Tag: District Administration

  • ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಅಮಾನತು

    ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಅಮಾನತು

    ಜೈಪುರ: ಟ್ರೈನಿಂಗ್ ವೇಳೆ ನಾಗಿಣಿ ಡ್ಯಾನ್ಸ್ ಮಾಡಿದ ಟೀಚರ್ ಒಬ್ಬರನ್ನು ಅಲ್ಲಿನ ಜಿಲ್ಲಾಡಳಿತ ಅಮಾನತು ಮಾಡಿರುವ ಘಟನೆ ರಾಜಸ್ಥಾನದ ಜಲೋರೆಯಲ್ಲಿ ನಡೆದಿದೆ.

    ಈ ಘಟನೆ ನಡೆದಿರುವುದು 10 ದಿನಗಳ ಹಿಂದೆ. ಮೂವರು ಶಿಕ್ಷಕರು ನಾಗಿಣಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಎಚ್ಚೆತ್ತ ಜಿಲ್ಲಾಡಳಿತ ಆ ಮೂವರಲ್ಲಿ ಒಬ್ಬರನ್ನು ಅಮಾನತು ಮಾಡಿ ಉಳಿದ ಇಬ್ಬರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ತರಬೇತಿ ಎಂದು ಬಂದಿರುವ ಶಿಕ್ಷಕರು ಊಟದ ಬಿಡುವಿನ ವೇಳೆ ಒಂದು ಕೊಠಡಿಯಲ್ಲಿ ಕುಳಿತುಕೊಂಡು ನಾಗಿಣಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಒಬ್ಬರು ಮಹಿಳಾ ಶಿಕ್ಷಕಿ ಮತ್ತು ಇಬ್ಬರು ಶಿಕ್ಷಕರು ಸೇರಿ ಕರ್ಚಿಫ್ ಹಿಡಿದು ಮಾಡಿರುವ ನೃತ್ಯವನ್ನು ಅಲ್ಲಿ ಕುಳಿತ ಉಳಿದ ಶಿಕ್ಷಕರು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಜಲೋರೆ ಜಿಲ್ಲೆಯ ಶಿಕ್ಷಣ ಅಧಿಕಾರಿ ಅಶೋಕ್ ರೋಶ್ವಾಲ್, ಡ್ಯಾನ್ಸ್ ಪಾರ್ಟಿ ಆಯೋಜನೆ ಮಾಡಿದ ಒಬ್ಬರು ಶಿಕ್ಷಕರನ್ನು ನಾವು ಅಮಾನತು ಮಾಡಿದ್ದೇವೆ. ಇನ್ನುಳಿದ ಇಬ್ಬರು ಶಿಕ್ಷಕರು ಹೊಸಬರು ಆದ ಕಾರಣ ಅವರಿಗೆ ನಿಯಮದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಅವರಿಗೆ ಕೇವಲ ಶೋಕಾಸ್ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ಅವರು ಮಾಡಿದ್ದು ತಪ್ಪಲ್ಲ ಆದರೆ ನೀತೆ ಸಂಹಿತೆಯನ್ನು ಕಾಪಾಡಿಲ್ಲದ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಜಿಲ್ಲಾಡಳಿತದ ಈ ಕ್ರಮವನ್ನು ಕೆಲ ಶಿಕ್ಷಕರು ಖಂಡಿಸಿದ್ದು, ವಿರಾಮದ ಸಮಯದಲ್ಲಿ ನಾವು ಎಂಜಾಯ್ ಮಾಡಿದರೆ ಏನು ತಪ್ಪು? ಆ ವಿಡಿಯೋದಲ್ಲಿ ಅಶ್ಲೀಲ ಅಥವಾ ಕೆಟ್ಟದ್ದು ಏನಿದೆ? ಸರ್ಕಾರಿ ನೌಕರರು ಬಿಡುವಿನ ಸಮಯದಲ್ಲೂ ಸಹೋದ್ಯೋಗಿಗಳ ಜೊತೆ ಎಂಜಾಯ್ ಮಾಡಬಾರದೇ? ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರ ನ್ಯಾಯವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

  • ಪಾಕಿನಿಂದ ವಲಸೆ ಬಂದ 21 ಜನರಿಗೆ ರಾಜಸ್ಥಾನ ಸರ್ಕಾರದಿಂದ ಭಾರತದ ಪೌರತ್ವ

    ಪಾಕಿನಿಂದ ವಲಸೆ ಬಂದ 21 ಜನರಿಗೆ ರಾಜಸ್ಥಾನ ಸರ್ಕಾರದಿಂದ ಭಾರತದ ಪೌರತ್ವ

    ಜೈಪುರ: ಪಾಕಿಸ್ತಾನದಿಂದ ವಲಸೆ ಬಂದು ಸುಮಾರು 19 ವರ್ಷದಿಂದ ಭಾರತದಲ್ಲಿ ವಾಸಿಸುತ್ತಿದ್ದ 21 ಮಂದಿಗೆ ರಾಜಸ್ಥಾನ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿದೆ.

    ಈ ಜನರು ಪಾಕಿಸ್ತಾನದಿಂದ ಸ್ಥಳಾಂತರಗೊಂಡ ನಂತರ ಇಲ್ಲಿ ಹಲವಾರು ವರ್ಷದಿಂದ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಭಾರತೀಯ ಪೌರತ್ವವಿಲ್ಲದ ಕಾರಣ, ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಮತ್ತು ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೈಪುರದ ಜಿಲ್ಲಾಧಿಕಾರಿ ಜಗ್ರೂಪ್ ಸಿಂಗ್ ಯಾದವ್ ಹೇಳಿದ್ದಾರೆ.

    ಕಳೆದ ಎರಡು ತಿಂಗಳಲ್ಲಿ 35 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇನ್ನೂ 28 ಪೌರತ್ವದ ಅರ್ಜಿಗಳು ಪರಿಶೀಲನೆ ನಡೆಯುತ್ತಿದೆ. 68 ಪೌರತ್ವದ ಅರ್ಜಿಗಳು ತನಿಖಾ ಹಂತದಲ್ಲಿ ಇದೆ. ಅವರಿಗೂ ಪೌರತ್ವ ನೀಡಲಾಗುವುದು. ಪಾಕ್ ವಲಸಿಗರ ಎಲ್ಲಾ ಪೌರತ್ವದ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಆನ್‍ಲೈನ್ ಪ್ರಕ್ರಿಯೆ ಮೂಲಕ ಅವರಿಗೆ ಪೌರತ್ವದ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

    ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ಒಟ್ಟು 1,310 ವಲಸಿಗರಿಗೆ ರಾಜಸ್ಥಾನ ಸರ್ಕಾರ ಪೌರತ್ವವನ್ನು ನೀಡಿದೆ. ಜೋಧಪುರ್, ಜೈಸಲ್ಮೇರ್ ಮತ್ತು ಜೈಪುರ ಜಿಲ್ಲಾಧಿಕಾರಿಗಳಿಗೆ ಪೌರತ್ವ ಪತ್ರವನ್ನು ನೀಡುವ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಸಿಖ್ಖ, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದ ವಲಸಿಗರಿಗೆ ಸೂಕ್ತ ತನಿಖೆ ನಂತರ ಭಾರತೀಯ ಪೌರತ್ವ ನೀಡಲು ರಾಜಸ್ಥಾನದ ಜೋಧ್ ಪುರ, ಜೈಸಲ್ಮೇರ್ ಮತ್ತು ಜೈಪುರದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.

  • ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ- ನಾಳೆಯಿಂದ ದರ್ಶನ ಆರಂಭ

    ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ- ನಾಳೆಯಿಂದ ದರ್ಶನ ಆರಂಭ

    ಹಾಸನ: ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಾಳೆಯಿಂದಲೇ ದೇವಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.

    ಅಕ್ಟೋಬರ್ 17 ರಿಂದ 29 ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, ಈ ಬಾರಿ ಹದಿಮೂರು ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಲಿದ್ದಾಳೆ. ಮೊದಲ ಹಾಗೂ ಕೊನೆಯ ದಿನ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರಲಿದೆ. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ.

    ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 3.30 ರಿಂದ ದಿನ ಮುಕ್ತಾಯದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಶೇಷ ದರ್ಶನಕ್ಕಾಗಿ 300 ಹಾಗೂ 1000 ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.

    ಜಿಲ್ಲಾಡಳಿತ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • ಹಾಸನಾಂಬೆ ಉತ್ಸವಕ್ಕೆ ದಿನಗಣನೆ – ಸಿದ್ಧತಾ ಕಾರ್ಯ ಸಾಗದ್ದಕ್ಕೆ ಭಕ್ತರ ಆಕ್ರೋಶ

    ಹಾಸನಾಂಬೆ ಉತ್ಸವಕ್ಕೆ ದಿನಗಣನೆ – ಸಿದ್ಧತಾ ಕಾರ್ಯ ಸಾಗದ್ದಕ್ಕೆ ಭಕ್ತರ ಆಕ್ರೋಶ

    ಹಾಸನ: ದಸರಾ ನಂತರ ನಡೆಯುವ ಹಾಸನದ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಸಹ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಆದರೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ.

    ತಿಂಗಳು 17ರ ಗುರುವಾರ ದೇವಿಯ ಜಾತ್ರೆ ಮಹೋತ್ಸವ ಆರಂಭ ಆಗಲಿದ್ದು. ಅಂದೇ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಇದಕ್ಕೆ ಕೇವಲ 15 ದಿನಗಳು ಮಾತ್ರ ಬಾಕಿ ಇವೆ. ನಗರದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿವೆ.

    ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಅರ್ಧ ರಸ್ತೆಯಲ್ಲಿ ಮಾತ್ರ ಸಂಚರಿಸುವ ಅನಿವಾರ್ಯತೆ ಇದೆ. ಪರಿಣಾಮ ಇಡೀ ನಗರ ತುಂಬ ಇರುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ದೇವಾಲಯಕ್ಕೆ ಸಂಪರ್ಕದ ಬಿಎಂ ರಸ್ತೆ, ಹೊಸ ಲೈನ್ ರಸ್ತೆ, ಗೊರೂರು ವೃತ್ತ, ಸೇರಿದಂತೆ ನಾಲ್ಕು ಕಡೆಗಳಿಂದಲೂ ಸಹ ಸಂಚಾರ ಸುಗಮವಾಗಿಲ್ಲ. ರಸ್ತೆಗಳ ದುರಸ್ತಿ ಕಾರ್ಯ ಆಮೆ ಗತಿಯಲ್ಲಿ ಸಾಗುತ್ತಿದೆ.

    ಎನ್ ಆರ್ ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು ಶೇ.25 ರಷ್ಟು ಕೆಲಸ ಬಾಕಿ ಇದೆ. ಉಳಿದಿರುವ ಕಾಮಗಾರಿ 15 ದಿನಗಳಲ್ಲಿ ಮುಗಿಯುವುದು ಅನುಮಾನ ಆಗಿದೆ. ಪ್ರತಿ ದಿನ 50 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಬರುವ ಹಿನ್ನಲೆ ರಸ್ತೆ ಸರಿಪಡಿಸದಿದ್ದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

    ದೇವಾಲಯ ಸುತ್ತಮುತ್ತ ರಸ್ತೆಗಳಲ್ಲಿ ಅಪಘಾತ ಉಂಟು ಮಾಡುವ ದೊಡ್ಡ ದೊಡ್ಡ ಗುಂಡಿಗಳೇ ನಿರ್ಮಾಣವಾಗಿದ್ದು, ನಗರಸಭೆ ಅಧಿಕಾರಿಗಳು ಅಲ್ಲಲ್ಲಿ ಕಲ್ಲು ಮಣ್ಣು ಸುರಿದು ಕೆಲ ರಸ್ತೆಗಳು ಬಂದ್ ಆಗಿವೆ. ಅಲ್ಲದೆ ಪ್ರತಿವರ್ಷ ಕೋಟಿ ಕೋಟಿ ಆದಾಯ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುತ್ತಿದ್ದರೂ ಜಿಲ್ಲಾಡಳಿತ ಮಾತ್ರ ದೇವಾಲಯದ ಅಭಿವೃದ್ಧಿಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೂರಾರು ವರ್ಷಗಳಿಂದ ಅಪಾರ ಭಕ್ತರನ್ನು ದೇವಾಲಯ ಹೊಂದಿದ್ದರೂ ಇಲ್ಲಿಯವರೆಗೂ ಶಾಶ್ವತ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೇವಲ ಎರಡು ವಾರ ಮಾತ್ರ ಬಾಕಿ ಇರುವಾಗ ಶೌಚಾಲಯಕ್ಕೆ ಮಾರ್ಕ್ ಮಾಡುತ್ತಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹಲವಾರು ಪವಾಡಗಳನ್ನು ಹೊಂದಿರುವ ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಾಲಯಕ್ಕೆ ಕಳೆದ ಕೆಲವರ್ಷಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಇದನ್ನು ದೇವಾಲಯ ಅಭಿವೃದ್ಧಿಗೆ ಬಳಸುವ ಅವಕಾಶ ಇದ್ದರೂ ಜಿಲ್ಲಾಡಳಿತ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಿಯ ದರ್ಶನಕ್ಕೆ ಯಾವುದೇ ತೊಂದರೆಯಾಗದೆ ಕಾಮಗಾರಿ ಶೀಘ್ರವಾಗಿ ಮುಗಿಸಲಿ, ಹಾಸನಾಂಬೆ ಉತ್ಸವ ಅದ್ಧೂರಿಯಾಗಿ ಜರುಗಲಿ ಎಂಬುದು ಜನರ ಆಶಯವಾಗದೆ.

  • ಉಗ್ರರ ಗುಂಡೇಟಿಗೆ ಬಲಿಯಾಗಿಲ್ಲ, ಆತ್ಮಹತ್ಯೆಯಿಂದ ಹುಬ್ಬಳ್ಳಿಯ ಯೋಧ ಸಾವು

    ಉಗ್ರರ ಗುಂಡೇಟಿಗೆ ಬಲಿಯಾಗಿಲ್ಲ, ಆತ್ಮಹತ್ಯೆಯಿಂದ ಹುಬ್ಬಳ್ಳಿಯ ಯೋಧ ಸಾವು

    ಹುಬ್ಬಳ್ಳಿ: ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದ ಮಂಜುನಾಥ ಹನಮಂತಪ್ಪ ಓಲೇಕಾರ(29) ಹುತಾತ್ಮರಾಗಿದ್ದರು ಎನ್ನಲಾಗಿತ್ತು. ಆದರೆ ಈಗ ಯೋಧ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಸೇನೆ ತಿಳಿಸಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟಪಡಿಸಿದ್ದಾರೆ.

    ಮಂಜುನಾಥ ತಮ್ಮ 20ನೇ ವಯಸ್ಸಿನಲ್ಲಿಯೇ ಭಾರತೀಯ ಸೇನೆಗೆ ಸೇರಿದ್ದರು. ಒಂಬತ್ತು ವರ್ಷದಿಂದ ಸೇನೆಯಲ್ಲಿದ್ದ ಅವರು ಸದ್ಯ ಮದ್ರಾಸ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಂಜುನಾಥ ಗಡಿ ಕಾಯಲು ಸೇನೆಗೆ ಮರಳಿದ್ದರು. ಈ ಮೊದಲು ಯೋಧ ಮಂಜುನಾಥ ಉಗ್ರರ ಗುಂಡೇಟಿಗೆ ಹುತಾತ್ಮರಾಗಿದ್ದರು ಎಂದು ಮಾಹಿತಿ ಬಂದಿತ್ತು. ಆದರೆ ಈಗ ಭಾರತೀಯ ಸೇನೆ ಯೋಧ ಸಾವನ್ನಪ್ಪಿದ್ದು ಉಗ್ರರ ಅಟ್ಟಹಾಸಕ್ಕಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ಕೊಟ್ಟಿದೆ.

    ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಇಂದು ಸೇನೆಯಿಂದ ಈ ಮಾಹಿತಿ ರವಾನೆಯಾಗಿದೆ. ಯೋಧ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಅಂತ್ಯ ಸಂಸ್ಕಾರಕ್ಕೆ ಯಾವುದೇ ಸರ್ಕಾರಿ ಗೌರವ ಇಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ಆದರೆ ಖಾಸಗಿಯಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದ್ದು, ಜಿಲ್ಲಾಡಳಿತದಿಂದ ಅಂತ್ಯ ಸಂಸ್ಕಾರಕ್ಕೆ ಅವಶ್ಯ ನೆರವು ನೀಡುವುದಾಗಿ ಡಿಸಿ ತಿಳಿಸಿದ್ದಾರೆ.

    ಈಗಾಗಲೇ ಸ್ವಗ್ರಾಮಕ್ಕೆ ಯೋಧ ಮಂಜುನಾಥ ಓಲೇಕಾರ ಅವರ ಪಾರ್ಥೀವ ಶರೀರ ತಲುಪಿದ್ದು, ಗ್ರಾಮದಲ್ಲಿ ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಯೋಧನ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ.

  • ಹಣದಾಸೆಗೆ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಉತ್ತೇಜನ ನೀಡಿದ ಜಿಲ್ಲಾಡಳಿತ

    ಹಣದಾಸೆಗೆ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಉತ್ತೇಜನ ನೀಡಿದ ಜಿಲ್ಲಾಡಳಿತ

    ಕಲಬುರಗಿ: ಸೂಫಿ ನಾಡು ಕಲಬುರಗಿ ಜಿಲ್ಲೆಯಲ್ಲಿ ಹಾಲಿಗಿಂತ ಆಲ್ಕೋಹಾಲ್ ಮಾರಾಟಕ್ಕೆ ಅಲ್ಲಿನ ಜಿಲ್ಲಾಡಳಿತ ಒತ್ತು ನೀಡಿದೆ. ಯಾಕೆಂದರೆ ಕೆಎಂಎಫ್‍ನ ಒಂದು ಮಳಿಗೆ ನೀಡಿ ಅಂದರೆ 1 ವರ್ಷ ಸತಾಯಿಸಿದ ಅಲ್ಲಿನ ಜಿಲ್ಲಾಡಳಿತ, ಅದೇ ವರ್ಷದಲ್ಲಿ 25 ಕ್ಕೂ ಹೆಚ್ಚು ಮದ್ಯದಂಗಡಿಗಳಿಗೆ ಅನುಮತಿ ನೀಡಿದೆ.

    ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಹಲವು ಗ್ರಾಮಗಳಲ್ಲಿ ಮದ್ಯಮುಕ್ತ ಗ್ರಾಮ ಮಾಡಬೇಕು ಎಂದು ಹಳ್ಳಿಗಳು ಸಿದ್ಧವಾಗುತ್ತಿವೆ. ಆದರೆ ಲಿಕ್ಕರ್ ಮಾಫಿಯಾಕ್ಕೆ ಒಳಗಾದ ಇಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು, 2018-19ರಲ್ಲಿಯೇ ಜಿಲ್ಲೆಯಲ್ಲಿ ಒಟ್ಟು 25 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್-7) ಹಾಗೂ ನಾಲ್ಕು ರಿಕ್ರಿಯೇಶನ್ ಕ್ಲಬ್ (ಸಿಎಲ್-4) ಅಂಗಡಿಗಳಿಗೆ ಅನುಮತಿ ನೀಡಿದೆ.

    ಹೀಗೆ ಅನುಮತಿ ಪಡೆದ ಬಹುತೇಕ ಮದ್ಯದಂಗಡಿಗಳು ಅಬಕಾರಿ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿವೆ. ಇದನ್ನು ಪರಿಶೀಲಿಸಬೇಕಾದ ಅಂದಿನ ಜಿಲ್ಲಾಧಿಕಾರಿ ಮತ್ತು ಇಲ್ಲಿನ ಅಬಕಾರಿ ಅಧಿಕಾರಿಗಳು ಹಣದಾಸೆಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ್ದಾರೆ. ಈ ಕುರಿತು ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿಯನ್ನು ಕೇಳಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

    ಒಂದೆಡೆ ಬೇಕಾಬಿಟ್ಟಿಯಾಗಿ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಕಲಬುರಗಿಯ ಜಿಲ್ಲಾಡಳಿತ, ಅದೇ ಕೆಎಂಎಫ್ ಹಾಲು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯಂದರೆ ಚಂದ್ರಕಾಂತ ಎಂಬವರು ಕಳೆದ ಒಂದು ವರ್ಷದಿಂದ ಕಲಬುರಗಿ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕೆಎಂಎಫ್ ಮಳಿಗೆಗೆ ಅನುಮತಿಗಾಗಿ ಅಲೆದರೂ ಜಿಲ್ಲಾಡಳಿತ ಅನುಮತಿ ನೀಡಿಲ್ಲ.

    ವರ್ಷದಲ್ಲಿ 30 ಮದ್ಯಂದಗಡಿಗಳಿಗೆ ಅನುಮತಿ ನೀಡುವ ಇಲ್ಲಿನ ಜಿಲ್ಲಾಡಳಿತ ಒಂದು ಕೆಎಂಎಫ್ ಮಳಿಗೆ ಅನುಮತಿ ನೀಡುತ್ತಿಲ್ಲ. ಈ ಮೂಲಕ ಇಲ್ಲಿನ ಜಿಲ್ಲಾಡಳಿತ ಹಾಲಿಗಿಂತ ಆಲ್ಕೋಹಾಲ್ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಿದೆ ಎಂದು ಜನಸಾಮಾನ್ಯರು ಆಕ್ರೋಶ ಹೊರಹಾಕಿದ್ದಾರೆ.

  • ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಶ್ರೀರಂಗಪಟ್ಟಣದ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ನಿಷೇಧಾಜ್ಞೆ ಜಾರಿ

    ಮಂಡ್ಯ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಮತ್ತೊಂದು ಹೆಜ್ಜೆ ಮುಂದಿಟ್ಟ ಜಿಲ್ಲಾಡಳಿತಕ್ಕೆ ತಾಲೂಕು ಆಡಳಿತ ಕೂಡ ಸಾಥ್ ನೀಡಿದ್ದು, ಶ್ರೀರಂಗಪಟ್ಟಣ ತಾಲೂಕಿನಲ್ಲೂ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ.

    ಶ್ರೀರಂಗಪಟ್ಟಣ ತಾಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸೆ. 09 ರಿಂದ ಅ. 08ರವರೆಗೆ ಅಂದರೆ ಒಂದು ತಿಂಗಳು ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಕರಿಘಟ್ಟ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಈ ಅಕ್ರಮವನ್ನು ತಡೆಗಟ್ಟಲು ತಾಲೂಕು ಆಡಳಿತ ಈ ನಿರ್ಧಾರಕ್ಕೆ ಬಂದಿದೆ.

    ಜಕ್ಕನಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಗಣಂಗೂರು, ಸಿದ್ದಾಪುರ, ಮುಂಡುಗದೊರೆ, ಹಂಗರಹಳ್ಳಿ, ಗೌಡಹಳ್ಳಿ, ಟಿ.ಎಂ. ಹೊಸೂರು, ಕೋಡಿಶೆಟ್ಟಿಪುರ, ಶ್ರೀರಾಂಪುರ, ನೀಲನಕೊಪ್ಪಲು ಸೇರಿದಂತೆ ಹಲವು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಈ ಪ್ರದೇಶಗಳಲ್ಲಿ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಸಾರ್ವಜನಿಕರಿಗೂ ಸಾಕಷ್ಟು ತೊಂದರೆ ಆಗುತ್ತಿತ್ತು. ಅಕ್ರಮ ಗಣಿಗಾರಿಕೆಗೆ ಬೇಸತ್ತ ಜನರು ಮತ್ತು ಗಣಿ ಇಲಾಖೆ ಅಧಿಕಾರಿಗಳು ದೂರು ನೀಡಿದ್ದರು. ಆದ್ದರಿಂದ ಇಂತಹ ಅಕ್ರಮ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈಗಾಗಲೇ ಪಾಂಡವಪುರ ತಾಲೂಕಿನಲ್ಲಿ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ನಿಷೇಧ ಮಾಡಿದೆ.

  • ಕೊಡಗಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನೆರೆ ಸಂತ್ರಸ್ತರಿಗೆ ಸೂರು

    ಕೊಡಗಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನೆರೆ ಸಂತ್ರಸ್ತರಿಗೆ ಸೂರು

    ಮಡಿಕೇರಿ: ನದಿ ತೀರದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ವಿನೂತನ ಚಿಂತನೆ ನಡೆಸಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಶಾಶ್ವತ ಸೂರು ಕಟ್ಟಿಕೊಡಲು ತೀರ್ಮಾನಿಸಿದೆ.

    ಕೊಡಗು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇಗಾಗಲೇ ಜಾಗ ಪರಿಶೀಲನೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನದಿ ತೀರದ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿ ನೂರಾರು ಮನೆಗಳು ಕುಸಿದಿವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ತ್ವರಿತಗತಿಯಲ್ಲಿ ನೆಲ್ಯಹುದಿಕೇರಿಯಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಿದೆ.

    ಅನೇಕ ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಸರಕಾರದ ವತಿಯಿಂದ ಶಾಶ್ವತ ಸೂರು ಕಲ್ಪಿಸಲು ನಿರ್ಧರಿಸಲಾಗಿದೆ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು 50 ಎಕರೆಯಷ್ಟು ಪೈಸಾರಿ ಜಾಗ ಒತ್ತುವರಿಯಾಗಿರುವುದು ಕುಂಡುಬಂದಿದ್ದು, ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ ಸರ್ಕಾರ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

    ಸಿದ್ದಾಪುರ ಸಮೀಪದಲ್ಲೂ ಸಂತ್ರಸ್ತರಿಗಾಗಿ ಮನೆ ನಿರ್ಮಿಸಲು ಜಾಗವನ್ನು ಪರಿಶೀಲಿಸಲಾಗಿದ್ದು, ಕರಡಿಗೋಡು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ತೋಟಗಳನ್ನು ತೆರವು ಮಾಡಿ ಲೇಔಟ್ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಂತ್ರಸ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ, ಸಂತ್ರಸ್ತರಿಗೆ ಸೂರು ಕಲ್ಪಿಸಲಿ ಎಂದು ನಾಗರಿಕರು ಮನವಿ ಮಾಡಿದ್ದಾರೆ.

  • ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟ – ಎರಡು ಕವಲುಗಳಾಗಿ ಬೇರ್ಪಟ್ಟ ಅಣಿಯೂರು ಹೊಳೆ

    ಪಶ್ಚಿಮ ಘಟ್ಟದಲ್ಲಿ ಜಲಸ್ಫೋಟ – ಎರಡು ಕವಲುಗಳಾಗಿ ಬೇರ್ಪಟ್ಟ ಅಣಿಯೂರು ಹೊಳೆ

    – ಚಾರ್ಮಾಡಿ ಬಳಿ ಉಕ್ಕಿ ಹರಿದ ಮೃತ್ಯುಂಜಯ ಹೊಳೆ
    – ವಿಚಿತ್ರವಾಗಿ ಅಬ್ಬರಿಸುತ್ತಿದೆ ನೇತ್ರಾವತಿಯ ಉಪನದಿಗಳು

    ಮಂಗಳೂರು: ಕರಾವಳಿ ಭಾಗದಲ್ಲಿ ಮಳೆ ಕಡಿಮೆಯಾದರೂ, ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆರಾಯ ಪ್ರತಾಪ ತೋರುತ್ತಿದ್ದು, ಹಠಾತ್ತನೆ ಮೇಘ ಸ್ಫೋಟದ ರೀತಿಯಲ್ಲಿ ಮಳೆಯಾಗಿ ಘಟ್ಟಗಳ ಮಧ್ಯೆ ಜಲಸ್ಫೋಟ ಸಂಭವಿಸಿದೆ. ಇದರಿಂದ ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿದೆ.

    ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆರಾಯ ಪ್ರತಾಪ ತೋರುತ್ತಲೇ ಇದ್ದಾನೆ. ಇದೀಗ ಹಠಾತ್ತನೆ ಮೇಘ ಸ್ಫೋಟದ ರೀತಿಯಲ್ಲಿ ಮಳೆಯಾಗಿ ಘಟ್ಟಗಳ ಮಧ್ಯೆ ಜಲಸ್ಫೋಟ ಸಂಭವಿಸುತ್ತಿದೆ. ದಟ್ಟಾರಣ್ಯದಲ್ಲಿ ಬೆಟ್ಟಗಳ ನಡುವೆ ಸ್ಫೋಟ ಉಂಟಾಗುತ್ತಿದ್ದು, ಕಲ್ಲು, ಮಣ್ಣು, ಭಾರೀ ಪ್ರಮಾಣದ ಮರಗಳು ಛಿದ್ರಗೊಂಡು ನೀರಿನೊಂದಿಗೆ ಕೊಚ್ಚಿ ಬರುತ್ತಿದೆ. ಘಟ್ಟದಲ್ಲಿನ ಜಲ ಸ್ಫೋಟದಿಂದ ನಿನ್ನೆ ಚಾರ್ಮಾಡಿ ಬಳಿಯ ಮೃತ್ಯುಂಜಯ ಹೊಳೆ ಇದ್ದಕ್ಕಿದ್ದಂತೆ ಉಕ್ಕಿಹರಿದಿದ್ದು, ನದಿ ಪಾತ್ರದ ನಿವಾಸಿಗಳು ಭಯಭೀತರಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿ ರಾತ್ರಿ ಕಳೆದಿದ್ದಾರೆ.

    ಭಾರೀ ಮಳೆಯಾದಾಗ ನೇತ್ರಾವತಿಯ ಉಪನದಿಗಳು ಹೀಗೆ ವಿಚಿತ್ರವಾಗಿ ಅಬ್ಬರಿಸುತ್ತಿರುವುದು ಘಟ್ಟದ ತಪ್ಪಲಿನ ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಸಿದೆ. ಇತಿಹಾಸದಲ್ಲಿ ಎಂದೂ ಕಂಡರಿಯದ ಆತಂಕಕಾರಿ ಘಟನೆಗಳು ಘಟ್ಟಗಳಲ್ಲಿ ಸಂಭವಿಸುತ್ತಿರುವುದು ಆತಂಕ ಸೃಷ್ಟಿಸಿದೆ. ಈ ವೈಪರೀತ್ಯದ ಪರಿಣಾಮ ಚಾರ್ಮಾಡಿಯಲ್ಲಿ ಒಂದಾಗಿ ಹರಿಯುತಿದ್ದ ಅಣಿಯೂರು ಹೊಳೆ ಹೊಸ್ಮಠ ಎಂಬಲ್ಲಿ ಎರಡು ಕವಲುಗಳಾಗಿ ಬೇರ್ಪಟ್ಟಿದೆ. ಭಾರೀ ಪ್ರಮಾಣದ ನೀರಿನೊಂದಿಗೆ ಕಲ್ಲುಗಳು ಹಾಗೂ ಮರದ ಅವಶೇಷಗಳು ಕೊಚ್ಚಿ ಬಂದು ನದಿ ಮಧ್ಯೆ ನಡುಗಡ್ಡೆ ಸೃಷ್ಟಿಯಾಗಿದೆ.

    ಕೃಷಿ ತೋಟಗಳಿದ್ದ ಜಾಗದಲ್ಲಿ ಹೊಸ ಹೊಳೆಯೇ ಸೃಷ್ಟಿಯಾಗಿದೆ. ಅಲ್ಲಿಂದ ನೋಡಿದರೆ, ಘಟ್ಟದ ಮೇಲ್ಭಾಗದಲ್ಲಿ ಬೆಟ್ಟಗಳ ಮಧ್ಯೆ ಬೃಹತ್ತಾಗಿ ಬಿರುಕು ಬಿಟ್ಟು ಅರಣ್ಯ ನಾಶವಾಗಿರುವುದೂ ಕಂಡುಬರುತ್ತಿದೆ. ಇದರಿಂದ ಸ್ಥಳೀಯರು ಭಯಗೊಂಡಿದ್ದು ಸ್ಥಳಾಂತರಗೊಳ್ಳುತ್ತಿದ್ದಾರೆ.

    ಭೀಕರ ಮಳೆಯಿಂದಾಗಿ ಚಾರ್ಮಾಡಿ ಘಾಟ್‍ನಲ್ಲಿ ಭೂ ಕುಸಿತ ಸಂಭವಿಸಿತ್ತು. ಅಲ್ಲದೆ, ಮರಗಳು ಸಹ ರಸ್ತೆಗೆ ಬಿದ್ದಿದ್ದವು, ರಸ್ತೆಯನ್ನು ಸ್ವಚ್ಛಗೊಳಿಸಿ, ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆದರೆ, ಆಗಸ್ಟ್ 30 ರಂದು ಮತ್ತೆ ಆದೇಶ ಹೊರಡಿಸಿ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತ ಮತ್ತೆ ಬ್ರೇಕ್ ಹಾಕಿತ್ತು.

    ಪೊಲೀಸರು ನೀಡಿರುವ ವರದಿಯಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇದೆ. ಚಾರ್ಮಾಡಿ ಘಾಟ್ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನಗಳು ಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಪೊಲೀಸರ ವರದಿ ಪಡೆದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಲ್ಲ ರೀತಿಯ ವಾಹನ ಸಂಚಾರ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದರು. ಹೀಗಾಗಿ ಅನಿರ್ಧಿಷ್ಟಾವಧಿಗೆ ಮತ್ತೆ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.

  • ಗಣೇಶೋತ್ಸವ ಪರವಾನಗಿಗೆ ಹಿಂದೂಗಳನ್ನು ನಾಯಿಯಂತೆ ಅಲೆಸಬೇಡಿ- ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

    ಗಣೇಶೋತ್ಸವ ಪರವಾನಗಿಗೆ ಹಿಂದೂಗಳನ್ನು ನಾಯಿಯಂತೆ ಅಲೆಸಬೇಡಿ- ಅಧಿಕಾರಿಗಳಿಗೆ ಶಾಸಕ ಎಚ್ಚರಿಕೆ

    ತುಮಕೂರು: ‘ಹಿಂದೂಗಳಿಗೆ ನಾಯಿಯಂತೆ ಅಲೆಯಿಸುತ್ತಾರೆ’ ಗಣೇಶೋತ್ಸವ ಪರವಾನಗಿ ಪಡೆಯಲು ಹಿಂದೂಗಳು ನಾಯಿಯಂತೆ ಅಲೆಯುವ ಪರಿಸ್ಥಿತಿ ಇದೆ. ಇದನ್ನು ಸರಿಪಡಿಸದಿದ್ದಲ್ಲಿ ಮುಖ್ಯಮಂತ್ರಿಗಳಿಗೆ ಹೇಳಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶನನ್ನು ಕೂರಿಸಲು ಪರವಾನಗಿ ಪಡೆಯಲು ತೆರಳಿದರೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಸುತ್ತಾಡಿಸುತ್ತಾರೆ. ಈ ಬಾರಿ ಯಾವುದೇ ಕಾರಣಕ್ಕೂ ಹಾಗಾಗಬಾರದು. ಎಲ್ಲ ಪರವಾನಗಿಗಳು ಒಂದೇ ಕಡೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದು ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಈಗ ಇರುವುದು ಬೇರೆ ಯಾವುದೋ ಸರ್ಕಾರ ಅಲ್ಲ, ಬಿಜೆಪಿ ಸರ್ಕಾರ. ಅಧಿಕಾರಿಗಳು ಇದನ್ನು ಅರಿತು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಯಾರೇ ಯಾವುದೇ ಯುವಕ ಸಂಘದಿಂದ ಗಣೇಶೋತ್ಸವಕ್ಕೆ ಪರವಾನಗಿ ಕೇಳಿದರೂ ಶೀಘ್ರವೇ ನೀಡಬೇಕು. ಸತಾಯಿಸಕೂಡದು ಎಂದು ತಿಳಿಸಿದ್ದಾರೆ.

    ವಿಜಯಪುರದಲ್ಲಿ ಬನಾಯೆಂಗೆ ಮಂದಿರ್ ಸೇರಿ 2 ಹಾಡುಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆದೇಶ ಹೊರಡಿಸಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಸೆಪ್ಟೆಂಬರ್ 2 ರಿಂದ 12ರ ವರೆಗೆ ಬನಾಯೆಂಗೆ ಮಂದಿರ ಹಾಡಿಗೆ ನಿಷೇಧ ಹೇರಲಾಗಿದೆ. ಈ ಹಿಂದೆ ಗಣೇಶ ಚತುರ್ಥಿ ಸಂದರ್ಭದಲ್ಲಿ ಈ ಹಾಡು ಬಳಕೆ ಹಿನ್ನೆಲೆ ಮತೀಯ ಗಲಭೆ ಉಂಟಾದ ಕಾರಣ ಹಾಡಿನ ಬಳಕೆ ನಿಷೇಧ ಮಾಡಲಾಗಿದೆ. ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಮ್ ಪತ್ರದಲ್ಲಿ ಉಲ್ಲೇಖ ಹಿನ್ನೆಲೆ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.