Tag: ettina hole

  • ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಹಾಸನ: ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ (Ettina Hole Project) ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಸನ (Hassan) ಜಿಲ್ಲೆಯ ಬಹುತೇಕ ಕಡೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಗುರುವಾರ ಸಕಲೇಶಪುರ ತಾಲೂಕಿನ ಕಾಡುಮನೆಯ ಬಳಿಯ ಚೆಕ್‍ಡ್ಯಾಂನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ಹಲವು ಹಾನಿ ಉಂಟಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಹಲವೆಡೆ ಪೈಪ್‍ನಿಂದ ನೀರು ಸೋರಿಕೆಯಾಗಿ ರಸ್ತೆಗೆ ನುಗ್ಗಿದ್ದು ಹಲವು ಪ್ರದೇಶಗಳಿಗೆ ಹಾನಿಯಾಗಿದೆ. ಭೂಮಿಯೊಳಗೆ ಬೃಹತ್ ಗಾತ್ರದ ಪೈಪ್ ಜೋಡಣೆ ಮಾಡಿದ್ದು, ನೀರು ಹರಿದ ರಭಸಕ್ಕೆ ಹಲವೆಡೆ ಭೂಮಿ ಕಂಪಿಸಿದ್ದು ಕೆಲ ಕಾಲ ಜನರು ಆತಂಕಗೊಂಡಿದ್ದರು.

    ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು. ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮಥ್ರ್ಯದ 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರ್ಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 261 ಕಿ.ಮೀ ನಂತರ ಲಿಫ್ಟ್ ಮೂಲಕ 12.338 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹಾಗೂ 287 ಕೆರೆಗಳ ಭರ್ತಿಗೆ ನೀರು ಹರಿಸುವ 23,251.66 ಕೋಟಿ ರೂ ವೆಚ್ಚದ ಬೃಹತ್ ಯೋಜನೆಯಾಗಿದೆ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

    ಆ.23 ರಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ (DK Shivakumar) ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಸಕಲೇಶಪುರ ತಾಲೂಕಿನ, ಹೆಬ್ಬನಹಳ್ಳಿ, ದೊಡ್ಡನಾಗರ, ಕಾಡುಮನೆ, ದೋಣಿಗಾಲ್ ಬಳಿ ತೆರಳಿ ಪವರ್ ಹೌಸ್ ಹಾಗೂ ಕಾಮಗಾರಿಯನ್ನು ವೀಕ್ಷಿಸಿದ್ದರು. 24 ಸಾವಿರ ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ 14 ಸಾವಿರ ಕೋಟಿ ಖರ್ಚಾಗಿದ್ದು, ಎತ್ತಿನಹೊಳೆ ಯೋಜನೆಯಿಂದ ಮೊದಲ ಹಂತವಾಗಿ ನೂರು ದಿನದಲ್ಲಿ ನೀರು ಲಿಫ್ಟ್ ಮಾಡಬೇಕೆಂದು ನಮ್ಮ ಅಧಿಕಾರಿಗಳಿಗೆ ಟೈಂ ಫಿಕ್ಸ್ ಮಾಡಿದ್ದರು. ಅದರಂತೆ ನಿನ್ನೆ ಸುಮಾರು ಆರು ಕಿಲೋಮೀಟರ್ ಉದ್ದದ ಪೈಪ್‍ಲೈನ್ ಮೂಲಕ ಕಾಡುಮನೆ ಚೆಕ್‍ಡ್ಯಾಂ ಐದರ ಪಂಪ್‍ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಮಲ್ಲಾಗದ್ದೆ, ಕಂಬರಡಿ, ದೇಖಲ ಗ್ರಾಮಗಳ ಬಳಿ ಹಾದುಹೋಗಿರುವ ಪೈಪ್‍ನಿಂದ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದ್ದು, ದೇಖಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಜೀಪೊಂದು ಗುಂಡಿಯೊಳಗೆ ಸಿಲುಕಿಕೊಂಡಿದೆ. ನಂತರ ಸ್ಥಳೀಯರು ಜೀಪನ್ನು ಮೇಲೆತ್ತಿದ್ದಾರೆ.

    ಭೂಮಿಯೊಳಗೆ ಜೋಡಣೆ ಮಾಡಿದ ಪೈಪ್‍ನಲ್ಲಿ ನೀರು ರಭಸವಾಗಿ ಹರಿದ ಪರಿಣಾಮ ಭೂಮಿ ಕಂಪಿಸಿದಂತಾಗಿದ್ದು, ದೇಖಲ ಗ್ರಾಮದ ಗ್ರಾಮಸ್ಥರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ಧಾರೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಮೊದಲು ಆಗಿರುವ ಆಸ್ತಿಪಾಸ್ತಿ ದುರಸ್ತಿ ಮಾಡಿ ಇಲ್ಲವಾದಲ್ಲಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಾತನಾಡಿದ ವಿಶ್ವೇಶ್ವರಯ್ಯ ಜಲನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಪೈಪ್ ಅಳವಡಿಸಿ ಐದರಿಂದ ಆರು ವರ್ಷ ಕಳೆದಿದ್ದು ಹಲವೆಡೆ ವೆಲ್ಡಿಂಗ್ ತುಕ್ಕು ಹಿಡಿದು ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ. ಹಾಗಾಗಿ ಸಮಸ್ಯೆಯಾಗಿದೆ, ಯಾರೂ ಆತಂಕಪಡಬೇಡಿ ಎಂದಿದ್ದಾರೆ.

    8 ಸಾವಿರ ಕೋಟಿಯಿಂದ ಆರಂಭಗೊಂಡ ಯೋಜನೆ ಇದೀಗ 24 ಸಾವಿರ ಕೋಟಿಗೆ ಪರಿಷ್ಕೃತಗೊಂಡಿದೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೋಳಿ, ಗೋವಿಂದಕಾರಜೋಳ ಭೇಟಿ ನೀಡಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ನೀರು ಹರಿಸುತ್ತೇವೆ ಎಂದಿದ್ದರು. ಆದರೂ ಹಲವು ಅಡತಡೆಗಳಿಂದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ.

  • ನಳಿನ್ ಕುಮಾರ್ ಕಟೀಲ್ ಫೋಟೋಗೆ ಮಸಿ

    ನಳಿನ್ ಕುಮಾರ್ ಕಟೀಲ್ ಫೋಟೋಗೆ ಮಸಿ

    ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ ಹಾಕಲಾದ ಬ್ಯಾನರ್ ಗೆ ಮಸಿ ಬಳಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ಕದ್ರಿ ಪಾರ್ಕ್ ಹಾಗೂ ಇತರ ಕಡೆ ಹಾಕಲಾದ ಬ್ಯಾನರ್ ನಲ್ಲಿ ಸಂಸದ ನಳಿನ್ ಚಿತ್ರಕ್ಕೆ ಮಸಿ ಬಳಿದು ಜೈ ನೇತ್ರಾವತಿ ಅಂತ ಬರೆದಿದ್ದಾರೆ.

    ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರ ಬಜೆಟ್‍ನಲ್ಲಿ 1,500 ಕೋಟಿ ಬಿಡುಗಡೆ ಮಾಡಿದೆ. ಇದು ಕರಾವಳಿಗರ ಕಣ್ಣು ಕೆಂಪಾಗಿಸಿದೆ. ಈ ಹಿಂದೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆಗೆ ಪ್ರಾರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಎತ್ತಿನ ಹೊಳೆ ಯೊಜನೆ ವಿರುದ್ಧದ ಹೋರಾಟದಲ್ಲಿ ಕೂಡ ಪಾಲ್ಗೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

    ಆದರೆ ಇದೀಗ ಅವರೇ ರಾಜ್ಯಾಧ್ಯಕ್ಷರಾಗಿರುವ ಬಿಜೆಪಿ ಸರ್ಕಾರದ ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದರೂ ನಳಿನ್ ಮೌನವಾಗಿದ್ದು, ಜಿಲ್ಲೆಯ ಪರಿಸರವಾದಿಗಳ ಸಹಿತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರ ಇಟ್ಟುಕೊಂಡು ಮಸಿ ಬಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಈ ರೀತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಮಸಿ ಬಳಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತೆ 1,500ಕೋಟಿ ಬಿಡುಗಡೆ: ಕಟೀಲ್ ದ್ವಿಪಾತ್ರದಲ್ಲಿ ಅಭಿನಯ

  • ಎತ್ತಿನಹೊಳೆ ಯೋಜನೆಗೆ ಮತ್ತೆ 1,500ಕೋಟಿ ಬಿಡುಗಡೆ: ಕಟೀಲ್ ದ್ವಿಪಾತ್ರದಲ್ಲಿ ಅಭಿನಯ

    ಎತ್ತಿನಹೊಳೆ ಯೋಜನೆಗೆ ಮತ್ತೆ 1,500ಕೋಟಿ ಬಿಡುಗಡೆ: ಕಟೀಲ್ ದ್ವಿಪಾತ್ರದಲ್ಲಿ ಅಭಿನಯ

    ಮಂಗಳೂರು: ಬಜೆಟ್‍ನಲ್ಲಿ ಎತ್ತಿನಹೊಳೆ ಯೋಜನೆಗೆ ಸರ್ಕಾರ 1,500 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಮೀಸಲಿರಿಸಿದೆ. ಇದನ್ನ ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ, ಮಂಗಳೂರು ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದ್ದಾರೆ.

    ವಿಪರ್ಯಾಸವೆಂದರೆ ಇದೇ ಯೋಜನೆಯನ್ನು ವಿರೋಧಿಸಿ ಕಳೆದ 5 ವರ್ಷಗಳ ಹಿಂದೆ ನಳಿನ್ ಕುಮಾರ್ ಕಟೀಲು ಬೃಹತ್ ಹೋರಾಟವನ್ನೇ ನಡೆಸಿದ್ದರು. ಕರಸೇವೆ ಮಾಡಿ ಯೋಜನೆಯನ್ನು ಒಡೆದು ಹಾಕೋದಾಗಿ ಗುಡುಗಿದ್ದರು. ಆದರೆ ಈಗ ನಳಿನ್ ಕುಮಾರ್ ಅದೇ ಯೋಜನೆಗೆ ಬೆಂಬಲ ನೀಡಿದ್ದು, ಎತ್ತಿನಹೊಳೆ ವಿರೋಧಿ ಹೋರಾಟಗಾರರ ಕಣ್ಣು ಕೆಂಪಾಗಿಸಿದೆ.

    ಬಯಲುಸೀಮೆಗೆ ನೀರುಣಿಸುವ ಎತ್ತಿನಹೊಳೆ ಯೋಜನೆಗೆ ಸಾಕಷ್ಟು ಜನರ ವಿರೋಧ ಇದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ 13 ಸಾವಿರ ಕೋಟಿಯನ್ನು ಈ ಯೋಜನೆಗೆ ಈಗಾಗಲೇ ಸುರಿದಿದೆ. ಬಯಲುಸೀಮೆಗೆ ಈ ಯೋಜನೆಯಿಂದ ನೀರು ಹೋಗಲ್ಲ ಅಂತ ತಜ್ಞರೇ ಅಭಿಪ್ರಾಯ ಮಂಡಿಸಿದ್ದಾರೆ. ಆದರೆ ಈಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಜೆಟ್ ನಲ್ಲಿ ಮತ್ತೆ ಒಂದೂವರೆ ಸಾವಿರ ಕೋಟಿ ಈ ಯೋಜನೆಗೆ ಮೀಸಲಿರಿಸಿದೆ. ಆದರೆ ವಿಷ್ಯ ಏನಂದ್ರೆ ಒಂದು ಕಾಲದ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ, ಈಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈಗ ಸರ್ಕಾರದ ಕ್ರಮವನ್ನು ಬೆಂಬಲಿಸಿದ್ದಾರೆ. ಎತ್ತಿನಹೊಳೆ ಯೋಜನೆಯ ಅಭಿವೃದ್ಧಿಗೆ ಸರ್ಕಾರ ಹಣ ನೀಡಿದೆ ಎಂದು ಸಮರ್ಥಿಸಿದ್ದಾರೆ. ಇದು ಕರಾವಳಿಯ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

    ಕಳೆದ ಐದು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಎತ್ತಿನ ಹೊಳೆ ಯೋಜನೆ ವಿರೋಧಿಸಿ ಪಾದಯಾತ್ರೆ ಮಾಡಿದ್ದರು. ಮಂಗಳೂರಿನಿಂದ ಆರಂಭವಾದ ಪಾದಯಾತ್ರೆಗೆ ಜನ ಪಕ್ಷಾತೀತವಾಗಿ ಬೆಂಬಲವನ್ನೂ ನೀಡಿದ್ರು. ಹಾಸನ ಜಿಲ್ಲೆ ಗಡಿಭಾಗದವರೆಗೆ ಪಾದಯಾತ್ರೆ ನಡೆಸಿದ್ದ ನಳಿನ್ ಕುಮಾರ್ ಕಟೀಲ್ ರನ್ನು ಆಗಿನ ಕಾಂಗ್ರೆಸ್ ಸರ್ಕಾರ ಬಂಧನ ಮಾಡಿತ್ತು. ಈ ವೇಳೆ ಸರ್ಕಾರದ ವಿರುದ್ಧ ಗುಡುಗಿದ್ದ ನಳಿನ್ ಕುಮಾರ್ ಕಟೀಲ್, ಅಯೋಧ್ಯೆಯ ಕರಸೇವೆ ರೀತಿ ಎತ್ತಿನಹೊಳೆ ಯೋಜನೆಯನ್ನೂ ಕರಸೇವೆ ಮಾಡಿ ಧ್ವಂಸ ಮಾಡೋದಾಗಿ ಹೇಳಿದ್ದರು. ಆದರೆ ಇಂದು ಮಾತ್ರ ಕಟೀಲ್ ಮಾತು ಬದಲಿಸಿದ್ದಾರೆ. ವಿರೋಧ ಮಾಡಿದ ಯೋಜನೆಗೆ ಬಹು ಪರಾಕ್ ಅಂದಿದ್ದಾರೆ. ಇದು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಸಿಟ್ಟಿಗೆ ಕಾರಣವಾಗಿದೆ. ಇದನ್ನೂ ಓದಿ: ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?

    ಎತ್ತಿನಹೊಳೆ ಯೋಜನೆಗೆ ಈಗಾಗಲೇ ಸರ್ಕಾರದ ಹದಿಮೂರುವರೆ ಸಾವಿರ ಕೋಟಿ ಹಣವನ್ನು ಸುರಿದಿದೆ. ಯೋಜನೆಯಿಂದ ಬಯಲುಸೀಮೆಗೆ ನೀರು ಹರಿಯಲ್ಲ ಎಂಬ ವಾದವನ್ನು ತಜ್ಞರು ಮಂಡಿಸಿದ್ದಾರೆ. ಇದರ ಹೊರತಾಗಿಯೂ ಸರ್ಕಾರ ಮಾತ್ರ ಯೋಜನೆಗೆ ಮತ್ತಷ್ಟು ಅನುದಾನ ನೀಡಿರೋದು ಅಕ್ರಮದ ಗುಮಾನಿ ಎದ್ದಿದೆ. ಸಂಸದ ಕಟೀಲ್ ಯೋಜನೆ ವಿಚಾರದಲ್ಲಿ ದ್ವಂದ್ವ ನಿಲುವು ತೋರಿಸಿದ್ದು, ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಅಲ್ಲದೆ ಯೋಜನೆ ಬಗ್ಗೆ ಹಸಿರು ಪೀಠದಲ್ಲಿ ಕೇಸ್ ನಡೆಯುತ್ತಿದ್ದರೂ ಸರ್ಕಾರ ಮತ್ತೆ ಹಣ ನೀಡಿರೋದು ವಿವಾದಕ್ಕೆ ಗ್ರಾಸವಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ – ಸಕಲೇಶಪುರ ಭೂ ಕುಸಿತಕ್ಕೆ ಎತ್ತಿನಹೊಳೆ ಯೋಜನೆಯ ಅಣೆಕಟ್ಟುಗಳೇ ಕಾರಣವೇ?

    ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ನಳಿನ್ ಕುಮಾರ್ ಕಟೀಲ್ ಗೆ ಒಂದಲ್ಲೊಂದು ವಿಚಾರ ಮುಳುವಾಗುತ್ತಿದೆ. ಎತ್ತಿನಹೊಳೆ ಯೋಜನೆ ವಿರೋಧ ಮಾಡಿದ್ದು ಮತಬೇಟೆಯ ಭಾಗನಾ ಅನ್ನೋದು ಸದ್ಯ ಕರಾವಳಿಯಲ್ಲಿ ನಡೆಯುತ್ತಿರುವ ಚರ್ಚೆಯ ವಿಷಯವಾಗಿದೆ.

  • ಕರಾವಳಿಗರಿಗೆ ಬಿಗ್ ಶಾಕ್- ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್

    ಕರಾವಳಿಗರಿಗೆ ಬಿಗ್ ಶಾಕ್- ಎತ್ತಿನಹೊಳೆ ಯೋಜನೆಗೆ ಗ್ರೀನ್ ಸಿಗ್ನಲ್

    ಬೆಂಗಳೂರು: ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ಷರತ್ತುಬದ್ಧ ಅನುಮತಿ ನೀಡಿ ಮಹತ್ವದ ಆದೇಶ ಹೊರಡಿಸಿದೆ.

    ಯೋಜನೆಯಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ ಅಂತಾ ಆರೋಪಿಸಿ ಪರಿಸರ ವಾದಿ ಕೆ.ಎನ್. ಸೋಮಶೇಖರ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥ ಪಡಿಸಿರುವ ಎನ್‍ಜಿಟಿ ಮುಂದಿನ ಆದೇಶದಲ್ಲಿ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದೆ.

    ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು ಅದನ್ನ ಮುಂದುವರೆಸಬಹುದು. ಆದ್ರೆ ಕೆಲ ಷರತ್ತು ಮೇರೆಗೆ ಕಾಮಗಾರಿ ಮುಂದುವರಿಸಲು ಯಾವುದೇ ತಕರಾರು ಇಲ್ಲ ಅಂತ ನ್ಯಾ. ಜಾವೇದ್ ರಹೀಮ್ ಮತ್ತು ನ್ಯಾ. ರಂಜನ್ ಚಟರ್ಜಿ ನೇತೃತ್ವದ ಪೀಠ ಹೇಳಿದೆ. ಆದ್ರೆ ಸದ್ಯದ ಆದೇಶದಲ್ಲಿ ಯಾವುದೇ ಷರತ್ತು ಮತ್ತು ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿಲ್ಲ. ಈ ಯೋಜನೆ ವಿರುದ್ಧ ಇನ್ನೂ ಎರಡು ಅರ್ಜಿಗಳು ಬಾಕಿ ಇದ್ದು ಪುರುಷೊತ್ತಮ್ ಚಿತ್ತಾಪುರ ಕುಡಿಯುವ ನೀರಿನ ವಿಚಾರವಾಗಿ ಹಾಗೂ ಕಿಶೋರ್ ಕುಮಾರ್ ಎಂಬುವರು ಯೋಜನೆಯಿಂದ ಜೀವ ವೈವಿಧ್ಯತೆಗೆ ದಕ್ಕೆಯಾಗುತ್ತದೆ ಅಂತ ಆರೋಪಿಸಿ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಗಳು ಇನ್ನು ವಿಚಾರಣೆ ಹಂತದಲ್ಲಿದೆ.