Tag: conspiracy

  • ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು?

    ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚು?

    – ಪ್ರವಾದಿ ವಿರುದ್ಧ ಹೇಳಿಕೆ ಖಂಡಿಸಿ ಹಿಂಸಾಚಾರ
    – 10 ರಾಜ್ಯಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ
    – ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಪ್ರತಿಭಟನೆ

    ನವದೆಹಲಿ: ಪ್ರವಾದಿ ವಿರುದ್ಧದ ಹೇಳಿಕೆ ಖಂಡಿಸಿ ಭಾರತದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಗಳು, ಹಿಂಸಾಚಾರಗಳು ಸಂಪೂರ್ಣ ವ್ಯವಸ್ಥಿತವಾದ ಟೂಲ್ ಕಿಟ್ ಭಾಗ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಚು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ದೇಶದ 10 ರಾಜ್ಯಗಳಲ್ಲಿ ಏಕಕಾಲದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದವು. ಎಲ್ಲ ಪ್ರತಿಭಟನೆಗಳ ನಡುವೆ ಸಾಮ್ಯತೆ ಕೂಡ ಕಂಡು ಬಂದಿದೆ. ಸಾಮೂಹಿಕ ಪ್ರಾರ್ಥನೆ ಬಳಿಕ ಜಮ್ಮು ಕಾಶ್ಮೀರದಿಂದ ಶುರುವಾದ ಪ್ರತಿಭಟನೆ ದೆಹಲಿ ಮೂಲಕ ದಕ್ಷಿಣ ಭಾರತದವರೆಗೂ ಹಬ್ಬಿತ್ತು.

    ಉತ್ತರ ಪ್ರದೇಶ, ಜಮ್ಮುಕಾಶ್ಮೀರ, ಜಾರ್ಖಂಡ್, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ನಡೆದ ಎಲ್ಲ ಪ್ರತಿಭಟನೆಗಳಲ್ಲಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚಿ ಶಾಂತಿ ಕದಡುವ ಪ್ರಯತ್ನ ಮಾಡಲಾಗಿದೆ. ಅಲ್ಲದೇ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವ ಯತ್ನವೂ ಆಗಿದೆ. ಇದನ್ನೂ ಓದಿ: ಹಿಜಬ್ ಸಂಘರ್ಷ ಮಧ್ಯೆ ಸಾವರ್ಕರ್ ಫೋಟೋ ವಿವಾದ – ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದ ಸಂದರ್ಭದಲ್ಲಿಯೇ ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿಯೂ ಭಾರೀ ಪ್ರತಿಭಟನೆಗಳು ನಡೆದಿವೆ. ದೇಶದ ಹಲವೆಡೆ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತೆ ಇದೆ. ಅದರಲ್ಲೂ ಬಂಗಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ. ಹೌರಾದಲ್ಲಿ ಉದ್ರಿಕ್ತರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ದಾಂಧಲೆ ಎಬ್ಬಿಸಿದ್ದಾರೆ. ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಬಂಧಿಸಿದ್ರು. ಪರಿಣಾಮ ಆಗ್ನೇಯ ರೈಲ್ವೇಯ ಹಲವು ರೈಲು ಸೇವೆ ಸಂಪೂೂರ್ಣವಾಗಿ ರದ್ದಾಗಿವೆ. ಉತ್ತರ ಭಾರತದ ಹಲವು ನಗರಗಳಲ್ಲಿ ನಿಷೇಧಾಜ್ಞೆ ಮುಂದುವರೆಸಲಾಗಿದೆ.


    ಉತ್ತರಪ್ರದೇಶದಲ್ಲಿ 109 ಗಲಭೆಕೋರರನ್ನು ಬಂಧಿಸಲಾಗಿದೆ. ದೆಹಲಿ ಮತ್ತು ತೆಲಂಗಾಣದಲ್ಲಿ ಪ್ರತಿಭಟನೆ ಸಂಬಂಧ ಎಂಐಎಂ ಕಾರ್ಯಕರ್ತರನ್ನು, ಇನ್ನೂ ಕೆಲವು ಕಡೆ ಸಿಎಫ್‍ಐ ಸದಸ್ಯರನ್ನು ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಅಲರ್ಟ್ ಆಗಿದ್ದು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

    ಪ್ರವಾದಿ ವಿವಾದ ತೀವ್ರಗೊಳ್ಳಬಹುದು ಮತ್ತಷ್ಟು ಗಲಭೆ, ದೊಂಬಿಗಳು, ಶಾಂತಿ ಕದಡುವ ಕೆಲಸ ಆಗಬಹುದು. ಹೀಗಾಗಿ ಇದನ್ನು ತಡೆಯಲು ರಾಜ್ಯಗಳು ಸನ್ನದ್ಧರಾಗಬೇಕು. ಅಗತ್ಯ ಬಿದ್ದಲ್ಲಿ ಅರೆಸೇನಾ ತುಕಡಿಗಳನ್ನು ಬಳಸಿಕೊಳ್ಳಿ. ಉದ್ರೇಕಕಾರಿ ಭಾಷಣ ಮಾಡುವ ವ್ಯಕ್ತಿಗಳು, ಸೋಶಿಯಲ್ ಮಿಡಿಯಾ ಪೋಸ್ಟ್‌ಗಳ ಮೇಲೆ ನಿಗಾ ಇಡಿ ಎಂದು ಸೂಚಿಸಿದೆ. ಸಮಾಜದ ಶಾಂತಿ ಕದಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ.

  • 7 ಬಾರಿ ತಲೆ ಮೇಲೆ ಲೇಸರ್ ಲೈಟ್ – ಅಮೇಥಿ ರ‍್ಯಾಲಿ ವೇಳೆ ರಾಹುಲ್ ಹತ್ಯೆಗೆ ಸಂಚು?

    7 ಬಾರಿ ತಲೆ ಮೇಲೆ ಲೇಸರ್ ಲೈಟ್ – ಅಮೇಥಿ ರ‍್ಯಾಲಿ ವೇಳೆ ರಾಹುಲ್ ಹತ್ಯೆಗೆ ಸಂಚು?

    – ಕೇಂದ್ರ ಗೃಹ ಸಚಿವಾಲಯಕ್ಕೆ ಕಾಂಗ್ರೆಸ್ ಪತ್ರ

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

    ಕಾಂಗ್ರೆಸ್ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ಉಲ್ಲೇಖಿಸಿದೆ. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಾಹುಲ್ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಿಳಿಸಿದೆ.

    ಲೇಸರ್ ಗ್ರೀನ್ ಲೈಟ್ ರಾಹುಲ್ ಗಾಂಧಿ ಅವರ ತಲೆ ಮೇಲೆ ಸುಮಾರು 7 ಬಾರಿ ಅತಿ ಕಡಿಮೆ ಅವಧಿಯಲ್ಲಿ ಬಿದ್ದಿರುವುದು ದೃಢವಾಗಿದೆ. ಅಲ್ಲದೇ ದೇವಾಲಯದ ಭೇಟಿ ಸಂದರ್ಭದಲ್ಲಿ ಅವರ ಎಡಭಾಗದ ತಲೆ ಮೇಲೆ 2 ಬಾರಿ ಲೇಸರ್ ಬೆಳಕು ಕಾಣಿಸಿತ್ತು ಎಂದು ವಿವರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಕೂಡ ಕಾಂಗ್ರೆಸ್ ಗೃಹ ಸಚಿವಾಲಯಕ್ಕೆ ಪತ್ರದೊಂದಿಗೆ ನೀಡಿದೆ. ಈ ಪತ್ರದಲ್ಲಿ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಹಿ ಇದೆ.

    ರಾಹುಲ್ ಗಾಂಧಿ ಅವರ ರಕ್ಷಣೆಗೆ ಸಂಬಂಧಿಸಿದಂತೆ ಇಂತಹ ಘಟನೆ ಎಚ್ಚರಿಕೆಯ ಸಂದೇಶವಾಗಿರಬಹುದು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅಲ್ಲದೇ ಘಟನೆಯಿಂದ ನಾವು ಶಾಕ್‍ಗೆ ಒಳಗಾಗಿದ್ದು, ರಾಹುಲ್ ಗಾಂಧಿ ಅವರನ್ನ ಗುರಿಯಾಗಿಸಿ ಕೊಲೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಇಂದಿರಾ ಗಾಂಧಿ, ರಾಹುಲ್ ಗಾಂಧಿ ಅವರ ಹತ್ಯೆಯ ವೇಳೆ ಉಂಟಾಗಿದ್ದ ರಕ್ಷಣಾ ಲೋಪಗಳನ್ನು ಪ್ರಸ್ತಾಪಿಸಿ ರಕ್ಷಣೆಯ ಜವಾಬ್ದಾರಿ ಹೊಂದಿರುವ ಉತ್ತರ ಪ್ರದೇಶ ಸರ್ಕಾರದ ಆಡಳಿತದ ಅಪಾಯ ನಡೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

     

    ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ರಾಹುಲ್ ಅವರು ಪ್ರಚಾರ ಸಭೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆ ಬಗ್ಗೆಯೂ ಕಾಂಗ್ರೆಸ್ ಈ ಹಿಂದೆ ಆತಂಕ ವ್ಯಕ್ತಪಡಿಸಿತ್ತು. ಏಪ್ರಿಲ್ 26ರಂದು ಕರ್ನಾಟಕ ವಿಧಾನಸಭೆಯ ಪ್ರಚಾರಕ್ಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸಿದ್ದರು. ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತ್ತು. ವೇಗವಾಗಿ 8 ಸಾವಿರ ಅಡಿಯಿಂದಲೇ ಆಗಸದಿಂದ ಕೆಳಗಿಳಿಯುತ್ತಿರುವಂತೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ರಾಹುಲ್ ಗಾಂಧಿ ಅಂದು ಪ್ರತಿಕ್ರಿಯೆ ನೀಡಿ ವಿಮಾನ ಹಠಾತ್ತನೇ 8 ಸಾವಿರ ಅಡಿ ಕೆಳಗೆ ಕುಸಿದಾಗ ಎಲ್ಲಾ ಮುಗಿದು ಹೋಯ್ತು ಅಂದುಕೊಂಡೆ. ಆ ಕ್ಷಣದಲ್ಲೇ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಗೆ ನಿರ್ಧರಿಸಿದ್ದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಯಾತ್ರೆ ಹೋಗುತ್ತೇನೆ ಎಂದು ರಾಹುಲ್ ಹೇಳಿದ್ದರು.