Tag: construction

  • ಇಂದಿನಿಂದ 2 ತಿಂಗಳು ನೃಪತುಂಗ ರಸ್ತೆ ಬಂದ್

    ಇಂದಿನಿಂದ 2 ತಿಂಗಳು ನೃಪತುಂಗ ರಸ್ತೆ ಬಂದ್

    ಬೆಂಗಳೂರು: ನಗರದ ನೃಪತುಂಗ ರಸ್ತೆ ಇಂದಿನಿಂದ ಎರಡು ತಿಂಗಳು ಬಂದ್ ಆಗಲಿದೆ.

    ನೃಪತುಂಗ ರಸ್ತೆ ಅಂದ್ರೆ ಸದಾ ಗಿಜಿಗುಡುವ ಮಾರ್ಗ. ವಾಹನಗಳ ಸಂಚಾರ ಆಮೆ ಚಲನಯನ್ನೇ ಅನುಸರಿಸುತ್ತೆ. ಕೆಆರ್ ಸರ್ಕಲ್‍ನಿಂದ ಹಡ್ಸನ್ ಸರ್ಕಲ್ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ತಿದ್ದು, ಆರ್‍ಬಿಐ, ಡಿಜಿಪಿ ಕಚೇರಿ, ಲೋಕೋಪಯೋಗಿ ಕಚೇರಿಗಳು ಇದೇ ರಸ್ತೆಯಲ್ಲಿವೆ. ಇವತ್ತಿನಿಂದ ಈ ರಸ್ತೆ ಬಂದ್ ಮಾಡಲಾಗ್ತಿದ್ದು ಟ್ರಾಫಿಕ್ ಸಮಸ್ಯೆ ಕಟ್ಟಿಟ್ಟ ಬುತ್ತಿ.

    ನೃಪತುಂಗ ರಸ್ತೆಯನ್ನ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಮಾಡಲು ಕಾಮಗಾರಿ ಆರಂಭವಾಗಿದ್ದು, 2 ತಿಂಗಳ ಕಾಲ ಮುಚ್ಚಲಾಗ್ತಿದೆ. 14 ಮೀಟರ್ ವಿಸ್ತೀರ್ಣದ ರಸ್ತೆಯಲ್ಲಿ ಮೊದಲ ಹಂತದಲ್ಲಿ 7 ಮೀಟರ್ ಕಾಮಗಾರಿ ನಡೆಸಲಾಗ್ತಿದೆ. ಉಳಿದರ್ಧ ರಸ್ತೆಯಲ್ಲಿ ಕೇವಲ ಸರ್ಕಾರಿ ಬಸ್‍ಗಳು ಹಾಗು ಸರ್ಕಾರಿ ವಾಹನಗಳಿಗೆ ಮಾತ್ರ ಅವಕಾಶ ನಿಡಲಾಗಿದೆ.

    ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಲು ಬೇರೆ ಮಾರ್ಗ ಕಂಡುಕೊಂಡಿದ್ದಾರೆ. ವಾಹನ ಸವಾರರು ಕೆಆರ್ ಸರ್ಕಲ್‍ನಿಂದ ಕಬ್ಬನ್ ಪಾರ್ಕ್ ಪ್ರವೇಶಿಸಿ ಕೇಂದ್ರ ಗ್ರಂಥಾಲಯದ ಬಳಿ ಬಲಕ್ಕೆ ತಿರುವು ಪಡೆದು ಕಾರ್ಪೊರೇಷನ್ ಸರ್ಕಲ್‍ಗೆ ಎಂಟ್ರಿಯಾಗಬಹುದು. ಕೇಂದ್ರ ಗ್ರಂಥಾಲಯ ರಸ್ತೆಯನ್ನ ಏಕಮುಖ ಸಂಚಾರಗೊಳಿಸಲಾಗಿದ್ದು, ಗ್ರಂಥಾಲಯದ ರಸ್ತೆಯಿಂದ ಹೈಕೋರ್ಟ್ ಕಡೆಗೆ ಒನ್‍ವೇ ಮಾಡಲಾಗಿದೆ.

    ಸದಾ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆ ಇಂದಿನಿಂದ ಬಿಕೋ ಎನ್ನಲಿದೆ. ವಾಹನ ಸವಾರರಿಗೆ ಕಿರಿಕಿರಿ ಶುರುವಾಗಲಿದೆ. ಬಿಬಿಎಂಪಿ ಅಧಿಕಾರಿಗಳು ನಿಗಧಿತ ಸಮಯದಲ್ಲಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ರೆ ಉತ್ತಮ.

     

     

  • 3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    3 ತಿಂಗಳು ಕಳೆಯೋದ್ರಲ್ಲಿ ರಸ್ತೆ ತುಂಬಾ ಗುಂಡಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲೇ ಕಳಪೆ ಕಾಮಗಾರಿ

    ಗದಗ: ಎಲ್ಲೆಂದರಲ್ಲಿ ಗುಂಡಿಗಳಿಂದ ತುಂಬಿರೋ ರಸ್ತೆ ಒಂದೆಡೆಯಾದ್ರೆ ವಾಹನ ಓಡಿಸಲು ಪ್ರಯಾಸ ಪಡ್ತಿರೋ ಸವಾರರು ಇನ್ನೊಂದೆಡೆ. ಪಂಕ್ಚರ್ ಆದ ಬೈಕನ್ನು ತಳ್ತಿರೋ ಸವಾರ ಮತ್ತೊಂದೆಡೆ ಇದು ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಕ್ಷೇತ್ರದ ರಸ್ತೆಯ ಪರಸ್ಥಿತಿ.

    ಗದಗದಿಂದ 5 ಕಿಲೋಮೀಟರ್ ದೂರದಲ್ಲಿರೋ ಸಂಭಾಪುರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಪಿಎಂಜಿಎಸ್‍ವೈ ಇಲಾಖೆ ಉಸ್ತುವಾರಿಯಲ್ಲಿ 4 ಕೋಟಿ 93 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಯೋಜನೆ ಪ್ರಕಾರ ಇದು 2016 ಜುಲೈ 3ರಂದು ಮುಗಿಯಬೇಕಾಗಿತ್ತು. ಆದ್ರೆ ಮೂರು ತಿಂಗಳ ಹಿಂದಷ್ಟೆ ಮುಕ್ತಾಯವಾಗಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆಯಲ್ಲಿ ಪ್ರತಿದಿನ ನೂರಾರು ಜನ ಓಡಾಡ್ತಾರೆ. ಆದ್ರೆ ಕೆಲಸ ಮುಗಿದ ಮೂರೇ ತಿಂಗಳಿಗೆ ಈ ರಸ್ತೆ ತನ್ನ ನಿಜ ರೂಪವನ್ನು ತೋರಿಸಿದೆ. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.

    ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಕಾಮಗಾರಿ ಬಗ್ಗೆ ದೂರುಗಳಿವೆ. ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಆಗಿರೋ ತಪ್ಪನ್ನು ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿ ಅಂತಾ ತಿಪ್ಪೇ ಸಾರಿಸುತ್ತಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಬಗ್ಗೆ ಮಾತಾಡೋ ಸಚಿವ ಹೆಚ್.ಕೆ ಪಾಟೀಲ್ ಅವರ ತವರು ಜಿಲ್ಲೆಯಲ್ಲಿಯೇ ಇಂತಹ ಕಳಪೆ ಕಾಮಗಾರಿ ನಡೀತಿದ್ರೂ ಸಚಿವರೂ ಸೇರಿದಂತೆ ಯಾರೂ ಇತ್ತ ತಿರುಗಿ ನೋಡದೇ ಇರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.