Tag: Encounters

  • ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ

    ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ

    ನವದೆಹಲಿ: ಹೈದರಾಬಾದ್ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ದೇಶದಲ್ಲಿ ಖುಷಿ ವ್ಯಕ್ತವಾಗಿದೆ. ಪೊಲೀಸರ ಕಾರ್ಯಕ್ಕೆ ಭಾರೀ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಈ ಮಧ್ಯೆ ಕೆಲವರು ಎನ್‍ಕೌಂಟರ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಕೂಡ ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

    ಶಾದ್‍ನಗರದ ಚಟಾನ್‍ಪಲ್ಲಿ ಬ್ರಿಡ್ಜ್ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ

    ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಅತ್ಯಾಚಾರವು ಘೋರ ಅಪರಾಧ. ಇಂತಹ ಪ್ರಕರಣಗಳು ಕಾನೂನಿನ ನಿಬಂಧನೆಗಳ ಅಡಿಯಲ್ಲೇ ಇತ್ಯರ್ಥವಾಗಬೇಕು. ಈ ದುಷ್ಕೃತ್ಯದ ಆರೋಪಿಗಳ ಬಗ್ಗೆ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ಎನ್‍ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕವಾಗಿದೆ. ತ್ವರಿತ ನ್ಯಾಯದ ಪ್ರಚೋದನೆಯನ್ನು ನಾನು ಅರ್ಥಮಾಡಿಕೊಂಡಿದ್ದರೂ, ಇದು ಸರಿಯಾದ ಮಾರ್ಗವಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತೆಲಂಗಾಣ ಎನ್‍ಕೌಂಟರ್: ಕೇಜ್ರಿವಾಲ್, ಶಶಿ ತರೂರ್, ಮನೇಕಾ ಗಾಂಧಿ ಅಪಸ್ವರ

    ಕಾರ್ತಿ ಚಿದಂಬರಂ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರಿಗಳನ್ನು ಅಷ್ಟೇ ಅಲ್ಲ ಭ್ರಷ್ಟ ರಾಜಕಾರಣಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

    ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಬಾಳೆ ಹಣ್ಣು ಫೋಟೋ ಟ್ವೀಟ್ ಮಾಡಿ, ಬನಾನಾ ರಿಪಬ್ಲಿಕ್‌ ಆಗುತ್ತಿರುವುದಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಉನ್ನಾವೋ ಕೇಸ್, ಹೈದರಾಬಾದ್ ಭಯಾನಕ ಹಾಗೂ ಎನ್‍ಕೌಂಟರ್ ಎಂದು ಹ್ಯಾಷ್ ಟ್ಯಾಗ್ ಹಾಕಿಕೊಂಡಿದ್ದಾರೆ. ಅವರ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗಿದೆ.

  • ಯುಪಿ ಪೊಲೀಸರಿಂದ ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್, ಮೂವರ ಹತ್ಯೆ

    ಯುಪಿ ಪೊಲೀಸರಿಂದ ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್, ಮೂವರ ಹತ್ಯೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ನಿಶ್ಯಬ್ಧವಾಗಿದ್ದ ಪೊಲೀಸರ ಬಂದೂಕುಗಳು ಸದ್ದು ಮಾಡಿದ್ದು, ಒಂದೇ ತಿಂಗಳಲ್ಲಿ 30 ಎನ್‍ಕೌಂಟರ್ ನಡೆದಿವೆ.

    ವಿವಿಧ ಪ್ರಕರಣಗಳ ಬೇಕಾಗಿದ್ದ ಆರೋಪಿಗಳ ಮೇಲೆ ಜೂನ್ ತಿಂಗಳಲ್ಲಿಯೇ 30 ಎನ್‍ಕೌಂಟರ್ ನಡೆಸಲಾಗಿದೆ. ಇದರಲ್ಲಿ 15 ಎನ್‍ಕಂಟರ್ ಗಳು ಕಳೆದ ನಾಲ್ಕು ದಿನಗಳಲ್ಲಿ ನಡೆದಿದ್ದು, ಮೂವರು ಹತ್ಯೆಯಾಗಿದ್ದಾರೆ. ಉಳಿದಂತೆ 12ಕ್ಕೂ ಹೆಚ್ಚು ಆರೋಪಿಗಳನ್ನು ಗಾಯಗೊಂಡಿದ್ದು, ಇಬ್ಬರು ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 77 ಆರೋಪಿಗಳು ಎನ್‍ಕೌಂಟರ್ ಗೆ ಬಲಿಯಾಗಿದ್ದಾರೆ. ಅಷ್ಟೇ ಅಲ್ಲದೆ 1,100 ಜನರು ಗಾಯಗೊಂಡಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರವು ಕಳೆದ ಮಾರ್ಚ್ ಗೆ ಎರಡು ವರ್ಷ ಪೂರೈಸಿತ್ತು. ಈ ಹಿನ್ನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆದಿತ್ಯನಾಥ್ ಅವರು, ನಮ್ಮ ಅಧಿಕಾರವಧಿಯಲ್ಲಿ 3,500ಕ್ಕೂ ಹೆಚ್ಚು ಎನ್‍ಕೌಂಟರ್ ಮಾಡಲಾಗಿದೆ. ಈ ಮೂಲಕ ಎಂಟು ಸಾವಿರ ಆರೋಪಿಗಳನ್ನು ಬಂಧಿಸಲಾಗಿದ್ದು, ಒಂದು ಸಾವಿರ ಕ್ರಿಮಿನಲ್‍ಗಳು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು.

    ಕ್ರಿಮಿನಲ್‍ಗಳ ಬಂಧನ ಹಾಗೂ ಎನ್‍ಕೌಂಟರ್ ಪ್ರಕರಣಗಳು ದಿಢೀರ್ ಹೆಚ್ಚಾಗಿವೆ ಎಂಬ ಆರೋಪವನ್ನು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ.ರಾಮಶಾಸ್ತ್ರಿ ತಳ್ಳಿಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಎನ್‍ಕೌಂಟರ್ ಗಳು ಯೋಜಿತವಾಗಿದ್ದಲ್ಲ. ಆರೋಪಿಗಳು ಬಂಧನವನ್ನು ವಿರೋಧಿಸುತ್ತಾರೆ. ಈ ವೇಳೆ ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಮುಂಜಾಗ್ರತಾ ಕ್ರಮವಾಗಿ ಬಲ ಪ್ರಯೋಗ (ಎನ್‍ಕೌಂಟರ್) ಮಾಡುವ ಅವಕಾಶವಿದೆ. ರಾಜ್ಯದಲ್ಲಿ ಏಕಾಏಕಿ ಎನ್‍ಕೌಂಟರ್ ಗಳು ಹೆಚ್ಚಾಗಿವೆ ಎಂಬ ಆರೋಪಕ್ಕೆ ಸೂಕ್ತ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ.

    ಬರಾಬಂಕಿ ಪ್ರದೇಶದಲ್ಲಿ ಇಬ್ಬರು ಆರೋಪಿಗಳು ತಮ್ಮ ಬಂಧನ ವಿರೋಧಿಸಿ, ಪೊಲೀಸರು ನಿರ್ಮಿಸಿದ್ದ ತಡೆಗೋಡೆ ಹಾರಿದ್ದರು. ಬಳಿಕ ಆರೋಪಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಹೀಗಾಗಿ ಆ ಇಬ್ಬರು ಆರೋಪಿಗಳು ಎನ್‍ಕೌಂಟರ್ ಗೆ ಬಲಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಜುಬೆರ್ ಹಾಗೂ ಜೋಮಸ್ ಎನ್‍ಕೌಂಟರ್ ಗೆ ಬಲಿಯಾದ ಆರೋಪಿಗಳು. ಜುಬೆರ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 50ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ದಾಖಲಾಗಿವೆ. ಜುಬೆರ್ ಸುಳಿವು ನೀಡಿದವರಿಗೆ 75 ಸಾವಿರ ರೂ. ಘೋಷಣೆ ಮಾಡಲಾಗಿತ್ತು. ಜೋಮನ್ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ 45ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು. ಈತನ ಸುಳಿವು ನೀಡಿದವರಿಗೆ 25 ಸಾವಿರ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.