Tag: Congress Presidential Election

  • ಡಾಕ್ಟರ್ ಆಗುವ ಕನಸು ಕಂಡವರು ರಾಜಸ್ಥಾನದ ಮುಖ್ಯಮಂತ್ರಿಯಾದರು – ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಗೆಹ್ಲೋಟ್

    ಡಾಕ್ಟರ್ ಆಗುವ ಕನಸು ಕಂಡವರು ರಾಜಸ್ಥಾನದ ಮುಖ್ಯಮಂತ್ರಿಯಾದರು – ಎಐಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಗೆಹ್ಲೋಟ್

    ನವದೆಹಲಿ: ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ಚುನಾವಣೆ (Election) ನಡೆಯಲಿದೆ. ಗಾಂಧಿ ಕುಟುಂಬಯೇತರ ವ್ಯಕ್ತಿ ಈ ಬಾರಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಕೈ ಪಕ್ಷದ (Congress) ಅನೇಕ ನಾಯಕರು ಕಾಂಗ್ರೆಸ್ ಸರ್ವೋನ್ನತ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಸೆಪ್ಟೆಂಬರ್ 28 ರಂದು ಅವರು ನಾಮಪತ್ರವನ್ನು ಸಲ್ಲಿಸಲಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ (Congress Presidential Election) ಅಶೋಕ್ ಗೆಹ್ಲೋಟ್‌ಗೆ ಸೋನಿಯಾ ಗಾಂಧಿ ಬೆಂಬಲವೂ ಇದೆ ಎನ್ನಲಾಗಿದೆ. ಅವರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ತಾರೋ ಇಲ್ಲವೋ ಎನ್ನುವುದು ಮತದಾನದ ಬಳಿಕವೇ ತಿಳಿಯಲಿದೆ. ಆದರೆ ರಾಜಸ್ಥಾನದ ಜೋಧ್‌ಪುರದಲ್ಲಿ ಹುಟ್ಟಿ, ವೈದ್ಯನಾಗಬೇಕೆಂದುಕೊಂಡಿದ್ದ ಹುಡುಗನೊಬ್ಬ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿ ಹುದ್ದೆಗೇರಿ ಈಗ ಕಾಂಗ್ರೆಸ್ ಉನ್ನತ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಅವರ ಬೆಳವಣಿಗೆ ಕುತೂಹಲಕಾರಿಯಾಗಿದೆ.

    ಅಶೋಕ್ ಗೆಹ್ಲೋಟ್ ಮೇ 3, 1951 ರಂದು ಜೋಧ್‌ಪುರದಲ್ಲಿ ಜನಿಸಿದರು. ತಂದೆ ಲಕ್ಷ್ಮಣ್ ಸಿಂಗ್ ಗೆಹ್ಲೋಟ್ ಓರ್ವ ಜಾದೂಗಾರರಾಗಿದ್ದರು. ಗೆಹ್ಲೋಟ್ ಅವರ ಆರಂಭಿಕ ಶಿಕ್ಷಣವು ಜೋಧ್‌ಪುರದಲ್ಲಿ ಮುಗಿಯಿತು. ಬಳಿಕ ತಂದೆಯಿಂದ ಜಾದೂ ಕಲಿತು, ಅವರೊಂದಿಗೆ ಹಲವು ಕಡೆ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟರು. ಶಿಕ್ಷಣ ಮುಂದುವರಿಸಿದ ಅವರು ವಿಜ್ಞಾನ ಪದವೀಧರರಾದರು. ಅಲ್ಲದೇ ಎಲ್‌ಎಲ್‌ಬಿ ಮಾಡುವುದರ ಜೊತೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವಿದ್ಯಾರ್ಥಿಯಾಗಿರುವಾಗಲೇ ಗೆಹ್ಲೋಟ್ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐನೊಂದಿಗೆ ರಾಜಕೀಯ ಇನ್ನಿಂಗ್ಸ್ ಆರಂಭಿಸಿದರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ.

    ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೆಹ್ಲೋಟ್ ಅವರನ್ನು 1973 ರಲ್ಲಿ ರಾಜಸ್ಥಾನ ಎನ್‌ಎಸ್‌ಯುಐ ನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. 1979 ರ ವರೆಗೆ ಈ ಹುದ್ದೆಯಲ್ಲಿ ಜವಾಬ್ದಾರಿ ನಿಭಾಯಿಸಿದ ಅವರಿಗೆ 1979 ರಲ್ಲಿ ಜೋಧ್‌ಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಮಾಂಡ್ ನೀಡಲಾಯಿತು. ಈ ಅವಕಾಶವನ್ನು ಬಳಸಿಕೊಂಡ ಅವರು ನಿಜವಾದ ರಾಜಕೀಯ ಮ್ಯಾಜಿಕ್ ತೋರಿಸಲು ಆರಂಭಿಸಿದರು. ಇದನ್ನು ಗಮನಿಸಿದ ಹೈಕಮಾಂಡ್ 1982 ರಲ್ಲಿ ರಾಜಸ್ಥಾನ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿತು. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ

    3 ಬಾರಿ ರಾಜ್ಯಾಧ್ಯಕ್ಷ:
    ಅಶೋಕ್ ಗೆಹ್ಲೋಟ್ ತಮ್ಮ 34ನೇ ವಯಸ್ಸಿನಲ್ಲಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ 3 ಬಾರಿ ಸೇವೆ ಸಲ್ಲಿಸಿದ್ದರು. ಸೆಪ್ಟೆಂಬರ್ 1985 ರಿಂದ ಜೂನ್ 1989 ರ ವರೆಗೆ ಮೊದಲ ಬಾರಿಗೆ, ಡಿಸೆಂಬರ್ 1994 ರಿಂದ ಜೂನ್ 1997 ರ ವರೆಗೆ 2ನೇ ಬಾರಿಗೆ ಮತ್ತು 1997 ರಿಂದ ಏಪ್ರಿಲ್ 14, 1999 ರವರೆಗೆ 3ನೇ ಬಾರಿಗೆ ರಾಜ್ಯಧ್ಯಕ್ಷರಾಗಿ ಆಯ್ಕೆಯಾಗಿದ್ದರು.

    5 ಬಾರಿ ಸಂಸದರಾಗಿ ಆಯ್ಕೆ:
    1977 ರಲ್ಲಿ ಅಶೋಕ್ ಗೆಹ್ಲೋಟ್ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದರು. ಮೊದಲು ಸರ್ದಾರ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ರಾಜಕೀಯ ಇನ್ನಿಂಗ್ಸ್‌ನ ಮೊದಲ ಹೋರಾಟದಲ್ಲಿ ಸೋಲನ್ನೊಪ್ಪಿದರು. 2 ವರ್ಷಗಳ ನಂತರ, 1779 ರಲ್ಲಿ, ಗೆಹ್ಲೋಟ್ ಜೋಧ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಮರು ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 1980-84ರಲ್ಲಿ ಮೊದಲ ಬಾರಿಗೆ ಸಂಸದರಾದರು. ಇದಾದ ನಂತರ 1984-1989, 1991-96, 1996-98 ಮತ್ತು 1998-1999ರಲ್ಲಿ ಜೋಧ್‌ಪುರದಿಂದ ಸಂಸದರಾಗಿದ್ದರು.

    5 ಬಾರಿ ಶಾಸಕರಾಗಿ ಆಯ್ಕೆ:
    1999 ರಲ್ಲಿ ಅಶೋಕ್ ಗೆಹ್ಲೋಟ್ ಜೋಧ್‌ಪುರದ ಸರ್ದಾರ್‌ಪುರ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಇದಾದ ನಂತರ 2003, 2008, 2013 ಮತ್ತು 2018ರಲ್ಲಿ ಇದೇ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಇದನ್ನೂ ಓದಿ: ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪನೆಗೆ ಯುವಕರು ಉಗ್ರ ಸಂಘಟನೆ ಸೇರಲು PFIನಿಂದ ಪ್ರೋತ್ಸಾಹ – NIA

    Congress

    ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ:
    ಅಶೋಕ್ ಗೆಹ್ಲೋಟ್ ಅವರು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಪಿ.ವಿ ನರಸಿಂಹರಾವ್ ಅವರ ಸರ್ಕಾರಗಳಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಸರ್ಕಾರದಲ್ಲಿ 2 ಸೆಪ್ಟೆಂಬರ್ 1982 ರಿಂದ 7 ಫೆಬ್ರವರಿ 1984 ರವರೆಗೆ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಉಪ ಮಂತ್ರಿಯಾಗಿದ್ದರು. 7 ಫೆಬ್ರವರಿ 1984 ರಿಂದ 31 ಅಕ್ಟೋಬರ್ 1984 ಮತ್ತು 12 ನವೆಂಬರ್ 1984 ರಿಂದ 31 ಡಿಸೆಂಬರ್ 1984 ರವರೆಗೆ ಅವರು ಕ್ರೀಡಾ ಉಪ ಮಂತ್ರಿಯೂ ಆಗಿದ್ದರು. ಗೆಹ್ಲೋಟ್ ಅವರು 31 ಡಿಸೆಂಬರ್ 1984 ರಿಂದ 26 ಸೆಪ್ಟೆಂಬರ್ 1985 ರವರೆಗೆ ಕೇಂದ್ರ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು. 21 ಜೂನ್ 1991 ರಿಂದ 18 ಜನವರಿ 1993 ರವರೆಗೆ ಅವರು ಕೇಂದ್ರ ಜವಳಿ ರಾಜ್ಯ ಸಚಿವರಾಗಿದ್ದರು.

    3 ಬಾರಿ ರಾಜಸ್ಥಾನದ ಮುಖ್ಯಮಂತ್ರಿ:
    ಅಶೋಕ್ ಗೆಹ್ಲೋಟ್ 3 ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದಾರೆ. ಮೊದಲು ಅವರು 1998 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2003 ರವರೆಗೆ ಮುಖ್ಯಮಂತ್ರಿಯಾಗಿದ್ದರು. 2008ರಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿಯಾದ ಅವರು 2013 ರ ವರೆಗೆ ಈ ಹುದ್ದೆಯಲ್ಲಿದ್ದರು. 2018 ರಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾದ ಅವರು ಸದ್ಯ ಅದೇ ಸ್ಥಾನದಲ್ಲಿದ್ದಾರೆ. ಇದಲ್ಲದೆ, ಗೆಹ್ಲೋಟ್ ಅವರು ಜೂನ್ 1989 ಮತ್ತು ನವೆಂಬರ್ 1989 ರ ನಡುವೆ ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಗೃಹ ಮತ್ತು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗವನ್ನು ಹೊಂದಿದ್ದರು.

    ಕಾಂಗ್ರೆಸ್ ಪಕ್ಷದಲ್ಲಿಯೂ ಪ್ರಮುಖ ಸ್ಥಾನಮಾನ:
    ಗೆಹ್ಲೋಟ್, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ಜನವರಿ 2004 ರಿಂದ ಜುಲೈ 2004 ರವರೆಗೆ ಆಯ್ಕೆ ಮಾಡಲಾಯಿತು. ಈ ಅವಧಿಯಲ್ಲಿ ಹಿಮಾಚಲ ಮತ್ತು ಛತ್ತೀಸ್‌ಗಢದ ರಾಜ್ಯ ಉಸ್ತುವಾರಿಯೂ ಆಗಿದ್ದರು. ಜುಲೈ 2004 ರಲ್ಲಿ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. 18 ಫೆಬ್ರವರಿ 2009 ರವರೆಗೆ ಈ ಹುದ್ದೆಯಲ್ಲಿ ಅವರು ಕೆಲಸ ಮಾಡಿದರು. ಉತ್ತರ ಪ್ರದೇಶ, ದೆಹಲಿ, ಕಾಂಗ್ರೆಸ್ ಘಟಕಗಳು ಮತ್ತು ಸೇವಾದಳದ ಉಸ್ತುವಾರಿಯೂ ಆಗಿದ್ದರು. 30 ಮಾರ್ಚ್ 2018 ರಂದು ಅವರನ್ನು ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು.

    28ರಂದು ಗೆಹ್ಲೋಟ್ ನಾಮಪತ್ರ:
    ಅಪಾರ ರಾಜಕೀಯ ಅನುಭವ ಹೊಂದಿರುವ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸೆಪ್ಟೆಂಬರ್ 28 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. 19 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಕಾಂಗ್ರೆಸ್‌ನ ನೂತನ ಅಧ್ಯಕ್ಷರ ಹೆಸರೂ ಹೊರಬೀಳುವ ಸಾಧ್ಯತೆಗಳಿವೆ.

    – ಶಬ್ಬೀರ್ ನಿಡಗುಂದಿ

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ, ಪ್ರಿಯಾಂಕಾ ಭಾಗಿ – ಡಿಕೆಶಿ

    ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ, ಪ್ರಿಯಾಂಕಾ ಭಾಗಿ – ಡಿಕೆಶಿ

    ಬೆಂಗಳೂರು: ಕಾಂಗ್ರೆಸ್ (Congress) ನಾಯಕ ರಾಹುಲ್‌ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆಯಲಿರುವ ಭಾರತ್ ಜೋಡೋ (Bharath Jodo Yatra) ಪಾದಯಾತ್ರೆಯಲ್ಲಿ ಕಾಂಗ್ರೆಸ್ ಮಹಾ ನಾಯಕಿಯರಾದ ಸೋನಿಯಾ ಗಾಂಧಿ (Sonia Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ (DK Shivakumar), ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಭಾರತ ಜೋಡೋ ಯಾತ್ರೆಯಲ್ಲಿ ಎಐಸಿಸಿ (AICC) ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ. ಅವರು ಭಾಗವಹಿಸಲಿರುವ ದಿನಾಂಕ ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ನೆಪ ಹೇಳೋ ಬದಲು PFIಯನ್ನು ನಿಷೇಧಿಸಲಿ: ದಿನೇಶ್ ಗುಂಡೂರಾವ್

    ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ (KC Venugopal) ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಹೊತ್ತಿರುವ ರಣದೀಪ್ ಸುರ್ಜೇವಾಲ ಅವರು ಭಾರತ ಜೋಡೋ ಯಾತ್ರೆಯ ಸಿದ್ಧತೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಈ ಯಾತ್ರೆ ಪ್ರಮುಖ 5 ವಿಚಾರಗಳನ್ನು ಒಳಗೊಂಡಿದೆ. ಈ ಯಾತ್ರೆಯಲ್ಲಿ ಎಲ್ಲಾ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಹೇಗಿರಲಿದೆ ರೂಪುರೇಷೆ?
    ರಾಜ್ಯದಲ್ಲಿ ಸೆ.30 ರಂದು ಬೆಳಗ್ಗೆ 9 ಗಂಟೆಗೆ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಅ.2 ರಂದು ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಂತರ ದಸರಾ (Mysuru Dasara) ಹಬ್ಬದ ಪ್ರಯುಕ್ತ 2 ದಿನಗಳ ಕಾಲ ಯಾತ್ರೆಗೆ ಬಿಡುವು ನೀಡಲಾಗುವುದು. ಆಮೇಲೆ ಬಳ್ಳಾರಿಯಲ್ಲಿ (Bellary) ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಫಿಸಿಕಲ್ ಟ್ರೈನರ್‌ಗೆ ಉಂಗುರ ತೊಡಿಸಿ ಎಂಗೇಜ್ಡ್ ಆದ ಆಮೀರ್ ಖಾನ್ ಪುತ್ರಿ

    ಯಾತ್ರೆಯ ಭಾಗವಾಗಿ ರಾಹುಲ್ ಗಾಂಧಿ ಅವರು ಯುವಕರು, ಮಹಿಳೆಯರು, ರೈತರು, ನಾಗರಿಕ ಸಮುದಾಯಗಳು, ವಿದ್ಯಾರ್ಥಿಗಳು, ಬುಡಕಟ್ಟು ಜನರ ಜೊತೆ ಒಂದೊಂದು ದಿನ ಮಾತುಕತೆ ನಡೆಸಲಿದ್ದಾರೆ. ಪ್ರತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ, ಪಕ್ಷದ ಘಟಕಗಳು, ಪರಾಜಿತ ಅಭ್ಯರ್ಥಿಗಳು ಜನರನ್ನು ಕರೆ ತಂದ ದಿನ ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಲು ಅವಕಾಶ ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ನಾಗರಿಕ ಸಮಾಜದ ಗಣ್ಯರು, ಕಲಾವಿದರು, ಕೈಗಾರಿಕೋದ್ಯಮಿಗಳು, ಚಿಂತಕರು ಸೇರಿದಂತೆ ಪ್ರಮುಖರಿಗೆ ಅವಕಾಶ ಮಾಡಿಕೊಡಲಾಗುವುದು. ಈ ಯಾತ್ರೆ ಮಾರ್ಗದಲ್ಲಿ ಬರುವ ಅತಿ ದೊಡ್ಡ ನಗರ ಮೈಸೂರು ಆಗಿದ್ದು, ಮೈಸೂರು ಜನರು ಬೆಳಗ್ಗೆ 7 ಗಂಟೆಗೆ ರಾಹುಲ್ ಗಾಂಧಿ ಜತೆಗೆ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ.

    ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ (Congress Presidential Election) ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ರಾಹುಲ್ ಗಾಂಧಿಯವರು ಪಕ್ಷದ ಮುಂದಾಳತ್ವ ವಹಿಸಬೇಕು ಎಂದು ನಮ್ಮ ರಾಜ್ಯದ ಎಲ್ಲಾ ನಾಯಕರ ಒತ್ತಾಸೆಯಾಗಿದೆ. ಆದರೆ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಾಂಧಿ ಕುಟುಂಬದ ಯಾರೊಬ್ಬರೂ AICC ಅಧ್ಯಕ್ಷರಾಗಬಾರದೆಂದು ರಾಹುಲ್ ನಿರ್ಧರಿಸಿದ್ದಾರೆ – ಅಶೋಕ್ ಗೆಹ್ಲೋಟ್

    ಗಾಂಧಿ ಕುಟುಂಬದ ಯಾರೊಬ್ಬರೂ AICC ಅಧ್ಯಕ್ಷರಾಗಬಾರದೆಂದು ರಾಹುಲ್ ನಿರ್ಧರಿಸಿದ್ದಾರೆ – ಅಶೋಕ್ ಗೆಹ್ಲೋಟ್

    ನವದೆಹಲಿ/ತಿರುವನಂತಪುರಂ: ಗಾಂಧಿ ಕುಟುಂಬದ (Gandhi Family) ಯಾರೊಬ್ಬರೋ ಕಾಂಗ್ರೆಸ್ (Congress) ಮುಖ್ಯಸ್ಥರಾಗಬಾರದೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸ್ಪಷ್ಟಪಡಿರುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ತಿಳಿಸಿದ್ದಾರೆ.

    ಭಾರತ್ ಜೋಡೋ ಯಾತ್ರೆ (Bharat Jodo Yatra) ಯಲ್ಲಿ ಪಾಲ್ಗೊಂಡಿರುವ ಸಿಎಂ (Rajasthan Chief Minister), ಕೇರಳದಲ್ಲಿ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಎಲ್ಲರ ಆಶಯದಂತೆ ಕಾಂಗ್ರೆಸ್ (Congress) ಅಧ್ಯಕ್ಷರಾಗಿ ಮರಳಲು ಸಾಕಷ್ಟು ಬಾರಿ ಅವರಲ್ಲಿ ವಿನಂತಿಸಿದೆ. ಆದರೆ ರಾಹುಲ್ ಜೀ ಅವರು, ನಾನು ಎಲ್ಲರ ಆಶಯವನ್ನು ಗೌರವಿಸುತ್ತೇನೆ. ಆದರೆ ಒಂದೇ ಒಂದು ಕಾರಣಕ್ಕಾಗಿ ಗಾಂಧಿ ಕುಟುಂಬೇತರರು ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ನಿರ್ಧರಿಸಿದ್ದೇನೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಬಿಜೆಪಿಯ (BJP) ಸ್ವಜನ ಪಕ್ಷಪಾತದ ಆರೋಪವೇ ರಾಹುಲ್ ಗಾಂಧಿ ಈ ನಿರ್ಧಾರಕ್ಕೆ ಕಾರಣ ಎಂದು ಪ್ರಶ್ನಿಸಿದ ಮಾಧ್ಯಮಗಳಿಗೆ ಉತ್ತರಿಸಿದ ಅವರು, 2019 ರಲ್ಲಿ ಯಾವುದೇ ಹುದ್ದೆಗಳಿಲ್ಲದೇ ಕೆಲಸ ಮಾಡುವುದಾಗಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ತಿಳಿಸಿದ್ದರು. ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತ್ರಕರ್ತೆ ಹಿಜಬ್ ಧರಿಸದ್ದಕ್ಕೆ ಸಂದರ್ಶನವನ್ನೇ ರದ್ದುಗೊಳಿಸಿದ ಇರಾನ್ ಅಧ್ಯಕ್ಷ

    ಈ ಹಿಂದೆ ಉದಯಪುರದಲ್ಲಿ ನಡೆದಿದ್ದ ಕಾಂಗ್ರೆಸ್‌ನ ಚಿಂತನಾ ಶಿಬಿರದಲ್ಲಿ `ಒಬ್ಬ ವ್ಯಕ್ತಿ – ಒಂದು ಹುದ್ದೆ’ ನಿಯಮವನ್ನೂ ಅಳವಡಿಸಿಕೊಂಡಿದೆ. ಇದನ್ನೂ ಓದಿ: ಬೆಂಗಳೂರು ಬಳಿಕ ಈಗ ಜಿಲ್ಲೆಗಳಿಗೂ ನುಗ್ಗಿದ ಬುಲ್ಡೋಜರ್‌ – ವಿಜಯನಗರದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌

    ಅಶೋಕ್ ಗೆಹ್ಲೋಟ್ ಸಹ ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

    ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ (Congress Presidential Election) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನಾಂಕವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಲ್ಲಿ, ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುತ್ತೇನೆ, ಆದ್ರೆ ರಾಜಸ್ಥಾನದಲ್ಲೇ ಇರುತ್ತೇನೆ: ಅಶೋಕ್ ಗೆಹ್ಲೋಟ್

    ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಿಲ್ಲುತ್ತೇನೆ, ಆದ್ರೆ ರಾಜಸ್ಥಾನದಲ್ಲೇ ಇರುತ್ತೇನೆ: ಅಶೋಕ್ ಗೆಹ್ಲೋಟ್

    ಜೈಪುರ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ (Congress Presidential Election) ನಾಮಪತ್ರ ಸಲ್ಲಿಸುವುದಾಗಿ ರಾಜಸ್ಥಾನದ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಗುರುವಾರ ಖಚಿತಪಡಿಸಿದ್ದಾರೆ. ಆದರೆ ತಾವು ಎಂದಿಗೂ ರಾಜಸ್ಥಾನದಿಂದ ದೂರ ಉಳಿಯುವುದಿಲ್ಲ, ರಾಜ್ಯಕ್ಕಾಗಿಯೇ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ನಾನು ನಾಮಪತ್ರ ಸಲ್ಲಿಸುತ್ತೇನೆ, ಬಳಿಕ ಇತರ ಪ್ರಕ್ರಿಯೆಗಳು ನಡೆಯಲಿದೆ. ನಂತರ ಚುನಾವಣೆಯೂ ನಡೆಯಬಹುದು. ಇದೆಲ್ಲವೂ ಭವಿಷ್ಯದ ಮೇಲೆ ಅವಲಂಬಿತವಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದರು. ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ

    ನಾನು ಸ್ಪಷ್ಟವಾಗಿ ಯಾರ ಬಗ್ಗೆಯೂ ಕಾಮೆಂಟ್ ಮಾಡಲು ಬಯಸುವುದಿಲ್ಲ. ರಾಜಸ್ಥಾನದಲ್ಲಿ ಯಾವ ಪರಿಸ್ಥಿತಿ ಎದುರಾಗುತ್ತದೆ, ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಮತ್ತು ರಾಜಸ್ಥಾನದ ಶಾಸಕರು ಏನು ಬಯಸುತ್ತಾರೆ ಎಂಬುದನ್ನು ನೋಡಬೇಕು. ಈ ಎಲ್ಲಾ ವಿಚಾರಗಳೂ ಚುನಾವಣೆಗೆ ಪರಿಣಾಮ ಬೀರುತ್ತದೆ ಎಂದರು. ಇದನ್ನೂ ಓದಿ: ಮೋದಿ ದೇಶದ ಹೊರಗೆ ಎಷ್ಟು ಆಸ್ತಿ ಮಾಡಿದ್ದಾರೆ?: ಪಾಕ್ ಮಾಜಿ ಪ್ರಧಾನಿ

    ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ಅಕ್ಟೋಬರ್ 1 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನಾಂಕವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಲ್ಲಿ, ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]