Tag: doctors

  • ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    ಸಂಸಾರ ನಡೆಸೋಣ ಬಾ ಎಂದ ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಪತ್ನಿ

    ಅಮರಾವತಿ: ಸಂಸಾರ ನಡೆಸೋಣ ಬಾ ಎಂದು ಕರೆದ ಪತಿಯ ಮರ್ಮಾಂಗವನ್ನು ಪತ್ನಿ ಕತ್ತರಿಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಪಾಣ್ಯಂ ತಾಲೂಕಿನ ಎಸ್.ಕೊಟ್ಟಾಲ ಗ್ರಾಮದ ಯೂನುಸ್ (23) ಪತ್ನಿಯಿಂದ ಹಲ್ಲೆಗೆ ಒಳಗಾದ ಪತಿ. ಹಸೀನಾಳ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ. ಕರ್ನೂಲ್ ಜಿಲ್ಲೆಯ ಗಡಿವೆಮುಲ ತಾಲೂಕಿನ ಸೋಮಾಪುರಂನಲ್ಲಿ ಗುರುವಾರ ಘಟನೆ ನಡೆದಿದೆ.

    ಯೂನುಸ್ ಎರಡು ವರ್ಷಗಳ ಹಿಂದೆಯಷ್ಟೇ ಸೋಮಾಪುರಂ ಗ್ರಾಮದ ಹಸೀನಾಳನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತಿ-ಪತ್ನಿ ಸಣ್ಣ ವಿಚಾರಕ್ಕೆ ಜಗಳವಾಡಿ ದೂರವಾಗಿದ್ದರು. ಪತಿ ಮನೆ ಬಿಟ್ಟು ಬಂದಿದ್ದ ಹಸೀನಾ ತವರು ಮನೆ ಸೇರಿದ್ದಳು. ಇಂದಲ್ಲ ನಾಳೆ ಪತ್ನಿ ಬರುತ್ತಾಳೆ ಅಂತ ಯೂನಸ್ ಎರಡು ವರ್ಷಗಳಿಂದ ಕಾಯುತ್ತಲೇ ಇದ್ದ. ಆದರೆ ಹಸೀನಾ ಮಾತ್ರ ತವರು ಮನೆಯಲ್ಲಿಯೇ ಉಳಿದಿದ್ದಳು.

    ಯೂನುಸ್ ಎರಡು ವರ್ಷಗಳ ಬಳಿಕ ಸೋಮಾಪುರಂನಲ್ಲಿರುವ ಅತ್ತೆಯ ಮನೆಗೆ ತೆರಳಿ ಪತ್ನಿ ಹಸೀನಾಳನ್ನು ಸಂಸಾರ ಮಾಡೋಣ ಬಾ ಎಂದು ಕರೆದಿದ್ದಾನೆ. ಪತಿಯ ಮಾತು ಕೇಳಿದ ಹಾಸೀನಾ ಕೋಪಗೊಂಡಿದ್ದಾಳೆ. ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ. ಕುಟುಂಬಸ್ಥರ ಜೊತೆ ಸೇರಿ ಹಸೀನಾ ಪತಿ ಯೂನುಸ್‍ನನ್ನು ಕಂಬಕ್ಕೆ ಕಟ್ಟಿ ಹಾಕಿ ಮನ ಬಂದಂತೆ ಥಳಿಸಿದ್ದಾಳೆ. ಈ ವೇಳೆ ಹಸೀನಾ ಪತಿಯ ಮರ್ಮಾಂಗವನ್ನು ಕತ್ತರಿಸಿ ಹಾಕಿದ್ದಾಳೆ.

    ಗಂಭೀರವಾಗಿ ಗಾಯಗೊಂಡ ಯೂನುಸ್ ಕಾಪಾಡುವಂತೆ ಕೂಗಿ ಅಳುತ್ತಿದ್ದ ಧ್ವನಿಯನ್ನು ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಕ್ಷಣವೇ ಯೂನುಸ್‍ನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯೂನುಸ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ ಎಂದು ವರದಿಯಾಗಿದೆ.

  • ಪದ್ಮಶ್ರೀ ಸುಕ್ರಜ್ಜಿ ಆಸ್ಪತ್ರೆಗೆ ದಾಖಲು

    ಪದ್ಮಶ್ರೀ ಸುಕ್ರಜ್ಜಿ ಆಸ್ಪತ್ರೆಗೆ ದಾಖಲು

    ಕಾರವಾರ: ಜನಪದ ಕೋಗಿಲೆ, ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಅನಾರೋಗ್ಯದಿಂದ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಅವರನ್ನು ಐಸಿಯು ವಾರ್ಡ್‍ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಕೋಲಾ ತಾಲೂಕಿನ ತಮ್ಮ ನಿವಾಸದಲ್ಲಿ ಸುಕ್ರಜ್ಜಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    83 ವರ್ಷದ ಸುಕ್ರಿಗೌಡ ಜುಲೈ ತಿಂಗಳಿನಲ್ಲಿ ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ನಂತರ ಗುಣಮುಖರಾಗಿದ್ದ ಅವರು ಡಿಸ್ಚಾರ್ಜ್ ಆಗಿ ಮನೆಗೆ ವಾಪಸ್ ಆಗಿದ್ದರು. ಈಗ ಮತ್ತೆ ಇದೇ ಸಮಸ್ಯೆ ಕಾಣಿಸಿಕೊಂಡಿದ್ದು, ಅವರಿಗೆ ಶ್ವಾಸಕೋಶದಲ್ಲಿ ಸಮಸ್ಯೆ ಇದೆ. ಅವರನ್ನು ತುರ್ತು ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

  • ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    – ಹೊಸ ಕಾನೂನು ತರಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಗಲಾಟೆಗಳು ನಡೆದಿತ್ತು. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಲು ಮುಂದಾಗುತ್ತಿದೆ.

    ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವ ಕಾಯ್ದೆ ತರಲು ಮುಂದಾಗುತ್ತಿದೆ. ವೈದ್ಯರ ಮೇಲಿನ ದಾಳಿ, ಹಲ್ಲೆ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಈ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ನಿಯಮಗಳನ್ನು ರೂಪಿಸಿದೆ. ಅಲ್ಲದೆ ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು us-ms-mohfw@nic.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ.

    ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲು ಸಕಾರ ಮುಂದಾಗಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.

    ಕರಡು ಮಸೂದೆಯಲ್ಲಿರುವ ಸಂಪೂರ್ಣ ವಿವರ ಓದಲು ಕ್ಲಿಕ್ ಮಾಡಿ: www.mohfw.gov.in

  • ಆಸ್ಪತ್ರೆಯಲ್ಲಿ ಅಟೆಂಡರ್ ಗಳೇ ಡಾಕ್ಟರ್- ಬೆಂಗ್ಳೂರಿನಲ್ಲಿವೆ ಕಿಲ್ಲಿಂಗ್ ಹಾಸ್ಪಿಟಲ್

    ಆಸ್ಪತ್ರೆಯಲ್ಲಿ ಅಟೆಂಡರ್ ಗಳೇ ಡಾಕ್ಟರ್- ಬೆಂಗ್ಳೂರಿನಲ್ಲಿವೆ ಕಿಲ್ಲಿಂಗ್ ಹಾಸ್ಪಿಟಲ್

    ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾದರೆ ಎಲ್ಲರೂ ಆಸ್ಪತ್ರೆಗೆ ಹೋಗುತ್ತಾರೆ. ಅಪ್ಪಿ ತಪ್ಪಿ ನೀವು ಸಿಲಿಕಾನ್ ಸಿಟಿಯಲ್ಲಿರುವ ಈ ಆಸ್ಪತ್ರೆಗೆ ಹೋದರೆ ನಿಮ್ಮ ಪ್ರಾಣ ಪಕ್ಷಿಯೇ ಹಾರಿ ಹೋಗಲಿದೆ. ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಚರಣೆಯಲ್ಲಿ ಬಿಬಿಎಂಪಿಯ ಆಸ್ಪತ್ರೆಯಲ್ಲಿರುವ ಮುನ್ನಾಬಾಯಿ ಎಂಬಿಬಿಎಸ್ ಡಾಕ್ಟರ್ ಗಳ ಅಸಲಿಯತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬಡ ಜನರಿಗೆ ಉತ್ತಮ ಮತ್ತು ಗುಣಮಟ್ಟದ ಚಿಕಿತ್ಸೆ ಸಿಗಲಿ ಎಂದು ಬಿಬಿಎಂಪಿ ಆಸ್ಪತ್ರೆಗಳನ್ನು ಆರಂಭಿಸಿದೆ. ಈ ಪಾಲಿಕೆಯ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಗಳ ಬದಲಿಗೆ ಅಟೆಂಡರ್ ಗಳೇ ಯದ್ವಾತದ್ವಾ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಬಿಬಿಎಂಪಿ ಪಾಲಿಕೆಯ ಆಸ್ಪತ್ರೆಗಳ ನರಕ ಸದೃಶಗಳನ್ನ ನಿಮ್ಮ ಪಬ್ಲಿಕ್ ಟಿವಿ ಸ್ಟಿಂಗ್ ಅಪರೇಷನ್ ಮೂಲಕ ಬಟಾಬಯಲು ಮಾಡಿದೆ.

    ಸ್ಥಳ: ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ಯಾಲೇಸ್ ಗುಟ್ಟಹಳ್ಳಿ
    ಈ ಆಸ್ಪತ್ರೆಗೆ ತೆರಳಿದ್ರೆ ಇಲ್ಲಿಯ ಅಟೆಂಡರ್ ತಾನೇ ಡಾಕ್ಟರ್ ಎಂದು ರೋಗಿಗಳನ್ನು ಕರೆದು ಚಿಕಿತ್ಸೆ ನೀಡಲು ಮುಂದಾಗುತ್ತಾನೆ. ಸರಿಯಾಗಿ ಬಿಪಿ ಚೆಕ್ ಮಾಡೋಕೆ ಬರದಿದ್ದರೂ, ಪರಿಶೀಲಿಸಿದ ರೀತಿ ನಾಟಕ ಆಡುತ್ತಾನೆ. ಇದೇ ಅಟೆಂಡರ್ ಆಸ್ಪತ್ರೆಗೆ ಬರುವ ಗರ್ಭಿಣಿ, ಮಕ್ಕಳಿಗೂ ಚಿಕಿತ್ಸೆ ನೀಡುತ್ತಾನೆ. ವೈದ್ಯರೇ ಇಲ್ಲದ ಈ ಆಸ್ಪತ್ರೆಯಲ್ಲಿ ಓರ್ವ ಮಹಿಳಾ ನರ್ಸ್ ಮತ್ತು ಅಟೆಂಡರ್ ಚಿಕಿತ್ಸೆ ನೀಡುತ್ತಾರೆ. ಓವರ್ ಡೋಸ್ ಹೊಂದಿರುವ ಟ್ಯಾಬ್ಲೆಟ್ ನೀಡಿ ರೋಗಿಗಳನ್ನು ಸಾಗಿ ಹಾಕುವ ಕೆಲಸ ಮಾಡುತ್ತಾರೆ. ಏನ್ ಸರ್, ಡಾಕ್ಟರ್ ಇಲ್ವಾ ಅಂದ್ರೆ, ಇದು ಸರ್ಕಾರಿ ಆಸ್ಪತ್ರೆ, ನಾವು ಚಿಕಿತ್ಸೆ ನೀಡ್ತೀವಿ ಅಲ್ವ ಎಂದು ನರ್ಸ್ ಹೇಳುತ್ತಾಳೆ.

    ಸ್ಥಳ: ಮಂಜುನಾಥನಗರ ಆರೋಗ್ಯ ಕೇಂದ್ರ, 1ನೇ ಮುಖ್ಯರಸ್ತೆ, ರಾಜಾಜಿನಗರ. ವಾರ್ಡ್ 99
    ಈ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯಾಧಿಕಾರಿಗಳಿದ್ದರೂ ಚಿಕಿತ್ಸೆ ನೀಡಲ್ಲ. ಯಾಕೆ ಮೇಡಂ ಚಿಕಿತ್ಸೆ ನೀಡಲ್ವಾ ಅಂದ್ರೆ ನಾವು ರೆಸ್ಟ್ ಮಾಡೋದು ಬೇಡ್ವಾ ಎಂದು ಕಾಫಿ ಹೀರುತ್ತಾ ಬಾಗಿಲು ಹಾಕಿಕೊಳ್ಳುತ್ತಾರೆ.

    ತಜ್ಞ ವೈದ್ಯರ ಪ್ರಕಾರ 250 ಎಂಜಿ ಮಾತ್ರೆಗಳನ್ನು ದಿನಕ್ಕೆ ಮೂರು ಬಾರಿ ನೀಡಬಹುದು. ಆದ್ರೆ ಪಾಲಿಕೆಯ ಆಸ್ಪತ್ರೆಗಳಲ್ಲಿ 500 ಎಂಜಿಯ ಮಾತ್ರೆಗಳನ್ನು ಮಕ್ಕಳಿಗೆ ನೀಡುತ್ತಾರೆ. ಕೆಲವು ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ರೋಗಿಗಳಿಗೂ ಒಬ್ಬರೇ ಚಿಕಿತ್ಸೆ ನೀಡುತ್ತಾರೆ. ಬಡವರಿಗೆ ಸಹಾಯವಾಗಬೇಕಿದ್ದ ಪಾಲಿಕೆಯ ಆಸ್ಪತ್ರೆಗಳು ಜೀವಕ್ಕೆ ಮಾರಕವಾಗುತ್ತಿವೆ. ಆಸ್ಪತ್ರೆಗಳ ಮೇಲ್ವಿಚಾರಣೆ ನಡೆಸಬೇಕಿದ್ದ ಬಿಬಿಎಂಪಿ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ವೈದ್ಯರ ನಿರ್ಲಕ್ಷ್ಯ – 9 ತಿಂಗಳ ಗರ್ಭಿಣಿ, ಮಗು ಆಸ್ಪತ್ರೆಯಲ್ಲೇ ಸಾವು

    ವೈದ್ಯರ ನಿರ್ಲಕ್ಷ್ಯ – 9 ತಿಂಗಳ ಗರ್ಭಿಣಿ, ಮಗು ಆಸ್ಪತ್ರೆಯಲ್ಲೇ ಸಾವು

    ಕೋಲಾರ: ಗಣೇಶ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಗೆ ಡೆಲಿವರಿ ಮಾಡಿಸಲು ದಾಖಲಾಗಿದ್ದ 9 ತಿಂಗಳ ಗರ್ಭಿಣಿ ಮೃತಪಟ್ಟಿದ್ದಾರೆ.

    ಕೋಲಾರ ತಾಲೂಕಿನ ಮುದುವತ್ತಿ ಗ್ರಾಮದ ನಿವಾಸಿ ಸುಧಾ(22) ಮೃತ ಗರ್ಭಿಣಿ. ಗಣೇಶ್ ಹೆಲ್ತ್ ಕೇರ್ ನ ಡಾ. ಲತಾ ಅವರ ನಿರ್ಲಕ್ಷ್ಯದಿಂದ ಸುಧಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

    ಹೆರಿಗೆಗೆಂದು ಗಣೇಶ್ ಹೆಲ್ತ್ ಕೇರ್ ಆಸ್ಪತ್ರೆಗೆ ಸುಧಾ ಅವರು ದಾಖಲಾಗಿದ್ದರು. ಆದರೆ ಹೆರಿಗೆಗೆ ಬಂದವರು ಮಸಣ ಸೇರಿದ್ದಾರೆ. ಅವರ ಜೊತೆ ಹೊಟ್ಟೆಯಲ್ಲಿಯೇ ಶಿಶು ಕೂಡ ಮೃತಪಟ್ಟಿದೆ. ಆದರೆ ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ವೈದ್ಯರು ರೋಗಿಯನ್ನು ಸರಿಯಾಗಿ ತಪಾಸಣೆ ಮಾಡಿಲ್ಲ. ಬೇಜವಾಬ್ದಾರಿಯಿಂದ ಕೆಲಸ ಮಾಡಿ ಎರಡು ಜೀವವನ್ನು ಬಲಿ ಪಡೆದಿದ್ದಾರೆ ಎಂದು ಮಹಿಳೆಯ ಪೋಷಕರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನ್ಯಾಯ ಸಿಗುವವರೆಗೂ ಗರ್ಭಿಣಿ ಹಾಗೂ ಶಿಶುವಿನ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಬದುಕಿರುವ ಕಂದಮ್ಮನನ್ನು ಸಾವನ್ನಪ್ಪಿದೆ ಎಂದ ಹಾಸನದ ವೈದ್ಯರು

    ಬದುಕಿರುವ ಕಂದಮ್ಮನನ್ನು ಸಾವನ್ನಪ್ಪಿದೆ ಎಂದ ಹಾಸನದ ವೈದ್ಯರು

    ಚಿಕ್ಕಮಗಳೂರು: ಮೃತಪಟ್ಟಿದೆ ಎಂದು ಉಸಿರಾಡುತ್ತಿದ್ದ ಮಗುವನ್ನು ವೈದ್ಯರು ಪೋಷಕರಿಗೆ ಒಪ್ಪಿಸಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ.

    ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಸಮೀಪದ ಹಳಿಯೂರಿನ ಲೋಕೇಶ್-ಸರೀತಾ ದಂಪತಿಯ ಮೂರು ತಿಂಗಳ ಮಗು ಆರವ್‍ನನ್ನು ಹುಷಾರಿಲ್ಲದ ಕಾರಣ ಮೂರು ದಿನಗಳ ಹಿಂದೆ ಹಾಸನದ ಮಣಿ ಆಸ್ಪತ್ರೆಗೆ ಕರೆತರಲಾಗಿತ್ತು.

    ಚಿಕಿತ್ಸೆಗೆ ಸರಿಯಾಗಿ ಮಗು ಸ್ಪಂದಿಸುತ್ತಿರಲಿಲ್ಲ. ಮಗು ಸರಿಯಾಗಿ ಸ್ಪಂದಿಸದ ಕಾರಣ ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿ, ಮಗುವನ್ನು ಅವರ ಕೈಗೆ ನೀಡಿದ್ದಾರೆ. ಆದರೆ, ಹಾಸನದಿಂದ ಮೂಡಿಗೆರೆಗೆ ತರುವ ಮಾರ್ಗಮಧ್ಯೆ ಕಂದಮ್ಮ ಅತ್ತಿದೆ.

    ತಕ್ಷಣವೇ ಪೋಷಕರು ಮಗುವನ್ನು ಮೂಡಿಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ಮಗು ಹುಷಾರಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಆರವ್‍ನನ್ನು ಪೋಷಕರು ಈಗ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಣಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

    ಜಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ

    ಕಲಬುರಗಿ: ಜಿಲ್ಲೆಯ ಜಿಮ್ಸ್ (ಗುಲಬರ್ಗಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ವೈದ್ಯಕೀಯ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಮಾರಕ ಡಿಫ್ತೀರಿಯಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

    ಜಿಮ್ಸ್ ವೈದ್ಯಕೀಯ ಕಾಲೇಜಿನ ಮಹಿಳಾ ವಸತಿ ನಿಲಯದಲ್ಲಿ ವಾಸವಿದ್ದ 21 ವಿದ್ಯಾರ್ಥಿನಿಯರಿಗೆ ಡಿಫ್ತಿರೀಯಾ ಸೋಂಕು ತಗುಲಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜ್ವರ, ಗಂಟಲು ನೋವಿನಿಂದ ವಿದ್ಯಾರ್ಥಿನಿಯರು ಬಳಲುತ್ತಿದ್ದ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈ ಬಗ್ಗೆ ತಿಳಿದಿದೆ. ಹೀಗಾಗಿ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಲೇಡಿಸ್ ಹಾಸ್ಟೆಲಿನಲ್ಲಿದ್ದ 110 ವಿದ್ಯಾರ್ಥಿನಿಯರು ಹಾಗೂ 30 ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಒಟ್ಟು 21 ವಿದ್ಯಾರ್ಥಿನಿಯರಿಗೆ ಡಿಫ್ತೀರಿಯಾ ಸೋಂಕು ತಗುಲಿರುವ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಡಿಫ್ತೀರಿಯಾ ಸೋಂಕು ಶಂಕೆ ಇರುವ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷಾ ವರದಿ ಬೆಂಗಳೂರಿನ ಬಿಎಂಸಿಆರ್‍ಐ ಲ್ಯಾಬೋರೇಟರಿಗೆ ರವಾನೆ ಮಾಡಲಾಗಿದೆ. ಕಲಬುರಗಿಯಲ್ಲಿ ಮಾರಕ ಡಿಫ್ತೀರಿಯಾ ಸೋಂಕು ಶಂಕೆ ಹಿನ್ನೆಲೆ ಜ್ವರ, ಶ್ವಾಸನಾಳ, ಗಂಟಲು ನೋವು ಇದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಲ್ಲಿ ಜಿಮ್ಸ್ ನಿರ್ದೇಶಕರು ಮನವಿ ಮಾಡಿಕೊಂಡಿದ್ದಾರೆ.

  • ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ನವದೆಹಲಿ: ಗೊಂಬೆಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು 11 ತಿಂಗಳ ಮಗುವಿನ ಕಾಲು ನೋವನ್ನು ಗುಣಪಡಿಸಿದ ಅಪರೂಪದ ಸಂಗತಿಯೊಂದು ರಾಷ್ಟ್ರರಾಜಧಾನಿ ನವದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

    11 ತಿಂಗಳ ಮಗು ಝಿಕ್ರಾಳ ಕಾಲು ಮೂಳೆ ಮುರಿದು ಹೋಗಿತ್ತು. ಈ ವೇಳೆ ಮಗುವಿನ ಜೊತೆಗೆ ಆಕೆಯ ಗೊಂಬೆಗೂ ಕೂಡ ಚಿಕಿತ್ಸೆ ನೀಡಲಾಯಿತು. ಮಗು 13 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೊಂಬೆ ಆ ಮಗುವಿಗೆ ಸಾಥ್ ನೀಡಿದೆ. ಝಿಕ್ರಾ, ಮಹಮ್ಮದ್ ಶಹಜಾದ್ ಮಲಿಕ್ ಮಗಳಾಗಿದ್ದು ಇವರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. 13 ದಿನಗಳ ಹಿಂದೆ ಝಿಕ್ರಾ ಮಲಗಿದ್ದಾಗ ಹಾಸಿಗೆ ಮೇಲಿಂದ ಕೆಳಗೆ ಬಿದಿದ್ದಳು. ಆಗ ಅವರ ತಂದೆ ಮಲಿಕ್ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಈ ವೇಳೆ ಕಾಲು ಫ್ರ್ಯಾಕ್ಚರ್ ಆಗಿರುವ ವಿಷಯ ತಿಳಿದು ಬಂದಿದೆ. ಆಗ ವೈದ್ಯರು ಟ್ರ್ಯಾಕ್ಷನ್ ರಾಡ್ ಮೂಲಕ ಚಿಕಿತ್ಸೆ ನೀಡಬೇಕಾಯಿತು. ಚಿಕ್ಕ ಮಕ್ಕಳಿಗೆ ಟ್ರ್ಯಾಕ್ಷನ್ ರಾಡ್ ಹಾಕಿದರೆ ಕಾಲುಗಳನ್ನು ಮೇಲೆ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ ಕಾಲಿನ ಮೂಳೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಹೀಗಾಗಿ ಚಿಕಿತ್ಸೆಗೆಂದು ಝಿಕ್ರಾಳನ್ನು ವೈದ್ಯರು ಹಾಸಿಗೆ ಮೇಲೆ ಮಲಗಿಸಿದಾಗ ಆಕೆ ಒಂದೇ ಕಡೆ ಮಲಗುತ್ತಿರಲಿಲ್ಲ. ಹಾಗಾಗಿ ವೈದ್ಯರಿಗೆ ಝಿಕ್ರಾಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಕೆಯ ಕಾಲಿಗೆ ಬ್ಯಾಂಡೇಜ್ ಹಾಕಲು ಆಗುತ್ತಿರಲಿಲ್ಲ. ಝಿಕ್ರಾ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಝಿಕ್ರಾ ತಾಯಿ ಫರೀನ್‍ಗೆ ಆಕೆಯ ಅಜ್ಜಿ ನೀಡಿದ ಗೊಂಬೆ ನೆನಪಾಗಿದೆ. ಝಿಕ್ರಾ ಈ ಗೊಂಬೆಯನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಬಳಿಕ ಫರೀನ್ ಆ ಗೊಂಬೆಯನ್ನು ಆಸ್ಪತ್ರೆಗೆ ತಂದಾಗ ಝಿಕ್ರಾ ಖುಷಿಪಟ್ಟಿದ್ದಾಳೆ.

    ಝಿಕ್ರಾಗೆ ಬ್ಯಾಂಡೇಜ್ ಹಾಕುವ ಮೊದಲು ವೈದ್ಯರು ಗೊಂಬೆಗೆ ಬ್ಯಾಂಡೇಜ್ ಹಾಕಿದ್ದಾರೆ. ಇದನ್ನು ನೋಡಿದ ಝಿಕ್ರಾ ಸುಮ್ಮನೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾಳೆ. ಈಗ ಝಿಕ್ರಾ ಹಾಗೂ ಆಕೆಯ ಗೊಂಬೆ ‘ಪರಿ’ ಒಂದೇ ಹಾಸಿಗೆಯಲ್ಲಿ ದಾಖಲಾಗಿದ್ದಾರೆ. ಗೊಂಬೆ ಇಲ್ಲದಿದ್ದರೆ ಮಗುವಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಗೊಂಬೆಯ ಕಾರಣ ಝಿಕ್ರಾ ಖುಷಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಆದಷ್ಟು ಬೇಗ ಸರಿಹೋಗಲಿ. ಬೇರೆ ವಿಭಾಗದ ವೈದ್ಯರು ಕೂಡ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಝಿಕ್ರಾ ತಂದೆ ಹೇಳಿದ್ದಾರೆ.

  • ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಬೆಂಗಳೂರು: ದಿನಕ್ಕೆ ಲಕ್ಷಾಂತರ ಜನರು ಪ್ರಯಾಣ ಮಾಡುವ ಮೆಜೆಸ್ಟಿಕ್‍ನಲ್ಲಿರುವ ಇಂದಿರಾ ಕ್ಲಿನಿಕ್‍ಗೆ ಕಳೆದ ಒಂದು ತಿಂಗಳಿನಿಂದ ಡಾಕ್ಟರ್ ಬಂದಿಲ್ಲ. ಹೆಚ್ಚಾಗಿ ತೃತೀಯ ಲಿಂಗಿಗಳೇ ಕ್ಲಿನಿಕ್‍ಗೆ ಬರುತ್ತಾರೆ ಎಂದು ವೈದ್ಯರು ನೇಮಕವಾಗಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾದ ಬೆನ್ನಲ್ಲೆ ಕಳೆದ ಬಾರಿ ಇದ್ದ ಸರ್ಕಾರ ಬಿಎಂಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮೆಜೆಸ್ಟಿಕ್ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭ ಮಾಡಿತ್ತು. ಕೆಲವು ದಿನಗಳು ಚೆನ್ನಾಗಿ ನಡೆಯುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ. ಇದ್ದ ವೈದ್ಯರು ಕ್ಲಿನಿಕ್ ಬಿಟ್ಟು ಒಂದು ತಿಂಗಳಾದರೂ ಇನ್ನೂ ಬೇರೆ ಡಾಕ್ಟರ್ ನೇಮಕ ಮಾಡಿಲ್ಲ.

    ಬೇರೆ ಡಾಕ್ಟರ್ ನಾ ನೇಮಕ ಮಾಡೋಣ ಅಂದರೆ ಯಾವ ಡಾಕ್ಟರ್ ಕೂಡ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ಗೆ ಬರಲು ಮುಂದಾಗುತ್ತಿಲ್ಲ. ಮಹಿಳಾ ವೈದ್ಯರು, ನಾವು ಹೋಗಲ್ಲ, ಜಾಗ ಸರಿ ಇಲ್ಲ ಮತ್ತು ತೃತೀಯ ಲಿಂಗಿಗಳು ಜಾಸ್ತಿ ಬರುತ್ತಾರೆ ಆಗಾಗಿ ನಾವು ಹೋಗಲ್ಲ ಎಂದು ಹೇಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಪಬ್ಲಿಕ್ ಟಿವಿ, ವೈದ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ
    ಪ್ರತಿನಿಧಿ : ಯಾಕ್ ಸರ್ ಮೆಜೆಸ್ಟಿಕ್‍ನಲ್ಲಿ ಡಾಕ್ಟರ್ ಇಲ್ಲ. ಮೆಜೆಸ್ಟಿಕ್ ಅಂದರೆ ಯಾರು ಬರಲ್ಲ ಅಂತಾ ಇದಾರಂತೆ ಯಾಕೆ?
    ವೈದ್ಯಾಧಿಕಾರಿ : ಇಲ್ಲ ಸರ್ ಮೆಜೆಸ್ಟಿಕ್ ಅಂದರೆ ಲೇಡಿಸ್ ಹಾಕೋಕೆ ಆಗಲ್ಲ. ಅಲ್ಲಿ ವರ್ಕರ್ಸ್ ಜಾಸ್ತಿ
    ಪ್ರತಿನಿಧಿ : ಹುಂ ಹುಂ .
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಸರ್ ಆಗಾಗಿ ಬರುತ್ತಿಲ್ಲ.
    ಪ್ರತಿನಿಧಿ : ಹೌದಾ…
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಇದಾರೆ ಸರ್
    ಪ್ರತಿನಿಧಿ : ಆದರೆ ಏನು..
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಹೆಚ್ಚಾಗಿ ಬರುವುದು ಸರ್.. ಅವರಿಗೆ ಲೇಡಿಸ್ ಟ್ರೀಟ್ ಮೆಂಟ್ ಕೊಡೋಕೆ ಆಗಲ್ಲ ಸರ್
    ಪ್ರತಿನಿಧಿ : ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರಾ
    ವೈದ್ಯಾಧಿಕಾರಿ : ಹೌದು.. ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರು, ಬರಲ್ಲ ಅಂತಾ ಅಂದ್ರು
    ಪ್ರತಿನಿಧಿ : ಮತ್ತೆ ಹೇಗೆ ಈಗ
    ವೈದ್ಯಾಧಿಕಾರಿ : ಈಗ ಜೆಂಟ್ಸ್ ಡಾಕ್ಟರ್ ಬರುತ್ತಾರೆ, ಸೋಮವಾರ

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರ್ ಇಲ್ಲದೇ ನರ್ಸ್‌ಗಳು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ. ವೈದ್ಯರಿಲ್ಲದೇ ನರ್ಸ್‌ಗಳ ಬಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದಕ್ಕೆ ರೋಗಿಗಳು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾಕೆ ಒಂದು ತಿಂಗಳಿನಿಂದ ಡಾಕ್ಟರ್ ಇಲ್ಲ ಎಂದು ನರ್ಸ್ ಕೇಳಿದರೆ ಏನು ಉತ್ತರ ಕೊಟ್ಟಿದ್ದಾರೆ ಎಂದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ…

    ಪ್ರತಿನಿಧಿ : ಮೆಜೆಸ್ಟಿಕ್ ಆದರೆ ಏನಂತೆ ಮೇಡಂ ಬರೋದಕ್ಕೆ
    ಇಂದಿರಾ ಕ್ಲಿನಿಕ್ ನರ್ಸ್ : ಮೆಜೆಸ್ಟಿಕ್ ಏರಿಯಾ ಸರಿ ಇಲ್ಲ ಅಂತಾ ಸರ್
    ಪ್ರತಿನಿಧಿ : ಇವರು ಯಾಕ್ ಬಿಟ್ಟಿದ್ದು
    ಇಂದಿರಾ ಕ್ಲಿನಿಕ್ ನರ್ಸ್ : ಎಂಡಿ ಮಾಡೋದಕ್ಕೆ ಹೋಗಿದ್ದಾರೆ
    ಪ್ರತಿನಿಧಿ : ಏನು ಹೇಳ್ತಾರೆ ಮೇಲಿನವರು ಯಾವಾಗ ಬರುತ್ತಾರಂತೆ
    ಇಂದಿರಾ ಕ್ಲಿನಿಕ್ ನರ್ಸ್ : ಗೊತ್ತಿಲ್ಲ ಸರ್ ಮೆಜೆಸ್ಟಿಕ್ ಸರಿ ಇಲ್ಲ ಯಾರು ಬರುತ್ತಿಲ್ಲ ಅಂತಾ ಹೇಳುತ್ತಿದ್ದಾರೆ ಸರ್
    ಪ್ರತಿನಿಧಿ : ಎರಡು ತಿಂಗಳಿನಿಂದ ಡಾಕ್ಟರ್ ಇಲ್ಲ
    ಇಂದಿರಾ ಕ್ಲಿನಿಕ್ ನರ್ಸ್ : ಒಂದು ತಿಂಗಳಿನಿಂದ ಇಲ್ಲ ಸರ್
    ಪ್ರತಿನಿಧಿ : ಯಾವಾಗ ಬರಬಹುದು ?
    ನರ್ಸ್ : ಬರುತ್ತಾರೆ ಸರ್ ಇನ್ನೊಂದು ವಾರದಲ್ಲಿ ಬರ್ತಾರೆ ಅಂತಾ ಆಫೀಸರ್ಸ್ ಹೇಳುತ್ತಿದ್ದಾರೆ ಸರ್.

  • ಮಾಜಿ ಸಿಎಂಗೆ ಮತ್ತೆ ಕಣ್ಣಿನ ಸೋಂಕು – ಪ್ರವಾಸ ಮೊಟಕುಗೊಳಿಸಿ ಬೆಂಗ್ಳೂರಿಗೆ ವಾಪಸ್

    ಮಾಜಿ ಸಿಎಂಗೆ ಮತ್ತೆ ಕಣ್ಣಿನ ಸೋಂಕು – ಪ್ರವಾಸ ಮೊಟಕುಗೊಳಿಸಿ ಬೆಂಗ್ಳೂರಿಗೆ ವಾಪಸ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳಿಂದ ಸ್ವಕ್ಷೇತ್ರ ಬದಾಮಿಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆದರೆ ಅವರ ಕಣ್ಣಿಗೆ ಮತ್ತೆ ಸೋಂಕು ತಗುಲಿ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಪ್ರವಾಸದ ಹಿನ್ನೆಲೆಯಲ್ಲಿ ಕಣ್ಣಿಗೆ ಸೋಂಕು ತಗುಲಿ ಬದಾಮಿಯಿಂದ ವಾಪಸ್ ಬಂದಿದ್ದಾರೆ. ಬುಧವಾರ ಮಧ್ಯರಾತ್ರಿ 12 ಗಂಟೆಗೆ ವೈದ್ಯರು ಕಣ್ಣು ಪರೀಕ್ಷೆ ಮಾಡಿದ್ದಾರೆ. ಆಗ ಎರಡು ದಿನಗಳ ಕಾಲ ಓಡಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸವನ್ನು ಸಿದ್ದರಾಮಯ್ಯ ಅವರು ರದ್ದು ಮಾಡಿದ್ದಾರೆ.

    ಬುಧವಾರ ಬದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಪ್ರವಾಹದಿಂದ ಅಂದಾಜು 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ ಸದ್ಯಕ್ಕೆ ನಾವು ಪ್ರವಾಹ ಪರಿಹಾರಕ್ಕೆ ಐದು ಸಾವಿರ ಕೋಟಿ ಕೊಡಿ ಎಂದು ಕೇಳಿದ್ದೇವೆ. ಆ ಮೇಲೆ ವರದಿ ಆಧಾರದ ಮೇಲೆ ಹೆಚ್ಚಿನ ಪರಿಹಾರ ಕೊಡಲಿ. ಕೇಂದ್ರ ಸರ್ಕಾರ ಕೊಡದಿದ್ದರೆ ರಾಜ್ಯ ಸರ್ಕಾರವಾದರೂ ಕೊಡಲಿ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ, ನಾವಾದರೂ ಮಾತನಾಡುತ್ತೇವೆ. ಜನರು ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದೆ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಪ್ರವಾಹ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದ್ದರು.