Tag: engine

  • ತುರ್ತು ಭೂಸ್ಪರ್ಶಿಸಿದ 2 ಗೋಫಸ್ಟ್ ವಿಮಾನ

    ತುರ್ತು ಭೂಸ್ಪರ್ಶಿಸಿದ 2 ಗೋಫಸ್ಟ್ ವಿಮಾನ

    ನವದೆಹಲಿ: ಗೋಫಸ್ಟ್‌ನ 2 ವಿಮಾನಗಳು ದೇಶದ ವಿವಿಧ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

    ಮುಂಬೈ- ಲೇಹ್‍ಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಇಂಜಿನ್ ದೋಷದಿಂದಾಗಿ ದೆಹಲಿಯಲ್ಲಿ ತುರ್ತು ಭೂಸ್ಪರ್ಶಿಸಿದೆ. ಮತ್ತೊಂದು ಘಟನೆಯಲ್ಲಿ ಶ್ರೀನಗರದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲೂ ಇಂಜಿನ್‍ನಲ್ಲಿ ತೊಂದರೆ ಉಂಟಾದ ಕಾರಣ ಶ್ರೀನಗರಲ್ಲೇ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಇದನ್ನೂ ಓದಿ: ಜನಾಕ್ರೋಶಕ್ಕೆ ಮಣಿದ ಕೇಂದ್ರ – ಅಕ್ಕಿ, ಮೊಸರು ಸೇರಿದಂತೆ 14 ವಸ್ತುಗಳ ಮೇಲೆ ಜಿಎಸ್‍ಟಿ ವಿನಾಯಿತಿ

    ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ವು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ತುರ್ತು ಭೂಸ್ಪರ್ಶ ಮಾಡಿದ ಈ ಎರಡೂ ವಿಮಾನಗಳು ಡಿಜಿಸಿಎಯಿಂದ ಅನುಮತಿ ಪಡೆದಾಗ ಮಾತ್ರ ಹಾರಾಟ ನಡೆಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯಿಂದಲೇ ಡಿಕೆಶಿ ಶಾಲೆಗೆ ಬಾಂಬ್ ಬೆದರಿಕೆ!

    Live Tv
    [brid partner=56869869 player=32851 video=960834 autoplay=true]

  • ಆಗಸದಲ್ಲೇ ಹೊತ್ತಿ ಉರಿದ ವಿಮಾನದ ಇಂಜಿನ್

    ಆಗಸದಲ್ಲೇ ಹೊತ್ತಿ ಉರಿದ ವಿಮಾನದ ಇಂಜಿನ್

    ವಾಷಿಂಗ್ಟನ್: ವಿಮಾನವೊಂದು ಹಾರಾಡುತ್ತಿರುವಾಗಲೇ ಇಂಜಿನ್ ಹೊತ್ತಿ ಉರಿದ ಭಯಾನಕ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಯುನೈಟೆಡ್ ಏರ್ ಲೈನ್ಸ್ ವಿಮಾನವು 231 ಮಂದಿ ಪ್ರಯಾಣಿಕರು ಮತ್ತು 10 ಜನ ಸಿಬ್ಬಂದಿಗಳೊಂದಿಗೆ ಡೆನ್ವರ್ ನಿಂದ ಹೊನಲುಲುಗೆ ಹೊರಟಿತ್ತು, ಮಾರ್ಗ ಮಧ್ಯದಲ್ಲಿ ಏಕಾಏಕಿ ವಿಮಾನದ ಇಂಜಿನ್‍ನಲ್ಲಿ ಬೆಂಕಿಯ ಕೆನ್ನಾಲಿಗೆ ಕಾಣಿಸಿಕೊಂಡಿದೆ. ಈ ದೃಶ್ಯವನ್ನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

    https://twitter.com/ThePlanetaryGuy/status/1363246229816291328

    ವಿಮಾನದ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡು, ನಡುಗಲು ಪ್ರಾರಂಭಿಸಿದಾಗ ತಕ್ಷಣ ಫೈಲಟ್ ತುರ್ತು ಭೂಸ್ಪರ್ಶ ಮಾಡಿ 241 ಜನರ ಪ್ರಾಣವನ್ನು ರಕ್ಷಿಸಿದ್ದಾರೆ.

    ಡೆನ್ವರ್ ನಿಂದ ಹೊನಲುಲುಗೆ ಹೊರಟಿದ್ದ ವಿಮಾನ ಯುಎ 328 ಏಫ್‍ನಲ್ಲಿ ಕಾಣಿಸಿಕೊಂಡ ಇಂಜಿನ್ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಯಾವುದೇ ಸಾವುನೋವುಗಳು ಸಂಭವಿಸದೆ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನಯಾನದ ಆಡಳಿತ ಮಂಡಳಿ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    ವಿಮಾನದ ಇಂಜಿನ್ ಹೊತ್ತಿ ಉರಿದ ಪರಿಣಾಮವಾಗಿ ಬಿಡಿಭಾಗಗಳು ಕಟ್ಟಡಗಳ ಮಧ್ಯೆ, ಮತ್ತು ಮೈದಾನಕ್ಕೆ ಬಿದ್ದಿದೆ. ವಿಮಾನದಲ್ಲಿ ಕಾಣಿಸಿಕೊಂಡ ದೋಷವನ್ನು ಪರೀಕ್ಷಿಸಲು ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ತಯಾರಿ ನಡೆಸಿದೆ.

  • ಪೆಟ್ರೋಲ್, ಡೀಸೆಲ್ ಬದಲು ನೀರು – ಬಂಕ್ ವಿರುದ್ಧ ಗ್ರಾಹಕರ ಆಕ್ರೋಶ

    ಪೆಟ್ರೋಲ್, ಡೀಸೆಲ್ ಬದಲು ನೀರು – ಬಂಕ್ ವಿರುದ್ಧ ಗ್ರಾಹಕರ ಆಕ್ರೋಶ

    ಯಾದಗಿರಿ: ಬಂಕ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲು ನೀರು ಹಾಕುತ್ತಿದ್ದು, ಡೀಸೆಲ್ ಹಾಕಿಸಿಕೊಂಡ ವಾಹನಗಳ ಇಂಜಿನ್ ಫುಲ್ ಬ್ಲಾಕ್ ಆಗಿ ಕೆಟ್ಟು ನಿಂತ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ನಾರಾಯಣಪುರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಬದಲಿಗೆ ನೀರು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿತ್ತು. ಸೋಮವಾರ ರಾತ್ರಿ ನಾರಾಯಣಪುರ ಗ್ರಾಮದ ಹನುಮಂತ ಎಂಬವರು ತಮ್ಮ ಟಾಟಾ ಏಸ್ ಗಾಡಿಗೆ ರಾತ್ರಿ ಡೀಸೆಲ್ ಹಾಕಿಸಿದ್ದರು, ವಾಹನ ಸ್ವಲ್ಪ ದೂರ ತೆರಳಿ ಇಂಜಿನ್ ಬ್ಲಾಕ್ ಆಗಿ ವಾಹನ ರಿಪೇರಿಗೆ ಬಂದಿತ್ತು.

    ಕೆಲ ಹೊತ್ತಿನ ಬಳಿಕ ಅದೇ ಬಂಕ್ ನಲ್ಲಿ ಡೀಸೆಲ್ ಹಾಕಿಸಿದ ಹನುಮಂತನ ಸ್ನೇಹಿತನ ಗಾಡಿಗೂ ಸಹ ಇದೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಹನುಮಂತ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಬಂಕ್ ಗೆ ತೆರಳಿ ಡೀಸೆಲ್ ಮತ್ತು ಪೆಟ್ರೋಲ್ ಪರೀಕ್ಷೆ ಮಾಡಿದಾಗ, ಅದರಲ್ಲಿ ನೀರು ಬೆರೆತ ಸತ್ಯ ಹೊರಬಿದ್ದಿದೆ.

    ಬಂಕ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರು, ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕ್ ಗೆ ಮಳೆಯ ನೀರು ಬೆರೆತ ಹಿನ್ನೆಲೆಯಲ್ಲಿ ಇಂಧನದೊಳಗೆ ನೀರು ಸೇರಿಕೊಂಡಿರುವ, ನೆಪ ಹೇಳಿ ಬಂಕ್ ಮಾಲೀಕರು ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.

  • ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಬೋಗಿಗಳನ್ನ ಬಿಟ್ಟು 10 ಕಿ.ಮೀ ಸಾಗಿದ ಎಂಜಿನ್

    ಹೈದರಾಬಾದ್: ರೈಲು ಎಂಜಿನ್ ತನ್ನ ಬೋಗಿಗಳಿಂದ ಬೇರ್ಪಟ್ಟು ಸುಮಾರು 10 ಕಿ.ಮೀ. ದೂರದವರೆಗೂ ಹೋಗಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಭುವನೇಶ್ವರ-ಸಿಕಂದರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ವಿಶಾಖ ಎಕ್ಸ್ ಪ್ರೆಸ್‍ಗೆ ಸೇರಿದ ಎಂಜಿನ್ ಇದಾಗಿದೆ. ಎಂಜಿನ್ ಮತ್ತು ಬೋಗಿಗಳ ನಡುವಿನ ರಾಡ್‍ಗಳು ಮುರಿದುಹೋಗಿದೆ. ಪರಿಣಾಮ ಅದು ನರಸಿಪಟ್ನಮ್ ಮತ್ತು ಟುನಿ ರೈಲ್ವೆ ನಿಲ್ದಾಣಗಳ ನಡುವೆ ಎಂಜಿನ್ ತನ್ನ ಬೋಗಿಯಿಂದ ಬೇರ್ಪಟ್ಟು ಮುಂದೆ ಹೋಗಿದೆ. ತಕ್ಷಣ ಈ ಘಟನೆ ಬಗ್ಗೆ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ರೈಲ್ವೆ ಅಧಿಕಾರಿಗಳು ತಂತ್ರಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಿಂದ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಇತರ ಕೆಲವು ರೈಲುಗಳು ತಡವಾಗಿದೆ ಹೋಗಿವೆ. ಆದರೆ ಇದರಿಂದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ರೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಂಜಿನ್ ರೈಲು ಬೋಗಿಗಳನ್ನು ಬಿಟ್ಟು ಚಲಿಸುತ್ತಿದ್ದುದ್ದನ್ನು ನೋಡಿ ಸಾರ್ವಜನಿಕರು ವಿಡಿಯೋ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಸದ್ಯಕ್ಕೆ ರೈಲ್ವೆ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.

  • ದ್ವಿಚಕ್ರ ವಾಹನದ ಎಂಜಿನ್ ಒಳಗೆ ಅವಿತಿದ್ದ ನಾಗರಹಾವು

    ದ್ವಿಚಕ್ರ ವಾಹನದ ಎಂಜಿನ್ ಒಳಗೆ ಅವಿತಿದ್ದ ನಾಗರಹಾವು

    ಬೆಂಗಳೂರು: ದ್ವಿಚಕ್ರ ವಾಹನದ ಎಂಜಿನ್ ಒಳಗೆ ನಾಗರಹಾವೊಂದು ಅವಿತು ಕುಳಿತ್ತಿದ್ದ ದೃಶ್ಯ ಕಂಡು ಬಂದಿದೆ.

    ನೆಲಮಂಗಲ ಪಟ್ಟಣದ ಗೋವಿಂದಪ್ಪ ಬಡಾವಣೆಯಲ್ಲಿ ಈ ದೃಶ್ಯ ಕಂಡುಬಂದಿದ್ದು, ವಾಹನದ ಎಂಜಿನ್ ಒಳಗೆ ನಾಗರಹಾವು ಅವಿತು ಕುಳಿತ್ತಿತ್ತು. ಈ ವೇಳೆ ವಾಹನದ ಮಾಲೀಕ ಮೋಹನ್ ತಮ್ಮ ಬೈಕ್ ಹತ್ತಲು ಮುಂದಾಗಿದ್ದಾರೆ.

    ಬೈಕ್ ಹತ್ತುವಾಗ ಮೋಹನ್ ನಾಗರಹಾವನ್ನು ಕಂಡು ಬೆಚ್ಚಿಬಿದಿದ್ದಾರೆ. ಹಾವನ್ನು ಕಂಡ ತಕ್ಷಣ ಉರಗ ರಕ್ಷಕ ಅರುಣ್ ರಾಜ್ ಅವರನ್ನು ಸಂಪರ್ಕಿಸಿದ್ದಾರೆ. ವಿಷಯ ತಿಳಿದ ಅರುಣ್ ರಾಜ್ ಕೂಡಲೇ ಸ್ಥಳಕ್ಕೆ ಆಗಮಿಸಿ ಎಂಜಿನ್ ನಲ್ಲಿ ಅಡಗಿದ್ದ ಹಾವನ್ನು ರಕ್ಷಿಸಿದ್ದಾರೆ.

    ನಾಗರಹಾವನ್ನು ರಕ್ಷಿಸುವ ವೇಳೆ ಸ್ಥಳೀಯರು ಅಲ್ಲಿಯೇ ನಿಂತುಕೊಂಡು ನೋಡುತ್ತಿದ್ದರು.

  • ಚಲಿಸುತ್ತಿದ್ದ ರೈಲಿನ ಇಂಜಿನ್ ಬಳಿ ಕಾಣಿಸಿಕೊಂಡ ಬೆಂಕಿ – ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ತಪ್ಪಿದ್ದ ಅನಾಹುತ

    ಚಲಿಸುತ್ತಿದ್ದ ರೈಲಿನ ಇಂಜಿನ್ ಬಳಿ ಕಾಣಿಸಿಕೊಂಡ ಬೆಂಕಿ – ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ತಪ್ಪಿದ್ದ ಅನಾಹುತ

    ಮಂಗಳೂರು: ಚಲಿಸುತ್ತಿದ್ದ ರೈಲಿನ ಇಂಜಿನ್ ಬಳಿ ಏಕಾಏಕಿ ಬೆಂಕಿ ಹತ್ತಿಕೊಂಡು ಉರಿದ ಘಟನೆ ಕರ್ನಾಟಕ- ಗೋವಾ ಗಡಿಭಾಗದಲ್ಲಿ ನಡೆದಿದೆ.

    ಇಂದು ಮುಂಜಾನೆ, ಮುಂಬೈಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಸೂಪರ್ ಎಕ್ಸ್ ಪ್ರೆಸ್ ರೈಲಿನ ಇಂಜಿನ್ ನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

    ಇಂಜಿನ್ ಕೆಳಭಾಗದಲ್ಲೇ ಬೆಂಕಿ ಕಾಣಿಸಿಕೊಂಡು ಆರಂಭದ ಪ್ಯಾಸೆಂಜರ್ ಬೋಗಿಯಲ್ಲಿ ಭಾರೀ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಪ್ರಯಾಣಿಕರು ರೈಲ್ವೇ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬೆಂಕಿ ಜೋರಾಗಿ ಉರಿಯುತ್ತಿದ್ರೂ ಬೆಂಕಿ ನಂದಿಸಲು ರೈಲಿನಲ್ಲಿ ಸಾಕಷ್ಟು ಉಪಕರಣಗಳು ಇರಲಿಲ್ಲ.

    ಇಂಜಿನ್ ಕೆಳಭಾಗದಲ್ಲೇ ಬೆಂಕಿ ಹತ್ತಿಕೊಂಡಿದ್ದರಿಂದ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗಲುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಸಕಾಲದಲ್ಲಿ ಪ್ರಯಾಣಿಕರೇ ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

    ಇತ್ತೀಚೆಗಷ್ಟೇ ಉಡುಪಿಯಲ್ಲಿ ರೈಲಿನ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಬೋಗಿ ಭಸ್ಮವಾಗಿತ್ತು. ಆದರೂ ರೈಲ್ವೇ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವಿಮಾನದ ಎಂಜಿನ್ ದೋಷ : ದೆಹಲಿಗೆ ಮರಳಿದ ರಾಹುಲ್ – ವಿಡಿಯೋ

    ವಿಮಾನದ ಎಂಜಿನ್ ದೋಷ : ದೆಹಲಿಗೆ ಮರಳಿದ ರಾಹುಲ್ – ವಿಡಿಯೋ

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವಿಮಾನದ ಎಂಜಿನ್‍ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿಗೆ ಮರಳಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಪಾಟ್ನಾಕ್ಕೆ ಬರುವಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಪರಿಣಾಮ ಸಭೆಗೆ ಬರುವುದು ತಡವಾಗುತ್ತದೆ. ಈ ಅನಾನುಕೂಲತೆಗಾಗಿ ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.

    ಟ್ವೀಟ್ ನಲ್ಲಿ ಏನಿದೆ?:
    ಪಾಟ್ನಾದಲ್ಲಿ ವಿಮಾನದ ಇಂಜಿನ್ ನಲ್ಲಿ ದೋಷ ಕಂಡುಬಂದಿದೆ. ಹೀಗಾಗಿ ನಾವು ದೆಹಲಿಗೆ ಮರಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಸಮಸ್ತಿಪುರ್ (ಬಿಹಾರ), ಬಾಲಸೋರ್ (ಒಡಿಶಾ) ಮತ್ತು ಸಂಗಮನರ್ (ಮಹಾರಾಷ್ಟ್ರ) ಪ್ರಚಾರ ಸಭೆಗೆ ಬರುವುದು ತಡವಾಗುತ್ತದೆ. ಈ ಅನಾನುಕೂಲತೆಗಾಗಿ ನಮ್ಮನ್ನು ಕ್ಷಮಿಸಿ ಎಂದು ಹೇಳಿ ವಿಮಾನ ಎಂಜಿನ್ ವಿಡಿಯೋವನ್ನು ಪ್ರಕಟಿಸಿದ್ದಾರೆ.

    ರಾಹುಲ್ ಟ್ವೀಟ್ ಮಾಡಿದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ತನಿಖೆ ಆರಂಭಿಸಿದೆ.

    ಕಳೆದ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಪ್ರಚಾರ ಮಾಡಲು ಬರುತ್ತಿದ್ದ ರಾಹುಲ್ ಗಾಂಧಿ ಅವರ ವಿಮಾನ ಈ ರೀತಿಯಲ್ಲೇ ತೊಂದರೆಗೀಡಾಗಿತ್ತು. ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು 40 ನಿಮಿಷ ವಿಮಾನ ಮೇಲೆ ಹಾರಿರಲಿಲ್ಲ.

  • ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

    ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

    ಬ್ಯಾಂಕಾಕ್: ಕಾರ್ ಎಂಜಿನ್ ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.

    ಕಾರಿನ ಚಾಲಕ ಟೀ ನಟ್ವಿಜಿತ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕಾರು ನಿಂತು ಹೋಗಿದೆ. ಆಗ ಕಾರಿಗೆ ಏನು ಸಮಸ್ಯೆಯಾಗಿರಬಹುದು ಎಂದು ಯೋಚಿಸುತ್ತಿದ್ದರು. ಆಗ ಕಾರಿನ ಬಾನೆಟ್ ನಲ್ಲಿ ಬೃಹತ್ ಆಕಾರದ ಹೆಬ್ಬಾವಿನ ಬಾಲ ಕಂಡು ಬಂದಿದ್ದು, ಅದನ್ನು ಜನ ನೋಡಿದ್ದಾರೆ.

    ನಟ್ವಿಜಿತ್ ತನ್ನ ಕಾರಿನ ಮುಂಭಾಗದ ಬಾನೆಟ್ ತೆರೆದು ನೋಡಿದಾಗ ಅದರಲ್ಲಿ ಹೆಬ್ಬಾವು ಮಲಗಿದ್ದನ್ನು ನೋಡಿದ್ದಾರೆ. ನಂತರ ಕೂಡಲೇ ಸ್ಥಳೀಯ ಪ್ರಾಣಿ ನಿರ್ವಹಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಪ್ರಾಣಿ ನಿರ್ವಹಣಾಧಿಕಾರಿ ಸ್ಥಳಕ್ಕೆ ಬಂದು ಬಾನೆಟ್ ತೆಗೆದು ನೋಡಿದಾಗ 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದೆ. ಬಳಿಕ ಪ್ರಾಣಿ ನಿರ್ವಹಣಾಕಾರರು ಅದನ್ನು ಒಂದು ಹ್ಯಾಂಡ್ಲಿಂಗ್ ಸ್ಟಿಕ್ ಹಾಕಿ ಎಂಜಿನ್  ನಿಂದ ಹೊರಗೆ ತೆಗೆದಿದ್ದಾರೆ ಈ ಎಲ್ಲಾ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

    ಎಂಜಿನ್ ನಲ್ಲಿ ಅವಿತು ಮಲಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಬಳಿಕ ಅದನ್ನು ಒಂದು ಚೀಲದಲ್ಲಿ ತುಂಬಿ ಕಾಡಿಗೆ ಬಿಡಲಾಗಿದೆ ಎಂದು ಪ್ರಾಣಿ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಮನೆಯಲ್ಲಿ ಇತ್ತೀಚಿಗೆ ಸಾಕಷ್ಟು ಕೋಳಿಗಳು ಒಂದೊಂದರಂತೆ ಕಾಣೆಯಾಗುತ್ತಿತ್ತು. ಬಹುಶಃ ಈ ಹಾವು ತಿಂದಿರಬಹುದು ಎಂದು ಕಾರ್ ಮಾಲೀಕರು ಆರೋಪಿಸಿದ್ದಾರೆ. ಆದರೆ ನಾನು ಹೆಬ್ಬಾವು ಇಲ್ಲಿರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಮಾಲೀಕ ಟೀ ಹೇಳಿದ್ದಾರೆ.

    ಭಾರೀ ಮಳೆಯಾದಾಗ ಮತ್ತು ಹವಾಮಾನವು ತಂಪಾಗಿರುವಾಗ ಹಾವುಗಳು ಬೆಚ್ಚಗಿನ ಸ್ಥಳಗಳನ್ನು ಹುಡುಕುತ್ತವೆ. ಅದೇ ರೀತಿ ಕಾರ್ ಎಂಜಿನ್ ನಲ್ಲಿ ಬಂದು ಮಲಗಿದೆ. ಆದರೆ ಜನರು ಕಾರನ್ನು ಚಲಾಯಿಸುವ ಮೊದಲು ಪರೀಕ್ಷಿಸಬೇಕು ಎಂದು ಪ್ರಾಣಿ ನಿರ್ವಹಣಾಧಿಕಾರಿ ಹೇಳಿದ್ದಾರೆ.

  • ಇಂಜಿನ್ ಇಲ್ಲದೇ 12 ಕಿಮೀ ಚಲಿಸಿದ 22 ಬೋಗಿಯ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌

    ಇಂಜಿನ್ ಇಲ್ಲದೇ 12 ಕಿಮೀ ಚಲಿಸಿದ 22 ಬೋಗಿಯ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌

    ಭುವನೇಶ್ವರ್: ರೈಲ್ವೇ ನೌಕರರ ನಿರ್ಲಕ್ಷ್ಯದಿಂದಾಗಿ 22 ಬೋಗಿಯುಳ್ಳ ಅಹಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲ್ವೆ ಇಂಜಿನ್ ಇಲ್ಲದೇ ಸುಮಾರು 12 ಕಿ.ಮೀ. ಚಲಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಶನಿವಾರ ರಾತ್ರಿ 10.45 ನಿಮಿಷಕ್ಕೆ ಓರಿಸ್ಸಾ ರಾಜ್ಯದ ಟಿಟಲಗಢ ನಿಲ್ದಾಣಕ್ಕೆ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ಬಂದು ನಿಂತಿದೆ. ಈ ವೇಳೆ ರೈಲ್ವೆಯ ಇಂಜಿನ್ ಬದಲಾವಣೆ ಮಾಡಲಾಗುತ್ತಿತ್ತು. ಇಂಜಿನ್ ರೈಲಿನಿಂದ ಬೇರೆಯಾಗುತ್ತಿದ್ದಂತೆ ಚಲಿಸಲಾರಂಭಿಸಿದೆ. ನೋಡ ನೋಡುತ್ತಿದ್ದಂತೆ ರೈಲಿನ ವೇಗ ಹೆಚ್ಚಾಗಿದ್ದು, ನಿಲ್ದಾಣದಿಂದ ಬೋಗಿಗಳು ಚಲಿಸಿವೆ. ಬರೋಬ್ಬರಿ 12.35 ಕಿ.ಮೀ ಚಲಿಸಿದ ನಂತರ ಕೇಸಿಂಗ್ ಸ್ಟೇಶನ್ ನಲ್ಲಿ ಎಲ್ಲ ಬೋಗಿಗಳನ್ನು ನಿಲ್ಲಿಸಲಾಗಿದೆ.

    ಇಂಜಿನ್ ಇಲ್ಲದೇ ರೈಲು ಚಲಿಸುತ್ತಿರುವಾಗ ಎದುರಿನಿಂದ ಯಾವುದೇ ರೈಲುಗಳು ಬಂದಿಲ್ಲ. ಹೀಗಾಗಿ ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೇಸಿಂಗ್ ಸ್ಟೇಶನ್ ನಲ್ಲಿ ನಿಂತ ರೈಲಿಗೆ ಇಂಜಿನ್ ಜೋಡಿಸಿ ರಿವರ್ಸ್ ಟಿಟಲಗಢ ನಿಲ್ದಾಣಕ್ಕೆ ತಂದು ನಿಲ್ಲಿಸಲಾಗಿದೆ. ರೈಲು ಇಂಜಿನ್ ಇಲ್ಲದೇ ಚಲಿಸುವುದನ್ನು ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

    ಇಂಜಿನ್ ಬೇರ್ಪಡೆ ಹೇಗೆ ಆಗುತ್ತೆ: ನಿಲ್ದಾಣದಲ್ಲಿ ಇಂಜಿನ್ ಬೇರ್ಪಡೆ ಮಾಡುವ ಮುಂಚೆ ಬೋಗಿಯ ಗಾಲಿಗಳು ಚಲಿಸದಂತೆ ಸ್ಕಿಡ್ ಇರಿಸಲಾಗುತ್ತದೆ. ಇಂಜಿನ್ ಬೇರ್ಪಡೆಯಾಗುತ್ತಿದ್ದಂತೆ ಹಿಮ್ಮುಖ ಒತ್ತಡದಿಂದಾಗಿ ಬೋಗಿಗಳ ಚಕ್ರಗಳಲ್ಲಿ ಚಲನ ಶಕ್ತಿ ಉಂಟಾಗುತ್ತದೆ. ಹೀಗಾಗಿಯೇ ಬೋಗಿಗಳ ಚಕ್ರಕ್ಕೆ ಕಬ್ಬಿಣದ ಸ್ಕಿಡ್ ಇರಿಸಲಾಗುತ್ತದೆ. ಅಹಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲಿನ ಇಂಜಿನ್ ಬೇರ್ಪಡಿಸುವಾಗ ಸ್ಕಿಡ್ ಇಡಲಾಗಿತ್ತೋ ಅಥವಾ ಸರಿಯಾಗಿ ಇರಿಸಿಲ್ಲವೋ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

    ಇದು ರೈಲ್ವೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಡೆದಂತಹ ಘಟನೆ. ಒಂದು ವೇಳೆ ಇಂಜಿನ್ ಇಲ್ಲದೇ ಬೋಗಿಗಳು ಚಲಿಸುತ್ತಿರುವಾಗ ವಿರುದ್ಧ ದಿಕ್ಕಿನಲ್ಲಿ ರೈಲು ಬಂದಿದ್ದರೆ ದೊಡ್ಡ ಅಪಘಾತವಾಗುವ ಸಾಧ್ಯತೆಗಳಿದ್ದವು ಅಂತಾ ಪ್ರಯಾಣಿಕ ಮುಖೇಶ್ ಶರ್ಮಾ ಹೇಳಿದ್ದಾರೆ.

    ಘಟನೆಯ ಬಳಿಕ ತನಿಖೆ ನಡೆಸಲು ಆದೇಶಿಸಲಾಗಿದೆ. ಈ ಸಂಬಂಧ ಇಬ್ಬರು ಲೋಕೋಪೈಲಟ್, ಮೂವರು ಕ್ಯಾರೇಜ್ ದುರಸ್ತಿ ಸಿಬ್ಬಂದಿ ಮತ್ತು ಇಬ್ಬರು ಡಿ ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿದೆ ಎಂದು ಈಸ್ಟ್ ಕೋಸ್ಟ್ ರೈಲ್ವೇ ಜನರಲ್ ಮ್ಯಾನೇಜರ್ ಉಮೇಶ್ ಸಿಂಗ್ ತಿಳಿಸಿದ್ದಾರೆ.

    https://youtu.be/pK1wX3AasRo

  • ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

    ಕಲಬುರಗಿ: ರೈಲ್ವೇ ಎಂಜಿನ್ ಪ್ಲಾಟ್‍ಫಾರ್ಮ್ ಗೋಡೆಗೆ ತಗುಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಇಂದು ಮುಂಜಾನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಸೊಲ್ಲಾಪುರದಿಂದ ವಾಡಿ ಮಾರ್ಗವಾಗಿ ಗುಂತಕಲ್ ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಪ್ಲಾಟ್‍ಫಾರ್ಮ ಗೋಡೆಗೆ ತಗುಲಿದೆ. ಹೀಗಾಗಿ ಗೋಡೆ ಕಲ್ಲುಗಳು ಹಳಿ ಮೇಲೆ ಬಂದು ಬಿದ್ದಿವೆ. ಜೊತೆಗೆ ದೊಡ್ಡ ಸದ್ದು ಕೂಡಾ ಬಂದಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಜಿಗದಿದ್ದಾರೆ.

    ಪ್ಲಾಟ್‍ಫಾರ್ಮ್ ಗೋಡೆಯ ಹೊರಚಾಚಿಕೊಂಡ ಕಲ್ಲು ಎಂಜಿನ್ ಗೆ ತಗುಲಿದೆ. ವಾಡಿ ಪ್ಲಾಟ್‍ಫಾರ್ಮ್ ಹಳೆಯದಾಗಿದ್ದು, ಹೊಸ ಮಾದರಿಯ ರೈಲು ಎಂಜಿನ್ ಇಂದು ಬಂದಿದ್ದರಿಂದ ಈ ಘಟನೆ ನಡೆದಿದೆ ಅಂತ ಹೇಳಲಾಗಿದೆ. ಘಟನೆ ನಂತರ ಪ್ಲಾಟ್‍ಫಾರ್ಮ್ ಸರಿಗೊಳಿಸಿ ರೈಲು ಹೋಗಲು ಗ್ಯಾಂಗ್ ಮನ್ ಗಳು ಅವಕಾಶ ಮಾಡಿಕೊಟ್ಟಿದ್ದಾರೆ.