Tag: Congress first list

  • ಅಮೇಥಿಯಿಂದ ರಾಗಾ ಕಣಕ್ಕಿಳಿಸಲು ಕಾಂಗ್ರೆಸ್‌ ಹೆದರಿದೆಯೇ?: ಅಮಿತ್ ಮಾಳವೀಯ

    ಅಮೇಥಿಯಿಂದ ರಾಗಾ ಕಣಕ್ಕಿಳಿಸಲು ಕಾಂಗ್ರೆಸ್‌ ಹೆದರಿದೆಯೇ?: ಅಮಿತ್ ಮಾಳವೀಯ

    ನವದೆಹಲಿ: ಕೊನೆಗೂ ಅಳೆದುತೂಗಿ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿ ರಿಲೀಸ್‌ ಮಾಡಿದೆ. ಆದರೆ ಈ ಪಟ್ಟಿಯಲ್ಲಿ ಬಹುನಿರೀಕ್ಷಿತ ಕ್ಷೇತ್ರ ಅಮೇಥಿಯನ್ನು ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವೀಯ (Amit Malviya) ಅವರು ಕೈ ನಾಯಕರನ್ನು ಕಾಲೆಳೆದಿದ್ದಾರೆ.

    ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ತಮ್ಮ ಎಕ್ಸ್‌ ಖಾತೆಯಲ್ಲಿ, “ಅಮೇಥಿ ಕ್ಷೇತ್ರದಿಂದ (Amethi Constituency) ರಾಹುಲ್ ಗಾಂಧಿಯವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಹೆದರಿದೆಯೇ..?” ಎಂದು ಬರೆದುಕೊಂಡಿದ್ದಾರೆ.

    ಉತ್ತರಪ್ರದೇಶ ಬಿಟ್ಟು ಕಾಂಗ್ರೆಸ್‌ 39 ಅಭ್ಯರ್ಥಿಗಳ ಹೆಸರನ್ನು ಇಂದು (ಶುಕ್ರವಾರ) ಘೋಷಣೆ ಮಾಡಿದ ಬಳಿಕ ಮಾಳವೀಯ ಈ ಮೂಲಕ ವ್ಯಂಗ್ಯವಾಡಿದ್ದಾರೆ. ಇಂದು ಬಿಡುಗಡೆ ಮಾಡಿದ ಕಾಂಗ್ರೆಸ್‌ನ ಪಟ್ಟಿಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ರಾಹುಲ್ ಗಾಂಧಿ ಗೆದ್ದು ಬಿಜೆಪಿ ಸೋತ ರಾಯ್ ಬರೇಲಿ ಅಥವಾ ಅಮೇಥಿಯನ್ನು ಉಲ್ಲೇಖಿಸಿಲ್ಲ.

    ಮೊದಲ ಪಟ್ಟಿಯ ಪ್ರಕಾರ, ಈ ಬಾರಿಯ ಲೋಕಸಭಾ ಚುನಾವಣೆಗೆ ಕೇರಳದ ವಯನಾಡ್ ಕ್ಷೇತ್ರದಿಂದ (Wayanad Constituency) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ರಾಹುಲ್ ಗಾಂಧಿ ಅವರು ಅಮೇಥಿಗೆ ಮರಳುತ್ತಾರೆಯೇ ಮತ್ತು ಅವರ ಹಳೆಯ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.

    ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ (Smriti Irani) ಅವರನ್ನು ಸೋಲಿಸುವ ಮೊದಲು ರಾಹುಲ್ ಗಾಂಧಿ (Rahul Gandhi) ಅವರು ಸತತವಾಗಿ ಮೂರು ಬಾರಿ ಗೆದ್ದಿದ್ದರು. 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಸೋಲನ್ನು ಕಂಡರು. ಆದರೆ 2019ರಲ್ಲಿ ಅಮೇಥಿಯ ಮತದಾರರು ಇರಾನಿ ಅವರ ಕೈಹಿಡಿದರು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಗೆ ಅಮೇಥಿ ಪ್ರತಿಷ್ಠೆಯ ಕ್ಷೇತ್ರವಾಗಿದೆ.

    ಹಾಲಿ ಸಂಸದೆ ಸ್ಕೃತಿ ಇರಾನಿಯವರು ಈ ಹಿಂದೆ ಕಾಂಗ್ರೆಸ್‌ (Congress First List) ಬಗ್ಗೆ ವ್ಯಂಗ್ಯವಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಅಭ್ಯರ್ಥಿಯನ್ನು ಘೋಷಿಸಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗುತ್ತಿಲ್ಲ, ಸೋಲಿನ ಭಯ ಅವರನ್ನು ಕಾಡುತ್ತಿದೆ. ಅಮೇಥಿಯ ಜನರು ಮತ್ತೆ ತಮ್ಮ ಶಕ್ತಿಯನ್ನು ತೋರುತ್ತಾರೆ ಎಂಬ ಸತ್ಯ ಕಾಂಗ್ರೆಸ್​ಗೆ ಗೊತ್ತಿದೆ ಎಂದಿದ್ದರು.

  • ಶೀಘ್ರದಲ್ಲೇ‌ ಕಾಂಗ್ರೆಸ್‌ನಿಂದ 2ನೇ ಪಟ್ಟಿಯೂ ರಿಲೀಸ್: ಡಿಕೆಶಿ

    ಶೀಘ್ರದಲ್ಲೇ‌ ಕಾಂಗ್ರೆಸ್‌ನಿಂದ 2ನೇ ಪಟ್ಟಿಯೂ ರಿಲೀಸ್: ಡಿಕೆಶಿ

    ನವದೆಹಲಿ: ಶೀಘ್ರದಲ್ಲಿಯೇ ಕಾಂಗ್ರೆಸ್‌ನಿಂದ ಎರಡನೇ ಪಟ್ಟಿಯೂ ರಿಲೀಸ್‌ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (D.K Shivakumar) ಹೇಳಿದ್ದಾರೆ.

    ಲೋಕಸಭೆ ಚುನಾವಣೆಗೆ (Loksabha Elections 2024) ʼಕೈʼ ಅಭ್ಯರ್ಥಿಗಳ ಮೊದಲ ಪಟ್ಟಿ (Congress First List) ರಿಲೀಸ್‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಲಿಸ್ಟ್ ಫೈನಲ್ ಮಾಡಲಾಗಿದೆ. ಮಾರ್ಚ್ 11 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಅಲ್ಲಿ ಮತ್ತಷ್ಟು ಹೆಸರು ಫೈನಲ್ ಆಗಲಿದೆ ಎಂದರು. ಶೀಘ್ರದಲ್ಲೇ 2ನೇ ಪಟ್ಟಿ ರಿಲೀಸ್ ಮಾಡುತ್ತೇವೆ. ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಇದೇ ವೇಳೆ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

    ಮೊದಲ ಪಟ್ಟಿ ರಿಲೀಸ್: ಕಾಂಗ್ರೆಸ್ ಪಕ್ಷ ಅಳೆದುತೂಗಿ ಲೋಕಸಭೆ ಚುನಾವಣೆಗೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಕರ್ನಾಟಕ, ದೆಹಲಿ, ಛತ್ತೀಸ್‍ಘಡ, ತೆಲಂಗಾಣ, ಲಕ್ಷದ್ವೀಪ, ಕೇರಳ, ಮೇಘಾಲಯ, ತ್ರಿಪುರ, ಮಣಿಪುರ ಸೇರಿ ಹಲವು ರಾಜ್ಯಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ರಿಲೀಸ್ ಮಾಡಿದೆ. ಜನರಲ್ ಕೆಟಗರಿಯ 15, ಎಸ್‍ಸಿ-ಎಸ್‍ಟಿ-ಓಬಿಸಿಯ 24 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಈ ಪೈಕಿ 12 ಮಂದಿ 50 ವರ್ಷದ ಒಳಗಿನವರಾಗಿದ್ದಾರೆ. 8 ಅಭ್ಯರ್ಥಿಗಳ ವಯಸ್ಸು 60ರೊಳಗೆ ಇದೆ. 12 ಉಮೇದುವಾರರ ವಯಸ್ಸು 70 ವರ್ಷದೊಳಗಿದೆ. ಏಳು ಅಭ್ಯರ್ಥಿಗಳ ವಯಸ್ಸು 71ರಿಂದ 76 ವರ್ಷದ ಒಳಗಿದೆ. ಇದನ್ನೂ ಓದಿ: Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ಗೊಂದಲ ಇಲ್ಲದ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ಅಖೈರು ಮಾಡಿದೆ. ಇತ್ತೀಚಿಗಷ್ಟೇ ಕಾಂಗ್ರೆಸ್‍ಗೆ ಮರಳಿದ್ದ ಮುದ್ದಹನುಮೇಗೌಡಗೆ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಸಿಕ್ಕಿದೆ. ಹಾಲಿ ಸಂಸದ ಡಿಕೆ ಸುರೇಶ್‍ಗೆ ಟಿಕೆಟ್ ಸಿಕ್ಕಿದೆ. ಮೂರು ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ ಹಾಕಿದೆ. ವಯನಾಡಿನಿಂದ ರಾಹುಲ್ ಗಾಂಧಿ ಮತ್ತೆ ಸ್ಪರ್ಧೆ ಮಾಡ್ತಿದ್ದಾರೆ. ರಾಹುಲ್ ಅಮೇಥಿಯಿಂದ, ಪ್ರಿಯಾಂಕಾ ವಾದ್ರಾ ರಾಯ್‍ಬರೇಲಿಯಿಂದ ಸ್ಪರ್ಧಿಸಬಹುದು ಎಂಬ ಸುದ್ದಿ ಹಬ್ಬಿದೆ. ಆದರೆ ನಿನ್ನೆಯ (ಗುರುವಾರ) ಸಭೆಯಲ್ಲಿ ಉತ್ತರಪ್ರದೇಶದ ಬಗ್ಗೆ ಚರ್ಚೆ ಆಗಿಲ್ಲ. ಹೀಗಾಗಿ ಮಾರ್ಚ್ 11ರ ಸಿಇಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಟಿಕೆಟ್ ಅಂತಿಗೊಳ್ಳಬಹುದು ಎಂದು ಹೇಳಲಾಗಿದೆ.

  • Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    Loksabha Elections 2024- ಕಾಂಗ್ರೆಸ್‌ನಿಂದ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

    ನವದೆಹಲಿ: ಲೋಕಸಭಾ ಚುನಾವಣೆಗೆ (Loksabha Elections 2024) ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, ಬಿಜೆಪಿಯಿಂದ (BJP First List) ಈಗಾಗಲೇ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಇದೀಗ ಮಹಾಶಿವರಾತ್ರಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಈ ಶುಭದಿನದಂದು ಕಾಂಗ್ರೆಸ್‌ ಕೂಡ ತನ್ನ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ (Congress First List) ಬಿಡುಗಡೆ ಮಾಡಿದೆ.

    ಗುರುವಾರ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ನವದೆಹಲಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (CEC) ಸಭೆ ನಡೆದಿತ್ತು. ಈ ಸಭೆಯಲ್ಲಿ 60 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿತ್ತು. ಈ ಬೆನ್ನಲ್ಲೇ ಇಂದು (ಶುಕ್ರವಾರ) ಸಂಜೆ 7 ಗಂಟೆಗೆ ದೆಹಲಿಯ ಕೆಪಿಸಿಸಿ ಕಚೇರಿಯಲ್ಲಿ ಅಜಯ್‌ ಮಾಕೇನ್‌ ಹಾಗೂ ಕೆ.ಸಿ ವೇಣುಗೋಪಾಲ್‌ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಅವರು ಮಾತನಾಡಿ ಮೊದಲು ಶಿವರಾತ್ರಿ ಮತ್ತು ಮಹಿಳಾ ದಿನದ ಶುಭಾಶಯಗಳನ್ನು ತಿಳಿಸಿದರು. ಭಾರತ್ ಜೋಡೋ ಯಾತ್ರೆ ಮುಂಬೈನಲ್ಲಿ ಅಂತ್ಯವಾಗಲಿದೆ. ಇಂಡಿಯಾ ಒಕ್ಕೂಟದ ಎಲ್ಲ ಪಕ್ಷಗಳಿಗೆ ಆಹ್ವಾನ ನೀಡಿದೆ. ಯುವ ನ್ಯಾಯ ಕಾಂಗ್ರೆಸ್ ಪಕ್ಷದ ಅತಿದೊಡ್ಡ ಗ್ಯಾರಂಟಿಯಾಗಿದೆ ಎಂದರು.

    ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿಯಾಗಿರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಪರೀಕ್ಷೆ ಪತ್ರಿಕೆ ಲೀಕ್ ತಡೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಗುರುವಾರ ಸಿಇಸಿ ಸಭೆ ನಡೆಯಿತು. 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ರಾಹುಲ್ ಗಾಂಧಿ (Rahul Gandhi) ಹೆಸರು ಪಟ್ಟಿಯಲ್ಲಿದೆ. 39ರಲ್ಲಿ  15 ಜನರಲ್ ಕ್ಯಾಟಗರಿ, 24 ಮೈನಾರಿಟಿ, 12 ಮಂದಿ (50 ವರ್ಷದೊಳಗಿನ ಅಭ್ಯರ್ಥಿ)ಗಳು ಪಟ್ಟಿಯಲ್ಲಿದ್ದಾರೆ ಎಂದರು.

    ಮೊದಲ ಪಟ್ಟಿಯಲ್ಲಿರುವ ಪ್ರಮುಖರು ?: ರಾಹುಲ್ ಗಾಂಧಿ (ವಯನಾಡ್, ಕೇರಳ), ಭೂಪೇಶ್ ಬಘೇಲ್ (ರಾಜನಂದಗಾಂವ್, ಛತ್ತೀಸ್‌ಗಢ), ತಾಮ್ರಧ್ವಜ್ ಸಾಹು (ಮಹಾಸಮುಂಡ್, ಛತ್ತೀಸ್‌ಗಢ), ಶಶಿ ತರೂರ್ (ತಿರುವನಂತಪುರ, ಕೇರಳ), ಹೈಬಿ ಈಡನ್ (ಎರ್ನಾಕುಲಂ, ಕೇರಳ), ಡಿಕೆ ಸುರೇಶ್ (ಬೆಂಗಳೂರು ಗ್ರಾಮಾಂತರ, ಕರ್ನಾಟಕ)ದಿಂದ ಸ್ಪರ್ಧಿಸಲಿದ್ದಾರೆ.

    ಯಾರೆಲ್ಲ ಇದ್ದಾರೆ:  ಅನಂತ ಸ್ವಾಮಿ ಗಡ್ಡದೇವರಮಠ  (ಹಾವೇರಿ), ಎಸ್​ಪಿ ಮುದ್ದಹನುಮೇಗೌಡ (ತುಮಕೂರು), ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ), ವೆಂಕಟರಮಣೇ ಗೌಡ  (ಸ್ಟಾರ್ ಚಂದ್ರು) (ಮಂಡ್ಯ), ಗೀತಾ ಶಿವರಾಜ್ ಕುಮಾರ್ (ಶಿವಮೊಗ್ಗ), ಶ್ರೇಯಸ್ ಪಟೇಲ್ (ಹಾಸನ), ರಾಜು​ ಅಲಗೂರು (ವಿಜಯಪುರ)ಗೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿಯುವ ಅಭ್ಯರ್ಥಿಗಳಾಗಿದ್ದಾರೆ.

    ಕೇರಳದಿಂದ 15 ಅಭ್ಯರ್ಥಿಗಳ ಹೆಸರನ್ನು ಘೊಷಣೆ ಮಾಡಲಾಗಿದೆ. ರಾಜಮೋಹನ್ ಉನ್ನಿಥಾನ್ (ಕಾಸರಗೋಡು), ಕೆ.ಸುಧಾಕರನ್ (ಕಣ್ಣೂರು), ಶಾಫಿ ಪರಂಬಿಲ್ (ವಡಕರ), ರಾಹುಲ್ ಗಾಂಧಿ (ವಯನಾಡ್), ಎಂ.ಕೆ. ರಾಘವನ್ (ಕೋಳಿಕೋಡ್), ವಿ.ಕೆ. ಶ್ರೀಕಂದನ್ (ಪಾಲಕ್ಕಾಡ್), ರಮ್ಯಾ ಹರಿದಾಸ್ (ಆಲತ್ತೂರ್ (SC), ಕೆ. ಮುರಳೀಧರನ್ (ತ್ರಿಶೂರ್), ಬೆನ್ನಿ ಬಹನನ್ (ಚಾಲಕುಡಿ), ಹೈಬಿ ಈಡನ್ (ಎರ್ನಾಕುಲಂ), ಡೀನ್ ಕುರಿಯಾಕೋಸ್ (ಇಡುಕ್ಕಿ), ಕೋಡಿಕುನ್ನಿಲ್ ಸುರೇಶ್ (ಮಾವೇಲಿಕ್ಕರ (SC), ಆಂಟೊ ಆಂಟೋನಿ (ಪತ್ತನಂತಿಟ್ಟ), ಅಡೂರ್ ಪ್ರಕಾಶ್ (ಅಟ್ಟಿಂಗಲ್), ಡಾ. ಶಶಿ ತರೂರ್ (ತಿರುವನಂತಪುರಂ) ಇವರುಗಳನ್ನು ಈ ಬಾರಿ ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

    ಛತ್ತೀಸ್​ಗಢದಲ್ಲಿ ಮಾಜಿ ಸಿಎಂ ಭೂಪೇಶ್​ ಬಘೇಲ್​ ಸೇರಿ 6 ಮಂದಿಗೆ ಟಿಕೆಟ್ ನೀಡಲಾಗಿದೆ. ಡಾ. ಶಿವಕುಮಾರ್ ದಹರಿಯಾ (ಜಂಜಗಿರ್ – ಚಂಪಾ (SC), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ರಾಜೇಂದ್ರ ಸಾಹು (ದುರ್ಗ್), ವಿಕಾಸ್ ಉಪಾಧ್ಯಾಯ (ರಾಯ್ಪುರ), ತಾರಧ್ವಜ್ ಸಾಹು (ಮಹಾಸಮುಂಡ)ಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

    ತೆಲಂಗಾಣದಿಂದ 4 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಾಗಿದೆ. ಸುರೇಶ್ ಕುಮಾರ್ ಶೆಟ್ಕರ್ (ಜಹೀರಾಬಾದ್), ಸುನೀತಾ ಮಹೇಂದರ್ ರೆಡ್ಡಿ (ಚೇವೆಲ್ಲಾ), ಕುಂದೂರು ರಘುವೀರ್ (ನಲ್ಗೊಂಡ), ಪೋರಿಕ ಬಲರಾಮ್ ನಾಯಕ್ (ಮಹಬೂಬಾಬಾದ್-ST)ಗೆ ಟಿಕೆಟ್ ಘೋಷಿಸಲಾಗಿದೆ. ಜೊತೆಗೆ ಮೊಹಮ್ಮದ್‌ ಹಮ್ದುಲ್ಲಾ ಸೈಯದ್‌ (ಲಕ್ಷದ್ವೀಪ-ST), ವಿನ್ಸೆಂಟ್‌ ಹೆಚ್‌ ಪಾಲಾ (ಶಿಲ್ಲಾಂಗ್-‌ ST, ಮೇಘಾಲಯ), ಸಲೆಂಗ್‌ ಎ ಸಂಗ್ಮಾ (ತುರಾ-ST, ಮೇಘಾಲಯ), ಎಸ್‌ ಸಪಾಂಗ್‌ಮೆರೆನ್‌ ಜಮಿರ್‌ (ನಾಗಾಲ್ಯಾಂಡ್), ಗೋಪಾಲ್‌ ಚೆಟ್ರಿ (ಸಿಕ್ಕಿಂ) ಕಣದಲ್ಲಿದ್ದಾರೆ.