Tag: Crop Relief

  • ಬೆಳೆ ಪರಿಹಾರ ಆದಷ್ಟು ಬೇಗ ಕೊಡ್ತೀವಿ, ದುಡ್ಡಿಗೆ ಕೊರತೆ ಇಲ್ಲ: ಸಿಎಂ

    ಬೆಳೆ ಪರಿಹಾರ ಆದಷ್ಟು ಬೇಗ ಕೊಡ್ತೀವಿ, ದುಡ್ಡಿಗೆ ಕೊರತೆ ಇಲ್ಲ: ಸಿಎಂ

    ಧಾರವಾಡ: ಈ ಬಾರಿ ಅತಿಯಾದ ಮಳೆಯಿಂದ ರಾಜ್ಯದಾದ್ಯಂತ ಸಾಕಷ್ಟು ಬೆಳೆ ನಾಶವಾಗಿದ್ದು, ಈಗಾಗಲೇ ಜಂಟಿ ಸಮೀಕ್ಷೆ ಮಾಡಲು ಹೇಳಿದ್ದೇವೆ. ರೈತರಿಗೆ ಆದಷ್ಟು ಬೇಗ ಪರಿಹಾರ (Crop Relief) ಕೊಡುತ್ತೇವೆ. ದುಡ್ಡಿಗೆ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

    ಧಾರವಾಡದ (Dharwad) ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿಯಿಂದ ಶೀಘ್ರ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ ಎಂದು ಡಿಸಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಕಿ ಬಾನು ಮುಷ್ತಾಕ್‌ಗೆ ಹೈಕೋರ್ಟ್ ಸಿಗ್ನಲ್ – ವಾದ, ಪ್ರತಿವಾದ ಹೇಗಿತ್ತು?

    ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರ. ನಾಗರಿಕತೆ ಆರಂಭ ಆದ ಮೇಲೆ ಕೃಷಿಯನ್ನೇ ಮಾಡುತ್ತ ಬರಲಾಗಿದೆ. ಭಾರತದಲ್ಲಿ ಜನಸಂಖ್ಯೆ ಏರುತ್ತಿದೆ. ಇಡೀ ಜಗತ್ತಲ್ಲೇ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಚೀನಾ ಜನಸಂಖ್ಯೆಯಲ್ಲಿ ಮುಂದೆ ಇತ್ತು. ಈಗ ನಾವು ಅವರನ್ನು ಹಿಂದೆ ಹಾಕಿ ಮುಂದೆ ಬಂದಿದ್ದೇವೆ. ಇಷ್ಟೂ ಜನರಿಗೆ ಆಹಾರ ಹಾಕಬೇಕು. ದೇಶದಲ್ಲಿ ಹಸಿರು ಕ್ರಾಂತಿ ಆದ ಮೇಲೆ ಆಹಾರ ಭದ್ರತೆ ಬಂದಿದೆ. ಆಹಾರ ಉತ್ಪಾದನೆ ಈಗ ಆಗುತ್ತಿಲ್ಲ, ಅದು ಸ್ಥಗಿತ ಆಗಿದೆ. ಇದಕ್ಕೆ ಕಾರಣ ಮಣ್ಣಿನ ಫಲವತ್ತತೆ. ಇದನ್ನು ಕೃಷಿ ವಿವಿಯವರು ಗಮನಕ್ಕೆ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: Hassan Tragedy – ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ ನಿಶ್ಚಲಾನಂದನಾಥ ಶ್ರೀ

    ಜನಸAಖ್ಯೆ ಬೆಳೆದಂತೆ ಹೆಚ್ಚು ಆಹಾರ ಉತ್ಪಾದನೆ ಮಾಡಬೇಕು. ಸ್ವತಂತ್ರ ಬಂದಾಗ ಆಹಾರ ಉತ್ಪಾದನೆ ಇರಲಿಲ್ಲ, ಸ್ವಾವಲಂಬನೆ ಇತ್ತು. ಬೇರೆ ದೇಶದಿಂದ ಆಗ ಆಹಾರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ರಪ್ತು ಮಾಡುತ್ತಿದ್ದೇವೆ. ಜನಸಂಖ್ಯೆಗೆ ತಕ್ಕ ಆಹಾರ ಇರಬೇಕು. ಕೃಷಿ ವಿವಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಕೃಷಿಗೆ ಆದ್ಯತೆ ಕೊಟ್ಟಿದೆ. ಮುಂದೆಯೂ ಕೊಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ-ಬೆಳಗಾವಿ ನೇರ ರೈಲು ಯೋಜನೆ ವಿಳಂಬಕ್ಕೆ ರಾಜ್ಯ ಸರ್ಕಾರ, ಸಂತೋಷ್‌ ಲಾಡ್‌ ಕಾರಣ: ಸೋಮಣ್ಣ

    ನಮ್ಮ ರಾಜ್ಯ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಒಂದನೇ ಸ್ಥಾನದಲ್ಲಿದೆ. ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ನಮ್ಮ ರಾಜ್ಯದಲ್ಲಾಗುತ್ತಿದೆ. ಮುಂದೆ ನಂಬರ್ ಒನ್ ಸ್ಥಾನಕ್ಕೆ ನಾವು ಹೋಗಬೇಕು. ಒಂದೇ ಬೆಳೆ ಬೇಳೆಯುವಂತೆ ಆಗಬಾರದು. ತೋಟಗಾರಿಕೆ, ತರಕಾರಿ, ಭತ್ತ, ರಾಗಿ ಬೆಳೆಯಬೇಕು. ಬಹಳ ಜನರಿಗೆ ಈಗ ಮಧುಮೇಹ ಇದೆ. ಹೀಗಾಗಿ ಸಿರಿಧಾನ್ಯ ಬೆಳೆಯಲು ನಾವು ಸಬ್ಸಿಡಿ ಕೊಡುತ್ತಿದ್ದೇವೆ. ಹೆಚ್ಚು ಸಿರಿ ಧಾನ್ಯ ಬೆಳೆಯಬೇಕು. ಮನುಷ್ಯನಿಗೆ ಆಹಾರ ಪದ್ಧತಿಯಿಂದ ದೈಹಿಕ ಕಾಯಿಲೆ ಬರುತ್ತಿವೆ. ಕೃಷಿ ವಿಜ್ಞಾನಿಗಳು ಇದನ್ನ ಗಮನಕ್ಕೆ ತೆಗೆದುಕೊಳ್ಳಬೇಕು. ಅಕ್ಕಿ, ಗೋಧಿಯಲ್ಲಿ ಸಕ್ಕರೆ ಇದೆ. ಸಿರಿಧಾನ್ಯದಲ್ಲಿ ಸಕ್ಕರೆ ಕಡಿಮೆ ಇದೆ. ಹೀಗಾಗಿ ಅವುಗಳನ್ನು ಬೆಳೆಯಬೇಕು. ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕು. ಹೊಸ ತಳಿ ಬಂದ ಮೇಲೆ ಅವು ರೈತರಿಗೆ ತಲುಪಬೇಕು. ಲ್ಯಾಬ್ ಟು ಲ್ಯಾಂಡ್ ಆಗಬೇಕು ಮತ್ತು ಲ್ಯಾಂಡ್ ಟು ಲ್ಯಾಬ್ ಆಗಬೇಕು. ಇವತ್ತು ಮತ್ತು ನಿನ್ನೆ ಕೃಷಿ ಮೇಳಕ್ಕೆ 6 ಲಕ್ಷ ರೈತರು ಬಂದಿದ್ದಾರೆ. ನಾವು ಭಾಗವಹಿಸಿ ಹೇಳೋದು ಒಂದು ಭಾಗ. ಆದರೆ, ರೈತರು ಭಾಗವಹಿಸುವುದು ಮುಖ್ಯ. ಹೊಸ ತಳಿ, ಹೊಸ ಬೀಜ, ಹೊಸತು ಏನೆಲ್ಲಾ ಇದೆ ಎಂದು ತಿಳಿಯಬೇಕು. ಇದರಿಂದ ಸಮೃದ್ಧಿ ಆಗಲಿದೆ ಎಂದು ನುಡಿದರು. ಇದನ್ನೂ ಓದಿ: ಹಾಸನ ದುರಂತ – ಕಂಬನಿ ಮಿಡಿದ ಟ್ರಕ್ ಚಾಲಕನ ಗ್ರಾಮಸ್ಥರು

    ಹಿಂದೆ ಗ್ರಾಮಸೇವಕರು ಇದ್ದರು. ಈಗ ಅವರು ಕಡಿಮೆಯಾಗಿದ್ದಾರೆ. ಅವರು ರೋಗಕ್ಕೆ ಔಷಧಿ ಕೊಡುತ್ತಿದ್ದರು, ಈಗ ಅದು ಕಡಿಮೆಯಾಗಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿವಿ, ರೈತರ ನಡುವೆ ಸೇತುವೆ ನಿರ್ಮಾಣ ಮಾಡಬೇಕು. ನವಲಗುಂದದಲ್ಲಿ ಬೆಣ್ಣೆ ಹಳ್ಳ ಇದೆ. ಅದಕ್ಕೆ ಪ್ರವಾಹ ಬಂದಾಗ ರೈತರಿಗೆ ತೊಂದರೆ ಆಗುತ್ತಿದೆ. ಅದಕ್ಕಾಗಿ ನಮ್ಮ ಸರ್ಕಾರ 200 ಕೋಟಿ ಕೊಟ್ಟಿದೆ. ಟೆಂಡರ್ ಕೂಡ ಆಗಲಿದೆ ಎಂದರು. ಇದನ್ನೂ ಓದಿ: 14 ಸೈಟ್ ನುಂಗಿದ ನೀವು ನನಗೆ ಹೇಳಲು ಬರೋದು ಬೇಡ: ಸಿಎಂಗೆ ಪ್ರತಾಪ್‌ ತಿರುಗೇಟು

  • ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್

    ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ- ಅಶೋಕ್

    ಬೆಂಗಳೂರು: ಬೆಳೆ ಪರಿಹಾರದ ಮೊತ್ತವನ್ನು ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಅಪಾರ ಬೆಳೆ ಮತ್ತು ಆಸ್ತಿ ಹಾನಿ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಪ್ರವಾಸ ನಡೆಸಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ವಿತರಿಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

    ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ‘ಇಂದಿನವರೆಗೆ 3 ಲಕ್ಷ ರೈತರಿಗೆ 226.57 ಕೋಟಿ ಪರಿಹಾರ ವಿತರಿಸಿದ್ದೇವೆ. ಇಂದು 1.61 ರೈತರಿಗೆ 92.30 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟು 4.61 ರೈತರಿಗೆ 318.87 ಕೋಟಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಮಧ್ಯವರ್ತಿಗಳಿಗೆ ಯಾವುದೇ ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.

    ಈ ಹಿಂದೆ ಮೂರು ತಿಂಗಳಿಗೊಮ್ಮೆ ಬೆಳೆ ಪರಿಹಾರ ವಿತರಿಸಲಾಗುತ್ತಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡಿದ್ದು, ಎರಡು ಮೂರು ದಿನಕ್ಕೆ ಒಮ್ಮೆ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಕೇಂದ್ರಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ವರದಿ ಸಿದ್ಧಪಡಿಸುತ್ತಿದ್ದೇವೆ. ಬೆಳೆ ಪರಿಹಾರ ನೀಡಲು ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ರೈತರಿಗೆ ಅನುಕೂಲವಾಗಬೇಕು. ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದರು.

    ಸದ್ಯಕ್ಕಿಲ್ಲ ಲಾಕ್ ಡೌನ್
    ಲಾಕ್‍ಡೌನ್ ಕುರಿತು ಮಾತನಾಡಿದ ಅವರು, ಸದ್ಯಕ್ಕೆ ಲಾಕ್ ಡೌನ್ ಇಲ್ಲ. ರಾಜ್ಯದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ನಡೆಸಬೇಕು. ನಿರಂತರವಾಗಿ ಸರ್ಕಾರ ಕೋವಿಡ್ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ. ಹೊರದೇಶದಿಂದ ಬರುವವರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತೇವೆ. ಹೊರದೇಶಗಳ ಸ್ಥಿತಿ ಸಹ ನಮ್ಮ ಗಮನದಲ್ಲಿದೆ ಎಂದರು.

    ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸಾಕಷ್ಟು ಹಣ ಬಿಡುಗಡೆ ಮಾಡುತ್ತೇನೆ. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಸಾರ್ವಜನಿಕರು ಸಹಕರಿಸಬೇಕು. ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳುತ್ತದೆ. ಜನರು ಭಯ ಬಿಟ್ಟು ಜವಾಬ್ದಾರಿಯಿಂದ ಇರಬೇಕು ಎಂದು ಮನವಿ ಮಾಡಿದರು.

  • ಸರ್ಕಾರದ ಬೆಳೆಹಾನಿ ಪರಿಹಾರ ಅವೈಜ್ಞಾನಿಕ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ

    ಸರ್ಕಾರದ ಬೆಳೆಹಾನಿ ಪರಿಹಾರ ಅವೈಜ್ಞಾನಿಕ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಕೆ.ಕುಮಾರಸ್ವಾಮಿ

    ಹಾಸನ: ಸರ್ಕಾರ ರೈತರ ಬೆಳೆ ಹಾನಿಗೆ ನಿಗದಿ ಮಾಡಿರುವ ಬೆಲೆ ತೀರ ಅವೈಜ್ಞಾನಿಕವಾಗಿದ್ದು, ಅದರ ಪುನರ್ ವಿಮರ್ಶೆ ಆಗಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿ ಹಲವೆಡೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ರೈತರ ಕಷ್ಟ ಆಲಿಸಿದ ನಂತರ ಮಾತನಾಡಿದ ಅವರು, ಭಾರೀ ಗಾಳಿ ಮಳೆಯಿಂದ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ನಮ್ಮ ರೈತ ತೀರ ಸಂಕಷ್ಟಕ್ಕೆ ಒಳಗಾಗಿದ್ದಾನೆ. ಸರ್ಕಾರ ಬೆಳೆ ಹಾನಿಗೆ ಬೆಲೆ ನಿಗದಿ ಮಾಡಿರುವ ಕಾನೂನು ತೀರ ಅವೈಜ್ಞಾನಿಕವಾಗಿದ್ದು, ರೈತ ಉಳಿಯಬೇಕಾದರೆ ಅವನಿಗೆ ಏನು ಖರ್ಚಾಗಿರುತ್ತೆ ಅಷ್ಟು ಹಣ ಕೊಡಬೇಕು. ಬೆಲೆ ನಿಗದಿ ಪುನರ್ ವಿಮರ್ಶೆ ಆಗಬೇಕು ಎಂದಿದ್ದಾರೆ.

    ಈಗಿರುವ ಸರ್ಕಾರ ಯಾವ್ಯಾವುದೋ ರೂಪದಲ್ಲಿ ಅಧಿಕಾರ ಪಡೆದಿದ್ದು, ಅವರು ಜನರ ಬಳಿ ಬಂದು ಅವರಿಗಾಗಿರುವ ನಷ್ಟ ತುಂಬಬೇಕು. ಒಂದು ವೇಳೆ ಸರ್ಕಾರ ಪರಿಹಾರ ನೀಡಲು ತಡ ಮಾಡಿದ್ರೆ ರಾಜ್ಯ ಮಟ್ಟದಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ರೈತರು, ನಾವು ಬೆಳೆ ಹಾನಿಯಿಂದ ತೀರ ಸಂಕಷ್ಟಕ್ಕೆ ಗುರಿಯಾಗಿದ್ದು ಕಡೇ ಪಕ್ಷ ಸರ್ಕಾರ ನಾವು ಬೆಳೆ ಬೆಳೆಯಲು ಖರ್ಚು ಮಾಡಿದಷ್ಟು ಹಣವನ್ನಾದರೂ ಪರಿಹಾರದ ರೂಪದಲ್ಲಿ ನೀಡಬೇಕೆಂದು ಮನವಿ ಮಾಡಿದ್ದಾರೆ.

  • ಸರ್ಕಾರಿ ಜಮೀನಿನ ಹೆಸರಲ್ಲಿ ಬೆಳೆ ಪರಿಹಾರ ನೀಡಿದ ವಿಎ ಬಂಧನ

    ಸರ್ಕಾರಿ ಜಮೀನಿನ ಹೆಸರಲ್ಲಿ ಬೆಳೆ ಪರಿಹಾರ ನೀಡಿದ ವಿಎ ಬಂಧನ

    – ನೆರೆ ಪರಿವಾರದಲ್ಲೂ ಗ್ರಾಮಲೆಕ್ಕಾಧಿಕಾರಿ ತಾರತಮ್ಯ

    ಹಾವೇರಿ: ನೆರೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಬಂಧನ ಮಾಡಲಾಗಿದೆ.

    ಬಂಧಿತ ಗ್ರಾಮ ಲೆಕ್ಕಾಧಿಕಾರಿಯನ್ನು ವೆಂಕಟೇಶ ಮಡಿವಾಳರ(26) ಎಂದು ಗುರುತಿಸಲಾಗಿದೆ. ಸರ್ಕಾರಿ ಜಮೀನಿನ ಹೆಸರಿನಲ್ಲಿ ಬೆಳೆ ಪರಿಹಾರ ಹಂಚಿಕೆ ಮಾಡಿದ್ದ. ಅಲ್ಲದೆ ಬೆಳೆ ಪರಿಹಾರದ ಹಣವನ್ನು ಸ್ನೇಹಿತನ ಖಾತೆಗೆ ಜಮಾ ಆಗುವಂತೆ ಈ ಗ್ರಾಮ ಲೆಕ್ಕಾಧಿಕಾರಿ ಮಾಡಿದ್ದ ಎಂದು ಆರೋಪಿಸಲಾಗಿದೆ.

    ಅಲ್ಲದೆ ಆಗಸ್ಟ್ 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ರೈತರ ಅಪಾರ ಪ್ರಮಾಣದ ಬೆಳೆ ಹಾಳಾಗಿತ್ತು. ಇದರ ಬೆಳೆ ಪರಿಹಾರ ನೀಡುವಲ್ಲಿ ಸಹ ಗ್ರಾಮ ಲೆಕ್ಕಾಧಿಕಾರಿ ತಾರತಮ್ಯ ಮಾಡಿದ್ದ. ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಗ್ರಾಮ ಲೆಕ್ಕಾಧಿಕಾರಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ವಿಷ ಹಿಡಿದು ಡಿಸಿ ಮುಂದೆ ರೈತ ಕುಟುಂಬದ ಪ್ರತಿಭಟನೆ

    ವಿಷ ಹಿಡಿದು ಡಿಸಿ ಮುಂದೆ ರೈತ ಕುಟುಂಬದ ಪ್ರತಿಭಟನೆ

    ಚಿತ್ರದುರ್ಗ: ಬೆಳೆ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

    ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಹಾಮಳೆಯಿಂದಾಗಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೊಡು ಸೇತುವೆ ಒಡೆದು ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಇದರ ಪರಿಹಾರ ಮೊತ್ತವನ್ನು ಸರ್ಕಾರ ಇನ್ನೂ ನೀಡಿಲ್ಲ ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕಚೇರಿ ಬಳಿ ರೈತ ಚಿಕ್ಕಣ್ಣ ಕುಟುಂಬ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ್ ಅವರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿಗಳು ಬರುವವರೆಗೆ ಕಚೇರಿ ಮುಂಭಾಗ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.

    ಕಚೇರಿಗೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಅವರ ಟೇಬಲ್ ಮೇಲೆ ವಿಷದ ಬಾಟಲಿ ಇಟ್ಟು ಅಳಲು ತೋಡಿಕೊಂಡರು. ಮಹಾಮಳೆಗೆ 2 ಎಕರೆಯಲ್ಲಿ ಬೆಳೆದಿದ್ದ ಸುಮಾರು 50 ತೆಂಗಿನ ಮರಗಳು ಹಾನಿಯಾಗಿದ್ದು, ಬುಡಸಮೇತಕೊಚ್ಚಿ ಹೋಗಿವೆ. ಘಟನೆ ನಡೆದು ಒಂದೂವರೆ ತಿಂಗಳು ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಅಂತ ಕಣ್ಣೀರಿಟ್ಟರು. ಶೀಘ್ರದಲ್ಲೇ ಬೆಳೆ ಪರಿಹಾರ ಬಿಡುಗಡೆ ಮಾಡಿ ಇಲ್ಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಡಿಸಿಗೆ ಎಚ್ಚರಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, 5,900 ರೂ.ಗಳನ್ನು ತಾತ್ಕಲಿಕ ಪರಿಹಾರ ನೀಡಲಾಗಿದೆ. ಆದರೆ ರೈತರ ಮನವಿ ಮೇರೆಗೆ ಹೊಸದುರ್ಗ ತಹಶೀಲ್ದಾರ್ ಅವರಿಂದ ವರದಿ ಪಡೆದು ಹೆಚ್ಚಿನ ಪರಿಹಾರಕ್ಕಾಗಿ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಜಿಲ್ಲೆಯ ಹೊಸದುರ್ಗ ತಾಲೂಕಿನಾದ್ಯಂತ ಸುರಿದ ಮಹಾಮಳೆಯಿಂದಾಗಿ ಕೆಲ್ಲೊಡು ಸೇತುವೆ ಒಡೆದು ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ಲಕ್ಷಾಂತರ ರೂ. ಮೌಲ್ಯದ 40ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ ಫಲಕ್ಕೆ ಬಂದಿದ್ದ ಅಡಿಕೆ, ದಾಳಿಂಬೆ ಹಾಗು ಮೆಕ್ಕೆಜೋಳ ನೀರಲ್ಲಿ ಕೊಚ್ಚಿ ಹೋಗಿತ್ತು. ಇದರಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸಮಸ್ಯೆ ಆಲಿಸಲು ತಾಲೂಕಿಗೆ ಭೇಟಿ ನೀಡುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಭೇಟಿ ನೀಡಿಲ್ಲ. ಇತ್ತ ಜಿಲ್ಲಾಡಳಿತ ಸಹ ಬೆಳೆ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಿದ್ದು, ಕೇವಲ 5,949 ರೂ. ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದೆ. ಈ ಬಗ್ಗೆ ಹಲವು ಬಾರಿ ಶಾಸಕ ಗೂಳಿಹಟ್ಟಿಶೇಖರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಹೀಗಾಗಿ ರೈತರು ಪ್ರತಿಭಟನೆ ನಡೆಸಿದರು.

  • 1 ಲಕ್ಷ ರೂ. ಬೆಳೆ ಹಾನಿಗೆ 1,350 ರೂ. ಬಿಡುಗಡೆ- ಚೆಕ್ ನೋಡಿ ಕಂಗಾಲಾದ ರೈತ

    1 ಲಕ್ಷ ರೂ. ಬೆಳೆ ಹಾನಿಗೆ 1,350 ರೂ. ಬಿಡುಗಡೆ- ಚೆಕ್ ನೋಡಿ ಕಂಗಾಲಾದ ರೈತ

    ಮಂಡ್ಯ: 2.20 ಎಕರೆ ಬಾಳೆ ಬೆಳೆ ಹಾನಿಯಾಗಿದ್ದಕ್ಕೆ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವಿಜಯ ಹೊಸಹಳ್ಳಿ ಗ್ರಾಮದ ರೈತರೊಬ್ಬರಿಗೆ ಪರಿಹಾರದ ಹಣವೆಂದು ತಹಶೀಲ್ದಾರ್ 1,350 ರೂ. ಚೆಕ್ ನೀಡಿದ್ದಾರೆ.

    40 ವರ್ಷದ ರೈತ ಸಿದ್ದಲಿಂಗೇಗೌಡರು 2 ಎಕರೆ 20 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆ ಬೆಳೆದಿದ್ದರು. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಒಂದು ಎಕರೆ ಬೆಳೆ ಸಂಪೂರ್ಣ ನಾಶವಾಗಿತ್ತು. 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಾಳೆ ಬೆಳೆ ನಾಶವಾಗಿತ್ತು. ಅಂದು ಸಂಬಂಧಪಟ್ಟ ಅಧಿಕಾರಿಗಳು ನಾಶವಾಗಿದ್ದ ಬೆಳೆ ವೀಕ್ಷಣೆ ಮಾಡಿ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದರು.

    ಪ್ರಕೃತಿ ವಿಕೋಪದಿಂದ ನಾಶವಾಗಿದ್ದ ಬೆಳೆಗೆ ಕೇವಲ 1,350 ರೂಪಾಯಿಗಳನ್ನು ಪರಿಹಾರದ ಹಣ ಎಂದು ಕೆ.ಆರ್.ಪೇಟೆ ತಹಶೀಲ್ದಾರ್ ನೀಡಿದ್ದಾರೆ. ಪರಿಹಾರ ಹಣದ ಚೆಕ್ ನೋಡಿ ರೈತ ಸಿದ್ದಲಿಂಗೇಗೌಡ ದಿಕ್ಕು ತೋಚದಂತಾಗಿದ್ದಾರೆ.

    ನಾನು ಸಾಲ ಮಾಡಿ ಬೆಳೆದಿದ್ದ ಬೆಳೆ ಪ್ರಕೃತಿ ವಿಕೋಪದಿಂದ ನಾಶವಾಗಿದೆ. ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಕೇವಲ 1,350 ರೂ.ಗಳ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ ನನಗೆ ನೀಡಿದ್ದ ಚೆಕ್ ತಹಶೀಲ್ದಾರರಿಗೆ ಮರಳಿ ನೀಡಿದ್ದೇನೆ. ಹೆಚ್ಚಿನ ಪರಿಹಾರಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.