Tag: Europe

  • ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

    ಕೊರೊನಾಗೆ ಬೆಚ್ಚಿದ ಯುರೋಪ್ – ಇಟಲಿ ಬಳಿಕ ಈಗ ಡೆನ್ಮಾರ್ಕ್ ಲಾಕ್

    – ಶಾಲಾ, ಕಾಲೇಜುಗಳು ಬಂದ್, ಒಂದೇ ವಾರದಲ್ಲಿ 442 ಕೇಸ್ ದಾಖಲು
    – ಯುರೋಪ್ ದೇಶಗಳ ಪ್ರವಾಸಿಗರ ಭೇಟಿಗೆ ಟ್ರಂಪ್ ನಿರ್ಬಂಧ
    – ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಡಬ್ಲ್ಯೂಎಚ್‍ಒ
    – ಇಟಲಿಯಲ್ಲಿ ಆಹಾರ, ಮೆಡಿಕಲ್ ಶಾಪ್ ತೆರೆಯಲು ಮಾತ್ರ ಅನುಮತಿ

    ಕೋಪನ್ ಹೇಗನ್/ ಜಿನೀವಾ/ ವಾಷಿಂಗ್ಟನ್: ಇಟಲಿ ಬಳಿಕ ಯುರೋಪ್ ಖಂಡದ ಡೆನ್ಮಾರ್ಕ್ ಈಗ ಭಾಗಶ: ಲಾಕ್ ಆಗಿದೆ. ಈ ವಾರದಲ್ಲಿ 442 ಪ್ರಕರಣಗಳು ದಾಖಲಾಗುತ್ತಿದ್ದಂತೆ ಡೆನ್ಮಾರ್ಕ್ ಸರ್ಕಾರ 2 ವಾರಗಳ ಕಾಲ ಎಲ್ಲ ಶಾಲೆ, ವಿಶ್ವವಿದ್ಯಾಲಯಗಳನ್ನು ಮುಚ್ಚುವಂತೆ ಆದೇಶಿಸಿದೆ.

    ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು 100ಕ್ಕೂ ಹೆಚ್ಚು ಜನ ಭಾಗವಹಿಸುವ ಸಾರ್ವಜನಿಕ ಸಮಾರಂಭವನ್ನು ನಿಷೇಧಿಸಿದೆ. ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಬೇಕೆಂದು ಕಂಪನಿಗಳಿಗೆ ಸೂಚಿಸಿದೆ.

    ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡೆನ್ಮಾರ್ಕ್ ಪ್ರಧಾನಿ ಫ್ರೆಡಿರಿಕ್ಸೆನ್, ಬಹಳ ವೇಗವಾಗಿ ಕೊರೊನಾ ಹಬ್ಬುತ್ತಿದೆ. ಇದನ್ನು ನಿಯಂತ್ರಿಸಲು ಕಠಿಣ ನಿಯಮ ಪಾಲನೆ ಮಾಡುವುದು ಅಗತ್ಯವಾಗಿದೆ. ಉದ್ಯಮಗಳು ಮುಚ್ಚಬೇಕು. ಕೆಲವರು ಉದ್ಯೋಗ ಕಳೆದುಕೊಳ್ಳಬಹುದು. ಆದರೆ ರೋಗ ನಿಯಂತ್ರಿಸಲು ನಾವೆಲ್ಲರೂ ಸಹಕರಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

    ಡೆನ್ಮಾರ್ಕಿನಲ್ಲಿ ಇಲ್ಲಿಯವರೆಗೆ 514 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಯಾವುದೇ ಸಾವು ಸಂಭವಿಸಿಲ್ಲ. ಆದರೆ ಬಹಳ ವೇಗವಾಗಿ ಹರಡುತ್ತಿರುವ ಕಾರಣ ಡೆನ್ಮಾರ್ಕ್ ಎಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಂಡಿದೆ.

    ಸಾಂಕ್ರಾಮಿಕ ರೋಗ: ಕೊರೊನಾ ವೈರಸ್ ಸೋಂಕು ಹರಡುವ ಪ್ರಮಾಣ ತೀವ್ರಗೊಂಡಿರುವುದರಿಂದ ಕೋವಿಡ್ 19 ಸಾಂಕ್ರಾಮಿಕ ರೋಗ ಎಂದು ಘೋಷಿಸಬಹುದು ಎಂದು ವಿಶ್ವ ಆರೋಗ್ಯ (ಡಬ್ಲ್ಯೂಎಚ್‍ಒ) ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಸೋಂಕು ತ್ರೀವ್ರವಾಗಿ ಹರಡುತ್ತಿದ್ದರೂ ಸರ್ಕಾರಗಳು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಇದು ಕಳವಳಕಾರಿ ವಿಚಾರ ಎಂದು ಹೇಳಿದರು.

    ಸಾಧಾರಣವಾಗಿ ಒಂದು ರೋಗವನ್ನು ಡಬ್ಲ್ಯೂಎಚ್‍ಒ ಸಾಂಕ್ರಾಮಿಕ ರೋಗ ಎಂದು ಘೋಷಿಸುವುದಿಲ್ಲ. ಆರಂಭದಲ್ಲಿ ಅದು ‘ಅಪಾಯಕಾರಿ’ ಅಥವಾ ‘ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು’ ಎಂದು ಹೇಳುತ್ತದೆ. ಆದರೆ ಈಗ ಕೊರೊನಾ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಡಬ್ಲ್ಯೂಎಚ್‍ಒ ಇದನ್ನು ಸಾಂಕ್ರಾಮಿಕ ರೋಗ ಎಂದು ಕರೆದಿದೆ.

    ಯುರೋಪಿಯನ್ನರಿಗೆ ನಿರ್ಬಂಧ: ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳು ಕೊರೊನಾ ತಟೆಗಟ್ಟಲು ವಿಫಲವಾಗಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಎಲ್ಲ ರಾಷ್ಟ್ರಗಳು ಎಚ್ಚೆತ್ತುಕೊಳ್ಳುತ್ತಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ, ಶುಕ್ರವಾರ ಮಧ್ಯರಾತ್ರಿಯಿಂದ ಯುರೋಪ್ ರಾಷ್ಟ್ರಗಳ ಪ್ರವಾಸಿಗರು ಅಮೆರಿಕಕ್ಕೆ ಬರುವುದಕ್ಕೆ ನಿರ್ಬಂಧ ಹೇರಿದ್ದಾರೆ. 30 ದಿನಗಳ ಕಾಲ ಈ ಆದೇಶ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ. ತಮ್ಮ ಭಾಷಣದಲ್ಲಿ ಯುರೋಪ್ ರಾಷ್ಟ್ರಗಳ ವಿರುದ್ಧ ಕಿಡಿಕಾರಿದ ಟ್ರಂಪ್, ಯುರೋಪ್ ರಾಷ್ಟ್ರಗಳು ಕೊರೊನಾ ಹರಡದಂತೆ ತಡೆಯಲು ವಿಫಲವಾಗಿದೆ ಎಂದು ದೂರಿದರು.

    ಎಲ್ಲ ಅಂಗಡಿ ಕ್ಲೋಸ್: ಯುರೋಪ್ ಖಂಡದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿರುವ ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಸರ್ಕಾರ ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಎಲ್ಲ ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಸರ್ಕಾರ ಆದೇಶಿಸಿದೆ.

    ಎಷ್ಟು ಕೇಸ್?
    ಇಲ್ಲಿಯವರೆಗೆ ಚೀನಾ(90,796 ಕೇಸ್, 3,169 ಸಾವು), ಇಟಲಿ(12,462 ಕೇಸ್, 827 ಸಾವು), ಇರಾನ್ (9 ಸಾವಿರ ಕೇಸ್, 354 ಸಾವು) ದಕ್ಷಿಣ ಕೊರಿಯಾ(7,869 ಕೇಸ್, 66 ಸಾವು), ಫ್ರಾನ್ಸ್ (2,281 ಕೇಸ್, 48 ಸಾವು), ಸ್ಪೇನ್(2,277 ಕೇಸ್, 55 ಸಾವು), ಜರ್ಮನಿ(1,966 ಕೇಸ್, 3 ಸಾವು), ಅಮೆರಿಕ(1,329 ಕೇಸ್, 38 ಸಾವು) ಭಾರತ(73 ಕೇಸ್) ದಾಖಲಾಗಿದೆ.

  • ‘ರಾಬರ್ಟ್’ ನಂತ್ರ ‘ಯುವರತ್ನ’ನಿಗೂ ತಟ್ಟಿದ ಕೊರೊನಾ ಭೀತಿ

    ‘ರಾಬರ್ಟ್’ ನಂತ್ರ ‘ಯುವರತ್ನ’ನಿಗೂ ತಟ್ಟಿದ ಕೊರೊನಾ ಭೀತಿ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆತಂಕಕ್ಕೀಡುಮಾಡಿದೆ. ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸುಮಾರು 77 ದೇಶಗಳಲ್ಲಿ ಹರಡಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಈ ಕೊರೊನಾ ಎಫೆಕ್ಟ್ ಸ್ಯಾಂಡಲ್‍ವುಡ್‍ಗೂ ತಟ್ಟಿದ್ದು, ‘ರಾಬರ್ಟ್’ ಚಿತ್ರತಂಡದ ಬಳಿಕ ‘ಯುವರತ್ನ’ ಚಿತ್ರತಂಡ ಕೂಡ ವಿದೇಶದಲ್ಲಿ ನಡೆಯಬೇಕಿದ್ದ ಶೂಟಿಂಗ್ ರದ್ದು ಮಾಡಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ `ಯುವರತ್ನ` ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಯುವರತ್ನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು.

    3-4 ದಿನಗಳ ಕಾಲ ಯುರೋಪಿನಲ್ಲೇ ಚಿತ್ರತಂಡ ತಂಗಲು ಪ್ಲಾನ್ ಮಾಡಿದ್ದ ಹಿನ್ನೆಲೆ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಮಾಡಲಾಗಿತ್ತು. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ `ಯುವರತ್ನ`ನ ಯುರೋಪ್ ಪ್ರವಾಸ ರದ್ದು ಮಾಡಿದೆ. ಹಣ ಹೋದರೆ ಹೋಗಲಿ ಕೊರೊನಾ ಸಹವಾಸ ಬೇಡಪ್ಪ ಎಂದು ಚಿತ್ರತಂಡ ಸುಮ್ಮನಾಗಿದೆ.

    ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ರಾಬರ್ಟ್’ ಚಿತ್ರತಂಡವು ಶೂಟಿಂಗ್‍ಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ಭೀತಿಗೆ ವಿದೇಶ ಪ್ರವಾಸವನ್ನು ಚಿತ್ರತಂಡ ರದ್ದು ಮಾಡಿತ್ತು. ಇದೇ ಬೆನ್ನಲ್ಲೇ ಯುವರತ್ನ ಚಿತ್ರತಂಡ ಕೂಡ ವಿದೇಶದಲ್ಲಿ ನಡೆಯಬೇಕಿದ್ದ ಶೂಟಿಂಗ್ ಪ್ಲಾನ್ ರದ್ದುಮಾಡಿದೆ. ಅದೇ ರೀತಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ‘ಅರ್ಜುನ್ ಗೌಡ’ ಸಿನಿಮಾ ತಂಡ ಕೂಡ ವಿದೇಶದಲ್ಲಿ ಮಾಡಬೇಕಿದ್ದ ಶೂಟಿಂಗ್ ಕ್ಯಾನ್ಸಲ್ ಮಾಡಿದೆ.

    ಈ ಹಿಂದೆ `ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸಲಿದ್ದಾರೆ.

    ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟಿವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ಕೊರೊನಾ ಎಫೆಕ್ಟ್- ಪತ್ನಿಯನ್ನ ಬಾತ್‍ರೂಮಿನಲ್ಲಿ ಲಾಕ್ ಮಾಡಿದ ಪತಿ

    ಕೊರೊನಾ ಎಫೆಕ್ಟ್- ಪತ್ನಿಯನ್ನ ಬಾತ್‍ರೂಮಿನಲ್ಲಿ ಲಾಕ್ ಮಾಡಿದ ಪತಿ

    – ಪೊಲೀಸರಿಗೆ ಫೋನ್ ಮಾಡಿದ ಹೆಂಡ್ತಿ

    ವಿಲ್ನಿಯಸ್: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ಭಯದಿಂದ ಪತಿಯೊಬ್ಬ ತನ್ನ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂಬ ಅನುಮಾನದಿಂದ ಬಾತ್‍ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದ ಘಟನೆ ಯೂರೋಪ್‍ನ ಲಿಥುವೇನಿಯದಲ್ಲಿ ನಡೆದಿದೆ.

    ಪತ್ನಿ ಚೀನಾದ ಮಹಿಳೆಯೊಬ್ಬರನ್ನು ಭೇಟಿಯಾಗಿ ಇಟಲಿಯಿಂದ ಆಗಮಿಸಿದ್ದಳು. ಹೀಗಾಗಿ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂದು ಆಕೆಯನ್ನು ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದನು. ಇತ್ತ ಪತ್ನಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಅವರಿದ್ದ ಅಪಾರ್ಟ್ ಮೆಂಟ್‍ಗೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ.

    ಕೊರೊನಾ ವೈರಸ್ ಸೋಂಕನ್ನು ಹೇಗೆ ತಪ್ಪಿಸಬೇಕು ಎಂಬ ಬಗ್ಗೆ ವೈದ್ಯರೊಂದಿಗೆ ಫೋನ್‍ನಲ್ಲಿ ಮಾತನಾಡಿದ ನಂತರ ಪತ್ನಿಯನ್ನು ಬಾತ್‍ರೂಮಿನಲ್ಲಿ ಕೂಡಿಹಾಕಿದ್ದಾನೆ. ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದರೂ ಪತ್ನಿ ದೂರು ನೀಡಲಿಲ್ಲ. ಹೀಗಾಗಿ ಆತನನ್ನು ಬಂಧಿಸಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೊನಾ ವೈರಸ್ ಇಲ್ಲ ಎಂಬುದು ತಿಳಿದುಬಂದಿದೆ. ಚೀನಾದ ನಗರವಾದ ವುಹಾನ್‍ನಲ್ಲಿ ಜನವರಿಯಲ್ಲಿ ಈ ವೈರಸ್ ಪತ್ತೆಯಾಗಿತ್ತು. ಇದರಿಂದ ಚೀನಾದಲ್ಲಿ ಸಾವಿರಾರು ಬಂದಿ ಮೃತಪಟ್ಟಿದ್ದಾರೆ. ನಂತರ ಚೀನಾದಿಂದ ಬೇರೆ ಬೇರೆ ದೇಶಗಳಿಗೂ ಕೊರೊನಾ ವೈರಸ್ ಹಬ್ಬಿದೆ. ಈ ಭಯಂಕರ ವೈರಸ್ ನಿಂದ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ.

  • ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದಾತನ ಮರ್ಮಾಂಗವನ್ನೇ ಕತ್ತರಿಸಿದ

    ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದಾತನ ಮರ್ಮಾಂಗವನ್ನೇ ಕತ್ತರಿಸಿದ

    ಯುರೋಪ್: ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯ ಮರ್ಮಾಂಗವನ್ನೇ ಕತ್ತರಿಸಿದ ವಿಲಕ್ಷಣ ಘಟನೆಯೊಂದು ಯೂರೋಪಿನ ಉಕ್ರೈನ್ ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    27 ವರ್ಷದ ದ್ಮಿತ್ರಿ ಸ್ಪಾಸ್ ಕಿನ್ ಪತ್ನಿ ಮೇಲೆ 25 ವರ್ಷದ ಇವ್ಚೆಂಕೊ ಲೈಂಗಿಕ ದೌರ್ಜನ್ಯವೆಸಗಿರುವುದನ್ನು ನೋಡಿದ್ದಾನೆ. ಇದೇ ಸಿಟ್ಟಿನಿಂದ ಸ್ಪಾಸ್ ಕಿನ್, ಚಾಕುವಿನಿಂದ ಇವ್ಚೆಂಕೊ ಮರ್ಮಾಂಗವನ್ನು ಕತ್ತರಿಸಿದ್ದಾನೆ.

    ನಡೆದಿದ್ದೇನು?
    ಇವ್ಚೆಂಕೊ, ಸ್ಪಾಸ್ ಕಿನ್ ಪತ್ನಿ ಹಾಗೂ ಉಳಿದ ಗೆಳೆಯರು ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗಿದ್ದಾರೆ. ಆದರೆ ಪತಿ ಸ್ಪಾಸ್ ಕಿನ್ ಹೊರಡುವ 10 ನಿಮಿಷ ಮೊದಲು ಪತ್ನಿ ರೆಸ್ಟೋರೆಂಟ್ ನಿಂದ ತೆರಳಿದ್ದಾಳೆ. ಹೀಗೆ ಮನೆಯತ್ತ ಹೆಜ್ಜೆ ಹಾಕುತ್ತಿರುವ ಸಂದರ್ಭದಲ್ಲಿ ಇವ್ಚೆಂಕೊ ಆಕೆಯನ್ನು ತಡೆದಿದ್ದಾನೆ. ಆದರೆ ಇದನ್ನು ಕ್ಯಾರೇ ಎನ್ನದ ಆಕೆ ಮನೆಯತ್ತ ತೆರಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಇವ್ಚೆಂಕೊ ಆಕೆಯ ಮುಖವನ್ನು ತನ್ನ ಕೈಯಿಂದ ಮುಚ್ಚಿ, ಪಕ್ಕದಲ್ಲಿದ್ದ ಪೊದೆಯೊಳಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲದೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

    ಪೊದೆಯಲ್ಲಿ ಪತ್ನಿಯ ಕುತ್ತಿಗೆಯನ್ನು ಹಿಡಿದುಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಇದರಿಂದ ಸಿಟ್ಟುಗೊಂಡ ಸ್ಪಾಸ್ ಕಿನ್ ಆತನನ್ನು ಹಿಂಬಾಲಿಸಿ ಸರಿಯಾಗಿ ಥಳಿಸಿದ್ದಾನೆ. ಅಲ್ಲದೆ ಹರಿತವಾದ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿರುವುದಾಗಿ ಸ್ಪಾಸ್ ಕಿನ್ ಪೊಲೀಸ್ ಅಧಿಕಾರಿಗಳ ಬಳಿ ತಿಳಿಸಿದ್ದಾನೆ.

    ಅತ್ಯಾಚಾರ ಆರೋಪ ಹೊತ್ತ ಇವ್ಚೆಂಕೊ ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದಾಗ ಆತ ಪಾನಮತ್ತನಾಗಿದ್ದನು ಎಂಬುದಾಗಿ ವರದಿಯಾಗಿದೆ.

  • 10 ದಿನದ ಯುರೋಪ್ ಪ್ರವಾಸ ಹೊರಟ ಸಿದ್ದರಾಮಯ್ಯ- ಕಾಂಗ್ರೆಸ್ ಮುಖಂಡರು ಏನ್ ಹೇಳಿದ್ರು?

    10 ದಿನದ ಯುರೋಪ್ ಪ್ರವಾಸ ಹೊರಟ ಸಿದ್ದರಾಮಯ್ಯ- ಕಾಂಗ್ರೆಸ್ ಮುಖಂಡರು ಏನ್ ಹೇಳಿದ್ರು?

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ದಿನಗಳ ಯುರೋಪ್ ಪ್ರವಾಸಕ್ಕೆ ಇಂದು ತೆರಳಿದ್ದಾರೆ. ಸಿದ್ದರಾಮಯ್ಯ ಜೊತೆ ಪುತ್ರ ಯತೀಂದ್ರ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸೇರಿದಂತೆ ಕುಟುಂಬದ ಸದಸ್ಯರು ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ತೆರಳಿದ್ದಾರೆ.

    ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿದ್ದರಾಮಯ್ಯ ವಿದೇಶಕ್ಕೆ ತೆರಳುವ ವೇಳೆ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ನಿವಾಸದ ಎದುರು ಸೇರಿದ್ದರು.

    ಸಚಿವ ಜಮೀರ್ ಅಹಮದ್ ಸೇರಿದಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸಂಪುಟ ಸದಸ್ಯರು ಸಿದ್ದರಾಮಯ್ಯ ತೆರಳುವ ವೇಳೆ ನಿವಾಸದ ಬಳಿ ಕಾಣಿಸಿಕೊಂಡರು. ಅಲ್ಲದೇ ಮೈಸೂರು ಜಿಲ್ಲೆಯ ಅಪಾರ ಅಭಿಮಾನಿಗಳು ಕೂಡ ಈ ವೇಳೆ ಹಾಜರಿದ್ದರು. ಇಂದಿನಿಂದ 10 ದಿನಗಳ ಕಾಲ ಯುರೋಪ್ ರಾಷ್ಟ್ರ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರ ಪ್ರವಾಸದ ಹಿಂದೆ ಕೆಲವು ರಾಜಕೀಯ ಊಹಾಪೋಹಗಳು ಈಗಾಗಲೇ ಕೇಳಿಬಂದಿವೆ.

    ಈ ವೇಳೆ ಮಾಜಿ ಸಚಿವ ಹೆಚ್ ಆಂಜನೇಯ ಮಾತನಾಡಿ, ವಿದೇಶ ಪ್ರವಾಸ ಮಾಡಬೇಕು ಅನ್ನೋದು ಎಲ್ಲರ ಆಸೆಯಾಗಿದೆ. ಇಂದು ಸಿದ್ದರಾಮಯ್ಯ ಅವರಿಗೆ ಶುಭಕೋರೋದಕ್ಕೆ ಬಂದಿದ್ದೇವೆ. ಅವರು ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿದ್ದಾರೆ. 5 ವರ್ಷಗಳ ಕಾಲ ದಣಿವರಿಯದೇ ದುಡಿದ್ರು. ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆದ್ರೆ ಅವರು ಕುಂದಿರಲಿಲ್ಲ. ಈಗ ಅವರು ವಿದೇಶಕ್ಕೆ ಹೋಗ್ತಿದ್ದಾರೆ ಸುಗಮವಾಗಿ ಹೋಗಿಬರಲಿ ಅಂತ ಶೂಭಹಾರೈಸಿದ್ರು.

    ಮಾಜಿ ಸಿಎಂಗೆ ಶುಭ ಹಾರೈಸಿದ್ದೇವೆ. ಸೂಟು, ಬೂಟ್ ನಲ್ಲಿ ಅವರನ್ನ ನೋಡೋದಕ್ಕೆ ಖುಷಿಯಾಗುತ್ತೆ. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ, ಹಿರೇಕೆರೂರುನಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವತ್ತ ಕಾಂಗ್ರೆಸ್ ದಾಪುಗಾಲಿಟ್ಟಿದೆ. ಸಂಪುಟ ವಿಸ್ತರಣೆ ವೇಳೆ, ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಅಂತ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿತ್ರ ತಂಡದ ಪ್ರಕಾರ ಮಯೂರಿ ಯುರೋಪಿನಲ್ಲಿದ್ದಾಳೆ!

    ಚಿತ್ರ ತಂಡದ ಪ್ರಕಾರ ಮಯೂರಿ ಯುರೋಪಿನಲ್ಲಿದ್ದಾಳೆ!

    ಬೆಂಗಳೂರು: ಜೆಕೆಗೆ ಜೋಡಿಯಾಗಿ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟಿದ್ದ ಮಯೂರಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿಕೊಂಡಿದ್ದು, ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದು ಅದರಿಂದಲೇ. ಆ ನಂತರ ಚಿತ್ರರಂಗಕ್ಕೂ ಅಡಿಯಿರಿಸಿದ್ದ ಮಯೂರಿ ಇದೀಗ ‘ನನ್ನ ಪ್ರಕಾರ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    ಟೈಟಲ್ ನಲ್ಲಿಯೇ ಏನೋ ವೈಶಿಷ್ಟ್ಯದ ಮುನ್ಸೂಚನೆ ಕೊಡುತ್ತಿರೋ ನನ್ನ ಪ್ರಕಾರ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದು ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಇದೇ ಹಂತದಲ್ಲಿ ಮಯೂರಿ ತನ್ನ ಪಾತ್ರಕ್ಕೆ ಒಂದೇ ಗುಕ್ಕಿನಲ್ಲಿ ಡಬ್ಬಿಂಗ್ ಮಾಡಿ ಮುಗಿಸಿದ್ದಾರಂತೆ.

    ಬಿಡುವಿರದಂತೆ ತಿಂಗಳುಗಳ ಕಾಲ ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಮಯೂರಿ ಕೊಂಚವೂ ಗ್ಯಾಪು ತೆಗೆದುಕೊಳ್ಳದೆ ಡಬ್ಬಿಂಗ್ ಮಾಡಿ ಮುಗಿಸಿದ್ದಳು. ಇದೀಗ ಈ ಆಯಾಸ ನೀಗಿಕೊಳ್ಳುವ ಸಲುವಾಗಿ ಯೂರೋಪ್ ಗೆ ಹಾರಿದ್ದಾಳೆ. ಅಲ್ಲಿ ಹಾಯಾಗಿ ಒಂದಷ್ಟು ಕಾಲ ಸುತ್ತಾಡಿ ರಿಲೀಫ್ ಮೂಡಿಗೆ ಜಾರಿ ಹೊಸ ಉತ್ಸಾಹ ತುಂಬಿಕೊಂಡು ಮತ್ತೆ ಬರಲಿದ್ದಾರಂತೆ.

    ಹಾಗೆ ವಿದೇಶದಿಂದ ಬಂದ ಕೂಡಲೇ ಮಯೂರಿ ನನ್ನ ಪ್ರಕಾರ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಚಿತ್ರ ತನಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಡಲಿದೆ ಎಂಬ ನಂಬಿಕೆಯಲ್ಲಿರುವ ಮಯೂರಿ ಬೇಗನೆ ವಿದೇಶದಿಂದ ವಾಪಾಸಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕಳಾಗಿದ್ದಾಳೆ.

  • ಗರ್ಭಿಣಿ ಹಸುವಿಗೆ ಮರಣದಂಡನೆ ಶಿಕ್ಷೆ: ಸರ್ಕಾರದಿಂದ ಆದೇಶ ರದ್ದು

    ಗರ್ಭಿಣಿ ಹಸುವಿಗೆ ಮರಣದಂಡನೆ ಶಿಕ್ಷೆ: ಸರ್ಕಾರದಿಂದ ಆದೇಶ ರದ್ದು

    ಸೋಫಿಯಾ: ಗರ್ಭಿಣಿ ಹಸುವಿಗೆ ವಿಧಿಸಿದ್ದ ಮರಣದಂಡನೆ ಆದೇಶವನ್ನು ಬಲ್ಗೇರಿಯಾ ಸರ್ಕಾರ ಅನೂರ್ಜಿತಗೊಳಿಸಿದ ಘಟನೆ ನಡೆದಿದೆ.

    ಪೆಂಕಾ ಎಂಬ ಹಸು ಕಳೆದ ತಿಂಗಳು ತನ್ನ ಹಿಂಡಿನ ಜೊತೆ ಸಾಗುವಾಗ ಯುರೋಪಿಯನ್ ಯೂನಿಯನ್ ಗಡಿಯನ್ನು ದಾಟಿ ಪಕ್ಕದ ಸರ್ಬಿಯಾಕ್ಕೆ ಹೋಗಿ ವಾಪಸ್ ಬಂದಿತ್ತು.

    ಯುರೋಪಿಯನ್ ಕಮಿಷನ್ ಮಾರ್ಗದರ್ಶನಗಳ ಪ್ರಕಾರ ಹಸುಗಳ ಆರೋಗ್ಯ ಸ್ಥಿತಿಯ ದಾಖಲೆಗಳನ್ನು ಗಡಿಯಲ್ಲಿರುವ ಚೆಕ್ ಪಾಯಿಂಟ್ ಗಳಲ್ಲಿ ತೋರಿಸಬೇಕು. ಗಡಿಯಲ್ಲಿ ತಪಾಸಣೆಗೊಂಡು ಅನುಮತಿ ಪಡೆದ ನಂತರವಷ್ಟೇ ಯುರೋಪ್ ಯೂನಿಯನ್ ಒಳಗೆ ಬರಬಹುದಾಗಿದೆ. ಹಾಗಾಗಿ ಅಧಿಕಾರಿಗಳು ಪೆಂಕಾವನ್ನು ಶಿಕ್ಷೆಗೆ ಗುರಿಪಡಿಸಿ ಎಂದು ವಾದಿಸಿದ್ದರು. ಸರ್ಕಾರ ಪೆಂಕಾಗೆ ಮರಣದಂಡನೆಯನ್ನು ವಿಧಿಸಿತ್ತು.

    ವಿಚಾರ ತಿಳಿಯುತ್ತಿದ್ದಂತೆ ಪ್ರಾಣಿದಯಾ ಚಳುವಳಿಗಾರರಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಪ್ರಕರಣದಲ್ಲಿ ಪೆಂಕಾಗೆ ವಿನಾಯಿತಿ ನೀಡುವಂತೆ ಸರ್ಕಾರವನ್ನು ಕೋರಿ ಆನ್ ಲೈನ್ ಅಭಿಯಾನ ಕೂಡ ಶುರುವಾಗಿತ್ತು. ಇದರ ಬೆನ್ನಲ್ಲೇ ಬಲ್ಗೇರಿಯಾ ಸರ್ಕಾರ ಆದೇಶವನ್ನು ಅನೂರ್ಜಿತಗೊಳಿಸಿದೆ.

    https://www.youtube.com/watch?v=DBzExVlwhQQ

  • ಗ್ರಾಹಕರ ಕನಿಷ್ಠ ವಯಸ್ಸಿನ ಮಿತಿಯನ್ನು 13ರಿಂದ 16ಕ್ಕೆ ಏರಿಸಿದ ವಾಟ್ಸಪ್!

    ಗ್ರಾಹಕರ ಕನಿಷ್ಠ ವಯಸ್ಸಿನ ಮಿತಿಯನ್ನು 13ರಿಂದ 16ಕ್ಕೆ ಏರಿಸಿದ ವಾಟ್ಸಪ್!

    ನವದೆಹಲಿ: ಖಾತೆ ತೆರೆಯಲು ನಿಗದಿಯಾಗಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನು ಯುರೋಪ್ ನಲ್ಲಿ 13 ರಿಂದ 16 ಕ್ಕೆ ಏರಿಸಲು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಮುಂದಾಗಿದೆ.

    ಕಂಪನಿಯ ಹೊಸ ಡೇಟಾ ಸುರಕ್ಷತೆಯ ನಿಯಮಗಳಲ್ಲಿ ಹೊಸ ನೀತಿಯನ್ನು ಸೇರಿಸಲಾಗಿದೆ. ಇನ್ನು ಮುಂದೆ ಕಂಪನಿಯು ಯುರೋಪಿಯನ್ ಬಳಕೆದಾರರ ವಯಸ್ಸನ್ನು ಖಾತ್ರಿ ಪಡಿಸಿಕೊಳ್ಳುತ್ತದೆ ಎಂದು ವಾಟ್ಸಪ್ ತಿಳಿಸಿದೆ.

    ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್(ಜಿಡಿಪಿಆರ್) ಕಾಯ್ದೆ ಪ್ರಕಾರ ವಾಟ್ಸಪ್ ಈ ನಿಯಮವನ್ನು ಅಳವಡಿಸಲು ಮುಂದಾಗಿದೆ, ಮೇ 25ಕ್ಕೆ ಅಧಿಕೃತವಾಗಿ ಈ ನಿಯಮ ಜಾರಿಗೆ ಬರಲಿದೆ.

    ಬಳಸುತ್ತಿರುವ ಗ್ರಾಹಕ 16 ವರ್ಷ ಮೇಲ್ಪಟ್ಟ ವ್ಯಕ್ತಿಯೇ ಎಂದು ಹೇಗೆ ತಿಳಿಯುತ್ತದೆ ಎನ್ನುವ ಪ್ರಶ್ನೆಗೆ ವಾಟ್ಸಪ್ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಯೂರೋಪ್ ಒಕ್ಕೂಟದಲ್ಲಿ ಮಾತ್ರ ಈ ನಿಯಮ ಜಾರಿಯಾಗಲಿದ್ದು, ಉಳಿದ ಕಡೆ ಈಗ ಇರುವಂತೆ ಕನಿಷ್ಟ ವಯಸ್ಸಿನ ಮಿತಿ 13 ಇರಲಿದೆ.

    ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಗ್ರಾಹಕರ ಅನುಮತಿ ಪಡೆಯದೇ ಅವರ ಡೇಟಾವನ್ನು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿದೆ ಎಂದು ಜಿಡಿಪಿಆರ್ ಆರೋಪಿಸಿತ್ತು. ಈ ಆರೋಪಕ್ಕೆ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿರುವ ವಾಟ್ಸಪ್ ಗ್ರಾಹಕರ ಯಾವುದೇ ಮಾಹಿತಿಯನ್ನು ನಾವು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಸ್ಪಾಮ್ ಮೆಸೇಜ್ ಕಳುಹಿಸುವುದಿಲ್ಲ ಎಂದು ತಿಳಿಸಿದೆ.

     

  • ಭಾರೀ ಬಿರುಗಾಳಿ: ಗಾಳಿಯಲ್ಲಿ ಹಾರಾಡಿದ ಜನರು-ವಿಡಿಯೋ ನೋಡಿ

    ಭಾರೀ ಬಿರುಗಾಳಿ: ಗಾಳಿಯಲ್ಲಿ ಹಾರಾಡಿದ ಜನರು-ವಿಡಿಯೋ ನೋಡಿ

    ಆ್ಯಮಸ್ಟರ್‍ಡ್ಯಾಮ್: ಯುರೋಪ್‍ನ ಉತ್ತರ ನೆದರ್‍ಲ್ಯಾಂಡಿನಲ್ಲಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಗಾಳಿಯ ತೀವ್ರತೆಗೆ ಮೂವರು ಮೃತಪಟ್ಟಿದ್ದಾರೆ.

    ಉತ್ತರ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ರಭಸವಾಗಿ ಬೀಸುತ್ತಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು, ನಗರದಲ್ಲಿಯ ಕಟ್ಟಡಗಳ ಮೇಲ್ಚಾವಣಿ, ಪಾರ್ಕ್ ಮಾಡಿದ್ದ ವಾಹನಗಳು ಗಾಳಿಗೆ ಹಾರಾಡುತ್ತಿವೆ. ಈಗಾಗಲೇ ಆಮಸ್ಟರ್ ಡ್ಯಾಮ್ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 260 ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ.

    ನಗರದಲ್ಲಿ ರೈಲ್ವೆ ಮತ್ತು ಬಸ್ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿದೆ. ಬಿರುಗಾಳಿಗೆ ಈಗಾಗಲೇ ಏಳು ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ಲೇನ್‍ಗಳು ಲ್ಯಾಂಡ್ ಆಗುವ ವೇಳೆ ಗಾಳಿಯಲ್ಲಿ ತೇಲಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಜರ್ಮಿನಿಯ ಡಚ್ ಬಾರ್ಡರ್ ಬಳಿ ಮರವೊಂದು ಬಿದ್ದ ಪರಿಣಾಮ 59 ವರ್ಷದ ವ್ಯಕ್ತಿ ಮೃತಪಟ್ಟರೆ, ಪಶ್ಚಿಮ ಜರ್ಮಿನಿಯ ಲಿಪ್‍ಸ್ಟಾಡತ್ ಬಳಿ ಲಾರಿ ಚಾಲಕ ಮತ್ತು ನಾರ್ಥ್ ರಿಹಿನೆಯಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ನಾರ್ಥ್ ರಿಹಿನೆ ಪ್ರದೇಶದ 1 ಲಕ್ಷಕ್ಕೂ ಅಧಿಕಜನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಪೊಲೀಸ್ ಇಲಾಖೆ ತಿಳಿಸಿದೆ.

    ಜರ್ಮನ್ ರೈಲ್ವೆ ಕೂಡ ದೀರ್ಘ ಪ್ರಯಾಣದ ರೈಲುಗಳ ಸಂಚಾರವನ್ನು ನಿಲ್ಲಿಸಿದೆ. 2010ರ ಬಳಿಕ ಜರ್ಮನ್ ರೈಲ್ವೆ ಮೊದಲ ಬಾರಿಗೆ ತನ್ನ ಸಂಚಾರವನ್ನು ಕಡಿತಗೊಳಿಸಿದೆ.