Tag: cover

  • ಅಜ್ಜಿ ಕೈಗೆ ಕಲ್ಲಿನ ಕವರ್ ಕೊಟ್ಟು ಚಿನ್ನದ ಸರ ಕದ್ದ ಕಳ್ಳರು

    ಅಜ್ಜಿ ಕೈಗೆ ಕಲ್ಲಿನ ಕವರ್ ಕೊಟ್ಟು ಚಿನ್ನದ ಸರ ಕದ್ದ ಕಳ್ಳರು

    ಚಿಕ್ಕಬಳ್ಳಾಪುರ: ವೃದ್ಧೆಯ ಕೈಗೆ ಕಲ್ಲು ಕೊಟ್ಟು ಚಿನ್ನದ ಸರ ಕಳವು ಮಾಡಿ ಕಳ್ಳರು ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

    ಆಂದಹಾಗೆ ಚಿನವಂಡನಹಳ್ಳಿ ಗ್ರಾಮದ ರತ್ನಮ್ಮ(55) ಸರ ಕಳೆದುಕೊಂಡ ಮಹಿಳೆ. ದಿನಸಿ ಪದಾರ್ಥ ಹಾಗೂ ಮಟನ್ ಖರೀದಿಗೆ ಅಂತ ವಿಜಯಪುರ ಪಟ್ಟಣಕ್ಕೆ ಅಜ್ಜಿ ಬಂದಿದ್ದು, ಕೋಲಾರ ಮಾರ್ಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಮುಂದೆ ಸರಗಳ್ಳರಿದ್ದಾರೆ. ಮೈ ಮೇಲಿರೋ ಸರ ಬಿಚ್ಚಿ ಕವರ್ ನಲ್ಲಿ ಹಾಕಿಕೊಳ್ಳಿ ಅಂತ ಅಜ್ಜಿಯನ್ನ ನಂಬಿಸಿ ಸರ ಬಿಚ್ಚಿಸಿದ್ದಾರೆ. ಈ ವೇಳೆ ಅಜ್ಜಿಯನ್ನು ಯಾಮಾರಿಸಿ ಸರ ಇದ್ದ ಕವರ್‌ನನ್ನು ತಾವು ತೆಗೆದುಕೊಂಡು, ಕಲ್ಲಿಟ್ಟಿದ್ದ ಕವರ್‌ನನ್ನು ಅಜ್ಜಿಯ ಕೈಗೆ ಕೊಟ್ಟು ಕಳ್ಳರು ಪರಾರಿಯಾಗಿದ್ದಾರೆ.

    ಸರಿಸುಮಾರು 35 ಗ್ರಾಂ ತೂಕದ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡು ಅಜ್ಜಿ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ರತ್ನಮ್ಮನವರು, ನನ್ನನ್ನು ಯಾಮಾರಿಸಿ ನನ್ನ ಬಳಿ ಇದ್ದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಜೀವನ ನಡೆಸುವವಳು, ಕಷ್ಟ ಪಟ್ಟು ಸಂಪಾದನೆ ಮಾಡಿ ಸರ ಮಾಡಿಸಿಕೊಂಡಿದ್ದೆ. ಈಗ ಸರ ಕಳುವಾಗಿದೆ. ನಾನು ಏನು ಮಾಡಲಿ ಎಂದು ಕಣ್ಣೀರಿಟ್ಟಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ರಂಗಪ್ಪ ಅಜ್ಜಿ ಜೊತೆ ಮಾತನಾಡಿ ಘಟನಾ ಸ್ಥಳ ಪರೀಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಡಿವೈಎಸ್‍ಪಿ ರಂಗಪ್ಪ, ದೊಡ್ಡಬಳ್ಳಾಪುರ ಹಾಗೂ ವಿಜಯಪುರ ವ್ಯಾಪ್ತಿಯಲ್ಲಿ ಸರ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಜಾಗೃತರಾಗಬೇಕು ಬೆಲೆ ಬಾಳುವ ಒಡವೆಗಳನ್ನು ಧರಿಸುವುದು ಮುಖ್ಯವಲ್ಲ. ಅದನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯ. ನಾನಾ ರೀತಿಯಲ್ಲಿ ಮಾರುವೇಷ ಧರಿಸಿ ಕಳ್ಳರು ತಮ್ಮ ಕೈಚಳಕಗಳನ್ನು ತೋರುತ್ತಿದ್ದಾರೆ. ಜನತೆ ಜಾಗೃತೆಯಿಂದ ಇರಬೇಕು ಮತ್ತು ಸಾರ್ವಜನಿಕರ ಸಹಕಾರ ಸಹಾಯ ಬಹಳ ಮುಖ್ಯವಾಗಿ ಬೇಕು. ಇಂತಹ ಯಾವುದೇ ಘಟನೆಗಳು ಕಂಡು ಬಂದಲ್ಲಿ ಅನುಮಾನಸ್ಪದವಾಗಿ ಯಾರಾದರೂ ಹೊಸಬರು ಓಡಾಡುವುದು ಕಂಡು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಡಿವೈಎಸ್ಪಿ ರಂಗಪ್ಪ ಮನವಿ ಮಾಡಿದ್ದಾರೆ. ಇದನ್ನೂ ಓದಿ:ನಕಲಿ ಕೀ ಬಳಸಿ ನಿರ್ಮಾಪಕನ ಮನೆ ದೋಚಿದ್ದ ಕಳ್ಳರ ಬಂಧನ

  • ಭಾರೀ ಚರ್ಚೆಗೆ ಗ್ರಾಸವಾಗಿದೆ ಬಿಎಸ್‍ವೈ ಮನೆಯಲ್ಲಿ ಸ್ವಾಮೀಜಿಗಳಿಗೆ ನೀಡಿದ್ದ ಕವರ್..!

    ಭಾರೀ ಚರ್ಚೆಗೆ ಗ್ರಾಸವಾಗಿದೆ ಬಿಎಸ್‍ವೈ ಮನೆಯಲ್ಲಿ ಸ್ವಾಮೀಜಿಗಳಿಗೆ ನೀಡಿದ್ದ ಕವರ್..!

    ಬೆಂಗಳೂರು: ಸಿಎಂ ಯಡಿಯೂರಪ್ಪನವರನ್ನ ಯಾವುದೇ ಕಾರಣಕ್ಕೆ ಬದಲಾವಣೆ ಮಾಡಬಾರದು ಎಂದು ರಾಜ್ಯದ ವೀರಶೈವ ಮಠಾಧೀಶರು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ ನಿನ್ನೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಈ ವೇಳೆ ಮಠಾಧೀಶರಿಗೆ ನೀಡಿದ್ದ ಕವರ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

    ಬಿಎಸ್‍ವೈ ಪುತ್ರ ಬಿ.ವೈ ವಿಜಯೇಂದ್ರ ಅವರ ಆಪ್ತ ಹಾಗೂ ಕೆ ಆರ್ ಡಿ ಸಿ ಎಲ್ ಅಧ್ಯಕ್ಷ ರುದ್ರೇಶ್, ಸಿಎಂ ಸ್ವಾಮೀಜಿಗಳ ಜೊತೆಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ನೆರೆದಿದ್ದ ಎಲ್ಲ ಸ್ವಾಮೀಜಿಗಳಿಗೆ ಒಂದೊಂದು ಸೀಲ್ಡ್ ಕವರ್ ನೀಡಿದ್ದಾರೆ. ಇದೀಗ ಈ ಕವರ್ ಸಂಗತಿ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದೆ. ಆ ಕವರ್‍ನಲ್ಲಿ ಏನಿತ್ತು.? ಎಂಬ ಚರ್ಚೆ ಸಾರ್ವಜನಿಕ ಕ್ಷೇತ್ರದಲ್ಲಿ ಆರಂಭವಾಗಿದೆ. ಈ ಹಿಂದೆಯೂ ಸ್ವಾಮೀಜಿಗಳಿಗೆ ಕವರ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ಆದ್ರೆ ಈ ಬಾರಿ ಕವರ್ ಹಂಚಿರುವ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.

    ಬಿಜೆಪಿ ಮುಖಂಡ ರುದ್ರೇಶ್ ಅವರು ಸ್ವಾಮೀಜಿಗಳಿಗೆ ಕವರ್ ಹಂಚಿಕೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವಾಮೀಜಿಗಳಿಗೆ ಜೋಳಿಗೆಯಲ್ಲಿ ಗೌರವ ಸಮರ್ಪಣೆ ವಾಡಿಕೆಯಂತೆ ನಡೆದುಕೊಂಡು ಬಂದಿದ್ದರೂ ಸಿಎಂ ಬದಲಾವಣೆಯ ಚರ್ಚಾ ಸಮಯದಲ್ಲಿ ವೀರಶೈವ ಮಠಾಧೀಶರು ಒಕ್ಕೊರಲಿನಿಂದ ಬೆಂಬಲ ನೀಡಿರುವ ವಿಷಯ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕವರ್ ವಿಷಯ ಕೂಡ ಅನೇಕ ರೀತಿಯ ಅರ್ಥಗಳನ್ನ ಕಲ್ಪಿಸಿಕೊಡುವಂತಿದೆ. ಇದನ್ನೂ ಓದಿ:‘ನನ್ನವರೇ ನನಗೆ ಶತ್ರುವಾದ್ರು..’ – ಆಪ್ತರ ಬಳಿ ಬಿಎಸ್‍ವೈ ಭಾವುಕ..!

    ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆಗೆ ಹೈಕಮಾಂಡ್ ನ ಸೂಚನೆ ಹಿನ್ನೆಲೆ, ರಾಜ್ಯ ಬಿಜೆಪಿಯಲ್ಲಿ ತೀವ್ರ ಸಂಚಲನ ಉಂಟಾಗಿದ್ದು, ಇದೀಗ ವೀರಶೈವ ಮಠಾಧೀಶರು ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಬಿ.ಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂದು ಒತ್ತಡ ಹೇರಲಾಗುತ್ತಿದೆ. ನಿನ್ನೆ ಸಿಎಂ ಅಧಿಕೃತ ನಿವಾಸ, ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನ ಭೇಟಿ ಮಾಡಿದ್ದ ರಾಜ್ಯದ ವಿವಿಧ ಮಠದ ಸ್ವಾಮೀಜಿಗಳು, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ. ಇದನ್ನೂ ಓದಿ: ಈಗ ಬಿಟ್ಟುಬಿಡಿ, ಮುಂದಿನ ವಾರ ಸಿಗೋಣ – ಕೈ ಮುಗಿದು ತೆರಳಿದ್ರು ಅರುಣ್ ಸಿಂಗ್

  • ಮೊಬೈಲ್ ಕವರಿನೊಳಗಡೆ ತುಳಸಿ ದಳ ಇಟ್ಟರೆ ರೇಡಿಯೇಷನ್ ಕಮ್ಮಿಯಾಗುತ್ತೆ – ಬಾಬಾ ರಾಮ್‍ದೇವ್

    ಮೊಬೈಲ್ ಕವರಿನೊಳಗಡೆ ತುಳಸಿ ದಳ ಇಟ್ಟರೆ ರೇಡಿಯೇಷನ್ ಕಮ್ಮಿಯಾಗುತ್ತೆ – ಬಾಬಾ ರಾಮ್‍ದೇವ್

    ಉಡುಪಿ: ಮೊಬೈಲ್ ಬ್ಯಾಕ್ ಕವರಿನ ಒಳಗಡೆ ಒಂದು ತುಳಸಿ ದಳ ಇಡುವುದರಿಂದ ರೇಡಿಯೇಶನ್ ದುಷ್ಪರಿಣಾಮ ತಪ್ಪಿಸಬಹುದು ಎಂದು ಯೋಗ ಗುರು ಬಾಬಾ ರಾಮ್ ದೇವ್ ಸಲಹೆ ನಿಡಿದ್ದಾರೆ.

    ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಪೀಠ ಟ್ರಸ್ಟ್ ಹರಿದ್ವಾರದ ನೇತೃತ್ವದಲ್ಲಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅವರಿಂದ ನ.16ರಿಂದ 20ರವರೆಗೆ ಬೃಹತ್ ಯೋಗ ಶಿಬಿರಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಶನಿವಾರ ಚಾಲನೆ ನೀಡಿದ ಬಳಿಕ ಪ್ರಾತ್ಯಕ್ಷಿಕೆ ಮಾಡಿದರು.

    ನಮ್ಮ ದೇಹಕ್ಕೆ ಅತೀ ಅಪಾಯಕಾರಿಯಾದ ಮೊಬೈಲ್ ಗಳ ವಿಕಿರಣಗಳ ದುಷ್ಪರಿಣಾಮಗಳನ್ನು ತಡೆಯಲು ಮೊಬೈಲಿನ ಹಿಂಬದಿಯ ಕವರಿನ ಒಳಗೆ ಒಂದು ತುಳಸಿ ದಳವನ್ನು ಇಡಿ. ತುಳಸಿ ಎಲೆಗೆ ಮೊಬೈಲ್ ಮಾತ್ರವಲ್ಲದೇ ನಾವು ಬಳಸುವ ಯಾವುದೇ ಇಲೆಕ್ಟ್ರಾನಿಕ್ ಉತ್ಪನ್ನಗಳ ವಿಕಿರಣ ದುಷ್ಪರಿಣಾಮಗಳನ್ನು ತಡೆಯುವ ಅದ್ಭುತ ಶಕ್ತಿ ಇದೆ. ಪ್ರತೀ ಮನೆ ಕಚೇರಿಗಳಲ್ಲಿ ಸಾಧ್ಯವಾದಷ್ಟು ತುಳಸಿ ಸಸಿಗಳನ್ನು ಬೆಳೆಸಿರಿ ಎಂದು ಬಾಬಾ ರಾಮ್ ದೇವ್ ಕರೆ ನೀಡಿದರು.

    ಬಾಬಾ ರಾಮ್ ದೇವ್ ಅವರು ಉಡುಪಿಯ ಜನತೆಗೆ ಇಂದಿನಿಂದ ಯೋಗ ಶಿಬಿರ ಆಯೋಜಿಸಿದ್ದು, ಮುಂಜಾನೆಯಿಂದಲೇ ಸಾವಿರಾರು ಜನ ಯೋಗ ಶಿಬಿರದಲ್ಲಿ ಪಾಲ್ಗೊಂಡರು. ಬೆಳಗ್ಗೆ ಮೂರು ಗಂಟೆಗಳ ಕಾಲ ಯೋಗ ಶಿಬಿರ ನಡೆಸಿಕೊಟ್ಟ ಯೋಗ ಗುರು ಬಾಬಾ ರಾಮ್ ದೇವ್, ಇಂದಿನಿಂದ ಐದು ದಿನ ಉಡುಪಿಯಲ್ಲಿ ಯೋಗ ಮತ್ತು ಧ್ಯಾನ ಶಿಬಿರ ನಡೆಸಿ ಕೊಡಲಿದ್ದಾರೆ.

    ಉಡುಪಿ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಬೃಹತ್ ವೇದಿಕೆ ಹಾಕಿ ಶಿಬಿರ, ಧ್ಯಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ವಾರ ಹಲವು ಕಾರ್ಯಕ್ರಮದಲ್ಲಿ ಬಾಬಾ ಭಾಗವಹಿಸುತ್ತಾರೆ. ಹಲವು ಕ್ಲಿಷ್ಟಕರ ಯೋಗ ಭಂಗಿಯನ್ನು ಹೇಳಿಕೊಡುತ್ತಿದ್ದಾರೆ.