Tag: Dunia Vijay

  • ಇಂದ್ರಜಿತ್ ಒಳ್ಳೆಯ ಕೆಲಸ ಮಾಡ್ತಿದ್ದಾರೆ: ದುನಿಯಾ ವಿಜಯ್

    ಇಂದ್ರಜಿತ್ ಒಳ್ಳೆಯ ಕೆಲಸ ಮಾಡ್ತಿದ್ದಾರೆ: ದುನಿಯಾ ವಿಜಯ್

    ಬೆಂಗಳೂರು: ಕನ್ನಡದ ಚಿತ್ರರಂದಲ್ಲಿ ಡ್ರಗ್ ಮಾಫಿಯಾ ಕುರಿತು ಸುದ್ದಿಯಾಗುತ್ತಿರುವುದು ಸಾಕಷ್ಟು ಬೇಸರವನ್ನು ತಂದಿದೆ. ಇದು ಒಳ್ಳೆಯ ಕ್ಷೇತ್ರವಾಗಿದ್ದು, ಡ್ರಗ್ ಮಾಫಿಯಾವನ್ನು ಎದುರಿಸಲು ಇಂದ್ರಜಿತ್ ಅವರು ಮುಂದೇ ನಿಂತು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದುನಿಯಾ ವಿಜಯ್, ಡ್ರಗ್ ಮಾಫಿಯಾದಲ್ಲಿ ತಪ್ಪು ಮಾಡಿದ್ದರೇ ಅವರಿಗೆ ಶಿಕ್ಷೆ ಆಗಬೇಕು. ಕೇವಲ ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಯುವ ಜನತೆಗೆ ಇದರಿಂದ ಒಳ್ಳೆ ಕೆಲಸ ಆಗುತ್ತದೆ. ಇಂದ್ರಜಿತ್ ಅವರು ಮಾಡಿದ ಕೆಲಸದಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ ಎಂದರು.

    ಚಿರಂಜೀವಿ ಸರ್ಜಾ ಅವರ ಕುರಿತು ಇಂದ್ರಜಿತ್ ಲಂಕೇಶ್ ಅವರು ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾವನ್ನಪ್ಪಿರುವವರ ಬಗ್ಗೆ ಮಾತನಾಡುವುದು ತಪ್ಪು. ಏಕೆಂದರೆ ಆ ಕುಟುಂಬ ಈಗಾಗಲೇ ಸಾಕಷ್ಟು ನೋವಿನಲ್ಲಿರುತ್ತದೆ. ಆದ್ದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಇಂದ್ರಜಿತ್ ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಚಿರಂಜೀವಿ ಅವರ ನಿಧನ ನಮಗೂ ಸಾಕಷ್ಟು ನೋವು ಮಾಡಿದೆ ಎಂದು ತಿಳಿಸಿದರು.

    ನಾನು ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾಗಿವೆ. ಚಿತ್ರರಂಗದಲ್ಲಿ ನಮ್ಮೊಂದಿಗೆ ಬಂದ ಹಲವರು ಈಗಾಗಲೇ ವಾಪಸ್ ಹೋಗಿದ್ದಾರೆ. ಇಂಡಸ್ಟ್ರಿಯಲ್ಲಿ ಎಂದು ಲಕ್ ನಂಬಿ ಬದುಕಬಾರದೂ, ಏಕೆಂದರೆ ಯಾವತ್ತೂ ಕಷ್ಟಪಟ್ಟರೇ ಮಾತ್ರ ಸಾಧನೆ ಮಾಡಲು ಸಾಧ್ಯ. ಇದುವರೆಗೂ ಇಂಡಸ್ಟ್ರಿಯಲ್ಲಿ ಎಂದೂ ಅಂತಹ ಯಾವುದೇ ಅನುಭವ ನನಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಾಮಾಜಿಕ ಜಾಗೃತಿಗಾಗಿ ಇಂದ್ರಜಿತ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದು, ಎಲ್ಲವೂ ಬೆಳಕಿಗೆ ಬರಲಿದೆ. ಫಿಟ್ನೆಸ್ ಜಗತ್ತಿನಲ್ಲೂ ಇಂತಹ ಅನುಭವ ನನಗೆ ಆಗಿಲ್ಲ. ಆದರೆ ಈ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಇದೆ ಎಂದರು. ಯಾರೇ ಇಂತಹ ಡ್ರಗ್ಸ್ ಸೇವನೆ ಒಳಗಾಗಿದ್ದರೂ ದಯವಿಟ್ಟು ಅದನ್ನು ಬಿಟ್ಟು ಹೊರ ಬನ್ನಿ ಎಂದು ಮನವಿ ಮಾಡುತ್ತೇನೆ ಎಂದರು.

    ಯಾರೇ ಆಗಲಿ ಇಂತಹ ವಸ್ತುಗಳ ಸೇವನೆ ಮಾಡುತ್ತಿದ್ದರೆ ಅವರ ಪೋಷಕರು ಕೂಡಲೇ ಎಚ್ಚೆತ್ತು ವೈದ್ಯರ ಸಲಹೆ ಪಡೆಯಿರಿ. ಶಾಲಾ-ಕಾಲೇಜುಗಳಲ್ಲಿ ಇಂತಹ ವಿದ್ಯಾರ್ಥಿಗಳು ಕಂಡು ಬಂದರೇ ಕೂಡಲೇ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿ. ಇದರಿಂದ ಎಚ್ಚರವಿಲ್ಲದಿದ್ದರೇ ಜೀವನವೇ ನಾಶವಾಗುತ್ತದೆ. ಚಿತ್ರರಂಗದ ಯಾವುದೋ ನಾಲ್ವರು ನಟ-ನಟಿಯರು ಮಾಡುವ ಇಂತಹ ಕೃತ್ಯಗಳಿಂದ ಕೊಟ್ಟ ಹೆಸರು ಬರುತ್ತಿದೆ ಎಂದರು. ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ಆರೋಪಗಳು ಸಾಬೀತು ಆದರೆ ಮಾತ್ರ ಆ ಬಗ್ಗೆ ಮಾತನಾಡಲು ಸಾಧ್ಯ. ಆದ್ದರಿಂದ ತನಿಖೆಯಿಂದಲೇ ಎಲ್ಲವೂ ಹೊರಬರಬೇಕಿದೆ ಎಂದು ತಿಳಿಸಿದರು.

  • ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂದ್ಕೊಂಡಿದ್ದೆ: ವಿಜಿ ಕಂಬನಿ

    ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂದ್ಕೊಂಡಿದ್ದೆ: ವಿಜಿ ಕಂಬನಿ

    – ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅನಿಸ್ತಿಲ್ಲ

    ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಸಹ ನಟ ಸುಶೀಲ್ ಕುಮಾರ್ ಸಾವಿಗೆ ‘ಸಲಗ’ ಚಿತ್ರತಂಡ ಕಂಬನಿ ಮಿಡಿದಿದೆ.

    ಸುಶೀಲ್ ಕುಮಾರ್ ಮಂಡ್ಯದ ವಿವಿ ನಗರ ಬಡಾವಣೆ ನಿವಾಸಿಯಾಗಿದ್ದು, ಬೆಂಗಳೂರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಜಿಮ್ ತೆರೆದಿರಲಿಲ್ಲ. ಹೀಗಾಗಿ ಮೂರು ತಿಂಗಳ ಹಿಂದೆ ಮಂಡ್ಯಗೆ ಬಂದು ನೆಲೆಸಿದ್ದರು. ಆದರೆ ಸುಶೀಲ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅವರ ಕಷ್ಟ ಏನಾದರೂ ಹೇಳಿಕೊಂಡಿದ್ದರೆ. ನಾವಾದರೂ ಸಹಾಯ ಮಾಡುತ್ತಿದ್ವಿ. ಆದರೆ ಸುಶೀಲ್ ಯಾರಿಗೂ ತಮ್ಮ ಕಷ್ಟ ಹೇಳಿಕೊಳ್ಳದೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ನಟ ದುನಿಯಾ ವಿಜಿ ಕೂಡ ಸುಶೀಲ್ ಸಾವಿಗೆ ಕಂಬನಿ ಮಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುಶೀಲ್ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    ಪೋಸ್ಟ್‌ನಲ್ಲಿ ಏನಿದೆ?
    ‘ಸಲಗ’ ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡುತ್ತಿದ್ದರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದುಕೊಂಡಿದ್ದೆ. ಆದರೆ ಅದೇನಾಯ್ತೋ ಗೊತ್ತಿಲ್ಲ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬಲು ಆಗುತ್ತಿಲ್ಲ. ಇಂಡಸ್ಟ್ರೀನಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಂದರೆ ಏನು? ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದರೆ ಬಹುಶಃ ಭೂಮಿಯಲ್ಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ” ಎಂದು ಬೇರಸರಿಂದ ಹೇಳಿದ್ದಾರೆ.

    ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಮ ಜೊತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇನೇ ನಮಗಿಷ್ಟೊಂದು ನೋವಾಗುತ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ. ಸತ್ತ ಮೇಲೆ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸುತ್ತಿಲ್ಲ. ಯಾಕೆಂದರೆ ಪರಿಸ್ಥಿತಿ ಆ ರೀತಿ ಇದೆ. ಜನ ಕೊರೊನಾ ರೋಗಕ್ಕಷ್ಟೇ ಭಯಪಡುತ್ತಿಲ್ಲ. ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.

     

    ಹಾಗಾಗಿ ನನ್ನ ಮನವಿ ಅಂಥವರಿಗೂ ಕೂಡ ಆಗಿದೆ. ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ, ವೇದನೆ” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

    “ನೀವೇನೂ ಸತ್ತು ಹೋಗುತ್ತೀರಿ, ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜೊತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿದ್ದಂಥ ಬದುಕು ಕೊಡುತ್ತೀರಲ್ಲ? ಇದೇನು ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು ಎಂದು ಪ್ರಶ್ನೆ ಮಾಡಿದರು. ಸುಶೀಲ್ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಇಂತಹ ದುಃಖ ಎದುರಿಸುವ ಸಂದರ್ಭ ಬಾರದಿರಲಿ” ಎಂದು ದುನಿಯಾ ವಿಜಯ್ ಸುಶೀಲ್ ಸಾವಿಗೆ ಕಂಬನಿ ಮಿಡಿದಿದ್ದಾರೆ.