Tag: Corn Field

  • ಜೋಳದ ಹೊಲದಲ್ಲಿ ಹುಲಿ ಪತ್ತೆ- ವ್ಯಾಘ್ರವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ

    ಜೋಳದ ಹೊಲದಲ್ಲಿ ಹುಲಿ ಪತ್ತೆ- ವ್ಯಾಘ್ರವನ್ನ ಸೆರೆಹಿಡಿಯಲು ಅರಣ್ಯ ಇಲಾಖೆ ಹರಸಾಹಸ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಧಾರವಾಡದ ಕಲಘಟಗಿ ತಾಲೂಕಿನ ಗಡಿ ಭಾಗದ ಬೆಂಡ್ಲಗಟ್ಟಿ ಗ್ರಾಮದ ಹುಲಿ ಕಾಣಿಸಿಕೊಂಡಿತ್ತು. ಗೋವಿನಜೋಳದ ಗದ್ದೆಯೊಂದರಲ್ಲಿ ಹುಲಿ ಕಂಡಿದ್ದಕ್ಕೆ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

    ಬೆಂಡ್ಲಗಟ್ಟಿ ಗ್ರಾಮದ ಜಮೀನಿನ ಮಾಲೀಕ ತಮ್ಮ ಗೋವಿನ ಜೋಳದ ಬೆಳೆಗೆ ನೀರು ಹರಿಸಲು ತೆರೆಳಿದ್ದರು. ಈ ವೇಳೆ ಕೆಲಸದಲ್ಲಿ ನಿರತರಾಗಿದ್ದ ಮಾಲೀಕ ಹುಲಿ ಕಂಡು ಬೆಚ್ಚಿಬಿದ್ದರು. ಬಳಿಕ ರೈತ ಗಾಬರಿಯಿಂದ ಕೂಗಾಡುತ್ತ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ವಿಷಯವನ್ನು ತಿಳಿಸಿದರು. ಆದರೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿ, ಜಮೀನಿನತ್ತ ತೆರಳಿದಾಗ ಹುಲಿ ಯಾರಿಗೂ ಗೋಚರಿಸಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಹುಲಿ ಕಂಡು ಬರಲಿಲ್ಲ. ಈ ಹಿನ್ನೆಲೆಯಲ್ಲಿ ಹುಲಿಯ ಪತ್ತೆಗಾಗಿ ಡ್ರೋಣ್ ನೆರವನ್ನು ಪಡೆಯಲು ನಿರ್ಧರಿಸಿ ಕಾರ್ಯಾಚರಣೆ ನಡೆಸಿದರು. ಆಗ ಗೋವಿನಜೋಳದ ಪೋದೆಯಲ್ಲಿ ಹುಲಿ ನಿದ್ರಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ.

    ಹುಲಿ ಇರುವುಕೆಯನ್ನು ಪತ್ತೆ ಹಚ್ಚಿದ ನಂತರ ತಪ್ಪಿಸಿಕೊಳ್ಳದಂತೆ ಬೋನ್ ಇಡುವ ಮೂಲಕ ದಿಗ್ಬಂಧನ ಹಾಕಲಾಯಿತು. ಮುಂಡಗೋಡ ಮತ್ತು ಕಲಘಟಗಿ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಮುಕಾಂ ಹೂಡಿದ್ದು, ಹುಲಿ ಸೆರೆ ಹಿಡಿಯವ ಪ್ರಯತ್ನದಲ್ಲಿ ತೊಡಗಿದ್ದಾರೆ. ಹುಲಿಯ ಚಿತ್ರ ಮತ್ತು ಹೆಜ್ಜೆಯ ಗುರುತನ್ನು ಗಮನಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಹುಲಿ 8ರಿಂದ 9 ವರ್ಷ ಪ್ರಾಯದ್ದಾಗಿರಬಹುದೆಂದು ಅಂದಾಜಿಸಿದ್ದಾರೆ.

    ಹುಲಿ ಕಂಡು ಬಂದ ಸ್ಥಳದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಜನತೆ ಜಾಗೃತರಾಗಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಒಂಟಿಯಾಗಿ ಸಂಚರಿಸದಂತೆ ಎಚ್ಚರಿಸಿದೆ. ಸಾಕು ಪ್ರಾಣಿಗಳನ್ನು ಹೊರಗೆ ಬಿಡದಂತೆ ಸೂಚಿಸಿದ್ದಲ್ಲದೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಇಲಾಖೆಗೆ ತಿಳಿಸುವಂತೆ ವಿನಂತಿಸಿಕೊಳ್ಳಲಾಗಿದೆ.

  • ಮೆಕ್ಕೆಜೋಳದ ಹೊಲದಲ್ಲಿ ವಿಮಾನ ಲ್ಯಾಂಡ್ – 233 ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್

    ಮೆಕ್ಕೆಜೋಳದ ಹೊಲದಲ್ಲಿ ವಿಮಾನ ಲ್ಯಾಂಡ್ – 233 ಪ್ರಯಾಣಿಕರ ಜೀವ ಉಳಿಸಿದ ಪೈಲೆಟ್

    ಮಾಸ್ಕೋ: 233 ಪ್ರಯಾಣಿಕರನ್ನು ಹೊತ್ತ ರಷ್ಯನ್ ವಿಮಾನವೊಂದು ಆಶ್ಚರ್ಯಕರ ರೀತಿಯಲ್ಲಿ ಲ್ಯಾಂಡ್ ಆಗಿದ್ದು, ಮೆಕ್ಕೆಜೋಳದ ಹೊಲದಲ್ಲಿ ಪೈಲೆಟ್ ವಿಮಾನವನ್ನು ತುರ್ತು ಲ್ಯಾಂಡ್ ಮಾಡಿ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ.

    ವಿಮಾನ ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಹಕ್ಕಿಗಳ ಹಿಂಡೊಂದು ವಿಮಾನಕ್ಕೆ ಅಪ್ಪಳಿಸಿದ ಪರಿಣಾಮ ಪೈಲೆಟ್ ಮಾಸ್ಕೋದ ಹೊರವಲಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದು, ಮೆಕ್ಕೆಜೋಳದ ಹೊಲದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಓರ್ವ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಉಳಿದವರೆಲ್ಲರೂ ಸುಕ್ಷಿತವಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಕುರಿತು ರಷ್ಯಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಉರಲ್ ಏರ್ ಲೈನ್ಸ್ ನ  ಏರ್ ಬಸ್ 321 ವಿಮಾನಕ್ಕೆ ಹಕ್ಕಿಗಳ ಗುಂಪೊಂದು ಅಪ್ಪಳಿಸಿದ ಪರಿಣಾಮ ವಿಮಾನದ ಎಂಜಿನ್‍ಗೆ ಅಡಚಣೆ ಉಂಟಾಗಿ ಮಾಸ್ಕೋದ ಹೊರವಲಯದಲ್ಲಿ ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗಿದ್ದು, ವಿಮಾನ ಸುಕ್ಷಿತವಾಗಿ ಲ್ಯಾಂಡ್ ಆಗಿದೆ. 23 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಯಾರೂ ಸಾವನ್ನಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.

    ವಿಮಾನ ಎಮರ್ಜೆನ್ಸಿ ಲ್ಯಾಂಡ್ ಆಗಿರುವುದನ್ನು ಅಲ್ಲಿನ ಟಿವಿ ವಾಹಿನಿಗಳು ಪವಾಡ ಎಂದು ಬಣ್ಣಿಸುತ್ತಿವೆ. ವಿಮಾನವು ಝುಕೋವಸ್ಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ ನಂತರ ತುರ್ತು ಲ್ಯಾಂಡ್ ಆಗಿದೆ.

    https://twitter.com/NDasner/status/1161965300952248321

    ಟಾಬ್ಲಾಯ್ಡ್ ಪತ್ರಿಕೆಯೊಂದು ಪೈಲೆಟ್ ದಮೀರ್ ಯೂಸುಪೋವ್ ಅವರನ್ನು ಹೀರೋ ಎಂದು ಬಣ್ಣಿಸಿದೆ. ಪೈಲೆಟ್ 233 ಜೀವಗಳನ್ನು ಉಳಿಸಿದ್ದಾರೆ. ಎಂಜಿನ್ ಫೇಲ್ ಆದ ನಂತರವೂ ವಿಮಾನವನ್ನು ಲ್ಯಾಂಡಿಂಗ್ ಗೇರ್ ಇಲ್ಲದೆ ಸುರಕ್ಷಿತವಾಗಿ ಮೆಕ್ಕೆಜೋಳದ ಪ್ರದೇಶದಲ್ಲಿ ಇಳಿಸುವ ಕೌಶಲ್ಯ ತೋರಿಸಿದ್ದಾರೆ ಎಂದು ಶ್ಲಾಘಿಸಲಾಗಿದೆ.

    2009ರಲ್ಲಿ ಯು.ಎಸ್.ಏರ್‌ವೇಸ್‌ನ 1549 ವಿಮಾನಕ್ಕೆ ಇದೇ ರೀತಿ ಹಕ್ಕಿಗಳು ಅಪ್ಪಳಿಸಿದ್ದವು. ಆಗ ವಿಮಾನವನ್ನು ಹಡ್ಸನ್ ನದಿಯಲ್ಲಿ ಲ್ಯಾಂಡ್ ಮಾಡಲಾಗಿತ್ತು. ಈ ಘಟನೆಯನ್ನು ಸಹ ಹಲವರು ನೆನಪಿಸಿಕೊಂಡಿದ್ದಾರೆ.

    https://twitter.com/Atlantide4world/status/1161951623784148993

    ತುರ್ತು ಲ್ಯಾಂಡ್ ಮಾಡಿದಾಗ ವಿಮಾನದ ಎಂಜಿನ್‍ನ್ನು ಬಂದ್ ಮಾಡಲಾಗಿತ್ತು. ಅಲ್ಲದೆ, ವಿಮಾನ ಲ್ಯಾಂಡಿಂಗ್ ಗೇರ್ ಹೊಂದಿತ್ತು ಎಂದು ರಷ್ಯಾದ ನಾಗರಿಕ ವಿಮಾನಯಾನ ಪ್ರಾಧಿಕಾರದ ವಕ್ತಾರ ಅಲೆನಾ ಮಿಖೇಯೇವಾ ತಿಳಿಸಿದ್ದಾರೆ.