Tag: death

  • ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ ಇಬ್ಬರ ದುರ್ಮರಣ!

    ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ ಇಬ್ಬರ ದುರ್ಮರಣ!

    ಕೋಲಾರ: ಕುಡಿತದ ಚಟ ಬಿಡಲು ನಾಟಿ ಔಷಧಿಯನ್ನ ಕುಡಿದ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಗವಾರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

    ನಗವಾರ ಗ್ರಾಮದ 55 ವರ್ಷದ ಚಲಪತಿ ಹಾಗೂ 38 ವರ್ಷದ ಶಂಕರಪ್ಪ ಎಂಬುವರು ಮೃತ ದುರ್ದೈವಿಗಳು.

    ಇವರು ಕಳೆದ ಹಲವು ದಿನಗಳಿಂದ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ರು, ಕುಡಿತದ ಚಟಕ್ಕೊಳಗಾಗಿದ್ದರಿಂದ ಚಟ ಬಿಡಿಸುವ ಸಲುವಾಗಿ ಸಂಬಂಧಿಕರು ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿಯ ಉಪ್ಪರಹಳ್ಳಿಯಲ್ಲಿ ನಾಟಿ ಔಷಧಿಯನ್ನ ಕೊಡಿಸಿ ಕರೆದುಕೊಂಡು ಬಂದಿದ್ರು. ಅಲ್ಲಿ ನಾಟಿವೈದ್ಯ ಸುಬ್ರಮಣಿ ಎಂಬಾತ ಮದ್ಯಪಾನದೊಂದಿಗೆ ನಾಟಿ ಔಷಧಿಯನ್ನ ಬೆರಸಿ ಕುಡಿಯಲು ನೀಡಿದ್ದನು. ಅದನ್ನ ಕುಡಿದು ಮನೆಗೆ ಬಂದ ಇಬ್ಬರು ತೀವ್ರ ಅಸ್ವಸ್ಥರಾಗಿ ಚಲಪತಿ ಎಂಬುವವರು ಮನೆಯಲ್ಲಿಯೆ ಮೃತಪಟ್ಟಿದ್ರೆ, ತೀವ್ರ ಅಸ್ವಸ್ಥನಾಗಿದ್ದ ಶಂಕರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾರೆ.

    ಇಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

     

  • ಧಾರವಾಡ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

    ಧಾರವಾಡ: ಕೃಷಿ ಹೊಂಡದಲ್ಲಿ ಮುಳುಗಿ ಯುವಕ ಸಾವು

    ಧಾರವಾಡ: ಕೃಷಿ ಹೊಂಡದಲ್ಲಿ ಈಜಲು ಹೋದ ಯುವನೋರ್ವ ಮುಳುಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.

    22 ವರ್ಷದ ಮಲ್ಲಿಕಾರ್ಜುನ್ ಕಳಸಣ್ಣವರ ಮೃತ ಯುವಕ. ಮಲ್ಲಿಕಾರ್ಜುನ ತನ್ನ ಇತರ ಸ್ನೇಹಿತರೊಂದಿಗೆ ಕೃಷಿ ಹೊಂಡದಲ್ಲಿ ಸ್ನಾನ ಮಾಡಲೆಂದು ಹೋಗಿದ್ದ. ಕೃಷಿ ಹೊಂಡದಲ್ಲಿ ಹೂಳು ತುಂಬಿಕೊಂಡಿದ್ದನ್ನು ಗಮನಿಸದ ಮಲ್ಲಿಕಾರ್ಜುನ ಏಕಾಏಕಿ ಹೊಂಡಕ್ಕೆ ಜಿಗಿದಿದ್ದಾನೆ. ಇದರಿಂದ ಹೂಳಿನಲ್ಲಿ ಸಿಕ್ಕಿ ಹಾಕಿಕೊಂಡ ಮಲ್ಲಿಕಾರ್ಜುನ ಮೇಲೆ ಬರಲು ಆಗದೇ ಮುಳುಗಿ ಸಾವನ್ನಪ್ಪಿದ್ದಾನೆ.

    ಮಲ್ಲಿಕಾರ್ಜುನ್ ಜೊತೆಯಲ್ಲಿದ್ದ ಸ್ನೇಹಿತರು ಆತನನ್ನು ಪೈಪ್ ಕೊಟ್ಟು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆದರೆ ಪೈಪ್ ಮಲ್ಲಿಕಾರ್ಜುನನಿಗೆ ತಾಗದ ಕಾರಣ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ. ಕಳೆದರೆಡು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದರಿಂದ ಹೊಂಡದಲ್ಲಿ ನೀರು ತುಂಬಿಕೊಂಡಿತ್ತು. ಹಾಗಾಗಿ ಯುವಕರು ಕೃಷಿ ಹೊಂಡಕ್ಕೆ ಯುವಕರು ತೆರಳಿದ್ದರು.

    ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ರಸ್ತೆ ತಡೆದು ಪ್ರತಿಭಟನೆ: ಟ್ರಾಫಿಕ್ ಜಾಮ್‍ನಿಂದ ಆಂಬ್ಯುಲೆನ್ಸ್ ನಲ್ಲೇ ಬಾಲಕ ಸಾವು

    ರಸ್ತೆ ತಡೆದು ಪ್ರತಿಭಟನೆ: ಟ್ರಾಫಿಕ್ ಜಾಮ್‍ನಿಂದ ಆಂಬ್ಯುಲೆನ್ಸ್ ನಲ್ಲೇ ಬಾಲಕ ಸಾವು

    ನೋಯ್ಡಾ: ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಟ್ರಾಫಿಕ್ ಜಾಮ್‍ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತಪಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಲವ್ಕಶ್ ಎಂದು ಗುರುತಿಸಲಾಗಿದೆ.

    ಉತ್ತರಪ್ರದೇಶದ ಫಿರೋಜಾಬಾದ್ ನಿವಾಸಿಯಾಗಿರೋ ಈ ಬಾಲಕ ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಏಮ್ಸ್ ಆಸ್ಪತ್ರೆಗೆ ಹೆಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಗಿತ್ತು. ಈ ವೇಳೆ ಫಿರೋಜಾಬಾದ್‍ನ ರಸ್ತೆಯಲ್ಲಿ ಬಿಲ್ಡರ್‍ಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ಈ ಪ್ರತಿಭಟನೆಯಿಂದಾಗಿ ಮಾರ್ಗ ಮಧ್ಯೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪರಿಣಾಮ ಆಂಬ್ಯುಲೆನ್ಸ್ ಮುಂದೆ ಚಲಿಸಲಾಗದೆ ಬಾಲಕ ವಾಹನದಲ್ಲೇ ಮೃತಪಟ್ಟಿದ್ದಾನೆ.

    ಬಾಲಕ ಶನಿವಾರ ಸಂಜೆ 4ರ ಸುಮಾರಿಗೆ ಬಾಲಕ ಆಂಬ್ಯುಲೆನ್ಸ್ ನಲ್ಲೇ ಮೃತಪಟ್ಟಿರುವುದಾಗಿ ಚಾಲಕನ ಸಹೋದರ ತಿಳಿಸಿದ್ದಾರೆ. ಆದ್ರೆ ಗೃಹಬಳಕೆದಾರರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಅವರಿಗೆ ಬಾಲಕನ ಬಗ್ಗೆ ಮಾಹಿತಿ ಬಂದಿಲ್ಲವೆಂದು ಹೋರಾಟಗಾರರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸುಮಾರು 200 ಮಂದಿ ಗೃಹಬಳಕೆದಾರರು ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ಯಾರೊಬ್ಬರು ಬಾಲಕನ ಸಹಾಯಕ್ಕೆ ಬಂದಿಲ್ಲ ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಆರೋಪಿಸಿದ್ದಾರೆ.

    ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಮಾಧ್ಯಮಗಳ ಮೂಲಕ ಬಾಲಕ ಸಾವನಪ್ಪಿರುವ ಬಗ್ಗೆ ತಿಳಿದುಬಂದಿದೆ. 250 ಮಂದಿ ಪ್ರತಿಭಟನಾಕಾರರ ವಿರುದ್ಧ ಐಪಿಸಿ ಸೆಕ್ಷನ್ 147 ಹಾಗೂ 341ರ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ ಅಂತಾ ಎಸ್ಪಿ ಲವ ಕುಮಾರ್ ಹೇಳಿದ್ದಾರೆ.

  • ಮದ್ವೆಗೆ ಟಿವಿಎಸ್‍ನಲ್ಲಿ ಹೋಗ್ತಿದ್ದಾಗ ಖಾಸಗಿ ಬಸ್ ಡಿಕ್ಕಿ – ಓರ್ವ ದುರ್ಮರಣ

    ಮದ್ವೆಗೆ ಟಿವಿಎಸ್‍ನಲ್ಲಿ ಹೋಗ್ತಿದ್ದಾಗ ಖಾಸಗಿ ಬಸ್ ಡಿಕ್ಕಿ – ಓರ್ವ ದುರ್ಮರಣ

    ಮಂಡ್ಯ: ಮದುವೆಗೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಟಿವಿಎಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಸ್ಕೂಟರ್ ಸವಾರನನ್ನು ಹೆಬ್ಬಣಿ ಗ್ರಾಮದ ಮಹದೇವಪ್ಪ(55) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತರ ತಮ್ಮನ ಮಗಳು ಸಿಂಚನಾ(11) ಮತ್ತು ಮೊಮ್ಮಗಳು ಮೌಲ್ಯ(13) ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

    ಮದುವೆ ಸಮಾರಂಭಕ್ಕೆಂದು ಮಳವಳ್ಳಿಗೆ ಬರುತ್ತಿದ್ದ ವೇಳೆ ಪಂಡಿತಹಳ್ಳಿಯ ಶಿಂಷಾ ತಿರುವಿನಲ್ಲಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇನ್ನು ಘಟನೆಯಲ್ಲಿ ಮೃತಪಟ್ಟ ಮಹದೇವಪ್ಪ ಅವ್ರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ್ಬೇಕು. ಜೊತೆಗೆ ನಿಯಮ ಮೀರಿ ವೇಗವಾಗಿ ಚಲಿಸುವ ಖಾಸಗಿ ಬಸ್ ಗಳ ಚಾಲಕರ ವಿರುದ್ಧ ಕ್ರಮ ವಹಿಸ್ಬೇಕು ಅಂತಾ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ಸ್ಥಳಕ್ಕೆ ಶಾಸಕ ನರೇಂದ್ರ ಸ್ವಾಮಿ ಭೇಟಿ ನೀಡಿದ್ರು. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರು-ಮೈಸೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿ ನಿನ್ನೆ ತಡರಾತ್ರಿಯಷ್ಟೇ ಸಿನಿಮೀಯ ರೀತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ನಾಲ್ಕು ಪಲ್ಟಿ ಹೊಡೆದು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಮೂವರು ಅಪಘಾತಕ್ಕೆ ಬಲಿಯಾಗಿದ್ದಾರೆ.

  • ವೇಗದ ಚಾಲನೆ: ಕಾರ್ ಪಲ್ಟಿಯಾಗಿ ಇಬ್ಬರ ಸಾವು, ಓರ್ವ ಗಂಭೀರ

    ವೇಗದ ಚಾಲನೆ: ಕಾರ್ ಪಲ್ಟಿಯಾಗಿ ಇಬ್ಬರ ಸಾವು, ಓರ್ವ ಗಂಭೀರ

    ವಿಜಯಪುರ: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಪಟ್ಟಣ ಸಮೀಪ ಅಪಘಾತ ಸಂಭವಿಸಿದೆ.

    ಹೊಸಪೇಟೆ ಮೂಲದ ರೆಹಮಾನ್ (25) ಮತ್ತು ಮರ್ಜನ್ ವಾಲಿ (20) ಅಪಘಾತದಲ್ಲಿ ಮೃತ ದುರ್ದೈವಿಗಳು. ಮೃತರು ಕೊಣ್ಣೂರಿನಿಂದ ಮಾಳೂರುಗೆ ತೆರಳುತ್ತಿದ್ದರು. ಮೃತರು ಮನಗೂಳಿ-ದೇವಾಪುರ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವ ಸದ್ಭವ ಎಂಜಿನೀಯರಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಇನ್ನೂ ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುವಿನ ಮಾಹಿತಿ ತಿಳಿದು ಬಂದಿಲ್ಲ. ಈ ಸಂಬಂಧ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

    ಕೊಪ್ಪಳ ಆಸ್ಪತ್ರೆಯಲ್ಲಿ ಬಾಲಕಿ ಸಾವು: ವೈದ್ಯರ ವಿರುದ್ಧ ಪೋಷಕರು ಆರೋಪ

    ಕೊಪ್ಪಳ: ಮೂರು ವರ್ಷದ ಮಗುವೊಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಮೃತ ಬಾಲಕಿಯನ್ನು ಕಲ್ಗುಡಿ ಗ್ರಾಮದ ಅಮೃತಾ ಎಂದು ಗುರುತಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಶುಕ್ರವಾರ ಬೆಳಗ್ಗೆ ಪೋಷಕರು ಗಂಗಾವತಿಯ ಕನಕಗಿರಿ ರಸ್ತೆಯಲ್ಲಿನ ಡಾ ಎಸ್ ಜಿ ಮಟ್ಟಿಗೆ ಸೇರಿದ ತೇಜಸ್ವಿನಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಅಂತೆಯೇ ಬಾಲಕಿಯನ್ನು ಪರೀಕ್ಷಿಸಿರುವ ವೈದ್ಯ ರಕ್ತದ ಕೊರತೆ ಇದ್ದು, ರಕ್ತ ಹಾಕಬೇಕು ಎಂದು ಹೇಳಿದ್ರು. ಆದ್ರೆ, ಸೂಕ್ತ ಸಮಯದಲ್ಲಿ ರಕ್ತ ನೀಡದಿರುವುದೇ ಸಾವಿಗೆ ಕಾರಣವಾಗಿದೆ. ವೈದ್ಯರು ಹೇಳುತ್ತಿದ್ದಂತಯೇ ರಕ್ತ ತಂದರೂ ಹಾಕಿಲ್ಲ ಎಂದು ಬಾಲಕಿ ಕುಟುಂಬ ಆಸ್ಪತ್ರೆ ಮುಂದೆ ನಿನ್ನೆ ರಾತ್ರಿ ಇಡೀ ಪ್ರತಿಭಟನೆ ನಡೆಸಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈ ಬಿಡಲ್ಲ ಅಂತಾ ಪಟ್ಟು ಹಿಡಿದಿದ್ರು.

    ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

     

  • ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕನ ರಕ್ಷಣೆ- ಆಸ್ಪತ್ರೆಯಲ್ಲಿ ಸಾವು

    ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕನ ರಕ್ಷಣೆ- ಆಸ್ಪತ್ರೆಯಲ್ಲಿ ಸಾವು

    ಭೋಪಾಲ್: 100 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದ 5 ವರ್ಷದ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

    ಮಧ್ಯಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಕೊಳವೆಬಾವಿ ದುರಂತ ಸಂಭವಿಸಿದೆ. 5 ವರ್ಷದ ಬಾಲಕ ಸತ್ಯಂ ಗುರುವಾರ ಆಟ ಆಡುವಾಗ ಆಯತಪ್ಪಿ 100 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ. ಗುರುವಾರ ರಾತ್ರಿ ಗಂಭೀರವಾಗಿ ಗಾಯಗೊಂಡಿದ್ದ ಸತ್ಯಂನನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದರು. ರಕ್ಷಣೆ ಮಾಡಿದ ಬಳಿಕ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಇದನ್ನೂ ಓದಿ: ಕೊಳವೆಬಾವಿ ದುರಂತ: ಮಣ್ಣಲ್ಲಿ ಮಣ್ಣಾದ 6 ವರ್ಷದ ಕಂದಮ್ಮ ಕಾವೇರಿ

    ಚಿಕಿತ್ಸೆ ಫಲಕಾರಿಯಾಗದೇ ಸತ್ಯಂ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾನೆ. ಕಳೆದ ಫೆಬ್ರವರಿ ತಿಂಗಳಿನಲ್ಲಿಯೂ 1 ವರ್ಷದ ಮಗುವೊಂದು ಮಧ್ಯಪ್ರದೇಶದ ಬೆಹ್ರಿ ಖುದ್ ಗ್ರಾಮದಲ್ಲಿರುವ 50 ಅಡಿ ಆಳವಿರುವ ಕೊಳವೆ ಬಾವಿಗೆ ಬಿದ್ದಿತ್ತು. 17 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಣೆ ಮಾಡಲಾಗಿತ್ತು.

    ಏಪ್ರಿಲ್ 22ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ತಾಯಿಯೊಂದಿಗೆ ಕಟ್ಟಿಗೆ ಆರಿಸಲು ಹೋಗಿದ್ದಾಗ 6 ವರ್ಷದ ಬಾಲಕಿ ಕಾವೇರಿ ತೆರೆದ ಕೊಳವೆಬಾವಿಗೆ ಬಿದ್ದಿದ್ದಳು. ಸತತ 58 ಗಂಟೆಗಳ ಕಾರ್ಯಚರಣೆ ಬಳಿಕ ಕಾವೇರಿಯ ಮೃತದೇಹವನ್ನು ಹೊರ ತಗೆಯಲಾಗಿತ್ತು.

     

     

  • ಬೈಕ್, ಲಾರಿ ನಡುವೆ ಅಪಘಾತ: ಇಬ್ಬರು ಯುವಕರ ದುರ್ಮರಣ

    ಬೈಕ್, ಲಾರಿ ನಡುವೆ ಅಪಘಾತ: ಇಬ್ಬರು ಯುವಕರ ದುರ್ಮರಣ

    ಮಂಡ್ಯ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.

    22 ವರ್ಷದ ಅಜಿತ್ ಮತ್ತು 26 ವರ್ಷದ ಉಮೇಶ್ ಮೃತ ದುರ್ದೈವಿಗಳು. ತಡರಾತ್ರಿ ಕೆಲಸದ ನಿಮಿತ್ತ ಇಬ್ಬರು ಯುವಕರು ಬೈಕ್‍ನಲ್ಲಿ ತೆರಳುತ್ತಿದ್ರು. ಈ ವೇಳೆ ಮದ್ದೂರು ಕೆಎಸ್‍ಆರ್‍ಟಿಸಿ ನಿಲ್ದಾಣದ ಸಮೀಪ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಇದೀಗ ಮಕ್ಕಳ ಸಾವನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

    ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

    ಮಂಡ್ಯ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ.

    ನಂಜುಂಡ ಮತ್ತು ಸಿತಾರ ದಂಪತಿಯ ಪುತ್ರ ಸೂರ್ಯ ಎಂಬ ಬಾಲಕನೇ ಮೃತ ದುರ್ದೈವಿ. ಮಂಗಳವಾರ ರಾತ್ರಿ ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕನಿಗೆ ಹಾವು ಕಚ್ಚಿದೆ. ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು ಪೋಷಕರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾದೇ ಬಾಲಕ ಸೂರ್ಯ ಮೃತಪಟ್ಟಿದ್ದಾನೆ.

    ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಹಾವಿನ ಬಾಯಿಗೆ ಸಿಕ್ಕ ಕುರಿ- ರಕ್ಷಿಸಲು ಮುಂದಾದ ಸ್ಥಳೀಯರನ್ನೇ ಬೆನ್ನತ್ತಿದ ಹಾವು

  • ವಿಡಿಯೋ: ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ- ಮೂವರು ಸಜೀವ ದಹನ

    ವಿಡಿಯೋ: ಚಲಿಸುತ್ತಿದ್ದ ಬಸ್‍ನಲ್ಲಿ ಅಗ್ನಿ ಅವಘಡ- ಮೂವರು ಸಜೀವ ದಹನ

    ಚಂಡೀಗಢ: ಚಲಿಸುತ್ತಿದ್ದ ಎಸಿ ಬಸ್‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಸಜೀವವಾಗಿ ದಹನವಾದ ಮನಕಲಕುವ ಘಟನೆ ಪಂಜಾಬ್‍ನ ಬಾಥಿಂಡಾದ 35 ಕಿ.ಮೀ ದೂರದ ರಾಂಪುರ್ ಪುಲ್‍ನಲ್ಲಿ ಶನಿವಾರ ಸಂಜೆ ನಡೆದಿದೆ.

    ರೈಯಾ ಸಾರಿಗೆ ಕಂಪೆನಿ(ಆರ್‍ಟಿಸಿ) ಎಂಬ ಖಾಸಗಿ ಕಂಪೆನಿಗೆ ಸೇರಿದ ಬಸ್ ಇದಾಗಿದ್ದು, ಬಾಥಿಂಡಾದಿಂದ ಲೂದಿಯಾನದ ಕಡೆ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ 23 ಮಂದಿಗೆ ಗಾಯಗಳಾಗಿವೆ.

    ಮೊದಲು ಬಸ್ ನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಪ್ರಯಾಣಿಕರು ಬಸ್ ನಿಂದ ಹೊರಗಿಳಿದಿದ್ದಾರೆ. ಆದ್ರೆ ಈ ವೇಳೆಗಾಗಲೇ ಬೆಂಕಿ ಬಸ್ಸನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ಮೂವರು ಸಜೀವ ದಹನವಾಗಿದ್ದಾರೆ. ಮೃತರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಕೂಡಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದು, ಸುಮಾರು ಎರಡು ಗಂಡೆಗಳ ಕಾಲ ಬೆಂಕಿ ನಂದಿಸಲು ಹರಸಾಹಸಪಟ್ಟರು.

    ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಬಸ್ ನಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಹಾಗೂ ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂದು ನಿಖರವಾಗಿ ತಿಳಿದುಬಂದಿಲ್ಲ. ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಚಾಲಕ ಬಸ್ ನಿಂದ ಹಾರಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.

    ಬಸ್ ಚಲಿಸುತ್ತಿದ್ದಂತೆಯೇ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರವೂ 300 ಮೀಟರ್ ವರೆಗೆ ಬಸ್ ಚಲಿಸುತ್ತಲೇ ಇತ್ತು ಅಂತಾ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.