Tag: ED Officers

  • ಡಿಕೆಶಿ ತಾಯಿ ಗೌರಮ್ಮಗೆ ಧೈರ್ಯ ತುಂಬಿದ ನಂಜಾವಧೂತ ಸ್ವಾಮೀಜಿ

    ಡಿಕೆಶಿ ತಾಯಿ ಗೌರಮ್ಮಗೆ ಧೈರ್ಯ ತುಂಬಿದ ನಂಜಾವಧೂತ ಸ್ವಾಮೀಜಿ

    ರಾಮನಗರ: ಇಡಿ ಕಸ್ಟಡಿಯಲ್ಲಿರುವ ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ನಂಜಾವಧೂತ ಸ್ವಾಮೀಜಿಗಳು ಧೈರ್ಯ  ತುಂಬಿದ್ದಾರೆ.

    ರಾಮನಗರದ ಕೋಡಿಹಳ್ಳಿಯ ಡಿಕೆ ಸುರೇಶ್ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು ಗೌರಮ್ಮ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ನಂತರ ಡಿಕೆಶಿ ಬಂಧನದಿಂದ ನೋವಾಗಿದೆ. ಅವರು ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿ ಬರುತ್ತಾರೆ. ಎದೆಗುಂದಬೇಡಿ ಎಂದು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

    ಕನಕಪುರ ಶ್ರೀ ದೇಗುಲ ಮಠದ ನಿರ್ವಾಣ ಮಹಾಸ್ವಾಮಿ ಮಾತನಾಡಿ, ಡಿಕೆಶಿ ಬಂಧನ ಸುದ್ದಿ ಮನಸ್ಸಿಗೆ ಬಹಳ ನೋವು ತಂದಿದೆ. ಕಾಂಗ್ರೆಸ್ಸಿನಲ್ಲಿ ಏನೇ ಕೆಲಸ ವಹಿಸಿದ್ದರೂ ಡಿಕೆಶಿ ದಕ್ಷತೆಯಿಂದ ಮಾಡುತ್ತಿದ್ದರು. ವಿನಾಕಾರಣದಿಂದ ಇಡಿ ಡಿಕೆಶಿಯನ್ನು ಬಂಧಿಸಿದೆ. ಡಿಕೆಶಿ, ಸಹೋದರ ಸುರೇಶ್, ತಾಯಿ ಗೌರಮ್ಮ ತುಂಬಾ ದುಃಖ ಪಡುತ್ತಿದ್ದಾರೆ. ಪ್ರಾರ್ಥನೆ ಮೂಲಕ ಡಿಕೆಶಿ ಬಿಡುಗಡೆಗೆ ಶುಭ ಕೋರಿದ್ದೇವೆ. ಆದಷ್ಟು ಬೇಗ ಬಿಡುಗಡೆಯಾಗಲಿ ಅನ್ನೋದು ನಮ್ಮ ಅಪೇಕ್ಷೆಯಾಗಿದೆ ಎಂದರು.

    ಡಿಕೆಶಿಯವರ ಬಂಧನದಿಂದ ಮಠದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಅವರು ಬಂದ ಮುಕ್ತರಾಗಿ ಶೀಘ್ರವಾಗಿ ಬರಲಿ. ರಾಜಕಾರಣಿಗಳು ಯಾರೂ ದುಡ್ಡು ಮಾಡದೇ ಇರುವವರಲ್ಲ. ಇವರು ಸ್ವಲ್ಪ ಸಂಪಾದನೆ ಜಾಸ್ತಿ ಮಾಡಿದರು ಅನ್ನಿಸುತ್ತಿದೆ. ಅದಕ್ಕೆ ಈ ರೀತಿಯಾಗಿದೆ. ಪಕ್ಷದಿಂದ ನಾಯಕರ ಕಾರ್ಯಕ್ರಮಗಳಿಗೆ ಯಾರೂ ಹಣ ನೀಡಲ್ಲ. ಪಕ್ಷದ ಕಾರ್ಯಕ್ರಮಗಳಿಗೆ ಹಣವನ್ನ ನಾಯಕರೇ ಹೊಂದಿಸಬೇಕು. ಡಿಕೆಶಿ ಬಂಧನದಿಂದ ಸಾಕಷ್ಟು ಬೇಸರವಾಗಿದೆ, ಅವರು ಬಂಧಮುಕ್ತರಾಗಿ ಬರಲಿ. ದೇಗುಲ, ಮಠದ ಜೊತೆ ಡಿಕೆಶಿ ಅವಿನಭಾವ ಸಂಬಂಧ ಹೊಂದಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ನಾಲ್ಕು ದಿನಗಳ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದೆ. ನಂತರ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆ ನಂತರ ಬುಧವಾರ ಕೋರ್ಟ್ ಗೆ ಹಾಜರು ಪಡಿಸಿದ್ದು, 9 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಸದ್ಯ ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನವನ್ನು ಕಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಪ್ರತೀಕಾರದ ವರ್ತನೆ ಅಲ್ಲದೆ ಇನ್ನೇನು? – ಡಿಕೆಶಿ ಪರ ಎಚ್‍ಡಿಕೆ ಬ್ಯಾಟಿಂಗ್

    ಪ್ರತೀಕಾರದ ವರ್ತನೆ ಅಲ್ಲದೆ ಇನ್ನೇನು? – ಡಿಕೆಶಿ ಪರ ಎಚ್‍ಡಿಕೆ ಬ್ಯಾಟಿಂಗ್

    ಬೆಂಗಳೂರು: ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಎ ಶಿವಕುಮಾರ್ ಪರ ಕೊನೆಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಬ್ಯಾಟಿಂಗ್ ಮಾಡಿದ್ದಾರೆ.

    ಈ ಬಗ್ಗೆ ಟ್ವಿಟ್ ಮಾಡಿರುವ ಎಚ್‍ಡಿಕೆ, ಇಡಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಗೌರಿ-ಗಣೇಶ ಹಬ್ಬದ ದಿನದಲ್ಲೂ ವಿಚಾರಣೆ ನಡೆಸುತ್ತಿರುವ ಇಡಿ ವರ್ತನೆಗೆ ಕಿಡಿಕಾರಿದ್ದಾರೆ.

    ಗೌರಿ-ಗಣೇಶ ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಡಿಕೆ ಶಿವಕುಮಾರ್ ಅವರು ಅಧಿಕಾರಿಗಳ ಬಳಿ ಒಂದು ದಿನ ವಿಚಾರಣೆಗೆ ವಿನಾಯ್ತಿ ಕೇಳಿದರೂ ಕೊಡಲಿಲ್ಲ. ಇಡಿಯವರ ಈ ವರ್ತನೆ ಪ್ರತೀಕಾರದ ವರ್ತನೆ ಅಲ್ಲದೆ ಏನು ಎಂದು ಪ್ರಶ್ನಿಸುವ ಮೂಲಕ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದಕ್ಕೂ ಮೊದಲು ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಅವರು, ನಾಡಿನ ಜನರಿಗೆ ಗೌರಿ-ಗಣೇಶ ಹಬ್ಬದ ಶುಭ ಕೋರಿದ್ದಾರೆ. ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗೋಣ. ವಿಘ್ನ ವಿನಾಶಕನು ಎಲ್ಲರ ಬಾಳಲ್ಲೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ಹೇಳಿದ್ದಾರೆ.

  • ಸತತ 5 ತಾಸು ವಿಚಾರಣೆಗೆ ಡಿಕೆಶಿ ಫುಲ್ ಟಯರ್ಡ್ -ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?

    ಸತತ 5 ತಾಸು ವಿಚಾರಣೆಗೆ ಡಿಕೆಶಿ ಫುಲ್ ಟಯರ್ಡ್ -ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?

    ನವದೆಹಲಿ: ಇಡಿ ಅಧಿಕಾರಿಗಳ ಪ್ರಶ್ನೆಗೆ ಕನಕಪುರ ಬಂಡೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಂಗಲಾಗಿದ್ದಾರೆ. ಸತತ 5 ಗಂಟೆ ವಿಚಾರಣೆ ಬಳಿಕ ಮಾತು ಕೊಟ್ಟಂತೆ ನಡೆದುಕೊಳ್ಳುವೆ, ಇಂದು ಮತ್ತೆ ವಿಚಾರಣೆಗೆ ಹಾಜರಾಗುವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?
    ಇಡಿ: ಸುನಿಲ್ ಶರ್ಮಾ ಹೇಳಿದ್ದಾರೆ. ಆ ಫ್ಲಾಟ್ ಮಾಲೀಕರು ನೀವೇ ಅಂತಾ
    ಡಿಕೆ: ಅವರು ಯಾಕಂಗೆ ಹೇಳಿದ್ರು ಗೊತ್ತಿಲ್ಲ, ಆಶ್ಚರ್ಯ ತಂದಿದೆ
    ಇಡಿ: ಸುನಿಲ್ ಶರ್ಮಾ ಜೊತೆ ನಿಮಗೆ ವ್ಯವಹಾರಿಕ ಸಂಬಂಧ ಇದ್ಯಾ?
    ಡಿಕೆ: ಇದೆ, ನಾನು ಅವರ ಟ್ರಾವೆಲ್‍ನಲ್ಲಿ ಪಾಲುದಾರ

    ಇಡಿ: ನಿಮ್ಮ ಫ್ಲ್ಯಾಟ್‍ಗಳನ್ನು ಆಂಜನೇಯಗೆ ನೋಡಿಕೊಳ್ಳೋದಕ್ಕೆ ಬಿಟ್ಟಿದ್ದೀರಾ?
    ಡಿಕೆ: ಆಂಜನೇಯ ನನ್ನ ವಿಶೇಷ ಅಧಿಕಾರಿ, ನಾನಿಲ್ಲದಿದ್ದಾಗ ಅವರೇ ಪ್ಲ್ಯಾಟ್ ನೋಡ್ಕೋತಾರೆ
    ಇಡಿ: ನಿಮ್ಮ ಫ್ಲ್ಯಾಟ್‍ನಲ್ಲಿ ಅವರ ಕುಟುಂಬ ವಾಸ ಇದ್ಯಾ?
    ಡಿಕೆ: ಒಂದು ಪ್ಲ್ಯಾಟ್‍ನಲ್ಲಿ ಅವರ ಕುಟುಂಬ ವಾಸ ಇದೆ

    ಇಡಿ: ಈ ಹಣ ನೀವು, ನಿಮ್ಮ ಸ್ನೇಹಿತರು ಅಕ್ರಮವಾಗಿ ಸಂಗ್ರಹಿಸಿದ್ದಾ?
    ಡಿಕೆ: ಅಕ್ರಮವಾಗಿ ನಾನು ಏನನ್ನೂ ಸಂಪಾದಿಸಿಲ್ಲ
    ಇಡಿ: ಕೆಜಿ ಅನ್ನೋ ಕೋಡ್‍ವರ್ಡ್ ಅಲ್ಲಿ ಹವಾಲಾ ಮಾಡ್ತಿದ್ದೀರಾ?
    ಡಿಕೆ: ನಾನು ಯಾವತ್ತೂ ಹವಾಲಾ ಕೆಲಸವನ್ನು ಮಾಡಿಲ್ಲ

    ಇಡಿ: ಡ್ರೈವರ್ ಜೊತೆ ನಿಮಗೆ ಹಣಕಾಸಿನ ಸಂಬಂಧ ಇದ್ಯಾ..?
    ಡಿಕೆ: ಇಲ್ಲ, ಯಾವುದೇ ವ್ಯವಹಾರ ಇಲ್ಲ
    ಇಡಿ: ಡ್ರೈವರ್ ಗೆ ನೀವು ಹಣ ಕೊಟ್ಟು ಕಳುಹಿಸುವಷ್ಟು ನಂಬಿಕಸ್ತನಾ..?
    ಡಿಕೆ: ಬೇಕಾದಾಗ ಕೆಲವೊಂದು ವ್ಯವಹಾರಕ್ಕೆ ಹಣ ಕಳುಹಿಸ್ತಿದ್ದೆ

    ಇಡಿ: ಹಣ ಯಾರ್ಯಾರಿಗೆ ಕೊಡ್ಬೇಕು ಅಂತ ಡ್ರೈವರ್ ನೋಡ್ಕೋತಿದ್ರಾ..?
    ಡಿಕೆ: ನಾನು ಯಾರಿಗೂ ಆಸೆ, ಆಮಿಷಕ್ಕೆ ಹಣ ಕೊಟ್ಟಿಲ್ಲ

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

    ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.

    ಇಡಿ ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಸೇರಿದಂತೆ ಗೆಳೆಯರಾದ ಆಂಜನೇಯ, ರಾಜೇಂದ್ರ, ಹನುಮಂತಯ್ಯ ಸಲ್ಲಿಸಿದ್ದ ತಕಾರರು ಅರ್ಜಿಯನ್ನು ಹೈಕೋರ್ಟ್ ನ್ಯಾ. ಅರವಿಂದ್ ಕುಮಾರ್ ಗುರುವಾರ ವಜಾಗೊಳಿಸಿ ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದ್ದರು. ಅರ್ಜಿ ವಜಾಗೊಂಡ ಬೆನ್ನಲ್ಲೇ ಗುರುವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಶುಕ್ರವಾರ ಮಧ್ಯಾಹ್ನ 1 ಗಂಟೆಯ ವೇಳೆಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದರು.