Tag: drug mafia

  • ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಸಿಟಿ ರವಿ ಅವರ ‘ಮತ್ತಿನ’ ಆರೋಪಕ್ಕೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿರುವ ಎಚ್‍ಡಿಕೆ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು ಎಂದರು ಕಿಡಿಕಾರಿದ್ದಾರೆ.

    ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪನಿ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.

    ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು. ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಮತ್ತೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

    ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ ಎಂದಿದ್ದಾರೆ.

    ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಗಿಳಿಯೋದಿ ಫಲವೇನು, ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು. ಇದಿರ ಗುಣವ ಬಲ್ಲವೆಂಬರು, ತಮ್ಮ ಗುಣವನರಿಯರು, ಕೂಡಲಸಂಗಮದೇವಾ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಟಿ ರವಿ ಅವರು, ಕುಮಾರಸ್ವಾಮಿ ಅವರ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಕುಮಾರಸ್ವಾಮಿ ಅವರನ್ನು ಮೊದಲು ತಪಾಸಣೆ ಮಾಡಬೇಕು. ಅವರು ಮತ್ತಿನಲ್ಲಿ ಹೇಳಿದ್ದಾರಾ? ಅಥವಾ ಸರಿಯಾಗಿದ್ದಾಗಿ ಆ ಹೇಳಿಕೆ ಕೊಟ್ಟಿದ್ದಾರಾ ಟೆಸ್ಟ್ ಮಾಡಿಸಬೇಕು. ಅವರ ಸಂಪುಟದ ಸಚಿವರೇ ರಾಜೀನಾಮೆ ಕೊಟ್ಟಿದ್ದು. ಕುಮಾರಸ್ವಾಮಿ ಕಾಲದ ಇಂಟಲಿಜೆನ್ಸ್ ದುರ್ಬಲವಾಗಿತ್ತಾ? ಅಧಿಕಾರದಲ್ಲಿದ್ದಾಗ ಏಕೆ ಡ್ರಗ್ ಮಾಫಿಯಾ ಕಡಿವಾಣಕ್ಕೆ ಕೈ ಹಾಕಿಲ್ಲ. ರಾಜಕೀಯ ಪ್ರಚಾರದ ಗೀಳಿಗೆ ಕುಮಾರಸ್ವಾಮಿ ಸರ್ಕಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದಿದ್ದರು.

  • ಇಂದ್ರಜಿತ್ ಒಳ್ಳೆಯ ಕೆಲಸ ಮಾಡ್ತಿದ್ದಾರೆ: ದುನಿಯಾ ವಿಜಯ್

    ಇಂದ್ರಜಿತ್ ಒಳ್ಳೆಯ ಕೆಲಸ ಮಾಡ್ತಿದ್ದಾರೆ: ದುನಿಯಾ ವಿಜಯ್

    ಬೆಂಗಳೂರು: ಕನ್ನಡದ ಚಿತ್ರರಂದಲ್ಲಿ ಡ್ರಗ್ ಮಾಫಿಯಾ ಕುರಿತು ಸುದ್ದಿಯಾಗುತ್ತಿರುವುದು ಸಾಕಷ್ಟು ಬೇಸರವನ್ನು ತಂದಿದೆ. ಇದು ಒಳ್ಳೆಯ ಕ್ಷೇತ್ರವಾಗಿದ್ದು, ಡ್ರಗ್ ಮಾಫಿಯಾವನ್ನು ಎದುರಿಸಲು ಇಂದ್ರಜಿತ್ ಅವರು ಮುಂದೇ ನಿಂತು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದುನಿಯಾ ವಿಜಯ್, ಡ್ರಗ್ ಮಾಫಿಯಾದಲ್ಲಿ ತಪ್ಪು ಮಾಡಿದ್ದರೇ ಅವರಿಗೆ ಶಿಕ್ಷೆ ಆಗಬೇಕು. ಕೇವಲ ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಯುವ ಜನತೆಗೆ ಇದರಿಂದ ಒಳ್ಳೆ ಕೆಲಸ ಆಗುತ್ತದೆ. ಇಂದ್ರಜಿತ್ ಅವರು ಮಾಡಿದ ಕೆಲಸದಲ್ಲಿ ತಪ್ಪಿದೆ ಎಂದು ನನಗೆ ಅನಿಸುತ್ತಿಲ್ಲ ಎಂದರು.

    ಚಿರಂಜೀವಿ ಸರ್ಜಾ ಅವರ ಕುರಿತು ಇಂದ್ರಜಿತ್ ಲಂಕೇಶ್ ಅವರು ನೀಡಿದ್ದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾವನ್ನಪ್ಪಿರುವವರ ಬಗ್ಗೆ ಮಾತನಾಡುವುದು ತಪ್ಪು. ಏಕೆಂದರೆ ಆ ಕುಟುಂಬ ಈಗಾಗಲೇ ಸಾಕಷ್ಟು ನೋವಿನಲ್ಲಿರುತ್ತದೆ. ಆದ್ದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಇಂದ್ರಜಿತ್ ಅವರು ಈಗಾಗಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಚಿರಂಜೀವಿ ಅವರ ನಿಧನ ನಮಗೂ ಸಾಕಷ್ಟು ನೋವು ಮಾಡಿದೆ ಎಂದು ತಿಳಿಸಿದರು.

    ನಾನು ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳಾಗಿವೆ. ಚಿತ್ರರಂಗದಲ್ಲಿ ನಮ್ಮೊಂದಿಗೆ ಬಂದ ಹಲವರು ಈಗಾಗಲೇ ವಾಪಸ್ ಹೋಗಿದ್ದಾರೆ. ಇಂಡಸ್ಟ್ರಿಯಲ್ಲಿ ಎಂದು ಲಕ್ ನಂಬಿ ಬದುಕಬಾರದೂ, ಏಕೆಂದರೆ ಯಾವತ್ತೂ ಕಷ್ಟಪಟ್ಟರೇ ಮಾತ್ರ ಸಾಧನೆ ಮಾಡಲು ಸಾಧ್ಯ. ಇದುವರೆಗೂ ಇಂಡಸ್ಟ್ರಿಯಲ್ಲಿ ಎಂದೂ ಅಂತಹ ಯಾವುದೇ ಅನುಭವ ನನಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಾಮಾಜಿಕ ಜಾಗೃತಿಗಾಗಿ ಇಂದ್ರಜಿತ್ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದು, ಎಲ್ಲವೂ ಬೆಳಕಿಗೆ ಬರಲಿದೆ. ಫಿಟ್ನೆಸ್ ಜಗತ್ತಿನಲ್ಲೂ ಇಂತಹ ಅನುಭವ ನನಗೆ ಆಗಿಲ್ಲ. ಆದರೆ ಈ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಇದೆ ಎಂದರು. ಯಾರೇ ಇಂತಹ ಡ್ರಗ್ಸ್ ಸೇವನೆ ಒಳಗಾಗಿದ್ದರೂ ದಯವಿಟ್ಟು ಅದನ್ನು ಬಿಟ್ಟು ಹೊರ ಬನ್ನಿ ಎಂದು ಮನವಿ ಮಾಡುತ್ತೇನೆ ಎಂದರು.

    ಯಾರೇ ಆಗಲಿ ಇಂತಹ ವಸ್ತುಗಳ ಸೇವನೆ ಮಾಡುತ್ತಿದ್ದರೆ ಅವರ ಪೋಷಕರು ಕೂಡಲೇ ಎಚ್ಚೆತ್ತು ವೈದ್ಯರ ಸಲಹೆ ಪಡೆಯಿರಿ. ಶಾಲಾ-ಕಾಲೇಜುಗಳಲ್ಲಿ ಇಂತಹ ವಿದ್ಯಾರ್ಥಿಗಳು ಕಂಡು ಬಂದರೇ ಕೂಡಲೇ ಸ್ನೇಹಿತರು ಪೋಷಕರಿಗೆ ಮಾಹಿತಿ ನೀಡಿ. ಇದರಿಂದ ಎಚ್ಚರವಿಲ್ಲದಿದ್ದರೇ ಜೀವನವೇ ನಾಶವಾಗುತ್ತದೆ. ಚಿತ್ರರಂಗದ ಯಾವುದೋ ನಾಲ್ವರು ನಟ-ನಟಿಯರು ಮಾಡುವ ಇಂತಹ ಕೃತ್ಯಗಳಿಂದ ಕೊಟ್ಟ ಹೆಸರು ಬರುತ್ತಿದೆ ಎಂದರು. ಜಗ್ಗೇಶ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ಆರೋಪಗಳು ಸಾಬೀತು ಆದರೆ ಮಾತ್ರ ಆ ಬಗ್ಗೆ ಮಾತನಾಡಲು ಸಾಧ್ಯ. ಆದ್ದರಿಂದ ತನಿಖೆಯಿಂದಲೇ ಎಲ್ಲವೂ ಹೊರಬರಬೇಕಿದೆ ಎಂದು ತಿಳಿಸಿದರು.

  • ನನಗೆ ರೈಸ್, ದಾಲ್ ಗೊತ್ತು ಹೊರತು ಬೇರೇನೂ ಗೊತ್ತಿಲ್ಲ: ಸುದೀಪ್

    ನನಗೆ ರೈಸ್, ದಾಲ್ ಗೊತ್ತು ಹೊರತು ಬೇರೇನೂ ಗೊತ್ತಿಲ್ಲ: ಸುದೀಪ್

    – ರಾಜಕೀಯದಿಂದ ಮಾತ್ರ ಪಾರ್ಟಿ ಆಫರ್ ಬಂದಿರೋದು

    ತುಮಕೂರು: ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಅದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಡ್ರಗ್ಸ್ ಮಾಫಿಯಾದ ಬಗ್ಗೆ ನಟ ಸುದೀಪ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ಹುಟ್ಟುಹಬ್ಬದ ವಿಶೇಷ ಎಂದು ಬಂದಿಲ್ಲ, ಪ್ರತಿದಿನಲೂ ವಿಶೇಷನೇ. ಆದರೆ ತುಂಬಾ ದಿನದಿಂದ ಮಠಕ್ಕೆ ಬರಬೇಕು ಅಂದುಕೊಂಡಿದ್ದೆ. ಆದರೆ ಸಮಯ ಸಿಕ್ಕಿರಲಿಲ್ಲ. ಈಗ ಎರಡು ದಿನ ಬೆಂಗಳೂರಿಗೆ ಬಂದಿದ್ದೆ. ಹೀಗಾಗಿ ಇಲ್ಲಿಗೂ ಬಂದಿದ್ದೇನೆ. ನಾಲ್ಕು ತಿಂಗಳ ಹಿಂದೆಯೇ ಸಿದ್ದಗಂಗಾ ಮಠಕ್ಕೆ ಬರಬೇಕು ಎಂದು ಇಂದ್ರಜಿತ್ ಅವರಿಗೆ ಹೇಳಿದ್ದೆ. ಎರಡು ದಿನಗಳ ಹಿಂದೆಯೇ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿದ್ದೆ. ಹೀಗಾಗಿ ಇಂದ್ರಜಿತ್ ಬಂದಿದ್ದಾರೆ ಎಂದರು.

    ಇನ್ನೂ ಇಂದ್ರಜಿತ್ ಜೊತೆ ಬಂದಿರುವುದರ ಬಗ್ಗೆ ಕೇಳಿದ್ದಕ್ಕೆ, ಇಂದ್ರಜಿತ್ ಜೊತೆ ಬಂದಿರುವುದಕ್ಕೆ ಬೇರೆ ಅರ್ಥ ಬೇಡ. ಇಂದ್ರಜಿತ್ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆಯಿಂದಲೂ ಪರಿಚಯ ಇದ್ದಾರೆ. ಹಾಗಾದರೆ ಇವರು ಮಾಡಿರುವ ಒಳ್ಳೆಯದು, ಕೆಟ್ಟದ್ದು ಎಲ್ಲದರಲ್ಲೂ ನಾನು ಭಾಗಿಯಾಗಿದ್ದೀನಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಮಠಕ್ಕೆ ಅವರ ಒಡನಾಟ ಇತ್ತು. ಹೀಗಾಗಿ ಜೊತೆಗೆ ಬಂದಿದ್ದೇವೆ ಎಂದರು.

    ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಪ್ರೊಡಕ್ಷನ್‌ನಲ್ಲಿ ಟೀ, ಕಾಫಿ ಕೊಡುತ್ತಾರೆ. ಅದನ್ನೇ ಕುಡಿದು, ತಿಂದುಕೊಂಡು 26 ವರ್ಷದಿಂದ ಜೀವನ ಸಾಗಿಸಿದ್ದೇವೆ. ಬೇರೆ ಏನು ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ಇರುವ ವಿಚಾರವನ್ನು ಮಾತನಾಡುವುದು ತಪ್ಪು, ಇದರ ಬಗ್ಗೆ ನನಗೆ ಗೊತ್ತಿಲ್ಲ. ಮನೆ, ಶೂಟಿಂಗ್ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎಂದರು.

    ಚಿತ್ರರಂಗ ಬಹಳ ದೊಡ್ಡದು. ಬಹಳ ಹಿರಿಯರು, ಕಲಾವಿದರು ಸೇರಿ ಕೆತ್ತಿದ ಒಂದು ಅದ್ಭುತವಾದ, ಸುದೀರ್ಘವಾದ ಪ್ರಚಂಚ. ಅದು ಕೂಡ ಸಾಕಷ್ಟು ನೋವು, ಕಷ್ಟ ನೋಡಿ ಇಲ್ಲಿಯವರೆಗೂ ಬಂದಿರೋದು. ಯಾವುದೋ ಒಂದು ಸಣ್ಣ ವಿಚಾರದಿಂದ ಇಡೀ ಚಿತ್ರರಂಗಕ್ಕೆ ಕಳಂಕ ಎಂದು ಹೇಳುವುದು ತಪ್ಪಾಗುತ್ತದೆ. ನನಗೆ ಪಾರ್ಟಿ ಆಫರ್ ಬಂದಿರೋದು ಬರೀ ರಾಜಕೀಯದಿಂದ ಮಾತ್ರ. ಬೇರೆ ಪಾರ್ಟಿಯ ಆಫರ್ ನನಗೆ ಬಂದಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ಇರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾಲ್ಕು ಜನರು ಕೂತು ಖುಷಿಯಿಂದ ಮಾತನಾಡುವುದಕ್ಕೆ ಪಾರ್ಟಿ ಎನ್ನುತ್ತಾರೆ. ಎಲ್ಲಾ ಪಾರ್ಟಿಗಳು ಒಂದೇ ರೀತಿ ಇರಲ್ಲ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ಇಂದ್ರಜಿತ್, ಇದೊಂದು ಧಾರ್ಮಿಕ, ಆಧ್ಯಾತ್ಮಿಕವಾಗಿ ಅವರ ಹುಟ್ಟುಹಬ್ಬಕ್ಕೆ ನಾವು ಭೇಟಿ ಮಾಡಿರುವುದು. ನನ್ನ ಆತ್ಮಮಿತ್ರ ಸುದೀಪ್ ಅವರ ಹುಟ್ಟುಹಬ್ಬವನ್ನು ಸಿದ್ದಗಂಗಾ ಮಠದಲ್ಲಿ ಕಳೆಯುತ್ತಿರುವುದು ನನಗೆ, ನಮ್ಮ ಗೆಳೆಯರಿಗೆ ಖುಷಿ ತಂದಿದೆ. ಅವರನ್ನು ಭಗವಂತ ಕಾಪಾಡಿ, ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಿ ಎಂದು ಹಾರೈಸಿದರು.

  • ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ?

    ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ?

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವಿನ ಬಗ್ಗೆ ವಿವಾದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸರ್ಜಾ ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಚಿರು ಸರ್ಜಾ ಸಾವಿನ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಜಾ ಕುಟುಂಬ ಇಂದ್ರಜಿತ್ ಲಂಕೇಶ್ ಮೇಲೆ ಕಾನೂನು ಸಮರಕ್ಕೆ ನಿಂತಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸರ್ಜಾ ಕುರಿತ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ: ಇಂದ್ರಜಿತ್ ಲಂಕೇಶ್

    ಸರ್ಜಾ ಕುಟುಂಬದಸ್ಥರು ಈ ಸಂಬಂಧ ಖ್ಯಾತ ವಕೀಲರೊಬ್ಬರನ್ನು ಸಂಪರ್ಕ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಸಾವಿನ ವಿಚಾರ ಎಳೆದು ತಂದಿದ್ದಕ್ಕೆ ಸರ್ಜಾ ಕುಟುಂಬದವರು ಇಂದ್ರಜಿತ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೇ ಸೋಮವಾರ ಸ್ಯಾಂಡಲ್‍ವುಡ್‍ನಲ್ಲಿ ಯಾರಿಗೆಲ್ಲಾ ಡ್ರಗ್ಸ್ ನಂಟಿದೆ, ಯಾರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಅನ್ನೋದರ ಬಗ್ಗೆ ಇಂದ್ರಜಿತ್ ಸಿಸಿಬಿ ಪೊಲೀಸರ ಮುಂದೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ತುಂಬಾ ಬೇಸರವಾಯ್ತು: ದರ್ಶನ್

    ಇದೇ ವೇಳೆ ಮಾತನಾಡಿದ್ದ ಇಂದ್ರಜಿತ್, ಯುವ ನಟ ಚಿರಂಜೀವಿ ಸರ್ಜಾ ಅವರ ಮರಣೋತ್ತರ ಪರೀಕ್ಷೆ ಕುರಿತು ನಾನು ಹೇಳಿದ್ದ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇನೆ ಹೇಳಿದ್ದರು.

    ಚಿರಂಜೀವಿ ಸರ್ಜಾ ಯುವ ನಟರಾಗಿದ್ದು, ಆದ್ದರಿಂದಲೇ ನಾನು ಹೇಳಿದ್ದೆ. ಅವರು ಈಗ ಇದ್ದಿದ್ದರೆ ಮೇಘನಾ ಅವರು ಖುಷಿಯಿಂದ ಇರುತ್ತಿದ್ದರು. ಸತ್ತವರ ಬಗ್ಗೆ ಮಾತನಾಡಬಾರದು. ಸರ್ಜಾ ಅವರ ಬಗ್ಗೆ ನನಗೆ ಹೆಚ್ಚು ನೋವಿದೆ. ಆದರೆ ಈ ಮೂಲಕ ಹೇಳುತ್ತಿರುವುದೇನೆಂದರೇ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಡ್ರಗ್ ಮಾಫಿಯಾ ಎಂಬುವುದು ಬಹುದೊಡ್ಡದಾಗಿದೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಲು ಆಗದಿದ್ದರೂ ಯುವ ಜನತೆಗೆ ಒಂದು ಸಂದೇಶ ರವಾನೆ ಆಗಲಿ ಎಂಬುವುದಷ್ಟೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದರು.

  • ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ

    ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿಯಿಂದ ಡ್ರಗ್ಸ್ ಮಾಫಿಯಾ ಹಣ ಬಳಕೆ- ಎಚ್‍ಡಿಕೆ

    – ನಾನು ನಿರ್ಮಾಪಕನಾಗಿದ್ದಾಗ ಡ್ರಗ್ ಮಾಫಿಯಾ ಇರೋದು ಗೊತ್ತಿಲ್ಲ

    ತುಮಕೂರು: ಡ್ರಗ್ ಮಾಫಿಯಾದಿಂದ ಬಂದ ಹಣವನ್ನು ಬಿಜೆಪಿ ಪಕ್ಷ ಮೈತ್ರಿ ಸರ್ಕಾರವನ್ನು ಬೀಳಿಸಲು ಬಳಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಗಂಭೀರ ಆರೋಪ ಮಾಡಿದ್ದಾರೆ.

    ಇಂದು ತುರುವೇಕೆರೆಯಲ್ಲಿ ಪ್ರತಿಭಟನೆಗೆಂದು ಬಂದಿದ್ದ ಹೆಚ್‍ಡಿಕೆ 144 ಸೆಕ್ಷನ್ ಇರುವ ಹಿನ್ನೆಲೆ ಪ್ರತಿಭಟನೆಯನ್ನು ಕೈಬಿಟ್ಟರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಡ್ರಗ್ ಮಾಫಿಯಾದ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದೆ ಎಂದು ಹೇಳಿದರು.

    ಡ್ರಗ್ ಮಾಫಿಯಾ ಹಣವನ್ನು ಬಿಜೆಪಿ ಪಕ್ಷ ಮೈತ್ರಿ ಸರ್ಕಾರ ಬೀಳಿಸಲು ಬಳಿಸಿಕೊಂಡಿದೆ ಮತ್ತು ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ಹಣನ್ನು ಬಂದಿತ್ತು. ನನ್ನ ಅವಧಿಯಲ್ಲಿ ಕಠಿಣ ಕ್ರಮ ಕೈಗೊಂಡಿದ್ದೆ. ಮಾಧ್ಯಮದಲ್ಲಿ ಈ ವಿಚಾರ ಹೆಚ್ಚಿಗೆ ಚರ್ಚೆ ಆಗಬಾರದು. ಇದರಿಂದ ಎಳೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ನಾನು ಚಿತ್ರ ನಿರ್ಮಾಪಕನಾಗಿದ್ದ ಕಾಲದಲ್ಲಿ ಡ್ರಗ್ ಮಾಫಿಯಾ ಇರೋದು ನನಗೆ ಗೊತ್ತಿಲ್ಲ ಎಂದು ಹೆಚ್‍ಡಿಕೆ ತಿಳಿಸಿದರು.

    ಇದೇ ವೇಳೆ ಸಿಎಂ ಪುತ್ರನ ಮೇಲೆ ಭ್ರಷ್ಟಾಚಾರ ಆರೋಪದ ವಿಚಾರವಾಗಿ ಮಾತನಾಡಿದ ಅವರು, 5 ಸಾವಿರ ಕೋಟಿ ಹಗರಣ ಸಿಎಂ ಪುತ್ರನ ಮೇಲೆ ಯಾಕೆ ಬಂತು ನನಗೆ ಗೊತ್ತಿಲ್ಲ. ಈ ದೇಶದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಾಗಿಲ್ಲ. ಜನ ಕೊರೊನಾದಿಂದ ಸಾಯುತ್ತಿದ್ದಾರೆ. ಈ ನಡುವೆ ಭ್ರಷ್ಟಾಚಾರ ಕಟ್ಟಿಕೊಂಡು ನಾನು ಏನ್ ಮಾಡಲಿ. ನೆರೆ ಪರಿಹಾರ ಕೊಡುವುದರಲ್ಲಿ ಸರ್ಕಾರ ಎಡವಿದೆ ಎಂದು ವಾಗ್ದಾಳಿ ನಡೆಸಿದರು.

    ಇದೇ ವೇಳೆ ತುರುವೇಕೆರೆ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲು ಇಲ್ಲಿಗೆ ಬಂದಿದ್ದೆ. ಕೊರೊನಾದಿಂದ ನಾನು ಹೊರಗೆ ಹೆಚ್ಚು ಹೋಗುತ್ತಿಲ್ಲ. ಆದರೆ ಇಲ್ಲಿಗೆ ಬರಬೇಕಾಯ್ತು. ಇಲ್ಲಿನ ರೈತರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಶಾಸಕ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದರ ವಿರುದ್ಧ ಹೋರಾಡಲು ಬಂದಿದ್ದೆ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು 144 ಸೆಕ್ಷನ್ ಜಾರಿ ಮಾಡಿದ್ದಾರೆ. ಹೀಗಾಗಿ ಕೇವಲ ಮನವಿ ಮಾಡಿ ಹೋಗುತ್ತಿದ್ದೇನೆ ಎಂದು ಹೆಚ್‍ಡಿಕೆ ಹೇಳಿದರು.

  • ಡ್ರಗ್ ಮಾಫಿಯಾ, ಆ ವುಡ್ ಈ ವುಡ್ ಯಾವುದನ್ನೂ ಬಿಡಲ್ಲ: ಕೋಟ

    ಡ್ರಗ್ ಮಾಫಿಯಾ, ಆ ವುಡ್ ಈ ವುಡ್ ಯಾವುದನ್ನೂ ಬಿಡಲ್ಲ: ಕೋಟ

    ಉಡುಪಿ: ಇಲ್ಲಿ ಆ ವುಡ್ ಈ ವುಡ್ ಎಂಬ ಪ್ರಶ್ನೆ ಬರುವುದಿಲ್ಲ. ಡ್ರಗ್ ಮಾಫಿಯಾ ವಿಚಾರದಲ್ಲಿ ಗೃಹ ಸಚಿವರು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದು, ಇಡೀ ಮಂತ್ರಿಮಂಡಲ ಬೆಂಬಲಿಸುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಕೋಟ, ಡ್ರಗ್ಸ್ ವಿಚಾರದಲ್ಲಿ ವ್ಯಕ್ತಿಗಳು ಗೌಣ. ವಿಚಾರ ಅಷ್ಟೇ ಮುಖ್ಯ. ಸಣ್ಣವರು ದೊಡ್ಡವರು ಎಂಬ ಪ್ರಶ್ನೆ ಬರುವುದಿಲ್ಲ. ರಾಜ್ಯ ಬಿಜೆಪಿ ಸರ್ಕಾರ ವಿಷಯಗಳ ಮೇಲೆ ಹೋಗುತ್ತದೆ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು.

    ಮಾದಕ ದ್ರವ್ಯದ ಸೇವನೆ ಮತ್ತು ಮಾರಾಟ ವಿಚಾರ ರಾಜ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಗೃಹ ಸಚಿವ ಬೊಮ್ಮಾಯಿ ಕಟುವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾಗಿದೆ. ಯಾವುದೇ ಕಠಿಣ ಪರಿಸ್ಥಿತಿ ಎದುರಾದರೂ ಪರವಾಗಿಲ್ಲ. ಮಾದಕ ದ್ರವ್ಯದ ಜಾಡನ್ನು ಮಟ್ಟ ಹಾಕುತ್ತೇವೆ. ಮಾದಕ ದ್ರವ್ಯದ ಜಾಲವನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದರು.

  • ನಮ್ಮೊಂದಿಗೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಚಾಟ ಮಾಡ್ತಿರುವ ಬಗ್ಗೆ ದುಃಖವಿದೆ: ಚೇತನ್

    ನಮ್ಮೊಂದಿಗೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಚಾಟ ಮಾಡ್ತಿರುವ ಬಗ್ಗೆ ದುಃಖವಿದೆ: ಚೇತನ್

    ಬೆಂಗಳೂರು: ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ ಎಂದು ನಟ ಚೇತನ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

    ನಿರ್ದೇಶಕ ಇಂದ್ರಜಿತ್ ನಟ ಚಿರು ಸಾವಿನ ಕುರಿತು ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರರಂಗದಲ್ಲಿ ಪರವಿರೋಧ ಚರ್ಚೆ ನಡೆಯುತ್ತಿವೆ. ಈ ಮಧ್ಯೆ ನಟ ಚೇತನ್ ಸೋಶಿಯಲ್ ಮಿಡಿಯಾದ ಮೂಲಕ ನಟ ಚಿರಂಜೀವಿ ಬಗ್ಗೆ ಮಾತನಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ಚಿರು ಹೆಸರು ಕೇಳಿ ತುಂಬಾ ಬೇಸರವಾಯ್ತು: ದರ್ಶನ್

    ನಟ ಚೇತನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾದಕ ವಸ್ತುವಿನ ಜಾಗೃತಿ ಅಭಿಯಾನ, ಪುನರ್ವಸತಿ ಕಾರ್ಯಕ್ರಮಗಳು, ಸರ್ಕಾರದ ಉತ್ತಮ ನೀತಿಗಳು, ಮತ್ತು ಸರಿಯಾದ ತನಿಖೆಗಳು ನಮಗೆ ಬೇಕಾಗಿದೆ. ಮಸಿ ಬಳಿಯುವುದು ಮತ್ತು ಉದ್ರೇಕಕಾರಿ ಹೇಳಿಕೆಗಳು ನಮಗೆ ಬೇಡವಾದುದ್ದು” ಎಂದು ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ “ಸಿಗರೇಟು, ಮದ್ಯ, ಮಾದಕ ಮತ್ತು ಪಾರ್ಟಿಗೆ ಹೋಗುವ ಅಭ್ಯಾಸಗಳು ನನಗಿಲ್ಲ. ಮುಂದುವರೆದು ಕನ್ನಡ ಇಂಡಸ್ಟ್ರಿಯ ಯಾವುದೇ ಸಾಮಾಜಿಕ ಅಭ್ಯಾಸಗಳ ಬಗ್ಗೆ ಗೊತ್ತಿಲ್ಲದ ನನಗೆ, ನಮ್ಮ ನಡುವೆ ಇಲ್ಲದ ವ್ಯಕ್ತಿಯ ಮೇಲೆ ಕೆಸರೆರಚಾಟ ಮಾಡುತ್ತಿರುವುದರ ಬಗ್ಗೆ ದುಃಖವಿದೆ. ನಾವು ಯಾವುದೇ ಆರೋಪಗಳನ್ನು ಹೋರಿಸಿದರೂ ಅದನ್ನು ಸಮರ್ಥಿಸಲು ಅಥವಾ ಉತ್ತರಿಸಲು ಆ ಧ್ವನಿಯೇ ಇಲ್ಲದಿರುವ ಸಮಯದಲ್ಲಿ ಅವರ ಮೇಲೆ ಕೆಸರು ಎರಚುವುದನ್ನು ನಾನು ಖಂಡಿಸುತ್ತೇನೆ” ಎಂದು ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಉಪ್ಪು ತಿಂದವರು ನೀರು ಕುಡಿಯಲಿ: ಡ್ರಗ್ಸ್ ಮಾಫಿಯಾ ಬಗ್ಗೆ ಜಗ್ಗೇಶ್ ಮಾತು

    ಉಪ್ಪು ತಿಂದವರು ನೀರು ಕುಡಿಯಲಿ: ಡ್ರಗ್ಸ್ ಮಾಫಿಯಾ ಬಗ್ಗೆ ಜಗ್ಗೇಶ್ ಮಾತು

    -ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರ್ತಾರೆ
    -ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು

    ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಕೆಲ ಸ್ಯಾಂಡಲ್‍ವುಡ್ ತಾರೆಯರ ಹೆಸರು ಕೇಳಿ ಬಂದಿದ್ದರ ಬಗ್ಗೆ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಉಪ್ಪುತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾನು ನನ್ನ ಕನಸು, ಅನ್ನ ಜೀವನ ಅಂತ ಬಂದವರ ಕಾಲಮಾನದವ ವ್ಯಕ್ತಿ. ಬಣ್ಣ ಹಚ್ಚುವ ಮುನ್ನ ಶಾರದೆ ಸ್ಮರಿಸಿ ಬಣ್ಣಕ್ಕೆ ಮುಖ ಕೊಡುತ್ತಿದ್ದೆವು. ನಮ್ಮ ಕಾಲ ಕಲಾವಿದರು ಅಂತ ಯಾರಾದರು ಕರೆದರೆ ಊಟಕ್ಕೆ ಹೋಗಿ 2 ಪೆಗ್‍ಗೆ ಸೀಮಿತವಾಗಿತ್ತು. ಇಂದು ನಶೆ ಸದ್ದಿನದೆ ಚರ್ಚೆ ಆಗಿಬಿಟ್ಟಿದೆ. ಇದರ ಬಗ್ಗೆ ಮಾತಾಡಿದರೆ ಸಾಕು ಪರ-ವಿರೋಧದ ಅನಿಷ್ಠ ಮನದ ನೆಮ್ಮದಿಗೆ ಭಂಗ ತರುತ್ತದೆ.

    ಅಪ್ಪನಿಗೆ 1981ರಲ್ಲಿ 5,000 ರೂ. ಸಾಲ ಕೇಳಿದಕ್ಕೆ ಸಾರ್ವಜನಿಕವಾಗಿ ಚಪ್ಪಲಿಯಲ್ಲಿ ಹೊಡೆದು ತಾಕತ್ತಿದ್ದರೆ ಹೋಗಿ ದುಡಿ ಎಂದು ಹೊರ ದೂಡಿದ್ದರು. ಹಠಕ್ಕೆ ಬಿದ್ದು ದುಡಿಮೆಗೆ ಮದ್ರಾಸಿ(ಚೆನ್ನೈ)ಗೆ ಹೋದೆ. ಅಪಮಾನ ಮಾಡಿ ಅಂದು ಅಪ್ಪ ನನಗೆ ಜೀವನ ಕಲಿಸಿದ. ಇಂದು ಮಕ್ಕಳ ಹಾಗೆ ಬೆಳೆಸುವ ತಂದೆಯೂ ಇಲ್ಲ, ತಲೆಮಾರು ಇಲ್ಲ. ಈಗ ಎಲ್ಲ ಕ್ಷೇತ್ರ ಏನಿದ್ದರು ನಾನು ನನ್ನಿಷ್ಟದ ಜೀವನ.

    ನಾವು 30 ಸಿನಿಮಾಗಳಲ್ಲಿ ನಟಿಸಿದರೂ ನಿರ್ಮಾಪಕರ ಮನೆ ಮುಂದೆ ಭಿಕ್ಷುಕರಂತೆ ಸಂಭಾವನೆಗೆ ಕಾದು, ಕೊಟ್ಟ ಕ್ಷಣ ರೇಷನ್ ಅಂಗಡಿ ಮುಂದೆ ಅಕ್ಕಿ ಸೀಮೆಎಣ್ಣೆಗೆ ಕ್ಯೂ ನಿಂತವರು. ಇಂದು ಎರಡು ಸಿನಿಮಾಗೆ ಕುಬೇರನ ಮಕ್ಕಳು. ಹೇಗೆ ಇಂಥ ಕ್ಯಾಚ್ ನನಗೆ 57 ವರ್ಷಕ್ಕೂ ಅರ್ಥವಾಗಿಲ್ಲ. 2015ರಿಂದ ಮೋಜು ಮಸ್ತಿ, ಕುಸ್ತಿ ಸಿನಿಮಾ ಜೀವನ. ಅಂದು ಒಂದು ಮಾತಿಗೆ ಅಳುತ್ತಿದ್ದೇವು.

    ಇಂದು ಮಾಧ್ಯಮ ಮಿತ್ರರು ಮನೆಯ ಹತ್ತಿರ ಬಂದಿದ್ದರಂತೆ ಕ್ಷಮೆಯಿರಲಿ. ನಾನು ಊರಿಗೆ ಹೋಗಿರುವೆ. ನಿಮ್ಮ ಪ್ರೀತಿಗೆ ಧನ್ಯವಾದ. ಇಂದು ಏನೇ ಮಾತಾಡಿದ್ರೂ ಅದಕ್ಕೆ ನೂರು ತರಹ ಪರ-ವಿರೋಧ ಚರ್ಚೆಯಾಗುತ್ತದೆ. ಯಾಕೆ ಬೇಕು ಉಪ್ಪು ತಿಂದವರು ನೀರು ಕುಡಿಯಲಿ. ಬದುಕುವ ಹಠ ಇದ್ದವರು ಹಿಮಾಲಯ ಏರುತ್ತಾರೆ. ಬದುಕು ಹಗುರವಾಗಿ ಕಂಡವರು ಸ್ಮಶಾನ ಸೇರುತ್ತಾರೆ. ಅದು ಅವರವರ ಹಣೆಬರಹ.

    ನಾನು ನಟನಾಗಿ ಅಲ್ಲ ಒಬ್ಬ ತಂದೆ ಸ್ಥಾನದಲ್ಲಿ ನಿಂತು ನನ್ನ ಕಲಾಬಂಧುಗಳಿಗೆ ಹೇಳುವುದೊಂದೆ ನೀವು ಚನ್ನಾಗಿದ್ದೀರ ಮಾತ್ರ ದುನಿಯಾ. ಯಾರೋ ಕೆಲ ತಲೆಮಾಸಿದವರ ತಪ್ಪಿಗೆ ಇಡಿಚಿತ್ರರಂಗ ಅನ್ನಬೇಡಿ. ಹಾದಿ ತಪ್ಪಿದವರ ಬಹಿರಂಗಪಡಿಸಿ ಬುದ್ಧಿ ಕಲಿಸಿ. ಕೆಲವರ ತಪ್ಪಿಗೆ ಚಿತ್ರರಂಗದ ಪ್ರಾಮಾಣಿಕ ಕಲಾವಿದರು ನೊಂದಿದ್ದಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.

  • ನನಗೆ ಡ್ರಗ್ಸ್ ಅನ್ನೋದರ ಸ್ಪೆಲ್ಲಿಂಗ್ ಗೊತ್ತಿಲ್ಲ: ನವೀನ್ ಕೃಷ್ಣ

    ನನಗೆ ಡ್ರಗ್ಸ್ ಅನ್ನೋದರ ಸ್ಪೆಲ್ಲಿಂಗ್ ಗೊತ್ತಿಲ್ಲ: ನವೀನ್ ಕೃಷ್ಣ

    – ಇದು ರಾಜ್‍ಕುಮಾರ್ ಇದ್ದ ಇಂಡಸ್ಟ್ರಿ
    – ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ

    ಬೆಂಗಳೂರು: ಇದು ರಾಜ್ ಕುಮಾರ್ ಇದ್ದ ಇಂಡಸ್ಟ್ರಿ. ಅಣ್ಣಾವ್ರು ಯಾವಾಗಲೂ ಕ್ಯಾಮೆರಾನೇ ದೇವರಂತೆ ಕಾಣುತ್ತಿದ್ದರು. ಕ್ಯಾಮೆರಾಗೆ, ಮೇಕಪ್ ಮ್ಯಾನ್‍ಗೆ, ನಿರ್ದೇಶಕರಿಗೆ ಕೈ ಮುಗಿದು ಬರುವ ಇಂಡಸ್ಟ್ರಿ ಇದು. ನಾನು ಕಂಡಂತೆ ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ ಎಂದು ನಟ ನವೀನ್ ಕೃಷ್ಣ ಹೇಳಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾತನಾಡಿದ ನಟ ನವೀನ್ ಕೃಷ್ಣ, ನನ್ನ ಪ್ರಕಾರ ನನಗೆ ಡ್ರಗ್ಸ್ ಅನ್ನೋದರ ಸ್ಪೆಲ್ಲಿಂಗ್ ಗೊತ್ತಿಲ್ಲ. ಚಿತ್ರರಂಗದಲ್ಲಿ ಕೆಲವೇ ಕೆಲವು ನಟರು ಮಾತ್ರವಿಲ್ಲ. ಇಲ್ಲಿ ಸಾವಿರಾರು ಕಲಾವಿದರು, ಸಾವಿರಾರು ತಂತ್ರಜ್ಞರು ಕೆಲಸ ಮಾಡುತ್ತಿದ್ದೀವಿ. ಆದ್ದರಿಂದ ಯಾರೋ ಒಬ್ಬರು ಇರಬಹುದೆನೋ? ಅನ್ನೋ ಕಾರಣಕ್ಕೆ ಇಡೀ ಇಂಡಸ್ಟ್ರಿಯನ್ನ ಎಳೆದು ತರುವುದು ತಪು ಎಂದರು.

    ಶೂಟಿಂಗ್‍ಗೆ ಡ್ರಗ್ಸ್ ಸೇವಿಸಿ ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಇದು ರಾಜ್ ಕುಮಾರ್ ಇದ್ದ ಇಂಡಸ್ಟ್ರಿ. ಅಣ್ಣಾವ್ರು ಯಾವಾಗಲೂ ಕ್ಯಾಮೆರಾನೇ ದೇವರಂತೆ ಕಾಣುತ್ತಿದ್ದರು. ಕ್ಯಾಮೆರಾಗೆ, ಮೇಕಪ್ ಮ್ಯಾನ್‍ಗೆ, ನಿರ್ದೇಶಕರಿಗೆ ಕೈ ಮುಗಿದು ಬರುವ ಇಂಡಸ್ಟ್ರಿ ಇದು. ನಾನು ಕಂಡಂತೆ ಡ್ರಗ್ಸ್ ಸೇವಿಸಿ ಶೂಟಿಂಗ್‍ಗೆ ಬಂದಿರೋದು ಯಾರೂ ಇಲ್ಲ. ಹೀಗಾಗಿ ಯಾರು ನಿಜವಾಗಿಯೂ ಪಾಲ್ಗೊಂಡಿದ್ದಾರೆ ಅವರ ಹೆಸರನ್ನಷ್ಟೇ ಹೇಳಿ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಡೀ ಇಂಡಸ್ಟ್ರಿಯನ್ನ ದೂಷಿಸುವುದು ತಪ್ಪು ಎಂದಿದ್ದಾರೆ.

    ಅಕ್ರಮ ಚಟುವಟಿಕೆಗಳು ಎಲ್ಲಿ ಇಲ್ಲ, ಎಲ್ಲಾ ಉದ್ಯಮಗಳಲ್ಲೂ ಇದೆ. ದುಡ್ಡಿಗಾಗಿ ಏನೇನೋ ನಡೆಯುತ್ತಿದೆ. ಇಂದ್ರಜಿತ್ ಆರೋಪ ಮಾಡಿರುವ ವೇಗದಲ್ಲೇ ನೇರವಾಗಿ ಗೊತ್ತಿರುವ ಹೆಸರುಗಳನ್ನ ಹೇಳಬಹುದಿತ್ತು. ಪ್ರಭಾವಿಗಳು ಏನಾದರೂ ತಪ್ಪು ಮಾಡಿದರೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಿ ಎಂದು ನವೀನ್ ಕೃಷ್ಣ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದರು ನವೀನ್ ಕೃಷ್ಣ “ಕನ್ನಡ ಚಿತ್ರರಂಗದಲ್ಲಿ ಕೆಲವೇ ಕೆಲವು ಕಲಾವಿದರು ಮಾತ್ರ ಇಲ್ಲ. ಕಲಾವಿದರು, ತಂತ್ರಜ್ಞರು ಸೇರಿ ಲಕ್ಷಾಂತರ ಮಂದಿ ಕೂಡ ಕನ್ನಡ ಚಿತ್ರರಂಗದಲ್ಲಿದ್ದಾರೆ. ಮಜಾ ಮಾಡಲು ಹಣವಿರುವ ಶ್ರೀಮಂತರು ಒಂದೆಡೆಯಿದ್ದರೆ, ದುಡಿದು ಬದಕಲೂ ಪರದಾಡುವ ಬಡವರೂ ಇದ್ದಾರೆ. ಆದರೆ ಎಲ್ಲರೂ ಸ್ಯಾಂಡಲ್‍ವುಡ್‍ನ ಭಾಗವೇ ಆಗಿದ್ದಾರೆ. ನನ್ನ ಉದ್ದೇಶ ಒಂದೇ, ಯಾರು ಈ ಮಾಫಿಯಾದಲ್ಲಿ ಸೇರಿಕೊಂಡಿದ್ದಾರೋ ಅವರ ಹೆಸರುಗಳನ್ನ ಹೇಳಿ. ಅವರನ್ನು ಮಾತ್ರ ಆರೋಪಿತರನ್ನಾಗಿಸಿ” ಎಂದು ನವೀನ್ ಕೃಷ್ಣ  ಮನವಿ ಮಾಡಿಕೊಂಡಿದ್ದಾರೆ.

    ಅಭಿಮಾನಿಯೊಬ್ಬರು ಇಂದ್ರಜಿತ್ ಹೇಳಿಕೆಗೆ ನೀವು ಏನು ಪ್ರತಿಕ್ರಿಯೆ ಕೊಡುತ್ತೀರಿ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು. ಇದಕ್ಕೆ ನಟ ನವೀನ್ ಕೃಷ್ಣ, “ಯಾರು ಅಂತ ಗೊತ್ತು, ಆದರೆ ಆಮೇಲೆ ಹೇಳುತ್ತೀನಿ ಅಂದರೆ ಹೇಗೆ. ಹೋಳೊಂಗೆ ಇದ್ದರೆ ಫಸ್ಟ್ ಹೇಳಬೇಕು. ಅದು ಬಿಟ್ಟು ಟ್ರೈಲರ್ ನೋಡಿ ಆಮೇಲೆ ಸಿನಿಮಾ ನೋಡಿ ಅಂದರೆ ಹೇಗೆ” ಎಂದು ಪ್ರತಿಕ್ರಿಯಿಸಿದ್ದಾರೆ.

  • ಟಿವಿಯಲ್ಲಿ ಚಿರು ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ – ಇಂದ್ರಜಿತ್ ಆರೋಪಕ್ಕೆ ಮೇಘನಾ ಮಾತು

    ಟಿವಿಯಲ್ಲಿ ಚಿರು ಫೋಟೋ ನೋಡಿದ್ರೆ ಕಣ್ಣೀರು ಬರುತ್ತೆ – ಇಂದ್ರಜಿತ್ ಆರೋಪಕ್ಕೆ ಮೇಘನಾ ಮಾತು

    ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ಚಿರಂಜೀವಿ ಸರ್ಜಾ ಸಾವಿನ ಕುರಿತು ಚರ್ಚೆ ಹುಟ್ಟುಹಾಕಿದ್ದರು. ಆದರೆ ಇಂದ್ರಜಿತ್ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಈ ಹಿಂದೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಆಗಿಲ್ಲ ಏಕೆ?: ಇಂದ್ರಜಿತ್

    ಇಂದ್ರಜಿತ್ ಲಂಕೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾಗ, ಇತ್ತೀಚೆಗೆ ಒಬ್ಬ ಯುವ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೆಯೇ ಆಗಲಿಲ್ಲ. ಯಾಕೆ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಎಂದು ಪ್ರಶ್ನೆ ಮಾಡಿದ್ದರು. ಇಂದ್ರಜಿತ್ ಪ್ರಶ್ನೆ ಮಾಡಿದ ನಂತರ ಮೂರು ತಿಂಗಳ ನಂತರ ಚಿರು ಸಾವಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಇಂದ್ರಜಿತ್ ಹೇಳಿಕೆಗೆ ಪರವಿರೋಧ ಹೇಳಿಕೆಗಳು ಕೇಳಿಬರುತ್ತಿದೆ.

    ಇದೀಗ ಇಂದ್ರಜಿತ್ ಆರೋಪಕ್ಕೆ ಚಿರು ಪತ್ನಿ ಮೇಘನಾ ರಾಜ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮೇಘನಾ ರಾಜ್ ವಾಟ್ಸಪ್ ಮೆಸೇಜ್ ಮೂಲಕ ಪ್ರಶಾಂತ್ ಸಂಬರಗಿ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಇಂದ್ರಜಿತ್ ಆರೋಪದಿಂದ ನನಗೆ ತುಂಬಾ ನೋವಾಗಿದೆ. ಮೃತಪಟ್ಟಿರುವವರು ಈಗ ಮಾತಾಡಲು ಸಾಧ್ಯನಾ? ಈಗ ಚಿರು ಇಲ್ಲ, ಈಗ ಅವರ ಉತ್ತರ ಕೊಡಲು ಸಾಧ್ಯವೇ ಎಂದು ಬೇಸರ ತೋಡಿಕೊಂಡಿದ್ದಾರೆ.

    ಚಿರು ಈಗ ಇಲ್ಲ, ಆದರೂ ಅವರನ್ನು ಜನ ಬಿಡುತ್ತಿಲ್ಲ. ಚಿರು ಸರ್ಜಾ ಹೆಸರು ಹೇಳಿದರೆ ಇವರಿಗೆ ಏನು ಸಿಗುತ್ತೆ?, ಟಿವಿಯಲ್ಲಿ ಚಿರು ಫೋಟೋ ನೋಡಿದರೆ ಕಣ್ಣೀರು ಬರುತ್ತೆ. ಇಂದ್ರಜಿತ್ ಬೇರೆಯವರ ಹೆಸರನ್ನು ಹಾಳು ಮಾಡಬಾರದು. ಅಲ್ಲದೇ ಇಂದ್ರಜಿತ್ ಪರಿಸ್ಥಿತಿಯ ಲಾಭ ಪಡೆಯುತ್ತಿದ್ದಾರೆ. ಚಿರು ಹೆಸರನ್ನು ಇಂದ್ರಜಿತ್ ಯಾಕೆ ಹೇಳುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ ಎಂದು ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ನೋವಿನಿಂದ ಮಾತನಾಡಿದ್ದಾರೆ.