Tag: Congress leaders

  • ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಅಂದ್ರೆ ಕಾಂಗ್ರೆಸ್‍ಗೆ ಖುಷಿ ಆಗ್ತಿತ್ತಾ? : ಈಶ್ವರಪ್ಪ

    ಪಾಕಿಸ್ತಾನ ಜಿಂದಾಬಾದ್, ಅಲ್ಲಾಹು ಅಕ್ಬರ್ ಅಂದ್ರೆ ಕಾಂಗ್ರೆಸ್‍ಗೆ ಖುಷಿ ಆಗ್ತಿತ್ತಾ? : ಈಶ್ವರಪ್ಪ

    ಶಿವಮೊಗ್ಗ: ಪಾಕಿಸ್ತಾನ ಜಿಂದಾಬಾದ್, ಅಲ್ಲಹೋ ಅಕ್ಬರ್ ಎಂದು ಘೋಷಣೆ ಹಾಕಿದ್ದರೆ ಕಾಂಗ್ರೆಸ್‍ನವರಿಗೆ ಖುಷಿ ಆಗುತ್ತಿತ್ತಾ ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯದ ವೇಳೆ ನಡೆದ ಘಟನೆಯಲ್ಲಿ ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದಕ್ಕೆ ಕಾಂಗ್ರೆಸ್ ಈ ರೀತಿ ಸಮಾವೇಶ ನಡೆಸುತ್ತಿದ್ದು, ಸಮಾವೇಶದಲ್ಲಿ ರಾಜ್ಯದ ನಾಯಕರುಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್ ನಾಯಕರು ಪ್ರತಿಭಟನೆ, ಸಮಾವೇಶ ನಡೆಸುವ ಮೊದಲು ಭದ್ರಾವತಿಗೆ ಒಮ್ಮೆ ಹೋಗಿ ಬರಲಿ. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ಮಾತಾಡಿಸಿ ಘಟನೆ ಬಗ್ಗೆ ತಿಳಿದುಕೊಳ್ಳಲಿ ಎಂದರು.

    ಪಂದ್ಯಾವಳಿಯಲ್ಲಿ ಗೆದ್ದ ತಂಡವೊಂದು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದ್ದಾರೆ. ಈ ಘೋಷಣೆ ಕೂಗಿದ್ದಕ್ಕೆ ಶಾಸಕ ಸಂಗಮೇಶ್ ಮತ್ತು ಅವರ ಪುತ್ರರಿಗೆ ಹಾಗೂ ಬೆಂಬಲಿಗರಿಗೆ ಏಕೆ ನೋವಾಯಿತೋ ಗೊತ್ತಿಲ್ಲ. ಹಾಗಾದರೆ ಪಾಕಿಸ್ತಾನ ಜಿಂದಾಬಾದ್, ಅಲ್ಲಾಹೋ ಅಕ್ಬರ್ ಎಂದು ಕೂಗಿದ್ದರೆ ಖುಷಿ ಆಗುತ್ತಿತ್ತಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

    ಭದ್ರಾವತಿ ಘಟನೆಯನ್ನು ಕಾಂಗ್ರೆಸ್ ಸ್ಪರ್ಧಾ ಮನೋಭಾವದಿಂದ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಮಾವೇಶ ನಡೆಸುತ್ತಿರುವುದು ಸರಿ ಅಲ್ಲ. ಈ ಘಟನೆಯನ್ನು ರಾಜ್ಯದ ಜನ, ಜಿಲ್ಲೆಯ ಜನ, ಅದರಲ್ಲೂ ಭದ್ರಾವತಿ ಜನ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಇದನ್ನೇ ಮುಂದುವರೆಸಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಅಧೋಗತಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ ಎಂದರು.

  • ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು

    ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ – ಕಾಂಗ್ರೆಸ್ ನಾಯಕರಿಗೆ ಕಮಿಷನರ್ ಕಮಲ್‍ಪಂತ್ ತಿರುಗೇಟು

    ಬೆಂಗಳೂರು: ನಾವು ಯಾವ ಅಮಾಯಕರನ್ನೂ ಅರೆಸ್ಟ್ ಮಾಡಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್‍ ಪಂತ್ ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪುಂಡರು ಅಮಾಯಕರು, ಮುಗ್ಧರಂತೆ – ಕೈ ನಾಯಕರಿಗೆ ‘ಪಬ್ಲಿಕ್’ ಪ್ರಶ್ನೆ

    ಡಿಜೆ ಹಳ್ಳಿ ಪೊಲೀಸ್ ಠಾಣೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಲ್‍ ಪಂತ್, ಇವತ್ತು ಕರ್ಫ್ಯೂ ತೆರವು ಆದಮೇಲೆ ಯಾವ ಪರಿಸ್ಥಿತಿ ಇದೆ ಅನ್ನೋದನ್ನು ನೋಡೋಕೆ ಬಂದಿದ್ದೆ. ತನಿಖೆ ಯಾವ ರೀತಿ ನಡೆಯುತ್ತಿದೆ. ಮುಂದೆ ಏನು ಮಾಡಬೇಕು ಅನ್ನೋದನ್ನು ಚರ್ಚೆ ಮಾಡಿದ್ದೀವಿ. ನಮಗೆ ಯಾವುದೇ ರೀತಿಯ ಒತ್ತಡ ಇಲ್ಲ ತನಿಖೆ ಸಮಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.

    ಶಾಂತಿ ಸಭೆಗಳು ಮಾಡುತ್ತಿದ್ದೀವಿ. ತನಿಖೆ ಸಮಯ ಆಗಿರುವ ಕಾರಣ ಕೆಲ ಮಾಹಿತಿಗಳನ್ನು ಹಂಚಿಕೊಳ್ಳೋಕೆ ಆಗಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಸುತ್ತೀವಿ. ನಾವು ಯಾವ ಅಮಾಯಕರನ್ನು ಅರೆಸ್ಟ್ ಮಾಡಿಲ್ಲ. ಯಾರೇ ಬಂದರೂ ಸೂಕ್ತ ಮಾಹಿತಿ ಕೊಡುತ್ತೀವಿ. ನಾವು ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಮಾಡುತ್ತೀವಿ ಎಂದು ಕಮಲ್‍ ಪಂತ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಕಮಲ್‍ ಪಂತ್ ಭೇಟಿ ನೀಡಿದ್ದು, ಗಲಭೆ ಸಂಬಂಧ ಇಲ್ಲಿವರೆಗಿನ ಮಾಹಿತಿ ಕುರಿತು ಅಧಿಕಾರಿಗಳ ಚರ್ಚೆ ನಡೆಸಿದ್ದಾರೆ. ಗಲಭೆಯಲ್ಲಿ ವಿಚಾರಣೆ ವೇಳೆ ಯಾರೆಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇವರ ಹೇಳಿಕೆಗಳು, ಕೆಲ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಕಾರ್ಪೊರೇಟರ್‌ಗಳು, ಸ್ಥಳೀಯ ಜೆಡಿಎಸ್ ಮುಖಂಡ ವಾಜೀದ್‍ನನ್ನ ವಿಚಾರಣೆ ನಡೆಸಿದ್ದಾರೆ. ಸದ್ಯಕ್ಕೆ ಪೊಲೀಸರು ಘಟನೆಯಲ್ಲಿ ಭಾಗಿಯಾದ ಕೆಲ ರೌಡಿಶೀಟರ್‌ಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲ ತನಿಖೆಯ ಸಂಬಂಧ ಪೊಲೀಸ್ ಠಾಣೆಯಲ್ಲಿ ಕಮಲ್‍ ಪಂತ್ ಮಾಹಿತಿ ಕಲೆಹಾಕಲಿದ್ದಾರೆ.

  • ಸತ್ಯ ಹೇಳುವ ಧೈರ್ಯವಿಲ್ಲದ ಕೈ ನಾಯಕರಿಂದ ಅಖಂಡಗೆ ನ್ಯಾಯ ಸಿಗಲು ಸಾಧ್ಯವೇ – ಸುಧಾಕರ್ ಪ್ರಶ್ನೆ

    ಸತ್ಯ ಹೇಳುವ ಧೈರ್ಯವಿಲ್ಲದ ಕೈ ನಾಯಕರಿಂದ ಅಖಂಡಗೆ ನ್ಯಾಯ ಸಿಗಲು ಸಾಧ್ಯವೇ – ಸುಧಾಕರ್ ಪ್ರಶ್ನೆ

    ಬೆಂಗಳೂರು: ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಕಾಂಗ್ರೆಸ್ ನಾಯಕರಿಗೆ ಅದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಕಾಂಗ್ರೆಸ್ ನಾಯಕರಿಂದ ನ್ಯಾಯ ಸಿಗಲು ಸಾಧ್ಯವೇ? ಎಂದು ಶಿಕ್ಷಣ ಸಚಿವ ಸುಧಾಕರ್ ಪ್ರಶ್ನಿಸಿದರು.

    ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಪೊರೇಟರ್‌ಗಳ ವಿಚಾರಣೆ ವಿಚಾರವಾಗಿ ಸಚಿವ ಸುಧಾಕರ್ ಟ್ವೀಟ್ ಮೂಲಕ ಟೀಕೆ ಮಾಡಿದ್ದಾರೆ. ಮೊದಲಿಗೆ “ತನುವಿನ ಕೋಪ ತನ್ನ ಹಿರಿಯತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು ಕೂಡಲಸಂಗಮದೇವಾ?” ಎಂಬ ಗಾದೆಯ ಮಾತನ್ನು ಹೇಳಿದ್ದಾರೆ.

    ಬೆಂಗಳೂರು ಗಲಭೆ ಕಾರಣ ಯಾರು? ಎಂಬ ಸತ್ಯ ಹೊರ ಬರುತ್ತಿದೆ. ಕಾಂಗ್ರೆಸ್ ಕಾರ್ಪೊರೇಟರ್‌ಗಳ ಸಂಪತ್‍ರಾಜ್, ಜಾಕೀರ್ ಅವರು ಇಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿದ್ದು, “ಕನಿಷ್ಠಪಕ್ಷ ಸತ್ಯಗಳನ್ನು ಗಟ್ಟಿಯಾಗಿ ಹೇಳುವ ಧೈರ್ಯ ಇಲ್ಲದ ಕಾಂಗ್ರೆಸ್ ನಾಯಕರಿಗೆ ಅದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಕಾಂಗ್ರೆಸ್ ನಾಯಕರಿಂದ ನ್ಯಾಯ ಸಿಗಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಈ ಜಗತ್ತಿನಲ್ಲಿ ಚಿರಕಾಲ ಉಳಿಯುವಂಥದ್ದು ನಯ-ವಿನಯವೇ ಹೊರತು ಮೃಗೀಯತೆಯೂ ಅಲ್ಲ, ದೇಹಬಲವೂ ಅಲ್ಲ. ಸತ್ಯಕ್ಕೆ ಸಾವಿಲ್ಲ” ಎಂದು ಕಾರ್ಪೊರೇಟರ್‌ಗಳ ವಿಚಾರಣೆ ವಿಚಾರವಾಗಿ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

  • ಐವಾನ್ ಡಿಸೋಜಾಗೆ ಕೊರೊನಾ ಸೋಂಕು- ಡಿಕೆಶಿ, ಖಾದರ್‌ಗೂ ಆತಂಕ

    ಐವಾನ್ ಡಿಸೋಜಾಗೆ ಕೊರೊನಾ ಸೋಂಕು- ಡಿಕೆಶಿ, ಖಾದರ್‌ಗೂ ಆತಂಕ

    – ಶುಕ್ರವಾರ ಡಿಕೆಶಿ, ಖಾದರ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಐವಾನ್

    ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಈ ಕುರಿತು ಅವರು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿದ್ದು, ನನಗೆ ಹಾಗೂ ನನ್ನ ಪತ್ನಿ ಡಾ.ಕವಿತಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಮಗೆ ಯಾವುದೇ ಲಕ್ಷಣಗಳು ಇರಲಿಲ್ಲ. ಆದರೂ ಸ್ವಯಂಪ್ರೇರಿತರಾಗಿ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡೆವು. ಈ ವೇಳೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಸ್ನೇಹಿತರು ಹಾಗೂ ಬೆಂಬಲಿಗರು ನಮ್ಮನ್ನು ಭೇಟಿಯಾಗಲು ಬರಬಾರದು ಎಂದು ಮನವಿ ಮಾಡುತ್ತೇನೆ. ನಿಮ್ಮ ಪ್ರಾರ್ಥನೆ, ಹಾರೈಕೆಯೇ ನಮಗೆ ಶಕ್ತಿ ಎಂದು ಬರೆದುಕೊಂಡಿದ್ದಾರೆ.

    Myself and my wife Dr.Kavitha have been tested Corana positive.There are no symptoms but we have voluntarily gone and…

    Posted by Dr.Ivan D’Souza on Saturday, August 1, 2020

    ಐವಾನ್ ಡಿಸೋಜಾ ಪತ್ನಿ ಖಾಸಗಿ ಆಸ್ಪತ್ರೆಯ ವೈದ್ಯೆಯಾಗಿದ್ದು, ಅವರಿಗೂ ಸೋಂಕು ತಗುಲಿದೆ. ಇಷ್ಟೇ ಅಲ್ಲದೆ ಇನ್ನೂ ಭಯಾನಕ ವಿಚಾರವೆಂದರೆ ನಿನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಜೊತೆಗೆ ಐವಾನ್ ಡಿಸೋಜಾ ಸಹ ಭಾಗವಹಿಸಿದ್ದರು. ಹೀಗಾಗಿ ಇದೀಗ ಹಲವು ಕಾಂಗ್ರೆಸ್ ನಾಯಕರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವರಿಗೆ ಕೊರೊನಾ ಸೋಂಕು ತಗುಲುವ ಆತಂಕ ಎದುರಾಗಿದೆ.

    ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಹ ಐವಾನ್ ಡಿಸೋಜಾ ಅವರು ಡಿಕೆಶಿ ಜೊತೆಗಿದ್ದರು. ಅಲ್ಲದೆ ಯು.ಟಿ.ಖಾದರ್ ಪಕ್ಕದಲ್ಲಿಯೇ ನಿಂತಿದ್ದರು. ಹೀಗಾಗಿ ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರಂಟೈನ್ ಟೆನ್ಷನ್ ಕಾಡುತ್ತಿದೆ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವರಾದ ಯು.ಟಿ.ಖಾದರ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರಿಗೆ ಆತಂಕ ಎದುರಾಗಿದೆ.

  • ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

    ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ: ಎಚ್‍ಡಿಕೆ

    – ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

    ಬೆಂಗಳೂರು: ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದು, ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೊದಲಿಗೆ “ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸಿಎಂ ಆದಾಗ ಕಾಂಗ್ರೆಸ್ ನೈತಿಕತೆ ಚೆನ್ನಾಗಿತ್ತೆ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್ಸಿನ ಅತಿರಥ ಮಹಾರಥರು ಪಕ್ಷದ ಟ್ವಿಟ್ಟರ್ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಆಯ್ತು, ಚರ್ಚೆ ಆರಂಭವಾಗಿದೆ. ಅದನ್ನು ನಾನು ಪೂರ್ತಿಗೊಳಿಸುತ್ತೇನೆ” ಎಂದಿದ್ದಾರೆ.

    ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಜೆಡಿಎಸ್ ಎದುರು ನಡು ಬಗ್ಗಿಸಿ ನಾವು ಬೇಡವೆಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್ ಡ್ರೈವಿಂಗ್ ಮಾಡಿದಾಗ ಕಾಂಗ್ರೆಸ್ಸಿ ನೈತಿಕತೆ ಎಲ್ಲಿತ್ತು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    “ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನತೆಯ ಹಿತಕ್ಕಾಗಿ ನಾನು ಕೂಡ ಚಾಣಕ್ಯ ನೀತಿಯನ್ನು ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನಿಲ್ಲ. ಬೇಡವೆಂದರೂ ನಮ್ಮ ಮನೆ ಬಾಗಿಲಿಗೆ ಬಂದವರು ನೀವು. ನಾನು ಅಮಾಯಕನಾಗಿರಲಿಲ್ಲ. ಕಾಂಗ್ರೆಸ್ಸಿನವರು ತಮ್ಮ ಬೇಳೆ ಬೇಯಿಸಿಕೊಳ್ಳಲು ನನ್ನನ್ನು ಪೆದ್ದು ಮಾಡಲು ಮುಂದಾದಿರಿ. ಆದರೆ ನಾಡಿನ ರೈತರ ಹಿತ ಕಾಯಲು ನಾನು ಜಾಣತನ ಪ್ರದರ್ಶಿಸಿದೆ ಎಂಬುದು ನೆನಪಿರಲಿ” ಎಂದಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಕಾಂಗ್ರೆಸ್ಸಿನ ರಾಷ್ಟ್ರ, ರಾಜ್ಯ ನಾಯಕರು ಇದ್ದ ಸಭೆಯಲ್ಲಿ ದೇವೇಗೌಡರು ಕಾಂಗ್ರೆಸ್ಸಿಗೆ ಸಲಹೆ ನೀಡಿ ಖರ್ಗೆ ಆಗಲಿ ಎಂದರು. ಖರ್ಗೆ ಸಿಎಂ ಆಗುವುದನ್ನು ಕಾಂಗ್ರೆಸ್ ಒಳಗಿನ ನಾಯಕರೇ ತಡೆದರು. ಆ ನಾಯಕರುಗಳು ಯಾರ್ಯಾರೆಂದು ಕಾಂಗ್ರೆಸ್ ಹುಡುಕಿಕೊಳ್ಳಲಿ. ಆಗ ಅವರ ನೈತಿಕತೆ ಪ್ರಶ್ನೆಗೆ ಅವರದೇ ನಾಯಕರಿಂದ ಉತ್ತರ ಸಿಗಬಹುದು” ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಕುಮಾರಸ್ವಾಮಿ ಅಜ್ಞಾತ, ಅಪ್ರಸ್ತುತರಾಗಿದ್ದಾರೆ ಎಂದೂ ಕಾಂಗ್ರೆಸ್ಸಿನ ನಾಯಕರು ಪಕ್ಷದ ಟ್ವಿಟ್ವರ್ ಮೂಲಕ ದಾಳಿ ಮಾಡಿದ್ದಾರೆ. ದೇಶದ ಎಷ್ಟು ರಾಜ್ಯಗಳಲ್ಲಿ ಕಾಂಗ್ರೆಸ್ ಪ್ರಸ್ತುತವಾಗಿದೆ? ಪ್ರತ್ಯಕ್ಷವಾಗಿ ರಾಜಕಾರಣ ಮಾಡುತ್ತಿದೆ? ಅನಾಥವಾಗಿದೆ? ಇದಕ್ಕೆ ಉತ್ತರಿಸಲು ನಾಯಕರ್ಯಾರಾದರೂ ಇದ್ದಾರೋ? ಇಲ್ಲ ಕಾಂಗ್ರೆಸ್ಸಿನ ಟ್ವಿಟರ್ ಖಾತೆಗೆ ಸೀಮಿತವೋ? ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

    “ಬೇರೆ ಪಕ್ಷದ ಶಾಸಕರಿಗೆ ಸ್ವಯಂ ಸೇರ್ಪಡೆಯ ‘ಮಾರುವೇಶ’ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೂ, ಬಿಜೆಪಿ ಅವರು ಆಪರೇಷನ್ ಅಸ್ತ್ರ ಬಳಸಿ ಸರ್ಕಾರವೊಂದನ್ನು ಬುಡಮೇಲು ಮಾಡುವುದಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಒಂದು ತೆಳುಗೆರೆಯಷ್ಟೇ ಅಂತರ. ಕಾಂಗ್ರೆಸ್ ಇದರ ಅರ್ಥ ತಿಳಿಯದಷ್ಟು ಕುಬ್ಜ ಸ್ಥಿತಿ ತಲುಪಿರುವುದು ಚೋದ್ಯವೆನಿಸಿದೆ. ಟೀಕೆಗಾಗಿ ಟೀಕೆ ಮಾಡುವ ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ಇಂತಹ ದುಃಸ್ಥಿತಿಗೆ ತಲುಪಿದೆ. ಕಪಟ ರಾಜಕಾರಣವನ್ನು ಯಾವ ಬಾಗಿಲಿನಿಂದ ಮಾಡಿದರೂ ಅದು ಅನೀತಿಯೇ ಆಗಿದೆ” ಎಂದರು.

    “ತನ್ನರಿದೆ ಅರಿವೆಂತುಂಟೊ?, ತನ್ನ ಮರೆದ ಮರೆಹೆಂತಂಟೊ?, ಅರೆದು ಮರೆದವರು, ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ, ಗುಹೇಶ್ವರಾ” ಎಂದು ಕುಮಾರಸ್ವಾಮಿ ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಅಂಗವಿಕಲ ಮಗಳ ಆರೈಕೆಗಾಗಿ ತಾಯಿಯನ್ನು ಕರೆತಂದ ಕಾಂಗ್ರೆಸ್ ಮುಖಂಡರು

    ಅಂಗವಿಕಲ ಮಗಳ ಆರೈಕೆಗಾಗಿ ತಾಯಿಯನ್ನು ಕರೆತಂದ ಕಾಂಗ್ರೆಸ್ ಮುಖಂಡರು

    ಹುಬ್ಬಳ್ಳಿ: ಅಂಗವಿಕಲ ಮಗಳ ಆರೈಕೆಗಾಗಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿಯೇ ಸಿಲುಕಿಕೊಂಡಿದ್ದ ತಾಯಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬರುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದ ಅಗೆನೆಸ್ಟ್ ಕೋವಿಡ್-19 ಸಹಾಯ ಗುಂಪು ಮಾನವೀಯತೆ ಮೆರೆದಿದ್ದಾರೆ.

    ಅಂಗವಿಕಲೆ ಪೂಜಾ ಮಲಕಾಪುರ ತಾಯಿ ಶಾಂತಾ ಮಲಕಾಪುರ ಒಂದು ದಿನದ ಲಗ್ನದ ಕಾರ್ಯಕ್ರಮ ನಿಮಿತ್ತ ಅಂಗವಿಕಲೆ ಮಗಳನ್ನು ಹುಬ್ಬಳ್ಳಿಯಲ್ಲಿ ಬಿಟ್ಟು ಬೆಳಗಾವಿ ಸಂಬಂಧಿಕರ ಮದುವೆಗಾಗಿ ಹೋಗಿದ್ದರು. ಆದರೆ ದೀರ್ಘ ಅವಧಿಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ಅವರು ಅನಿವಾರ್ಯವಾಗಿ ಬೆಳಗಾವಿಯಲ್ಲಿಯೇ ಉಳಿಯಬೇಕಾಯಿತು. ಆದರೆ ಅಂಗವಿಕಲ ಮಗುವಿನ ಊಟೋಪಚಾರ ಮತ್ತು ಆರೈಕೆಯನ್ನು ಕಳೆದ 20 ದಿನಗಳಿಂದ ಸ್ಥಳೀಯ ಜೈನ ಸಮಾಜದವರು ಮಾಡುತ್ತಿದ್ದರು.

    ಆದರೆ ಪುನಃ ದೀರ್ಘ ಅವದಿಯ ಲಾಕಡೌನ್ ಘೋಷಿಸಿದ್ದರಿಂದ ಅಂಗವಿಕಲ ಮಗಳು ಮತ್ತು ತಾಯಿ ತುಂಬಾ ಆತಂಕಕ್ಕೆ ಒಳಗಾಗಿದ್ದು, ಕಳೆದ ಎಂಟು ದಿನಗಳಿಂದ ಬಹಳಷ್ಟು ಪ್ರಯತ್ನ ಮಾಡಿದರು ಬರಲು ಆಗಿರಲಿಲ್ಲ. ನಂತರ ಈ ವಿಚಾರವನ್ನು ಸ್ಥಳೀಯರು ಸಹಾಯ ಗುಂಪು ಅಗೆನೆಸ್ಟ್ ಕೋವಿಡ್-19 ಗಮನಕ್ಕೆ ತಂದರು. ನಂತರ ಕಾಂಗ್ರೆಸ್ ಮುಖಂಡರಾದ ಶಾಕಿರ್ ಸನದಿ ಮತ್ತು ರಾಜಶೇಖರ್ ಮೆಣಸಿನಕಾಯಿ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ರವರ ಗಮನಕ್ಕೆ ತಂದು ಘಟನೆಯ ಸಂಪೂರ್ಣ ವಿವರಣೆ ನೀಡಿದರು.

    ಆಗ ಅವರು ಈ ವಿಷಯವನ್ನು ಪೊಲೀಸರಿಗೆ ಹೇಳಿದರು. ಬೆಳಗಾವಿಯಲ್ಲಿ ಸಿಲುಕಿರುವ ಅಂಗವಿಕಲೆಯ ತಾಯಿಯನ್ನು ಕರೆತರುವುದು ಅನಿವಾರ್ಯವಾಗಿದ್ದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮತ್ತು ಇತರ ಆಡಳಿತ ಯಂತ್ರದ ಮುಖ್ಯಸ್ಥರನ್ನು ಸಂಪರ್ಕಿಸಿ ಬೆಳಗಾವಿಯಿಂದ ಈ ಅಂಗವಿಕಲೆಯ ತಾಯಿಯನ್ನು ಕರೆತರಲು ವಾಹನಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿ ಮಾನವೀಯತೆ ಮರೆದಿದ್ದಾರೆ.

  • ಕಾಂಗ್ರೆಸ್‍ನ 134ನೇ ಸಂಸ್ಥಾಪನಾ ದಿನಾಚರಣೆ – ನಗರದ ಹಲವೆಡೆ ಆಗಲಿದೆ ಟ್ರಾಫಿಕ್ ಜಾಮ್

    ಕಾಂಗ್ರೆಸ್‍ನ 134ನೇ ಸಂಸ್ಥಾಪನಾ ದಿನಾಚರಣೆ – ನಗರದ ಹಲವೆಡೆ ಆಗಲಿದೆ ಟ್ರಾಫಿಕ್ ಜಾಮ್

    ಬೆಂಗಳೂರು: ಇಂದು ಕಾಂಗ್ರಸ್‍ನ 134ನೇ ಸಂಸ್ಥಾಪನಾ ದಿನ. ಈ ಐತಿಹಾಸಕ ದಿನದ ಆಚರಣೆ ಮಾಡಲು ರಾಜ್ಯ ಕಾಂಗ್ರಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ನಾಯಕರು ಸದ್ಭಾವನ ನಡಿಗೆ ಹಮ್ಮುಕೊಂಡಿದ್ದಾರೆ.

    ಬೆಳಗ್ಗೆ 10 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಆ ನಂತರ ಕಾಂಗ್ರೆಸ್ ನಾಯಕರುಗಳು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಫ್ರೀಡಂ ಪಾರ್ಕ್‍ವರೆಗೆ ಸದ್ಭಾವನ ನಡಿಗೆ ಪಾದಯಾತ್ರೆ ನಡೆಸಲಿದ್ದಾರೆ.

    ಫ್ರೀಡಂ ಪಾರ್ಕಿನಲ್ಲಿ 12 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರುಗಳು ಸಧ್ಬಾವನ ಯಾತ್ರೆ ಹಾಗೂ ಸಂಸ್ಥಾಪನಾ ದಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

    ಕೆಪಿಸಿಸಿ ಕಚೇರಿಯಿಂದ ಫ್ರೀಡಂ ಪಾರ್ಕ್ ವರೆಗೆ ನಡೆಯುವ ಪಾದಯಾತ್ರೆಯಲ್ಲಿ ಸಾವಿರಾರು ಜನ ಸೇರಲಿದ್ದಾರೆ. ಕ್ವೀನ್ಸ್ ರೋಡ್, ಇಂಡಿಯನ್ ಎಕ್ಸ್ ಪ್ರೆಸ್ ರೋಡ್, ವಿಧಾನಸೌಧದ ರೋಡ್ ಮತ್ತು ನೃಪತುಂಗ ರೋಡ್ ಮೂಲಕ ಫ್ರೀಡಂ ಪಾರ್ಕ್ ಗೆ ರ‍್ಯಾಲಿ  ಸಾಗಿಬರಲಿದೆ.

    ಬೆಳಗ್ಗೆ 9:30 ರಿಂದ 12 ಗಂಟೆಯವರೆಗೆ ಮೆರವಣಿಗೆ ಸಾಗಲಿದ್ದು, ಇಲ್ಲಿನ ರಸ್ತೆಗಳು ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜ್ಯಾಮ್ ಆಗಲಿದೆ.

  • ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈಡ್ರಾಮಾ – ಕೈ ಮುಖಂಡರು ಪೊಲೀಸರ ವಶಕ್ಕೆ

    ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈಡ್ರಾಮಾ – ಕೈ ಮುಖಂಡರು ಪೊಲೀಸರ ವಶಕ್ಕೆ

    ಮಂಗಳೂರು: ಜಿಲ್ಲೆಯಲ್ಲಿ ನಡೆದ ಗೋಲಿಬಾರಿನಲ್ಲಿ ಮೃತಪಟ್ಟವರ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ ಕೊಡಲು ಬಂದಿದ್ದರು. ಆದರೆ ಈ ವೇಳೆ ಪೊಲೀಸರು ಬಜ್ಪೆ ವಿಮಾನ ನಿಲ್ದಾಣದಲ್ಲಿಯೇ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಉಗ್ರಪ್ಪ, ಎಂ.ಬಿ,ಪಾಟೀಲ್, ಮಾಜಿ ಸಚಿವ ಸೀತಾರಾಮ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಹೈಡ್ರಾಮಾವೇ ನಡೆದಿದೆ.

    ಕಾಂಗ್ರೆಸ್ ನಿಯೋಗ ಇಂದು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟ ಇಬ್ಬರ ಮನೆಗೆ ಭೇಟಿ ಕೊಡಲು ಹಾಗೂ ಆಸ್ಪತ್ರೆಯಲ್ಲಿ ಇರುವವರಿಗೆ ಸಾಂತ್ವನ ಹೇಳಲು ಮಂಗಳೂರಿಗೆ ಆಗಮಿಸಿತ್ತು. ಅವರನ್ನು ಪೊಲೀಸರು ವಿಮಾನ ನಿಲ್ದಾಣದಿಂದಲೇ ಬೆಂಗಳೂರಿಗೆ ವಾಪಸ್ ಕಳುಹಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ವಾಪಸ್ ಹೋಗಲು ನಿರಾಕರಿಸಿದ್ದಾರೆ. ಆಗ ಪೊಲೀಸರು ನಿಮ್ಮನ್ನು ವಶಕ್ಕೆ ಪಡೆಯುತ್ತೇವೆ ಎಂದಾಗ ಹೈಡ್ರಾಮಾ ಸೃಷ್ಟಿಯಾಗಿತ್ತು.

    ಈ ವೇಳೆ ರಮೇಶ್ ಕುಮಾರ್ ಪೊಲೀಸರ ಮೇಲೆ ಕಿರುಚಾಡಿದ್ದಾರೆ. ನಾವು ಕಾನೂನುಬಾಹಿರ ಕೆಲಸವನ್ನು ಮಾಡಲು ಬಂದಿಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ. ನೀವು ನಮ್ಮನ್ನು ಬಂಧಿಸಬಾರದು ಎಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಎಳೆದಾಟವಾಗಿದೆ. ಕೊನೆಗೆ ಪೊಲೀಸರು ಅವರನ್ನು ಬಿಡದೆ ತಮ್ಮ ಜೀಪ್‍ನಲ್ಲಿ ಕರೆದುಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಕರೆದಕೊಂಡು ಹೋಗಿದ್ದಾರೆ.

    ಇಂದು ಸಂಜೆ ವೇಳೆ ಅವರನ್ನು ಪೊಲೀಸ್ ಠಾಣೆಯಿಂದ ನೇರವಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು  ಬಂದು ಬಿಡಲಾಗುತ್ತದೆ. ಅಲ್ಲಿಂದಲೇ ಬೆಂಗಳೂರಿಗೆ ವಾಪಸ್ ಕಳುಹಿಸುವ ಸಾಧ್ಯತೆ ಇದೆ. ಕರ್ಫ್ಯೂ ಇರುವುದರಿಂದ ಮಂಗಳೂರಿನಲ್ಲಿ ಯಾರಿಗೂ ಓಡಾಡಲು ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ.

     

  • ಸಾಲ ಪಡೆದು ಹಣ ನೀಡಿಲ್ಲ – ಕಾಂಗ್ರೆಸ್ ನಾಯಕರ ಹೆಸರು ಬಿಚ್ಚಿಟ್ಟ ಎಂಟಿಬಿ

    ಸಾಲ ಪಡೆದು ಹಣ ನೀಡಿಲ್ಲ – ಕಾಂಗ್ರೆಸ್ ನಾಯಕರ ಹೆಸರು ಬಿಚ್ಚಿಟ್ಟ ಎಂಟಿಬಿ

    – ಮೋದಿ ಇರುವವರೆಗೂ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ
    – ಕೈ ಹೈಕಮಾಂಡ್ ಸತ್ತು ಹೋಗಿದೆ

    ಬೆಂಗಳೂರು: ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ತನ್ನ ಬಳಿ ಸಾಲ ಪಡೆದ ಕಾಂಗ್ರೆಸ್ ನಾಯಕ ಹೆಸರನ್ನು ಹೇಳಿದ್ದಾರೆ.

    ಇಂದು ಹೊಸಕೋಟೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮ ಮಾಡುತ್ತಿರುವ ಅವರು ಭಾಷಣದ ವೇಳೆ ಮಾತನಾಡಿ, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ಕೂಡ ಲೋಕಸಭಾ ಚುನಾವಣೆಯಲ್ಲಿ ಹಣವನ್ನು ಸಾಲ ತೆಗೆದುಕೊಂಡಿದ್ದ. ಆದರೆ ಮತ್ತೆ ಅವನು ವಾಪಸ್ ಮಾಡಿದ. ಬೈರೇಗೌಡ ಬಿಟ್ಟರೆ ಬೇರೆ ಯಾರು ಹಣ ವಾಪಸ್ ಮಾಡಿಲ್ಲ. ನಾನು ಮಂಜುನಾಥ್ ಸ್ವಾಮಿ ಭಕ್ತ ಸುಳ್ಳು ಹೇಳಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ಸಿನ ಕೆಲ ನಾಯಕರು ಇದ್ದಾರೆ. ನನ್ನ ಬಳಿ ಹಣ ಪಡೆದು ವಾಪಸ್ ಮಾಡದೆ ಈಗ ನನ್ನನ್ನೇ ಸೋಲಿಸಲು ನನ್ನ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಕಿಡಿಕಾದರು.

    ನನ್ನ ಬಳಿ 1,200 ಕೋಟಿಗೂ ಅಧಿಕ ಹಣ ಇದೆ. ನಾನು ಅಷ್ಟು ಆಸ್ತಿಯ ಒಡೆಯ. ಆದರೆ ಇದೆಲ್ಲಾ ನ್ಯಾಯವಾಗಿ ಸಂಪಾದನೆ ಮಾಡಿದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ನಾವು ಪಕ್ಷ ಬಿಡುವುದಕ್ಕೆ ಸಿದ್ದರಾಮಯ್ಯ ಕಾರಣ. ಸಿಎಂ ಜತೆ ಮಾತನಾಡಿ ಶಾಸಕರ ಸಮಸ್ಯೆ ಬಗೆಹರಿಸಿ ಎಂದು ಹೇಳಿದ್ದೆವು. ಆದರೆ ಅವರು ನನ್ನ ಮತ್ತು ನನ್ನ ಮಗನ ಕ್ಷೇತ್ರದ ಕೆಲಸವೇ ಮಾಡಿಕೊಡಿತ್ತಿಲ್ಲ ಅಂತ ನಮ್ಮ ಬಳಿ ಅಸಹಾಯಕತೆ ವ್ಯಕ್ತಪಡಿಸಿದರು ಎಂದು ಸಿದ್ದು ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.

    ಮೈತ್ರಿ ಮುರಿದುಕೊಂಡು ವಿಪಕ್ಷದಲ್ಲಿ ಕೂರೋಣ ಎಂದು ನಾವು ಸಿದ್ದರಾಮಯ್ಯಗೆ ಸಲಹೆ ಕೊಟ್ಟಿದ್ದೆವು. ಆದರೆ ಅವರು ಹೈಕಮಾಂಡ್ ಕಡೆ ಬೆರಳು ತೋರಿಸಿದರು. ಎಲ್ಲಿದೆ ಹೈಕಮಾಂಡ್, ಅದು ಈಗ ಲೋಕಮಾಂಡ್ ಆಗಿದೆ. ನಾನು ಅಷ್ಟು ಕೆಲಸ ಮಾಡಿದರು 12 ಸಾವಿರ ಮತ ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬಂತು. ನೆಹರು ಮಾಡದಿರುವ ಕೆಲಸವನ್ನು ಮೋದಿ ಮಾಡಿದ್ದಾರೆ. ಮೋದಿ ಇರುವವರೆಗೂ ನಿಮ್ಮ ಕಾಂಗ್ರೆಸ್ ಮತ್ತು ಪ್ರದೇಶಿಕ ಪಕ್ಷಗಳಿಗೆ ಉಳಿಗಾಲ ಇಲ್ಲ ಎಂದು ಹೇಳಿದ್ದಾರೆ.

  • ಆಪರೇಷನ್ ಡಿಸಿಎಂಗೆ ಕೈ ಹಾಕಿತಾ ಕಾಂಗ್ರೆಸ್?

    ಆಪರೇಷನ್ ಡಿಸಿಎಂಗೆ ಕೈ ಹಾಕಿತಾ ಕಾಂಗ್ರೆಸ್?

    – ಅಥಣಿ ಟಿಕೆಟ್ ಕೈತಪ್ಪಿದ್ದಕ್ಕೆ ಲಕ್ಷ್ಮಣ ಸವದಿ ರೆಬೆಲ್
    – ತಡರಾತ್ರಿ ಸಿಎಂ ಮನೆಯಲ್ಲಿ ಸವದಿ ಪ್ರತ್ಯಕ್ಷ
    – ಮನವೊಲಿಕೆಗೆ ಬಿಎಸ್‍ವೈ ಕಸರತ್ತು

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆದಿದ್ದು, ಅಥಣಿ ಕ್ಷೇತ್ರದ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಕಾಂಗ್ರೆಸ್ ಭರ್ಜರಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

    ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಸೆಳೆಯುವ ತಂತ್ರವನ್ನು ಬೆಳಗಾವಿ ಕಾಂಗ್ರೆಸ್ ನಾಯಕರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಂದೆ ಪ್ರಸಾಪಿಸಿದ್ದಾರೆ. ಹೀಗಾಗಿ ಲಕ್ಷ್ಮಣ ಸವದಿ ಜೊತೆಗೆ ಮಾತುಕತೆ ನಡೆಸಲು ಬೆಳಗಾವಿ ನಾಯಕರು ಮೆಗಾ ಪ್ಲ್ಯಾನ್ ರೂಪಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಮಹೇಶ್ ಕುಮಟಳ್ಳಿ ಅವರಿಗೆ ಅಥಣಿ ಟಿಕೆಟ್ ಕೊಟ್ಟಿದ್ದಕ್ಕೆ ಲಕ್ಷ್ಮಣ ಸವದಿ ಮುನಿಸಿಕೊಂಡಿದ್ದಾರೆ. ಹೀಗಾಗಿ ಗುರುವಾರ ನಡೆದ ಅನರ್ಹರ ಬಿಜೆಪಿ ಸೇರ್ಪಡೆ ಸಮಾರಂಭಕ್ಕೂ ಗೈರಾಗಿದ್ದರು. ಅಷ್ಟೇ ಅಲ್ಲದೆ ಬುಧವಾರ ಬಿಜೆಪಿ ನಾಯಕರ ಕೈಗೆ ಸಿಗದೆ ತಿರುಗಾಡಿದ್ದರು. ಉಪ ಚುನಾವಣೆ ಬಳಿಕ ಡಿಸಿಎಂ ಸ್ಥಾನದಿಂದ ಕೆಳಗಿಳಿಸುವ ಆತಂಕ ಲಕ್ಷ್ಮಣ ಸವದಿ ಅವರಿಗೆ ಶುರುವಾಗಿದೆ. ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರಿಗೆ ಮಂತ್ರಿಗಿರಿ ನೀಡಿದರೆ ಸವದಿ ಅವರ ರಾಜಕೀಯ ಭವಿಷ್ಯ ಮುಕ್ತಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಡಿಸಿಎಂ ರಾಜಕೀಯ ಚಟುವಟಿಕೆ ಗರಿಗೆದರಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಬಿಜೆಪಿ ಬಿಟ್ಟಿದ್ದ ಬಾಣವೇ ಈಗ ಕಾಂಗ್ರೆಸ್ ಅಸ್ತ್ರವಾಗಿ ಬಳಿಸಿಕೊಳ್ಳುತ್ತಿದೆ. ಈ ಹಿಂದೆ ಕಾಂಗ್ರೆಸ್ ಸಚಿವರಿಗೆ ಬಿಜೆಪಿ ಗಾಳ ಹಾಕಿತ್ತು. ಆದರೆ ಇಂದು ಕಾಂಗ್ರೆಸ್ ಡಿಸಿಎಂಗೆ ಗಾಳ ಹಾಕಲು ಮುಂದಾಗಿದೆ. ಹೀಗಾಗಿ ಬೆಳಗಾವಿ ಕಾಂಗ್ರೆಸ್ ನಾಯಕರಿಂದ ಶುರು ಆಪರೇಷನ್ ಶುರುವಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಇತ್ತ ಆಪರೇಷನ್ ಹಸ್ತದ ಸುದ್ದಿ ತಿಳಿದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೈ ಅಲರ್ಟ್ ಆಗಿದ್ದಾರೆ. ಈ ನಿಟ್ಟಿನಲ್ಲಿ ರೆಬೆಲ್ ಲಕ್ಷ್ಮಣ ಸವದಿ ಅವರ ಮನವೊಲಿಸಲು ಮುಂದಾಗಿದ್ದಾರೆ. ಸಿಎಂ ಯಡಿಯೂರಪ್ಪ ಅವರು ತುರ್ತಾಗಿ ಸವದಿ ಅವರಿಗೆ ಬುಲಾವ್ ಕೊಟ್ಟಿದ್ದಾರೆ. ಹೀಗಾಗಿ ತಡರಾತ್ರಿ ಧವಳಗಿರಿ ನಿವಾಸದಲ್ಲಿ ಡಿಸಿಎಂ ಬಸರಾಜ್ ಬೊಮ್ಮಾಯಿ ಅವರೊಂದಿಗೆ ಲಕ್ಷ್ಮಣ ಸವದಿ ಆಗಮಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪ್ಲ್ಯಾನ್ ಅನ್ನು ಬುಡಮೇಲು ಮಾಡಲು ಸಿಎಂ ಯಡಿಯೂರಪ್ಪ ಅವರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.