Tag: doctor

  • ಕೊರೊನಾದಿಂದ ತಂದೆ ಸಾವನ್ನಪ್ಪಿದ್ರೂ ಕರ್ತವ್ಯಕ್ಕೆ ಹಾಜರಾದ ವೈದ್ಯ

    ಕೊರೊನಾದಿಂದ ತಂದೆ ಸಾವನ್ನಪ್ಪಿದ್ರೂ ಕರ್ತವ್ಯಕ್ಕೆ ಹಾಜರಾದ ವೈದ್ಯ

    ಪುಣೆ: ವೈದ್ಯರೊಬ್ಬರು ತಮ್ಮ ಕುಟುಂಬಸ್ಥರೇ ಸಂಕಷ್ಟದಲ್ಲಿರೂವಾಗಲೂ ಕೆಲಸ ಮಾಡುತ್ತಾ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯನಿಷ್ಠೆ ಮೆರೆದಿದ್ದಾರೆ.

    ಮಹಾರಾಷ್ಟ್ರದ ಪುಣೆಯಲ್ಲಿನ ಸಂಜೀವನ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುಕುಂದ್ ಅವರ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇವರ ತಾಯಿ ಮತ್ತು ಅಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಂತ ಮುಕುಂದ್ ಅವರು ತಮ್ಮ ಕೆಲಸಕ್ಕೆ ಗೈರಾಗಿಲ್ಲ. ತಮ್ಮವರು ಹಾಸಿಗೆ ಹಿಡಿದಿದ್ದರು ಬೇರೆ ರೋಗಿಗಳಿಗೆ ತೊಂದರೆಯಾಗಬಾರದು ಎಂದು ತಮ್ಮ ಕೆಲಸದಲ್ಲಿ ಮುಕುಂದ ತೊಡಗಿಕೊಂಡಿದ್ದಾರೆ.

    ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನಾವು ರೆಸ್ಟ್ ಮಾಡುತ್ತಾ ಕುಳಿತರೆ ರೋಗಿಗಳ ಸಂಕಷ್ಟ ನೋಡಲು ಆಗಲ್ಲ ಎಂದು ವೈದ್ಯ ಮುಕುಂದ್ ಅವರು ಹೇಳಿದ್ದಾರೆ. ವೈದ್ಯ ಮುಕುಂದ್ ಅವರ ಕರ್ತವ್ಯ ನಿಷ್ಠೆಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೀವೇ ನಿಜವಾದ ಹೀರೋ ನಿಮಗೊಂದು ಸೆಲ್ಯೂಟ್ ಎಂದು ಕಮೇಂಟ್ ಮಾಡಿ ಧನ್ಯವಾದ ತಿಳಿಸುತ್ತಿದ್ದಾರೆ.

  • ಕೊರೊನಾದಿಂದ ಜನರ ಸಾವು, ಆಕ್ರಂದನ- ಮನನೊಂದು ವೈದ್ಯ ಆತ್ಮಹತ್ಯೆಗೆ ಶರಣು

    ಕೊರೊನಾದಿಂದ ಜನರ ಸಾವು, ಆಕ್ರಂದನ- ಮನನೊಂದು ವೈದ್ಯ ಆತ್ಮಹತ್ಯೆಗೆ ಶರಣು

    – 2 ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ ಯುವ ವೈದ್ಯ
    – ಸಾವನ್ನು ಕಣ್ಣಾರೆ ನೊಡಲಾಗದೆ ನೊಂದು ಆತ್ಮಹತ್ಯೆ

    ನವದೆಹಲಿ: ನಿತ್ಯ ಕೊರೊನಾ ರೋಗಿಗಳಿಗೆ ತಮ್ಮ ಶಕ್ತಿಯನ್ನೂ ಮೀರಿ ಸಹಾಯ ಮಾಡುವ ಮೂಲಕ ಸೋಂಕಿತರ ಜೀವವನ್ನು ಉಳಿಸುತ್ತಿದ್ದರು. ಆದರೂ ಹಲವು ಜನ ಕೊರೊನಾಗೆ ಬಲಿಯಾಗಿದ್ದಾರೆ. ನಿತ್ಯ ನೂರಾರು ಜನ ಕೊರೊನಾಗೆ ಬಲಿಯಾಗುತ್ತಿರುವುದನ್ನು ಕಂಡು, ಬೇಸತ್ತು ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

    ಈ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಾಜಿ ಮುಖ್ಯಸ್ಥ ಡಾ.ರವಿ ವಾಂಖೇಡ್ಕರ್ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು, ಡಾ.ವಿವೇಕ್ ರೈ ಅದ್ಭುತ ವೈದ್ಯರಾಗಿದ್ದರು. ಉತ್ತರ ಪ್ರದೇಶದ ಗೋರಖ್‍ಪುರ ನಿವಾಸಿಯಾಗಿದ್ದರು. ಕೊರೊನಾ ಸಾಂಕ್ರಾಮಿಕ ರೋಗದ ಕಠಿಣ ಸಂದರ್ಭದಲ್ಲಿ ನೂರಾರು ಜನರ ಪ್ರಾಣ ಉಳಿಸಿದ್ದರು. ಕಳೆದ ಒಂದು ತಿಂಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಕೊರೊನಾದಿಂದಾಗಿ ಹೆಚ್ಚು ಜನ ಪ್ರಾಣ ಬಿಡುತ್ತಿರುವುದನ್ನು ಕಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಡಾ.ವಾಂಖೇಡ್ಕರ್ ತಿಳಿಸಿದ್ದಾರೆ.

    ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ನನ್ನ ಕಣ್ಣೆದುರೇ ಸಾಯುತ್ತಿರುವ ಜನರ ನೋವು ಹಾಗೂ ಭಾವನೆಗಳೊಂದಿಗೆ ಜೀವಿಸುವುದಕ್ಕಿಂತ ಸಾಯುವುದೇ ಮೇಲೆಂದು ನಿರ್ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ ಎರಡು ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ ಎಂದು ಡಾ.ವಾಂಖೆಡ್ಕರ್ ತಿಳಿಸಿದ್ದಾರೆ.

    ಕೋವಿಡ್ ಬಿಕ್ಕಟ್ಟು ನಿರ್ವಹಿಸುವಾಗ ಭಾವನಾತ್ಮಕ ಒತ್ತಡಗಳು ಎದುರಾಗುತ್ತವೆ. ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿಯೇ ಯುವ ವೈದ್ಯ ಸಾವನ್ನಪ್ಪಿದ್ದಾರೆ. ಇದು ಕೊಲೆಗಿಂತ ಕಡಿಮೆ ಏನಲ್ಲ. ಕೆಟ್ಟ ವಿಜ್ಞಾನ, ಕೆಟ್ಟ ರಾಜಕೀಯ ಹಾಗೂ ಕೆಟ್ಟ ಆಡಳಿತ ಎಂದು ಐಎಂಎ ಮಾಜಿ ಅಧ್ಯಕ್ಷರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ದೆಹಲಿಯ ಮಾಳ್ವಿಯಾ ನಗರ ಠಾಣೆಯ ಪೊಲೀಸರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೈದ್ಯರು ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್‍ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ದೆಹಲಿ ಸ್ಥಿತಿ ಇನ್ನೂ ಗಂಭೀರವಾಗಿದೆ. ಆಕ್ಸಿನ್, ಐಸಿಯು ಬೆಡ್ ಸಿಗದೆ ಹಲವರು ಪ್ರಾಣ ಬಿಡುತ್ತಿದ್ದಾರೆ. ಇದನ್ನು ಕಂಡು ವೈದ್ಯರೇ ದಂಗಾಗಿದ್ದಾರೆ.

  • ಆಕ್ಸಿಜನ್ ಸಿಗದೆ ವೈದ್ಯ ಸೇರಿ ಎಂಟು ಜನರ ಸಾವು

    ಆಕ್ಸಿಜನ್ ಸಿಗದೆ ವೈದ್ಯ ಸೇರಿ ಎಂಟು ಜನರ ಸಾವು

    ನವದೆಹಲಿ: ಇಲ್ಲಿನ ಬಾತ್ರಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ಓರ್ವ ವೈದ್ಯ ಸೇರಿ 8 ಜನ ಕೊರೊನಾ ರೋಗಿಗಳು ಮೃತಪಟ್ಟಿರುವ ಕುರಿತು ಡೆಲ್ಲಿ ಹೈಕೋರ್ಟ್ ಆಸ್ಪತ್ರೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದೆ.

    ಈ ಕುರಿತು ಹೈಕೋರ್ಟಿಗೆ ಸ್ಪಷ್ಟನೆ ನೀಡಿರುವ ಬಾತ್ರಾ ಆಸ್ಪತ್ರೆ, ನಮಗೆ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗಲಿಲ್ಲ. ನಮಗೆ ಮಧ್ಯಾಹ್ನ 12 ಗಂಟೆಗೆ ಆಕ್ಸಿಜನ್ ಬೇಕಾಗಿತ್ತು. ಆದರೆ ನಮಗೆ ಸಿಕ್ಕಿದ್ದು ಮಧ್ಯಾಹ್ನ 1.35 ಗಂಟೆಗೆ. ಹಾಗಾಗಿ ನಮ್ಮ ಆಸ್ಪತ್ರೆಯ ವೈದ್ಯರನ್ನು ಸೇರಿ 8 ಜನರನ್ನು ಕಳೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ.

    ನಾವು ಹಲವು ಗಂಟೆಗಳ ಕಾಲ ಆಕ್ಸಿಜನ್ ಇಲ್ಲದೆ ಪರದಾಡುವಂತಾಯಿತು. ಹಾಗಾಗಿ ನಮ್ಮ ಆಸ್ಪತ್ರೆಯ ಒಬ್ಬ ವೈದ್ಯರು ಸೇರಿ 8 ಜನರನ್ನು ಕಳೆದುಕೊಂಡಿದ್ದೇವೆ ಎಂದು ಬಾತ್ರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಸ್.ಸಿ.ಎಲ್ ಗುಪ್ತಾ ತಿಳಿಸಿದ್ದಾರೆ.

    ಆಕ್ಸಿಜನ್ ಮುಗಿಯಲು ಕೇವಲ 10 ನಿಮಿಷಗಳು ಬಾಕಿ ಇರುವಂತೆ ಬಾತ್ರಾ ಆಸ್ಪತ್ರೆಯಲ್ಲಿ 326 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

    ಈ ಕುರಿತು ದೆಹಲಿ ಸರ್ಕಾರದ ಸಚಿವರಾದ ರಾಘವ್ ಚಡ್ಡಾ ಮಾತನಾಡಿ, ನಮ್ಮ ಆಕ್ಸಿಜನ ಪೂರೈಕೆಯ ಟ್ಯಾಂಕರ್ ಬಾತ್ರಾ ಆಸ್ಪತ್ರೆಗೆ 5 ನಿಮಿಷದಲ್ಲಿ ತಲುಪಿದೆ. ಅದರೆ ಅವರಿಗೆ ಪ್ರತಿದಿನ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದವರು ಮಾಡಿದ ತಪ್ಪಿನಿಂದಾಗಿ ಈ ರೀತಿಯಾಗಿದೆ. ನಾವು ಆಕ್ಸಿಜನ್ ತಲುಪಿಸುತ್ತಿದ್ದಂತೆ ಆಸ್ಪತ್ರೆಯಲ್ಲಿ 8 ಜನ ರೋಗಿಗಳು ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಎಲ್ಲಾ ಘಟನೆಗಳ ಬಳಿಕ ಏಪ್ರಿಲ್ 1ರ ಬಳಿಕ ದೆಹಲಿಯ ಆಸ್ಪತ್ರೆಗಳಲ್ಲಿ ಮತ್ತು ನರ್ಸಿಂಗ್ ಹೋಂಗಳಲ್ಲಿ ದಾಖಲಾಗಿರುವ ರೋಗಿಗಳ ವಿವರ ಕೊಡುವಂತೆ ವೈದ್ಯಕೀಯ ಅಧೀಕ್ಷಕರು, ಆಸ್ಪತ್ರೆ ಮಾಲಿಕರು ಮತ್ತು ನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.

    ಈ ಪ್ರಕಾರ ಆಸ್ಪತ್ರೆಗಳು 4 ದಿನಗಳ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಪೂರ್ಣ ಮಾಹಿತಿಯನ್ನು ಕೋರ್ಟ್‍ಗೆ ಸಲ್ಲಿಸಬೇಕಾಗಿದೆ. ಈ ಕೊರೊನಾ ಎಂಬ ಕಷ್ಟಕಾಲದಲ್ಲಿ ಆಸ್ಪತ್ರೆಗಳು ಎದುರಿಸಿದ ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಗಳು ಪಾಠ ಕಲಿತು ಮುಂದೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಗುರಿ ಇಟ್ಟುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಅಭಿಪ್ರಯಾಪಟ್ಟಿದೆ.

  • ಮಂಗಳೂರಿನ ಯುವ ವೈದ್ಯೆ ಕೊರೊನಾ ಮಹಾಮಾರಿಗೆ ಬಲಿ

    ಮಂಗಳೂರಿನ ಯುವ ವೈದ್ಯೆ ಕೊರೊನಾ ಮಹಾಮಾರಿಗೆ ಬಲಿ

    ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆಯೋರ್ವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಮಂಗಳೂರಿನ ಹೊರವಲಯದ ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಕೇರಳದ ತಲಶೇರಿ ಮೂಲದ ಡಾ.ಮಾಹಾಬಷೀರಾ ಕೊರೊನಾಗೆ ಬಲಿಯಾದ ದುರ್ದೈವಿ.

    ಕಳೆದ 8 ತಿಂಗಳ ಹಿಂದೆ ಮಂಗಳೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಶವಾಫೆರ್ ಮಹಮ್ಮದ್ ಅವರನ್ನು ಮದುವೆಯಾಗಿದ್ದ ಡಾ. ಮಹಾಬಷೀರಾ 6 ತಿಂಗಳ ಗರ್ಭಿಣಿಯಾಗಿದ್ದರು.

    ಕಳೆದ ಕೆಲ ದಿನಗಳ ಹಿಂದೆ ದಂಪತಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಹಾಬಷೀರಾಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವನ್ನಪ್ಪಿದ್ದಾರೆ.

  • ಅಸಹಾಯಕರಾಗಿದ್ದೇವೆ, ಮುನ್ನೆಚ್ಚರಿಕೆಯಿಂದಿರಿ: ವೈದ್ಯೆಯ ಕಣ್ಣೀರು

    ಅಸಹಾಯಕರಾಗಿದ್ದೇವೆ, ಮುನ್ನೆಚ್ಚರಿಕೆಯಿಂದಿರಿ: ವೈದ್ಯೆಯ ಕಣ್ಣೀರು

    ಮುಂಬೈ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾವನ್ನು ನಿಯಂತ್ರಣಕ್ಕೆ ತರಲು ವೈದ್ಯರು ತಮ್ಮ ಜೀವನವನ್ನೇ ಒತ್ತೆ ಇಟ್ಟು ಜನರನ್ನು ಕಾಪಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಉಲ್ಬಣವಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮುಂಬೈ ವೈದ್ಯೆಯೊಬ್ಬರು ಕಣ್ಣೀರು ಹಾಕಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಹಾಕಿರುವ ಸಾಂಕ್ರಾಮಿಕ ರೋಗತಜ್ಞೆ ಡಾಕ್ಟರ್ ತೃಪ್ತಿ ಗಿಲಾಡಿ ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ. ದಯಮಾಡಿ ಮಾಸ್ಕ್ ಧರಿಸಿ. ನಾವು ಅಸಹಾಯಕರಾಗಿದ್ದೇವೆ. ಅಲ್ಲದೆ ನನ್ನಂತಹ ಅನೇಕ ವೈದ್ಯರು ಅಸಹಾಯಕರಾಗಿದ್ದಾರೆ. ಅರ್ಥ ಮಾಡಿಕೊಂಡು ಕೋವಿಡ್ ನಿಯಂತ್ರಣ ಮಾಡುವಲ್ಲಿ ಸಹಕರಿಸಿ. ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಕೊರತೆ ಉಂಟಾಗುತ್ತಿದೆ. ನಾವು ಸೋಂಕಿನಿಂದ ಗಂಭೀರವಾಗಿ ಬಳಲುತ್ತಿರುವ ರೋಗಿಗಳಿಗೆ ಬೆಡ್ ವ್ಯವಸ್ಥೆ ಮಾಡಿದ್ದೇವೆ. ಯಾಕೆಂದ್ರ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ. ನಾವು ಈ ವಿಚಾರವಾಗಿ ಸಂತೋಷವನ್ನು ಪಡುತ್ತಿಲ್ಲ ಎಂದಿದ್ದಾರೆ.

     ಸೋಂಕಿನಿಂದ ಗುಣಮುಖರಾದವರು ನಾವು ಹೀರೋಗಳು ಎಂದು ಭಾವಿಸಬೇಡಿ ಎಚ್ಚರಿಕೆಯಿಂದ ಇರಿ. ಕೊರೊನ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಗಂಭೀರವಾಗಿ ಸೋಂಕಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನೀವು ಹೊರಗಡೆ ಹೋದರೆ ಮಾಸ್ಕ್ ಧರಿಸಿಕೊಂಡು ಹೋಗಿ. ಕೊರೊನಾ ಸೋಂಕು ತಗುಲಿರುವ ಎಲ್ಲರೂ ಆಸ್ಪತ್ರೆಗೆ ಬಂದು ದಾಖಲಾಗಬೇಡಿ. ಇಲ್ಲಿ ಬೆಡ್‍ಗಳ ಕೊರತೆ ಇದೆ. ಮೊದಲು ಮನೆಯಲ್ಲಿಯೇ ಕ್ವಾರಂಟೈನ್ ಆಗಿರಿ. ನಿಮ್ಮ ವೈದ್ಯರಿಂದ ಸಲಹೆಗಳನ್ನು ಪಡೆಯಿರಿ. ಆರೋಗ್ಯದಲ್ಲಿ ಕೊಂಚ ಬದಲಾವಣೆಯಾದರೂ ಆಸ್ಪತ್ರೆಗೆ ದಾಖಲಾಗಬೇಡಿ. ಸೋಂಕು ತಗುಲಿರುವ ಎಲ್ಲರೂ ಆಸ್ಪತ್ರೆಗೆ ದಾಖಲಾದರೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದಿಲ್ಲ.

    ಲಸಿಕೆಯಿಂದ ಗುಣಮುಖರಾಗುವುದಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳಿಕೆ ಕಿವಿಗೊಡಬೇಡಿ. ಯಾರೆಲ್ಲ ಲಸಿಕೆ ತೆಗೆದುಕೊಂಡಿಲ್ಲ ಅವರು ಮೊದಲು ಲಸಿಕೆ ತೆಗೆದುಕೊಳ್ಳಿ ಎಂದು ಡಾಕ್ಟರ್ ತೃಪ್ತಿ ಮನವಿ ಮಾಡುತ್ತಾ ಕಣ್ಣೀರು ಹಾಕಿದ್ದಾರೆ.

  • ಪ್ರಾಣಬಿಡುವ ಮೊದಲು ಫೇಸ್‍ಬುಕ್‍ನಲ್ಲಿ ಕೊನೆಯ ಮಾತು ಹಂಚಿಕೊಂಡ ವೈದ್ಯೆ

    ಪ್ರಾಣಬಿಡುವ ಮೊದಲು ಫೇಸ್‍ಬುಕ್‍ನಲ್ಲಿ ಕೊನೆಯ ಮಾತು ಹಂಚಿಕೊಂಡ ವೈದ್ಯೆ

    ಮುಂಬೈ: ಫೇಸ್‍ಬುಕ್‍ಗೆ ವಿದಾಯ ಹೇಳಿದ ಮರುದಿನವೇ ಮುಂಬೈ ವೈದ್ಯರು ಕೋವಿಡ್‍ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಡಾ.ಮನಿಷಾ ಜಾಧವ್(51) ಮೃತ ವೈದ್ಯೆ. ಇವರು ಸೆವ್ರಿ ಟಿಬಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಕೀಯ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೋವಿಡ್‍ಗೆ ಬಲಿಯಾಗುವ ಮೊದಲು ಅವರ ಕೊನೆಯ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಇದು ನನ್ನ ಕೊನೆಯ ಗುಡ್ ಮಾನಿರ್ಂಗ್ ಆಗಿದೆ. ಈ ಖಾತೆಯಿಂದ ನಾನು ನಿಮ್ಮನ್ನು ಇಲ್ಲಿ ಭೇಟಿಯಾಗದೇ ಇರಬಹುದು ಎಂದು ಡಾ.ಮನಿಷಾ ಜಾಧವ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಒಂದು ದಿನದ ನಂತರ ಸಾವನ್ನಪಿದ್ದಾರೆ. ಡಾ. ಮನೀಷಾ ಜಾಧವ್ ಅವರು ಕ್ಲಿನಿಕಲ್ ಮತ್ತು ಆಡಳಿತಾತ್ಮಕ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವಲ್ಲಿ ಹೆಸರುವಾಸಿಯಾಗಿದ್ದರು.

    ಮಹಾರಾಷ್ಟ್ರದಲ್ಲಿ 18,000 ವೈದ್ಯರು ಕೋವಿಡ್ ರೋಗಕ್ಕೆ ತುತ್ತಾಗಿದ್ದಾರೆ ಮತ್ತು 168 ಮಂದಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

  • ವೈದ್ಯರ ಎಡವಟ್ಟು – ಸಾವು, ಬದುಕಿನ ಮಧ್ಯೆ ಹೋರಾಡುತ್ತಿದೆ 2 ತಿಂಗಳ ಕಂದಮ್ಮ

    ವೈದ್ಯರ ಎಡವಟ್ಟು – ಸಾವು, ಬದುಕಿನ ಮಧ್ಯೆ ಹೋರಾಡುತ್ತಿದೆ 2 ತಿಂಗಳ ಕಂದಮ್ಮ

    ಯಾದಗಿರಿ: ವೈದ್ಯರು ದೇವರ ಸಮಾನ ಎಂದು ಕರೆಯುತ್ತಾರೆ. ಆದರೆ ಯಾದಗಿರಿಯಲ್ಲಿ ಮಾತ್ರ ವೈದ್ಯರು ಮಾಡಿರುವ ಎಡವಟ್ಟಿನಿಂದ 2 ತಿಂಗಳ ಹಸುಗೂಸು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿದೆ. ನಗರದ ವಾತ್ಸಲ್ಯ ಮಕ್ಕಳ ಆಸ್ಪತ್ರೆಯ ವೈದ್ಯರು ಮಾಡಿದ ಕರ್ತವ್ಯ ಲೋಪದಿಂದ ನೆಗಡಿ ಕೆಮ್ಮುನಿಂದ ಬಳಲುತ್ತಿದ್ದ, ಎರಡು ವರ್ಷದ ಮಗು ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿದೆ.

    ಸುರಪುರದ ನಿವಾಸಿ ಮತ್ತು ಸುರಪುರ ನಗರಸಭೆ ಯುಆರ್ ಡ್ಲೂ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಝರಿನಾ ಬೇಗಂ ಎಂಬವರು ತಮ್ಮ ಎರಡು ತಿಂಗಳ ಇಮಜಾನ್‍ಗೆ, ನೆಗಡಿ ಕೆಮ್ಮು ಹಿನ್ನೆಲೆ ಯಾದಗಿರಿ ವಾತ್ಸಲ್ಯ ಮಕ್ಕಳ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.

    ಆಸ್ಪತ್ರೆ ಸಿಬ್ಬಂದಿ ಪಕ್ಕದ ಮಗುವಿಗೆ ಕೊಡುವ ಡೋಸ್ ಇಂಜೆಕ್ಷನ್‍ನ್ನು ಝರಿನಾ ಬೇಗಂ ಮಗುವಿಗೆ ನೀಡಿದ್ದಾರೆ. ಈ ಪರಿಣಾಮ ಮಗು ಗಾಢ ನಿದ್ದೆ ಜಾರಿ ಬಿಟ್ಟಿದೆ. ಕಳೆದ ಏಳೆಂಟು ಗಂಟೆಯಿಂದ ಮಗು ಕಣ್ಣು ಬಿಡುತ್ತಿಲ್ಲ. ಇದರಿಂದಾಗಿ ಗಾಬರಿಗೊಂಡ ಝರಿನಾ ಬೇಗಂ ವೈದ್ಯರಿಗೆ ವಿಷಯ ತಿಳಿಸಿದ್ದಾರೆ. ಆಗ ಮಗುವಿನ ಔಷಧಿ ಬದಲಾದ ವಿಚಾರ ತಿಳಿದಿದೆ. ಈಗ ವೈದ್ಯರು ಉಲ್ಟಾ ಹೊಡೆದಿದ್ದು, ಮಗುವಿಗೆ ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ, ರಾಯಚೂರಿಗೆ ಕರೆದುಕೊಂಡು ಹೋಗುವಂತೆ ಒತ್ತಡ ಹಾಕಿದ್ದಾರೆ.

    ಹಲವು ವರ್ಷದ ಬಳಿಕ ಝರಿನಾ ಬೇಗಂ ಗಂಡು ಮಗುವಾಗಿದ್ದು, ಗಂಡ ಸಹ ಬಿಟ್ಟು ಹೋಗಿದ್ದಾನೆ. ಈಗ ಮಗುವನ್ನು ಉಳಿಸಿಕೊಳ್ಳಲು ನಾನಾ ಕಷ್ಟಪಡುವಂತಾಗಿದೆ. ಝರಿನಾ ಬೇಗಂ ಆರೋಪ ತಳ್ಳಿಹಾಕಿರುವ ಆಸ್ಪತ್ರೆ ವೈದ್ಯರು ಝರಿನಾ ಬೇಗಂ ಮಾನಸಿಕವಾಗಿ ಸರಿ ಇಲ್ಲ ಅಂತ ಹೇಳಿದ್ದಾರೆ.

  • ವಿಚಾರಣೆಗೆ ಬಂದವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ರು

    ವಿಚಾರಣೆಗೆ ಬಂದವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ರು

    – ದೂರಿನ ಹಿನ್ನೆಲೆ ತನಿಖೆಗೆ ಬಂದಿದ್ದ ಅಧಿಕಾರಿಗಳು
    – ವೈದ್ಯಾಧಿಕಾರಿ ಪರ ನಿಂತ ಸ್ಥಳೀಯರು

    ಕಾರವಾರ: ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ವೈದ್ಯಾಧಿಕಾರಿಯ ವಿಚಾರಣೆ ನೆಡೆಸಲು ಬಂದ ಅಧಿಕಾರಿಗಳು ವೈದ್ಯರ ಉತ್ತಮ ಕಾರ್ಯ ಹಾಗೂ ಸಾರ್ವಜನಿಕರ ಅಕ್ರೋಶಕ್ಕೆ ಮಣಿದು ತಾಲೂಕು ವೈದ್ಯಾಧಿಕಾರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ ಅಪರೂಪದ ಘಟನೆ ಬುಧವಾರ ಭಟ್ಕಳದಲ್ಲಿ ಸಾಕ್ಷಿಯಾಯಿತು.

    ಭಟ್ಕಳ ತಾಲೂಕು ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ರವರ ವಿರುದ್ಧ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಭಟ್ಕಳದ ಈಶ್ವರ್ ನಾಯ್ಕ್ ಎಂಬವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತ್ರತ್ವದ ತಂಡ ಭಟ್ಕಳದ ತಾಲೂಕು ಆಸ್ಪತ್ರೆಗೆ ಆಗಮಿಸಿ ತನಿಖೆ ನೆಡೆಸುತಿತ್ತು.

    ಈ ವಿಷಯ ಸುತ್ತಮುತ್ತಲ ಜನರಿಗೆ ತಿಳಿದು ಆಸ್ಪತ್ರೆಯಲ್ಲಿ ನೂರಾರು ಜನರು ಗುಂಪುಗೂಡಿದರು. ಹಾಳು ಬಿದ್ದಿದ್ದ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯರಿಗೆ ಹಳೆಯ ದ್ವೇಷ ಇಟ್ಟುಕೊಂಡು ದೂರು ನೀಡಿದ ವ್ಯಕ್ತಿಯ ಮಾತು ಕೇಳಿ ಬಂದಿರುವುದಕ್ಕೆ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದರು ನಂತರ ವೈದ್ಯಾಧಿಕಾರಿಯ ಪ್ರಾಮಾಣಿಕ ಕಾರ್ಯವೈಖರಿ ನೋಡಿ ಸಂತಸ ಪಟ್ಟ ತನಿಖಾಧಿಕಾರಿಗಳ ತಂಡ ಅವರಿಗೆ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು.

    ನಾಯಿಗಳ ವಾಸಸ್ಥಾನವಾಗಿದ್ದ ತಾಲೂಕು ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆ ಮಾಡಿದ್ದ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್. ಭಟ್ಕಳ ತಾಲೂಕು ಆಸ್ಪತ್ರೆಗೆ ವರ್ಗವಾಗಿ ಬಂದಾಗ ಯಾವುದೇ ಮೂಲಭೂತ ವ್ಯವಸ್ಥೆ ಇಲ್ಲದೇ ಹಾಳು ಬಿದ್ದಿದ್ದ ಸರ್ಕಾರಿ ಆಸ್ಪತ್ರೆಯನ್ನು ಅಭಿವೃದ್ಧಿ ಪಡಿಸಿದ್ದರು.

    ರಾತ್ರಿ ಹಗಲು ಎನ್ನದೇ ಕರ್ತವ್ಯ ಮುಗಿದರೂ ರೋಗಿಗಳೊಂದಿಗೆ ಇದ್ದು ಅವರ ಯೋಗಕ್ಷೇಮ ನೋಡಿಕೊಳ್ಳುತಿದ್ದಾರೆ. ಇವರು ಹಲವು ದಾನಿಗಳ ಸಹಕಾರದೊಂದಿಗೆ 50 ಲಕ್ಷದ ಡೆಯಾಬಿಟಿಸ್ ಸೆಂಟರ್ ಸಹ ತೆರೆದು ಉಚಿತ ವಾಗಿ ಎಲ್ಲವೂ ಸಿಗುವಂತೆ ಮಾಡಿದ್ದರು.

    ಕೋವಿಡ್ ಸಂದರ್ಭದಲ್ಲಿ ಹೆದರದೇ ಕಾರ್ಯನಿರ್ವಹಿಸಿ ತಮಗೂ ಕೂಡ ಸೋಂಕು ಬಂದರೂ ಕಾರ್ಯವನ್ನು ಮರೆತಿರಲಿಲ್ಲ. ಹೀಗಾಗಿ ಜನರ ಪ್ರೀತಿ ಗಳಿಸಿದ್ದ ವೈದ್ಯೆ ಎಲ್ಲರ ಅಚ್ಚುಮೆಚ್ವಿನ ತಾಯಿಯಾಗಿದ್ದರು. ಹೀಗಿರುವಾಗ ಇವರ ಬಳಿಯೇ ಕೆಲಸ ಮಾಡುತಿದ್ದ ಈಶ್ವರ್ ನಾಯ್ಕ ಎಂಬಾತ ಬೇಡದೇ ಇರುವ ಕೆಲಸ ಮಾಡಿದ್ದಕ್ಕೆ ಹೊರಹಾಕಿದ್ದರಿಂದ ಸೇಡು ತೀರಿಸಿಕೊಳ್ಳಲು ತನ್ನ ಪ್ರಭಾವ ಬಳಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದನು.

    ಇನ್ನು ಆಸ್ಪತ್ರೆಯಲ್ಲಿ ನೂರಾರು ಜನ ಸೇರಿ ವೈದ್ಯರ ತನಿಖೆಗೆ ವಿರೋಧ ವ್ಯಕ್ತಪಡಿಸಿದರು. ಇನ್ನು ಒಂದುವೇಳೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದರು. ಇದಲ್ಲದೇ ಪರಿಸ್ಥಿತಿ ಉಗ್ರವಾಗುತಿತ್ತು. ನಂತರ ಆಧಿಕಾರಿಗಳು ಇವರು ಮಾಡಿದ ಕೆಲಸಗಳನ್ನು ಪರಿಶೀಲಿಸಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಿ ಮರಳಿದರು.

  • ವೈದ್ಯನ ಮೇಲೆ ದಾಳಿಗೆ ಮುಂದಾದ ಆನೆ – ಕ್ಷಣಾರ್ಧದಲ್ಲಿ ಬಚಾವ್

    ವೈದ್ಯನ ಮೇಲೆ ದಾಳಿಗೆ ಮುಂದಾದ ಆನೆ – ಕ್ಷಣಾರ್ಧದಲ್ಲಿ ಬಚಾವ್

    ಶಿವಮೊಗ್ಗ: ಸಾಕಾನೆಯೊಂದು ವೈದ್ಯರ ಮೇಲೆ ದಾಳಿಗೆ ಮುಂದಾದ ಘಟನೆ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

    ಸಕ್ರೆಬೈಲು ಆನೆ ಬಿಡಾರದಲ್ಲಿ ಕಳೆದ ಎರಡು ದಿನದ ಹಿಂದೆ ಭಾನುಮತಿ ಆನೆ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆನೆಗೆ, ವೈದ್ಯ ಡಾ.ವಿನಯ್ ಕುಮಾರ್ ಔಷಧೋಪಚಾರ ನಡೆಸುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ನೀಲಾಂಬರಿ ಆನೆ ವೈದ್ಯ ವಿನಯ್ ಕುಮಾರ್ ಅವರಿಗೆ ಸೊಂಡಿಲಿನಿಂದ ತಿವಿದಿದೆ. ಸೊಂಡಿಲಿನಿಂದ ತಿವಿದ ಭರಸಕ್ಕೆ ವೈದ್ಯ ವಿನಯ್ ಕುಮಾರ್ ಕೆಳಗೆ ಬಿದ್ದಿದ್ದಾರೆ.

    ರೋಷಗೊಂಡಿದ್ದ ನೀಲಾಂಬರಿ ಆನೆ ಎರಡು ಬಾರಿ ಕಾಲನ್ನು ಮೇಲೆ ಎತ್ತಿ ವೈದ್ಯರ ಮೇಲೆ ಇಡಲು ಪ್ರಯತ್ನಿಸಿದೆ. ಈ ವೇಳೆ ವೈದ್ಯ ಜೋರಾಗಿ ಕಿರುಚಾಟ ನಡೆಸಿದ್ದಾರೆ. ಆದರೆ ತಾಯಿ ಹಾಗೂ ಮರಿ ಆನೆ ಜೊತೆ ಮಾವುತರು ಹಾಗೂ ಕಾವಾಡಿಗಳು ಇದ್ದಿದ್ದರಿಂದ ವೈದ್ಯರ ಸಹಾಯಕ್ಕೆ ಯಾರೊಬ್ಬರೂ ಬರಲು ಸಾಧ್ಯವಾಗಿಲ್ಲ. ನಂತರ ಕ್ಷಣಾರ್ಧದಲ್ಲಿ ವೈದ್ಯ ವಿನಯ್ ಕುಮಾರ್ ಮೇಲಕ್ಕೆ ಎದ್ದು ಪಕ್ಕಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

    ನೀಲಾಂಬರಿ ಆನೆ ಚಿತ್ರದುರ್ಗದ ಮುರುಘಾ ಮಠಕ್ಕೆ ಸೇರಿದ್ದ ಆನೆಯಾಗಿದ್ದು, ಈ ಆನೆಯನ್ನು ಹೆಚ್ಚಿನ ಆರೈಕೆಗಾಗಿ ಕಳೆದ ತಿಂಗಳು ಚಿತ್ರದುರ್ಗದಿಂದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿತ್ತು. ಆದರೆ ಇಂದು ವೈದ್ಯರ ಮೇಲೆ ದಾಳಿಗೆ ಮುಂದಾಗಿದೆ. ಘಟನೆಯಿಂದ ವೈದ್ಯರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದರು. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ ಭಾರಿ ಅನಾಹುತವೊಂದು ತಪ್ಪಿದಂತೆ ಆಗಿದೆ. ಘಟನೆ ನಂತರ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

  • ಮೃತ ಮಹಿಳೆಯ ಅಂಗಾಂಗದಿಂದ ಉಳಿಯಿತು 3 ಜನರ ಪ್ರಾಣ

    ಮೃತ ಮಹಿಳೆಯ ಅಂಗಾಂಗದಿಂದ ಉಳಿಯಿತು 3 ಜನರ ಪ್ರಾಣ

    ನವದೆಹಲಿ: ಮೆದುಳು ಸತ್ತ 57 ವರ್ಷದ ಮಹಿಳೆಯೊಬ್ಬರು ತಮ್ಮ ಅಂಗಾಂಗವನ್ನು ದಾನ ಮಾಡುವ ಮೂಲಕ 3 ಮಂದಿಯ ಪ್ರಾಣವನ್ನು ಉಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಮಹಿಳೆ ತೀವ್ರವಾಗಿ ತಲೆಗೆ ಗಾಯಗೊಂಡು ಮಾರ್ಚ್ 28ರಂದು ಚಿಕಿತ್ಸೆಗಾಗಿ ದ್ವಾರಕಾದ ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ವೈದ್ಯರು ರೋಗಿಯ ಮೆದುಳು ಸತ್ತಿದೆ ಎಂದು ಘೋಷಿಸಿದ್ದರು. ಬಳಿಕ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಅಂಗಾಂಗಗಳನ್ನು ದಾನ ಮಾಡುವುದಾಗಿ ಕುಟುಂಬಸ್ಥರಿಗೆ ಕೇಳಿದಾಗ ಒಪ್ಪಿಕೊಂಡಿದ್ದಾರೆ.

    ಬಳಿಕ ಮಹಿಳೆಯ ಅಂಗಾಂಗಗಳನ್ನು ದೇಹದಿದಂದ ಹೊರತೆಗೆದು ಮಾರ್ಚ್ 29ರಂದು ಬೆಳಗ್ಗೆ 5 ಗಂಟೆಗೆ ವರ್ಗಾಯಿಸಲಾಗಿತು. ಆಕೆಯ ಕಿಡ್ನಿವೊಂದನ್ನು ದ್ವಾರಕಾದ ಆಕಾಶ್ ಹೆಲ್ತ್‌ಕೇರ್‌ನಲ್ಲಿರುವ 52 ವರ್ಷದ ವ್ಯಕ್ತಿಗೆ ನೀಡಲಾಗಿದ್ದು, ಮಹಿಳೆಯ ಲೀವರ್‌ನನ್ನು ಗುರ್ಗಾಂವ್‍ನ ಮೆಡಂತಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 71 ವರ್ಷದ ವ್ಯಕ್ತಿಗೆ ನೀಡಲಾಗಿದೆ ಎಂದು ಆಕಾಶ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆಯ ಕಾರ್ನಿಯಾಗಳನ್ನು ಶ್ರಾಫ್ ಕಣ್ಣಿನ ಕೆಂದ್ರದಲ್ಲಿರುವ ಕಣ್ಣಿನ ಬ್ಯಾಂಕ್‍ನಲ್ಲಿ ಸಂರಕ್ಷಿಸಲಾಗಿದ್ದು, ಮಹಿಳೆಯ ಅಂಗಾಂಗಗಳನ್ನು ಕಸಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸುಮಾರು 20 ಗಂಟೆಗಳ ಕಾಲ ಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.