Tag: Director Suri

  • ‘ಇಂಗ್ಲಿಷ್ ಮಂಜ’ನಿಗೆ ಸುಕ್ಕಾ ಸೂರಿಯ ಆರ್ಶೀವಾದ- ಟೀಸರ್ ಮೆಚ್ಚಿದ ಸಿನಿರಸಿಕರು

    ‘ಇಂಗ್ಲಿಷ್ ಮಂಜ’ನಿಗೆ ಸುಕ್ಕಾ ಸೂರಿಯ ಆರ್ಶೀವಾದ- ಟೀಸರ್ ಮೆಚ್ಚಿದ ಸಿನಿರಸಿಕರು

    ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಭರವಸೆ ಮೂಡಿಸಿರುವ ಪ್ರತಿಭಾವಂತ ನಟ ಪ್ರಮೋದ್. ಇತ್ತೀಚೆಗೆ ಅಮೇಜಾನ್ ಪ್ರೈಂ ನಲ್ಲಿ ಬಿಡುಗಡೆಗೊಂಡ ರತ್ನನ್ ಪ್ರಪಂಚ ಸಿನಿಮಾದಲ್ಲಿ ಉಡಾಳ್ ಬಾಬು ಆಗಿ ಇವರ ಅಭಿನಯ ಕಂಡು ಸಿನಿ ಪ್ರೇಕ್ಷಕರು ಕೊಂಡಾಡಿದ್ದರು. ನಟನೆ, ಡಾನ್ಸ್, ಆಕ್ಷನ್ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಪ್ರಮೋದ್ ಲಾಂಗ್ ಹಿಡಿದು ಮಾಸ್ ಅವತಾರ ಎತ್ತಿರುವ ಸಿನಿಮಾ ‘ಇಂಗ್ಲಿಷ್ ಮಂಜ’. ಇವರ ಮಾಸ್ ಅವತಾರಕ್ಕೆ ಸಾಥ್ ಸಿಕ್ಕಿರುವುದು ಸ್ಯಾಂಡಲ್‍ವುಡ್ ಸ್ಟಾರ್ ಡೈರೆಕ್ಟರ್ ಸುಕ್ಕಾ ಸೂರಿಯಿಂದ ಎನ್ನುವುದು ವಿಶೇಷ ಸಂಗತಿ.

    English Manja

    ‘ಇಂಗ್ಲಿಷ್ ಮಂಜ’ ಪಕ್ಕಾ ರೌಡಿಸಂ ಹಿನ್ನೆಲೆಯುಳ್ಳ ಸಿನಿಮಾ. 2020ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಇಂದು ಚಿತ್ರದ ನಾಯಕ ನಟ ಪ್ರಮೋದ್ ಹುಟ್ಟುಹಬ್ಬ. ಆದರಿಂದ ಚಿತ್ರತಂಡ ಚಿತ್ರದ ಟೀಸರ್ ಇಂದು ಬಿಡುಗಡೆ ಮಾಡಿದೆ. ಟೈಟಲ್ ಮೂಲಕವೇ ಒಂದು ಹಂತದ ಕ್ಯೂರಿಯಾಸಿಟಿಯನ್ನು ಪ್ರೇಕ್ಷಕರಲ್ಲಿ ಮೂಡಿಸಿದ್ದ ಚಿತ್ರ ಟೀಸರ್ ಬಿಡುಗಡೆಯಾದ ಮೇಲೆ ಆ ಕ್ಯೂರಿಯಾಸಿಟಿ ಲೆವೆಲ್ ಇನ್ನಷ್ಟು ಹೆಚ್ಚಿಸಿದೆ. ಮಾಸ್ ಟೀಸರ್ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿದೆ. ರೌಡಿಸಂ ಹಿನ್ನೆಲೆಯ ಸಿನಿಮಾ ನಿರ್ದೇಶನಕ್ಕೆ ಬ್ರ್ಯಾಂಡ್ ಅಂದರೆ ಅದು ಸ್ಟಾರ್ ಡೈರೆಕ್ಟರ್ ಸೂರಿ. ಆದರಿಂದಲೇ ಚಿತ್ರತಂಡ ಇಂಗ್ಲಿಷ್ ಮಂಜ ಟೀಸರ್ ಬಿಡುಗಡೆಯನ್ನು ಅವರಿಂದಲೇ ಮಾಡಿಸಿದೆ. ಟೀಸರ್ ಝಲಕ್ ಹಾಗೂ ಟೈಟಲ್ ನೋಡಿ ಸಖತ್ ಇಂಪ್ರೆಸ್ ಆಗಿರುವ ಸೂರಿ ಚಿತ್ರತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದನ್ನೂ ಓದಿ: ಅಧಿಕಾರಿಯನ್ನು ಕೊಲ್ಲಲು ಸಂಚು ಮಾಡಿದ ಆಡಿಯೋ ಕ್ಲಿಪ್ ರಿಲೀಸ್ – ನಟ ದಿಲೀಪ್ ವಿರುದ್ಧ FIR

    ಕೋಲಾರ ಸಿನಿಮಾ ನಿರ್ದೇಶಿಸಿದ್ದ ಆರ್ಯ ಎಂ.ಮಹೇಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾ ಇದು. ರೌಡಿಸಂ ಹಿನ್ನೆಲೆಯ ಕಥೆಗೆ ಬೇಕಾದ ಎಲ್ಲಾ ಕಮರ್ಶಿಯಲ್ ಎಳೆಯೂ ಸಿನಿಮಾದಲ್ಲಿದ್ದು ಅದರೊಂದಿಗೆ ಸುಂದರ ಪ್ರೇಮ್ ಕಹಾನಿಯೂ ಚಿತ್ರದಲ್ಲಿದೆ. ಚಿತ್ರದಲ್ಲಿ ಲಾಂಗ್ ಹಿಡಿದು ರಗಡ್ ಲುಕ್‍ನಲ್ಲಿ ಅಬ್ಬರಿಸಿರುವ ಪ್ರಮೋದ್ ಲವರ್ ಬಾಯ್ ಆಗಿಯೂ ಮಿಂಚಿದ್ದಾರೆ. ಇವರಿಗೆ ಜೋಡಿಯಾಗಿ ತೇಜಸ್ವಿನಿ ಶರ್ಮಾ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸುನೀಲ್ ಪುರಾಣಿಕ್, ವಿ.ನಾಗೇಂದ್ರ ಪ್ರಸಾದ್, ವಿಕ್ಟರಿ ವಾಸು, ನಾಗೇಂದ್ರ ಅರಸ್ ಒಳಗೊಂಡ ಅನುಭವಿ ಕಲಾವಿದರ ಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಪುಷ್ಪ-2’ಗೆ ಶೇ.50 ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ!

    English Manja

    2020ರಲ್ಲಿ ಸೆಟ್ಟೇರಿದ್ದ ಈ ಚಿತ್ರ ಬಿಡುಗಡೆಯ ಅಂಚಿಗೆ ಬಂದು ನಿಂತಿದ್ದು, ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಆರಂಭ ನೀಡಿದೆ ಚಿತ್ರತಂಡ. ಚಿತ್ರಕ್ಕೆ ಇನ್ಫ್ಯಾಂಟ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಡೇವಿಡ್ ಆರ್ ಬಂಡವಾಳ ಹೂಡಿದ್ದು, ಬಿ.ಆರ್.ಹೇಮಂತ್ ಸಂಗೀತ ಸಂಯೋಜನೆ, ರಂಗಸ್ವಾಮಿ ಕ್ಯಾಮೆರಾ ವರ್ಕ್, ಕೆ.ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ.

  • ಅಭಿಷೇಕ್ ಮುಂದಿನ ಸಿನಿಮಾಗೆ ಸೂರಿ ಆ್ಯಕ್ಷನ್ ಕಟ್?

    ಅಭಿಷೇಕ್ ಮುಂದಿನ ಸಿನಿಮಾಗೆ ಸೂರಿ ಆ್ಯಕ್ಷನ್ ಕಟ್?

    ಬೆಂಗಳೂರು: ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಒಂದೊಳ್ಳೆ ಬ್ರೇಕ್‍ಗಾಗಿ ಎದುರು ನೋಡುತ್ತಿದ್ದು, ಉತ್ತಮ ಕಥೆಗಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಇದೀಗ ಚಂದನವನದ ಖ್ಯಾತ ನಿರ್ದೇಶಕರೊಬ್ಬರು ಅಭಿಷೇಕ್ ಹೊಸ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಮೂಲಕ ಒಂದೊಳ್ಳೆ ಸಿನಿಮಾ ಮಾಡಲು ಅಭಿ ಕಾಯುತ್ತಿದ್ದಾರೆ ಎನ್ನಲಾಗಿದೆ.

    ಅಭಿಷೇಕ್ ಸ್ಯಾಂಡಲ್‍ವುಡ್‍ನಲ್ಲಿ ಬೆಳೆಯಬೇಕು ಎಂಬುದು ಅಂಬರೀಶ್ ಅವರ ಮಹದಾಸೆಯಾಗಿತ್ತು. ಹೀಗಾಗಿಯೇ ಅಮರ್ ಸಿನಿಮಾಕ್ಕೆ ಸ್ವತಃ ಅವರೇ ಮಹೂರ್ತ ಮಾಡಿದ್ದರು. ನಾಯಕ ನಟನಾಗಿ ತಮ್ಮ ಮಗನನ್ನು ಅಂಬರೀಶ್ ಸ್ಯಾಂಡಲ್‍ವುಡ್‍ಗೆ ಪರಿಚಯಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಅಂಬರೀಶ್ ಇಹಲೋಕ ತ್ಯಜಿಸಿದ್ದರು. ನಂತರ ಸಿನಿಮಾ ಬಿಡುಗಡೆಯಾದರೂ ಇಷ್ಟೇನು ಯಶಸ್ಸು ಕಾಣಲಿಲ್ಲ. ಹೀಗಾಗಿ ಒಂದೊಳ್ಳೆ ಬ್ರೇಕ್‍ಗೆ ಅಭಿಷೇಕ್ ಕಾಯುತ್ತಿದ್ದಾರೆ.

    ಇದೀಗ ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕರೊಂದಿಗೆ ಅಭಿ ಕೆಲಸ ಮಾಡಲಿದ್ದಾರಂತೆ. ಈ ಕುರಿತು ಸ್ಯಾಂಡಲ್‍ವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದ್ದು, ತಮ್ಮ ರಾ ಸಿನಿಮಾಗಳ ಮೂಲಕ ಸುಕ್ಕಾ ಸೂರಿ, ದುನಿಯಾ ಸೂರಿ ಎಂದೇ ಪ್ರಸಿದ್ಧಿ ಪಡೆದಿರುವ ಸೂರಿ ಅಭಿಷೇಕ್‍ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಈ ಕುರಿತು ಚಂದನವನದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಮಾತುಕತೆ ಮುಗಿದಿದೆಯಂತೆ. ಸೂರಿ ಸ್ಕ್ರಿಪ್ಟ್ ರಚನೆಯಲ್ಲಿ ತೊಡಗಿದ್ದಾರಂತೆ. ಲಾಕ್‍ಡೌನ್ ಮುಗಿಯುತ್ತಿದ್ದಂತೆ ಚಿತ್ರದ ಕೆಲಸಗಳು ಪ್ರಾರಂಭವಾಗಲಿವೆ ಎಂದು ಹೇಳಲಾಗುತ್ತಿದೆ.

    ಬ್ರೇಕ್‍ಗಾಗಿ ಕಾಯುತ್ತಿರುವ ಅಭಿಷೇಕ್, ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ. ಸೂರಿ ಸಹ ಹಿಟ್ ಸಿನಿಮಾಗಳನ್ನು ನೀಡಿದ್ದು, ಕೇವಲ ಸ್ಟಾರ್ ನಟರು ಮಾತ್ರವಲ್ಲದೆ ಹೊಸಬರ ಸಿನಿಮಾಗಳಿಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಹೊಸಬರನ್ನೂ ಬೆಳೆಸಿದ್ದಾರೆ. ಇದಕ್ಕೆ ಉದಾಹರಣೆಯೇ ದುನಿಯಾ ಚಿತ್ರ. ವಿಜಯ್ ಆಗಿನ್ನೂ ಹೊಸಬರು, ಈ ಸಿನಿಮಾ ಮೂಲಕ ಸೂರಿ ದುನಿಯಾ ವಿಜಯ್‍ಗೆ ಬಿಗ್ ಬ್ರೇಕ್ ನೀಡಿದರು. ಅಲ್ಲದೆ ಕೆಂಡಸಂಪಿಗೆ ಚಿತ್ರದ ಮೂಲಕ ಸಹ ಹೊಸ ನಟರಿಗೆ ಅವಕಾಶ ಕಲ್ಪಿಸಿದ್ದರು. ಇದೀಗ ಅಭಿಷೇಕ್ ಜೊತೆ ಒಂದಾಗುತ್ತಿದ್ದು, ಯಾವ ಮಟ್ಟಕ್ಕೆ ಸಿನಿಮಾ ತಯಾರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಸದ್ಯ ಎಲ್ಲವೂ ಮಾತುಕತೆ ಹಂತದಲ್ಲಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಮೇ 29ರಂದು ಅಂಬರೀಷ್ ಜನ್ಮದಿನ. ಈ ವೇಳೆ ಚಿತ್ರದ ಕುರಿತು ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಪಾಪ್‍ಕಾರ್ನ್ ಮಂಕಿ ಟೈಗರ್ ರಿಲೀಸ್ ನಂತರ ಸೂರಿ ಕಾಗೆ ಬಂಗಾರ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇದೀಗ ಅಭಿಷೇಕ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದು, ಯಾವ ಸಿನಿಮಾದ ಚಿತ್ರೀಕರಣವನ್ನು ಮೊದಲು ಆರಂಭಿಸುತ್ತಾರೆ ಕಾದು ನೋಡಬೇಕಿದೆ.