Tag: Dharmasthala Chalo Rally

  • ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

    ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

    – ಹಾಸನದಿಂದ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಯಾತ್ರೆ

    ಹಾಸನ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಖಂಡಿಸಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಸತ್ಯ ಯಾತ್ರೆ ಹೊರಟಿದ್ದಾರೆ. ಧರ್ಮಸ್ಥಳ ಚಲೋ ಬೃಹತ್ ರ‍್ಯಾಲಿಗೆ ಭಾನುವಾರ ಚಾಲನೆ ಸಿಕ್ಕಿದೆ.

    ಹಾಸನದಿಂದ (Hassan) ಧರ್ಮಸ್ಥಳಕ್ಕೆ (Dharmasthala Satya Yatra) ಜೆಡಿಎಸ್ ಸತ್ಯ ಯಾತ್ರೆ ಕೈಗೊಂಡಿದೆ. ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದಾರೆ. ರ‍್ಯಾಲಿಯಲ್ಲಿ ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಭಾಗಿಯಾಗಿದ್ದಾರೆ. ಕಾರುಗಳು, ಟಿಟಿ ವಾಹನ, ಬಸ್‌ಗಳಲ್ಲಿ ಕಾರ್ಯಕರ್ತರು ರ‍್ಯಾಲಿ ಹೊರಟಿದ್ದಾರೆ. ಹಾಸನ ಹೊರವಲಯದ ಕಂದಲಿ ಬಳಿಯಿಂದ ಧರ್ಮಸ್ಥಳ ಸತ್ಯ ಯಾತ್ರೆ ಹೊರಟಿದೆ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದೇ ಬೆಂಗಳೂರಿನ ಲಾಡ್ಜ್‌ನಲ್ಲಿ!

    ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇಂದು ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದ್ದೇವೆ. ಮಂಜುನಾಥಸ್ವಾಮಿ, ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ನೈತಿಕ ಬೆಂಬಲ ಪೋಷಿಸುತ್ತೇವೆ. ಕಳೆದ ಹಲವಾರು ದಿನಗಳಿಂದ ಅಪಪ್ರಚಾರಗಳು, ಧರ್ಮಸ್ಥಳದ ಆವರಣದ ಸುತ್ತಮುತ್ತ ಅನುಮಾನ ಎಡೆಮಾಡಿಕೊಡುವಂತಹ ಷಡ್ಯಂತ್ರ, ಹುನ್ನಾರ, ಸಂಘಟಿತ ಪಿತೂರಿ ನಡೆದಿದೆ. ಇದೆಲ್ಲದರ ವಿರುದ್ಧವಾಗಿ ಯಾತ್ರೆ. ಇದರಲ್ಲಿ ರಾಜಕೀಯವಾಗಿ ಬೆರೆಸುವ ಪ್ರಶ್ನೆ ಇಲ್ಲ. ಪಕ್ಷಾತೀತವಾಗಿ ಇವತ್ತು, ಅಸಂಖ್ಯಾತ ಭಕ್ತರ ಗಣ ದೇಶವ್ಯಾಪಿ, ಹಲವಾರು ಕಡೆಗಳಿಂದ ಆರಾಧ್ಯ ದೈವ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ಕಾಣಲು ಬರುತ್ತಿದ್ದಾರೆ ಎಂದು ತಿಳಿಸಿದರು.

    ನಾನು ಬಾಲ್ಯದಿಂದಲೂ ಮಂಜುನಾಥಸ್ವಾಮಿ ಪರಮಭಕ್ತ. ಪ್ರತಿ ವರ್ಷ ನಾನು ಚಾಚುತಪ್ಪದೇ ಧರ್ಮಸ್ಥಳಕ್ಕೆ ಬರುತ್ತೇನೆ, ದೇವರ ದರ್ಶನ ಪಡೆಯುತ್ತೇನೆ. ಕಳೆದ ಹಲವಾರು ದಿನಗಳಿಂದ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಸಂಚು, ಷಡ್ಯಂತ್ರ ನಡೆಯುತ್ತಿದೆ. ದೊಡ್ಡ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡಿದ್ದಾರೆ. ಆರೋಪದ ಬಗ್ಗೆ ಅನುಮಾನ, ಶಂಕೆಗಳು ವ್ಯಕ್ತವಾಗಿವೆ. ಇದುವರೆಗೂ ಎಳ್ಳಷ್ಟು ಸತ್ಯಾಸತ್ಯತೆ ಹೊರಗೆ ಬಂದಿಲ್ಲ. ಧರ್ಮಸ್ಥಳದ ವಿರುದ್ಧ ಸಮಾಜಘಾತುಕ ಶಕ್ತಿಗಳು ಹುನ್ನಾರ ಮಾಡುತ್ತಿವೆ. ಇದೆಲ್ಲದರ ಬಗ್ಗೆ ಸಮಾಜದ ಮುಂದೆ ತನಿಖೆ ಮೂಲಕ ಸತ್ಯಾಂಶ ಹೊರಗೆ ತರಬೇಕಿದೆ. ನಮ್ಮಲ್ಲೆರ ಮೇಲೆ ಕೆಲವು ಜವಾಬ್ದಾರಿ ಇದೆ. ನಮ್ಮ ಧರ್ಮವನ್ನು ರಕ್ಷಣೆ ಮಾಡಬೇಕು ಅದು ಎಲ್ಲರ ಜವಾಬ್ದಾರಿ. ಮಂಜುನಾಥಸ್ವಾಮಿ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಬಹಳಷ್ಟು ಭಕ್ತಾಧಿಗಳು ಯಾತ್ರೆಯಲ್ಲಿ ಸ್ವಇಚ್ಛೆಯಿಂದ ಬರುತ್ತೇವೆ ಎಂದು ಹಳ್ಳಿಹಳ್ಳಿಗಳಿಂದ ಬಂದಿದ್ದಾರೆ. ಸತ್ಯದ ಪರವಾಗಿ ನಿಲ್ಲುತ್ತೇವೆ, ಧರ್ಮವನ್ನು ರಕ್ಷಣೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು. ಇದನ್ನೂ ಓದಿ: ಡಿಕೆಶಿ ಮನಸ್ಸಿನ ಇಚ್ಛೆ ಫಲಿಸಲಿ – ಕೃಷ್ಣ ಮಠದಲ್ಲಿ ಪುತ್ತಿಗೆ ಶ್ರೀ ಆಶೀರ್ವಾದ

    ಧರ್ಮಾಧಿಕಾರಿಗಳು ಇಂದು ಇಡೀ ದಿನ ನಮಗೆ ಸಮಯ ನಿಗದಿ ಮಾಡಿದ್ದಾರೆ. ಇಂದು ದೊಡ್ಡ ಸಂಖ್ಯೆಯಲ್ಲಿ ಜನ ಬರ್ತಿದ್ದಾರೆ. ಈ ಪ್ರಕರಣದಿಂದ ಎಷ್ಟೇ ಬೇಜಾರಾದರೂ ಅತ್ಯಂತ, ತಾಳ್ಮೆಯಿಂದ ಹೃದಯ ವೈಶಾಲ್ಯತೆಯಿಂದ ವರ್ತನೆ ಮಾಡಿದ್ದಾರೆ. ಇಂದು ಧರ್ಮಾಧಿಕಾರಿಗೆ ನೈತಿಕ ಬೆಂಬಲ ಸೂಚಿಸುತ್ತೇವೆ. ಸಮಾಜಘಾತುಕ ಶಕ್ತಿಗಳು ಈ ಎಪಿಸೋಡ್‌ಗೆ ಕೈ ಹಾಕಿದ್ದಾರೆ. ಇದು ತಾರ್ತಿಕ ಅಂತ್ಯಕ್ಕೆ ತಲುಪಬೇಕು. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು. ಯೂಟ್ಯೂಬರ್‌ಗಳಿಗೆ ಉತ್ತೇಜನ ಕೊಡುತ್ತಿದ್ದಾರೆ. ಇದರ ಹಿಂದೆ ದೊಡ್ಡಮಟ್ಟದ ಆರ್ಗನೈಸೇಷನ್ ಇದೆ. ಇದಕ್ಕೆ ಇಂಟರ್‌ನ್ಯಾಷನಲ್ ಫೈನಾನ್ಸ್ ಆಗಿದೆ. ಆದ್ದರಿಂದ ಎನ್‌ಎಐ ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

    ಹಾಸನ ಹೊರವಲಯದ ಕಂದಲಿ ಬಳಿಯಿಂದ ಧರ್ಮಸ್ಥಳಕ್ಕೆ ಸತ್ಯ ಯಾತ್ರೆ ಹೊರಟಿದೆ. ಸಾರಿಗೆ ಬಸ್‌ನಲ್ಲಿ ಶಾಸಕರ ಜೊತೆ ನಿಖಿಲ್ ಕುಮಾರಸ್ವಾಮಿ ಯಾತ್ರೆ ಹೊರಟಿದ್ದಾರೆ. ಶಾಸಕರಾದ ಎ.ಮಂಜು, ಹೆಚ್.ಪಿ.ಸ್ವರೂಪ್‌ಪ್ರಕಾಶ್, ಹರೀಶ್‌ಗೌಡ, ಸಿ.ಎನ್.ಬಾಲಕೃಷ್ಣ, ಕರೆಯಮ್ಮ, ಎಂ.ಟಿ.ಕೃಷ್ಣಪ್ಪ, ಸುರೇಶ್‌ಬಾಬು, ಮಾಜಿ ಶಾಸಕರು, ಎಂಎಲ್‌ಸಿಗಳು ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

  • ಹಾಸನದಲ್ಲಿ ಧರ್ಮಸ್ಥಳ ಚಲೋ ರ‍್ಯಾಲಿಗೆ ಅದ್ದೂರಿ ಸ್ವಾಗತ

    ಹಾಸನದಲ್ಲಿ ಧರ್ಮಸ್ಥಳ ಚಲೋ ರ‍್ಯಾಲಿಗೆ ಅದ್ದೂರಿ ಸ್ವಾಗತ

    ಹಾಸನ: ಧರ್ಮಸ್ಥಳ (Dharmasthala) ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಬಿಜೆಪಿಯ (BJP) ರ‍್ಯಾಲಿ (Dharmasthala Chalo Rally) ಹಾಸನದಲ್ಲಿ (Hassan) ಅದ್ದೂರಿ ಸ್ವಾಗತ ಕೋರಲಾಗಿದೆ.

    ಬೃಹತ್ ರ‍್ಯಾಲಿಗೆ ಬೂವನಹಳ್ಳಿ ಬೈಪಾಸ್‍ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದ್ದಾರೆ. ಸ್ವಾಗತ ಕೋರುತ್ತಿದ್ದಂತೆ `ಧರ್ಮಸ್ಥಳದೊಂದಿಗೆ ನಾವಿದ್ದೇವೆ’ ಎಂಬ ಘೋಷ ವಾಕ್ಯವನ್ನು ಕಾರ್ಯಕರ್ತರು ಕೂಗಿದ್ದಾರೆ. ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಈ ರ‍್ಯಾಲಿ ನಡೆಯುತ್ತಿದೆ. ರ‍್ಯಾಲಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಸರ್ಕಾರ ಧರ್ಮಸ್ಥಳದ ಜೊತೆಗಿರುತ್ತೆ, ದಿಕ್ಕು ತಪ್ಪಿಸಿದವರನ್ನ ನಾವು ಬಿಡಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

    ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್‍ಗೇಟ್‍ನಿಂದ ಯಾತ್ರೆ ಆರಂಭಗೊಂಡಿತ್ತು. ಈಗ ಹಾಸನದಿಂದ ಸಕಲೇಶಪುರದ ಮೂಲಕ ಶಿರಾಡಿಘಾಟ್ ರಸ್ತೆ ಮಾರ್ಗವಾಗಿ ರ‍್ಯಾಲಿ ಧರ್ಮಸ್ಥಳಕ್ಕೆ ತೆರಳಲಿದೆ. ರ‍್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮಧ್ಯಾಹ್ನ ಸುಮಾರು 3 ಗಂಟೆಗೆ ರ್ಯಾಲಿ ಧರ್ಮಸ್ಥಳ ತಲುಪಲಿದೆ. ಕಾರ್ಯಕರ್ತರು ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

    ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ (ಆ.17) ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ. ಇದನ್ನೂ ಓದಿ: ಅನಾಮಿಕ ಹೇಳಿದ ಎಲ್ಲಾ ಕಡೆ ಭೂಮಿ ಅಗೆದ್ರೂ ಖಾಲಿ ಖಾಲಿ – ಉತ್ಖನನ ನಿಲ್ಲಿಸಲು ಎಸ್‌ಐಟಿ ನಿರ್ಧಾರ?

  • ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್

    – ಯಲಹಂಕದಿಂದ ಧರ್ಮಸ್ಥಳಕ್ಕೆ 200ಕ್ಕೂ ಹೆಚ್ಚು ಕಾರುಗಳಿಂದ ರ‍್ಯಾಲಿ
    – ಅನಾಮಿಕನನ್ನ ಗಲ್ಲಿಗೇರಿಸುವಂತೆ ಬಿಜೆಪಿ ಶಾಸಕ ಆಗ್ರಹ

    ಚಿಕ್ಕಬಳ್ಳಾಪುರ: ಧರ್ಮಸ್ಥಳದಲ್ಲಿ (Dharmasthala) ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ಬೇಸರ ತರಿಸಿವೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಶ್ರೇಷ್ಠ ಹಾಗೂ ಪವಿತ್ರವಾದ ಕ್ಷೇತ್ರ, ಹೀಗಾಗಿ ಧರ್ಮಸ್ಥಳದ ಜೊತೆ ನಾವು ಇದ್ದೇವೆ ಎಂದು ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌ *(SR Vishwanath) ಹೇಳಿದರು.

    ಚಿಕ್ಕಬಳ್ಳಾಪುರ (Chikkaballapura)ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾತನಾಡಿದ ಶಾಸಕರು, ಧರ್ಮಸ್ಥಳ ಮಂಜುನಾಥಸ್ವಾಮಿ ತುಂಬಾ ಪವರ್‌ಫುಲ್, ಮಂಜುನಾಥಸ್ವಾಮಿ ಮೇಲೆ ಅಣೆ ಮಾಡಲು ಹೆದರುತ್ತಾರೆ. ಅಂತಹ ಮಂಜುನಾಥನ ಸನ್ನಿಧಿ ಧರ್ಮಸ್ಥಳದ ಮೇಲೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ಆಗಸ್ಟ್ 16 ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್‌ ರ‍್ಯಾಲಿ (Dharmasthala Chalo Rally) ಹಮ್ಮಿಕೊಳ್ಳಲಾಗಿದೆ. 200ಕ್ಕೂ ಹೆಚ್ಚು ಕಾರುಗಳ ಮೂಲಕ ʻಧರ್ಮಸ್ಥಳದೊಂದಿಗೆ ನಾವಿದ್ದೇವೆʼ ಎಂಬ ಘೋಷವಾಕ್ಯದೊಂದಿಗೆ ಕಾರುಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಅಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬರಲಿದ್ದೇವೆ. ನಮ್ಮ ನಂತರ ರಾಜ್ಯದ ಇತರೆ ಕ್ಷೇತ್ರಗಳಿಂದಲೂ ಈ ಆಭಿಯಾನ ಆರಂಭವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    ಅನಾಮಿಕನನ್ನ ಗಲ್ಲಿಗೇರಿಸಿ
    ಇನ್ನೂ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಯಾದವರನ್ನ ನಾನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಹೇಳಿಕೆ ನೋಡಿದ್ರೆ, ಅವನನ್ನೇ ಮೊದಲು ಗಲ್ಲಿಗೇರಿಸಬೇಕು. ಅತ್ಯಾಚಾರ ಕೊಲೆ ಆಗಿರೋದು ಗೊತ್ತಿದ್ದೂ ಹೂತು ಹಾಕಿದ್ರೆ ಆತ ಕೂಡ ಆರೋಪಿಯೇ. ಹಾಗಾಗಿ ಮೊದಲು ಆತನನ್ನ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮೇಘಸ್ಪೋಟಕ್ಕೆ ನಾಶವಾಯ್ತು ಧರಾಲಿ – ಗ್ರಾಮದ ವಿಶೇಷತೆ ಏನು? ಮೊದಲು ಹೇಗಿತ್ತು?

    ನ್ನೂ ಈತ ಅನಾಥ ಶವಗಳನ್ನ ಊಳುವವನಾಗಿದ್ದು ಅನಾಥ ಶವಗಳ ಮೇಲಿನ ಚಿನ್ನಾಭರಣ ಕದ್ದು ಅಂತ ಕೆಲಸದಿಂದ ತೆಗದು ಹಾಕಿದ್ರು ಅಂತ ಗೊತ್ತಾಗಿದೆ. ಈಗ ಬಂದು ಮಂಜುನಾಥ ಸ್ವಾಮಿಯ ಮೇಲೆಯೇ ಅಪಪ್ರಚಾರ ಮಾಡುತ್ತಿದ್ದಾನೆ ಅಂತ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜೀವ ತೆಗೆಯಿತು ವೈಟ್ ಶರ್ಟ್ – ಟಾರ್ಗೆಟ್ ಮಾಡಿದವನನ್ನ ಬಿಟ್ಟು ಮತ್ತೊಬ್ಬನ ಹತ್ಯೆ