Tag: cyclone

  • ‘ಓಖಿ’ಯಬ್ಬರಕ್ಕೆ ನೋಡನೋಡ್ತಿದ್ದಂತೆ ಕುಸಿದು ಬಿತ್ತು ಕಡಲ ಕಿನಾರೆಯಲ್ಲಿದ್ದ ಮನೆ!

    ‘ಓಖಿ’ಯಬ್ಬರಕ್ಕೆ ನೋಡನೋಡ್ತಿದ್ದಂತೆ ಕುಸಿದು ಬಿತ್ತು ಕಡಲ ಕಿನಾರೆಯಲ್ಲಿದ್ದ ಮನೆ!

    ಮಂಗಳೂರು: ಓಖಿ ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿ ಭಾಗದಲ್ಲೂ ಬೀರತೊಡಗಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಮಂಗಳೂರಿಗೆ ಹೊಂದಿಕೊಂಡಂತೆ ಇರುವ ಕೇರಳದ ಕಾಸರಗೋಡು ತೀರ ಪ್ರದೇಶದ ಮನೆಗಳು ನೀರು ಪಾಲಾಗುತ್ತಿದೆ.

    ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಪ್ಪರ, ಉಪ್ಪಳ ಬಳಿಯ ಕೊಯಿಪಾಡಿ ಎಂಬಲ್ಲಿ ಆರು ಮನೆಗಳು ಸಮುದ್ರ ಪಾಲಾಗಿವೆ. ಅಲ್ಲಿದ್ದ ನಿವಾಸಿಗಳನ್ನು ಮೊದಲೇ ಸ್ಥಳಾಂತರ ಮಾಡಿದ್ದರಿಂದ ಜೀವ ಹಾನಿ ತಪ್ಪಿದೆ. ಮಂಜೇಶ್ವರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಆಗುತ್ತಿದ್ದು ಬ್ರೇಕ್ ವಾಟರ್ ಅವೈಜ್ಞಾನಿಕ ವಾಗಿ ನಿರ್ಮಿಸಿದ್ದರಿಂದ ಕೆಲವು ಪ್ರದೇಶಗಳಲ್ಲಿ ಸಮುದ್ರದ ತೀವ್ರತೆ ಹೆಚ್ಚಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

     

    ಮಂಜೇಶ್ವರದ ಕಡಲ ಕಿನಾರೆ (ಕಡಪ್ಪರ) ಯಲ್ಲಿ ಮನೆಯೊಂದು ನೋಡ ನೋಡುತ್ತಲೇ ಸಮುದ್ರಕ್ಕೆ ಬಿದ್ದು ನೀರುಪಾಲಾಗುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಸಮುದ್ರ ರಫ್ ಅಗಿದ್ದರಿಂದ ಶನಿವಾರ ಸಂಜೆಯಿಂದಲೇ ಕಡಲ್ಕೊರೆತ ಆರಂಭವಾಗಿತ್ತು. ಇದರಿಂದಾಗಿ ಮನೆಯ ಅಡಿಪಾಯಕ್ಕಿಂತಲೂ ಕೆಳಗಿದ್ದ ಮರಳು ಕಡಲಿನ ಅಲೆಯಲ್ಲಿ ಕೊಚ್ಚಿ ಹೋಗಿತ್ತು. ಹೀಗೆ ಸುಮಾರು ಒಂದೂವರೆ ನಿಮಿಷಗಳ ಬಳಿಕ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

    ಈ ನಡುವೆ ಕೇರಳದ ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಕಾಣಿಸಿದರೂ ಕೆಲವು ಮೀನುಗಾರರು ಅಲೆಯನ್ನು ಎದುರು ಹಾಕಿಕೊಂಡು ಬೋಟ್ ತೆಗೆದುಕೊಂಡು ಹೋಗಲು ಶ್ರಮಿಸಿದ್ದಾರೆ. ಈ ವೇಳೆ ಒಂದು ಬೋಟ್ ಯಶಸ್ವಿಯಾಗಿ ಅಲೆ ದಾಟಿದರೂ ಇನ್ನೊಂದು ಬೋಟ್ ಇದರಲ್ಲಿ ಸಫಲತೆ ಕಾಣಲಿಲ್ಲ. ಇದರ ಪರಿಣಾಮವಾಗಿ ಬೋಟ್ ಸುಮಾರು 2 ನಿಮಿಷಗಳ ಕಾಲ ಅಲೆಗಳ ನಡುವೆ ಸಿಲುಕಿತ್ತು. ಎರಡು ಬಾರಿ ಕಡಲಿನಲ್ಲೇ ಬೋಟ್ ಮುಳುಗುತ್ತೆ ಎನ್ನಿಸಿದರೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಕೊನೆಗೆ ಭಾರಿ ಗಾತ್ರದ ಅಲೆಯೊಂದು ಬೋಟನ್ನು ಕಡಲ ಕಿನಾರೆಗೆ ನೂಕಿದ ವೇಳೆ ಬೋಟ್ ಪಲ್ಟಿಯಾಯಿತು. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

    https://www.youtube.com/watch?v=IskPbU9PesM

    https://www.youtube.com/watch?v=ampmtdoQElk

    https://www.youtube.com/watch?v=QC37Q2pdg9w

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

     

  • ಎಚ್ಚರ, ಸಮುದ್ರದಲ್ಲಿ ಏಳಲಿದೆ 6 ಮೀಟರ್ ಎತ್ತರದ ಅಲೆ – ಓಖಿ ಚಂಡಮಾರುತಕ್ಕೆ ಮಂಗಳೂರಿನ 2 ಹಡಗು ಮುಳುಗಡೆ

    ಎಚ್ಚರ, ಸಮುದ್ರದಲ್ಲಿ ಏಳಲಿದೆ 6 ಮೀಟರ್ ಎತ್ತರದ ಅಲೆ – ಓಖಿ ಚಂಡಮಾರುತಕ್ಕೆ ಮಂಗಳೂರಿನ 2 ಹಡಗು ಮುಳುಗಡೆ

    ಮಂಗಳೂರು/ಬೆಂಗಳೂರು/ಕೊಚ್ಚಿ: ಓಖಿ ಚಂಡಮಾರುತ ಹೊಡೆತದಿಂದಾಗಿ ಲಕ್ಷದ್ವೀಪ ಸಮೀಪದ ಅರಬ್ಬಿ ಸಮುದ್ರದಲ್ಲಿ ಮಂಗಳೂರಿನಿಂದ ಹೊರಟಿದ್ದ 2 ಹಡಗು ಮುಳುಗಡೆಯಾಗಿದೆ. ಆದರೆ ಓಖಿ ಎಫೆಕ್ಟ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

    ಅದೃಷ್ಟವಶಾತ್ ಮಂಗಳೂರಿನಿಂದ ಹೊರಟ ಮೂರು ಹಡಗಿನಲ್ಲಿದ್ದ ಒಟ್ಟು 14 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿನ್ನೆ ಮಂಗಳೂರು ಹಳೆ ಬಂದರಿನಿಂದ ಸರಕು ಮತ್ತು ತರಕಾರಿ ಹೇರಿಕೊಂಡು ಹೋಗಿದ್ದ ಈ ಹಡಗುಗಳು ಅಪಾಯಕ್ಕೆ ಸಿಲುಕಿರುವ ಬಗ್ಗೆ ಬೋಟ್ ಮಾಲಕರಿಗೆ ಇಂದು ಸಂಜೆ ಮಾಹಿತಿ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

    ಮಂಗಳೂರಿನಿಂದ ಹೊರಟಿದ್ದ ಒಂದು ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದರೆ, ಎರಡನೇ ಬೋಟ್ ಅರ್ಧ ಮುಳುಗಿದೆ. ಮೂರನೇ ಬೋಟ್ ಗೆ ಡ್ಯಾಮೇಜ್ ಆಗಿದೆ. ಈ ಎಲ್ಲಾ ಹಡಗುಗಳು ಮಂಗಳೂರು ಹಳೆ ಬಂದರಿನಲ್ಲಿ ನೋಂದಣಿಯಾಗಿವೆ. ಬೋಟಿನಲ್ಲಿದ್ದ ಕಾರ್ಮಿಕರು ಗುಜರಾತ್ ಹಾಗೂ ತಮಿಳುನಾಡಿನವರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ನಡುವೆ ಮೀನುಗಾರಿಕೆಗೆ ತೆರಳಿ ಚಂಡಮಾರುತದ ನಡುವೆ ಸಿಲುಕಿಕೊಂಡಿದ್ದ 214 ಮೀನುಗಾರರನ್ನು ಇದುವರೆಗೆ ನೌಕಾ ಪಡೆ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಇನ್ನೊಂದೆಡೆ ಸಿಲುಕಿದ್ದ 60 ಮಂದಿಯನ್ನು ಜಪಾನ್ ಹಡಗು ರಕ್ಷಿಸಿದೆ. ಇವರು ಕರಾವಳಿ ಪಡೆಯ ಸಹಾಯದ ಮೂಲಕ ದಡ ಸೇರಲಿದ್ದಾರೆ. ತಿರುವನಂತಪುರಂ ಜಿಲ್ಲಾಧಿಕಾರಿ ವಾಸುಕಿನೇತೃತ್ವದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ತಾವು ಹೋಗಿದ್ದ ಬೋಟ್ ಬಿಟ್ಟು ಬರಲು ಹೆಚ್ಚಿನವರು ತಯಾರಾಗದೇ ಇರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ರಕ್ಷಣೆ ಮಾಡಿದ ಹೆಚ್ಚಿನ ಮೀನುಗಾರರು ಅಸ್ವಸ್ಥರಾಗಿದ್ದು ಚಿಕಿತ್ಸೆ ಮುಂದುವರೆದಿದೆ.

    ಕೇರಳ ಸಮುದ್ರ ತೀರದಿಂದ 10 ಕಿಮೀ ದೂರದವರೆಗೆ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ಹವಾಮಾನಾ ಇಲಾಖೆ ಹಾಗೂ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಷಿಯನ್ ಇನ್ಫಾರ್ಮೇಷನ್ ಸರ್ವೀಸ್ ಎಚ್ಚರಿಕೆ ನೀಡಿದೆ. ಕೊಲ್ಲಂ, ಆಲೆಪ್ಪಿ, ಕೊಚ್ಚಿ, ತ್ರಿಶೂರ್ ಜಿಲ್ಲೆಗಳಲ್ಲಿ 4.4 ಮೀಟರ್ ನಿಂದ 6.1 ಮೀಟರ್ ಎತ್ತರದವರೆಗೆ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ. ಕೇರಳದ ವಿಯಿಞಂನಿಂದ ಕರ್ನಾಟಕದ ಗಡಿ ಭಾಗವಾದ ಕಾಸರಗೋಡುವರೆಗೆ ಓಖಿ ಎಫೆಕ್ಟ್ ಬರುವ ಸಾಧ್ಯತೆಯಿದೆ. ಡಿಸೆಂಬರ್ 2ರಂದು ರಾತ್ರಿ 11.30ರವರೆಗೆ ಎಚ್ಚರಿಕೆಯಿಂದಿರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕಾಸರಗೋಡಿಗೂ ಎಫೆಕ್ಟ್ ತಟ್ಟುವ ಹಿನ್ನೆಲೆಯಲ್ಲಿ ಮಂಗಳೂರಿಗೂ ಇದರ ಎಫೆಕ್ಟ್ ತಟ್ಟುವ ಸಾಧ್ಯತೆಯಿದೆ. ಕೇರಳ ತೀರದಲ್ಲಿ 45ರಿಂದ 65 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಈ ನಡುವೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸಮುದ್ರ 100 ಮೀಟರ್ ತೀರವನ್ನು ನುಂಗಿಕೊಂಡಿದೆ.

    ಬೆಂಗಳೂರು: ಓಖಿ ಚಂಡಮಾರುತದ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ತುಂತುರು ಮಳೆ ಸಹಿತ ಮೋಡ ಕವಿದ ವಾತಾವರಣವಿದೆ. ಈ ವಾತಾವರಣ ಇನ್ನೂ ಎರಡು ದಿನಗಳ ಕಾಲ ಮುಂದುವರೆಯುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಯಿಂದ ಕೋಲಾರದಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಯಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದರೂ ಮಳೆಯಲ್ಲೇ ದಿನ ನಿತ್ಯದ ಕೆಲಸಕಾರ್ಯ ಗಳಲ್ಲಿ ಜನರು ತೊಡಗಿದ್ದಾರೆ. ನಿನ್ನೆಯಿಂದಲೇ ಜಿಲ್ಲೆಗೆ ಅಪ್ಪಳಿಸಿರುವ ಓಕ್ಲಿ ಚಂಡ ಮಾರುತ, ಮತ್ತೆ ಜಿಲ್ಲೆಯನ್ನ ತಂಪಾಗಿಸಿದ್ದಾನೆ. ಆದ್ರೆ ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದ್ದು, ರಾಗಿ ಸೇರಿದಂತೆ ದ್ವಿದಳ ಧಾನ್ಯಗಳ ಕಟಾವು ಹಾಗೂ ಒಕ್ಕಣಿಯಲ್ಲಿ ರೈತರು ತೊಡಗಿರುವ ಕಾರಣ, ಈ ಚಂಡ ಮಾರುತ ರೈತರಿಗೆ ಕಂಟಕವಾಗಲಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಓಖಿ ಚಂಡಮಾರುತ ಎಫೆಕ್ಟ್ ತುಮಕೂರು ಜೆಲ್ಲೆಗೂ ತಟ್ಟಿದೆ. ಪರಿಣಾಮ ತುಮಕೂರು ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿತ್ತು. ಮೈಸೂರು, ಮಂಡ್ಯ ಜಿಲ್ಲೆಯಲ್ಲೂ ತುಂತುರು ಮಳೆಯಾಗಿದೆ.

     

     

     

     

     

  • ಶಬರಿಮಲೆಗೆ ಹೋಗ್ತಿದ್ದೀರಾ? – ಹಾಗಾದ್ರೆ ಈ ಸುದ್ದಿ ಓದಿ ‘ಸನ್ನಿಧಾನ’ದತ್ತ ತೆರಳಿ..!

    ಶಬರಿಮಲೆಗೆ ಹೋಗ್ತಿದ್ದೀರಾ? – ಹಾಗಾದ್ರೆ ಈ ಸುದ್ದಿ ಓದಿ ‘ಸನ್ನಿಧಾನ’ದತ್ತ ತೆರಳಿ..!

    ಶಬರಿಮಲೆ: ನೀವು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದೀರಾ..? ಹಾಗಿದ್ದರೆ ಸ್ವಲ್ಪ ಎಚ್ಚರ ವಹಿಸಿ, ಸಾಧ್ಯವಾದರೆ ನಿಮ್ಮ ಯಾತ್ರೆಯನ್ನು ಇನ್ನೆರಡು ದಿನ ಮುಂದೂಡೋಕಾಗುತ್ತಾ ನೋಡಿ. ಯಾಕೆಂದರೆ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಬುಧವಾರ ಉಂಟಾದ ವಾಯುಭಾರ ಕುಸಿತದಿಂದಾಗಿ ಗುರುವಾರ ಬೆಳಗಿನಿಂದ ತಮಿಳುನಾಡು ಹಾಗೂ ಕೇರಳದ ಕೆಲವೆಡೆ ಭಾರೀ ಮಳೆಯಾಗುತ್ತಿದೆ.

    ‘ಓಖಿ’ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಕನ್ಯಾಕುಮಾರಿ, ತಿರುವನಂತಪುರ ಹಾಗೂ ಕೊಲ್ಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಜನರು ಮನೆಯಿಂದ ಹೊರ ಬರದಂತೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

    ಚಂಡಮಾರುತದಿಂದಾಗಿ ಶಬರಿಮಲೆ ದೇಗುಲವಿರುವ ಪತ್ತನಂತಿಟ್ಟ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ ಶಬರಿಮಲೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಇದರಿಂದಾಗಿ ಪಂಪಾ ನದಿಯಲ್ಲಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ. ಪಂಪಾ ನದಿಯಲ್ಲಿ ಯಾರೂ ನೀರಿಗಿಳಿಯಬೇಡಿ ಎಂದು ಈಗಾಗಲೇ ಅಯ್ಯಪ್ಪ ಭಕ್ತರಿಗೆ ಸೂಚನೆ ಹೊರಡಿಸಲಾಗಿದೆ. ಜೊತೆಯಲ್ಲಿ ಪಂಪಾ ನದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ.

    ಅಯ್ಯಪ್ಪನ ದರ್ಶನಕ್ಕೆ ಬ್ರೇಕ್!: ಶಬರಿಮಲೆ ಯಾತ್ರಿಕರು ಬೆಟ್ಟ ಪ್ರದೇಶದಲ್ಲಿ ಸಂಜೆ 6ರಿಂದ ಬೆಳಗ್ಗೆ 7 ಗಂಟೆವರೆಗೆ ಯಾವುದೇ ಸಂಚಾರ ಮಾಡಬೇಡಿ. ಶಬರಿಮಲೆಗೆ ಹೋಗಲು ಅರಣ್ಯ ಪ್ರದೇಶದಲ್ಲಿರುವ ಕಾಲು ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸಬೇಡಿ ಎಂದು ಸರ್ಕಾರ ಮೌಖಿಕ ಸೂಚನೆ ನೀಡಿದೆ. ಮೊಬೈಲ್ ಫೋನ್ ಚಾರ್ಜ್ ಹಾಗೂ ಲೈಟ್ ಗಳಲ್ಲಿ ಬ್ಯಾಟರಿ ಚಾರ್ಜ್ ಫುಲ್ ಆಗಿರುವಂತೆ ನೋಡಿಕೊಳ್ಳಿ.

    ಭಾರೀ ಮಳೆಯಾಗುತ್ತಿದ್ದರೆ ಸನ್ನಿಧಾನದಿಂದ ಬೆಟ್ಟ ಇಳಿಯಬೇಡಿ. ಮರದ ಕೆಳಗೆ ನಿಲ್ಲಬೇಡಿ. ನದಿ ನೀರಿನಲ್ಲಿ ಸ್ನಾನ ಮಾಡುವ ಸಾಹಸಕ್ಕೆ ಇಳಿಯಬೇಡಿ. ಪಂಪಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನೀರಿನಲ್ಲಿ ಮುಳುಗಿ ಸ್ನಾನ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಪಂಪಾ ನದಿ ಸಮೀಪದ ತ್ರಿವೇಣಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಎಲ್ಲಾ ವಾಹನಗಳನ್ನು ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಾಂತರಿಸಲಾಗಿದೆ. ಶಬರಿಮಲೆ ಯಾತ್ರೆ ವೇಳೆ ಮರದ ರೆಂಬೆ ಮುರಿದು ಬಿದ್ದು ಆಲೆಪ್ಪಿಯ ಅಯ್ಯಪ್ಪ ವ್ರತಧಾರಿ ವಿವೇಕ್ ಎಂಬವರಿಗೆ ಗಾಯವಾಗಿದೆ. ಈ ಕ್ಷಣದವರೆಗೆ ಭಕ್ತರು ಶಬರಿಮಲೆ ದರ್ಶನಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಆದರೆ, ಮಳೆ ಹಿನ್ನೆಲೆಯಲ್ಲಿ ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. (ಇದನ್ನೂ ಓದಿ:ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರಿಗೆ ಶಾಕಿಂಗ್ ನ್ಯೂಸ್: ಐಸಿಸ್ ಸಂಚು ಏನು ಗೊತ್ತಾ?)

    85 ಕಿಮೀ ವೇಗ: ದಕ್ಷಿಣ ತಮಿಳುನಾಡಿನಿಂದ ಗಂಟೆಗೆ 85 ಕಿಮೀ ವೇಗದಲ್ಲಿ ಲಕ್ಷದ್ವೀಪದ ಕಡೆಗೆ ಚಂಡಮಾರುತ ಸಾಗುತ್ತಿದೆ. ಈಗಾಗಲೇ ತಮಿಳುನಾಡು, ಕನ್ಯಾಕುಮಾರಿ, ಕೇರಳದಲ್ಲಿ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಮುಂದಿನ 24 ಗಂಟೆಗಳಲ್ಲಿ ಕೇರಳ, ತಮಿಳುನಾಡಿನ ಕೆಲಭಾಗ ಹಾಗೂ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

    ಬೆಂಗಳೂರಿನಲ್ಲೂ ಮಳೆ: ಚಂಡಮಾರುತದ ಎಫೆಕ್ಟ್ ನಿಂದಾಗಿ ಬೆಂಗಳೂರಿನ ಕೆಲವೆಡೆ ಇಂದು ಬೆಳಗ್ಗೆಯಿಂದಲೇ ತುಂತುರು ಮಳೆಯಾಗಿದೆ. ದಿನದ ಬಹುತೇಕ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆಯೇ ಮತ್ತೆ ತುಂತುರು ಮಳೆ ಶುರುವಾಗಿದೆ. ಯಶವಂತಪುರ, ಮಲ್ಲೇಶ್ವರಂ, ಜಾಲಹಳ್ಳಿ, ಕೆ.ಆರ್.ಸರ್ಕಲ್, ಕಾರ್ಪೊರೇಷನ್, ಶಾಂತಿನಗರ, ರಾಜರಾಜೇಶ್ವರಿ ನಗರ, ಸೇರಿದಂತೆ ಹಲವು ಕಡೆ ಮಳೆಯಾಗಿದೆ. ಮೋಡ ಕವಿದ ವಾತಾವರಣ, ತುಂತುರು ಮಳೆ ನಾಳೆಯೂ ಮುಂದುವರೆಯುವ ಸಾಧ್ಯತೆಯಿದೆ.