Tag: Director Krish

  • ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

    ಬೆಂಗಳೂರು: ಇದುವರೆಗೂ ಆಟೋ ಚಾಲಕರ ಬಗ್ಗೆ ಒಂದಷ್ಟು ಕಥೆಗಳು ಕನ್ನಡದಲ್ಲಿ ಸಿನಿಮಾ ಸ್ವರೂಪ ಪಡೆದುಕೊಂಡಿವೆ. ಇದೀಗ ಇದೇ ನವೆಂಬರ್ 8ರಂದು ತೆರೆಗಾಣಲು ರೆಡಿಯಾಗಿರೋ ಕಪಟ ನಾಟಕ ಪಾತ್ರಧಾರಿ ಚಿತ್ರ ಕೂಡಾ ಆಟೋ ಚಾಲಕನೊಬ್ಬನ ಬದುಕಿನ ಕಥೆಯಾಧರಿಸಿದ ಚಿತ್ರವೇ. ಆದರೆ ಈ ಕಥೆ ಮಾತ್ರ ಈವರೆಗೆ ಬಂದಿರುವ ಅಷ್ಟೂ ಕಥೆಗಳಿಗಿಂತಲೂ ಡಿಫರೆಂಟಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಅದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕವೇ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ.

    ಕಪಟ ನಾಟಕ ಪಾತ್ರಧಾರಿಯಲ್ಲಿ ಬಾಲು ನಾಗೇಂದ್ರ ಮಧ್ಯಮ ವರ್ಗಕ್ಕಿಂತಲೂ ತುಸು ಕೆಳ ಮಟ್ಟದಲ್ಲಿರೋ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ಆತ ಸೋಮಾರಿಗಳಲ್ಲಿಯೇ ಪರಮ ಸೋಮಾರಿ. ಹಾಗಂತ ಅವನು ಜಡ ಭರತನಲ್ಲ. ಚುರುಕಿನ ಸ್ವಭಾವದ ಈತ ಕೈಯಿಟ್ಟ ಯಾವ ಕೆಲಸವೂ ಬರಖತ್ತಾಗೋದಿಲ್ಲ ಎಂಬ ನಂಬಿಕೆ ಆಸುಪಾಸಿನವರಲ್ಲಿಯೇ ಗಟ್ಟಿಯಾಗುವಂಥಾ ವಿದ್ಯಮಾನಗಳು ಜರುಗುತ್ತಿರುತ್ತವೆ. ಅಷ್ಟಕ್ಕೂ ಈತನಿಗೆ ಸರಿಯಾದೊಂದು ಕೆಲಸ ಹಿಡಿದು ಮೈ ಮುರಿದು ದುಡಿಯೋ ಕಾನ್ಸೆಪ್ಟಿನಲ್ಲಿಯೇ ಒಲವಿರೋದಿಲ್ಲ. ಆದರೆ ಬದುಕು ಬಿಡಬೇಕಲ್ಲಾ? ಅದರ ಅನಿವಾರ್ಯತೆಗೆ ಸಿಕ್ಕು ಆಟೋ ಓಡಿಸಿಕೊಂಡು ಬದುಕ ಬೇಕಾಗಿ ಬಂದಾಗ ಅಲ್ಲಾಗೋ ಸ್ಥಿತ್ಯಂತರಗಳನ್ನು ಮಜವಾದ ಕಥೆಯೊಂದಿಗೆ ಇಲ್ಲಿ ನಿರೂಪಿಸಲಾಗಿದೆ.

    ಹೀಗೆ ಅನಿವಾರ್ಯವಾಗಿ ಆಟೋ ಚಾಲಕನಾಗೋ ನಾಯಕ ಯಾವುದೋ ಕಪಟ ನಾಟಕದ ಪಾತ್ರಧಾರಿಯಾಗ ಬೇಕಾಗಿ ಬರುತ್ತದೆ. ಅದುವೇ ಆತನನ್ನು ಸಂಕಷ್ಟದ ಹುದುಲೊಳಗೆ ಹೂತು ಬಿಡುತ್ತದೆ. ಇದರ ನಡುವೆಯೇ ಈ ಆಟೋ ಚಾಲಕ ಪ್ರೇಮಿಯಾಗುತ್ತಾನೆ. ಅಲ್ಲಲ್ಲಿ ನಗಿಸುತ್ತಾನೆ. ಕಚಗುಳಿ ಇಡುತ್ತಾನೆ. ಇಂಥಾ ಮನೋರಂಜನಾತ್ಮಕವಾದ ಗಟ್ಟಿ ಕಥೆ ಹೊಂದಿರೋ ಚಿತ್ರ ಕಪಟ ನಾಟಕ ಪಾತ್ರಧಾರಿ. ಆಟೋ ಚಾಲಕನನ್ನು ಬರಸೆಳೆದುಕೊಳ್ಳೋ ಆ ಘಟನೆ ಯಾವುದು ಎನ್ನುವುದರಿಂದ ಮೊದಲ್ಗೊಂಡು ಎಲ್ಲ ಕುತೂಹಲಗಳಿಗೂ ಇಲ್ಲಿ ಭರಪೂರ ಉತ್ತರ ಸಿದ್ಧವಿದೆ. ಆದರೆ ಅದಕ್ಕಾಗಿ ನವೆಂಬರ್ 8ರ ವರೆಗೆ ಕಾಯಬೇಕಷ್ಟೆ!

  • ಕಪಟ ನಾಟಕ ಪಾತ್ರಧಾರಿಯ ಹಾರರ್ ಲುಕ್!

    ಕಪಟ ನಾಟಕ ಪಾತ್ರಧಾರಿಯ ಹಾರರ್ ಲುಕ್!

    ಬೆಂಗಳೂರು: ಬಾಲು ನಾಗೇಂದ್ರರಂಥಾ ವಿಶಿಷ್ಟ ನಟ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆಂದ ಮೇಲೆ ಆ ಚಿತ್ರದ ಕಥೆಯೂ ಡಿಫರೆಂಟಾಗಿದೆ ಎಂದೇ ಅರ್ಥ. ಅದು ಪ್ರೇಕ್ಷಕರಿಗೂ ಕೂಡಾ ಚೆನ್ನಾಗಿಯೇ ಗೊತ್ತಿರುವಂಥಾದ್ದು. ಈಗಾಗಲೇ ಹೊರ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಈ ಸಿನಿಮಾದ ಭಿನ್ನ ಕಥೆಯ ಸುಳಿವೂ ಕೂಡಾ ಸ್ಪಷ್ಟವಾಗಿ ಜಾಹೀರಾಗಿದೆ. ಈ ಚಿತ್ರ ಇದೇ ನವೆಂಬರ್ 8ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕಡೆಯ ಹೊತ್ತಿನಲ್ಲಿ ಈ ಥರದ ಗಾಢವಾದ ನಿರೀಕ್ಷೆ, ಕುತೂಹಲ, ಕ್ರೇಜ್‌ಗಳು ಮೇಳೈಸಿವೆಯಲ್ಲಾ? ಇದೆಲ್ಲವನ್ನೂ ಮೀರಿಸುವ ಹೂರಣ ಈ ಸಿನಿಮಾದೊಳಗಿದೆ.

    ಈ ಚಿತ್ರ ಆಟೋ ಡ್ರೈವರ್ ಒಬ್ಬನ ದಿನಚರಿಯನ್ನೊಳಗೊಂಡಿರುವಂಥಾದ್ದು. ಆದರೆ ನಿರ್ದೇಶಕ ಕ್ರಿಶ್ ಈ ದಿನಚರಿಯ ಪರಿಧಿಯೊಳಗೆ ಇಡೀ ಬ್ರಹ್ಮಾಂಡವನ್ನೇ ತಂದು ನಿಲ್ಲಿಸಿದ್ದಾರೆ. ಇದರಲ್ಲಿರೋದು ಆಟೋ ಡ್ರೈವರನ ದಿನಚರಿಯೆಂಬಂತೆ ಸಿಂಪಲ್ ಕಥೆಯ ಸುಳಿವು ಕೊಟ್ಟಿದ್ದ ಚಿತ್ರತಂಡ ಟ್ರೇಲರ್ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಯಾಕೆಂದರೆ ಅದರಾಚೆಗೆ ಅಲ್ಲಿ ಅನೇಕ ಕೊಂಬೆ ಕೋವೆ, ಸಸ್ಪೆನ್ಸ್ ಥ್ರಿಲ್ಲರ್ ಅನುಭವವಾಗಿತ್ತು. ಇದೆಲ್ಲವನ್ನೂ ಮೀರಿದ ಬಿರುಸಿನ ಕಥೆ ಇಲ್ಲಿದೆ ಎಂಬ ಸ್ಪಷ್ಟ ಸೂಚನೆಯೂ ಸಿಕ್ಕಿತ್ತು.

    ಇದೆಲ್ಲವನ್ನು ಹೊರತು ಪಡಿಸಿ ಚಿತ್ರತಂಡ ಕೊಂಚ ಸಸ್ಪೆನ್ಸ್ ಆಗಿಟ್ಟು, ಅಷ್ಟಾಗಿ ಎಲ್ಲಿಯೂ ಹೇಳಿಕೊಳ್ಳದ ಮತ್ತೊಂದು ಅಂಶವೂ ಈ ಚಿತ್ರದಲ್ಲಿದೆ. ಅದು ಹಾರರ್ ಶೇಡ್. ಇದು ಪ್ರತಿ ಪ್ರೇಕ್ಷಕರನ್ನೂ ಕೂಡಾ ಸುಳಿವೇ ಕೊಡದೆ ಬೆಚ್ಚಿ ಬೀಳಿಸಲಿದೆಯಂತೆ. ಇಡೀ ಕಥೆ ಗಂಭೀರವಾಗಿ, ಹಾಸ್ಯಮಯವಾಗಿ, ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಸಾಗುತ್ತಿರುವಾಗಲೇ ಇಲ್ಲಿ ಏಕಾಏಕಿ ಹಾರರ್ ಅಂಶಗಳು ಪ್ರತ್ಯಕ್ಷವಾಗಲಿವೆಯಂತೆ. ಹಾಗೆ ಹಾರರ್ ಶೇಡ್ ತೆರೆದುಕೊಳ್ಳಲು ಕಾರಣವೇನು? ಅದರ ತೀವ್ರತೆ ಏನು ಎಂಬುದಕ್ಕೆಲ್ಲ ಇದೇ ನವೆಂಬರ್ ಎಂಟರಂದು ನಿಖರ ಉತ್ತರ ಸಿಗಲಿದೆ.

  • ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಬೆಂಗಳೂರು: ಒಂದು ಸಿನಿಮಾ ಹಿಟ್ ಆಗುತ್ತಲೇ ಅದರಲ್ಲಿ ನಟಿಸಿದ್ದ ನಾಯಕ, ನಾಯಕಿಯ ಮುಂದಿನ ಚಿತ್ರ ಯಾವುದೆಂಬುದರ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲೊಂದು ಕುತೂಹಲವಿರುತ್ತದೆ. ಅದೇ ರೀತಿ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹುಲಿರಾಯ ಚಿತ್ರದ ನಾಯಕ ಬಾಲು ನಾಗೇಂದ್ರ ಬಗ್ಗೆಯೂ ಪ್ರೇಕ್ಷಕರಲ್ಲಿ ಅಂಥಾದ್ದೊಂದು ಕುತೂಹಲ ಇದ್ದೇ ಇತ್ತು. ಆದರೆ ಕೊಂಚ ತಡವಾಗಿಯಾದರೂ ಬಾಲು ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಅವರೀಗ ಕಪಟನಾಟಕ ಪಾತ್ರಧಾರಿಯಾಗಿ ವಾಪಾಸಾಗಿದ್ದಾರೆ. ಇದೀಗ ಈ ಚಿತ್ರದ ರೊಮ್ಯಾಂಟಿಕ್ ಲಿರಿಕಲ್ ವಿಡಿಯೋವೊಂದು ಬಿಡುಗಡೆಯಾಗಿದೆ.

    ಕಪಟನಾಟಕ ಪಾತ್ರಧಾರಿ ಕ್ರಿಶ್ ನಿರ್ದೇಶನದ ಚಿತ್ರ. ಇದು ಆರಂಭವಾದಾಗ ಟೈಟಲ್ ಮೂಲಕವೇ ಒಂದಷ್ಟು ಸುದ್ದಿಯಾಗಿತ್ತು. ಆದರೆ ಆ ಬಳಿಕ ಯಾವ ಗದ್ದಲವೂ ಇಲ್ಲದಂತೆ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಈಗ ಬಿಡುಗಡೆಯಾಗಿದೆ. ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನ ನೋಡಿ ನಕ್ಬಿಟ್ಳು ಸುಂದ್ರಿ ಎಂಬ ಈ ಹಾಡಿದೆ ನದಾಫ್ ಸಂಗೀತ ನೀಡಿದ್ದರೆ ವೇಣು ಹಸ್ರಳ್ಳಿ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಹರಿಚರಣ್ ಶೇಷಾದ್ರಿಯವರ ಧ್ವನಿಯಲ್ಲಿ ಮೋಹಕವಾಗಿ ಮೂಡಿ ಬಂದಿದೆ. ಸದ್ಯಕ್ಕೆ ಕಪಟನಾಟಕ ಪಾತ್ರಧಾರಿ ಈ ರೊಮ್ಯಾಂಟಿಕ್ ಹಾಡಿನ ಮೂಲಕವೇ ಜನಮನ ಸೆಳೆದುಕೊಂಡಿದೆ.

    ಕಪಟನಾಟಕ ಪಾತ್ರಧಾರಿಯಲ್ಲಿಯೂ ಕೂಡಾ ಬಾಲು ನಾಗೇಂದ್ರ ತಮ್ಮ ನಟನೆಯ ಕಸುವಿಗೆ ತಕ್ಕುದಾದ ಪಾತ್ರದಲ್ಲಿಯೇ ನಟಿಸಿದ್ದಾರಂತೆ. ಹುಲಿರಾಯ ಚಿತ್ರದ ನಂತರ ಬಂದಿದ್ದ ಒಂದಷ್ಟು ಅವಕಾಶಗಳ ನಡುವೆ ಅವರು ಆರಿಸಿಕೊಂಡಿದ್ದು ಕ್ರಿಶ್ ಹೇಳಿದ್ದ ಕಥೆಯನ್ನು. ಇಲ್ಲಿ ಆಟೋ ಡ್ರೈವರ್ ಆಗಿ ಬಾಲು ನಟಿಸಿದ್ದಾರೆಂಬ ಹೊರತಾಗಿ ಕಥೆಯ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಆದರೆ ಕಥೆ ತೀರಾ ಭಿನ್ನವಾಗಿರೋದಂತೂ ಸತ್ಯವಂತೆ. ಹುಲಿರಾಯ ಚಿತ್ರದಲ್ಲಿಯೂ ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿರೋ ಬಾಲು ನಾಗೆಂದ್ರ ಪಾಲಿಗೆ ಕಪಟನಾಟಕ ಪಾತ್ರಧಾರಿ ದೊಡ್ಡ ಮಟ್ಟದಲ್ಲಿಯೇ ಬ್ರೇಕ್ ನೀಡೋ ಸೂಚನೆಗಳಿವೆ.