Tag: Corona Infected

  • ಕೊರೊನಾ ರೋಗಿ ಸಾವು – ಅಂಬುಲೆನ್ಸ್‌ಗೆ ಸಂಬಂಧಿಕರಿಂದ ಬೆಂಕಿ

    ಕೊರೊನಾ ರೋಗಿ ಸಾವು – ಅಂಬುಲೆನ್ಸ್‌ಗೆ ಸಂಬಂಧಿಕರಿಂದ ಬೆಂಕಿ

    – ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಚಾಲಕ, ನರ್ಸ್

    ಬೆಳಗಾವಿ: ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಕ್ಕೆ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್ ಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಐಸಿಯುನಲ್ಲಿ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಸಂಬಂಧಿಕರು ಕೊರೊನಾ ವಾರ್ಡಿನ ಮುಂದೆ ನಿಂತಿದ್ದ ಅಂಬುಲೆನ್ಸ್‌ಗೆ ಬೆಂಕಿ ಹಚ್ಚಿ ಆಸ್ಪತ್ರೆ ಮುಂಭಾಗದಲ್ಲಿದ್ದ ಪೊಲೀಸ್ ವಾಹನ ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಈ ವೇಳೆ ಹತ್ತಾರು ಜನರಿಂದ ಗುಂಪು ಐಸಿಯೂ ವಾರ್ಡಿಗೆ ನುಗ್ಗಿ ವಾರ್ಡಿನಲ್ಲಿದ್ದ ವೈದ್ಯರು ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದೆ. ಆದರೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಆದರೆ ಆಗ ತಾನೇ ಅಥಣಿಯಿಂದ ಕೊರೊನಾ ರೋಗಿಯನ್ನು ಕರೆತಂದ ಆಸ್ಪತ್ರೆ ಮುಂಭಾಗ ನಿಂತಿದ್ದ ಅಂಬುಲೆನ್ಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅಂಬುಲೆನ್ಸ್ ಚಾಲಕ ಮತ್ತು ನರ್ಸ್ ಆಸ್ಪತ್ರೆಯೊಳಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

    ಸದ್ಯಕ್ಕೆ ಸ್ಥಳಕ್ಕೆ ಪೊಲೀಸರು ಮತ್ತು ಆಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮೀಷನರ್ ತ್ಯಾಗರಾಜ್, ಜಿಪಿಂ ಸಿಇಒ ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 60 ವರ್ಷದ ವೃದ್ಧ ಸೇರಿ ಆಸ್ಪತ್ರೆಯಲ್ಲಿ ಸೋಂಕಿತರು ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    60 ವರ್ಷದ ವೃದ್ಧ ಸೇರಿ ಆಸ್ಪತ್ರೆಯಲ್ಲಿ ಸೋಂಕಿತರು ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    ಹಾವೇರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್-19 ವಾರ್ಡಿನಲ್ಲಿ ಸೋಂಕಿತರು ಭರ್ಜರಿ ಸ್ಟೆಪ್ ಹಾಕಿದ್ದಾರೆ.

    ಐಎಲ್‍ಐ ವಾರ್ಡ್‍ನಲ್ಲಿ ಇರುವ ನಾಲ್ಕೈದು ಸೋಂಕಿತರು ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. ಈ ಮೂಲಕ ಕೊರೊನಾ ಬಂದರೆ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ ಧೈರ್ಯದಿಂದ ಇರಿ ಎಂಬ ಸಂದೇಶವನ್ನು ಸೋಂಕಿತರು ರವಾನಿಸಿದ್ದಾರೆ.

    ಚೌಕ ಸಿನಿಮಾದ ಅಲ್ಲಾಡ್ಸ್ ಅಲ್ಲಾಡ್ಸ್ ಎಂಬ ಹಾಡಿಗೆ ಎರಡೂವರೆ ನಿಮಿಷ ಭರ್ಜರಿಯಾಗಿ ಕೊರೊನಾ ಸೋಂಕಿತರು ಡ್ಯಾನ್ಸ್ ಮಾಡಿ ಸಮಯವನ್ನು ಕಳೆದಿದ್ದಾರೆ. 60 ವರ್ಷ ವೃದ್ಧ ಸೇರಿ ನಾಲ್ವರು ರೋಗಿಗಳಿಂದ ಬಿಂದಾಸ್ ಡ್ಯಾನ್ಸ್ ಜಿಲ್ಲೆಯಲ್ಲಿ ಸಖತ್ ವೈರಲ್ ಆಗಿದೆ. ಕೊರೊನಾಗೆ ಹೆದರಬೇಡಿ, ಜಾಗೃತರಾಗಿರಿ ಎಂದು ಸೋಂಕಿತರು ಸ್ಟೆಪ್ ಹಾಕಿದ ವಿಡಿಯೋಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  •  ‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

     ‘ಎಲ್ಲ ಅವ್ರೆ ಸ್ವಾಮಿ, ಗಿಜಿಗಿಜಿ ಅಂತಾರೆ’- ಕೊರೊನಾ ಸೋಂಕಿತರ ಬಗ್ಗೆ ಸೋಮಣ್ಣ ನಿರ್ಲಕ್ಷ್ಯದ ಮಾತು

    ತುಮಕೂರು: ಬೆಂಗಳೂರು ಕೋವಿಡ್ ಕೇಂದ್ರಗಳಲ್ಲಿ ಎಲ್ಲ ಅವ್ರೆ ಸ್ವಾಮಿ, ಏನ್ ಮಾಡೋದು, ಎಲ್ಲಿ ನೋಡಿದರೂ ಗಿಜಿಗಿಜಿ ಅಂತಾರೆ ಎಂದು ಕೊರೊನಾ ರೋಗಿಗಳ ಕುರಿತು ಸಚಿವ ವಿ.ಸೋಮಣ್ಣ ನಿರ್ಲಕ್ಷ್ಯವಾಗಿ ಮಾತಾಡಿದ್ದಾರೆ. ಇದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ `ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ, ಎಲ್ಲಿ ನೋಡಿದರೂ ಅವರೇ’ ಎಂದು ಸಚಿವರ ಮಾತಿಗೆ ದನಿಗೂಡಿಸಿದ್ದಾರೆ.

    ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಯವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಕೋವಿಡ್ ವಿಚಾರವಾಗಿ ತಾನು ಕೈಗೊಂಡಿರುವ ಕಾರ್ಯಗಳನ್ನು ವಿವರಿಸಿದ್ದಾರೆ. ಆ ಸಂದರ್ಭದಲ್ಲಿ ಈ ಮೇಲಿನ ನಿರ್ಲಕ್ಷ್ಯದ ಮಾತು ಆಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಬೆಂಗಳೂರಿನ 53 ವಾರ್ಡ್‍ಗಳಲ್ಲಿ 26 ಕಡೆ ಕೋವಿಡ್ ಆಸ್ಪತ್ರೆಗಳನ್ನು ತೆರೆದಿದ್ದೇನೆ. ದಿನದ 24 ಗಂಟೆ ಸಹಾಯವಾಣಿ, ಅಂಬುಲೆನ್ಸ್, ಒಂದು ಆಕ್ಸಿಜನ್ ಇದ್ದು ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಆಗ ಮಾಜಿ ಸಚಿವ ಸೊಗಡು ಶಿವಣ್ಣ ಕುರಿಮಂದೆ ಇದ್ದಂಗೆ ಇದ್ದಾರೆ ಸ್ವಾಮೀಜಿ ಎಂದಿದ್ದಾರೆ. ಇದರಿಂದ ಉತ್ತೇಜನಗೊಂಡ ಸಚಿವ ಸೋಮಣ್ಣ `ಎಲ್ಲಾ ಅವ್ರೆ ಏನ್ ಮಾಡೋದು, ಗಿಜಿಗಿಜಿ ಅಂತಾರೆ ಸ್ವಾಮೀಜಿ’ ಎಂದು ಹೇಳಿದ್ದಾರೆ.

    ಅಂಬುಲೆನ್ಸ್ ನವರು ಕೋವಿಡ್ ಸೋಂಕಿತರನ್ನು ಕರೆತರಲು 3000 ರೂಪಾಯಿ ಕೊಟ್ರೆ ಹೋಗೋದು. ಇಲ್ಲದಿದ್ದರೆ ಹೋಗೋದೇ ಇಲ್ಲ ಎಂದು ಸಚಿವ ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಡಿದ್ದಾರೆ. ಪ್ರತಿ ವಾರ್ಡ್‍ನಲ್ಲಿರುವ ಕೌಂಟರ್ ಗೆ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದೇನೆ. ಅವರು ಆಯಾ ವಾರ್ಡ್‍ನಷ್ಟೇ ನೋಡಿಕೊಳ್ಳುತ್ತಾರೆ. ಹೀಗಾಗಿ ಸೋಂಕು ಕಂಟ್ರೋಲ್‍ಗೆ ಬರುತ್ತಿದೆ ಎಂದು ಸ್ವಾಮೀಜಿಗೆ ಸೋಮಣ್ಣ ವಿವರಿಸಿದ್ದಾರೆ.

    ಸೋಮವಾರ ಮಾಜಿ ಸಚಿವ ಜಾರ್ಜ್, ಕಾಂಗ್ರೆಸ್ ಮುಖಂಡ ಹ್ಯಾರಿಸ್ ಮತ್ತು ಶಾಸಕ ರಿಜ್ವನ್ ಅರ್ಷದ್, ಶ್ರೀನಿವಾಸಮೂರ್ತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಸೋಂಕು ನಿಯಂತ್ರಣದ ಸಂಬಂಧ ಚರ್ಚೆಸಿದ್ದೇನೆ ಎಂದೂ ಸಹ ಸೋಮಣ್ಣ ಹೇಳಿದ್ದಾರೆ.

  • ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    ಮಾತ್ರೆಗಳ ಕೊರತೆ ಶುರು- ಎರಡು ದಿನದಿಂದ ಆಸ್ಪತ್ರೆ ಸ್ವಚ್ಛತಾ ಕಾರ್ಯವೂ ಸ್ಥಗಿತ

    – ಅವ್ಯವಸ್ಥೆಯ ಆಗರವಾಗಿದೆ ವಿಕ್ಟೋರಿಯಾ ಆಸ್ಪತ್ರೆ
    – ಮಾತ್ರೆಗಳನ್ನು ಕೊಡಿ ಎಂದು ನರ್ಸ್‍ಗೆ ಅವಾಜ್ ಆಕ್ತಿದ್ದಾರೆ ಸೋಂಕಿತರು

    ಬೆಂಗಳೂರು: ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದನ್ನು ರಾಜ್ಯದ ಆಸ್ಪತ್ರೆಗಳ ಸ್ಥಿತಿಗತಿಯೇ ಹೇಳುತ್ತವೆ. ವೈದ್ಯರು, ನರ್ಸ್, ಬೆಡ್ ಕೊರತೆ ಮಧ್ಯೆ ಈಗ ಮೆಡಿಸನ್ ಕೊರತೆ ಎದುರಾಗಿದ್ದು, ಇದರಿಂದಾಗಿ ಸೋಂಕಿತರು ತೀವ್ರ ಆತಂಕಕ್ಕೀಡಾಗಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರೆಗಳ ಕೊರತೆ ಉಂಟಾಗಿದ್ದು, ಇನ್ನೂ ಅಚ್ಚರಿಯ ಸಂಗತಿ ಎಂದರೆ ಎರಡು ದಿನದಿಂದ ಹೌಸ್ ಕೀಪಿಂಗ್‍ನವರು ಕೆಲಸಕ್ಕೆ ಬಾರದ್ದಕ್ಕೆ ಆಸ್ಪತ್ರೆ ಗಬ್ಬು ನಾರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವೈದ್ಯರು, ನರ್ಸ್‍ಗಳ ಕೊರತೆ ಮಧ್ಯೆ ಹೇಗೋ ಮಾತ್ರೆಗಳನ್ನು ನುಂಗಿ ಗುಣಮುಖರಾಗುತ್ತಿದ್ದ ಕೊರೊನಾ ಸೋಂಕಿತರಿಗೆ ಇದೀಗ ಮಾತ್ರೆಗಳ ಸಮಸ್ಯೆಯೂ ಎದುರಾಗಿದ್ದು, ಗುಣಮುಖರಾಗುವುದು ಹೇಗೆ ಎಂಬ ಭಯ ಎದುರಾಗಿದೆ.

    ಕೊರೊನಾಗೆ ವ್ಯಾಕ್ಸಿನ್ ಇಲ್ಲದಿದ್ದರೂ, ಗುಣ ಲಕ್ಷಣಗಳನ್ನು ಆಧರಿಸಿ ಮೆಡಿಸಿನ್ ನೀಡಲಾಗುತ್ತಿತ್ತು. ಆದರೆ ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಸನ್ ಕೊರತೆ ಎದುರಾಗಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ನರ್ಸ್‍ಗಳು ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಮೆಡಿಸಿನ್ ತುಂಬಾ ಕಡಿಮೆ ಇದೆ. ದಯವಿಟ್ಟು ಪೂರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ. ಆದರೂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

    ಈ ಮಧ್ಯೆಯೇ ಎರಡು ಮೂರು ದಿನದಿಂದ ಆಸ್ಪತ್ರೆ ಸ್ವಚ್ಛಗೊಳಿಸಲು ಹೌಸ್ ಕೀಪಿಂಗ್ ನವರನ್ನೂ ಕಳುಹಿಸಿಲ್ಲ. ಇದರಿಂದಾಗಿ ವಾರ್ಡ್‍ಗಳು ಗಬ್ಬು ವಾಸನೆ ಹೊಡೆಯುತ್ತಿವೆ. ಮಾತ್ರೆಗಳು ಇಲ್ಲದ್ದಕ್ಕೆ ರೋಗಿಗಳು ಸುತ್ತುವರೆದು ನಮಗೆ ಬೆದರಿಕೆ ಹಾಕುತ್ತಿದ್ದಾರೆ, ನಾವೇನು ಮಾಡುವುದು. ನಮ್ಮ ಬಳಿ ಉತ್ತರವಿಲ್ಲ ದಯವಿಟ್ಟು ಮೆಡಿಸಿನ್ ಕಳುಹಿಸಿ ಎಂದು ನರ್ಸ್‍ಗಳು ಗೋಳಿಡುತ್ತಿದ್ದಾರೆ.

    ಆಸ್ಪತ್ರೆಗಳಲ್ಲಿ ಇಷ್ಟೆಲ್ಲ ಅವ್ಯವಸ್ಥೆ ತಾಂಡವಾಡುತ್ತಿದ್ದರೂ ಸರ್ಕಾರ ಮಾತ್ರ ಎಲ್ಲವೂ ಸರಿಯಿದೆ ಎಂದು ತೋರಿಸಿಕೊಳ್ಳುತ್ತಿದೆ. ಸಿಬ್ಬಂದಿ ಕೊರತೆ ಬಗ್ಗೆಯೂ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದ್ದು, ಈ ಕುರಿತು ಸಹ ಕ್ರಮ ಕೈಗೊಂಡಿಲ್ಲ.

  • ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ಸೋಂಕಿತನನ್ನು ಹೊತ್ತು ತಂದ ಅಂಬುಲೆನ್ಸ್ ನೋಡಿ ಓಡಿಹೋದ ಜನರು

    ರಾಯಚೂರು: ಕೊರೊನಾ ಸೋಂಕಿತ ಶವವನ್ನು ಹೊತ್ತುತಂದ ಅಂಬುಲೆನ್ಸ್ ನೋಡಿ ಭಯಗೊಂಡ ಜನರು ಓಡಿಹೋಗಿರುವ ಘಟನೆ ರಾಯಚೂರು ತಾಲೂಕಿನ ಪೋತಗಲ್ ಗ್ರಾಮದಲ್ಲಿ ನಡೆದಿದೆ.

    ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ಗುರುತು ಮಾಡಿದ್ದ ಸ್ಥಳಕ್ಕೆ ತರಲಾಗಿದೆ. ಈ ವೇಳೆ ಅಲ್ಲೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರು ಅಂಬುಲೆನ್ಸ್ ಕಂಡು ಓಡಿ ಹೋಗಿದ್ದಾರೆ.

    ಪೋತಗಲ್ ಗ್ರಾಮದ ಸರ್ವೇ ನಂ.45ರಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಗಾಗಿ ಜಿಲ್ಲಾಡಳಿತ ಸ್ಥಳವನ್ನು ಗುರುತು ಮಾಡಿದೆ. ಆದರೆ ಇಲ್ಲಿ ಸೋಂಕಿತರನ್ನು ಅಂತ್ಯಕ್ರಿಯೆ ಮಾಡಬೇಡಿ ಎಂದು ಪೋತಗಲ್ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ಸೋಂಕಿತ ಅಂತ್ಯಕ್ರಿಯೆಯನ್ನು ಸರ್ಕಾರಿ ಜಾಗದಲ್ಲೇ ಮಾಡಿ ಮುಗಿಸಿದ್ದಾರೆ.

  • ಬಿಬಿಎಂಪಿ ಎಡವಟ್ಟು- ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆತಂದ ಕುಟುಂಬಸ್ಥರು

    ಬಿಬಿಎಂಪಿ ಎಡವಟ್ಟು- ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆತಂದ ಕುಟುಂಬಸ್ಥರು

    ಬೆಂಗಳೂರು: ಕೊರೊನಾ ಸೋಂಕಿತನನ್ನು ಅವರ ಕುಟುಂಬಸ್ಥರೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿರುವ ಘಟನೆ ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ನಡೆದಿದೆ.

    ಕಳೆದ ಎರಡು ದಿನದ ಹಿಂದೆಯೇ ಸೋಂಕಿತನಿಗೆ ಕರೆ ಮಾಡಿದ್ದ ಬಿಬಿಎಂಪಿಯವರು ನಿಮಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಮನೆಯಲ್ಲೇ ಇರಿ ಅಂಬುಲೆನ್ಸ್ ಬಂದು ಕರೆದುಕೊಂಡು ಬರುತ್ತದೆ ಎಂದಿದ್ದಾರೆ. ಆದರೆ ಎರಡು ದಿನ ಕಳೆದರೂ ಅಂಬುಲೆನ್ಸ್ ಬಾರದ ಕಾರಣ, ಇಂದು ಮನೆಯವರೇ ಸೋಂಕಿತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಯಶವಂತಪುರ ಬಳಿ ಇರುವ ಮೋಹನ್ ಕುಮಾರ್ ನಗರದ 48 ವರ್ಷದ ವ್ಯಕ್ತಿಗೆ ಕೆಮ್ಮು ಜ್ವರ, ಉಸಿರಾಟದ ಸಮಸ್ಯೆ ಇದ್ದ ಕಾರಣ ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಆತನಿಗೆ ಸೋಂಕು ಪಾಸಿಟಿವ್ ಬಂದಿದೆ. ಆಗ ಕರೆ ಮಾಡಿದ ಬಿಬಿಎಂಪಿ ಅಧಿಕಾರಿಗಳು ನಿಮಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. ಮನೆಯ ಬಳಿ ಅಂಬುಲೆನ್ಸ್ ಕಳಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಎರಡು ದಿನ ಕಳೆದರು ಅಂಬುಲೆನ್ಸ್ ಕಳುಹಿಸಿಲ್ಲ.

    ಇಂದು ಸೋಂಕಿತ ಮಾತನಾಡಲು ಆಗದ ಸ್ಥಿತಿಗೆ ತಲುಪಿದ್ದು, ಭಯಭೀತರಾದ ಕುಟುಂಬಸ್ಥರು ತಮ್ಮ ಸ್ವಂತ ಕಾರಿನಲ್ಲೇ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಬಾವ ಯಶವಂತಪುರ ಠಾಣೆಗೆ ಕರೆತಂದಿದ್ದು, ನಂತರ ಅದೇ ಕಾರಿನಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

  • ಹೃದಯಾಘಾತದಿಂದ ವ್ಯಕ್ತಿ ಸಾವು- ಕೊರೊನಾ ಪರೀಕ್ಷೆಯಲ್ಲಿ ಸೋಂಕು ದೃಢ

    ಹೃದಯಾಘಾತದಿಂದ ವ್ಯಕ್ತಿ ಸಾವು- ಕೊರೊನಾ ಪರೀಕ್ಷೆಯಲ್ಲಿ ಸೋಂಕು ದೃಢ

    – ಹೊಳೆನರಸೀಪುರದಲ್ಲಿ ಬೇಕರಿ ಇಟ್ಟುಕೊಂಡಿದ್ದ

    ಹಾಸನ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಈ ಮೂಲಕ ಹಾಸನ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ದಿನೇ ದಿನೇ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

    ಬೇಲೂರು ತಾಲೂಕಿನ 38 ವರ್ಷದ ವ್ಯಕ್ತಿ ಹೊಳೆನರಸೀಪುರದಲ್ಲಿ ಬೇಕರಿ ಇಟ್ಟುಕೊಂಡಿದ್ದ. ಇವರು ಶುಕ್ರವಾರ ತಮ್ಮ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ಸಾವನಪ್ಪಿದ್ದರು. ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಿದ್ದು, ಇಂದು ಬಂದ ವರದಿಯಲ್ಲಿ ಮೃತನಿಗೆ ಕೊರೊನಾ ಸೋಂಕು ಪಾಸಿಟಿವ್ ಎಂದು ಬಂದಿದೆ.

    ತಾಲೂಕು ನೋಡಲ್ ಅಧಿಕಾರಿ ಡಾ. ನರಸೇಗೌಡ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ನಿಯಮಾನುಸಾರ ಸುರಕಕ್ಷತಾ ಕ್ರಮಗಳೊಂದಿಗೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

  • ಆಸ್ಪತ್ರೆಯಿಂದ ಫೋನ್ ಕದ್ದು ಎಸ್ಕೇಪ್ ಆಗಿ ಬಂಧಿಯಾಗಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ

    ಆಸ್ಪತ್ರೆಯಿಂದ ಫೋನ್ ಕದ್ದು ಎಸ್ಕೇಪ್ ಆಗಿ ಬಂಧಿಯಾಗಿದ್ದ ಸೋಂಕಿತ ಕಳ್ಳ ಮತ್ತೆ ಪರಾರಿ

    – ಆರೋಪಿಯ ಪುಂಡಾಟಕ್ಕೆ ಪೊಲೀಸರು ಹೈರಾಣ

    ಕಾರವಾರ: ಎರಡು ದಿನಗಳ ಹಿಂದೆ ಕೊರೊನಾ ವಾರ್ಡಿನಿಂದ ಫೋನ್ ಕದ್ದು ಪರಾರಿಯಾಗಿದ್ದ ಸೋಂಕಿತ ಕಳ್ಳ ಮತ್ತೊಮ್ಮೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

    ಶಿರಸಿಯಲ್ಲಿ ವಾಹನ ಕಳ್ಳತನ ಆರೋಪದಡಿ ಬಂಧಿಯಾಗಿದ್ದ ಕೊರೊನಾ ಸೋಂಕಿತ ಕಾರವಾರದ ಕಿಮ್ಸ್ ಕೋವಿಡ್ ವಾರ್ಡ್‍ನಿಂದ ತಪ್ಪಿಸಿಕೊಂಡು ಪರಾರಿಯಾಗಿ ಕಾರವಾರದ ಕದ್ರಾ ಗ್ರಾಮದಲ್ಲಿ ಪೊಲೀಸರ ಅಥಿತಿಯಾಗಿದ್ದ. ಆತನನ್ನ ಮತ್ತೆ ಕಾರವಾರದ ಕಿಮ್ಸ್ ಆಸ್ಪತ್ರೆಯ ವಿಶೇಷ ಕೊರೊನಾ ವಾರ್ಡಿಗೆ ತಂದು ಆಡ್ಮಿಟ್ ಮಾಡಲಾಗಿತ್ತು. ಈಗ ಮತ್ತೆ ಆಸ್ಪತ್ರೆಯಿಂದ ಆತ ಪರಾರಿಯಾಗಿದ್ದು, ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಕಳ್ಳತನ ಕೇಸ್‍ನಲ್ಲಿ ಭಾಗಿಯಾಗಿದ್ದ ಧಾರವಾಡ ಮೂಲದ ಆರೋಪಿಗೆ ಜೂನ್ 28ರಂದು ಪಾಸಿಟಿವ್ ಬಂದಿತ್ತು. ಈ ಆರೋಪಿಯನ್ನು ಕಾರವಾರದ ಕಿಮ್ಸ್‍ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೇ ಆತ ಜೂನ್ 29ರ ರಾತ್ರಿ ವೇಳೆ ಕೋವಿಡ್ ವಾರ್ಡಿನ ಗಾಜನ್ನು ಒಡೆದು ಅಲ್ಲಿಂದ ಎರಡು ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದ. ಪೊಲೀಸರ ಹರಸಾಹಸದ ನಂತರ ಕಾರವಾರದ ಕದ್ರ ಗ್ರಾಮದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಮತ್ತೆ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಜನರಿಗೆ ಆತಂಕ ಎದುರಾಗಿದೆ.

  • ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    ಕೊರೊನಾಗೆ ಬಲಿಯಾದ ವ್ಯಕ್ತಿಯ ಮೃತದೇಹವನ್ನು ಜೆಸಿಬಿಯಲ್ಲಿ ಸಾಗಣೆ

    – ಅಮಾನವೀಯವಾಗಿ ನಡೆದುಕೊಂಡ ಪುರಸಭೆ ಅಧಿಕಾರಿಗಳು

    ಹೈದರಾಬಾದ್: ಕೊರೊನಾಗೆ ಬಲಿಯಾದ ಸೋಂಕಿತನ ಮೃತದೇಹವನ್ನು ಜೆಸಿಬಿ ಯಂತ್ರದ ಮೂಲಕ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಪಾಲಾಸ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊರೊನಾದ ಸಮಯದಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸಿದ್ದ ಮಾಜಿ ಪುರಸಭೆಯ ಉದ್ಯೋಗಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರು ತಮ್ಮ ಪಾಲಾಸ ಪಟ್ಟಣದಲ್ಲಿನ ಮನೆಯಲ್ಲಿ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಜೆಸಿಬಿ ವಾಹನದಲ್ಲಿ ಎತ್ತಿಕೊಂಡು ಹೋಗಿ ಗುಂಡಿ ಒಳಗೆ ಹಾಕಿ ಮುಚ್ಚಿ ಅಂತ್ಯಕ್ರಿಯೆ ಮಾಡಲಾಗಿದೆ.

    ಮನೆಯಲ್ಲೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಆಗ ನೆರೆಹೊರೆಯವರು ಮೃತದೇಹ ಇಲ್ಲೇ ಇದ್ದರೆ ನಮಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಆಗ ಮೃತನ ಮೊಮ್ಮಗಳು ಮತ್ತು ಸರ್ಕಾರಿ ಸ್ವಯಂ ಸೇವಕರು ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಸ್ಥಳಕ್ಕೆ ಬಂದ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿದ್ದರು, ಮೃತದೇಹವನ್ನು ಮಟ್ಟದೇ ಜೆಸಿಬಿ ಯಂತ್ರದಲ್ಲಿ ಮೃತದೇಹವನ್ನು ಸಾಗಿಸಿ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ.

    ಈ ವಿಚಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದು, ಈ ಘಟನೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ಇದು ಅಮಾನವೀಯ ಘಟನೆ. ಈ ರೀತಿಯ ಪ್ರಕರಣಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಸರ್ಕಾರವೇ ಪ್ರೋಟೋಕಾಲ್ ಅನ್ನು ಹೊರಡಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

    ಈ ಘಟನೆ ಕುರಿತು ಆಂಧ್ರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಲಾಸ ಪುರಸಭೆ ಆಯುಕ್ತ ನಾಗೇಂದ್ರ ಕುಮಾರ್ ಮತ್ತು ನೈರ್ಮಲ್ಯ ನಿರೀಕ್ಷಕ ಎನ್ ರಾಜೀವ್ ಅವರನ್ನು ಅಮಾನತುಗೊಳಿ ಶ್ರೀಕಾಕುಲಂ ಜಿಲ್ಲಾಧಿಕಾರಿ ಜೆ.ನಿವಾಸ್ ಆದೇಶಿಸಿದ್ದಾರೆ.

  • ಸೋಂಕಿತ ಮಹಿಳೆಯ ಅಂತ್ಯಕ್ರಿಯೆಗೆ ಸಾಥ್ ಕೊಟ್ಟ ಪಿಎಫ್‍ಐ ಕಾರ್ಯಕರ್ತರು

    ಸೋಂಕಿತ ಮಹಿಳೆಯ ಅಂತ್ಯಕ್ರಿಯೆಗೆ ಸಾಥ್ ಕೊಟ್ಟ ಪಿಎಫ್‍ಐ ಕಾರ್ಯಕರ್ತರು

    ಮಂಗಳೂರು: ಕೊರೊನಾ ಸೋಂಕಿಗೆ ಬಲಿಯಾದ ಮಂಗಳೂರಿನ ಎರಡನೇ ಮೃತ ದೇಹದ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರ ನೇತೃತ್ವದಲ್ಲಿ ನೆರವೇರಿಸಲಾಯಿತು.

    ಇಂದು ಕೊರೊನಾ ಸೋಂಕಿನಿಂದ ಮೃತರಾದ ಉಳ್ಳಾಲ ನಿವಾಸಿ ಮಹಿಳೆಯ ದಫನ್ ಕಾರ್ಯವನ್ನು ರಫೀಕ್ ಉಳ್ಳಾಲರವರ ನೇತೃತ್ವದಲ್ಲಿ ಉಳ್ಳಾಲದ ಮಸೀದಿಯಲ್ಲಿ ನೆರವೇರಿಸಲಾಯಿತು. ಉಳ್ಳಾಲದ ಸ್ಥಳೀಯ ಯುವಕರು ಸ್ವಯಂಪ್ರೇರಿತರಾಗಿ ಸಹಕರಿಸಿದರು. ಈ ಸಂಧರ್ಭದಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸ್ಥಳೀಯ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಈ ಮೊದಲು ಜೂನ್ 23ರಂದು ಮಂಗಳೂರಿನಲ್ಲಿ ಮೃತರಾದ ವ್ಯಕ್ತಿಯ ದಫನ್ ಕಾರ್ಯವನ್ನೂ ಪಿಎಫ್‍ಐ ಜಿಲ್ಲಾ ಸಮಿತಿ ಸದಸ್ಯ ಮುಝೈರ್ ಕುದ್ರೋಳಿಯವರ ತಂಡ ಮಂಗಳೂರಿನ ಬೋಳಾರದ ಮಸೀದಿಯಲ್ಲಿ ನೆರವೇರಿಸಲಾಯಿತು. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಪಿಎಫ್‍ಐ ವತಿಯಿಂದ ಆಯ್ದ 30 ಮಂದಿ ಕಾರ್ಯಕರ್ತರಿಗೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೊರೊನಾ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರದ ಮಾಹಿತಿ ಕಾರ್ಯಾಗಾರವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

    ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞ ಡಾ.ನವೀನ್ ಕುಮಾರ್ ಅವರಿಂದ ತರಬೇತಿ ನೀಡಲಾಗಿತ್ತು. ಇಲ್ಲಿ ತರಬೇತಿ ಪಡೆದ ಪಿಎಫ್‍ಐ ಕಾರ್ಯಕರ್ತರ ತಂಡ ಕೊರೊನಾದಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆಯ ನಿರ್ದೇಶನದಂತೆ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಸುತ್ತಿದೆ. ಮುಂದೆಯೂ ಈ ತಂಡ ಇಂತಹ ಕೆಲಸಕ್ಕೆ ಸನ್ನದ್ದವಾಗಿದ್ದು, ಜಿಲ್ಲಾಡಳಿತದ ಪ್ರಶಂಸೆಗೆ ಪಾತ್ರವಾಗಿದೆ.