Tag: doctors

  • ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ – ಆರ್‌ಜಿ ಕರ್ ಆಸ್ಪತ್ರೆಯ 45ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ

    ಕಿರಿಯ ವೈದ್ಯರ ಪ್ರತಿಭಟನೆಗೆ ಬೆಂಬಲ – ಆರ್‌ಜಿ ಕರ್ ಆಸ್ಪತ್ರೆಯ 45ಕ್ಕೂ ಹೆಚ್ಚು ಹಿರಿಯ ವೈದ್ಯರಿಂದ ರಾಜೀನಾಮೆ

    ಕೋಲ್ಕತ್ತಾ: ಆಗಸ್ಟ್‌ನಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕಿರಿಯ ವೈದ್ಯರಿಗೆ ಬೆಂಬಲಿಸಿ ಪಶ್ಚಿಮ ಬಂಗಾಳದ ಆರ್‌ಜಿ ಕರ್ ಆಸ್ಪತ್ರೆಯ (RG Kar Hospital) 45 ಕ್ಕೂ ಹೆಚ್ಚು ಹಿರಿಯ ವೈದ್ಯರು (Doctors) ಮತ್ತು ಅಧ್ಯಾಪಕರು ರಾಜೀನಾಮೆ ನೀಡಿದ್ದಾರೆ.

    ರಾಜೀನಾಮೆ ಸಲ್ಲಿಸುವಾಗ ಹಿರಿಯ ವೈದ್ಯರು, ಕಿರಿಯ ಸಹೋದ್ಯೋಗಿಗಳ ಬೇಡಿಕೆಗಳನ್ನು ಈಡೇರಿಸಿಲ್ಲ. ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ತನಿಖೆಯಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ ಎಂದು ಆರೋಪಿಸಿದ್ದಾರೆ.

    ಸದ್ಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಭಟನಾ ನಿರತ ವೈದ್ಯರ ಆರೋಗ್ಯ ಹದಗೆಟ್ಟಿದೆ. ಪ್ರತಿಭಟನಾನಿರತ ವೈದ್ಯರು ಮತ್ತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರ ಜೊತೆ ರಾಜಿ ಮಾಡಿಕೊಳ್ಳುವಂತೆ ಸರ್ಕಾರವನ್ನು ಕೋರುತ್ತೇವೆ ಎಂದು ಆರ್‌ಜಿ ಕರ್ ಆಸ್ಪತ್ರೆ ಆಡಳಿತಕ್ಕೆ ಬರೆದ ಪತ್ರದಲ್ಲಿ ವೈದ್ಯರು ತಿಳಿಸಿದ್ದಾರೆ.

    ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈದ್ಯರ ಹದಗೆಟ್ಟ ಸ್ಥಿತಿಯನ್ನು ಸರ್ಕಾರ ನಿರ್ಲಕ್ಷಿಸುತ್ತಿರುವಂತೆ ತೋರುತ್ತಿದೆ. ಇದೇ ಕಾರಣಕ್ಕೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

    ಈ ಬೆಳವಣಿಗೆಯ ನಡುವೆ ಮತ್ತೊಂದು ವೈದ್ಯರ ಸಂಘಟನೆಯಾದ ಜಾಯಿಂಟ್ ಪ್ಲಾಟ್‌ಫಾರ್ಮ್ ಆಫ್ ಡಾಕ್ಟರ್ಸ್ (ಜೆಪಿಡಿ) ಸಹ ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಬೆಂಬಲವಾಗಿ ಹೇಳಿಕೆಯನ್ನು ನೀಡಿದೆ.

    ಆರ್‌ಜಿ ಕರ್ ಅತ್ಯಾಚಾರ-ಹತ್ಯೆ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ದುರ್ಗಾಪೂಜೆ ಸಂಭ್ರಮದ ನಡುವೆಯೂ ಕಿರಿಯ ವೈದ್ಯರು ಸತತ ನಾಲ್ಕನೇ ದಿನವೂ ಮಂಗಳವಾರ ತಮ್ಮ ಆಮರಣಾಂತ ಉಪವಾಸವನ್ನು ಮುಂದುವರೆಸಿದರು. ಸುಮಾರು 15 ಹಿರಿಯ ವೈದ್ಯರು ಸಾಂಕೇತಿಕ ಉಪವಾಸ ಸತ್ಯಾಗ್ರಹವನ್ನು ನಡೆಸುವ ಮೂಲಕ ಅವರೊಂದಿಗೆ ಸೇರಿ ಒಗ್ಗಟ್ಟು ಪ್ರದರ್ಶಿಸಿದರು.

  • ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಆರೋಪ – 10 ವೈದ್ಯರು ಸೇರಿ 59 ಮಂದಿ ಸಸ್ಪೆಂಡ್‌!

    ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ರ‍್ಯಾಗಿಂಗ್ ಆರೋಪ – 10 ವೈದ್ಯರು ಸೇರಿ 59 ಮಂದಿ ಸಸ್ಪೆಂಡ್‌!

    ಕೋಲ್ಕತ್ತಾ: ರ‍್ಯಾಗಿಂಗ್‌ (Raggin), ಬೆದರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ( RG Kar Hospital) ವೈದ್ಯರು (Doctors) ಹಾಗೂ ವಿದ್ಯಾರ್ಥಿಗಳು ಸೇರಿದಂತೆ 59 ಮಂದಿಯನ್ನು ಅಮಾನತುಗೊಳಿಸಲಾಗಿದೆ.

    ರ‍್ಯಾಗಿಂಗ್, ಮನಿ ಲಾಂಡರಿಂಗ್ ಮತ್ತು ಬೆದರಿಕೆ ಆರೋಪಗಳ ತನಿಖೆಯ ನಂತರ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯು ಸಂಸ್ಥೆಯ 10 ವೈದ್ಯರನ್ನು ಹೊರಹಾಕಿದೆ. ಆಸ್ಪತ್ರೆಯಲ್ಲಿ ಕಿರುಕುಳ ನೀಡುವುದು, ಭಯದ ವಾತಾವರಣ ಸೃಷ್ಟಿಸುವುದು ಸೇರಿದಂತೆ ಹಲವು ಆರೋಪಗಳನ್ನು ವೈದ್ಯರು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಕಾಲೇಜು ಕೌನ್ಸಿಲ್ ಸಭೆಯಲ್ಲಿ ಈ ವೈದ್ಯರನ್ನು ಹಾಸ್ಟೆಲ್‌ನಿಂದ ಶಾಶ್ವತವಾಗಿ ಹೊರಹಾಕಲು ನಿರ್ಧರಿಸಲಾಯಿತು. ಅವರ ಮನೆಗಳಿಗೂ ನೋಟಿಸ್ ಕಳುಹಿಸಲಾಯಿತು. 10 ವೈದ್ಯರ ಉಚ್ಚಾಟನೆಯೊಂದಿಗೆ, ಇಂಟರ್ನಿಗಳು, ವಿದ್ಯಾರ್ಥಿಗಳು ಮತ್ತು ಗೃಹ ಸಿಬ್ಬಂದಿ ಸೇರಿದಂತೆ ಒಟ್ಟು 59 ಜನರನ್ನು ಅಮಾನತುಗೊಳಿಸಲಾಗಿದೆ.

    ಉಚ್ಚಾಟಿತ ವೈದ್ಯರಲ್ಲಿ ಸೌರಭ್ ಪಾಲ್, ಆಶಿಶ್ ಪಾಂಡೆ (ಇವರನ್ನು ಸಿಬಿಐ ಬಂಧಿಸಿದೆ), ಅಭಿಷೇಕ್ ಸೇನ್, ಆಯುಶ್ರೀ ಥಾಪಾ, ನಿರ್ಜನ್ ಬಾಗ್ಚಿ, ಸರೀಫ್ ಹಸನ್, ನೀಲಾಗ್ನಿ ದೇಬನಾಥ್, ಅಮರೇಂದ್ರ ಸಿಂಗ್, ಸತ್ಪಾಲ್ ಸಿಂಗ್ ಮತ್ತು ತನ್ವೀರ್ ಅಹ್ಮದ್ ಕಾಜಿ ಸೇರಿದ್ದಾರೆ. ಹಾಸ್ಟೆಲ್‌ಗಳನ್ನು ಖಾಲಿ ಮಾಡಲು ಅವರಿಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ.

    ಹೆಚ್ಚುವರಿಯಾಗಿ, ಅವರ ಹೆಸರುಗಳನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ರವಾನಿಸಲಾಗುತ್ತದೆ. ಅದು ಅವರ ವೈದ್ಯಕೀಯ ನೋಂದಣಿ ಪ್ರಮಾಣಪತ್ರಗಳನ್ನು ಪರಿಶೀಲಿಸಬಹುದು ಮತ್ತು ರದ್ದುಗೊಳಿಸಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

    ರ‍್ಯಾಗಿಂಗ್‌, ಬೆದರಿಕೆಗಳು, ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಹಲವರಿಂದ ದೂರುಗಳು ಬಂದ ಬಳಿಕ ತನಿಖೆ ನಡೆಸಲಾಗಿತ್ತು. ಈ ವೇಳೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರುವಂತೆ ಒತ್ತಡ, ಕೆಲವು ಮೆರವಣಿಗೆ ಮತ್ತು ಸಭೆಗಳಲ್ಲಿ ಭಾಗವಹಿಸದಂತೆ ಕಿರುಕುಳ ನೀಡಿದ್ದಾರೆ ಎಂದು ಹಲವಾರು ವಿದ್ಯಾರ್ಥಿಗಳು ಆರೋಪಿಸಿದ್ದರು.

    ಆಗಸ್ಟ್ 9 ರಂದು RG ಕರ್ ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ರಾಜ್ಯದಾದ್ಯಂತ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ರ‍್ಯಾಗಿಂಗ್‌ ಬಗ್ಗೆ ದೂರುಗಳು ದಾಖಲಾಗಿದ್ದವು.

  • ಆಫ್ರಿಕಾದ ಮಹಿಳೆಗೆ ಏಕಕಾಲದಲ್ಲೇ ಎರಡು ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗ್ಳೂರು ವೈದ್ಯರು

    ಆಫ್ರಿಕಾದ ಮಹಿಳೆಗೆ ಏಕಕಾಲದಲ್ಲೇ ಎರಡು ಹೃದಯ ಕವಾಟ ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಬೆಂಗ್ಳೂರು ವೈದ್ಯರು

    ಬೆಂಗಳೂರು: 25 ವರ್ಷದ ಆಫ್ರಿಕಾದ (Africa) ಮಹಿಳೆಗೆ (Woman) ಹೃದಯದ (Heart) ನಾಲ್ಕು ಕವಾಟಗಳಲ್ಲಿ ಎರಡು ಕವಾಟಗಳ ಬ್ಲಾಕೇಜ್‌ ಆಗಿದ್ದ ಕಾರಣ, ಏಕಕಾಲದಲ್ಲಿಯೇ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.

    ಫೋರ್ಟಿಸ್ ಆಸ್ಪತ್ರೆಯ ಕಾರ್ಡಿಯಾಕ್ ಸೈನ್ಸ್‌ನ ಅಧ್ಯಕ್ಷರಾದ ಡಾ ವಿವೇಕ್ ಜವಳಿ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಬಗ್ಗೆ ಮಾತನಾಡಿದ ಡಾ. ವಿವೇಕ್‌, 25 ವರ್ಷದ ಆಫ್ರಿಕನ್ ಮಹಿಳೆಯು ಸುಮಾರು 15 ವರ್ಷಗಳಿಂದ ತನ್ನ ಎರಡು ಹೃದಯ ಕವಾಟಗಳಲ್ಲಿ ಸಂಕೀರ್ಣತೆ ಮತ್ತು ತೀವ್ರವಾದ ಸಂಧಿವಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ರೋಗಿಯು ಇದನ್ನು ನಿರ್ಲಕ್ಷಿಸಿದ್ದ ಕಾರಣ ತೀವ್ರವಾದ ಮಹಾಪಧಮನಿಯ ಸೋರಿಕೆ ಉಂಟಾಗಿ, ಮಾರಣಾಂತಿಕ ಸ್ಥಿತಿ ತಲುಪಿದ್ದರು. ಇದರಿಂದ ಹೃದಯ ಕವಾಟಗಳ ಬ್ಲಾಕೇಜ್‌ ಹಾಗೂ ಹೃದಯ ಸ್ನಾಯುಗಳಲ್ಲಿ ದೌರ್ಬಲ್ಯಕ್ಕೆ ಕಾರಣವಾಗಿತ್ತು. ಈ ತೀವ್ರತೆಯಿಂದ ಇವರ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚಿತ್ತು. ಅಷ್ಟೇ ಅಲ್ಲದೇ ಕಾಲಿನ ಸೋಂಕು, ಹಲವು ಬಾರಿ ಗರ್ಭಪಾತದಂತಹ ಸಮಸ್ಯೆಗೂ ಒಳಗಾಗಿದ್ದರು ಎಂದು ತಿಳಿಸಿದ್ದಾರೆ.

    ಆಫ್ರಿಕಾ ಹಾಗೂ ಸುತ್ತಮುತ್ತದ ದೇಶದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ದೊರೆಯದೇ ಅವರು ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಹೃದಯ ಸಂಪೂರ್ಣ ತಪಾಸಣೆಯಲ್ಲಿ ಹೃದಯ ನಾಲ್ಕು ಕವಾಟಗಳಲ್ಲಿ ಮಹಾಪಧಮನಿಯ ಕವಾಟ ಮತ್ತು ಮಿಟ್ರಲ್ ಕವಾಟವನ್ನು ಬದಲಾಯಿಸಿದ್ದೇವೆ. ಅವರ ಎಡ ಹೃತ್ಕರ್ಣವನ್ನು (ಹೃದಯದ ಮೇಲಿನ ಎರಡು ಕೋಣೆಗಳಲ್ಲಿ ಒಂದು) ಚಿಕ್ಕದಾಗಿಸಿ, ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಅವರ ಹೃದಯದ ಒಂದು ಭಾಗವನ್ನು ಮುಚ್ಚಿದೆವು ಮತ್ತು ಅವರ ಅನಿಯಮಿತ ಹೃದಯ ಬಡಿತಗಳನ್ನು ಸರಿಪಡಿಸಲು ಇ-ಮೇಜ್ ಎಂಬ ವಿಧಾನವನ್ನು ಮಾಡಿದೆವು. ಏಕಕಾಲದಲ್ಲಿಯೇ ಅವರಿಗೆ ಡಬಲ್ ವಾಲ್ವ್ ಬದಲಿ ಶಸ್ತ್ರಚಿಕಿತ್ಸೆ ನಡೆಸಿದೆವು. ಸಾಮಾನ್ಯವಾಗಿ ಒಂದು ಬಾರಿ ಒಂದು ಕವಾಟದ ಬದಲಿ ಶಸ್ತ್ರಚಿಕಿತ್ಸೆ ನಡೆಸಬಹುದು, ಆದರೆ, ಇವರ ಪರಿಸ್ಥಿತಿಯಲ್ಲಿ ಎರಡು ಕವಾಟಗಳ ಬದಲಿ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿತ್ತು, ಆದಾಗಿಯೂ ಅವರಿಗೆ ನಮ್ಮ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ ಎಂದಿದ್ದಾರೆ.

    ಈ ಎಲ್ಲಾ ಶಸ್ತ್ರಚಿಕಿತ್ಸೆ ಬಳಿಕ ಅವರಿಗೆ ಮೂತ್ರಪಿಂಡದ ಕಾಯಿಲೆ ಇರುವುದು ಸಹ ತಪಾಸಣೆಯಲ್ಲಿ ಬಹಿರಂಗವಾಯಿತು. ಇದಕ್ಕೆ ಡಯಾಲಿಸಿಸ್ ಮತ್ತು ಮೂತ್ರಪಿಂಡದ ಸೋಂಕುಗಳನ್ನು ಪ್ರತಿಜೀವಕಗಳ ಮೂಲಕ ಚಿಕಿತ್ಸೆ ನೀಡಲಾಯಿತು. ಆಕೆಯ ಚೇತರಿಕೆಗೆ ಮತ್ತಷ್ಟು ನೆರವಾಗಲು ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಮ್ಲಜನಕೀಕರಣ (ECMO) ವನ್ನು ಬಳಸಿದ್ದೇವೆ. ECMO ಅವರ ಹೃದಯ ಮತ್ತು ಶ್ವಾಸಕೋಶದ ಕಾರ್ಯವನ್ನು ನಿರ್ವಹಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.

  • ವೈದ್ಯರ ಸುರಕ್ಷತಾ ಕ್ರಮಗಳ ಕುರಿತು ವರದಿ ನೀಡಲು ಕಾರ್ಯಪಡೆ ರಚಿಸಲು ನಿರ್ಧಾರ: ದಿನೇಶ್ ಗುಂಡೂರಾವ್

    ವೈದ್ಯರ ಸುರಕ್ಷತಾ ಕ್ರಮಗಳ ಕುರಿತು ವರದಿ ನೀಡಲು ಕಾರ್ಯಪಡೆ ರಚಿಸಲು ನಿರ್ಧಾರ: ದಿನೇಶ್ ಗುಂಡೂರಾವ್

    – ಕೋಲ್ಕತ್ತಾ ವೈದ್ಯಯ ಮೇಲಿನ ಅತ್ಯಾಚಾರ; ವೈದ್ಯಕೀಯ ಸಂಘಟನೆಗಳೊಂದಿಗೆ ಆರೋಗ್ಯ ಸಚಿವರ ಸಭೆ
    – ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಸುರಕ್ಷತೆಗೆ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಚರ್ಚೆ

    ಬೆಂಗಳೂರು: ರಾಜ್ಯದ ವೈದ್ಯರ ಸುರಕ್ಷತೆ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಲು ಕಾರ್ಯಪಡೆ ರಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ಕೋಲ್ಕತ್ತಾ ಟ್ರೈನಿ ವೈದ್ಯಯ ಮೇಲೆ ಅತ್ಯಾಚಾರ ನಡೆದ ಘಟನೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ವೈದ್ಯಕೀಯ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಅವರ ಸುರಕ್ಷೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದರು.‌

    ವಿವಿಧ ವೈದ್ಯ ಸಂಘಟನೆಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವರು, ಈ ಕಾರ್ಯಪಡೆ ವೈದ್ಯರ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮ, ಕಾನೂನುಗಳ ಅನುಷ್ಠಾನ ಸೇರಿ ಎಲ್ಲಾ ಆಯಾಮಗಳಲ್ಲಿ ವೈದ್ಯರ ಭದ್ರತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ತಿಂಗಳಲ್ಲಿ ವರದಿ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ. ವೈದ್ಯಕೀಯ ಸಂಘಟನೆಯವರು ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾರ್ಯಪಡೆಯಲ್ಲಿರಲಿದ್ದಾರೆ ಎಂದು ತಿಳಿಸಿದರು.

    ಇತ್ತೀಚೆಗೆ ಕೋಲ್ಕತ್ತಾ ಘಟನೆ ದೇಶದ ಗಮನ ಸೆಳೆದಿದೆ. ಘಟನೆ ಇಡೀ ದೇಶದಲ್ಲಿನ ಅಭದ್ರತೆ, ಮಹಿಳೆಯರ ರಕ್ಷಣೆ ಬಗ್ಗೆ ಜಾಗೃತಿ ಮೂಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ 50% ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ಭಯದ ವಾತಾವಾರಣದಲ್ಲಿ ಕೆಲಸ ಮಾಡುವುದು ಕಷ್ಟ. ಈ ನಿಟ್ಟಿನಲ್ಲಿ ಇಂದು ಸಭೆ ನಡೆಸಿದ್ದೇವೆ. 10-12 ವಿವಿಧ ಸಂಘಟನೆಗಳು ಸಭೆಯಲ್ಲಿ ಭಾಗವಹಿಸಿದ್ದವು. ಕರ್ತವ್ಯ ನಿರತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಭದ್ರತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.‌ ಭದ್ರತೆ ಹೆಚ್ಚಿಸುವ ಬಗ್ಗೆ ಸಲಹೆ ಕೊಟ್ಟಿದ್ದಾರೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಕ್ರಮಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.

    ವೈದ್ಯರ ರಕ್ಷಣೆಗೆ ಅನೇಕ ಕಾನೂನುಗಳು ಇವೆ. ವೈದ್ಯರಿಗೆ ಹಲ್ಲೆ ಮಾಡುವವರಿಗೆ 3-7 ವರ್ಷ ವರೆಗೆ ಶಿಕ್ಷೆ ವಿಧಿಸುವ ತಿದ್ದುಪಡಿ ತರಲಾಗಿದೆ. ಪ್ರಸ್ತುತ ಇದ್ದ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈ ಬಗ್ಗೆ ನಿನ್ನೆ ಅಧಿಸೂಚನೆ ಹೊರಡಿಸಲಾಗಿದೆ. ಜನರಿಗೆ ಈ ಕಾನೂನು ಬಗ್ಗೆ ಮಾಹಿತಿ ಕೊಡುವ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ. ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮೆರಾ, ರಿಸ್ಟ್ ಬ್ಯಾಂಡ್, ಪ್ಯಾನಿಕ್ ಬಟನ್, ಪೊಲೀಸ್ ಇಲಾಖೆ ಜೊತೆ ಸಂಪರ್ಕಿಸಿ ಆವಾಗ ಆವಾಗ ಭೇಟಿ ನೀಡಿ ಪರೀಶೀಲನೆ, ಕೇಸ್‌ಗಳ ಇತ್ಯರ್ಥವನ್ನು ಫಾಸ್ಟ್ ಟ್ಯ್ರಾಕ್ ಮಾಡುವ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ ಎಂದರು.

    ಈ ಎಲ್ಲಾ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯರ ಸುರಕ್ಷತೆಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ವರದಿ ನೀಡಲು ಕಾರ್ಯಪಡೆ ರಚಿಸಲು ತೀರ್ಮಾನಿಸಲಾಗಿದೆ‌. ಆ ವರದಿ ಆಧಾರದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

  • ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    ಕೋಲ್ಕತ್ತಾ: ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಪ್ರಾಂಶುಪಾಲ (RG Kar Medical College Principal) ಡಾ.ಸಂದೀಪ್ ಘೋಷ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ಅತ್ಯಾಚಾರ ಪ್ರಕರಣದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ (Social Media) ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಈ ಅವಮಾನ ನನ್ನಿಂದ ಸಹಿಸಲಾಗುತ್ತಿಲ್ಲ ಎಂದು ಹೇಳಿ ಘೋಷ್‌ (Dr. Sandip Ghosh) ರಾಜೀನಾಮೆ ಘೋಷಿಸಿದ್ದಾರೆ. ಇದನ್ನೂ ಓದಿ: ಶ್ರಾವಣ ಸೋಮವಾರ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ – 7 ಭಕ್ತರು ಸಾವು

    ನನ್ನಿಂದ ರಾಜೀನಾಮೆ ಪಡೆಯಲು ವಿದ್ಯಾರ್ಥಿಗಳನ್ನ (Medical Student) ಎತ್ತಿಕಟ್ಟಿದ್ದಾರೆ. ಸುಮ್ಮನೆ ನನ್ನ ಮಾನಹಾನಿ ಮಾಡಲಾಗುತ್ತಿದೆ. ನಾನು ಸಂತ್ರಸ್ತರನ್ನ ನೋಯಿಸುವ ಯಾವುದೇ ಟೀಕೆ ಮಾಡಿಲ್ಲ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಶಿಕ್ಷೆ ಆಗಬೇಕೆಂದು ಈಗಲೂ ಬಯಸುತ್ತೇನೆ. ಮೃತ ಬಾಲಕಿ ನನ್ನ ಮಗಳಿದ್ದಂತೆ, ನನಗೂ ತಂದೆ-ತಾಯಿ ಇದ್ದಾರೆ. ಆದ್ರೆ ಸೋಷಿಯಲ್‌ ಮೀಡಿಯಾದಲ್ಲಿ ನನ್ನ ವಿರುದ್ಧ ನೀಡುತ್ತಿರುವ ಕೀಳು ಮಟ್ಟದ ಹೇಳಿಕೆಗಳಿಂದ ತುಂಬಾ ನೋವಾಗುತ್ತಿದೆ. ಆದ್ದರಿಂದ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಪತ್ರದಲ್ಲಿ ಬರೆದಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಪ್ರೀತಿಸಿ ಎಲ್ಲಾ ಮುಗಿದ್ಮೇಲೆ ಕೈಕೊಟ್ಟ ಪ್ರಿಯಕರ – ಮದುವೆ ದಿನವೇ ಆಸಿಡ್‌ ದಾಳಿಗೆ ಮುಂದಾದ ವಿಧವೆ ಪ್ರೇಯಸಿ!

    ಕೃತ್ಯದ ನಂತರ ಸಂದೀಪ್‌ ರಾಜೀನಾಮೆ ನೀಡಲ್ಲ ಅಂತ ಎಲ್ಲರೂ ಹೇಳ್ತಿದ್ದರು. ಆದ್ರೆ ನಾನು ಪ್ರಾಮಾಣಿಕನಾಗಿ ರಾಜೀನಾಮೆ ನೀಡಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೆ. ಆಸ್ಪತ್ರೆಯ ಅಭಿವೃದ್ಧಿ ಮತ್ತು ರೋಗಿಗಳ ಹಿತದೃಷ್ಟಿಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದ್ರೆ ಈ ಘಟನೆಯನ್ನು ಕೆಲವರು ಲಾಭಕ್ಕಾಗಿ ಬಳಸಿಕೊಂಡಿದ್ದು, ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಏನಿದು ಪ್ರಕರಣ?
    ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ತರಬೇತಿ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಕೊಲೆ ಮಾಡಿರುವುದು ವರದಿಯಲ್ಲಿ ಬಹಿರಂಗವಾಯಿತು. ಇದನ್ನೂ ಓದಿ: ಸರ್ಕಾರಿ ಕೆಲಸ ತಿರಸ್ಕರಿಸಿದ ಒಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಕಂಚು ಗೆದ್ದ ಸರಬ್ಜೋತ್‌ ಸಿಂಗ್‌

    ಆರೋಪಿಗೆ 14 ದಿನ ಪೊಲೀಸ್ ಕಸ್ಟಡಿ:
    ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಬಂಧಿತ ಆರೋಪಿಯನ್ನು 14 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಮತ್ತು 103ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

  • ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

    ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

    – ಬ್ಲೂಟೂತ್‌ ನೀಡಿತು ಕಾಮುಕನ ಸುಳಿವು!
    – ಆರೋಪಿಗೆ ಮರಣ ದಂಡನೆ ವಿಧಿಸಲು ದೀದಿ ಆಗ್ರಹ

    ಕೋಲ್ಕತ್ತಾ: ಸ್ನಾತಕೋತ್ತರ ತರಬೇತಿ ವೈದ್ಯೆಯ (Trainee Doctor) ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಬಂಧಿತ ಆರೋಪಿ ಸಂಜಯ್‌ ರಾಯ್‌ನನ್ನು 14 ದಿನಗಳವರೆಗೆ ಪೊಲೀಸ್ (Kolkata Police) ಕಸ್ಟಡಿಗೆ ಒಪ್ಪಿಸಿದೆ. ತನಿಖೆಯಲ್ಲಿ ಸ್ಫೋಟಕ ರಹಸ್ಯಗಳು ಬಯಲಾಗಿವೆ.

    ಪೊಲೀಸ್‌ ಕಸ್ಟಡಿಗೆ ಪಡೆದು ಆರೋಪಿ ವಿಚಾರಣೆ ನಡೆಸುತ್ತಿದ್ದ ವೇಳೆ ಆತನ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇದು ಮೋದಿ ಭಾರತ, ಬಾಂಗ್ಲಾದೇಶದಂತಹ ಪರಿಸ್ಥಿತಿ ಉಂಟಾಗಲ್ಲ; ಕಾಂಗ್ರೆಸ್‌ಗೆ ಶೇಖಾವತ್ ತಿರುಗೇಟು

    ಸಿಸಿಟಿವಿಯಲ್ಲಿ ದೃಶ್ಯ ಸೆರೆ:
    ಮೂಲಗಳ ಪ್ರಕಾರ, ಆರೋಪಿ ಸಂಜಯ್‌ ರಾಜ್‌ ಖಾಸಗಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದ. ಇದರಿಂದ ಅನೇಕರು ಅವರನ್ನು ಫ್ರೆಂಡ್ಸ್‌ ಆಫ್‌ ಪೊಲೀಸ್‌ ಎಂದೂ ಜನ ಕರೆಯುತ್ತಿದ್ದರು. ಬಂಗಾಳ ಪೊಲೀಸರ ಸಹಕಾರಕ್ಕಾಗಿ ಪ್ರಬಲ ಪೊಲೀಸ್ ಕಲ್ಯಾಣ ಮಂಡಳಿಯ ಭಾಗವಾಗಿ ರಚಿಸಿದ್ದ ತಂಡದಲ್ಲಿ ರಾಯ್‌ ಇದ್ದ. ಇದರಿಂದ ಆಸ್ಪತ್ರೆಗೆ ಪ್ರವೇಶಿಸಲು ಸುಲಭವಾಗಿ ಪ್ರವೇಶ ಸಿಕ್ಕಿತ್ತು. ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ರಾಯ್‌ ಆಸ್ಪತ್ರೆ ಒಳಗೆ ಹೋಗಿರುವುದು ಸಿಸಿಟಿವಿ (CCTV) ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಈ‌ ದೃಶ್ಯಾವಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಬ್ಲೂಟೂತ್‌ ನೀಡಿದ ಸುಳಿವು:
    ಕಾಮುಕ ಸಂಜಯ್‌ ರಾಯ್‌ ವಿಚಾರಣೆ ವೇಳೆ, ಎಲ್ಲ ಶಂಕಿತರ ಮೊಬೈಲ್‌ಗಳನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ನಂತರ ಪರಿಶೀಲನೆ ವೇಳೆ ಸಿಕ್ಕ ಬ್ಲೂಟೂತ್‌, ಇಯರ್‌ ಫೋನ್‌ ಅನ್ನು ಎಲ್ಲ ಶಂಕಿತರ ಮೊಬೈಲ್ ಫೋನ್‌ಗಳೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸಿದರು. ಈ ವೇಳೆ ಬ್ಲೂಟೂತ್‌ ಮತ್ತು ಇಯರ್‌ ಫೋನ್‌ ಆರೋಪಿ ಸಂಜಯ್ ರಾಯ್‌ನ ಮೊಬೈಲ್‌ ಫೋನ್‌ಗೆ ಸ್ವಯಂಚಾಲಿತವಾಗಿ ಕನೆಕ್ಟ್ ಆಗಿದೆ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ ಪೊಲೀಸರು ಆತನನ್ನ ಅಲ್ಲೇ ವಶಕ್ಕೆ ಪಡೆಸಿದ್ದಾರೆ. ಪೊಲೀಸ್ ತಂಡವು ವಿಚಾರಣೆ ನಡೆಸಿದಾಗ, ಸಂಜಯ್ ಆರಂಭದಲ್ಲಿ ವಿಭಿನ್ನ ಹೇಳಿಕೆಗಳನ್ನು ನೀಡಿದ್ದರೂ, ನಂತರ ತಗಲಾಕ್ಕೊಂಡಿದ್ದಾನೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ಮರಣ ದಂಡನೆಗೆ ದೀದಿ ಆಗ್ರಹ:
    ಅತ್ಯಾಚಾರ ಆರೋಪಿಗೆ ಮರಣದಂಡನೆ ವಿಧಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನ್ಯಾಯಾಲಯಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ ಹಬ್ಬಕ್ಕಿಂದು ಅದ್ಧೂರಿ ತೆರೆ – ಭಾರತದ ಧ್ವಜಧಾರಿಯಾಗಲಿದ್ದಾರೆ ಮನು ಭಾಕರ್‌

    ಏನಿದು ಕೇಸ್?‌
    ಕಳೆದ ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿರುವುದು ಗೊತ್ತಾಗಿತ್ತು. ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹವು ರಕ್ತದ ಕಲೆಗಳ ಸಹಿತ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿತ್ತು. ಜೊತೆಗೆ ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತ ಹರಿಯುತ್ತಿತ್ತು. ಘಟನೆ ಬೆಳಕಿಗೆ ಬಂದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ವರದಿಯಲ್ಲಿ ಬಹಿರಂಗವಾಯಿತು.

    ಆರೋಪಿ 14 ದಿನ ಪೊಲೀಸ್‌ ಕಸ್ಟಡಿಗೆ:
    ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಬಂಧಿತ ಆರೋಪಿಯನ್ನು 14 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ) ಮತ್ತು 103ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸೀಲ್ಲಾ ನ್ಯಾಯಾಲಯದ ಎದುರು ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ 14 ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡುವಂತೆ ಪ್ರಾಸಿಕ್ಯೂಷನ್‌ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿದರು. ಇದನ್ನೂ ಓದಿ: ಕೇಂದ್ರ ಸರ್ಕಾರವು ಕೇರಳ ಜೊತೆಗಿದೆ: ವಯನಾಡು ಭೂಕುಸಿತ ಸಂತ್ರಸ್ತರಿಗೆ ಮೋದಿ ಅಭಯ

    ವ್ಯಾಪಕ ಪ್ರತಿಭಟನೆ:
    ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು, ರಾಷ್ಟ್ರೀಯ ವೈದ್ಯಕೀಯ ಕಾಲೇಜು ಮತ್ತು ಕೋಲ್ಕತ್ತಾದ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿದ್ದಾರೆ.

  • ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಯಕೃತ್‌ ದಾನ – ಯಶಸ್ವಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ

    ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಯಕೃತ್‌ ದಾನ – ಯಶಸ್ವಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ

    ಬೆಂಗಳೂರು: ಯಕೃತ್‌ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ತನ್ನ ತಾಯಿಗೆ ಸ್ವತಃ ಮಗನೇ ಯಕೃತ್‌ ಭಾಗವನ್ನು ದಾನ ಮಾಡುವ ಮೂಲಕ ಮಹಿಳೆಗೆ ಯಶಸ್ವಿಯಾಗಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕರಾದ ಡಾ.ಕಿಶೋರ್ ಜಿ.ಎಸ್‌.ಬಿ. ಮತ್ತು ಡಾ.ಪಿಯೂಷ್ ಸಿನ್ಹಾ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಬಿ.ಎಸ್ ರವೀಂದ್ರ ಅವರ ತಂಡ ಯಶಸ್ವಿಯಾಗಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದೆ. ಇದನ್ನೂ ಓದಿ: ಮಳೆಗೆ ಮುಳುಗಿದ ಕರುನಾಡು – ಹಾವೇರಿ, ಕೊಡಗು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

    ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಸರ್ಜನ್‌ ಡಾ. ಕಿಶೋರ್ ಜಿಎಸ್‌ಬಿ, ಮತ್ತು ಡಾ. ಪಿಯೂಷ್ ಸಿನ್ಹಾ, 2021 ರಲ್ಲಿ 52 ವರ್ಷದ ಲೀಲಾ ಎಂಬುವವರು ಕಾಮಾಲೆ ಕಾಯಿಲೆಗೆ ತುತ್ತಾದರು. ಇದರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಯಿತು. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ದೀರ್ಘಕಾಲದಿಂದ ಯಕೃತ್‌ನ ಕಾಯಿಲೆ ಇರುವ ಕಾರಣ ಅವರ ಯಕೃತ್‌ನಲ್ಲಿ ದ್ರವದ ಶೇಖರಣೆಯಾಗಿ ಯಕೃತ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಅವರ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿತ್ತು. ಅವರನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದ ಬಳಿಕ ಪಿತ್ತರಸ ನಾಳದಲ್ಲಿ ಕಲ್ಲು ಇರುವುದು ಪತ್ತೆಯಾಯಿತು. ಗ್ಯಾಸ್ಟ್ರೋ ತಂಡವು ಈ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಆಕೆಗೆ ಯಕೃತ್‌ನ ಕ್ಯಾನ್ಸರ್‌ ಪ್ರಾರಂಭಿಕ ಹಂತದಲ್ಲಿರುವುದು ಸಹ ತಿಳಿದುಬಂತು. ಹೀಗಾಗಿ ಆಕೆಗೆ ಲಿವರ್ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕೂಡಲೇ ಯಕೃತ್‌ ಕಸಿ ಅಗತ್ಯತೆ ಬಿತ್ತು. ಸ್ವತಃ 31 ವರ್ಷದ ಮಗನೇ ತನ್ನ ಯಕೃತ್‌ನ ಭಾಗವನ್ನು ದಾನ ಮಾಡಲು ಮುಂದಾದರು. ಸಕಾಲದಲ್ಲಿ ಯಕೃತ್‌ ಸಿಕ್ಕ ಪರಿಣಾಮ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ವಿವರಿಸಿದರು.

    ದಾನಿಯ ಯಕೃತ್ತಿನ ಉಳಿದ ಭಾಗವು ತಕ್ಷಣವೇ ಪುನರುತ್ಪಾದಿಸಲು ಪ್ರಾರಂಭಿಸುತ್ತದೆ. 6 ರಿಂದ 8 ವಾರಗಳಲ್ಲಿ ಅದರ ಸಾಮಾನ್ಯ ಗಾತ್ರಕ್ಕೆ ಯಕೃತ್‌ ಬೆಳೆಯುತ್ತದೆ. ಹೆಚ್ಚಿನ ಯಕೃತ್‌ ದಾನಿಗಳು ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ನಿರ್ದೇಶಕ ಡಾ.ಬಿ.ಎಸ್ ರವೀಂದ್ರ ಮಾತನಾಡಿ, ಯಕೃತ್ತಿನ ಕ್ಯಾನ್ಸರ್ ಅನ್ನು CT ಸ್ಕ್ಯಾನ್ ಸ್ಕ್ರೀನಿಂಗ್‌ನಲ್ಲಿ ಪತ್ತೆ ಹಚ್ಚಲಾಯಿತು. ಕೊಲಾಂಜೈಟಿಸ್‌ನೊಂದಿಗೆ ಸಿರೋಟಿಕ್ ರೋಗಿಗೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿ, ಜೊತೆಗೆ ಸಾಮಾನ್ಯ ಪಿತ್ತರಸ ನಾಳದಿಂದ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದು ಸ್ಟೆಂಟ್‌ಗಳನ್ನು ಇರಿಸಲು ಸಾಧ್ಯವಾಯಿತು ಎಂದು ವಿವರಿಸಿದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ

  • ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸ್ಫೋಟಕ ತಿರುವು- ವೈದ್ಯರಿಬ್ಬರು ಭಾಗಿಯಾಗಿರೋ ಶಂಕೆ

    ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸ್ಫೋಟಕ ತಿರುವು- ವೈದ್ಯರಿಬ್ಬರು ಭಾಗಿಯಾಗಿರೋ ಶಂಕೆ

    ಬೆಂಗಳೂರು: ಸಿಲಿಕಾನ್ ಸಿಟಿಯ ವೈಟ್‍ಫೀಲ್ಡ್‍ನಲ್ಲಿ ನಡೆದಿದ್ದ ರಾಮೇಶ್ವರಂ ಬಾಂಬ್ ಸ್ಫೋಟಕ್ಕೆ ಇದೀಗ ಸ್ಫೋಟಕ ತಿರುವೊಂದು ಸಿಕ್ಕಿದೆ. ಪ್ರಕರಣದಲ್ಲಿ ಇಬ್ಬರು ಟ್ರೈನಿ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಕೊಯಮತ್ತೂರು ಖಾಸಗಿ ಆಸ್ಪತ್ರೆಯ ಮೇಲೆ ಇಂದು ಎನ್‍ಐಎ ದಾಳಿ ನಡೆಸಿದೆ. ಮತೀನ್ ಮತ್ತು ಶಾಜೀಬ್ ಗೆ ಹಣ ಸಹಾಯ ಮಾಡಿದ ಆರೋಪದ ಮೇಲೆ ದಾಳಿ ನಡೆದಿದೆ. ಕರ್ನಾಟಕ ಮೂಲದ ಇಬ್ಬರು ಡಾಕ್ಟರ್ ಗಳು ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ಎದ್ದಿದೆ.

    ಇತ್ತ ಬಾಂಬ್ ಬ್ಲಾಸ್ಟ್ ಪ್ರಕರಣ ಇಂದು ಬೆಂಗಳೂರಿನ ಕೆ ಎಸ್ ಲೇಔಟ್ ಮತ್ತು ಬನಶಂಕರಿ ಸೇರಿ 5ಕ್ಕೂ ಹೆಚ್ಚು ಕಡೆ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.  ಇದನ್ನೂ ಓದಿ: ತಣ್ಣಗಾಗದ ಧ್ವಜ ದಂಗಲ್- ಹೊಸ ಧ್ವಜ ಹಾರಿಸಿದ್ರೂ ಕೆರಗೋಡು ಗ್ರಾಮಸ್ಥರ ಅಸಮಾಧಾನ

    ಮಾರ್ಚ್ 1 ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್‍ಫೀಲ್ಡ್‍ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಘಟನೆ ನಡೆದ ಕೆಲ ದಿನಗಳ ಬಳಿಕ ಕೃತ್ಯ ಎಸಗಿದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಅನ್ನು ಎನ್‍ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ್ದು ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿತ್ತು.

  • ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

    ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

    – 9ನೇ ಕ್ರಮಾಂಕದಲ್ಲಿ ಮಹಿ ಬ್ಯಾಟ್‌ ಬೀಸಿದ್ದೇಕೆ?
    – ಐಪಿಎಲ್‌ ವೃತ್ತಿ ಬದುಕಿಗೆ ಇದು ಕೊನೇ ಆವೃತ್ತಿಯಾಗುತ್ತಾ?

    ಚೆನ್ನೈ: ಸಿಎಸ್‌ಕೆ ತಂಡದ ಮಿಡಿತ ಲೆಜೆಂಡ್‌ ಎಂ.ಎಸ್‌ ಧೋನಿ (MS Dhoni) ಅವರ ನಿವೃತ್ತಿಯ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದಿದ್ದ ಮಹಿ ಮೊದಲ ಎಸೆತದಲ್ಲೇ ಗೋಲ್ಡನ್‌ ಡಕ್‌ ಆದರು. ಮಹಿ ಅವರ ಔಟ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪರ – ವಿರೋಧ ಚರ್ಚೆ ನಡೆಯುತ್ತಿದ್ದಾಗಲೇ ಮತ್ತೊಂದು ಸೀಕ್ರೆಟ್‌ ಬಹಿರಂಗಗೊಂಡಿದೆ.



    2024ರ ಐಪಿಎಲ್‌ (IPL 2024) ಆರಂಭದಿಂದಲೂ ಮಹಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಏಕೆ ಉಳಿಯುತ್ತಿಲ್ಲ? ಕೊನೇ 2-3 ಓವರ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವುದು ಏಕೆ? ಅನ್ನೋ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದಕ್ಕೆ ಉತ್ತರ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?
    42 ವರ್ಷದ ಲೆಜೆಂಡರಿ ಧೋನಿ ಅವರಿಗೆ ಇದು ಅಂತಿಮ ಆವೃತ್ತಿ ಎಂದೇ ಭಾವಿಸಲಾಗಿದೆ. ಏಕೆಂದರೆ 2023 ಆವೃತ್ತಿಯಲ್ಲಿ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿದ್ದ ಮಹಿ, ಆ ನೋವಿನಲ್ಲೂ ಆಡಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ 5ನೇ ಬಾರಿಗೆ ಟ್ರೋಫಿ ಗೆದ್ದ ಬಳಿಕವೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೊಣಕಾಲು ಗಾಯ ವಾಸಿಯಾದ್ದರಿಂದ ತಮ್ಮ ಅಭಿಮಾನಿಗಳಿಗಾಗಿ 2024ರಲ್ಲೂ ಆಡುವ ಮಹಿ ಮತ್ತೊಂದು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಹೌದು. ಮಹಿ ಕೆಲ ದಿನಗಳಿಂದ ಸ್ನಾಯು ಸಮಸ್ಯೆಯಿಂದ (Muscle Tear) ಬಳಲುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಾಗುತ್ತಿಲ್ಲ, ರನ್‌ ಓಡಲಾಗುತ್ತಿಲ್ಲ. ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗಲೂ ಸ್ಮ್ಯಾಶ್‌ ಮಾಡುವತ್ತ ಮಾತ್ರ ಗಮನಹರಿಸುತ್ತಿದ್ದಾರೆ. 20 ಓವರ್‌ ಮೈದಾನದಲ್ಲಿ ನಿಂತು ಫೀಲ್ಡಿಂಗ್‌ ಮಾಡುವ ಮಹಿ, ಬ್ಯಾಟಿಂಗ್‌ ವೇಳೆ ವಿರಾಮ ಪಡೆಯುತ್ತಿರುವುದು ಇದೇ ಕಾರಣಕ್ಕೆ ಎಂದು ಸಿಎಸ್‌ಕೆ ಫ್ರಾಂಚೈಸಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ತಂಡದಿಂದ ರಾಹುಲ್‌ ಬಿಟ್ಟಿದ್ದೇಕೆ? ಕೊಹ್ಲಿ ಸ್ಟ್ರೈಕ್‌ರೇಟ್‌ ಬಗ್ಗೆ ರೋಹಿತ್‌ ಹೇಳಿದ್ದೇನು?

    ಅಭಿಮಾನಿಗಳು ಸತ್ಯ ತಿಳಿಯಬೇಕು:
    ಇತ್ತೀಚೆಗೆ ಪಂಜಾಬ್‌ ವಿರುದ್ಧ ನಡೆದ ಪಂದ್ಯದಲ್ಲೂ ಚೆನ್ನೈ ಸೂಪರ್‌ ಕಿಂಗ್ಸ್ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತದಲ್ಲಿ ಎಂ.ಎಸ್‌ ಧೋನಿ, ಅರ್ಷದೀಪ್‌ ಸಿಂಗ್‌ಗೆ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ 2 ಎಸೆತಗಳನ್ನು ಡಾಟ್‌ ಮಾಡಿದ್ದರು. 3ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಧೋನಿ, ಬೌಂಡರಿ ಅಥವಾ ಸಿಕ್ಸರ್‌ ಬಾರಿಸುವಲ್ಲಿ ವಿಫಲವಾಗಿದ್ದರು. ಆದ್ರೆ ಈ ವೇಳೆ ಸುಲಭವಾಗಿ ಒಂದು ರನ್‌ ಕದಿಯಬಹುದಿತ್ತು. ಆದರೆ, ಧೋನಿ ನಿರಾಕರಿಸಿದರು. ನಾನ್‌ಸ್ಟ್ರೈಕ್‌ ತುದಿಯಲ್ಲಿದ್ದ ಡೇರಿಲ್‌ ಮಿಚೆಲ್‌ ರನ್‌ ಪಡೆಯಲು ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಆದರೆ, ಧೋನಿ ನಿಂತಲ್ಲಿಯೇ ಡೇರಿಲ್‌ ಮಿಚೆಲ್‌ಗೆ ವಾಪಸ್‌ ಹೋಗುವಂತೆ ಹೇಳಿದರು. ಈಬಗ್ಗೆ ಅಭಿಮಾನಿಗಳಿಂದಲೂ ಟೀಕೆ ವ್ಯಕ್ತವಾಗಿತ್ತು. ಆದ್ರೆ ಇದೀಗ ಫ್ರಾಂಚೈಸಿ ಮೂಲಗಳೇ ಅಭಿಮಾನಿಗಳಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡಿವೆ.

    ಬೌಲರ್​​ಗೆ ಅವಕಾಶ ಕೊಡಿ ಎಂದಿದ್ದ ಭಜ್ಜಿ:
    ಇನ್ನೂ 9ನೇ ಕ್ರಮಾಂಕದಲ್ಲಿ ಬಂದು ಮಹಿ ಗೋಲ್ಡನ್‌ ಡಕ್‌ ಆದ ಮಹಿ ಬ್ಯಾಟಿಂಗ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹರ್ಭಜನ್ ಸಿಂಗ್, ಎಂ.ಎಸ್ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಯಸಿದರೆ, ಅವರು ಪ್ಲೇಯಿಂಗ್​ ಇಲೆವೆನ್​​ನಲ್ಲಿ ಆಡಲೇಬಾರದು. ಬದಲಿಗೆ ಒಬ್ಬ ವೇಗದ ಬೌಲರ್ ಅನ್ನು ಪ್ಲೇಯಿಂಗ್ ಹನ್ನೊಂದರಲ್ಲಿ ಸೇರಿಸುವುದು ಉತ್ತಮ. ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವ ಅವರೇ ಈ ರೀತಿ ಪಂಜಾಬ್ ಕಿಂಗ್ಸ್ ವಿರುದ್ಧ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡದ ಹಿನ್ನಡೆಗೆ ಕಾರಣರಾಗಿದ್ದಾರೆ. ಧೋನಿ ಈ ತಪ್ಪು ಮಾಡಿದ್ದೇಕೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

  • ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

    ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ (Raichur) ದಿನೇ ದಿನೇ ತಾಪಮಾನ ಹೆಚ್ಚಳವಾಗುತ್ತಲೇ ಇದೆ. ತಾಪಮಾನ ಹೆಚ್ಚಳದಿಂದ ಜನ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ (RIMS Hospital) ಹೀಟ್ ಸ್ಟ್ರೋಕ್ ಮ್ಯಾನೇಜ್ಮೆಂಟ್‌ ವಾರ್ಡ್‌‌ ಅನ್ನು ತೆರೆಯಲಾಗಿದೆ. ಬಿಸಿಲಿನ ತಾಪದಿಂದ ಉಂಟಾದ ಕಾಯಿಲೆಗಳ ಚಿಕಿತ್ಸೆಗೆ ರಿಮ್ಸ್ ವೈದ್ಯರು ವಿಶೇಷ ವಾರ್ಡ್ ಆರಂಭಿಸಿದ್ದಾರೆ.

    ಇಡೀ ರಾಜ್ಯದಲ್ಲಿ ಈ ಬಾರಿಯ ಬೇಸಿಗೆ (Summer) ಜನರನ್ನ ನಿತ್ರಾಣ ಮಾಡಿದೆ. ಅದರಲ್ಲೂ ಬಿಸಿಲನಾಡು ರಾಯಚೂರಿನಲ್ಲಿ ದಾಖಲೆಯ ತಾಪಮಾನ‌ ಜನರನ್ನ ಮನೆಯಿಂದ ಹೊರ ಬರದಂತೆ ಮಾಡಿದೆ. ಹೀಗಾಗಿ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಯಚೂರಿನ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಅತಿಯಾದ ಶಾಖ (Heat Wave) ಆರೋಗ್ಯ ಸಮಸ್ಯೆಗಳ ವಿಶೇಷ ವಾರ್ಡನ್ನ ತೆರೆಯಲಾಗಿದೆ. ಸದ್ಯ 8 ಹಾಸಿಗೆಗಳ ವಾರ್ಡನ್ನ ಅಗತ್ಯಕ್ಕೆ ತಕ್ಕಂತೆ 20 ಬೆಡ್‌ವರೆಗೆ ವಿಸ್ತರಿಸಲು ರಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ.

    ವಿಶೇಷ ವಾರ್ಡ್‌ನಲ್ಲಿ ಅಗತ್ಯ ಫ್ಲೂಯಿಡ್ಸ್, ಡಿಫಿಬ್ರಲೇಟರ್ ಸೇರಿದಂತೆ ಅವಶ್ಯಕ ಪರಿಕರಗಳು, ಔಷಧಿ ವ್ಯವಸ್ಥೆ ಮಾಡಲಾಗಿದೆ. ಮಳೆ ಅಭಾವದಿಂದ ಈ ಬಾರಿ ರಣ ಬೇಸಿಗೆ ಇರುವುದರಿಂದ ಮೊದಲ ಬಾರಿಗೆ ಹೀಟ್ ಸ್ಟ್ರೋಕ್ ಮ್ಯಾನೇಜಮೆಂಟ್ ವಾರ್ಡ್‌ನ್ನ ತೆರೆಯಲಾಗಿದೆ. ಬೇಸಿಗೆಯ ಬೇಗೆಯಿಂದ ದೇಹದಲ್ಲಿ ಲವಣಾಂಶಗಳು ಏರುಪೇರಾದರೆ ಕಿಡ್ನಿ, ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ವಿಶೇಷ ವಾರ್ಡ್ ತೆರೆಯಲಾಗಿದೆ.

    ಇನ್ನೂ ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ಈವರೆಗೆ ಯಾವುದೇ ರೋಗಿಗಳು ದಾಖಲಾಗದಿದ್ದರು, ಬಿಸಿಲಿನ ಅಬ್ಬರಕ್ಕೆ ಉರಿ ಮೂತ್ರ ತೊಂದರೆ, ಕಿಡ್ನಿ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು, ಡಿಹೈಡ್ರೇಷನ್, ಹೆಚ್ಚು ಸುಸ್ತಾಗುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಹಲವಾರು ಜನ ಬಳಲುತ್ತಿದ್ದು. ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ನಿರ್ಜಲೀಕರಣ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅನಾರೋಗ್ಯ ಪೀಡಿತರು ಎಡತಾಕುತ್ತಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡುವಂತೆ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಬಿಸಿಲಿನಲ್ಲಿ ಹೆಚ್ಚು ಓಡಾಡುವುದು ಅಥವಾ ಕೆಲಸ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.