Tag: ellidde illitanaka

  • ಎಲ್ಲಿದ್ದೆ ಇಲ್ಲಿತನಕ: ಸೃಜನ್ ಲೋಕೇಶ್ ಮೋಡಿಗೆ ಮರುಳಾದ ಪ್ರೇಕ್ಷಕರು!

    ಎಲ್ಲಿದ್ದೆ ಇಲ್ಲಿತನಕ: ಸೃಜನ್ ಲೋಕೇಶ್ ಮೋಡಿಗೆ ಮರುಳಾದ ಪ್ರೇಕ್ಷಕರು!

    ಬೆಂಗಳೂರು: ಮಜಾ ಟಾಕೀಸ್ ಎಂಬ ಕಿರುತೆರೆ ಶೋ ಮೂಲಕ ಪ್ರೇಕ್ಷಕರೆಲ್ಲರಿಗೂ ಮಸ್ತ್ ಮಜಾ ನೀಡುತ್ತಾ, ಆ ಮೂಲಕವೇ ಟಾಕಿಂಗ್ ಸ್ಟಾರ್ ಎಂಬ ಬಿರುದನ್ನೂ ಪಡೆದುಕೊಂಡಿರುವವರು ಸೃಜನ್ ಲೋಕೇಶ್. ಅವರೊಂದು ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆಂದ ಮೇಲೆ ಸಹಜವಾಗಿಯೇ ಜನ ಅದರತ್ತ ಕುತೂಹಲಗೊಳ್ಳುತ್ತಾರೆ. ಕಿರುತೆರೆ ಲೋಕದಲ್ಲಿ ಅವರು ಸೃಷ್ಟಿಸಿದ್ದ ಯಶಸ್ಸಿನ ಪ್ರಭೆ ಮತ್ತು ನಿರ್ದೇಶಕ ತೇಜಸ್ವಿಯವರು ಅದ್ಭುತವಾದ ಕಥೆಯೊಂದಿಗೆ ದೃಶ್ಯ ಕಟ್ಟಿದ ರೀತಿಗೆ ಪ್ರೇಕ್ಷಕರು ಮರುಳಾಗಿದ್ದಾರೆ.

    ಪ್ರೇಕ್ಷಕರು ಯಾವ್ಯಾವ ಉದ್ದೇಶವಿಟ್ಟುಕೊಂಡು ಸಿನಿಮಾ ನೋಡಲು ಬರುತ್ತಾರೆ? ಅವರಿಗೆ ನಿಜಕ್ಕೂ ಬೇಕಾಗಿರೋ ಕಂಟೆಂಟ್ ಎಂಥಾದ್ದೆಂಬುದರ ಬಗ್ಗೆ ಕ್ಲಾರಿಟಿ ಇರುವ ನಿರ್ದೇಶಕ ಗೆಲ್ಲೋದರಲ್ಲಿ ಯಾವ ಸಂದೇಹವೂ ಇಲ್ಲ. ದಶಕಗಳಿಂದೀಚೆಗೆ ಕಿರುತೆರೆ ಪ್ರೇಕ್ಷಕರ ನಾಡಿ ಮಿಡಿತವನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಂಡು ಆ ಬಲದಿಂದಲೇ ಗೆಲುವು ಕಂಡಿದ್ದವರು ತೇಜಸ್ವಿ. ಅದೇ ರೀತಿ ಅವರು ಸಿನಿಮಾ ಪ್ರೇಕ್ಷಕರನ್ನೂ ಅರ್ಥ ಮಾಡಿಕೊಂಡಿದ್ದಾರೆ. ಅದಿಲ್ಲದೇ ಹೋಗಿದ್ದಿದ್ದರೆ ಖಂಡಿತಾ ಎಲ್ಲಿದ್ದೆ ಇಲ್ಲಿತನಕ ಈ ಪಾಟಿ ಯಶಸ್ವಿ ಪ್ರದರ್ಶನದೊಂದಿಗೆ ಮುಂದುವರೆಯೋದು ಸಾಧ್ಯವಾಗುತ್ತಲೇ ಇರಲಿಲ್ಲ.

    ಕೌಟುಂಬಿಕ ಪ್ರೇಕ್ಷಕರನ್ನು ಸೆಳೆಯೋದು ಯಾವುದೇ ಚಿತ್ರದ ಯಶಸ್ವಿ ಫಾರ್ಮುಲಾ. ಆರಂಭಿಕ ಹಂತದಿಂದಲೇ ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ಸೃಜಾ ಮತ್ತು ಹರಿಪ್ರಿಯಾ ಜೋಡಿಯನ್ನು ಕಣ್ತುಂಬಿಕೊಂಡಿದ್ದರು. ಮೊದಲ ದಿನವೇ ಪ್ರತೀ ಪ್ರೇಕ್ಷಕರನ್ನೂ ಥ್ರಿಲ್ ಆಗಿಸಿದ್ದ ಈ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯಗಳೇ ಊರು ತುಂಬಾ ಹರಡಿಕೊಂಡಿದ್ದವು. ಅದಕ್ಕೆ ಸರಿಯಾಗಿ ಬೆನ್ನು ಬೆನ್ನಿಗೆ ದಸರಾ ರಜೆ ಬಂತಲ್ಲಾ? ಅದು ಪ್ರತೀ ಪ್ರೇಕ್ಷಕರ ಪಾಲಿಗೂ ಎಲ್ಲಿದ್ದೆ ಇಲ್ಲಿತನಕ ಚಿತ್ರ ನಿಜಕ್ಕೂ ಹಬ್ಬವಾಗಿಸಿದೆ. ಭರ್ಜರಿ ಮನೋರಂಜನೆ, ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಯೊಂದಿಗೆ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭರ್ಜರಿ ಗೆಲುವು ಪಡೆದುಕೊಂಡು ಮುನ್ನುಗ್ಗುತ್ತಿದೆ.

  • ಎಲ್ಲಿದ್ದೆ ಇಲ್ಲಿತನಕ: ರೊಮ್ಯಾಂಟಿಕ್ ಮೂಡಿಗೆ ಜಾರಿದ ಹರಿಪ್ರಿಯಾ!

    ಎಲ್ಲಿದ್ದೆ ಇಲ್ಲಿತನಕ: ರೊಮ್ಯಾಂಟಿಕ್ ಮೂಡಿಗೆ ಜಾರಿದ ಹರಿಪ್ರಿಯಾ!

    ಬೆಂಗಳೂರು: ನಟಿ ಹರಿಪ್ರಿಯಾ ಎಂಬ ಹೆಸರು ಕೇಳಿದರೇನೇ ಭಿನ್ನ ಬಗೆಯ ಪಾತ್ರಗಳೇ ಪ್ರೇಕ್ಷಕರ ಕಣ್ಮುಂದೆ ಸುಳಿಯಲಾರಂಭಿಸುತ್ತವೆ. ಇಮೇಜಿನಾಚೆಗೆ ಓರ್ವ ಪರಿಪೂರ್ಣ ನಟಿಯಾಗಿ ಥರ ಥರದ ಪಾತ್ರಗಳನ್ನು ನಿರ್ವಹಿಸಿರೋ ಹರಿಪ್ರಿಯಾ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಮೂಲಕ ಮೊದಲ ಬಾರಿ ಸೃಜನ್ ಲೋಕೇಶ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡ ಈವರೆಗೂ ಯಾವ ಸುಳಿವೂ ಸಿಗದಂತೆ ಎಚ್ಚರ ವಹಿಸುತ್ತಲೇ ಸಾಗಿ ಬಂದಿದೆ. ಹರಿಪ್ರಿಯಾ ಇದುವರೆಗಿನ ಸಿನಿಮಾಗಳಲ್ಲಿ ಆರಿಸಿಕೊಂಡಿರೋ ಪಾತ್ರಗಳ ಪರಿಚಯವಿರುವ ಪ್ರತಿಯೊಬ್ಬರಿಗೂ ಕೂಡಾ ಈ ಸಿನಿಮಾದಲ್ಲಿಯೂ ಅವರ ಪಾತ್ರ ವಿಶೇಷವಾಗಿರಲಿದೆಯೆಂಬ ನಂಬಿಕೆಯಿದೆ.

    ಇದು ಸೃಜನ್ ಮತ್ತು ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿರೋ ಮೊದಲ ಚಿತ್ರ. ಯಾವುದೇ ಸಿನಿಮಾವಾದರೂ ಹಾಡುಗಳ ಮುಲಕವೇ ಪ್ರೇಕ್ಷಕರು ಅದರತ್ತ ಆಕರ್ಷಿತರಾಗೋದು ಸಾಮಾನ್ಯ ವಿದ್ಯಮಾನ. ಆದರೆ ಅದರಲ್ಲಿ ಯಶ ಕಾಣೋದು ಸಾಮಾನ್ಯ ಸಂಗತಿಯೇನಲ್ಲ. ಎಲ್ಲಿದ್ದೆ ಇಲ್ಲಿತನಕ ಚಿತ್ರ ಅದರಲ್ಲಿ ಯಶ ಕಂಡಿದೆ. ಈ ಹಾಡುಗಳ ಮೂಲಕವೇ ಹರಿಪ್ರಿಯಾ ಮತ್ತು ಸೃಜನ್ ಜೋಡಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಪ್ರೇಕ್ಷಕರನ್ನು ಆವರಿಸಿಕೊಂಡಿದೆ. ಅದರಲ್ಲಿಯೂ ಹರಿಪ್ರಿಯಾ ಕಾಣಿಸಿಕೊಂಡಿರೋ ರೀತಿಯಂತೂ ಅವರ ಅಭಿಮಾನಿಗಳೇ ಖುಷಿಗೊಳ್ಳುವಂತೆ ಮಾಡಿದೆ.

    ಹಾಡುಗಳಲ್ಲಿ ಹರಿಪ್ರಿಯಾ ರೊಮ್ಯಾಂಟಿಕ್ ಮೂಡಲ್ಲಿ ಕಾಣಿಸಿಕೊಂಡಿದ್ದಾರಲ್ಲಾ? ಅವರು ಇಡೀ ಸಿನಿಮಾದಲ್ಲಿ ಅದೇ ರೀತಿ ಕಾಣಿಸಿಕೊಂಡಿದ್ದಾರಾ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಬಗ್ಗೆ ಚಿತ್ರತಂಡ ಯಾವುದನ್ನೂ ನಿಖರವಾಗಿ ಹೇಳದೆ ಕುತೂಹಲ ಕಾಯ್ದಿಟ್ಟುಕೊಂಡಿದೆ. ಒಂದು ಮೂಲದ ಪ್ರಕಾರ ಈ ಸಿನಿಮಾದಲ್ಲಿ ಹರಿಪ್ರಿಯಾ ಪಾತ್ರಕ್ಕೆ ಬೇರೆ ಶೇಡುಗಳೂ ಇವೆಯಂತೆ. ಅದೇನೆಂಬುದು ನಿಜವಾದ ಸರ್‍ಪ್ರೈಸ್. ಅದೆಲ್ಲವೂ ಈ ವಾರವೇ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆ. ಒಟ್ಟಾರೆಯಾಗಿ ಈ ಮೂಲಕ ಸೃಜನ್ ಮತ್ತು ಹರಿಪ್ರಿಯಾ ಜೋಡಿ ಸಾರ್ವಕಾಲಿಕ ಮೋಡಿ ಮಾಡೋ ಲಕ್ಷಣಗಳೇ ಢಾಳಾಗಿವೆ.

  • ಎಲ್ಲಿದ್ದೆ ಇಲ್ಲಿತನಕ: ಕೊಳ್ಳೇಗಾಲದಿಂದ ಬಂದ ತೇಜಸ್ವಿಯ ಬಂಡವಾಳವಾಗಿದ್ದದ್ದು ಬರವಣಿಗೆ ಮಾತ್ರ!

    ಎಲ್ಲಿದ್ದೆ ಇಲ್ಲಿತನಕ: ಕೊಳ್ಳೇಗಾಲದಿಂದ ಬಂದ ತೇಜಸ್ವಿಯ ಬಂಡವಾಳವಾಗಿದ್ದದ್ದು ಬರವಣಿಗೆ ಮಾತ್ರ!

    ಬೆಂಗಳೂರು: ಸುಮ್ಮನೆ ಒಂದು ಸಲ ಕನ್ನಡ ಚಿತ್ರರಂಗದತ್ತ ಕಣ್ಣು ಹಾಯಿಸಿ ಅಲ್ಲಿ ಪ್ರಸಿದ್ಧಿ ಪಡೆದುಕೊಂಡವರು, ಗೆದ್ದವರ ಹಿನ್ನೆಲೆಗಳನ್ನೊಮ್ಮೆ ಕೆದಕಿದರೆ ಯಾವ್ಯಾವುದೋ ದಿಕ್ಕುಗಳಿಂದ ಮನಮಿಡಿಯುವ, ಅಚ್ಚರಿ ಹುಟ್ಟಿಸುವ ಕಥೆಗಳು ತೆರೆದುಕೊಳ್ಳುತ್ತವೆ. ಯಾವುದೋ ಹಳ್ಳಿ ಮೂಲೆಯಿಂದ ಬಂದು ಎಲ್ಲೋ ಕಳೆದು ಹೋಗಬೇಕಿದ್ದವರನ್ನೂ ಸಿನಿಮಾ ಮಾಯೆಯೆಂಬುದು ಸುತ್ತಿ ಬಳಸಿ ಬರ ಸೆಳೆದುಕೊಂಡ ಕಥೆಗಳೂ ತೆರೆದುಕೊಳ್ಳುತ್ತವೆ. ಹೀಗೆ ಬಂದ ಬಹುತೇಕರ ಬಂಡವಾಳ ಪ್ರತಿಭೆ ಮಾತ್ರವೇ ಆಗಿರುತ್ತದೆ. ಇದೇ ತಿಂಗಳ 11ರಂದು ತೆರೆಗಾಣಲಿರುವ `ಎಲ್ಲಿದ್ದೆ ಇಲ್ಲಿತನಕ’ ಚಿತ್ರದ ನಿರ್ದೇಶಕ ತೇಜಸ್ವಿಯವರ ಬದುಕಿನ ಹಾದಿಯೂ ಇದಕ್ಕೆ ಪೂರಕವಾಗಿದೆ.

    ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬಂದಿದ್ದ ಯಶಸ್ವಿ ಕಿರುತೆರೆ ಶೋ ಮಜಾ ಟಾಕೀಸ್. ಅದರ ಕ್ರಿಯೇಟಿವ್ ನಿರ್ದೇಶಕರಾಗಿ, ಯಶಸ್ಸಿನ ರೂವಾರಿಗಳಲ್ಲೊಬ್ಬರಾಗಿರುವವರು ತೇಜಸ್ವಿ. ಅದಕ್ಕೂ ಹಿಂದೆಯೇ ಒಂದಷ್ಟು ಕಿರುತೆರೆ ಶೋಗಳನ್ನು ನಿರ್ವಹಿಸುತ್ತಾ, ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಾ ಪ್ರಸಿದ್ಧಿ ಪಡೆದುಕೊಂಡಿರುವವರು, ಪ್ರತಿಭಾವಂತರಾಗಿ ಗುರುತಿಸಿಕೊಂಡಿರುವವರು ತೇಜಸ್ವಿ. ಅವರು ಸೃಜನ್ ಅಭಿನಯದ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನು ಕೂಡ ಭಿನ್ನವಾಗಿಯೇ ನಿರ್ದೇಶನ ಮಾಡಿರುತ್ತಾರೆಂಬ ನಂಬಿಕೆ ಹುಟ್ಟಿಕೊಂಡಿರೋದಕ್ಕೆ ತೇಜಸ್ವಿಯವರ ಈವರೆಗಿನ ಕಲಾ ಯಾನವೇ ಕಾರಣವಾಗಿದೆ. ಹಂತ ಹಂತವಾಗಿ ಹೊರಬಂದು ಸೂಪರ್ ಹಿಟ್ ಆಗಿರೋ ಹಾಡುಗಳು ಮತ್ತು ಎಲ್ಲರಿಗೂ ಮೆಚ್ಚುಗೆಯಾಗಿರೋ ಟ್ರೇಲರ್ ಮೂಲಕವೇ ಎಲ್ಲಿದ್ದೆ ಇಲ್ಲಿತನಕ ಚಿತ್ರ ಹೆಚ್ಚೆಚ್ಚು ಪ್ರೇಕ್ಷಕರನ್ನು ತಲುಪಿಕೊಂಡಿದೆ. ತಾಜಾ ಕಥೆಯ ಸುಳಿವಿನೊಂದಿಗೆ ಪ್ರೇಕ್ಷಕರೆಲ್ಲ ಬಿಡುಗಡೆಯ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಲ್ಲುವಂತೆಯೂ ಮಾಡಿದೆ.

    ಇವತ್ತಿಗೆ ಎಲ್ಲಿದ್ದೆ ಇಲ್ಲಿತನಕ ಸಿನಿಮಾ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರೋ ತೇಜಸ್ವಿಯವರು ಸಾಗಿ ಬಂದ ರೀತಿಯೇ ವಿಶೇಷವಾದದ್ದು. ಸಾಮಾನ್ಯವಾಗಿ ಹಳ್ಳಿಗಾಡುಗಳಿಂದ ಬಂದು ಹೀಗೆ ಬಣ್ಣದ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸಿದವರು ಅದನ್ನೇ ಗುರಿಯಾಗಿಸಿಕೊಂಡಿರುತ್ತಾರೆ. ಆದರೆ ಕೊಳ್ಳೇಗಾಲದಲ್ಲಿಯೇ ಹುಟ್ಟಿ ಅಲ್ಲಿಯೇ ಶಾಲಾ ಕಾಲೇಜು ವ್ಯಾಸಂಗ ಮಾಡಿದ್ದ ತೇಜಸ್ವಿಯವರ ಪಾಲಿಗೆ ಅಂಥಾ ಕನಸೇನೂ ಇರಲಿಲ್ಲ. ಚಿಕ್ಕ ವಯಸ್ಸಿಗೇ ಹಚ್ಚಿಕೊಂಡಿದ್ದ ಓದಿನ ಹುಚ್ಚು ಅವರೊಳಗೆ ಬರವಣಿಗೆಯ ಆಸಕ್ತಿ ಹುಟ್ಟಿಸಿತ್ತು. ಅದುವೇ ನಾಟಕ ಮತ್ತು ರಂಗಭೂಮಿಯ ನಂಟನ್ನೂ ಬೆಳೆಸುವಂತೆ ಮಾಡಿತ್ತು. ಆದರೆ ಬದುಕಿನ ಅನಿವಾರ್ಯತೆಗೆ ದುಡಿಯಲೇ ಬೇಕಾದ ಅನಿವಾರ್ಯ ಸೃಷ್ಟಿಸಿದಾಗ ತೇಜಸ್ವಿ ದಶಕಗಳಷ್ಟು ಹಿಂದೆ ಮುಖ ಮಾಡಿದ್ದು ಬೆಂಗಳೂರಿನತ್ತ. ಆ ಕ್ಷಣದಲ್ಲಿ ಅವರ ಮುಂದಿದ್ದದ್ದು ಯಾವುದಾದರೊಂದು ಕೆಲಸ ಮಾಡಿ ಮನೆಯಲ್ಲಿದ್ದ ಆರ್ಥಿಕ ಸಂಕಷ್ಟ ನೀಗಿಸಬೇಕೆಂಬುದರ ಹೊರತಾಗಿ ಬೇರೆ ಯಾವ ಇಂಗಿತವೂ ಇರಲಿಲ್ಲ.

    ಆದರೆ, ಅವರಿಗೇ ಅರಿವಿಲ್ಲದಂತೆ ಇಡೀ ಬದುಕು ಬೆಳಗಿ ಬಿಡುವಂತಹ ಬರವಣಿಗೆಯ ಕಲೆ ಅವರೊಳಗಿತ್ತು. ಅದುವೇ ಅಚ್ಚರಿದಾಯಕವಾಗಿ ಅವರನ್ನು ಬಣ್ಣದ ಲೋಕಕ್ಕೆ ಕೈ ಹಿಡಿದು ಸೆಳೆದುಕೊಂಡಿತ್ತು. ಬೆಂಗಳೂರಿಗೆ ಬಂದಿಳಿದ ತೇಜಸ್ವಿಯವರಿಗೆ ರಂಗಭೂಮಿಯಲ್ಲಿಯೂ ಹೆಸರು ಮಾಡಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಬಸವರಾಜ್ ಸೂಳೇರಿಪಾಳ್ಯ ಪರಿಚಯವಾಗಿದ್ದರು. ಅವರೇ ತೇಜಸ್ವಿಯೊಳಗಿನ ಬರವಣಿಗೆಯ ತೇಜಸ್ಸನ್ನು ಪತ್ತೆಹಚ್ಚಿ ಬರೆಯಲು ಪ್ರೇರೇಪಿಸಿದ್ದರು. ಹಾಗೆ ಕಿರುತೆರೆಗೆ ಬರವಣಿಗೆಯ ಮೂಲಕ ಎಂಟ್ರಿ ಕೊಟ್ಟಿದ್ದ ತೇಜಸ್ವಿ, ಅಲ್ಲಿನ ಎಲ್ಲ ಪಟ್ಟುಗಳನ್ನೂ ಶ್ರದ್ಧೆಯಿಂದಲೇ ಕರಗತ ಮಾಡಿಕೊಂಡಿದ್ದರು. ಆ ನಂತರ ಒಂದಷ್ಟು ವರ್ಷಗಳ ಕಾಲ ಅಲ್ಲಿಯೇ ಸಕ್ರಿಯರಾಗಿದ್ದರು. ಕಡೆಗೂ ಸೃಜನ್ ಲೋಕೇಶ್ ಸಂಪರ್ಕಕ್ಕೆ ಬಂದ ತೇಜಸ್ವಿಯವರ ಮುಂದೆ ಹೊಸ ಸಾಧ್ಯತೆಗಳು ಬಿಚ್ಚಿಕೊಳ್ಳಲಾರಂಭಿಸಿದ್ದವು.

    ಸೃಜನ್ ಜೊತೆ ಕಿಚನ್ ಕಿಲಾಡಿ ಎಂಬ ಶೋ ಆರಂಭಿಸಿದ್ದ ತೇಜಸ್ವಿ ಆ ನಂತರದಿಂದ ಇಲ್ಲಿವರೆಗೂ ಸೃಜನ್ ಜೊತೆಯಾಗಿಯೇ ಸಾಗಿ ಬಂದಿದ್ದಾರೆ. ಜೊತೆಯಾಗಿಯೇ ಲೋಕೇಶ್ ಪ್ರೊಡಕ್ಷನ್ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ. ಆ ಬಳಿಕ ಸೃಜನ್ ಪ್ರೊಡಕ್ಷನ್ಸ್ ಅಡಿಯಲ್ಲಿಯೇ ಮಜಾ ಟಾಕೀಸ್ ಎಂಬ ಯಶಸ್ವೀ ಕಾರ್ಯಕ್ರಮವನ್ನೂ ಅವರು ನಿರ್ದೇಶನ ಮಾಡಿದ್ದಾರೆ. ಹೀಗೆ ಹಲವಾರು ವರ್ಷಗಳಿಂದ ಸೃಜನ್ ಲೋಕೇಶ್ ಅವರೊಂದಿಗೆ ಒಡನಾಡಿರುವ ತೇಜಸ್ವಿ ಇದೀಗ ಅವರಿಗಾಗಿ ಎಲ್ಲಿದ್ದೆ ಇಲ್ಲಿತನಕ ಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಇದು ಅವರು ನಿರ್ದೇಶನ ಮಾಡಿರೋ ಮೊದಲ ಚಿತ್ರ. ಆದರೆ ಅದು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗೋ ಎಲ್ಲ ಲಕ್ಷಣಗಳನ್ನೂ ಹೊಮ್ಮಿಸುತ್ತಿದೆ. ಕಿರುತೆರೆಯಲ್ಲಿ ಆರಂಭದಿಂದಲೂ ಯಶಸ್ವಿಯಾಗುತ್ತಾ ಬಂದಿರೋ ತೇಜಸ್ವಿ ಎಲ್ಲಿದ್ದೆ ಇಲ್ಲಿತನಕ ಮೂಲಕ ಸಿನಿಮಾ ನಿರ್ದೇಶಕರಾಗಿಯೂ ಗೆಲ್ಲುವ ಲಕ್ಷಣಗಳೇ ದಟ್ಟವಾಗಿವೆ.