Tag: director Rakesh

  • ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಸಿನಿಮಾ ಸ್ಟೈಲ್‍ನಲ್ಲಿ ಡೈರೆಕ್ಟರ್ ಕಿಡ್ನ್ಯಾಪ್

    ಬೆಂಗಳೂರು: ಪತಿಬೇಕು.ಕಾಮ್ ಸಿನಿಮಾದ ನಿರ್ದೇಶಕ ರಾಕೇಶ್ ಮೇಲೆ ಪ್ರಕರಣವೊಂದು ದಾಖಲಾಗಿ ಸುದ್ದಿಯಾಗಿತ್ತು. ಸಹ ನಿರ್ಮಾಪಕರಿಗೆ ರಾಕೇಶ್ ವಂಚನೆ ಮಾಡಿದ್ದಾರೆ ಅಂತ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ಈ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.

    ವಿಜಯನಗರದ ಮನೆಯಿಂದ ಅಕ್ಟೋಬರ್ 21ರಂದು ರಾಕೇಶ್ ಅವರನ್ನು ಎಳೆದೊಯ್ದ ನೆಲಮಂಗಲ ಪೊಲೀಸ್ ಕೇಶವ್ ಅಂಡ್ ಟೀಂ ಸೆಟ್ಲ್ ಮೆಂಟ್ ಮಾಡಿಕೊಳ್ಳುವಂತೆ ಧಮ್ಕಿ ಹಾಕಿದ್ದರಂತೆ. ಈ ಹಿಂದೆಯೇ ಚಂದ್ರಾ ಲೇಔಟ್‍ನಲ್ಲಿ ಹಣಕಾಸು ವಿಚಾರವಾಗಿ ನಿರ್ಮಾಪಕ ಮಂಜುನಾಥ್‍ಗೆ ರಾಕೇಶ್ 10 ಲಕ್ಷ ರೂ. ಕೊಟ್ಟಿದ್ದು, ಯಾವುದೇ ಹಣ ಕೊಡಬೇಕಾಗಿಲ್ಲ ಅಂದಿದ್ದರು. ಚಂದ್ರಾ ಲೇಔಟ್ ಕೇಸ್‍ನಲ್ಲಿ ಬೇಲ್ ಪಡೆದಿದ್ದ ಮಂಜುನಾಥ್, ನೆಲಮಂಗಲದಲ್ಲಿ ದೂರು ದಾಖಲಿಸಿದ್ದರು.

    ರಾಕೇಶ್ ಅವರನ್ನ ಕರೆದೊಯ್ದಿದ್ದ ನೆಲಮಂಗಲ ಪೊಲೀಸರು ಮನೆಯವರಿಗೆ ಯಾವುದೇ ವಿಚಾರ ತಿಳಿಸಿರಲಿಲ್ಲ. ಕೊನೆಗೆ ರಾಕೇಶ್ ಸಂಬಂಧಿಕರು ಚಂದ್ರಾ ಲೇಔಟ್ ಠಾಣೆಯ ಪೊಲೀಸರ ಮೊರೆ ಹೋಗಿದ್ದರು. ಆಗ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ನೆಲಮಂಗಲ ಪೊಲೀಸರಿಗೆ ಕರೆ ಮಾಡಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಇದರಿಂದಾಗಿ ನೆಲಮಂಗಲ ಪೊಲೀಸರು ರಾಕೇಶ್ ಅವರಿಂದ ಚೆಕ್‍ಗೆ ಸೈನ್ ಮಾಡಿಸಿಕೊಂಡು ಬಿಟ್ಟು ಕಳಿಸಿದ್ದರು. ಇದೀಗ ಅಕ್ರಮವಾಗಿ ಕೂಡಿಟ್ಟು, ರೌಡಿ ಶೀಟ್ ಓಪನ್ ಮಾಡುದಾಗಿ ಬೆದರಿಸಿದ್ದ ಎಸ್.ಐ.ಮಂಜುನಾಥ್ ಹಾಗೂ ಪೇದೆ ಕೇಶವ್ ಮೇಲೆ ನಿರ್ದೇಶಕ ರಾಕೇಶ್, ಎಸ್‍ಪಿ, ಐಜಿ, ಡಿಜಿ, ಐಜಿಪಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

  • ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ಪತಿಬೇಕು ಡಾಟ್ ಕಾಮ್ ಚಿತ್ರದ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

    ನೇರ ನುಡಿಯಾದ್ರು ಹಸನ್ಮುಖಿಯಾಗಿ ಕಾಣಿಕೊಳ್ಳುವ ನಟಿ ಶೀತಲ್ ಶೆಟ್ಟಿ ಆ್ಯಕರಿಂಗ್‍ಗೆ ಗುಡ್ ಬೈ ಹೇಳಿದ ಬಳಿಕ ಮತ್ತೊಮ್ಮೆ ತಮ್ಮದೇ ನಟನೆಯ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕರನ್ನು ಸಂದರ್ಶನ ಮಾಡಿದ್ದಾರೆ. ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಕೇಶ್ ಅವರನ್ನು ಶೀತಲ್ ಮಾತನಾಡಿಸಿ ಚಿತ್ರದ ಇಂಟ್ರೆಸ್ಟಿಂಗ್ ಕಥೆಯನ್ನು ರಿವಿಲ್ ಮಾಡಿಸಿದ್ದಾರೆ.

    ವಿಭಿನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಪತಿಬೇಕು ಡಾಟ್‍ಕಮ್ ಸಿನಿಮಾ ನಿರ್ದೇಶಕನಾಗಿರುವುದು ನನಗೆ ಹೆಮ್ಮೆಯ ಅಂಶವಾಗಿದ್ದು, ಕುಟುಂಬ ಪ್ರಧಾನ ಸಿನಿಮಾ ಮಾಡಿದ ಗೌರವ ಈ ಸಿನಿಮಾ ನೀಡುವ ವಿಶ್ವಾಸವಿದೆ. ಏಕೆಂದರೆ ಈ ಹಿಂದಿನ ಸಿನಿಮಾ ನನ್ನ ತಾಯಿ, ಕುಟುಂಬದೊಂದಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಕುಟುಂಬದ ಎಲ್ಲರೊಟ್ಟಿಗೆ ಕುಳಿತು ನೋಡುವಂತಹ ಯೋಚನೆಯಿಂದ ಸಿನಿಮಾ ಕಥೆ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು ನಿರ್ದೇಶಕ ರಾಕೇಶ್.

    ಪತಿಬೇಕು ಡಾಟ್ ಕಮ್ ಕಥೆಯೇ ಸಿನಿಮಾಗೆ ಜೀವ:
    ಸಿನಿಮಾ ಪ್ರಮುಖ ಪಾತ್ರದ ಕುರಿತು ಯಾರ ಆಯ್ಕೆ ಎಂಬ ಯೋಚನೆ ಬಂದ ಕೂಡಲೇ ನನಗೆ ಮೊದಲು ನೆನಪು ಬಂದಿದ್ದು ಶೀತಲ್ ಅವ್ರು, ಏಕೆಂದರೆ ಕರ್ನಾಟಕದ ಮನೆ ಹುಡುಗಿಯಾಗಿ ಶೀತಲ್ ಹೆಸರು ಪಡೆದಿದ್ದಾರೆ. ಕಥೆಗೂ ಅವರ ಆಯ್ಕೆ ಸೂಕ್ತ ಎನಿಸಿದ್ದರಿಂದ ಸಿನಿಮಾ ಜರ್ನಿ ಆರಂಭವಾಯ್ತು. ಚಿತ್ರಕಥೆಯೇ ಸಿನಿಮಾದ ಹೀರೋ ಆಗಿದ್ದು, ಎಲ್ಲ ಪಾತ್ರಗಳು ಉತ್ತಮವಾಗಿ ಮೂಡಿಬಂದಿದೆ. ಸದ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಿರ್ದೇಶಕನಾಗಿ ಕಥೆಯ ಮೇಲಿನ ಭರವಸೆಯೇ ಇಷ್ಟು ಬೇಗ ಚಿತ್ರ ಮೂಡಿಬರಲು ಕಾರಣ. ಸಿನಿಮಾ ಅಭಿಮಾನಿಗಳು ಚಿತ್ರ ನೋಡಿ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುವ ನಂಬಿಕೆ ಎಂದು ಅನುಭವ ಹಂಚಿಕೊಂಡರು.

    ಚಿತ್ರದ ಟೀಸರ್, ಹಾಡು ಈಗಾಗಲೇ ಜನರಿಗೆ ಇಷ್ಟವಾಗಿದ್ದು, ಎಲ್ಲೆಡೆ ಕೇಳಿ ಬರುತ್ತದೆ. ಚಿತ್ರದ ಕ್ಯಾಮೆರಾಮನ್ ಯೋಗಿ ಪ್ರತಿಯೊಂದು ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡಿದ್ದು, ವಿಜಯ್ ಎಂ ಕುಮಾರ್ ಸಂಕಲನವಿದೆ. ಚಿತ್ರ ಪ್ರಮುಖ ಪಾತ್ರದಲ್ಲಿರುವ ಕೃಷ್ಣ ಅಡಿಗ, ಅರುಣ್ ಗೌಡ ಅನುಭವಿ ತಂಡವಿದೆ. ಅಲ್ಲದೇ ಸೆನ್ಸರ್ ಬೋರ್ಡ್‍ನಲ್ಲಿ ಸಿನಿಮಾದ ಒಂದು ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೆ, ಒಂದು ಮ್ಯೂಟ್ ಮಾಡದೇ ಪ್ರಮಾಣ ಪತ್ರ ನೀಡಿ ಹೆಗ್ಗಳಿಕೆಯೂ ಚಿತ್ರತಂಡಕ್ಕಿದೆ.

    ನಮ್ಮ ಹೊಸ ಪ್ರಯತ್ನದ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರು ಹಾಡು, ಟೀಸರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಇಂತಹ ಸ್ಟಾರ್‍ಗಳು ಚಿತ್ರದ ಬಗ್ಗೆ ವಿಶ್ವಾಸ ಮಾತು ಆಡಿದ್ದು ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv