Tag: domestic violence

  • ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದ ಪತ್ನಿ – ಕೋರ್ಟ್ ಮೊರೆ ಹೋದ ಪತಿ

    ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದ ಪತ್ನಿ – ಕೋರ್ಟ್ ಮೊರೆ ಹೋದ ಪತಿ

    ಜೈಪುರ: ಕೌಟುಂಬಿಕ ಹಿಂಸಾಚಾರದ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊರಹೊಮ್ಮಿದ್ದು, ಮಹಿಳೆಯೊಬ್ಬಳು ಮಗನ ಮುಂದೆಯೇ ಕ್ರಿಕೆಟ್ ಬ್ಯಾಟ್‍ನಿಂದ ಪತಿಯನ್ನು ಥಳಿಸಿದ್ದಾಳೆ. ಈ ಹಿನ್ನೆಲೆ ಪತಿಯೂ ತನ್ನ ರಕ್ಷಣೆ ಮಾಡಿ ಎಂದು ನ್ಯಾಯಾಲಯಕ್ಕೆ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ತೊಂದರೆಗೀಡಾದ ಪತಿಯೂ ಶಾಲೆಯ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಇವರು ಪೊಲೀಸರಿಗೆ ದೂರನ್ನು ಕೊಟ್ಟಿದ್ದು, ನನ್ನ ಪತ್ನಿಯೂ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ. ಈ ಹಿನ್ನೆಲೆ ನನಗೆ ರಕ್ಷಣೆ ಕೊಡಿ ಎಂದು ಪ್ರಾಂಶುಪಾಲರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ 

    ಪತಿಯು ದೂರಿನಲ್ಲಿ, ಪತ್ನಿ ನನ್ನ ಮೇಲೆ ಪ್ಯಾನ್, ಸ್ಟಿಕ್ ಮತ್ತು ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ನಡೆಸುತ್ತಿದ್ದಾಳೆ. ಇದರಿಂದ ಗಾಬರಿಗೊಂಡ ನಾನು ಸಾಕ್ಷ್ಯ ಸಂಗ್ರಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ ಎಂದು ತಿಳಿಸಿದ್ದಾರೆ. ಪತ್ನಿ ಹಲ್ಲೆ ಮಾಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?
    ಪತ್ನಿಯೂ ತಮ್ಮ ಮಗ ಮುಂದೆಯೇ ಕ್ರಿಕೆಟ್ ಬ್ಯಾಟ್ ಹಿಡಿದು ಪತಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆಯುತ್ತಿರುವುದನ್ನು ಕಾಣಬಹುದು. ಈ ಹಿನ್ನೆಲೆ ಪತಿಯೂ ರಕ್ಷಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಘಟನೆಯ ದೃಶ್ಯಾವಳಿಗಳನ್ನು ಹಾಜರುಪಡಿಸಿದ್ದಾರೆ. ಅವರಿಗೆ ಭದ್ರತೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

    ನಡೆದಿದ್ದೇನು?
    ಪ್ರಾಂಶುಪಾಲರಾದ ಅಜಿತ್ ಸಿಂಗ್ ಯಾದವ್ ಅವರು ಏಳು ವರ್ಷಗಳ ಹಿಂದೆ ಹರಿಯಾಣದ ಸೋನಿಪತ್ ನಿವಾಸಿ ಸುಮನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆರಂಭದಲ್ಲಿ, ಅವರ ಜೀವನವು ಚೆನ್ನಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಸುಮನ್ ಅವರು ಅಜಿತ್ ಅವರಿಗೆ ಹೊಡೆಯುವುದನ್ನು ಪ್ರಾರಂಭಿಸಿದರು. ಆಗಾಗ್ಗೆ ಪತ್ನಿ ನೀಡುತ್ತಿದ್ದ ಹಿಂಸೆಯಿಂದ ಅಜಿತ್‍ಗೆ ಹಲವು ಗಾಯವಾಗಿದೆ. ಅವುಗಳನ್ನು ಗುಣಪಡಿಸಲು ಅವರು ವೈದ್ಯಕೀಯ ಸಹಾಯವನ್ನು ಪಡೆಯುತ್ತಿದ್ದರು ಎಂದು ಅವರೇ ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿದ್ದರೆ, ಈ ದೇವಸ್ಥಾನಕ್ಕೆ ಭೇಟಿ ಪಕ್ಕಾ 

    ಯಾವುದೇ ರೀತಿಯ ಸಾಕ್ಷ್ಯಿಗಳು ಇಲ್ಲದ ಹಿನ್ನೆಲೆ ಅಜಿತ್ ಮನೆಯಲ್ಲಿ ಯಾರಿಗೂ ತಿಳಿಯದಂತೆ ಕ್ಯಾಮೆರಾ ಇಟ್ಟಿದ್ದಾರೆ. ನಂತರ ಸುಮನ್ ಬ್ಯಾಟ್‍ನಲ್ಲಿ ಹೊಡೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹೆಂಡತಿ ಮಿತಿಗಳನ್ನು ಮೀರಿದ್ದರಿಂದ ನಾನು ನ್ಯಾಯಾಲಯದ ಆಶ್ರಯ ಪಡೆದಿದ್ದೇನೆ. ಸೋದರ ಮಾವ ಸಹ ನನ್ನ ಪತ್ನಿಯನ್ನು ಹಿಂಸೆಗೆ ಪ್ರೇರೇಪಿಸುತ್ತಾನೆ ಎಂದು ಆರೋಪಿಸಿದರು.

  • ಕೌಟುಂಬಿಕ ಹಿಂಸಾಚಾರ ಆರೋಪ: ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ಪೆರು ಪ್ರಧಾನಿ ವಜಾ

    ಲಿಮಾ: ಕೌಟುಂಬಿಕ ಹಿಂಸಾಚಾರದ ಆರೋಪದ ಹಿನ್ನೆಲೆಯಲ್ಲಿ ತಾವು ನೇಮಿಸಿದ ಮೂರು ದಿನದಲ್ಲೇ ಪೆರು ಪ್ರಧಾನ ಮಂತ್ರಿಯನ್ನು ಪೆರುವಿಯನ್‌ ಅಧ್ಯಕ್ಷ ಪೆಡ್ರೋ ಕ್ಯಾಸ್ಟಿಲ್ಲೋ ತೆಗೆದುಹಾಕಿದ್ದಾರೆ.

    ಹೆಕ್ಟರ್ ವ್ಯಾಲರ್ ಪಿಂಟೋ ಅವರು ಫೆ.1ರಂದು ಪೆರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೂರು ದಿನದಲ್ಲೇ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಲಾಗಿದೆ. 2016ರಲ್ಲಿ ಕೌಟುಂಬಿಕ ಹಿಂಸಾಚಾರದ ಗಂಭೀರ ಆರೋಪ ಪಿಂಟೋ ಅವರ ಮೇಲಿತ್ತು.

    ನಾನು ಸಂಪುಟವನ್ನು ಪುನಾರಚನೆ ಮಾಡಲು ನಿರ್ಧರಿಸಿದ್ದೇನೆ. ಪ್ರಧಾನಿ ಹೆಕ್ಟರ್‌ ವ್ಯಾಲರ್‌ ಪಿಂಟೋ ಅವರನ್ನು ವಜಾಗೊಳಿಸಲಾಗಿದೆ ಎಂದು ಅಧ್ಯಕ್ಷ ಪೆಡ್ರೋ ಘೋಷಿಸಿದ್ದಾರೆ.

    ಸರ್ಕಾರದಲ್ಲಿ ವ್ಯಾಲರ್‌ ಪಿಂಟೋ ಅವರ ಕುರಿತು ವಿರೋಧ ಪಕ್ಷಗಳು ಮತ್ತು ಸಂಪುಟದ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು.

    62 ವರ್ಷ ವಯಸ್ಸಿನ ಪಿಂಟೋ ವಿರುದ್ಧ, 2016ರಲ್ಲಿ ಅವರ ಪತ್ನಿ ಮತ್ತು ಪುತ್ರಿ ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಿದ್ದರು ಎಂಬ ಬಗ್ಗೆ ವರದಿಗಳಾಗಿದ್ದವು. ಪರಿಣಾಮವಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಿಂಟೋ ಅವರ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ ತಮ್ಮ ಮೇಲಿನ ಆರೋಪವನ್ನು ಪಿಂಟೋ ಅಲ್ಲಗಳೆದಿದ್ದಾರೆ.

     

  • ಯುವಿ ಕುಟುಂಬದ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಕೈಬಿಟ್ಟ ಆಕಾಂಕ್ಷ

    ಯುವಿ ಕುಟುಂಬದ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಕೈಬಿಟ್ಟ ಆಕಾಂಕ್ಷ

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದ ಬಿಗ್ ಬಾಸ್ 10 ಆವೃತ್ತಿಯ ಸ್ಪರ್ಧಿ ಆಕಾಂಕ್ಷ ಶರ್ಮಾ ಪ್ರಕರಣವನ್ನು ಕೈಬಿಟ್ಟಿದ್ದಾರೆ.

    ಯುವಿ ಸೋದರನ ಪತ್ನಿಯಾಗಿರುವ ಅಕಾಂಕ್ಷ 2017ರಲ್ಲಿ ಯುವರಾಜ್ ಸಿಂಗ್ ಕುಟುಂಬ ಹಾಗು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಅಡಿ ಮಾನಸಿಕ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು.

    ಅಕಾಂಕ್ಷರ ದೂರಿನಂತೆ ಗುರುಗ್ರಾಮದ ಪೊಲೀಸ್ ಯುವರಾಜ್ ಸಿಂಗ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಯುವರಾಜ್ ಜೊತೆಗೆ ಅವರ ತಾಯಿ ಶಬ್ಮಮ್, ಸಹೋದರ ಜೊರಾವರ್ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿತ್ತು. ಸದ್ಯ ದೂರು ಹಿಂಪಡೆದಿರುವ ಆಕಾಂಕ್ಷ, ಯುವಿ ಕುಟುಂಬದ ಕ್ಷಮೆಯಾಚಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜೊರಾವರ್ ಸಿಂಗ್, ಆಕಾಂಕ್ಷ ವಿವಾಹ ವಿಚ್ಛೇದನ ಪಡೆದಿದ್ದರು. ಈ ವೇಳೆ 48 ಲಕ್ಷ ರೂ. ಜೀವನಾಂಶ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಯುವಿ ಸೋದರ ಜೊರಾವರ್ 2014ರಲ್ಲಿ ಅಕಾಂಕ್ಷಾರನ್ನು ಮದುವೆಯಾಗಿದ್ದರು. ಆಕಾಂಕ್ಷ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ಭಾಗಿಯಾಗಿದ್ದರು. ಶೋದಲ್ಲಿಯೇ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದರು. ಅಲ್ಲದೇ ಯುವರಾಜ್ ಸಿಂಗ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಬಿಗ್ ಬಾಸ್ ಶೋದಿಂದ ಹೊರಬಂದ 4 ತಿಂಗಳಲ್ಲೇ ಮನೆ ಬಿಟ್ಟು ಹೊರ ಬಂದಿದ ಅವರು ಬಳಿಕ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

    https://www.instagram.com/p/B1okzITAqnO/

  • ಹೆಂಡ್ತಿಯಿಂದ ಮೋಸ, ಕಿರುಕುಳ- ಕೌಟುಂಬಿಕ ಹಿಂಸೆ ಕೇಸ್ ದಾಖಲಿಸಿ ಹಣಕಾಸಿನ ಪರಿಹಾರ ಕೇಳಿದ ನವವಿವಾಹಿತ

    ಹೆಂಡ್ತಿಯಿಂದ ಮೋಸ, ಕಿರುಕುಳ- ಕೌಟುಂಬಿಕ ಹಿಂಸೆ ಕೇಸ್ ದಾಖಲಿಸಿ ಹಣಕಾಸಿನ ಪರಿಹಾರ ಕೇಳಿದ ನವವಿವಾಹಿತ

    ಹೈದರಾಬಾದ್: ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಮಾನಸಿಕ ಕಿರುಕುಳದಿಂದ ಬೇಸತ್ತು ಹಾಗೂ ಮದುವೆಯಿಂದ ತನಗಾಗಿರುವ ಆರ್ಥಿಕ ನಷ್ಟದ ಪರಿಹಾರ ಕೋರಿ ಆಕೆಯ ವಿರುದ್ಧವೇ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಿಸಿರೋ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

    24 ವರ್ಷದ ಗೋಗು ರಾಮ್‍ಕುಮಾರ್ ತನ್ನ 28 ವರ್ಷದ ಪತ್ನಿ ಸಾಯಿ ಚೈತನ್ಯಾ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಿಜಯವಾಡದ ಫಸ್ಟ್ ಅಡಿಷನಲ್ ಚೀಫ್ ಮೆಟ್ರೊಪಾಲಿಟನ್ ಕೋರ್ಟ್ ಅರ್ಜಿಯನ್ನ ಸ್ವೀಕರಿಸಿದ್ದು, ಪ್ರಕರಣದ ವಿಚಾರಣೆ ಫೆಬ್ರವರಿ 21ರಂದು ನಡೆಯಲಿದೆ.

    ಕುಮಾರ್ ಅವರ ದೂರಿನ ಪ್ರಕಾರ, ಅವರು 2017ರ ಆಗಸ್ಟ್ ನಲ್ಲಿ ಸಾಯಿ ಚೈತನ್ಯ ಜೊತೆ ವಿವಾಹವಾಗಿದ್ದರು. ಆದ್ರೆ ಎರಡು ತಿಂಗಳಲ್ಲೇ ಬೇರೆಯಾಗಿದ್ದಾರೆ. ಚೈತನ್ಯಗೆ ಈಗಾಗಲೇ ಮದುವೆಯಾಗಿದ್ದು, 12 ವರ್ಷದ ಮಗಳಿರುವ ಬಗ್ಗೆ ತನಗೆ ಹೇಳಿರಲಿಲ್ಲ. ನನಗೆ ಚೈತನ್ಯ ಯಿಂದ ವಂಚನೆಯಾಗಿದೆ ಎಂದು ರಾಮ್‍ಕುಮಾರ್ ಆರೋಪಿಸಿದ್ದು, ಕೌಟುಂಬಿಕ ಹಿಂಸೆ ಕಾಯ್ದೆಯ ಸೆಕ್ಷನ್ 12ರ ಅಡಿ ಪರಿಹಾರಕ್ಕಾಗಿ ಕೋರಿದ್ದಾರೆ.

    ಮದುವೆಯ ನಂತರ ಕೌಟುಂಬಿಕ ಹಿಂಸೆ, ಅದರಲ್ಲೂ ಪತ್ನಿಯಿಂದ ಮಾನಸಿಕ ಹಿಂಸೆಯಾಗಿದೆ. ಪತ್ನಿ ನನ್ನನ್ನು ಸಣ್ಣ ಸಣ್ಣ ಕಾರಣಕ್ಕೂ ನಿಂದಿಸಿ ಅವಮಾನಿಸುತ್ತಿದ್ದಳು ಎಂದು ರಾಮ್‍ಕುಮಾರ್ ಆರೋಪ ಮಾಡಿದ್ದಾರೆ. ಅಲ್ಲದೆ ತನ್ನ ವಿರುದ್ಧ ಐಪಿಸಿ ಸೆಕ್ಷನ್ 498ಎ(ಗಂಡ/ ಗಂಡನ ಸಂಬಂಧಿಕರಿಂದ ಹಿಂಸೆ) ಅಡಿ ಸುಳ್ಳು ದೂರು ದಾಖಲಿಸಿ 10 ಲಕ್ಷ ರೂ. ಪರಿಹಾರ ನೀಡುವಂತೆ ಬ್ಲಾಕ್‍ಮೇಲ್ ಮಾಡುತ್ತಿದ್ದಾಳೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಮದುವೆಗಾಗಿ 2.5 ಲಕ್ಷ ರೂ. ಖರ್ಚಾಗಿರೋ ಕಾರಣ ಹಾಗೂ ಮಾನಸಿಕ ಹಿಂಸೆಗಾಗಿ ಹಣಕಾಸಿನ ಪರಿಹಾರ ನೀಡಬೇಕೆಂದು ಕೋರಿದ್ದಾರೆ.

    ರಾಮ್‍ಕುಮಾರ್ ಹಾಗೂ ಸಾಯಿ ಚೈತನ್ಯ ಇಬ್ಬರೂ ಒಂದೇ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರೀತಿಸಿ ಮದುವೆಯಾಗಿದ್ದರು ಎಂದು ವರದಿಯಾಗಿದೆ.