Tag: DC

  • ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ನಾಳೆ ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟ ಪ್ರವೇಶ ನಿಷೇಧ – ರೋಹಿಣಿ ಸಿಂಧೂರಿ ಆದೇಶ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ರಥೋತ್ಸವ ಹಿನ್ನೆಲೆಯಲ್ಲಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ.

    ಇಂದು ಸಂಜೆ 6 ಗಂಟೆಯಿಂದ ನಾಳೆ ಮಧ್ಯಾಹ್ನ 12 ಗಂಟೆವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸುವಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

    ಅಕ್ಟೋಬರ್ 29ರಂದು ನಡೆಯಲಿರುವ ಚಾಮುಂಡಿ ರಥೋತ್ಸವಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ದಸರಾ ಉತ್ಸವಕ್ಕೆ ಗ್ರಾಮಸ್ಥರು ಮತ್ತು ಅಧಿಕಾರಿಗಳಿಗೆ ಮಾತ್ರ ಪ್ರವೇಶ ವಿನಾಯಿತಿ ಇರುತ್ತದೆ. ಜನಸಮೂಹವನ್ನು ಒಳಗೊಂಡಂತೆ ನಡೆಯುತ್ತಿದ್ದ ದಸರಾ ರಥೋತ್ಸವ ಈ ಬಾರಿ ಭಕ್ತರಿಗೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶವಿಲ್ಲ. ಸಾಂಪ್ರದಾಯಿಕವಾಗಿ ಸರಳವಾಗಿ ಉತ್ಸವ ನಡೆಯಲಿದೆ.

    ಮೈಸೂರು ದಸರಾ ಪ್ರಮುಖ ಆಕರ್ಷಣೆ ಎಂದರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತದೆ. ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದ ಈ ಬಾರಿ ಮೈಸೂರು ದಸರಾ ಉತ್ಸವ ಸರಳವಾಗಿ ನಡೆದಿದೆ. ದಸರಾ ಹಬ್ಬ ಯಶಸ್ವಿಯಾಗಿ ನಡೆಯಲೆಂದು ರೋಹಿಣಿ ಸಿಂಧೂರಿ ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ನವರಾತ್ರಿ ಒಂಬತ್ತನೇ ದಿನ ತಾವೇ ಸ್ವತಃ ರಥ ಎಳೆಯುವ ಮೂಲಕ ಹರಕೆ ತೀರಿಸಿದ್ದರು.

  • ದಸರಾ ಯಶಸ್ಸಿಗೆ ಹೊತ್ತಿದ್ದ ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ದಸರಾ ಯಶಸ್ಸಿಗೆ ಹೊತ್ತಿದ್ದ ಹರಕೆ ತೀರಿಸಿದ ರೋಹಿಣಿ ಸಿಂಧೂರಿ

    ಮೈಸೂರು: ನಾಡಹಬ್ಬ ದಸರಾ ಯಶಸ್ವಿಯಾಗಲು ಹೊತ್ತಿದ್ದ ಹರಕೆಯನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತೀರಿಸಿದ್ದಾರೆ.

    ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಚಾಮುಂಡಿಯ ಪಲ್ಲಕ್ಕಿ ರಥ ಎಳೆಯುವ ಮೂಲಕ ರೋಹಿಣಿ ಸಿಂಧೂರಿ ತಾನು ಹೊತ್ತಿದ್ದ ಹರಕೆಯನ್ನು ಒಪ್ಪಿಸಿದ್ದಾರೆ. ರೋಹಿಣಿ ಸಿಂಧೂರಿ ಅವರು ದಸರಾ ಹೊತ್ತಿನಲ್ಲೇ ಮೈಸೂರಿಗೆ ಡಿಸಿಯಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ಸುಸೂತ್ರವಾಗಿ ನಡೆಯುವಂತೆ ಹರಕೆ ಹೊತ್ತಿದ್ದರು.

    ನವರಾತ್ರಿಯ 9 ನೇ ದಿನ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದಾರೆ. ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ರೋಹಿಣಿ ಕುಟುಂಬ ಸಂಜೆ ಬೆಟ್ಟಕ್ಕೆ ತೆರಳಿ ರಥ ಎಳೆದಿದೆ.

    ಮೈಸೂರು ದಸರಾದ ಪ್ರಮುಖ ಆಕರ್ಷಣೆ ಅಂದ್ರೆ ಜಂಬೂ ಸವಾರಿ. ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಕಣ್ಮನ ಸೆಳೆಯುತ್ತಿದ್ದ ಜಂಬೂ ಸವಾರಿ ಇದೇ ಮೊದಲ ಬಾರಿಗೆ ಇಷ್ಟೊಂದು ಸರಳವಾಗಿ ನಡೆದಿದೆ. ಕೊರೊನಾದಿಂದಾಗಿ ಈ ಬಾರಿ ಜಂಬೂ ಸವಾರಿ ಈ ಬಾರಿ ಕೇವಲ 500 ಮೀಟರ್‍ಗೆ ಸೀಮಿತವಾಗಿತ್ತು. ಜಂಬೂಸವಾರಿ ಕಾರ್ಯಕ್ರಮ ಆರಂಭವಾಗೋದೇ ನಾಡದೊರೆ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ. ಕುಂಭಲಗ್ನದಲ್ಲಿ ಸಿಎಂ ಯಡಿಯೂರಪ್ಪ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ್ರು. ಸಿಎಂ ಯಡಿಯೂರಪ್ಪ ಜೊತೆ ಎಸ್‍ಟಿ ಸೋಮಶೇಖರ್, ಸಿಟಿ ರವಿ, ಪ್ರತಾಪ್ ಸಿಂಹ ಭಾಗಿಯಾಗಿದ್ರು.

    ಕೊರೊನಾದಿಂದ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಕೇವಲ 23 ನಿಮಿಷದಲ್ಲಿ ಮುಕ್ತಾಯಗೊಂಡಿತು. ಕೊರೊನಾ ಇದ್ದಿದ್ದರಿಂದ ಸರ್ಕಾರದ ಆದೇಶದನ್ವಯ ಕೇವಲ 500 ಮೀಟರ್ ಮಾತ್ರ ಜಂಬೂಸವಾರಿ ಸಾಗಿತು. ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಹೊತ್ತ ಅಭಿಮನ್ಯು, ಐದೂವರೆ ಕಿ.ಮೀ. ದೂರದ ಬನ್ನಿಮಟ್ಟಪದ ಬದಲಿಗೆ ಅರಮನೆ ಆವರಣದಲ್ಲಿ 500 ಮೀಟರ್ ಮಾತ್ರ ಹೆಜ್ಜೆ ಹಾಕಿದ್ದಾನೆ.

  • ಅಂತಿಮ 5 ಓವರ್ ಗಳಲ್ಲಿ 79 ರನ್, ಸ್ಟೋಯ್ನಿಸ್ ಫಿಫ್ಟಿ- ಕೊಹ್ಲಿ ಪಡೆಗೆ 197 ಗುರಿ

    ಅಂತಿಮ 5 ಓವರ್ ಗಳಲ್ಲಿ 79 ರನ್, ಸ್ಟೋಯ್ನಿಸ್ ಫಿಫ್ಟಿ- ಕೊಹ್ಲಿ ಪಡೆಗೆ 197 ಗುರಿ

    ದುಬೈ: ಐಪಿಎಲ್ 2020ರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಬೆಂಗಳೂರು ರಾಯಲ್ಸ್ ತಂಡದ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 197 ರನ್ ಗಳ ಸ್ಪಧಾತ್ಮಕ ಮೊತ್ತದ ಗುರಿಯನ್ನು ಪಡೆದುಕೊಂಡಿದೆ.

    ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಸ್ಫೋಟಕ ಆರಂಭ ನೀಡಿದರು. ಬೌಂಡರಿ, ಸಿಕ್ಸರ್ ಗಳೊಂದಿಗೆ ಬೌಲರ್ ಗಳನ್ನು ದಂಡಿಸಿದ ಈ ಜೋಡಿ ಪವರ್ ಪ್ಲೇ ಅಂತ್ಯಕ್ಕೆ ಬರೋಬ್ಬರಿ 63 ರನ್ ಗಳಿಸಿತ್ತು. ಇದರಲ್ಲಿ 5 ಬೌಂಡರಿ, 2 ಸಿಕ್ಸರ್ ಗಳೊಂದಿಗೆ ಪೃಥ್ವಿ ಶಾ 22 ಎಸೆತಗಳಲ್ಲಿ 42 ರನ್ ಗಳಿಸಿದ್ದರು. ಧವನ್ 14 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 20 ರನ್ ಕಾಣಿಕೆ ನೀಡಿದ್ದರು.

    ಮೊದಲ 6 ಓವರ್ ಗಳಲ್ಲಿ 63 ರನ್ ಜೊತೆಯಾಟ ನೀಡಿದ್ದ ಧವನ್-ಶಾ ಜೋಡಿ ಟೂರ್ನಿಯಲ್ಲಿ 2ನೇ ಅತ್ಯಧಿಕ ಪವರ್ ಪ್ಲೇ ಸ್ಕೋರ್ ದಾಖಲಿಸಿತು. ಇದಕ್ಕೂ ಮುನ್ನ ರಾಜಸ್ಥಾನ ತಂಡ ಪವರ್ ಪ್ಲೇನಲ್ಲಿ 69 ರನ್ ಗಳಿಸಿತ್ತು.

    ಬಿರುಸಿನ ಬ್ಯಾಟಿಂಗ್‍ನೊಂದಿಗೆ ಮುನ್ನುತ್ತಿದ್ದ ಪೃಥ್ವಿ ಶಾ ವೇಗಕ್ಕೆ ಸಿರಾಜ್ ಬ್ರೇಕ್ ಹಾಕಲು ಯಶಸ್ವಿಯಾದರು. 23 ಎಸೆತಗಳಲ್ಲಿ 42 ರನ್ ಗಳಿಸಿದ್ದ ಪೃಥ್ವಿ ಶಾ, ಸಿರಾಜ್ ಬೌಲಿಂಗ್‍ನಲ್ಲಿ ಎಬಿಡಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಡೆಲ್ಲಿ ನಾಯಕ ಅಯ್ಯರ್ ಧವನ್‍ರೊಂದಿಗೆ ಕೂಡಿ ತಾಳ್ಮೆಯ ಆಟದೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿದರು. ತಂಡ 82 ರನ್ ಗಳಿಸಿದ್ದ ಸಂದರ್ಭದಲ್ಲಿ ಬೌಲಿಂಗ್ ದಾಳಿಗೆ ಇಳಿದ ಉದಾನ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 32 ರನ್ ಗಳಿಸಿದ್ದ ಧವನ್ ವಿಕೆಟ್ ಪಡೆದು ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು. 10 ಓವರ್ ಅಂತ್ಯದ ವೇಳೆಗೆ ಡೆಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿತ್ತು.

    ಪಡಿಕ್ಕಲ್ ಸೂಪರ್ ಕ್ಯಾಚ್: ಡೆಲ್ಲಿ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕಲು ನಿರ್ಧರಿಸಿ ಕ್ಯಾಪ್ಟನ್ ಕೊಹ್ಲಿ 12ನೇ ಓವರಿನಲ್ಲಿ ಮೊಯಿನ್ ಅಲಿಗೆ ಬೌಲಿಂಗ್ ನೀಡಿದ್ದರು. ಈ ಓವರಿನ 3ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ ಅಯ್ಯರ್‍ರನ್ನು ಬೌಂಡರಿ ಲೈನ್‍ನಲ್ಲಿ ಪಡಿಕ್ಕಲ್ ಅದ್ಭುತ ಕ್ಯಾಚ್ ಪಡೆದು ಔಟ್ ಮಾಡಿದರು.

    ಸ್ಟೋಯ್ನಿಸ್ ಫಿಫ್ಟಿ: ಬಳಿಕ ಬಂದ ಸ್ಟೋಯ್ನಿಸ್, ರಿಷಬ್ ಪಂತ್‍ಗೆ ಸಾಥ್ ನೀಡಿ ಬಿರುಸಿನ ಆಟಕ್ಕೆ ಮುಂದಾದರು. 14ನೇ ಓವರ್ ಅಂತ್ಯಕ್ಕೆ ಡೆಲ್ಲಿ 3 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿತ್ತು. 15ನೇ ಓವರ್ ನಲ್ಲಿ ದಾಳಿಗಿಳಿದ ಸೈನಿ ಬೌಲಿಂಗ್‍ನಲ್ಲಿ ಸ್ಟೋಯ್ನಿಸ್ ಲಾಗ್‍ಆನ್‍ನಲ್ಲಿ ಕ್ಯಾಚ್ ನೀಡಿದ್ದರು. ಆದರೆ ಚಹಲ್, ಸ್ಟೋಯ್ನಿಸ್‍ಗೆ ಜೀವದಾನ ನೀಡಿದರು. ಸ್ಲಾಗ್ ಓವರ್ ನಲ್ಲಿ ರನ್ ನೀಡುವುದನ್ನು ನಿಯಂತ್ರಿಸಲು ಮತ್ತೆ ವಿಫಲವಾದ ಆರ್ ಸಿಬಿ ಬೌಲರ್ ಗಳು ದುಬಾರಿಯಾಗಿ ಪರಿಣಮಿಸಿದರು.

    ಮೊದಲ ಎಸೆತದಿಂದಲೂ ಚೆಂಡನ್ನು ಬೌಂಡರಿಗೆ ಅಟ್ಟಬೇಕು ಎಂದು ಪವರ್ ಫುಲ್ ಹೊಡೆತಗಳಿಗೆ ಮುಂದಾದ ಸ್ಟೋಯ್ನಿಸ್ 3 ಬೌಂಡರಿ, 2 ಸಿಕ್ಸರ್ ಗಳೊಂದಿಗೆ 25 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು. 18 ಓವರ್ ಗಳ ಅಂತ್ಯಕ್ಕೆ ಡೆಲ್ಲಿ 171 ರನ್ ಪೇರಿಸಿತ್ತು. ಈ ಹಂತದಲ್ಲಿ ಭಾರೀ ಹೊಡೆತಕ್ಕೆ ಮುಂದಾದ ಪಂತ್, ಸಿರಾಜ್ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಂತಿಮ 5 ಓವರ್ ಗಳಲ್ಲಿ ಡೆಲ್ಲಿ ತಂಡದ ಆಟಗಾರರು 79 ರನ್ ಗಳಿಸಿ ಆರ್‍ಸಿಬಿಗೆ ಭಾರೀ ಮೊತ್ತದ ಗುರಿಯನ್ನೇ ನೀಡಿದರು. ಸ್ಟೋಯ್ನಿಸ್ 53 ರನ್, ಹೆಟ್ಮಾಯರ್ 11 ರನ್ ಗಳಿಸಿ ಅಜೇಯರಾಗಿ ಉಳಿದರು.

    ಆರ್.ಸಿ.ಬಿ ಪರ ಸಿರಾಜ್ ಮೂರು ವಿಕೆಟ್ ಪಡೆದರೆ, ಉದಾನ ಮತ್ತು ಅಲಿ 1 ವಿಕೆಟ್ ಪಡೆದರು. ಸೈನಿ 3 ಓವರ್ ಬೌಲ್ ಮಾಡಿ 48 ರನ್ ಬಿಟ್ಟುಕೊಡುವುದರೊಂದಿಗೆ ದುಬಾರಿಯಾಗಿ ಪರಿಣಮಿಸಿದರು.

    ಪಂದ್ಯದ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆಯಿಂದ ಅಮಿತ್ ಮಿಶ್ರಾ ಅಲಭ್ಯರಾದರು. ಈ ಹಿನ್ನೆಲೆಯಲ್ಲಿ ರವಿಚಂದ್ರನ್ ಅಶ್ವಿನ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಇತ್ತ ಪಂದ್ಯದಲ್ಲಿ ಡೆಲ್ಲಿ ತಂಡದ ಹೊಸ ಜರ್ಸಿಯೊಂದಿಗೆ ಕಣಕ್ಕೆ ಇಳಿದಿತ್ತು.

  • ಆಂಧ್ರದ ಹೆಣ್ಣುಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ: ಸಾರಾ ಮಹೇಶ್ ಕಿಡಿ

    ಆಂಧ್ರದ ಹೆಣ್ಣುಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ: ಸಾರಾ ಮಹೇಶ್ ಕಿಡಿ

    ಮೈಸೂರು: ಆಂಧ್ರದ ಹೆಣ್ಣು ಮಗಳಿಗಾಗಿ ಕನ್ನಡದ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಮಾಜಿ ಸಚಿವ ಸಾ.ರಾ ಮಹೇಶ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ವಿಶೇಷಾಧಿಕಾರಿ, ನೇಮಕಾಧಿಕಾರಿ ನೇಮಕವಾದ ನಂತರ ಜಿಲ್ಲಾಧಿಕಾರಿಯನ್ನ ಬದಲಾವಣೆ ಮಾಡಿರೋದು ಸರಿಯಲ್ಲ. ಅದು ಸ್ಥಳ ತೋರಿಸದೆ ದಲಿತ ಡಿಸಿಯನ್ನ ವರ್ಗಾವಣೆ ಮಾಡಿದ್ದಾರೆ. ಒಬ್ಬ ಆಂಧ್ರದ ಹೆಣ್ಣು ಮಗಳಿಗಾಗಿ ಕನ್ನಡದ ಮಗನನ್ನ ವರ್ಗಾವಣೆ ಮಾಡಿದ್ದೀರಾ. ಇದು ನಿಮ್ಮ ಸರ್ಕಾರದ ಸಾಧನೆಯಾ ಎಂದು ಪ್ರಶ್ನಿಸಿದ್ದಾರೆ.

    ಹಾಸನದಲ್ಲಿ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದಾಗ ವರ್ಗಾವಣೆಯನ್ನ ಪ್ರಶ್ನಿಸಿದ್ದರು. ಇದೀಗ 29 ದಿನದಲ್ಲಿಯೇ ಮೈಸೂರು ಡಿಸಿ ವರ್ಗಾವಣೆಯಾಗಿದೆ ಇದು ಸರಿಯೇ?, ಇಲ್ಲಿನ ಜಿಲ್ಲಾಧಿಕಾರಿಗೆ ಅನ್ಯಾಯವಾಗಿದೆ ಅನ್ನೋ ಮನಃಸಾಕ್ಷಿ ಇಲ್ವಾ?. ಅಧಿಕಾರದ ಆಸೆ ಇರುವ ಇಂತಹ ಜಿಲ್ಲಾಧಿಕಾರಿಯಿಂದ ಏನನ್ನು ನಿರೀಕ್ಷೆ ಮಾಡೋದು ಎಂದು ಹೇಳುವ ಮೂಲಕ ಮೈಸೂರಿಗೆ ರೋಹಿಣಿ ಸಿಂಧೂರಿ ವರ್ಗಾವಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

    ರೋಹಿಣಿ ಸಿಂಧೂರಿ ಅವರು ಹಠಕ್ಕೆ ಬಿದ್ದಿದ್ದಾರೆ. ನಾನು ಡಿಸಿ ಆಗಿಯೇ ಇರಬೇಕು ಎಂದಿಕೊಂಡಿದ್ದಾರೆ. ಅದಕ್ಕೆ ಹಾಸನದಲ್ಲಿ ಮೂರು ಬಾರಿ ಕೇಸ್ ಹಾಕಿ, ಇದೀಗ ಮೈಸೂರಿಗೆ ಬಂದಿದ್ದಾರೆ. ಜಿಲ್ಲಾ ಮಂತ್ರಿಗಳಿಗೆ ಮಾಹಿತಿ ಇಲ್ಲದೇ ವರ್ಗಾವಣೆ ಆಗಿದೆಯಾ?. ಹಾಗಿದ್ರೆ ನೀವೂ ಹೆಲ್ಪ್ ಲೆಸ್ಸಾ ಸಚಿವರೇ.?, ಇದಕ್ಕೆ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರೇ ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: ಮೈಸೂರು ನನಗೆ ಹೊಸದಲ್ಲ, ಇಲ್ಲೇ ಆಡಳಿತ ತರಬೇತಿ ಪಡೆದಿದ್ದೇನೆ: ರೋಹಿಣಿ

    ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಆಡಳಿತ ನಡಸುತ್ತಿದ್ದಾರಾ? ಅಥವಾ ಆಂಧ್ರದ ಸಿಎಂ ಆಡಳಿತ ನಡೆಸುತ್ತಿದ್ದರಾ? ಈ ವರ್ಗಾವಣೆಯನ್ನ ಆಂಧ್ರದ ಸಿಎಂ ಮಾಡಿಸಿದ್ದಾರೆಯೋ ಅನ್ನೋ ಬಗ್ಗೆ ಅನುಮಾನ ಇದೆ. ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ಅದರ ಭಾಗವಾಗಿ ರೋಹಿಣಿ ಸಿಂಧೂರಿ ವರ್ಗಾವಣೆ ಆಗಿದೆ ಎಂದು ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

  • ಕಾಳಜಿಗೆ ಮನಸೋತು ಮಗುವಿಗೆ ಜಿಲ್ಲಾಧಿಕಾರಿ ಹೆಸರಿಟ್ಟ ದಂಪತಿ

    ಕಾಳಜಿಗೆ ಮನಸೋತು ಮಗುವಿಗೆ ಜಿಲ್ಲಾಧಿಕಾರಿ ಹೆಸರಿಟ್ಟ ದಂಪತಿ

    ಬಳ್ಳಾರಿ: ತಮ್ಮ ಮಗುವಿಗೆ ಮಹಾತ್ಮರ, ಮುತ್ತಾತರ ಹೆಸರು ಇಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ದಂಪತಿ ತಮ್ಮ ಮಗುವಿಗೆ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೆಸರಿಟ್ಟಿದ್ದಾರೆ.

    ದಾವಣಗೆರೆಯಲ್ಲಿ ನೆಲೆಸಿರುವ ದೀಪಕ್ ದಂಪತಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೆಸರಿಟ್ಟಿದ್ದಾರೆ. ದೀಪಕ್ ಅವರ ಪತ್ನಿಯ ತವರು ಮನೆ ಬಳ್ಳಾರಿ. ಹೀಗಾಗಿ ಕಳೆದ ಎರಡು ತಿಂಗಳ ಹಿಂದೆ ಹೆರಿಗೆಗೆಂದು ಬಳ್ಳಾರಿಗೆ ತೆರಳಿದ್ದರು. ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ನಂತರ ಹೆರಿಗೆಯನ್ನೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿಯಾಗಿ ಮಾಡಿಸಲಾಗಿತ್ತು.

    ಗಂಡು ಮಗು ಜನನವಾಗಿತ್ತು. ಅದೃಷ್ಟವಶಾತ್ ತಾಯಿಗೆ ಸೋಂಕಿದ್ದರೂ ಮಗುವಿಗೆ ಸೋಂಕು ತಗುಲಿರಲಿಲ್ಲ. ಅಂದು ಹೆರಿಗೆಯಾದ ವೇಳೆ ಜಿಲ್ಲಾಸ್ಪತ್ರೆಗೆ ಡಿಸಿ ಎಸ್.ಎಸ್.ನಕುಲ್ ಭೇಟಿ ನೀಡಿದ್ದರು. ಈ ವೇಳೆ ಬಾಣಂತಿಯನ್ನು ಹೇಗಿದ್ದೀರಮ್ಮಾ? ಚಿಕಿತ್ಸೆ ಚೆನ್ನಾಗಿ ಸಿಗುತ್ತಿದೆಯಾ ಎಂದು ಮಾತನಾಡಿಸಿದ್ದರು. ಜಿಲ್ಲಾಧಿಕಾರಿಗಳ ಈ ಕಾಳಜಿಗೆ ಮನಸೋತ ದಂಪತಿ ಇದೀಗ ತಮ್ಮ ಗಂಡು ಮಗುವಿಗೆ ಜಿಲ್ಲಾಧಿಕಾರಿ ನಕುಲ್ ಅವರ ಹೆಸರನ್ನೇ ನಾಮಕಾರಣ ಮಾಡಿದ್ದಾರೆ.

    ಈ ವಿಷಯವನ್ನು ತಿಳಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೆ ಅತೀವ ಸಂತಸ ವ್ಯಕ್ತಪಡಿಸಿದರು. ಇದೊಂದು ಅವಿಸ್ಮರಣೀಯ ಘಟನೆ.ನಿಜಕ್ಕೂ ಅಚ್ಚರಿಯಾಗುತ್ತಿದೆ. ದಂಪತಿಗೆ ಮತ್ತು ಮಗುವಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

  • ರಸ್ತೆ ಅಗಲೀಕರಣಕ್ಕಾಗಿ ಮಳೆಯಲ್ಲೇ ಮೂರು ಗಂಟೆ ಪ್ರತಿಭಟಿಸಿದ ಶಾಸಕಿ

    ರಸ್ತೆ ಅಗಲೀಕರಣಕ್ಕಾಗಿ ಮಳೆಯಲ್ಲೇ ಮೂರು ಗಂಟೆ ಪ್ರತಿಭಟಿಸಿದ ಶಾಸಕಿ

    – ಜಿಲ್ಲೆಯಲ್ಲೇ ಇದ್ದರೂ ಬಾರದ ಜಿಲ್ಲಾಧಿಕಾರಿ
    – ಜಿಲ್ಲಾಧಿಕಾರಿ ಭರವಸೆ ನೀಡುವವರೆಗೂ ಪ್ರತಿಭಟನೆ ಬಿಡದ ಎಂಎಲ್‍ಎ

    ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ಒತ್ತಾಯಿಸಿ ಕೆಜಿಎಫ್ ಶಾಸಕಿ ರೂಪ ಶಶಿಧರ್ ಸತತ ಆರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದು, ಮೂರು ಗಂಟೆಗಳ ಕಾಲ ಮಳೆಯಲ್ಲೇ ನೆನೆದು, ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆದಿಲ್ಲ.

    ಜಿಲ್ಲಾಡಳಿತದ ಭವನದ ಎದುರು ಮಳೆಯಲ್ಲೆ ಶಾಸಕಿ ಒಬ್ಬಂಟಿಯಾಗಿ ಮೌನ ಪ್ರತಿಭಟನೆ ನಡೆಸಿದರು. ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಶಾಸಕಿ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಜಿಲ್ಲೆಯ ಕೆಜಿಎಫ್ ನಗರದ ಅಶೋಕ ರಸ್ತೆ ಅಗಲೀಕರಣ ಕಾಮಗಾರಿ ಹಲವು ಕಾರಣಗಳಿಂದ ನಿಂತು ಹೋಗಿದೆ. ಕೆಲವರು ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದರು. ನಂತರ ಇದೀಗ ತಡೆಯಾಜ್ಞೆ ತೆರವುಗೊಳಿಸಿ ಎಂಟು ತಿಂಗಳಾಗಿದೆ. ಆದರೂ ಕಾಮಗಾರಿ ಆರಂಭಿಸಿಲ್ಲ ಎಂಬುದು ರೂಪಾ ಶಶಿಧರ್ ಆರೋಪಿಸಿದರು.

    ರಸ್ತೆ ಅಗಲೀಕರಣದ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಶಾಸಕಿ ರೂಪ ಜಿಲ್ಲಾಧಿಕಾರಿ ಕಚೇರಿ ಎದುರು ಸುಮಾರು 6 ಗಂಟೆಗಳ ಕಾಲ ನಿಂತುಕೊಂಡೇ ಪ್ರತಿಭಟನೆ ನಡೆಸಿದರು. ಈ ವೇಳೆ ಮಳೆ ಬಂದರೂ ಜಗ್ಗದೆ, ಮಳೆಯಲ್ಲೇ ನೆನೆಯುತ್ತ ಪ್ರತಿಭಟನೆ ಮಾಡಿದರು. ಪ್ರತಿಭಟನೆ ವಿಷಯ ಗೊತ್ತಿದ್ದೂ ಜಿಲ್ಲಾಧಿಕಾರಿ ಸತ್ಯಭಾಮ ತಮ್ಮ ಕಚೇರಿಗೆ ಬಾರದೆ, ಕೋಲಾರ ತಾಲೂಕು ಹೊನ್ನೇನಹಳ್ಳಿ ಬಳಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಇತ್ತ ಸ್ಥಳಕ್ಕೆ ಬಾರದ ಡಿಸಿಗಾಗಿ ಶಾಸಕಿ ಮಳೆಯಲ್ಲಿ ನೆನೆಯುತ್ತಾ ನಿಂತು ಸುಸ್ತಾಗಿದ್ದರು. ನಾಲ್ಕು ಗಂಟೆಗಳ ನಂತರ ಸ್ಥಳಕ್ಕೆ ಬಂದ ಡಿಸಿ, ಶಾಸಕಿಯ ಜೊತೆಗೆ ಮಾತುಕತೆ ನಡೆಸಿದರು.

    ಆರು ಗಂಟೆಗಳ ಪ್ರತಿಭಟನೆ ಬಳಿಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಶಾಸಕಿ ರೂಪ ಶಶಿಧರ್ ನಡುವೆ ಮಾತಿನ ಸಮರವೇ ಶುರುವಾಗಿತ್ತು. ಇಬ್ಬರ ನಡುವೆ ಏರು ಧ್ವನಿಯಲ್ಲೇ ಮಾತಿನ ಚಕಮಕಿ ಶುರುವಾಗಿತ್ತು. ಉದ್ದೇಶ ಪೂರ್ವಕವಾಗಿ ಕೆಲಸ ವಿಳಂಬ ಮಾಡುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕಿ ರೂಪ ಕೂಗಾಡಿದರು. ಇತ್ತ ಡಿಸಿ ಸತ್ಯಭಾಮ ಕೂಡಾ ತನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಕೊರೊನಾ ಕೆಲಸ ಇದೆ, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಇದೆ, ಜೊತೆಗೆ ಈಗ ಜಿಲ್ಲಾಪಂಚಾಯತ್ ಜವಾಬ್ದಾರಿ ಕೂಡಾ ಇದೆ ಎಂದು ಪ್ರತ್ಯುತ್ತರ ನೀಡಿದರು.

    ಕೊನೆಗೆ ವಿಧಾನಸಭೆ ಅಧಿವೇಶನದ ಬಳಿಕ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಅವರ ಮಾತಿಗೆ ಒಪ್ಪಿದ ಶಾಸಕಿ, ಇದರ ಹಿಂದೆ ಯಾರ ಒತ್ತಡ ಇದೆ, ಏನು ಅನ್ನೋದು ಗೊತ್ತಿದೆ ಅದೇನೆ ಇದ್ದರೂ, ನನಗೆ ಕೆಲಸ ಮಾಡಿಕೊಡಿ. ಇದು ನನ್ನ ವೈಯಕ್ತಿಕ ಕೆಲಸ ಅಲ್ಲ. ಆಗ ಆದಷ್ಟು ಬೇಗ ಕೆಲಸ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಶಾಸಕಿ ಪ್ರತಿಭಟನೆ ಕೈಬಿಟ್ಟು ಪ್ರತಿಭಟನಾ ಸ್ಥಳದಿಂದ ತೆರಳಿದರು.

    ರಸ್ತೆ ವಿಚಾರವಾಗಿ ಶಾಸಕಿ ರೂಪ ಈಗಾಗಲೇ ಒಂದು ಬಾರಿ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ಮಾಡಿದ್ದರು. ಈಗ ಎರಡನೇ ಬಾರಿ ಪ್ರತಿಭಟನೆ ಮಾಡುತ್ತಿದ್ದು, ಕೋರ್ಟ್ ಆದೇಶವಿದ್ದರೂ ಕೆಲಸ ಆರಂಭಿಸಿಲ್ಲ. ಅಲ್ಲದೆ ರಸ್ತೆ ಕಿರಿದಾದ್ದರಿಂದ ನಿತ್ಯ ಜನರಿಗೆ ಸಮಸ್ಯೆಯಾಗುತ್ತಿದೆ.

  • ಕೊರೊನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್- 1 ರೂ.ಡಿಸ್ಕೌಂಟ್

    ಕೊರೊನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್- 1 ರೂ.ಡಿಸ್ಕೌಂಟ್

    – ಬಿಲ್ ನೋಡಿ ಕುಟುಂಬಸ್ಥರು ಶಾಕ್
    – 19 ದಿನ ಕೇಳಿದರೂ ಯಾವುದೇ ವರದಿ ನೀಡದ ಆಸ್ಪತ್ರೆ

    ಚಿಕ್ಕಮಗಳೂರು: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಚಿಕಿತ್ಸೆ ದಾಖಲಾದ ವ್ಯಕ್ತಿಗೆ ಕೇವಲ 19 ದಿನಕ್ಕೆ 11 ಲಕ್ಷ ರೂ.ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಗ್ರಾಮದ 70 ವರ್ಷದ ನಂಜುಡಪ್ಪ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಗಸ್ಟ್ 24ರಂದು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಗೆ ಖಾಸಗಿ ಆಸ್ಪತ್ರೆ 19 ದಿನಕ್ಕೆ 11 ಲಕ್ಷ ಬಿಲ್ ಮಾಡಿದ್ದು, ಬಿಲ್ ನೋಡಿದ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.

    ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನಂಜುಂಡಪ್ಪ ಅವರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಈ ವೇಳೆ ಪಾಸಿಟಿವ್ ಇದೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಬಳಿಕ 19 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಆದರೆ ನಂಜುಂಡಪ್ಪ ಅವರು ಬದುಕುಳಿದಿಲ್ಲ. ಆದರೆ 19 ದಿನಗಳ ಚಿಕಿತ್ಸೆಗೆ 9.25 ಲಕ್ಷ ರೂ. ಆಸ್ಪತ್ರೆ ಬಿಲ್ ಹಾಗೂ 1.54 ಲಕ್ಷ ರೂ. ಮೆಡಿಕಲ್ ಬಿಲ್ ಸೇರಿ ಸುಮಾರು 11 ಲಕ್ಷ ಬಿಲ್ ಮಾಡಿದ್ದಾರೆ.

    ಬಿಲ್ ಕಂಡು ಮೃತ ನಂಜುಂಡಪ್ಪನವರ ಕುಟುಂಬಸ್ಥರಿಗೆ ಶಾಕ್ ಆಗಿದೆ. ಕೊನೆಗೆ ಆಸ್ಪತ್ರೆಯವರು ಬಿಲ್ ಪಾವತಿ ಮಾಡಿ ಮೃತದೇಹ ತೆಗೆದುಕೊಂಡಿ ಹೋಗಿ ಎಂದು ಮೃತನ ಸಂಬಂಧಿಕರಿಗೆ ಹೇಳಿದ್ದಾರೆ. ಮೃತ ನಂಜುಂಡಪ್ಪನವರ ಸಂಬಂಧಿಗಳು ಬಿಲ್‍ನಲ್ಲಿ ರಿಯಾಯಿತಿ ನೀಡುವಂತೆ ಕೇಳಿಕೊಂಡಾಗ ಆಸ್ಪತ್ರೆಯವರು ಒಂದೇ ಒಂದು ರೂಪಾಯಿ ರಿಯಾಯಿತಿ ನೀಡಿದ್ದಾರೆ.

    ಇದೀಗ ಮೃತನ ಸಂಬಂಧಿಗಳು ನಾವು ಬೇರೆ ಆಸ್ಪತ್ರೆಗೆ ಹೋಗ್ತೀವಿ ಎಂದರೂ ಕಳುಹಿಸದೆ, ನಾವೇ ಚಿಕಿತ್ಸೆ ನೀಡಿ, ಹುಷಾರು ಮಾಡುತ್ತೇವೆ ಎಂದು ಇಲ್ಲೇ ಇಟ್ಟುಕೊಂಡು ಪ್ರಾಣವನ್ನೂ ಉಳಿಸದೆ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಮೃತನ ಸಂಬಂಧಿಗಳು ಹೆಚ್ಚುವರಿ ಹಣವನ್ನು ಮರುಪಾವತಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ರೋಗಿ ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ಆಸ್ಪತ್ರೆಯವರು ಯಾವುದೇ ರಿಪೋರ್ಟ್ ಕೇಳಿದರೂ ಕೊಟ್ಟಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ರೀತಿ ಬೇರೆಯವರಿಗೆ ಆಗೋದು ಬೇಡ ಎಂದು ಜಿಲ್ಲಾಧಿಕಾರಿ ಡಿಎಚ್‍ಓಗೆ ತನಿಖೆ ನಡೆಸಲು ಸೂಚಿಸಿದ್ದಾರೆ. ಆದಷ್ಟು ಬೇಗ ಗಂಭೀರ ತನಿಖೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ.

  • ಹುತಾತ್ಮರ ಬಲಿದಾನ ನಮಗೆಲ್ಲರಿಗೂ ಸ್ಪೂರ್ತಿ: ಕೆ.ಬಿ ಶಿವಕುಮಾರ್

    ಹುತಾತ್ಮರ ಬಲಿದಾನ ನಮಗೆಲ್ಲರಿಗೂ ಸ್ಪೂರ್ತಿ: ಕೆ.ಬಿ ಶಿವಕುಮಾರ್

    ಶಿವಮೊಗ್ಗ: ವನ್ಯಸಂಪತ್ತಿನ ರಕ್ಷಣೆ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅರಣ್ಯ ಇಲಾಖೆ ಹುತಾತ್ಮರ ಬಲಿದಾನ ಇನ್ನಷ್ಟು ಆತ್ಮ ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದರು.

    ನಗರದ ಶ್ರೀಗಂಧ ಕೋಠಿ ಆವರಣದಲ್ಲಿ ವಿಶ್ವ ಹುತಾತ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಮರ್ಪಿಸಿ ಮಾತನಾಡಿದರು.

    ವನ್ಯಜೀವಿ, ಮರಗಳು ಹಾಗೂ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗುವ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇವರ ಪರಿಶ್ರಮದಿಂದಾಗಿಯೇ ಕಾಡು ಇಂದಿಗೂ ಈ ಸ್ವರೂಪದಲ್ಲಿ ಉಳಿದಿದೆ. ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.

    ಕರ್ತವ್ಯದ ವೇಳೆ ಮೃತಪಟ್ಟ ಹುತಾತ್ಮರ ಕುಟುಂಬದ ಜತೆ ನಾವೆಲ್ಲರೂ ಇದ್ದೇವೆ. ಅವರ ಕಷ್ಟ ಸುಖದಲ್ಲಿ ಸರ್ಕಾರ ಕೈ ಜೋಡಿಸಿ ಸ್ಪಂದಿಸುತ್ತದೆ. ಹುತಾತ್ಮರಾದವರ ನೆನಪು ಸದಾ ಜೀವಂತವಾಗಿರುವುದು. ಸರ್ಕಾರಿ ನೌಕರರು ಶೇ. 100ರಷ್ಟು ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವುದೇ, ಸೇವೆಯಲ್ಲಿರುವಾಗ ಹುತಾತ್ಮರಾಗುವವರಿಗೆ ನೀಡುವ ನಿಜವಾದ ಗೌರವ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಅರಣ್ಯ ಇಲಾಖೆಯವರು ಕೇವಲ ಅರಣ್ಯ ಸಂರಕ್ಷಣೆ ಮಾತ್ರವಲ್ಲದೆ ಅರಣ್ಯವನ್ನು ಬೆಳೆಸುವ ಕಾರ್ಯವನ್ನು ಸಹ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿರುವಾಗ ಹುತಾತ್ಮರಾಗುವವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಅವರು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.

    ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡದಿಂದ ಹುತಾತ್ಮರಿಗೆ ಗೌರವ ಸಮರ್ಪಣೆ ಹಾಗೂ ಪೊಲೀಸ್ ತಂಡದಿಂದ ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.

  • ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ – ಸಾರ್ವಜನಿಕರಿಗೆ ನಿರ್ಬಂಧ

    ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ – ಸಾರ್ವಜನಿಕರಿಗೆ ನಿರ್ಬಂಧ

    ಉಡುಪಿ: ಜಿಲ್ಲೆಯಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ. ಕೃಷ್ಣನ ಜನ್ಮಾಷ್ಟಮಿ ನಂತರದ ಶುಕ್ರವಾರ ರಥಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ. ಆದರೆ ಎರಡೂ ದಿನದ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಅವಕಾಶ ಇಲ್ಲ.

    ಸೆಪ್ಟೆಂಬರ್ 21ರವರೆಗೆ ನೂರು ಜನ ಸೇರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಹೀಗಾಗಿ ಉಡುಪಿ ಕೃಷ್ಣಮಠ ಕೋವಿಡ್ 19 ನ ಹಿಂದಿನ ಸೂಚನೆಯನ್ನೇ ಪಾಲಿಸಬೇಕಾಗುತ್ತದೆ. ರಥಬೀದಿಯಲ್ಲಿ ಸಾವಿರಾರು ಜನ ಸೇರಿ ಆಚರಿಸುವ ವಿಟ್ಲಪಿಂಡಿ ಆಚರಣೆಗೆ ಕೂಡ ನೂರು ಜನ ಸೇರುವ ಅವಕಾಶವೂ ಇಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ವೇಷ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ಇಲ್ಲ. ಪೊಲೀಸ್ ನಿಯೋಜನೆ ಮಾಡಿ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಡಿಸಿ ಹೇಳಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಕೃಷ್ಣ ಮಠದ ಪರ್ಯಾಯ ಅದಮಾರು ಸ್ವಾಮೀಜಿ ಜೊತೆ ಮಾತನಾಡಿದ್ದೇನೆ. ಸರ್ಕಾರದ ನಿಯಮವನ್ನು ಪಾಲಿಸುವುದಾಗಿ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ. ಸಾಂಪ್ರದಾಯಿಕ ರೀತಿಯಲ್ಲಿ ಅಷ್ಟಮಿ ಮತ್ತು ವಿಟ್ಲಪಿಂಡಿ ಆಚರಣೆ ನಡೆಯುತ್ತದೆ. ಕೃಷ್ಣ ಮಠಕ್ಕೆ ಬರುವ ಸಾರ್ವಜನಿಕ ರಸ್ತೆಗಳನ್ನು ಬಂದ್ ಮಾಡುತ್ತೇವೆ. ಮಠದ ಸುತ್ತಲ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ನಿಯೋಜನೆ ಮಾಡುತ್ತೇವೆ ಎಂದರು.

    ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ಯಾವುದೇ ವೇಷಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಅವಕಾಶ ಇಲ್ಲ. ಮಠದ ಸಿಬ್ಬಂದಿ ಮೊಸರು ಕುಡಿಕೆಯನ್ನು ಸಾಂಪ್ರದಾಯಕವಾಗಿ ನಡೆಸುತ್ತಾರೆ. ಅದನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ ಎಂದರು.

  • ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರ್ ಅಮಾನತು

    ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರ್ ಅಮಾನತು

    ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಹಶೀಲ್ದಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿಜಯಕುಮಾರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.

    ಮರಳು ಲಾರಿಗೆ ಅನುಮತಿ ನೀಡುವ ಸಲುವಾಗಿ ತಾಲೂಕು ತಹಶೀಲ್ದಾರ್ ವಿಜಯಕುಮಾರ್ ಲಂಚ ಕೇಳಿದ್ದರು. ತಹಶೀಲ್ದಾರ್ ಲಂಚ ಕೇಳಿದ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಳೆದ 20 ದಿನಗಳ ಹಿಂದೆ ಹೂವಿನ ಹಡಗಲಿ ತಾಲೂಕಿನ ಉಮೇಶ್ ನಾಯಕ್ ಎಂಬವರ ಮರಳು ಲಾರಿಯನ್ನು ಸೀಜ್ ಮಾಡಲಾಗಿತ್ತು. ಮರಳು ಲಾರಿ ಬಿಡುವ ಸಲುವಾಗಿ ಉಮೇಶ್ ನಾಯಕ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

    ನನ್ನದು ವಾರದ ಲೆಕ್ಕ ಇಲ್ಲ, ನನ್ನ ಜೊತೆಯಲ್ಲಿ ಮಾತನಾಡಬೇಡಿ. 50-50 ಆದರೂ ಕೊಡುತ್ತೀರಾ ಎಂದು ಬೇಡಿಕೆ ಇಟ್ಟಿದ್ದರು. ತಹಶೀಲ್ದಾರ್ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಅವರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ತಹಶೀಲ್ದಾರನ್ನು ಅಮಾನತು ಮಾಡುವಂತೆ ಒತ್ತಾಯ ಮಾಡಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ವಿಜಯಕುಮಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.