Tag: expert committee

  • ಸರ್ಕಾರದ ಸಮಿತಿಯನ್ನು ವಿರೋಧ ಮಾಡಿದವರನ್ನ ಬಹಿಷ್ಕಾರ ಹಾಕ್ತೀವಿ: ವಿನಯ ಕುಲಕರ್ಣಿ

    ಸರ್ಕಾರದ ಸಮಿತಿಯನ್ನು ವಿರೋಧ ಮಾಡಿದವರನ್ನ ಬಹಿಷ್ಕಾರ ಹಾಕ್ತೀವಿ: ವಿನಯ ಕುಲಕರ್ಣಿ

    ಧಾರವಾಡ: ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಮಾಡಲು ನೇಮಿಸಿರುವ ಸಮಿತಿಯನ್ನು ವಿರೋಧ ಮಾಡಿದವರನ್ನು ಬಹಿಷ್ಕಾರ ಹಾಕುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.

    ಧಾರವಾಡದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ ಮಾಡಿದ ಸಮಿತಿಗೆ ವೀರಶೈವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಯಾಕೆ? ಈ ರೀತಿ ಯಾವುದೇ ಕಾರಣವಿಲ್ಲದೆ ವಿರೋಧ ಮಾಡಿದರೆ ಅವರನ್ನು ಬಹಿಷ್ಕಾರ ಹಾಕುವ ಕಾರ್ಯವನ್ನು ಮಾಡಬೇಕಾಗುತ್ತದೆ ಎಂದರು.

    ನಾವು ಅವರ ಕುರ್ಚಿಗೆ ಏನು ಕೈ ಹಾಕಿಲ್ಲ, ಅವರ ಕುರ್ಚಿ ಅವರೇ ಇಟ್ಟುಕೊಳ್ಳಲಿ. ಆದರೆ ಅವರಿಗೆ ಸಮಾಜದ ಬಗ್ಗೆ ಏನಾದರೂ ಕಳಕಳಿ ಇದೆಯಾ ಎಂದು ಪ್ರಶ್ನಿಸಿದರು. ಮೀಸಲಾತಿ ಸಿಗದೇ ನಮ್ಮ ಜನರು ಒದ್ದಾಡುತ್ತಿದ್ದಾರೆ. ಸಮಾಜದ ಬಡ ಮಕ್ಕಳಿಗಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

    ಗದಗದಲ್ಲಿ ನಡೆಸುತ್ತಿರುವ ವೀರಶೈವ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ. ಸಮಾವೇಶ ಅಥವಾ ಅಡ್ಡ ಪಲ್ಲಕ್ಕಿ ಮಾಡಿದರೂ ವಿರೋಧವಿಲ್ಲ. ಆದರೆ ನಮ್ಮ ಹೋರಾಟಕ್ಕೆ ಅವರು ಅಡ್ಡ ಬರುತ್ತಿದ್ದಾರೆ. ಆದರೆ ವೀರಶೈವರು ಬೇರೆ ಮೀಸಲಾತಿ ಕೇಳಿದರೆ ನಾವು ವಿರೋಧ ಮಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದಾರೆ- ಅವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ: ಆಂದೋಲ ಶ್ರೀ

    ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾಪನೆ ಮಾಡುವ ಸಲುವಾಗಿ ಸರ್ಕಾರ 7 ಜನರ ತಜ್ಞರ ಸಮಿತಿ ರಚನೆ ಮಾಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ದ್ವಾರಕನಾಥ್, ರಾಜಕೀಯ ವಿಶ್ಲೇಷಕ ಮುಜಾಫರ್ ಅಸಾದಿ, ಪತ್ರಕರ್ತ ಸರ್ಜ್ಯೂ ಕಾಟ್ಕರ್, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಪುರುಷೋತ್ತಮ ಬಿಳಿಮಲೆ, ರಾಮಕೃಷ್ಣ ಮರಾಠೆ ತಜ್ಞರ ಸಮಿತಿಯ ಸದಸ್ಯರಾಗಿದ್ದಾರೆ.

    ಒಂದು ತಿಂಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಿದ್ದು, ತಜ್ಞರ ಸಮಿತಿ ವರದಿ ಬಳಿಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸ್ಸು ಮಾಡುವ ಕುರಿತು ನಿರ್ಧಾರವಾಗಲಿದೆ. ಇದನ್ನೂ ಓದಿ:  ಲಿಂಗಾಯತರಿಗೆ ಸಿಗುತ್ತಂತೆ ಅಲ್ಪಸಂಖ್ಯಾತ ಸ್ಥಾನಮಾನ!

  • ಲಿಂಗಾಯತರಿಗೆ ಸಿಗುತ್ತಂತೆ ಅಲ್ಪಸಂಖ್ಯಾತ ಸ್ಥಾನಮಾನ!

    ಲಿಂಗಾಯತರಿಗೆ ಸಿಗುತ್ತಂತೆ ಅಲ್ಪಸಂಖ್ಯಾತ ಸ್ಥಾನಮಾನ!

    ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚದುರಂಗದಾಟದ ಮತ್ತೊಂದು ಮೆಟ್ಟಿಲು ಏರಿದೆ. ಕನ್ನಡಧ್ವಜ, ಟಿಪ್ಪು ಜಯಂತಿ, ಹನುಮ ಜಯಂತಿ ವಿಷಯಗಳಾಗಿ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಈಗ ಮತ್ತೆ ಮಹದಾಯಿ ಹೋರಾಟದ ಬಿಸಿಯೇರಿದೆ. ಇದರ ಮಧ್ಯೆಯೇ ಲಿಂಗಾಯತ ವಿವಾದ ಮಹತ್ವದ ತಿರುವು ಪಡೆಯುವ ಸಾಧ್ಯತೆ ಇದೆ.

    ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಬಿಜೆಪಿಯ ರ‍್ಯಾಲಿಯ ವೇಳೆ ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಅವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿದ್ದರು. ಸಿಎಂ ಯೋಗಿ ಅವರ ಈ ಭೇಟಿಯು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಇದು ಮೋದಿಯ ಲೆಕ್ಕಾಚಾರ ಅನ್ನುವ ಮಾತು ಕೇಳಿ ಬಂದಿತ್ತು. ಆದರೆ, ಬಿಜೆಪಿ ನಾಯಕರ ಲೆಕ್ಕಚಾರಕ್ಕೆ ತಿರುಗೇಟು ನೀಡಲು ಸಿದ್ಧರಾಗಿರುವ ಸಿಎಂ ಸಿದ್ದರಾಮಯ್ಯ, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಪ್ಲಾನ್ ಮಾಡಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾಪನೆ ಮಾಡುವ ಸಲುವಾಗಿ ಸರ್ಕಾರ 7 ಜನರ ತಜ್ಞರ ಸಮಿತಿ ರಚನೆ ಮಾಡಿದೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಹಿರಿಯ ಪತ್ರಕರ್ತ ದ್ವಾರಕನಾಥ್, ರಾಜಕೀಯ ವಿಶ್ಲೇಷಕ ಮುಜಾಫರ್ ಅಸಾದಿ, ಪತ್ರಕರ್ತ ಸಜ್ರ್ಯೂ ಕಾಟ್ಕರ್, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಪುರುಷೋತ್ತಮ ಬಿಳಿಮಲೆ, ರಾಮಕೃಷ್ಣ ಮರಾಠೆ ತಜ್ಞರ ಸಮಿತಿಯ ಸದಸ್ಯರಾಗಿದ್ದಾರೆ.

    ಒಂದು ತಿಂಗಳಲ್ಲಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಿದ್ದು, ತಜ್ಞರ ಸಮಿತಿ ವರದಿ ಬಳಿಕ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸ್ಸು ಮಾಡುವ ಕುರಿತು ನಿರ್ಧಾರವಾಗಲಿದೆ.