ್ಲಿ ಶಾಕಿಂಗ್ ವಿಚಾರಗಳಿದ್ದರೆ ಆ ಸುದ್ದಿ ವಿಶ್ವಾಸಾರ್ಹತೆಯನ್ನು ನಂಬಲು ಬರುವುದಿಲ್ಲ.

    2. ಮೂಲಗಳನ್ನು ಪರಿಶೀಲಿಸಿ:
    ಮೂಲ ಸುದ್ದಿಯನ್ನು ಸ್ವಲ್ಪ ಬದಲಾಯಿಸಿ ಸುಳ್ಳು ಸುದ್ದಿ ಪ್ರಕಟವಾಗಿರುತ್ತದೆ. ಸಂದೇಹ ಬಂದಾಗ ಮೂಲ ಸುದ್ದಿ ಪ್ರಕಟವಾದ ತಾಣಕ್ಕೆ ಹೋಗಿ ಪರಿಶೀಲಿಸಿಕೊಳ್ಳಿ.

    3. ತನಿಖೆ ಮಾಡಿ:
    ಸುದ್ದಿ ಬಂದ ಕೂಡಲೇ ನಂಬಲು ಹೋಗಬೇಡಿ. ಸುದ್ದಿ ಪ್ರಕಟವಾದ ಮಾಧ್ಯಮವನ್ನು ಯಾವುದು ಎನ್ನುವುದನ್ನು ಗಮನಿಸಿ. ನಿಮಗೆ ತಿಳಿಯದೇ ಇರುವ ಯಾವುದೋ ತಾಣದಿಂದ ಪ್ರಕಟವಾಗಿದ್ದರೆ ಆ ವೆಬ್‍ಸೈಟ್ ‘About’ ವಿಭಾಗಕ್ಕೆ ಹೋಗಿ ತಾಣದ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ.

    4. ಸುದ್ದಿ ವಿನ್ಯಾಸ ಗಮನಿಸಿ:
    ಮಾಧ್ಯಮಗಳಲ್ಲಿ ಪ್ರಕಟವಾಗುವ ಯಾವುದೇ ಸುದ್ದಿಗೆ ಫಾರ್ಮೆಟ್ ಅಂತ ಇರುತ್ತದೆ. ಆದರೆ ಈ ಸುಳ್ಳು ಸುದ್ದಿಗಳಿಗೆ ಯಾವುದೇ ಫಾರ್ಮೆಟ್ ಶೀಟ್ ಇರುವುದಿಲ್ಲ. ಮಾಹಿತಿಗಳು ಅಸ್ಪಷ್ಟವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಷರಗಳು ತಪ್ಪಾಗಿ ಟೈಪ್ ಆಗಿರುತ್ತದೆ.

    5. ಫೋಟೋ ಗಮನಿಸಿ:
    ಸುಳ್ಳು ಸುದ್ದಿಗಳಲ್ಲಿ ಸಾಧಾರಣವಾಗಿ ಫೋಟೋ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲಾಗಿರುತ್ತದೆ. ಕೆಲವೊಮ್ಮೆ ಫೋಟೋಗಳು ನೈಜವಾಗಿರುತ್ತದೆ. ಆದರೆ ಸುದ್ದಿ ತಪ್ಪಾಗಿರುತ್ತದೆ. ಹೀಗಾಗಿ ಸುದ್ದಿ ಒದಿದ ಕೂಡಲೇ ತೀರ್ಮಾನಕ್ಕೆ ಬರಬೇಡಿ. ಈ ಫೋಟೋವನ್ನು ಸರ್ಚ್ ಮಾಡಿ ಆ ಫೋಟೋದ ಮೂಲವನ್ನು ಪರಿಶೀಲಿಸಿ.

    6. ದಿನಾಂಕ ಪರಿಶೀಲಿಸಿ:
    ವಿಶ್ವಾಸಾರ್ಹ ವೆಬ್‍ಸೈಟ್‍ಗಳಲ್ಲಿ ಆ ಸುದ್ದಿ ಪ್ರಕಟವಾದ ದಿನಾಂಕ ಇರುತ್ತದೆ. ಆದರೆ ಸುಳ್ಳು ಸುದ್ದಿಗಳ ತಾಣಗಳಲ್ಲಿ ದಿನಾಂಕ ಸಾಮಾನ್ಯವಾಗಿ ಇರುವುದಿಲ್ಲ. ಒಂದು ವೇಳೆ ಇದ್ದರೂ ಯಾವಾಗಲೋ ನಡೆದಿರುವ ಸುದ್ದಿಯನ್ನು ಪ್ರಕಟಿಸಿರುತ್ತದೆ.

    7. ಸಾಕ್ಷ್ಯಗಳನ್ನು ಚೆಕ್ ಮಾಡಿ:
    ಲೇಖನ ಬರೆದವರು ಯಾರು? ಬರೆದ ವ್ಯಕ್ತಿಗೆ ಆ ವಿಚಾರದಲ್ಲಿ ಜ್ಞಾನ ಇದೆಯೋ ಎನ್ನುವುದನ್ನು ತಿಳಿದುಕೊಳ್ಳಿ. ಬರಹದಲ್ಲಿ ಸಾಕ್ಷ್ಯ/ ಉಲ್ಲೇಖಗಳು ಸರಿ ಇಲ್ಲದೇ ಇದ್ದರೆ ಇದು ಸುಳ್ಳು ಸುದ್ದಿ ಎನ್ನುವ ತೀರ್ಮಾನಕ್ಕೆ ಬರಬಹುದು.

    8. ಬೇರೆ ವರದಿ ಓದಿ:
    ಬೇರೆ ಯಾವುದೇ ಸುದ್ದಿ ತಾಣಗಳಲ್ಲಿ ಪ್ರಕಟವಾಗದ ಸುದ್ದಿ ಒಂದು ತಾಣದಲ್ಲಿ ಮಾತ್ರ ಪ್ರಕಟವಾದರೆ ಆ ಸುದ್ದಿ ಸುಳ್ಳು ಸುದ್ದಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಒಂದೇ ಸುದ್ದಿ ಹಲವು ತಾಣಗಳಲ್ಲಿ ಪ್ರಕಟಗೊಂಡಿದ್ದರೆ ಮಾತ್ರ ಅದು ನಿಜವಾದ ಸುದ್ದಿಯಾಗಿರುತ್ತದೆ.

    9. ಹಾಸ್ಯದ ಸುದ್ದಿಯೇ?
    ಕೆಲವೊಮ್ಮೆ ಹಾಸ್ಯ ಮತ್ತು ವಿಡಂಬನೆಗಾಗಿ ಸುದ್ದಿಯ ರೂಪದಲ್ಲಿ ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗುತ್ತದೆ. ಹೀಗಾಗಿ ಆ ಸುದ್ದಿ ವಿಡಂಬನೆಗಾಗಿ ಬರೆಯಲಾಗಿದ್ಯಾ ಎನ್ನುವುದನ್ನು ಓದುವಾಗಲೇ ಅರ್ಥೈಸಿಕೊಳ್ಳಬಹುದು.

    10. ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ:
    ಓದುವಾಗಲೇ ಆಲೋಚಿಸಿ, ಆ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಆಲೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಮಾಹಿತಿಗಳು ಸ್ಪಷ್ಟವಾಗಿದ್ದರೆ ಮಾತ್ರ ಶೇರ್ ಮಾಡಿ.