Tag: Corona Infected

  • ಮಗನಿಗೆ ಕೊರೊನಾ ಸೋಂಕು – ಪೋಷಕರಿಗೆ ಮನೆ ನೀಡದ ಮಾಲೀಕ

    ಮಗನಿಗೆ ಕೊರೊನಾ ಸೋಂಕು – ಪೋಷಕರಿಗೆ ಮನೆ ನೀಡದ ಮಾಲೀಕ

    – ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ದಂಪತಿ
    – ಮಗನಿಗೆ ಸೋಂಕು ಬಂದರೆ ನಮ್ಮ ತಪ್ಪು ಏನು?

    ಕೋಲ್ಕತ್ತಾ: ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸೋಂಕಿತನ ತಂದೆ-ತಾಯಿಯನ್ನು ಮನೆ ಮಾಲೀಕನೋರ್ವ ಬಾಡಿಗೆ ಮನೆ ನೀಡದ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯಲ್ಲಿ ನಡೆದಿದೆ.

    ಹೌರದ ಡೆಮ್ಜೂರ್ ಪ್ರದೇಶದಲ್ಲಿ ವಾಸವಿದ್ದ ಕುಟುಂಬದಲ್ಲಿ ಆತನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ವೇಳೆ ಆತನನ್ನು ಕರೆದುಕೊಂಡು ಹೋಗಲು ಮನೆಯ ಬಳಿ ಅಂಬುಲೆನ್ಸ್ ಬಂದಿದೆ. ಈ ವೇಳೆ ಈ ದಂಪತಿಯೂ ಕೂಡ ಮಗ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಹೋಗಿದ್ದಾರೆ. ಆತನ ಮಗನನ್ನು ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಆಸ್ಪತ್ರೆಯಿಂದ ವಾಪಸ್ ಮನೆಗೆ ಬಂದ ದಂಪತಿಯನ್ನು ಮನೆಯ ಮಾಲೀಕ ತಡೆದಿದ್ದಾನೆ. ಜೊತೆಗೆ ನೀವು ನಮ್ಮ ಮನೆಯಲ್ಲಿ ಇರಬೇಡಿ, ನಿಮ್ಮನ್ನು ಇರಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಈ ವಿಚಾರದಲ್ಲಿ ದಂಪತಿಯ ಪರ ನಿಲ್ಲಬೇಕಾದ ಸ್ಥಳೀಯರು ಮತ್ತು ನೆರೆಹೊರೆಯವರು ವೈರಸ್ ನಮಗೂ ಹರಡುತ್ತೆ ಎಂಬ ಭಯದಿಂದ ಮಾಲೀಕನ ಮಾತಿಗೆ ಧನಿಗೂಡಿಸಿದ್ದಾರೆ. ಇದರಿಂದ ದಂಪತಿ ಇನ್ನೂ ಭಯಭೀತರಾಗಿದ್ದಾರೆ.

    ಇದಾದ ನಂತರ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಅವರಿಗೇ ಕೊರೊನಾ ಲಕ್ಷಣ ಇಲ್ಲದೇ ಇದ್ದರೂ, ಕೊರೊನಾ ಪರೀಕ್ಷೆ ಮಾಡಿಸುವಂತೆ ಸಲಾಪ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಪರೀಕ್ಷೆ ಮಾಡಿಸಿಕೊಂಡು ಬಂದರೂ ಮಾಲೀಕ ಮನೆಯಲ್ಲಿ ಉಳಿಯಲು ಅನುಮತಿ ಕೊಟ್ಟಿಲ್ಲ. ಇದರಿಂದ ನೊಂದು ದಂಪತಿ ಮುಖ್ಯ ರಸ್ತೆಯಲ್ಲಿ ಕುಳಿತು ವಾಹನ ತಡೆದು ಪ್ರತಿಭಟನೆ ಮಾಡಿದ್ದಾರೆ.

    ನಮ್ಮ ಮಗನಿಗೆ ಕೊರೊನಾ ಸೋಂಕು ಬಂದರೆ ಅದರಲ್ಲಿ ನಮ್ಮ ತಪ್ಪು ಏನಿದೆ? ನಮ್ಮ ಮಗನಿಗೆ ಸೋಂಕು ತಗುಲಿದರೆ ಅದೂ ನಮ್ಮ ತಪ್ಪಾ? ಮನೆಯ ಮಾಲೀಕ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ನೀವು ಇಲ್ಲಯೇ ಇದ್ದರೆ ಸೋಂಕು ಹರಡುತ್ತದೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ನಾವು ನಡು ರಸ್ತೆಯಲ್ಲಿ ಕುಳಿತಿದ್ದೇವೆ. ನಮಗೆ ಬೇರೆ ಕಡೆ ಹೋಗಲು ಎಲ್ಲೂ ಜಾಗವಿಲ್ಲ ಎಂದು ಸೋಂಕಿತ ತಂದೆ ಬಸುಡೆಬ್ ಚಟರ್ಜಿ ನೋವನ್ನು ಹೊರಹಾಕಿದ್ದಾರೆ.

    ಇದಾದ ನಂತರ ಸ್ಥಳಕ್ಕೆ ಪೊಲೀಸ್ ಮತ್ತು ಬಿಡಿಒ ಅಧಿಕಾರಿಗಳು ಬಂದು ದಂಪತಿಯನ್ನು ಮನವೊಲಿಸಿ ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ದಂಪತಿಗಳು ಚೆನ್ನಾಗಿದ್ದಾರೆ. ನಾವು ಅವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದೇವೆ. ಅವರನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಬಿಡಿಒ ರಾಜಾ ಭೂಮಿಕ್ ತಿಳಿಸಿದ್ದಾರೆ.

  • ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ

    ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆದ ಕಳ್ಳ

    -ಐಸೋಲೇಷನ್ ವಾರ್ಡಿಗೆ ನುಗ್ಗಿ ಕಳ್ಳತನ

    ದಿಸ್ಪುರ್: ಆಸ್ಪತ್ರೆಯ ಐಸೋಲೇಷನ್‍ವಾರ್ಡ್‍ನಲ್ಲಿದ್ದ ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕಳ್ಳನೋರ್ವ ಕ್ವಾರಂಟೈನ್ ಆಗಿರುವ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯ ಕಾಜಲ್‍ಗಾಂವ್‍ನ ಜೆಎಸ್‍ಎಸ್‍ಬಿ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.

    ಸೋಂಕಿತನ ಮೊಬೈಲ್ ಕದ್ದ ಕಳ್ಳನನ್ನು ಪಪ್ಪು ಬರ್ಮನ್ (22) ಎಂದು ಗುರುತಿಸಲಾಗಿದೆ. ಈತ ಆಸ್ಪತ್ರೆಯಲ್ಲಿ ಸೋಂಕಿತ ಮಲಗಿದ ನಂತರ ಸುಮಾರು ರಾತ್ರಿ ಒಂದು ಗಂಟೆಗೆ ಐಸೋಲೇಷನ್ ವಾರ್ಡಿಗೆ ನುಗ್ಗಿ ಫೋನ್ ಕದ್ದು ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತನನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

    ಪಪ್ಪು ಬರ್ಮನ್ ಫೋನ್ ಕದ್ದು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತನ್ನ ಮನೆಯಲ್ಲಿ ಇದ್ದ. ಆಸ್ಪತ್ರೆಯಲ್ಲಿ ಸಿಕ್ಕ ಸಿಸಿಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ. ನಂತರ ವೈದ್ಯರ ಸಮೇತ ಆತನ ಮನೆಗೆ ಹೋಗಿ ಬಂಧಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಆತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಐಸೋಲೇಷನ್ ವಾರ್ಡ್ ಒಳಗೆ ಹೋಗಲು ಈತ ಹೇಗೆ ಧೈರ್ಯ ಮಾಡಿದ ಎಂದು ನಮಗೆ ಈಗಲೂ ಗೊತ್ತಾಗುತ್ತಿಲ್ಲ. ಈತ ಮೊಬೈಲ್ ಕದ್ದ ವ್ಯಕ್ತಿ ಕೊರೊನಾ ಸೋಂಕಿತನಾಗಿದ್ದು, ಆತ ಇನ್ನೂ ಸಕ್ರಿಯ ಹಂತದಲ್ಲಿ ಇದ್ದಾನೆ. ಹೀಗಾಗಿ ಮೊಬೈಲ್‍ಗೆ ಕೂಡ ವೈರಸ್ ಅಂಟಿರಬಹುದು. ಹಾಗಾಗಿ ಪಪ್ಪು ಬರ್ಮನ್ ವರದಿ ಬರುವವರೆಗೂ ಆತನ ಮೇಲೆ ನಿಗಾವಹಿಸಿದ್ದೇವೆ ಎಂದು ವೈದ್ಯ ಮನೋಜ್ ದಾಸ್ ಹೇಳಿದ್ದಾರೆ.

    ನಾವು ಆರೋಪಿಯನ್ನು ಹಿಡಿದು ಕ್ವಾರಂಟೈನ್‍ಗೆ ಒಪ್ಪಿಸಿದ್ದೇವೆ. ಈ ವಿಚಾರವನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ನೀಡಿದ್ದೇವೆ. ಇನ್ನೂ ಮುಂದೆ ಅವರು ಆತನ ಪ್ರಾಥಮಿಕ ಮತ್ತು ದ್ವೀತಿಯ ಹಂತದ ಸಂಪರ್ಕಿತರನ್ನು ಗುರುತಿಸಬೇಕು ಎಂದು ಎಸ್‍ಪಿ ಸುಧಾಕರ್ ಸಿಂಗ್ ಅವರು ತಿಳಿಸಿದ್ದಾರೆ.

  • ಗದಗದಲ್ಲಿ ಸೋಂಕಿನಿಂದ 9 ಜನರು ಗುಣಮುಖ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗದಗದಲ್ಲಿ ಸೋಂಕಿನಿಂದ 9 ಜನರು ಗುಣಮುಖ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಗದಗ: ಕೊರೊನಾ ಸೋಂಕಿತ 9 ಜನರು ಗುಣಮುಖರಾಗಿ ಗದಗ ಜಿಮ್ಸ್ ನ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಜಿಲ್ಲಾಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಈ 9 ಜನರನ್ನು ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಹೊರ ಕರೆತಂದರು. ಇದರಲ್ಲಿ ಗುಜರಾತನಿಂದ ಬಂದಿದ್ದ 62 ವರ್ಷದ ವೃದ್ಧ ಮೇ 14 ರಂದು ಜಿಮ್ಸ್ ಕೊರೊನಾ ವಿಭಾಗಕ್ಕೆ ದಾಖಲಿಸಿಲಾಗಿತ್ತು. ನಂತರ ಮುಂಬೈನಿಂದ ಬಂದ 32 ವರ್ಷದ ಯುವಕನಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಮೇ 21 ರಂದು ಜಿಮ್ಸ್ ಗೆ ದಾಖಲಿಸಲಾಗಿತ್ತು.

    ಪಿ-913 ಇವರ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದ್ದ, 50 ವರ್ಷದ ಮಹಿಳೆ ಪಿ-1932, 19 ವರ್ಷದ ಯುವತಿ ಪಿ-1933, 22 ವರ್ಷದ ಯುವತಿ ಪಿ-1934, 18 ವರ್ಷದ ಯುವಕ ಪಿ-1935, 48 ವರ್ಷದ ಯುವಕ ಪಿ-1936, 8 ವರ್ಷದ ಬಾಲಕಿ ಪಿ-1937, 21 ವರ್ಷದ ಯುವಕ ಪಿ-1938, ಇವರೆಲ್ಲಾ ಮೇ 23 ರಂದು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಈ ಎಲ್ಲರೂ ಈಗ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಇಂದು 9 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. 14 ದಿನಗಳ ಕಾಲ ಹೋಂ ಕ್ವಾರಂಟೈನ್ ಆಗುವಂತೆ ವೈದ್ಯರು ಸಲಹೆ ನೀಡಿ ಅಂಬುಲೆನ್ಸ್ ಮೂಲಕ ಮನೆಗೆ ಕಳುಹಿಸಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆಯಿಂದ ಗುಣಮುಖರಾದವರಿಗೆ ಮಾಸ್ಕ್, ಸ್ಯಾನಿಟೆಜರ್ ಹಾಗೂ ಆಹಾರ ಕಿಟ್ ನೀಡಿ ಗೌರವಿಸಲಾಯಿತು.

  • ಸೋಂಕಿತರ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟ ಸರ್ಕಾರ- ಪ್ರಶ್ನಿಸಿದಾಗ ನುಣುಚಿಕೊಂಡ ಶ್ರೀರಾಮುಲು

    ಸೋಂಕಿತರ ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟ ಸರ್ಕಾರ- ಪ್ರಶ್ನಿಸಿದಾಗ ನುಣುಚಿಕೊಂಡ ಶ್ರೀರಾಮುಲು

    ಬೆಂಗಳೂರು: ಕೊರೊನಾ ಸೋಂಕಿತರ ಟ್ರಾವೆಲ್ ಹಿಸ್ಟರಿಯನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅಲ್ಲಿ ನಮೂದಿಸದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

    ಇಷ್ಟು ದಿನ ಕೊರೊನಾ ವಿಚಾರವಾಗಿ ದಿನಕ್ಕೆ ಎರಡು ಬುಲೆಟಿನ್ ಬಿಡುಗಡೆ ಮಾಡುತ್ತಿದ್ದ ರಾಜ್ಯ ಆರೋಗ್ಯ ಇಲಾಖೆ, ಅದರಲ್ಲಿ ಸೋಂಕಿತರ ಜಿಲ್ಲೆ ಮತ್ತು ಅವರು ಪ್ರಯಾಣ ಮಾಡಿದ ಹಿನ್ನೆಲೆ ಮತ್ತು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯನ್ನು ನಮೂದಿಸುತ್ತಿತ್ತು. ಆದರೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಜಿಲ್ಲಾವಾರು ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಈ ಮೂಲಕ ಸೋಂಕಿತರ ಪ್ರಯಾಣದ ಹಿನ್ನೆಲೆಯನ್ನು ಮುಚ್ಚಿಟ್ಟಿದೆ.

    ಸದ್ಯ ಕರುನಾಡಲ್ಲಿ ಮುಂಬೈ ಕೊರೊನಾ ಬಾಂಬ್ ಸ್ಫೋಟಿಸಿದೆ. ಮುಂಬೈನಿಂದ ರಾಜ್ಯಕ್ಕೆ ವಾಪಸ್ ಬಂದ ಹಲವರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದರಲ್ಲಿ ಕೆಲವರನ್ನು ಮಾತ್ರ ಕ್ವಾರಂಟೈನ್ ಮಾಡಿದ್ದು, ದಾಖಲೆ ಸಲ್ಲಿಸದೇ ಕಳ್ಳಮಾರ್ಗದಲ್ಲಿ ರಾಜ್ಯಕ್ಕೆ ಬಂದವರ ಮಾಹಿತಿ ಸರ್ಕಾರದ ಬಳಿ ಇಲ್ಲ. ಜೊತೆಗೆ ಕೊರೊನಾ ಟೆಸ್ಟ್ ಮಾಡದೇ ಮಹಾರಾಷ್ಟ್ರದಿಂದ ಜನರನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಹೊರರಾಜ್ಯದಿಂದ ದಾಖಲೆ ನೀಡಿ, ನೋಂದಣಿ ಮಾಡಿಸಿಕೊಂಡು ರಾಜ್ಯಕ್ಕೆ ಬಂದವರ ಟ್ರಾವೆಲ್ ಹಿಸ್ಟರಿ ನಮಗೆ ಸಿಕ್ಕಿದೆ. ಆದರೆ ಯಾವುದೇ ದಾಖಲಾತಿ ಮಾಡಿಕೊಳ್ಳದೆ, ನಮಗೆ ತಿಳಿಸದೇ ರಾಜ್ಯಕ್ಕೆ ಬಂದವರ ಪ್ರಯಾಣದ ಹಿನ್ನೆಲೆ ನಮಗೆ ಸಿಕ್ಕಿಲ್ಲ. ಅದೂ ಸ್ವಲ್ಪ ಕಷ್ಟವಾಗುತ್ತಿದೆ. ನಾವು ಅವರ ಟ್ರಾವೆಲ್ ಹಿಸ್ಟರಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.

  • ಅಹಮದಾಬಾದ್‍ನಿಂದ ಆಗಮಿಸಿರುವ 09 ಮಂದಿ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಅಹಮದಾಬಾದ್‍ನಿಂದ ಆಗಮಿಸಿರುವ 09 ಮಂದಿ ಸೋಂಕಿತರ ಟ್ರಾವೆಲ್ ಹಿಸ್ಟರಿ

    ಧಾರವಾಡ: ಗುಜರಾತಿನ ಅಹಮದಾಬಾದಿನಿಂದ ಜಿಲ್ಲೆಗೆ ಆಗಮಿಸಿ ಕೊರೊನಾ ಪಾಸಿಟಿವ್ ದೃಢಪಟ್ಟಿರುವ 09 ಮಂದಿಯ ಪ್ರಯಾಣ ಮಾಹಿತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಸಾರ್ವಜನಿಕ ತಿಳುವಳಿಕೆಗಾಗಿ ಪ್ರಕಟಿಸಿದ್ದಾರೆ.

    ಪಿ- 879, ಪಿ-880, ಪಿ-881, ಪಿ-882, ಪಿ-883, ಪಿ-884, ಪಿ-885, ಪಿ-886, ಪಿ-887 ರವರು ಕೊರೊನಾ ಸೋಂಕಿತರಾಗಿದ್ದಾರೆ. ಹುಬ್ಬಳ್ಳಿ ನಗರದ 06, ಕುಂದಗೋಳದ ಇಬ್ಬರು ಮತ್ತು ಕಲಘಟಗಿಯ ಒಬ್ಬರು ಸೇರಿ ಧಾರವಾಡ ಜಿಲ್ಲೆಯ ಒಟ್ಟು 9 ಜನ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ 2 ಜನ ಸೇರಿಕೊಂಡು ಅಹಮದಾಬಾದ್‍ನ ಸರಕೆಜ್ ಹಾಲಿ ಮಹಮದ್ ಮಸೀದಿಯಿಂದ ಮೇ 5ರ ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯವರು ವ್ಯವಸ್ಥೆ ಮಾಡಿದ ಜಿಜೆ 01 – ಬಿಯು 9986 ಸಂಖ್ಯೆಯ ವಾಹನದ ಮೂಲಕ ಹೊರಟು ಮುಂಬೈ ಮೂಲಕ ಮೇ.5 ರಂದು ಸಾಯಂಕಾಲ 07 ಗಂಟೆಗೆ ನಿಪ್ಪಾಣಿಗೆ ತಲುಪಿದ್ದರು.

    ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಲು ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿವಸಗಳ ಕಾಲ ಚೆಕ್‍ಪೋಸ್ಟಿನಲ್ಲಿ ವಾಸ್ತವ್ಯ ಮಾಡಿದ್ದರು. ನಂತರ ಮೇ.8 ರಂದು ಸಾಯಂಕಾಲ 5 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ಕೆಎ 09 – ಸಿ 2579 ಸಂಖ್ಯೆಯ ಟಾಟಾ 407 ಮ್ಯಾಕ್ಸಿ ಕ್ಯಾಬ್ ವಾಹನದ ಮುಖಾಂತರ ನಿಪ್ಪಾಣಿಯಿಂದ ಧಾರವಾಡ ಕೃಷಿ ವಿ.ವಿ.ಆವರಣಕ್ಕೆ ರಾತ್ರಿ 8.30 ಗಂಟೆಗೆ ಆಗಮಿಸಿದ್ದರು.

    ಅಂದು ಅವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಮೇ.12 ರಂದು 9 ಜನರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಹಾಸ್ಪಿಟಲ್‍ಗೆ ಸ್ಥಳಾಂತರಿಸಲಾಗಿದೆ.

  • ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು: ಕೊರೊನಾ ಗೆದ್ದವರ ಮಾತು

    ನಮಗಾಗಿ ವೈದ್ಯರು ದೇವರಲ್ಲಿ ಪ್ರಾರ್ಥನೆ ಮಾಡಿದ್ರು: ಕೊರೊನಾ ಗೆದ್ದವರ ಮಾತು

    -ಬರುವಾಗ ಅವರೇ ಬಟ್ಟೆ, ಚಪ್ಪಲಿ ತಂದುಕೊಟ್ರು

    ಕಾರವಾರ: ಮಹಾಮಾರಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಮತ್ತೆ ಹೊಸ ಜೀವನ ಪಡೆದುಕೊಂಡ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಇಬ್ಬರು ನಿವಾಸಿಗಳು ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆಯೇ ಕಾರವಾರದ ನೌಕಾನೆಲೆಯಲ್ಲಿರುವ ಪತಂಜಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ರೋಗಿ ಸಂಖ್ಯೆ 36 ಹಾಗೂ ಇಂದು ಡಿಸ್ಚಾರ್ಜ್ ಆಗಿರುವ ಸೋಂಕಿತ ರೋಗಿ ಸಂಖ್ಯೆ 98 ಮತ್ತೆ ಆರೋಗ್ಯವಂತರಾಗಿ ಮರಳಿರುವುದಕ್ಕೆ ದೇವರು, ಜಿಲ್ಲಾಡಳಿತ, ವೈದ್ಯರು ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

    ದೇವರ ದಯೆಯಿಂದ ಗುಣಮುಖರಾಗಿದ್ದೇವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಸಂತೋಷದ ಅನುಭವವಾಗುತ್ತಿದೆ. ಆಸ್ಪತ್ರೆಯಲ್ಲೂ ನಮಗೆ ಯಾವುದೇ ತೊಂದರೆಯಾಗಿಲ್ಲ. ಆರೋಗ್ಯಾಧಿಕಾರಿ, ಡಿಸಿ, ಪೊಲೀಸ್ ಅಧಿಕಾರಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬಹಳ ಉತ್ತಮವಾಗಿ ನಮಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರವೂ ನಮ್ಮನ್ನು ಉತ್ತಮವಾಗಿ ನೋಡಿಕೊಂಡಿದ್ದು, ಒಳ್ಳೆಯ ಸೌಲಭ್ಯಗಳನ್ನೂ ಒದಗಿಸಿದೆ.

    ತೊಟ್ಟ ಬಟ್ಟೆಯಲ್ಲೇ ಕಾರವಾರದ ಪತಂಜಲಿ ಆಸ್ಪತ್ರೆಗೆ ತೆರಳಿದ್ದವು, ಬರುವಾಗ ಅವರ ಬಟ್ಟೆ ಹಾಕಿಕೊಂಡು ಬಂದಿದ್ದೆವು. ಅವರೇ ಚಪ್ಪಲಿಯನ್ನೂ ಕೊಟ್ಟಿದ್ದರು, ಮಹಿಳೆಯರಿಗೂ ಬಟ್ಟೆ ನೀಡಿದ್ದಾರೆ. ವೈದ್ಯಾಧಿಕಾರಿಗಳು ನಮ್ಮಲ್ಲಿ ಬಹಳಷ್ಟು ಚೆನ್ನಾಗಿದ್ದರು. ಉತ್ತಮ ಚಿಕಿತ್ಸೆ ನೀಡಿದರು. ನಮಗಾಗಿ ವೈದ್ಯಾಧಿಕಾರಿಗಳು ದೇವರಲ್ಲಿ ಪ್ರಾರ್ಥನೆ ಕೂಡಾ ಮಾಡಿದ್ದಾರೆ. ಅತ್ಯುತ್ತಮವಾಗಿ ನಮ್ಮ ಜತೆ ಬೆರೆತುಕೊಂಡು ಗುಣಮುಖಗೊಳಿಸಿದರು ಎಂದು ಡಿಸ್ಟಾರ್ಜ್ ಗೊಂಡ ಸೋಂಕಿತ ಸಂಖ್ಯೆ 98 ಹಾಗೂ ಸೋಂಕಿತ 36 ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಇಂದು ಕಾರವಾರದ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೋಂಕಿತ ರೋಗಿ ಸಂಖ್ಯೆ 98, ಭಟ್ಕಳದ 26 ವರ್ಷದ ಯವಕನಾಗಿದ್ದು, ದುಬೈನಿಂದ ಮಾರ್ಚ್ 20 ರಂದು ಭಟ್ಕಳಕ್ಕೆ ಆಗಮಿಸಿದ್ದ. ದುಬೈನಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರವಾರದ ಮೂಲಕ ಭಟ್ಕಳಕ್ಕೆ ತೆರಳಿದ್ದ ಯುವಕನಲ್ಲಿ ಸೋಂಕಿನ ಯಾವುದೇ ಗುಣಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿತ್ತು.

    ಅಲ್ಲದೇ ಈ ಯುವಕನಲ್ಲಿ ಸೋಂಕು ಪತ್ತೆಯಾಗುವ ಮುನ್ನ ಮೂರು ದಿನಗಳ ಹಿಂದೆ ಆತನ ಸಹೋದರನಲ್ಲೂ ಸೋಂಕು ಪತ್ತೆಯಾಗಿತ್ತು. ಈ ಯುವಕನಲ್ಲಿ ಸೋಂಕು ದೃಢಪಟ್ಟ ಬಳಿಕ ಯುವಕನನ್ನು ಮಾರ್ಚ್ 31ರಂದು ಕಾರವಾರದ ನೌಕಾ ನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 19 ದಿನಗಳ ಬಳಿಕ ಕೊರೊನಾ ವೈರಸ್ ಕಾಟದಿಂದ ಯುವಕ ಗುಣಮುಖನಾಗಿದ್ದಾನೆ.

    ಈ ಹಿಂದೆಯೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತ ಸಂಖ್ಯೆ 36 ದುಬೈನಿಂದ ಮಾ. 19ಕ್ಕೆ ಮುಂಬೈಗೆ ತಲುಪಿದ್ದರು. ರೈಲಿನ ಮೂಲಕ ಮಾ. 20ಕ್ಕೆ ಭಟ್ಕಳಕ್ಕೆ ಬಂದಿದ್ದ 65 ವರ್ಷದ ಸೋಂಕಿತ ಸಂಖ್ಯೆ 36 ರಿಗೆ, ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾ. 21ರಂದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಪರೀಕ್ಷೆ ವರದಿಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆ ಬಳಿಕ ಈ ಹಿಂದೆಯೇ ಪತಂಜಲಿ ಆಸ್ಪತ್ರೆಯಿಂದ ಸೋಂಕಿತ ಸಂಖ್ಯೆ 36 ಬಿಡುಗಡೆಯಾಗಿದ್ದರು.

  • ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮೋದಿ ಸಭೆ- ನಿರ್ಧಾರವಾಗಲಿದೆ ಲಾಕ್‍ಡೌನ್ ಭವಿಷ್ಯ

    ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮೋದಿ ಸಭೆ- ನಿರ್ಧಾರವಾಗಲಿದೆ ಲಾಕ್‍ಡೌನ್ ಭವಿಷ್ಯ

    – ಪ್ರಧಾನಿ ಕೈ ಸೇರಿದ ಟಾಸ್ಟ್ ಫೋರ್ಸ್ ವರದಿ

    ನವದೆಹಲಿ: ಕೊರೊನಾ ಸಂಕಷ್ಟಕ್ಕೆ ಸಿಲುಕಿ ದೇಶ ಬಡವ ಆಗಿದೆ. ಲಾಕ್ ಡೌನ್ ಇರುತ್ತೊ ತೆರವಾಗತ್ತೊ ಅನ್ನೊ ಗೊಂದಲದಲ್ಲಿ ಜನರಿದ್ದಾರೆ. ಇದೇ ವಿಚಾರ ಸಂಬಂಧ ಇಂದು ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಲಿದ್ದು ಇಂದಿನ ಸಭೆ ನಿರ್ಣಾಯಕವಾಗಿದ್ದು, ಈ ನಡುವೆ ಲಾಕ್ ಡೌನ್ ವಿಸ್ತರಣೆ ಅಧಿಕೃತ ಘೋಷಣೆ ನಾಳೆ ಆಗಬಹದು ಎನ್ನಲಾಗುತ್ತಿದೆ.

    ಕಳೆದೆರಡು ದಿನಗಳಿಂದ ದೇಶದಲ್ಲಿ ಕೊರೊನಾಗಿಂತ ಹೆಚ್ಚು ಚರ್ಚೆ ಆಗ್ತಿರೋದು ಲಾಕ್ ಡೌನ್ ಬಗ್ಗೆ. ಇನ್ನೇನು ಜಸ್ಟ್ ನಾಲ್ಕು ದಿನಗಳ ಕಳೆದು ಬಿಟ್ರೆ ಹೋಂ ಕ್ವಾರಂಟೈನ್ ಅವಧಿ ಮುಗಿದೆ ಹೋಯ್ತು ಅಂತಾ ಎಲ್ಲರೂ ಯೋಚಿಸಿದ್ರು. ಆದರೆ ಅದು ಸುಳ್ಳಾಗುವ ಎಲ್ಲ ಲಕ್ಷಣಗಳು ಕಂಡು ಬರ್ತಿದೆ.

    ಲಾಕ್ ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಗಳು ಆರಂಭವಾಗಿದ್ದು ಇದೇ ವಿಚಾರ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ ಹನ್ನೊಂದು ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಆರಂಭವಾಗಲಿದ್ದು ಎಲ್ಲ ಸಿಎಂಗಳು ಪಿಎಂ ಜೊತೆ ಸೇರಿ ಲಾಕ್ ಡೌನ್ ವಿಸ್ತರಣೆ ಭವಿಷ್ಯ ನಿರ್ಧರಿಸಲಿದ್ದಾರೆ.

    ಈ ನಡುವೆ ಒಡಿಶಾ ಮತ್ತು ಪಂಜಾಬ್ ರಾಜ್ಯದ ಸಿಎಂ ಗಳು ಎಪ್ರಿಲ್ ಅಂತ್ಯದವರೆಗೂ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಇದಲ್ಲದೆ ಹಲವು ರಾಜ್ಯಗಳು ಲಾಕ್‍ಡೌನ್ ಸಂಬಂಧಿಸಿದಂತೆ ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದೆ.

    * ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ರಾವ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಆರ್ಥಿಕತೆಯನ್ನು ಆಮೇಲೆ ಪರಿಶೀಲನೆ ಮಾಡಬಹುದು. ಜೀವಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದಿದ್ದರು
    * ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಲಾಕ್‍ಡೌನ್ ವಿಸ್ತರಣೆ ಅವಶ್ಯಕ. ಜನರು ಸರ್ಕಾರದ ಜೊತೆ ಹೆಜ್ಜೆ ಹಾಕಬೇಕು ಅಂತಾ ಅಭಿಪ್ರಾಯಪಟ್ಟಿದ್ದಾರೆ.
    * ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೊರೊನಾ ವಿರುದ್ಧ ಮೂರು ಹೆಜ್ಜೆ ಮುಂದೆ ಇಡಬೇಕಿದ್ದು, ಲಾಕ್‍ಡೌನ್ ಮತ್ತಷ್ಟು ದಿನ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


    * ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಲಾಕ್‍ಡೌನ್ ಮುಂದುವರಿಸುವ ಅಧಿಕಾರ ರಾಜ್ಯಗಳಿಗೆ ಕೇಂದ್ರ ಬಿಟ್ಟುಕೊಡಬೇಕು ಪರಿಸ್ಥಿತಿ ಮೇಲೆ ರಾಜ್ಯಗಳ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ
    * ಈ ನಡುವೆ ಛತ್ತೀಸಗಢ, ಜಾರ್ಖಂಡ್ ರಾಜ್ಯಗಳು ಲಾಕ್‍ಡೌನ್ ವಿಸ್ತರಣೆ ಬಹು ಪರಾಕ್ ಎಂದಿವೆ.

    ಇದೇ ಅಭಿಪ್ರಾಯ ಬಹುತೇಕ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಲಾಕ್‍ಡೌನ್ ತೆರವು ಮಾಡಬೇಕಾ ಮುಂದುವರಿಸಬೇಕಾ ಅನ್ನೊ ಗೊಂದಲದಲ್ಲಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆ ಬಳಿಕ ಏನು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಕುತೂಹಲ.

    ಮೋದಿಗೆ ಟಾಸ್ಕ್ ಫೊರ್ಸ್ ವರದಿ: ಈ ಎಲ್ಲ ಬೆಳವಣಿಗೆ ನಡುವೆ ಆರೋಗ್ಯ, ಹಣಕಾಸು, ಗೃಹ ಇಲಾಖೆಗಳ, ಸೋಶಿಯಲ್ ಇಂಪ್ಯಾಕ್ಟ್ ಟಾಸ್ಕ್ ಫೋರ್ಸ್ ಗಳಿಂದ ಪ್ರಧಾನಿ ಕಚೇರಿ ವರದಿಗಳನ್ನು ತರಸಿಕೊಂಡಿದೆ. ವರದಿಗಳನ್ನು ಆಧರಿಸಿ ಪಿಎಂಗೆ ವಿವರಣೆ ನಡೆಯಲಿದೆ. ಈ ಟಾಸ್ಕ್ ಫೋರ್ಸ್ ಗಳು ನೀಡುವ ಶಿಫಾರಸ್ಸನ್ನು ಮೋದಿ ಗಂಭೀರವಾಗಿ ಪರಿಗಣಿಸಿಲಿದ್ದಾರೆ.

    ಮೋದಿ ಭಾಷಣ? ಇಷ್ಟೆಲ್ಲ ಬೆಳವಣಿಗೆ ಆಗ್ತಿದ್ದಂತೆ ದೆಹಲಿ ವಲಯದಿಂದ ಮತ್ತೊಂದು ಮಹತ್ವದ ಮಾಹಿತಿ ಹೊರ ಬಂದಿದೆ. ಭಾನುವಾರ ರಾತ್ರಿ ಎಂಟು ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಈ ವೇಳೆ ಎಲ್ಲ ವರದಿಗಳನ್ನು ಆಧರಿಸಿ ಲಾಕ್‍ಡೌನ್ ಮುಂದುವರಿಸಬೇಕಾ? ಸೀಲ್‍ಡೌನ್ ಮಾಡಬೇಕಾ ಅಥಾವ ರಾಜ್ಯಗಳಿಗೆ ಲಾಕ್ ಡೌನ್ ಮುಂದುವರಿಸುವ ಅವಕಾಶ ನೀಡ್ತಾರಾ ಅನ್ನೊದರ ಬಗ್ಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದು. ಒಟ್ಟಾರೆ ನಾಳೆ 130 ಕೋಟಿ ಜನರಿಗೆ ಮಹತ್ವದ ದಿನ ಎಂದರೆ ತಪ್ಪಾಗಲಾರದು.

  • ಸೋಂಕಿತನ ಸಹೋದರ ಸಭೆಯಲ್ಲಿ ಭಾಗಿ – ಗ್ರಾ.ಪಂ ಅಧ್ಯಕ್ಷೆ ಸೇರಿ 44 ಮಂದಿ ಕ್ವಾರಂಟೈನ್

    ಸೋಂಕಿತನ ಸಹೋದರ ಸಭೆಯಲ್ಲಿ ಭಾಗಿ – ಗ್ರಾ.ಪಂ ಅಧ್ಯಕ್ಷೆ ಸೇರಿ 44 ಮಂದಿ ಕ್ವಾರಂಟೈನ್

    ಮಂಗಳೂರು: ಕೊರೊನಾ ಸೋಂಕಿತನ ಸಹೋದರ ಗ್ರಾಮ ಪಂಚಾಯತ್ ಸಭೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗ್ರಾ.ಪಂ. ಅಧ್ಯಕ್ಷೆ ಮತ್ತು ಪಿ.ಡಿ.ಒ ಸಹಿತ ಒಟ್ಟು 44 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ರಕ್ಷಣಾ ಕಾರ್ಯಪಡೆಯ ಮೀಟಿಂಗ್ ನಡೆದಿತ್ತು. ಈ ಸಭೆಯಲ್ಲಿ ದುಬೈನಿಂದ ಬಂದು ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸಹೋದರ ಕೂಡ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಮಾರ್ಚ್ 18ರಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ, ಅಜ್ಜಾವರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ. ನಂತರ ಮಾರ್ಚ್ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾರ್ಚ್ 31ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದಕ್ಕೂ ಮೊದಲು ಸೋಂಕಿತ ವ್ಯಕ್ತಿಯ ಸಹೋದರ ಸಭೆಯಲ್ಲಿ ಭಾಗಿಯಾಗಿದ್ದರು.

    ಈ ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 13 ಮಂದಿ ಈಗಾಗಲೇ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿತ್ತು. ಇದರ ಜೊತೆಗೆ ಈಗ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ ಮತ್ತು ಎಂಟು ಮಂದಿ ಸದಸ್ಯರು ಸೇರಿ ಒಟ್ಟು 44 ಮಂದಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಸೋಂಕಿತ ಸಂಪರ್ಕದಲ್ಲಿದ್ದ 57 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.