Tag: Covid Care Center

  • ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ

    ಸಚಿವ ಮಾಧುಸ್ವಾಮಿ ಸ್ವಕ್ಷೇತ್ರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ

    ತುಮಕೂರು: ಸಚಿವ ಮಾಧುಸ್ವಾಮಿ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕಿನ ಮೇಲನಹಳ್ಳಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.

    ಈ ಅವ್ಯವಸ್ಥೆ ಖಂಡಿಸಿ ಕೋವಿಡ್ ಸೋಂಕಿತರು ಕೇಂದ್ರದಿಂದ ಹೊರಗೆ ಬಂದು ಪ್ರತಿಭಟಿಸಿದ್ದಾರೆ. ಇಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇಂದ್ರ ತೆರೆಯಲಾಗಿದ್ದು, ಸುಮಾರು 80 ಸೋಂಕಿತರಿದ್ದಾರೆ. ಸರಿಯಾದ ಊಟ ತಿಂಡಿ ಇವರಿಗೆ ಸಿಗುತ್ತಿಲ್ಲ. ಚಿಕಿತ್ಸೆಯಂತೂ ಇಲ್ಲವೇ ಇಲ್ಲ, ನರ್ಸ್, ಡಾಕ್ಟರ್ ಗಳು ಕೂಗಿ ಕರೆದರೂ ಬರುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಬಹುತೇಕ ವೃದ್ಧರೇ ಇಲ್ಲಿ ಇರೋದ್ರಿಂದ ನಮ್ಮನ್ನು ಸಾಯಿಸಲು ಇಲ್ಲಿಗೆ ತಂದು ಕೂಡಿ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಇನ್ನೊಂದೆಡೆ ಮಧುಗಿರಿ ಪಟ್ಟಣದ ಸಮಾಜ ಕಲ್ಯಾಣ ಇಲಾಯ ಹಾಸ್ಟೆಲ್ ನಲ್ಲಿ ತೆರೆದ ಕೋವಿಡ್ ಕೇರ್ ಸೆಂಟರಲ್ಲೂ ಅವ್ಯವಸ್ಥೆ ಉಂಟಾಗಿದೆ. ಇದರಿಂದ ಬೇಸತ್ತ ಸೋಂಕಿತ ವೃದ್ಧ ರಂಗಪ್ಪ ಕೇರ್ ಸೆಂಟರ್ ನಿಂದ ತಪ್ಪಿಸಿಕೊಂಡು ಬಂದು ಪಟ್ಟಣ ತುಂಬಾ ಓಡಾಡಿದ್ದಾರೆ. ಸೋಂಕಿತ ವೃದ್ಧನ ಓಡಾಟ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

  • ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲು ಅಧಿಕಾರಿಗಳ ಹರಸಾಹಸ

    ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲು ಅಧಿಕಾರಿಗಳ ಹರಸಾಹಸ

    – ದೇವದುರ್ಗದ ಜಾಲಹಳ್ಳಿಯಲ್ಲಿ 105 ಜನಕ್ಕೆ ಸೋಂಕು

    ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇವದುರ್ಗದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಆದರೆ ಸೋಂಕಿತರು ಮಾತ್ರ ಕೋವಿಡ್ ಆರೈಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಸೋಂಕಿತರು, ಮನೆಯಲ್ಲೇ ಉಳಿಯುತ್ತಿದ್ದಾರೆ. ಹೀಗಾಗಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆತರಲು ದೇವದುರ್ಗ ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

    ಎರಡನೇ ಅಲೆಯಲ್ಲಿ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮವೊಂದರಲ್ಲೇ 105 ಜನಕ್ಕೆ ಕೊರೊನಾ ಸೋಂಕು ಧೃಡವಾಗಿದೆ. ಇದುವರೆಗೆ 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಜಾಲಹಳ್ಳಿ ಗ್ರಾಮದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ದೇವದುರ್ಗ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸೋಂಕಿತರನ್ನ ಕರೆತರುವ ಯತ್ನ ನಡೆದಿದೆ. ಸೋಂಕಿತರ ಮನೆ ಮನೆಗೆ ಹೋಗಿ ತಹಶೀಲ್ದಾರ್ ಕರೆದರೂ ಕೇರ್ ಸೆಂಟರ್ ಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ.

    ಕೇವಲ ದೇವದುರ್ಗ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ತೆರೆಯಲಾದ ಒಟ್ಟು 7 ಕೋವಿಡ್ ಸೆಂಟರ್ ಗಳಿಗೆ ದಾಖಲಾಗಲು ಸೋಂಕಿತರು ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

  • ಕೊರೊನಾ ಸೋಂಕಿತರ ಊಟಕ್ಕಾಗಿ ಚಪಾತಿ ಮಾಡಿದ ಗವಿ ಶ್ರೀ

    ಕೊರೊನಾ ಸೋಂಕಿತರ ಊಟಕ್ಕಾಗಿ ಚಪಾತಿ ಮಾಡಿದ ಗವಿ ಶ್ರೀ

    ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಆರೈಕೆಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಗವಿಮಠದ ಶ್ರೀಗಳು, ಇದೀಗ ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ತಾವೇ ಚಪಾತಿ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬಿ ಗಮನ ಸೆಳೆದಿದ್ದಾರೆ.

    ಗವಿಸಿದ್ದೇಶ್ವರ ಸ್ವಾಮೀಜಿ ಸರಳತೆಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಠದ ಯಾವ ಕೆಲಸವನ್ನೂ ಇತರೆ ಜನರಿಗೆ ಹೇಳದೇ ತಾವೇ ಮುಂದೆ ನಿಂತು ಮಾಡಿದ್ದಾರೆ. ಇದನ್ನು ನೋಡುವ ಭಕ್ತಗಣವು ಶ್ರೀಗಳೇ ಕೆಲಸಕ್ಕೆ ಸಜ್ಜಾಗಿದ್ದಾರೆ, ನಾವೇಕೆ ಸುಮ್ಮನೆ ನಿಲ್ಲಬೇಕೆಂದು ಕಾಯಕದಲ್ಲಿ ತೊಡಗುತ್ತಿದ್ದಾರೆ. ಹೀಗೆ ಕಾಯಕಕ್ಕೆ ಇತರರಿಗೆ ಪ್ರೇರಣೆಯಾಗುವ ಶ್ರೀಗಳು, ಇದೀಗ ತಾವೇ ಚಪಾತಿ ಮಾಡಿದ್ದಾರೆ.

    ಇತ್ತೀಚೆಗೆ ಗವಿಮಠದ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಮಠದಿಂದಲೇ ಅಡುಗೆಯನ್ನು ಸಿದ್ಧಪಡಿಸಿ ಪ್ಯಾಕೆಟ್ ರೂಪದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಈ ವೇಳೆ ದಾಸೋಹ ಭವನದ ಮಹಿಳೆಯರಿಗೆ ಸ್ಫೂರ್ತಿ ತುಂಬಲು ತಾವೇ ದಾಸೋಹದ ಅಡುಗೆ ಕೋಣೆಗೆ ತೆರಳಿ ಅವರೊಟ್ಟಿಗೆ ಕುಳಿತು ಚಪಾತಿ ಮಾಡಿದ್ದಾರೆ.

    ಅಭಿನವ ಶ್ರೀಗಳು ಈ ಹಿಂದೆಯೂ ಜಾತ್ರೆಯ ಸಂದರ್ಭದಲ್ಲಿ ಮಠದ ಆವರಣದಲ್ಲಿ ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ಸೇರಿದಂತೆ ಇತರೆ ಕಾರ್ಯದಲ್ಲಿ ತೊಡಗಿ ಸ್ಫೂರ್ತಿಯಾಗಿದ್ದರು. ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಮಿಕರೊಂದಿಗೆ ಸರಳತೆಯಿಂದ ಬೆರೆತು ಕಸ ಗುಡಿಸಿದ್ದರು. ಇದೀಗ ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ಚಪಾತಿ ಮಾಡುವ ಮೂಲಕ ಬಾಣಸಿಗರಿಗೆ ಕೋವಿಡ್ ವೇಳೆ ಸ್ಫೂರ್ತಿ ತುಂಬಿದ್ದಾರೆ.

  • ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನ ಜನಪ್ರತಿನಿಧಿಗಳಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಆಕ್ಸಿಜನ್, ಐಸಿಯು ಹಾಗೂ ವೆಂಟಿಲೇಟರ್ ಸಹಿತ 400 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಸದ್ಯದಲ್ಲೇ ಆರಂಭಿಸುತ್ತಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ದೂರ ದೃಷ್ಟಿಯಿಂದ ಸುಮಾರು 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ನಡೆಯುತ್ತಿದೆ. ಕೇವಲ 40 ದಿನಗಳಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದು ಕೋವಿಡ್ ಕೇರ್ ಸೆಂಟರ್ ಅಲ್ಲ, ಆಸ್ಪತ್ರೆ. 200 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಒಟ್ಟು 400 ಹಾಸಿಗೆಗಳ ಆಸ್ಪತ್ರೆ 75 ಐಸಿಯು ಬೆಡ್, 300 ಆಕ್ಸಿಜನ್ ಬೆಡ್, 25-30 ಹೈ ಫ್ಲೋ ಆಕ್ಸಿಜನ್ ಬೆಡ್ ಒಳಗೊಂಡಿದೆ. ಅಲ್ಲದೆ ನಮ್ಮ ಕ್ಷೇತ್ರದಲ್ಲಿ 10 ಸಾವಿರ ಲೀಟರ್ ಆಕ್ಸಿಜನ್ ಸ್ಟೋರ್ ಮಾಡಿಕೊಳ್ಳುವ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಮುನಿರತ್ನ ಅವರು ವಿವರಿಸಿದರು.

    ಈ ಬಾರಿ ಅತೀ ಹೆಚ್ಚು ಸಾವು ಸಂಭವಿಸಿರುವುದು ನೋವು ತಂದಿದೆ. 5 ಲಕ್ಷ ಮತದಾರರಿರುವ ನಮ್ಮ ಆರ್.ಆರ್ ನಗರ ಕ್ಷೇತ್ರದಲ್ಲಿ ಸಹ ಹೆಚ್ಚು ಸಾವು ಸಂಭವಿಸಿವೆ. ಹೀಗಾಗಿ ಆರ್.ಆರ್.ನಗರದಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಗಂಭೀರ ಸ್ವರೂಪದ ಸೋಂಕಿತರಿಗೆ ಇದರಿಂದ ಸಹಾಯವಾಗಲಿದ್ದು, ಐಸಿಯು ಬೆಡ್ ಸಮಸ್ಯೆ ನೀಗಲಿದೆ ಎಂದರು.

    ಕೊರೊನಾ ಮೊದಲ ಅಲೆ ಮಾರ್ಚ್‍ನಲ್ಲಿ ಆರಂಭವಾಗಿ, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಇಳಿಕೆಯಾಗಿತ್ತು. ಈ ವರ್ಷ ಸಹ ಮಾರ್ಚ್‍ನಲ್ಲಿ 2ನೇ ಅಲೆ ಆರಂಭವಾಗಿದೆ. ಮಾರ್ಚ್, ಏಪ್ರಿಲ್‍ನಲ್ಲಿ ಅತೀ ಹೆಚ್ಚು ಸಾವು ಸಂಭವಿಸಿವೆ. ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಾಯಕರು, ಉಸ್ತುವಾರಿ ಸಚಿವರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಾವು ಸಂಭವಿಸಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

    ಮುನಿರತ್ನ ಅವರ ಕಾರ್ಯವೈಖರಿಗೆ ವಾರ್ ರೂಂ ಮುಖ್ಯಸ್ಥರೂ ಆಗಿರುವ ಸಚಿವ ಅರವಿಂದ ಲಿಂಬಾವಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲ ಜನಪ್ರತಿನಿಧಿಗಳು ಕೈ ಜೋಡಿಸಿ ಕೊರೊನಾ ತೊಲಗಿಸಬೇಕಿದೆ. ಕೊರೊನಾ ಯುದ್ಧದಲ್ಲಿ ಮುನಿರತ್ನ ಕೈಜೋಡಿಸಿರುವುದು ಖುಷಿ ತಂದಿದೆ. ಆಕ್ಸಿಜನ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಚಿಕಿತ್ಸಾ ಕೇಂದ್ರವನ್ನು ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ ಎಂದಿದ್ದಾರೆ.

  • ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಮಹದೇವಪುರದ ವಿವಿಧೆಡೆ ವಾರ್ ರೂಮ್, ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

    ಬೆಂಗಳೂರು: ಮಹದೇವಪುರ ವಲಯದ ವಿವಿಧ ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜಿಂಗ್ ಕೇಂದ್ರಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಅವರು, ಕೋವಿಡ್ ಸೋಂಕಿತರು ಪಾಸಿಟಿವ್ ಬಂದಿದ್ದರೂ ಹೊರಗೆ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಸೋಂಕಿತರು ಮನೆಯೊಳಗೆ ಇರಬೇಕು, ಹೊರಗೆ ತಿರುಗುವುದರಿಂದ ಇತರರಿಗೂ ಸೋಂಕು ಹಬ್ಬುವ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೊರಗೆ ಸುತ್ತುತ್ತಿರುವ ಸೋಂಕಿತರನ್ನು ಪತ್ತೆ ಮಾಡಲು ಪೊಲೀಸರ ನೆರವು ಪಡೆಯಲಾಗುವುದು ಎಂದು ತಿಳಿಸಿದರು.

    ಒಂದೇ ಶೌಚಾಲಯ ಇರುವ ಮನೆಗಳಲ್ಲಿ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿ ಇರುವುದು ಕಷ್ಟ, ಅಂತಹವರಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಸೋಂಕಿತರು ಟ್ರೈಯಾಜಿಂಗ್ ಕೇಂದ್ರಕ್ಕೆ ಬಂದ ನಂತರ ಪರಿಶೀಲನೆ ಮಾಡಿ, ವೈದ್ಯಕೀಯ ಚಿಕಿತ್ಸೆಗೆ ಅನುಗುಣವಾಗಿ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗುವುದು ಎಂದರು.

    ಮೊದಲು ಹಾಲನಾಯಕನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್ ಉದ್ಘಾಟನೆ ಮಾಡಲಾಯಿತು, ನಂತರ ಹಾಡೋಸಿದ್ದಾಪುರದ ಐವಿರೋಜ್ ರೆಸಾರ್, ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು. ಮಂಡೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೋವಿಡ್ ವಾರ್ ರೂಮ್, ಬಿದರಹಳ್ಳಿ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಹತ್ತಿರ ಟ್ರೈಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಾಡಲಾಯಿತು.

  • ಪ್ರತಿ ಜಿಲ್ಲೆಯಲ್ಲೂ ಚಿಕ್ಕ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

    ಪ್ರತಿ ಜಿಲ್ಲೆಯಲ್ಲೂ ಚಿಕ್ಕ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

    – ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಮಾಡಬೇಕು

    ಚಿಕ್ಕೋಡಿ: ಕೊರೊನಾ ಎರಡನೇ ಅಲೆಯ ನಡುವೆ ಚಿಕ್ಕ ಮಕ್ಕಳಿಗೂ ಮಹಾಮಾರಿ ಹಬ್ಬುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಹರಡಬಹುದು ಎಂಬ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಹೀಗಾಗಿ ಮಕ್ಕಳ ಕೊವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳನ್ನು ಗುರುತಿಸಲಾಗಿದೆ. ನಮ್ಮ ಇಲಾಖೆಯ ವಿಶೇಷ ಮಕ್ಕಳ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ವತಿಯಿಂದ ಈಗಾಗಲೇ ಅಧಿಕಾರಿ ಮೋಹನರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಸಹ ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದರು.

    ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂದೆ ತಾಯಿಗೆ ಪಾಸಿಟಿವ್ ಬಂದು ತೀರಿ ಹೋಗಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ಇಬ್ಬರೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮಕ್ಕಳ ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸೌಕರ್ಯ ಮಾಡಲಾಗುವುದು. ಶಾಶ್ವತಗಾಗಿ ಆ ಮಕ್ಕಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾನು ಸಹ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದನೆಯನ್ನ ನೀಡಿದ್ದಾರೆ ಎಂದು ಹೇಳಿದರು.

    ಆ ಮಕ್ಕಳನ್ನ ನೋಡಲು ಯಾರಾದರೂ ಮುಂದೆ ಬಂದರೆ ಸರ್ಕಾರದ ವತಿಯಿಂದ ಅವರಿಗೆ ನಾವು ಎಲ್ಲ ನೆರವು ನೀಡುತ್ತೇವೆ ಎಂದ ಅವರು ಮಕ್ಕಳ ದತ್ತು ವಿಚಾರದಲ್ಲಿ ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಕೆಲವು ಫೇಕ್ ಸುದ್ದಿಗಳು ಹರಿದಾಡುತ್ತಿವೆ. ಮಕ್ಕಳ ದತ್ತು ವಿಚಾರವಾಗಿ ಕೆಲವು ಫೇಕ್ ನಂಬರ್ ಹರಿಬಿಡಲಾಗಿದೆ. ಅಂಥ ನಂಬರ್‍ಗಳಿಗೆ ಕರೆ ಮಾಡಿ ಯಾರೂ ಸಹ ಮೋಸ ಹೋಗಬಾರದು. ಇಲಾಖೆಯ ಅಧಿಕೃತ ಹೆಲ್ಪ್ ಲೈನ್ 1098 ಗೆ ಕರೆ ಮಾಡಿ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಬೇಕಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆಯವರು ಒತ್ತಾಯಿಸಿದ್ದಾರೆ.

  • ಬೆಂಗಳೂರಿನ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್- ಸೇನಾಧಿಕಾರಿಗಳ ಜೊತೆ ಡಿಸಿಎಂ ಚರ್ಚೆ

    ಬೆಂಗಳೂರಿನ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್- ಸೇನಾಧಿಕಾರಿಗಳ ಜೊತೆ ಡಿಸಿಎಂ ಚರ್ಚೆ

    ಬೆಂಗಳೂರು: ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯ ಕಮಾಂಡ್ ಆಸ್ಪತ್ರೆ ಬಳಿ ಇರುವ ಸೇನೆಗೆ ಸೇರಿದ ಎಎಸ್‍ಸಿ ಕೇಂದ್ರ ಮತ್ತು ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಬಗ್ಗೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸೇನಾಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

    ಮಂಗಳವಾರ ಎಎಸ್‍ಸಿ ಕಮಾಂಡರ್ ಲೆಫ್ಟಿನೆಂಟ್ ಬಿ.ಕೆ.ರೆಸ್‍ಪಾಸ್ ವಾಲ್ ಅವರ ಜೊತೆ ಚರ್ಚಿಸಿದ ಡಿಸಿಎಂ, ಎಎಸ್‍ಸಿ ಸೆಂಟರ್‍ನಲ್ಲಿ ಕನಿಷ್ಠ 500 ಬೆಡ್‍ಗಳ ಕೋವಿಡ್ ಕೇಂದ್ರ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಈ ಕೋವಿಡ್ ಕೇರ್‍ಗೆ ಅಗತ್ಯ ಮೂಲಸೌಕರ್ಯವನ್ನು ಸರ್ಕಾರ ಒದಗಿಸಲಿದೆ. ಸೇನೆ ವತಿಯಿಂದ ವೈದ್ಯರು, ಸಿಬ್ಬಂದಿ ಮತ್ತು ಅರೆವೈದ್ಯ ಸಿಬ್ಬಂದಿಯನ್ನು ಒದಗಿಸುವಂತೆ ಕೋರಿದರು.

    ಎರಡನೇ ಮತ್ತು ಮೂರನೇ ಅಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಅವಕಾಶ ನೀಡಬೇಕು. ವಿವಿಧ ಹಂತಗಳಲ್ಲಿ ಇಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಬಹುದು ಎಂದರು.

    ಇದಕ್ಕೆ ಬಿ.ಕೆ.ರೆಸ್‍ಪಾಸ್ ವಾಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೋವಿಡ್ ವಿರುದ್ಧ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಸೇನೆಯೂ ಹೆಗಲು ಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಎಸ್‍ಸಿ ಕೇಂದ್ರದಲ್ಲಿ ಕೋವಿಡ್ ಚಿಕಿತ್ಸೆಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಲೆಫ್ಟಿನೆಂಟ್ ಬಿ.ಕೆ.ರೆಸ್‍ಪಾಸ್ ವಾಲ್ ಅವರು ಡಿಸಿಎಂ ಅವರಿಗೆ ಮಾಹಿತಿ ನೀಡಿ, ಸೌಲಭ್ಯಗಳನ್ನು ಸಹ ತೋರಿಸಿದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಡಿಸಿಎಂ ಕಾರ್ಯದರ್ಶಿ ಪ್ರದೀಪ್ ಪ್ರಭಾಕರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಸರ್ಕಾರದ ಸಲಹೆಗಾರ ಜಿ.ಎಂ.ಬಾಬು ಹಾಗೂ ಇತರರು ಇದ್ದರು.

  • ಸರ್ಕಾರಿ ಕೇರ್ ಸೆಂಟರ್‌ಗೆ 50 ಲಕ್ಷ ಸ್ವಂತ ಹಣದಿಂದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ನೀಡಿದ ಸವದಿ

    ಸರ್ಕಾರಿ ಕೇರ್ ಸೆಂಟರ್‌ಗೆ 50 ಲಕ್ಷ ಸ್ವಂತ ಹಣದಿಂದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರ ನೀಡಿದ ಸವದಿ

    ಚಿಕ್ಕೋಡಿ/ಬೆಳಗಾವಿ: ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ಸ್ವಂತ ಹಣದಿಂದ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲದಲ್ಲಿ ತಾಲೂಕಾಡಳಿತ ನಿರ್ಮಿಸಿರುವ ಕೊವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳು ಹಾಗೂ ಸಲಕರಣೆಗಳನ್ನು ನೀಡಿದ್ದಾರೆ. ತಲಾ 85 ಸಾವಿರ ರೂ.ಗಳ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಅಥಣಿ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ ಮೂಲಕ ಹಸ್ತಾಂತರಿಸಿದ್ದಾರೆ.

    ಲಕ್ಷ್ಮಣ ಸವದಿ ಅವರು ತಂದೆ, ತಾಯಿ ಹೆಸರಿನಲ್ಲಿರುವ ಸತ್ಯ ಸಂಗಮ ಪ್ರತಿಷ್ಠಾನದ ಮೂಲಕ ಈ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ನೀಡಿದ್ದಾರೆ. ಈ ಮೂಲಕ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೋವಿಡ್ ಕೇರ್ ಆಸ್ಪತ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಕೋವಿಡ್ ನಿಂದ ಸಾವನ್ನಪ್ಪಿದ ಅವರ ಸಹೋದರ ಹಾಗೂ ಸಹೋದರನ ಪುತ್ರನನ್ನು ನೆನೆದು ಭಾವುಕರಾದರು. ಕೋವಿಡ್ ಕೇರ್ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ, ತಾಲೂಕು ಆರೋಗ್ಯಾಧಿಕಾರಿ ಬಸವರಾಜ್ ಕಾಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್

    ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್

    ಹಾವೇರಿ: ಜಿಲ್ಲೆಯಲ್ಲಿ ಕೊರೊನಾ ಅರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರ ಸಂಖ್ಯೆಯೂ ಸಹ ಹೆಚ್ಚಾಗುತ್ತಿವೆ. ಆದರೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಜಿಲ್ಲಾಉಸ್ತುವಾರಿ ಬಸವರಾಜ ಬೊಮ್ಮಾಯಿ ಮನೆಯ ಆವರಣದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ 50 ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ.

    ಉಸಿರಾಟದ ಸಮಸ್ಯೆಯಿಂದ ಬಳಲುವ ಕೋವಿಡ್ ಸೋಂಕಿತರ ಪ್ರಾಣ ಕಾಪಾಡುವ 25 ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಗೆ ಬಸವರಾಜ್ ಬೊಮ್ಮಾಯಿ ಹಸ್ತಾಂತರಿಸಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಕೋವಿಡ್ ಸ್ಥಿತಿಗತಿ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಮಾಡಲಾದ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ಶಿಗ್ಗಾಂವಿ ತಾಲೂಕು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಉಸಿರಾಟದ ಸಮಸ್ಯೆ ಆಗುತ್ತಿದ್ದಂತೆಯೇ ರೋಗಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಲು ಆರಂಭವಾಗುತ್ತದೆ. ಆದ್ದರಿಂದ ಅಂಥವರಿಗೆ ತಕ್ಷಣ ಆಕ್ಸಿಜನ್ ನೀಡಬೇಕಾದ ಅಗತ್ಯ ಎದುರಾಗುತ್ತದೆ. ಅಂಥವರಿಗಾಗಿಯೇ ಆಕ್ಸಿಜನ್ ಕನ್ಸೆಂಟ್ರೇಟರ್‌ಗಳನ್ನು ವಿತರಿಸಲಾಗುತ್ತಿದೆ. ವೈದ್ಯರು ಸಮಯೋಚಿತವಾಗಿ ಸೋಂಕಿತರಿಗೆ ಆಕ್ಸಿಜನ್ ನೀಡುವ ಮೂಲಕ ಅವರ ಜೀವ ರಕ್ಷಣೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಸವಣೂರಿನ ವೈದ್ಯಾಧಿಕಾರಿಗಳಾದ ಹಿರೇಗೌಡರ, ರಾಜಶೇಖರ ಮೂಲಿಮನಿ ಉಪಸ್ಥಿತರಾಗಿದ್ದರು. ಜಿಲ್ಲಾ ಪಂಚಾಯತಿಯ ಸಿ.ಇ.ಓ ಮಹ್ಮದ್ ರೋಷನ್, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಸೇರಿದಂತೆ ಶಿಗ್ಗಾಂವ- ಸವಣೂರಿನ ತಹಶೀಲ್ದಾರರು ಸಚಿವರ ಜೊತೆಗಿದ್ದರು.

  • ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

    ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

    ಶಿವಮೊಗ್ಗ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರೀಕ್ಷೆಗೂ ಮೀರಿ ಕೇಸುಗಳು ಬರುತ್ತಿವೆ. ನಾವೇನು ಮಾಡೋಕೆ ಆಗುತ್ತೆ? ಆದರೂ, ನಾವು ಎಲ್ಲಾ ಪ್ರಯತ್ನಗಳನ್ನು ನಡೆಸಿ, ಕೋವಿಡ್ ಸೋಂಕಿತರಿಗೆ ಸೌಕರ್ಯ ಒದಗಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಕೋವಿಡ್ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಗತ್ಯವಾಗಿರುವ ಆಕ್ಸಿಜನ್ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ, 32 ಕೆ.ಎಲ್, ಸರ್ಕಾರಿ ಆಸ್ಪತ್ರೆಗಳಲ್ಲಿ 19 ಕೆ.ಎಲ್ ಒಟ್ಟು 51 ಕೆ.ಎಲ್ ನಷ್ಟು ಆಕ್ಸಿಜನ್ ಲಭ್ಯವಿದೆ. ಜೊತೆಗೆ 42 ಡ್ಯೂರಾ ಸಿಲಿಂಡರ್ ಗಳು ಮತ್ತು 582 ಜಂಬೋ ಸಿಲಿಂಡರ್ ಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ. ಅದರಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿ 552, ಖಾಸಗಿ ಆಸ್ಪತ್ರೆಗಳಲ್ಲಿ 383 ಸೇರಿದಂತೆ, ಒಟ್ಟು, 935 ರೆಮಿಡಿಸ್ವಿರ್ ಇಂಜೆಕ್ಷನ್ ಲಭ್ಯವಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

    ಅದರಂತೆ, ಕೊರೊನಾ ನಿರ್ವಹಣೆಗೆ ಜಿಲ್ಲಾಡಳಿತದ ವತಿಯಿಂದ ಗರಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 776 ಬೆಡ್, ಖಾಸಗಿ ಆಸ್ಪತ್ರೆಗಳಲ್ಲಿ 999 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 216 ಐಸಿಯು ಬೆಡ್ ಹಾಗೂ 944 ಆಕ್ಸಿಜನ್ ಬೆಡ್‍ಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 78 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 32 ವೆಂಟಿಲೇಟರ್‍ಗಳಿವೆ. ಪ್ರಸ್ತುತ ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

    ಅದೇ ರೀತಿ, ಜಿಲ್ಲೆಯಲ್ಲಿ ಇದುವರೆಗೆ 2,67,060 ಡೋಸ್ ಕೋವಿಶೀಲ್ಡ್ ನೀಡಲಾಗಿದ್ದು, 2540 ಡೋಸ್ ಉಳಿಕೆ ಇದೆ. ಕೋವಾಕ್ಸಿನ್ 20,460 ಡೋಸ್ ನೀಡಲಾಗಿದ್ದು, ಉಳಿಕೆ ಇರುವುದಿಲ್ಲ. 2,41,578 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 54,358 ಮಂದಿಗೆ ಎರಡನೇ ಡೋಸ್ ಪೂರ್ಣಗೊಳಿಸಲಾಗಿದೆ. 88 ಸಕ್ರಿಯ ಕಂಟೈನ್‍ಮೆಂಟ್ ಜೋನ್‍ಗಳಿವೆ. ಮಾಸ್ಕ್ ಧರಿಸದ 9207 ಪ್ರಕರಣಗಳಲ್ಲಿ 12,76,850 ರೂ. ದಂಡ ವಿಧಿಸಲಾಗಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದರು.