Tag: Corona Vaccine

  • ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು ನಿರ್ಧಾರ: ಡಿಸಿಎಂ

    ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು ನಿರ್ಧಾರ: ಡಿಸಿಎಂ

    ಬೆಂಗಳೂರು: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಿಬ್ಬಂದಿಯ ಲಸಿಕೀಕರಣ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಸಾಧ್ಯವಾದಷ್ಟು ಇದೇ 7ರೊಳಗೆ ಮುಗಿಸಲು ಆದ್ಯತೆ ನೀಡಬೇಕು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಲ್ಲ ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದರು.

    ಕೋವಿಡ್ ಲಸಿಕೆಯನ್ನು ಹೆಚ್ಚು ತ್ವರಿತವಾಗಿ ಕೊಡಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಗುರುವಾರ ವೀಡಿಯೋ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು. ರಾಜ್ಯದಲ್ಲಿ ಇನ್ನೆರಡು ತಿಂಗಳ ಒಳಗಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರಿಗೆ ಲಸಿಕೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಭೌತಿಕ ತರಗತಿಗಳು ಆರಂಭಕ್ಕೆ ಮುನ್ನವೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಹಾಗೂ ನಿತ್ಯವೂ ಪೂರೈಕೆಯಾಗುವ ಲಸಿಕೆಯನ್ನು ಸಂಬಂಧಿಸಿದ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಪಡೆದುಕೊಳ್ಳಬೇಕು ಎಂದರು.

    ಯಾವುದೇ ಕಾರಣಕ್ಕೂ ಶೈಕ್ಷಣಿಕ ಚಟುವಟಿಕೆ ನಿಲ್ಲಬಾರದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಬಾರದು. ಈ ಹಿನ್ನೆಲೆಯಲ್ಲಿ ಲಸಿಕೆಯೇ ಪರಿಹಾರ. ಇದನ್ನು ಎಲ್ಲ ಕುಲಪತಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಡಿಸಿಎಂ ಹೇಳಿದರು. ಎಲ್ಲ ವಿವಿಗಳಲ್ಲಿ ಲಸಿಕೀಕರಣ ಮುಗಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಕುರಿತು ನಿರ್ದರಿಸಲಾಗುವುದು., ಈಗ ನಡೆಯುತ್ತಿರುವ ಆನ್‍ಲೈನ್ ತರಗತಿಗಳು ಅಬಾಧಿತ ಎಂದರು.

    ಪದವಿ ವಿದ್ಯಾರ್ಥಿಗಳಿಗೆ ಹೆಲ್ಪ್ ಲೈನ್
    ವಿದ್ಯಾರ್ಥಿಗಳಿಗೆ ಈಗಾಗಲೇ ಡಿಜಿಟಲ್ ವೇದಿಕೆಗಳ ಮೂಲಕ ಎಲ್ಲ ಮಾಹಿತಿ ಸಿಗುತ್ತಿದ್ದಾಗ್ಯೂ ಅವರ ಮತ್ತಷ್ಟು ಅನುಕೂಲಕ್ಕಾಗಿ ಹೆಲ್ಪ್ ಲೈನ್ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಡಿಸಿಎಂ ಹೇಳಿದರು. ಇದನ್ನೂ ಓದಿ: ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತ ನಡುವೆ ಸಂಘರ್ಷ

    ಹೆಲ್ಪ್‍ಲೈನ್ ವ್ಯವಸ್ಥೆಯನ್ನು ಆಯಾ ವಿವಿ ವ್ಯಾಪ್ತಿಯಲ್ಲಿ ಮಾಡಿಕೊಳ್ಳಬೇಕು. ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸರ್ಕಾರ ನೀಡುತ್ತದೆ. ಕಾಲ್ ಸೆಂಟರ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆಗುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಅತ್ಯುತ್ತಮ ಉಪಕ್ರಮ ಆಗಲಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು. ಇದನ್ನೂ ಓದಿ: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು: ಸುಧಾಕರ್ ಕಿಡಿ

    ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಪ್ರೊ.ಕರಿಸಿದ್ದಪ್ಪ ಸೇರಿದಂತೆ ಮೈಸೂರು, ಮಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದ ವಿವಿಗಳ ಕುಲಪತಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಬಿಸಿಯೂಟ ಆಹಾರ ಧಾನ್ಯಕ್ಕೆ ಕಳ್ಳರ ಕಾಟ – ಶಾಲೆಯಲ್ಲಿಯೇ ವಾಸ್ತವ್ಯ ಮಾಡಿ ರೇಷನ್ ಕಾಪಾಡಿದ ಹೆಡ್ ಮಾಸ್ಟರ್

  • ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು: ಸುಧಾಕರ್ ಕಿಡಿ

    ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು: ಸುಧಾಕರ್ ಕಿಡಿ

    ಬೆಂಗಳೂರು: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಅಂತ ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಆಕ್ರೋಶ ಹೊರ ಹಾಕಿದ್ದಾರೆ. ಲಸಿಕೆ ಕೊರತೆ ಬಗ್ಗೆ ಆರೋಗ್ಯ ಸಚಿವರು ಸುಳ್ಳು ಹೇಳ್ತಿದ್ದಾರೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸುಧಾಕರ್, ಕಾಂಗ್ರೆಸ್ ಮೊದಲಿನಿಂದಲೂ ರಾಜಕೀಯ ಮಾಡ್ತಾ ಇದೆ. ಈಗ ಲಸಿಕೆ ವಿಚಾರದಲ್ಲೂ ಇದನ್ನೆ ಮಾಡುತ್ತಿದೆ ಅಂತ ಕಿಡಿಕಾರಿದರು.

    ರಾಜ್ಯದಲ್ಲಿ ಈವರೆಗೂ 2 ಕೋಟಿ 28 ಲಕ್ಷ ಲಸಿಕೆ ನೀಡಲಾಗಿದೆ. ಲಸಿಕೆ ಕೊರತೆ ಇದ್ದರೆ ಇಷ್ಟು ಲಸಿಕೆ ಕೊಡಲು ಆಗುತ್ತಿತ್ತಾ? ಇದರಲ್ಲಿ ನಾವು ಸುಳ್ಳು ಹೇಳೋಕೆ ಆಗುತ್ತಾ? ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಕಾಂಗ್ರೆಸ್ ನವರು ಮೊದಲಿನಿಂದಲೂ ಅನಗತ್ಯ ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡ್ತಿದ್ದಾರೆ. ಕಾಂಗ್ರೆಸ್ ಅವರು ಲಸಿಕೆಯಲ್ಲಿ ರಾಜಕೀಯ ಮಾಡಬಾರದು ಅಂತ ತಿರುಗೇಟು ಕೊಟ್ರು. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

    ಒಂದೆರೆಡು ದಿನ ರಾಜ್ಯಕ್ಕೆ ಕಡಿಮೆ ಲಸಿಕೆ ಬಂದಿರಬಹುದು. ಆದ್ರೆ ಲಸಿಕೆ ಇಲ್ಲ ಅಂತ ಹೇಳೋದು ಸರಿಯಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಕೊಟ್ಟಿರೋದು ಭಾರತ ದೇಶ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು. ನಾನು ಸೋಮವಾರ ದೆಹಲಿಗೆ ತೆರಳುತ್ತಿದ್ದೇನೆ. ಲಸಿಕೆ ಹೆಚ್ಚಳ ಮಾಡಲು ಕೇಂದ್ರಕ್ಕೆ ಮನವಿ ಮಾಡ್ತೀವಿ ಅಂತ ಇದೇ ವೇಳೆ ಸಚಿವರು ತಿಳಿಸಿದರು.

  • ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಪ್ರವೇಶಾತಿ ಇಲ್ಲ: ಯಾದಗಿರಿ ಡಿಸಿ

    ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಮುಂದಿನ ವರ್ಷ ಪ್ರವೇಶಾತಿ ಇಲ್ಲ: ಯಾದಗಿರಿ ಡಿಸಿ

    ಯಾದಗಿರಿ: 18 ವರ್ಷ ಮೇಲ್ಪಟ್ಟ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆಯಲೇಬೇಕು. ಇಲ್ಲವಾದರೆ ಮುಂದಿನ ವರ್ಷಕ್ಕೆ ಪ್ರವೇಶಾತಿ ನೀಡಬೇಡಿ ಎಂದು ಕಾಲೇಜುಗಳ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಈ ಬಗ್ಗೆ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ 21,342 ವಿದ್ಯಾರ್ಥಿಗಳು, 1,153 ಬೋಧಕ, 505 ಬೋಧಕೇತರ ಸಿಬ್ಬಂದಿ ಇದ್ದು, ಪ್ರತಿ ಕಾಲೇಜಿನಲ್ಲಿ ಶೇಕಡಾ ನೂರರಷ್ಟು ಲಸಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ವಾಟ್ಸಪ್ ಸೇರಿದಂತೆ ಇನ್ನಿತರ ವಿಧಾನದಿಂದ ಸಂಪರ್ಕಿಸಿ ಲಸಿಕೆ ಪಡೆಯಲು ತಿಳಿಸಿಬೇಕು ಎಂದು ಕಾಲೇಜು ಆಡಳಿತ ಮಂಡಳಿಗಳಿಗೆ ಡಿಸಿ ತಿಳಿಸಿದ್ದಾರೆ.

    ಮುಂದಿನ ಮೂರು ದಿನದೊಳಗೆ ಲಸಿಕಾರಣದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ನೆರವಾಗಬೇಕು. ಈ ಹಿಂದೆ ಶಿಕ್ಷಣ ಇಲಾಖೆಯವರು ಹಲವಾರು ಬಾರಿ ನಮಗೆ ನೆರವಾಗಿದ್ದು, ಅದೇ ರೀತಿಯಾಗಿ ಲಸಿಕಕಾರಣದಲ್ಲಿಯೂ ಸಹ ಸಹಕರಿಸಬೇಕು. ಹಳ್ಳಿಯ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಸಾರಿಗೆ ವ್ಯವಸ್ಥೆಯನ್ನು ಸಹ ಆಯಾ ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತದ ವತಿಯಿಂದ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಇದೇ ವೇಳೆ ಭರವಸೆ ನೀಡಿದರು.

  • ಲಸಿಕೆ ಕೊರತೆ- ಖಾಸಗಿ ಆಸ್ಪತ್ರೆಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ

    ಲಸಿಕೆ ಕೊರತೆ- ಖಾಸಗಿ ಆಸ್ಪತ್ರೆಗಳಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ

    ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಕೊರೊನಾ ಲಸಿಕೆ ಅಭಾವ ಕಾಡುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ವ್ಯಾಕ್ಸಿನ್ ಕೊಳ್ಳಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಇಷ್ಟು ದಿನ ಖಾಸಗಿ ಆಸ್ಪತ್ರೆಗಳು ಉತ್ಪಾದನಾ ಕಂಪನಿಗಳಿಂದ ನೇರವಾಗಿ ಕೊರೊನಾ ಲಸಿಕೆ ಕೊಳ್ಳಬಹುದಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಖಾಸಗಿ ಆಸ್ಪತ್ರೆಗಳು ಸಹ ಕೋ-ವಿನ್ ಆಪ್‍ನಲ್ಲಿಯೇ ಆರ್ಡರ್ ಮಾಡಬೇಕು ಎಂದು ಹೊಸ ನಿಯಮದಲ್ಲಿ ತಿಳಿಸಿದೆ. ಕೊರೊನಾ ಲಸಿಕೆಯ ಸಂಗ್ರಹ ಹಾಗೂ ಲಾಭದ ಕುರಿತು ಪರಿಶೀಲಿಸುವ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಹೊಸ ಮಾರ್ಗಸೂಚಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಉತ್ಪಾದಕರಿಂದ ಕೊಳ್ಳುವಂತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕೋ-ವಿನ್ ಪೋರ್ಟಲ್‍ನಲ್ಲಿ ವ್ಯಾಕ್ಸಿನ್ ಆರ್ಡರ್ ಮಾಡಬೇಕು. ಅಲ್ಲದೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ ಪೇಮೆಂಟ್ ಮಾಡಬೇಕು. ಜುಲೈ 1 ರಿಂದ ವ್ಯಾಕ್ಸಿನ್ ಖರೀದಿಯ ಹೊಸ ನಿಯಮಗಳು ಜಾರಿಗೆ ಬರಲಿವೆ.

    ಉತ್ಪಾದಕರ ಕಡೆಯಿಂದ ನೇರವಾಗಿ ಖರೀದಿಸಿದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳು ಕಡಿಮೆ ಪ್ರಮಾಣದಲ್ಲಿ ಬಳಸುತ್ತಿವೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡುತ್ತಿಲ್ಲ, ಸ್ಟಾಕ್ ಉಳಿಯುತ್ತಿದೆ ಎಂಬ ಕುರಿತು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಹೊಸ ನಿಯಮದ ಪ್ರಕಾರ, ಲಸಿಕೆ ಖರೀದಿಸಿದ ಬಳಿಕ ಸಂಗ್ರಹಣೆ ಹಾಗೂ ಲಸಿಕೆ ಹಾಕಿರುವುದು ಎಲ್ಲದರ ಕುರಿತು ಲೆಕ್ಕ ನೀಡಬೇಕಾಗುತ್ತದೆ. ನಿರ್ದಿಷ್ಟ ತಿಂಗಳಲ್ಲಿ ಅಥವಾ ವಾರದಲ್ಲಿ ಎಷ್ಟು ಲಸಿಕೆ ಖರ್ಚಾಗಿದೆ ಎಂಬುದನ್ನು ಖಾಸಗಿ ಆಸ್ಪತ್ರೆಗಳು ತಿಳಿಸಬೇಕಾಗುತ್ತದೆ. ಇದರಿಂದಾಗಿ ಹೆಚ್ಚು ದಿನಗಳ ಕಾಲ ಸ್ಟಾಕ್ ಇಟ್ಟುಕೊಳ್ಳುವುದು ತಪ್ಪುತ್ತದೆ. ಇದರಿಂದ ಸರ್ಕಾರಕ್ಕೆ ಹೆಚ್ಚು ಲಸಿಕೆ ಸಿಗುತ್ತದೆ.

    ಪ್ರಸ್ತುತ ಖಾಸಗಿ ಆಸ್ಪತ್ರೆಗಳು ಶೇ.25ರಷ್ಟು ಲಸಿಕೆಗಳನ್ನು ನೇರವಾಗಿ ಉತ್ಪಾದಕರಿಂದ ಖರೀದಿಸಬಹುದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಲಸಿಕೆಗೆ ನಿಗದಿಪಡಿಸಿರುವ ಬೆಲೆಯ ಮೇಲೆ 150 ರೂ. ಸೇವಾ ಶುಲ್ಕವನ್ನು ವಿಧಿಸಲಾಗಿದ್ದು, ಇದನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.

  • ಲಸಿಕಾ ಕೇಂದ್ರದಲ್ಲಿ ಗಳ ಗಳನೇ ಅತ್ತ ವಿದ್ಯಾರ್ಥಿನಿ

    ಲಸಿಕಾ ಕೇಂದ್ರದಲ್ಲಿ ಗಳ ಗಳನೇ ಅತ್ತ ವಿದ್ಯಾರ್ಥಿನಿ

    ಧಾರವಾಡ: ಕೊರೊನಾ ಲಸಿಕಾ ಕೇಂದ್ರದಲ್ಲಿ ಬೆಳಗ್ಗೆಯಿಂದ ಸರದಿಯಲ್ಲಿ ನಿಂತು ಸುಸ್ತಾಗಿದ್ದ ವಿದ್ಯಾರ್ಥಿನಿ ಕಣ್ಣೀರಿಟ್ಟ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

    ಧಾರವಾಡ ಜಿಲ್ಲಾ ಆಸ್ಪತ್ರೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ವಿದ್ಯಾರ್ಥಿನಿ ವಿದ್ಯಾ ಬೆಳಗ್ಗೆಯಿಂದ ನಿಂತರೂ ವ್ಯಾಕ್ಸಿನ್ ಆರಂಭಿಸದ ಹಿನ್ನೆಲೆ ಕಣ್ಣಿರು ಹಾಕಿದ್ದಾಳೆ. ವ್ಯಾಕ್ಸಿನ್ ಬೇಗ ಆರಂಭ ಮಾಡದ ಹಿನ್ನೆಲೆ ಸ್ಥಳದಲ್ಲಿದ್ದ ಜನರು ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದರು. ಈ ವೇಳೆ ವಿದ್ಯಾ ಗಳಗಳನೇ ಅಳಲು ಆರಂಭಿಸಿದಳು.

    ಬಿಎ ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿರುವ ಈ ವಿದ್ಯಾರ್ಥಿನಿ, ಮಂಗಳವಾರದ ಸಹ ವ್ಯಾಕ್ಸಿನ್ ಗಾಗಿ ಬಂದು ಹೋಗಿದ್ದಳು. ಆದರೆ ಇವತ್ತೂ ವ್ಯಾಕ್ಸಿನ್ ಸಿಗಲ್ಲ ಎಂಬ ಭಯದಿಂದ ಆಕೆ ಕಣ್ಣೀರು ಹಾಕಿದ್ದಾಗಿ ವಿದ್ಯಾ ಜೊತೆ ಇದ್ದ ಗೆಳತಿಯರು ಹೇಳಿದ್ದಾರೆ.

    ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೆಳಗ್ಗೆ 6 ಗಂಟೆಯಿಂದಲೇ ಲಸಿಕೆಗಾಗಿ ಸರದಿಯಲ್ಲಿ ನಿಂತಿದ್ದರು. ಆದರೆ ವ್ಯಾಕ್ಸಿನ್ ಕೊಡಬೇಕಾದ ಸಿಬ್ಬಂದಿ ತಮಗೆ ಬೇಕಾದವರಿಗೆ ಆಸ್ಪತ್ರೆ ಒಳಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕೆಲವರು ಆರೋಪಿಸಿದರು. ಅಲ್ಲದೇ ಆಸ್ಪತ್ರೆ ಸಿಬ್ಬಂದಿ ಜೊತೆ ಗಲಾಟೆಗೆ ಇಳಿದ ಜನ, ಆಸ್ಪತ್ರೆ ಒಳಗೆ ಕೂಡಾ ನುಗ್ಗಿದರು. ಕೆಲವರು ನಿನ್ನೆ ಕೂಡಾ ವ್ಯಾಕ್ಸಿನ್ ಗಾಗಿ ಬಂದು ವಾಪಸ್ ಆಗಿದ್ದಾರೆ. ಆದರೆ ನಿನ್ನೆ ವ್ಯಾಕ್ಸಿನ್ ಸಿಗದ ಹಿನ್ನೆಲೆ ಇವತ್ತು ಬಂದು ಸಾಲಿನಲ್ಲಿ ನಿಂತಿದ್ದರು. ಇದನ್ನೂ ಓದಿ: ಡ್ರಿಂಕ್ಸ್ ಮಾಡ್ತೀನಿ, ಸತ್ರೆ ಇಲ್ಲೇ ಸಾಯ್ತೀನಿ – ಲಸಿಕೆ ಪಡೆಯಲು ಕುಡುಕನ ಹಿಂದೇಟು

    ಇತ್ತ ಬೆಂಗಳೂರಿನಲ್ಲಿಯೂ ಕೊರೊನಾ ಲಸಿಕೆಗೆ ಹಾಹಾಕಾರ ಶುರುವಾಗಿದೆ. ನಗರದ ಬಹುತೇಕ ಲಸಿಕಾ ಕೇಂದ್ರಗಳ ಮುಂದೆ ನೋ ಸ್ಟಾಕ್ ಬೋರ್ಡ್ ಕಂಡು ಬಂದಿದೆ. ಇತ್ತ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಇದನ್ನೂ ಓದಿ: ವ್ಯಾಕ್ಸಿನ್ ಸೆಂಟರ್ ಮುಂದೆ No Stock ಬೋರ್ಡ್- ಮತ್ತೆ ಲಸಿಕೆಗಾಗಿ ಹಾಹಾಕಾರ

  • ಡ್ರಿಂಕ್ಸ್ ಮಾಡ್ತೀನಿ, ಸತ್ರೆ ಇಲ್ಲೇ ಸಾಯ್ತೀನಿ – ಲಸಿಕೆ ಪಡೆಯಲು ಕುಡುಕನ ಹಿಂದೇಟು

    ಡ್ರಿಂಕ್ಸ್ ಮಾಡ್ತೀನಿ, ಸತ್ರೆ ಇಲ್ಲೇ ಸಾಯ್ತೀನಿ – ಲಸಿಕೆ ಪಡೆಯಲು ಕುಡುಕನ ಹಿಂದೇಟು

    – ಯಾದಗಿರಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ

    ಯಾದಗಿರಿ: ಒಂದು ಕಡೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಯಪಡುತ್ತಿರುವ ಪ್ರಯಾಣಿಕರು ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಯಾದಗಿರಿ ನಗರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಸಾರ್ ನಾವು ಕುಡಿಯುತ್ತೇವೆ. ಸತ್ತರೆ ನಾವು ಹೀಗೆ ಸಾಯುತ್ತೇವೆ. ಸರ್ ಲಸಿಕೆಗಾಗಿಯೇ ನಾನು ಕೆಲಸ ಬಿಟ್ಟಿದ್ದೇನೆ. ನಾನು ಮಾತ್ರ ಯಾವುದೇ ಕಾರಣಕ್ಕೂ ಲಸಿಕೆ ಪಡೆಯಲ್ಲ ಎಂದು ಕುಡುಕರು ಉದ್ಧಟತನ ತೊರುತ್ತಿದ್ದಾರೆ.

    ಈ ನಡುವೆ ಮಹಿಳೆಯೊಬ್ಬಳು ರೇಷನ್ ಕೊಡಿಸಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ. ರೇಷನ್ ನೀಡುವ ಭರವಸೆ ಕೊಟ್ಟನಂತರ ಮಹಿಳೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾದಗಿರಿ ನಗರದಲ್ಲಿ ಹೀಗೆ ಲಸಿಕೆ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಖುದ್ದು ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಜಾಗೃತಿ ಮೂಡಿಸಲು ನಗರದ ಹನುಮಾನ ನಗರಕ್ಕೆ ಹೋದ್ರೆ ಜನರು ಶಾಕ್ ಕೊಟ್ಟಿದ್ದಾರೆ. ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಎದುರಿಸಲು ಯಾದಗಿರಿ ಜಿಲ್ಲಾಡಳಿತದ ವಿಭಿನ್ನ ಹೆಜ್ಜೆ

    ಮದ್ಯ ವೇಸನಿ ಯುವಕನೋರ್ವ ನಾನು ಡ್ರಿಂಕ್ ಮಾಡುತ್ತೆನೆ ಲಸಿಕೆ ಹಾಕಿಸಿಕೊಳ್ಳಲ್ಲ. ಸತ್ತರೇ ನಾನು ಹೀಗೆ ಸಾಯುತ್ತೆನೆಂದು ಜಾಗೃತಿ ಮೂಡಿಸಲು ತೆರಳಿದ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ ಹಾಗೂ ಆರೋಗ್ಯ ಸಿಬ್ಬಂದಿಗೆ ಹೇಳಿ ಯುವಕ ಉದ್ದಟತನ ತೋರಿದ್ದಾನೆ. ಇದನ್ನೂ ಓದಿ: ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ ಎಷ್ಟೇ ಬುದ್ದಿ ಮಾತು ಹೇಳಿದ್ರೂ ಲಸಿಕೆ ಹಾಕಿಸಿಕೊಳ್ಳದೇ ಯುವಕ ನಿಷ್ಕಾಳಜಿ ತೋರಿದ್ದಾನೆ. ಬಹುತೇಕ ಮಹಿಳೆಯರು ಲಸಿಕೆ ಪಡೆಯಲು ವಿವಿಧ ನೆಪ ಹೇಳಿ ಹಿಂದೇಟು ಹಾಕಿದರು. ಆದರೂ ಕೆಲವರಿಗೆ ತಿಳಿ ಹೇಳಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

  • ವ್ಯಾಕ್ಸಿನ್ ಸೆಂಟರ್ ಮುಂದೆ No Stock ಬೋರ್ಡ್- ಮತ್ತೆ ಲಸಿಕೆಗಾಗಿ ಹಾಹಾಕಾರ

    ವ್ಯಾಕ್ಸಿನ್ ಸೆಂಟರ್ ಮುಂದೆ No Stock ಬೋರ್ಡ್- ಮತ್ತೆ ಲಸಿಕೆಗಾಗಿ ಹಾಹಾಕಾರ

    ಬೆಂಗಳೂರು: ವ್ಯಾಕ್ಸಿನ್ ಸೆಂಟರ್ ಮುಂದೆ ನೋ ಸ್ಟಾಕ್ ಬೋರ್ಡ್ ಹಾಕಲಾಗಿದ್ದು, ಲಸಿಕೆಗಾಗಿ ಮತ್ತೆ ಹಾಹಾಕಾರ ಶುರುವಾಗಿದೆ.

    ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಜನ ದಟ್ಟಣೆ ಹೆಚ್ಚಾಗುವ ಹಿನ್ನೆಲೆ ಆಸ್ಪತ್ರೆಯ ಮುಂಭಾಗದ ಸರ್ಕಾರಿ ಶಾಲಾ ಮೈದಾನದಲ್ಲಿ ವ್ಯಾಕ್ಸಿನ್ ಸೆಂಟರ್ ತೆರೆಯಲಾಗಿತ್ತು. ಇದನ್ನೂ ಓದಿ: ಅರವಿಂದ್ ವರ್ಸಸ್ ನಿಧಿ – ಯಾರು ಸರಿ? ಯಾರು ತಪ್ಪು?

    ಮಂಗಳವಾರ ಕೇವಲ 200 ಜನರಿಗೆ ಡೋಸ್ ನೀಡಿದ್ದು, ಇಂದು ಸ್ಟಾಕ್ ಬಂದಿಲ್ಲ. ಗೇಟ್ ಮುಂಭಾಗದಲ್ಲಿ ನೋ ಸ್ಟಾಕ್ ಅನ್ನೋ ಬೋರ್ಡ್ ಹಾಕಿದ್ದಾರೆ. ಇಂದು ಬೆಳಗ್ಗೆಯೇ ಲಸಿಕೆಗಾಗಿ ಸಾಲುಗಟ್ಟಿ ನಿಂತಿದ್ದ ಜನ 9 ಗಂಟೆಗೆ ನೋ ಸ್ಟಾಕ್ ಬೋರ್ಡ್ ಹಾಕಿದ್ದಕ್ಕೆ ಆಕ್ರೋಶ ಹೊರ ಹಾಕಿದರು. ನಿನ್ನೆಯೇ ನೋ ಸ್ಟಾಕ್ ಬೋರ್ಡ್ ಹಾಕಬೇಕು ಅಥವಾ ಯಾರಾದ್ರು ಸಿಬ್ಬಂದಿ ಇವತ್ತು ಸ್ಟಾಕ್ ಇಲ್ಲ ಅಂತ ಹೇಳಲು ನಿಯೋಜಿಸಬೇಕು. ನಾವೆಲ್ಲ ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದೇವೆ ಈಗ ನೋ ಸ್ಟಾಕ್ ನಾಳೆ ಬನ್ನಿ ಅಂದ್ರೆ ಹೇಗೆ ಅಂತಾ ಆಕ್ರೋಶ ಹೊರಹಾಕಿದರು.  ಇದನ್ನೂ ಓದಿ: ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್

    ಮಂಗಳವಾರ ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಾಕ್ಸಿನ್ ಕೊರತೆಯನ್ನು ಒಪ್ಪಿಕೊಂಡಿದ್ದರು. ಆದ್ರೆ ಮಧ್ಯಾಹ್ನ ಉಲ್ಟಾ ಹೊಡೆದ ಸಚಿವರು ವ್ಯಾಕ್ಸಿನ್ ಇರೋದಾಗಿ ಹೇಳಿಕೆ ನೀಡಿದ್ದರು.

  • ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

    ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

    ಯಾದಗಿರಿ: ಇಡೀ ಜಿಲ್ಲೆ ಮಾತ್ರವಲ್ಲದೆ ರಾಜ್ಯವೇ ಜನರಿಗೆ ಕೋವಿಡ್ ಲಸಿಕೆ ಹಾಕಲು ಹರಸಹಾಸ ಪಡುತ್ತಿದೆ. ಆದರೆ ಈ ತಿಂಥಣಿ ಮಾತ್ರ ಮಾತ್ರ ಕೋವಿಡ್ ಲಸಿಕೆ ಮುಕ್ತ, ರಾಜ್ಯದ ಮೊದಲ ಗ್ರಾಮವೇನಿಸಿದೆ. ಗ್ರಾಮದಲ್ಲಿ ಪ್ರತಿಶತ 100 ರಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಿ ಈಗ ರಾಜ್ಯದಲ್ಲಿಯೇ ತಿಂಥಣಿ ಗ್ರಾಮ ಪಂಚಾಯ್ತಿ ಮಾದರಿ ಆಗಿದೆ.

    ತಿಂಥಣಿ, ತಾದಲಾಪುರ, ಶಾಂತಪುರ, ಹುಣಸಿಹೋಳಿ, ನಿಂಗದಹಳ್ಳಿ, ಬಂಡೋಳ್ಳಿ ಒಟ್ಟು ಆರು ಗ್ರಾಮಗಳು ಈ ತಿಂಥಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತವೆ. ಕಳೆದ ಕೇವಲ 15 ದಿನದೊಳಲ್ಲಿ ತಿಂಥಣಿ ಲಸಿಕೆ ಮುಕ್ತ ಪಂಚಾಯತ ಆಗಿದೆ. ತಿಂಥಣಿ ಪಂಚಾಯ್ತಿ ವ್ಯಾಪ್ತಿಯಲ್ಲಿ 9 ಸಾವಿರ ಜನಸಂಖ್ಯೆ ಇದ್ದು, ಅದರಲ್ಲಿ 2 ಸಾವಿರ ಜನ ಬೃಹತ್ ನಗರಗಳತ್ತ ವಲಸೆ ಹೋಗಿದ್ದಾರೆ. ಸದ್ಯ 18 ಹಾಗೂ 45 ವರ್ಷ ಮೇಲ್ಪಟ್ಟವರು 4200 ಜನ ಇದ್ದು ಈ ಎಲ್ಲರೂ ಕೂಡ ಕೋವಿಡ್ ಲಸಿಕೆ ಪಡೆದಿದ್ದಾರೆ.

    ಕೊರೊನಾ ಮೊದಲನೆಯ ಅಲೆಯಲ್ಲಿ ತಿಂಥಣಿ ಪಂಚಾಯ್ತಿಯಲ್ಲಿ 28 ಪ್ರಕರಣಗಳು ಪತ್ತೆಯಾಗಿದ್ದವು, ಓರ್ವ ವ್ಯಕ್ತಿ ಕೋವಿಡ್ ಗೆ ಬಲಿಯಾಗಿದ್ದ. ಎರಡನೇ ಅಲೆಯಲ್ಲಿ 56 ಪ್ರಕರಣಗಳು ಪತ್ತೆಯಾಗಿದ್ದವು. ಹೀಗಾಗಿ ಆರೋಗ್ಯ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಒಟ್ಟುಗೂಡಿ ಜನರಿಗೆ ಲಸಿಕೆ ಬಗ್ಗೆ ಅರಿವು ಮೂಡಿಸಿದ ಪರಿಣಾಮ, ಸಾಧನೆ ಸಾಧ್ಯವಾಗಿದೆ. ಇದನ್ನೂ ಓದಿ: ವಿವಿಧ ಆಕೃತಿಯಲ್ಲಿ ಮೂಡಿ ಬಂದ ಹಲಸಿನ ಹಣ್ಣು – ವಿಸ್ಮಯಕಾರಿ ಬೆಳವಣಿಗೆ

    ಇಂತಹ ಸಾಧನೆ ಮಾಡಿದ ಈ ಗ್ರಾಮ ಪಂಚಾಯತಿಗೆ ಜಿಲ್ಲಾಡಳಿತ ಅವರ ಗ್ರಾಮಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದೆ. ಇನ್ನೂ ಶಾಸಕ ರಾಜೂಗೌಡ ತಮ್ಮ ಶಾಸಕರ ಅನುದಾನದಿಂದ 25 ಲಕ್ಷ ಬಹುಮಾನ ಘೋಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿ ಹಾಗೂ ಗ್ರಾಮಸ್ಥರು ಮನಸ್ಸು ಮಾಡಿದ್ರೆ ಎನಾದರು ಸಾಧಿಸಬಹುದು ಎಂಬುದಕ್ಕೆ ತಿಂಥಣಿ ಗ್ರಾಮದ ಅತ್ಯುತ್ತಮ ಉದಾಹರಣೆ. ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಮಕ್ಕಳಿಗೆ ತೊಂದರೆ – ಸರ್ಕಾರ ಸಿದ್ಧತೆ ಮಾಡಿಕೊಳ್ಳಲಿ ಸಿದ್ದರಾಮಯ್ಯ

  • ಸ್ಪುಟ್ನಿಕ್ ಲಸಿಕೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಅಧಿಕೃತ ಚಾಲನೆ

    ಸ್ಪುಟ್ನಿಕ್ ಲಸಿಕೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಅಧಿಕೃತ ಚಾಲನೆ

    ಬೆಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಅಧಿಕೃತವಾಗಿ ಚಾಲನೆಗೊಂಡಿತು.

    ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರೋ ಮಣಿಪಾಲ್ ಆಸ್ಪತ್ರೆಯಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ಕಮರ್ಷಿಯಲ್ ಲಾಂಚ್ ಮಾಡಲಾಗಿದೆ. ಲಸಿಕೆ ನೀಡುವ ಪ್ರಕ್ರಿಯೆಯನ್ನು ವಿಭಿನ್ನವಾಗಿ ಆಯೋಜನೆ ಮಾಡಲಾಗಿದ್ದು, ಮಂಗಳಮುಖಿಯರಿಗೆ ಲಸಿಕೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

    ಪ್ರಾಥಮಿಕ ಹಂತವಾಗಿ 10 ಜನ ಮಂಗಳಮುಖಿಯರಿಗೆ ಉಚಿತವಾಗಿ ತಮ್ಮಿಷ್ಟದ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ವಿ ಲಸಿಕೆ ನೀಡಲು ಮಣಿಪಾಲ್ ಆಸ್ಪತ್ರೆ ಮುಂದಾಗಿದೆ. ಬಹು ನಿರೀಕ್ಷಿತ ಸ್ಪುಟ್ನಿಕ್ ಲಸಿಕೆಯನ್ನ ಪಡೆಯಲು ಜನ ಉತ್ಸುಕರಾಗಿದ್ದು, ವಿಐಪಿಗಳೇ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಒಂದೇ ಡೋಸ್ ಪಡೆಯುವ ಪ್ರಕ್ರಿಯೆ ಈ ಲಸಿಕೆಗಿದೆ.

  • ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

    ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

    – ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಅಧಿಕಾರಿಗೆ ಸೂಚನೆ

    ಮೈಸೂರು: ವಾಕ್ಸಿನ್ ಖಾಲಿ ಎಂದು ಅಧಿಕೃತವಾಗಿ ನಿನ್ನೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಹೇಳುವ ಮೂಲಕ ವಾಸ್ತವ ಒಪ್ಪಿಕೊಂಡಿದ್ದರು. ಡಿಎಚ್‍ಓ ಅವರ ಈ ಮಾತು ಆರೋಗ್ಯ ಸಚಿವರಿಗೆ ಇರಿಸು ಮುರಿಸು ಉಂಟು ಮಾಡಿದೆ.

    ಹೀಗಾಗಿಯೆ ಇಂದು ಮೈಸೂರಿಗೆ ಆಗಮಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಕೋವಿಡ್ ನಿರ್ವಹಣಾ ಸಭೆಯ ಆರಂಭದಲ್ಲೆ ಡಿಎಚ್‍ಓಗೆ ಮೆಲು ದನಿಯಲ್ಲೇ ವಾರ್ನಿಂಗ್ ನೀಡಿದರು. ಡಿಎಚ್‍ಓ ಪ್ರಸಾದ್ ಅವರೇ ಇನ್ಮುಂದೆ ವಾಕ್ಸಿನ್ ಬಗ್ಗೆ ನೀವು ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ. ಜಿಲ್ಲಾಧಿಕಾರಿಗಳೇ ಎಲ್ಲಾ ಮಾತಾಡುತ್ತಾರೆ ಎಂದು ಮೆಲು ದನಿಯಲ್ಲೇ ವಾರ್ನಿಂಗ್ ನೀಡಿದರು.

    ಎಲ್ಲೆಡೆ ನೋ ಸ್ಟಾಕ್ ಬೋರ್ಡ್: ಮೈಸೂರಲ್ಲಿ ಲಸಿಕೆ ಇಲ್ಲ ಎಂಬ ಸತ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಒಪ್ಪಿಕೊಂಡು ಅಧಿಕೃತವಾಗಿಯೆ ವ್ಯಾಕ್ಸಿನ್ ಸ್ಟಾಕ್ ಇಲ್ಲ ಎಂಬ ಬೋರ್ಡ್ ಅನ್ನು ಆರೋಗ್ಯ ಕೇಂದ್ರಗಳ ಮುಂದೆ ಹಾಕಿದೆ. ಜುಲೈ ಒಂದರವರೆಗೆ ಮೈಸೂರಲ್ಲಿ ವಾಕ್ಸಿನ್ ಸಿಗುವುದಿಲ್ಲ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ವ್ಯಾಕ್ಸಿನ್ ಕೂಡ ಮೈಸೂರಲ್ಲಿ ಲಭ್ಯವಿಲ್ಲ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ

    ಬೆಂಗಳೂರಿನಲ್ಲಿ ಮಾತನಾಡಿದ್ದ ಆರೋಗ್ಯ ಸಚಿವರು, ಈ ತಿಂಗಳು ಹೆಚ್ಚಾಗಿ ಲಸಿಕೆ ಬರಬೇಕಿತ್ತು. ಆದ್ರೆ ಲಸಿಕೆ ಬರೋದು ತಡವಾಗಿದೆ. ಲಸಿಕೆ ಪೂರೈಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆರೋಗ್ಯ ಸಚಿವರನ್ನ ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳುವ ಲಸಿಕೆ ಕೊರತೆಯನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    ಕೊಡಗಿನಲ್ಲಿಯೂ ಇಲ್ಲ ಸಂಜೀವಿನಿ: ಬುಧವಾರದಿಂದ ಕೊಡಗಿನಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಕ್ಸಿನ್ ಗಾಗಿ ಸಾರ್ವಜನಿಕರು ಎರಡ್ಮೂರು ದಿನ ಕಾಯಲೇ ಬೇಕು, ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಬಾಲಕೃಷ್ಣ