Tag: coastal karnataka

  • ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

    ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಇಂದು ರಾತ್ರಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ದಕ್ಷಿಣ ಕೊಂಕಣ, ಗೋವಾ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾಧಾರಣದಿಂದ ಕೂಡಿದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬಂಗಾಳಕೊಲ್ಲಿಯ ಪೂರ್ವ ಕೇಂದ್ರೀಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಪಶ್ಚಿಮದಿಂದ ವಾಯುವ್ಯದೆಡೆಗೆ ಕಳೆದ ಆರು ಗಂಟೆಗಳಿಂದ ಗಂಟೆಗೆ 17 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದೆ. ಇಂದು ಬೆಳಗ್ಗೆ 5:30ಕ್ಕೆ ವಿಶಾಖಪಟ್ಟಣಂನಿಂದ ದಕ್ಷಿಣ-ನೈಋತ್ಯಕ್ಕೆ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಆಂಧ್ರಪ್ರದೇಶದ ಕಾಕಿನಾಡ ಸಮೀಪದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಹೇಳಿದೆ.

     

    ಇತ್ತೀಚಿಗೆ ಆಂಧ್ರಪ್ರದೇಶದ ಉತ್ತರ ಕರಾವಳಿಯನ್ನು ದಾಟಿ, ಕಾಕಿನಾಡದ ಮೂಲಕ ಗಂಟೆಗೆ ಸುಮಾರು 55 ರಿಂದ 65 ಕಿಲೋಮೀಟರ್ ವೇಗದಲ್ಲಿ ಸಾಗಿ ಹಾದು ಹೋಗಿದೆ. ಈ ವಾಯುಭಾರ ಕುಸಿತವನ್ನು ಮಚಲಿಪಟ್ಟಣಂ, ವಿಶಾಖಪಟ್ಟಣಂ, ಗೋಪಾಲಪುರದಲ್ಲಿ ರೇಡಾರ್  ಮೂಲಕ ನಿಗಾವಹಿಸಲಾಗಿತ್ತು. ರೇಡಾರ್ ಸಂಗ್ರಹಿಸಿರುವ ದೃಶ್ಯಗಳಂತೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳು ಮತ್ತು ಅದಕ್ಕೆ ಹೊಂದಿಕೊಂಡ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬುಧವಾರ ಕರ್ನಾಟಕದ ಕರಾವಳಿ, ಉತ್ತರ ಒಳನಾಡು, ಗೋವಾ, ಕೊಂಕಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ.

    ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿರುಗಾಳಿ ಗಂಟೆಗೆ 55 ರಿಂದ 65 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದ್ದು, ನಂತರ ಅದರ ತೀವ್ರತೆ ತಗ್ಗಲಿದೆ.

    ಬಂಗಾಳಕೊಲ್ಲಿಯ ವಾಯುವ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಹಾಗೂ ಒಡಿಶಾ, ಆಂಧ್ರ, ತಮಿಳುನಾಡು, ಪುದುಚೆರಿಗಳಲ್ಲಿ ಸಮುದ್ರದ ಸ್ಥಿತಿಗತಿ, ಏರಿಳಿತ ಇಂದು ಮತ್ತು ನಾಳೆ ಗಂಭೀರವಾಗಿರಲಿದೆ.

    ಬಂಗಾಳಕೊಲ್ಲಿಗೆ ಹೊಂದಿಕೊಂಡಿರುವ ವಾಯವ್ಯ ಮತ್ತು ಈಶಾನ್ಯ ಭಾಗದ ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ ಕರಾವಳಿಗಳಲ್ಲಿ ಮೀನುಗಾರರು ನೀರಿಗೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.

  • ಉಡುಪಿಯಲ್ಲಿ ಬಕ್ರೀದ್ ಆಚರಣೆ- ಕಟ್ಟುನಿಟ್ಟಿನ ನಿಯಮದಡಿ ನಮಾಜ್‍ಗೆ ಅವಕಾಶ

    ಉಡುಪಿಯಲ್ಲಿ ಬಕ್ರೀದ್ ಆಚರಣೆ- ಕಟ್ಟುನಿಟ್ಟಿನ ನಿಯಮದಡಿ ನಮಾಜ್‍ಗೆ ಅವಕಾಶ

    – ಆಲಿಂಗನ ಇಲ್ಲ, ವೃದ್ಧರು-ಮಕ್ಕಳಿಗೆ ಅವಕಾಶ ಇಲ್ಲ

    ಉಡುಪಿ: ಕರಾವಳಿಯ ಮುಸಲ್ಮಾನರಿಗೆ ಇಂದು ಬಕ್ರೀದ್ ಹಬ್ಬದ ಸಂಭ್ರಮ. ಸಾಂಕ್ರಾಮಿಕ ಕೊರೊನ ಹರಡಿರುವುದರಿಂದ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ಮುಸಲ್ಮಾನರು ಆಚರಿಸಿದ್ದಾರೆ. ಮಸೀದಿಗಳಲ್ಲಿ ಬೆಳಗ್ಗೆ ನಮಾಜ್ ನಡೆದಿದ್ದು, ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.

    ಪ್ರತಿ ಮಸೀದಿಯಲ್ಲೂ ಕೂಡ ಇದೇ ಷರತ್ತು ಅನ್ವಯ ಆಗಿದೆ. ನಮಾಜ್ ಗೆ ಮಾತ್ರ ಅವಕಾಶ ಕಲ್ಪಿಸಿರುವ ಕಮಿಟಿ, ನಮಾಜ್ ನಂತರ ಆಲಿಂಗನಕ್ಕೆ ಅವಕಾಶ ಕೊಟ್ಟಿಲ್ಲ. ಐವತ್ತಕ್ಕಿಂತ ಹೆಚ್ಚು ಜನ ಮಸೀದಿಗೆ ಆಗಮಿಸಿದರೆ ಎರಡು ಬ್ಯಾಚ್ ಗಳಲ್ಲಿ ನಮಾಜ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಮತ್ತು ವೃದ್ಧರಿಗೆ ಯಾವುದೇ ಕಾರಣಕ್ಕೂ ಬಕ್ರೀದ್ ನಮಾಜ್ ಗೆ ಮಸೀದಿಗೆ ಪ್ರವೇಶ ಇರಲಿಲ್ಲ. ಇದನ್ನೂ ಓದಿ:  ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ಮಕ್ಕಳು ಮತ್ತು ವೃದ್ಧರಿಗೆ ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿ, ಹಬ್ಬವನ್ನು ಆಚರಿಸುವಂತೆ ಧರ್ಮಗುರುಗಳು ಆಯಾಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆಯೇ ಕರೆ ಕೊಟ್ಟಿದ್ದರು. ಈ ಹಿಂದೆ ಮುಸಲ್ಮಾನರ ರಂಜಾನ್ ಹಬ್ಬದ ಸಂಭ್ರಮಕ್ಕೂ ಕೊರೊನಾ ಅಡ್ಡ ಬಂದಿತ್ತು.

  • ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ಇಂದೇ ದಡಕ್ಕೆ ಬರುವಂತೆ ಮೀನುಗಾರರಿಗೆ ಸೂಚನೆ

    ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ಇಂದೇ ದಡಕ್ಕೆ ಬರುವಂತೆ ಮೀನುಗಾರರಿಗೆ ಸೂಚನೆ

    ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದಿಂದಾಗಿ ಕರ್ನಾಟಕ ಕರಾವಳಿ ತೀರದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಗೃಹ ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗ ಕರ್ನಾಟಕ, ಕೇರಳ, ಲಕ್ಷದ್ವೀಪ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಫಾಕ್ಸ್ ಸಂದೇಶ ಕಳುಹಿಸಿ ಕರಾವಳಿ ಭಾಗದಲ್ಲಿ ಎಚ್ಚರದಲ್ಲಿರುವಂತೆ ಸೂಚಿಸಿದೆ.

    ಲಕ್ಷದ್ವೀಪ, ಕರ್ನಾಟಕ, ಕೇರಳದಲ್ಲಿ ಮೇ 31 ಮತ್ತು 1 ರಂದು ಭಾರೀ ಮಳೆಯಾದರೆ, ಮಹಾರಾಷ್ಟ್ರದಲ್ಲಿ ಜೂನ್ 2ರಿಂದ 4ರವರೆಗೆ ಮಳೆಯಾಗಲಿದೆ. ಗುಜರಾತಿನಲ್ಲಿ ಜೂನ್ 3 ರಿಂದ 5ರವರೆಗೆ ಮಳೆಯಾಗಲಿದೆ ಎಂದು ಹೇಳಿದೆ.

    ಜೂನ್ 2ರ ವೇಳೆಗೆ ಕರ್ನಾಟಕದಲ್ಲಿ 90-100 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದು. ಮೀನುಗಾರರು ಸಮದ್ರಕ್ಕೆ ಇಳಿಯಬಾರದು. ಮೀನುಗಾರಿಕೆಗೆ ತೆರಳಿದ ಮೀನುಗಾರು ಇಂದೇ ಮರಳಿ ದಡ ಸೇರಬೇಕು ಎಂದು ಸೂಚಿಸಲಾಗಿದೆ.

  • ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆ ಕೆಲಸ ಮಾಡುತ್ತಿರುವುದು ಸತ್ಯ: ಶೋಭಾ ಕರಂದ್ಲಾಜೆ

    ಕರಾವಳಿ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆ ಕೆಲಸ ಮಾಡುತ್ತಿರುವುದು ಸತ್ಯ: ಶೋಭಾ ಕರಂದ್ಲಾಜೆ

    ಬೆಳಗಾವಿ: ಕರಾವಳಿಯ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆಗಳು ಕೆಲಸ ಮಾಡುತ್ತಿರುವುದು ಸತ್ಯ. ಕೇರಳ ಹಾಗೂ ಬೇರೆ ಬೇರೆ ಭಾಗಗಳಿಂದ ಬಂದವರು ಸಮಾಜ ದ್ರೋಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಬಾಂಬ್ ಪತ್ತೆಯಾದ ಪ್ರಕರಣ ಸಂಪೂರ್ಣ ತನಿಖೆಯಾದ ಬಳಿಕ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಬಗ್ಗೆ ಯಾರು? ಏಕೆ? ಇಟ್ಟಿದ್ದಾರೆ. ಹೇಗೆ ಅಲ್ಲಿಗೆ ಬಂತು ಎಂಬ ಕುರಿತಾಗಿ ತನಿಖೆ ನಡೆಯಬೇಕಿದೆ. ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದರು.

    ಕರಾವಳಿಯ ಭಾಗದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರೀಯವಾಗಿ ತೊಡಗಿಕೊಂಡಿವೆ. ಅಲ್ಲದೇ ಸ್ಥಳೀಯ ಮಂಗಳೂರಿಗರನ್ನು ಕೆಲವರು ದುರುಪಯೋಗ ಮಾಡುತ್ತಿದ್ದಾರೆ. ಯಾವ ಸಂಘಟನೆಯ ಜೊತೆ ಯಾರು? ಯಾವುದರಲ್ಲಿ ಶಾಮಿಲಾಗಿದ್ದಾರೆ. ಇಷ್ಟು ದಿನ ಕಾಶ್ಮೀರ, ಸಿರಿಯಾ, ಪಿಓಕೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವಂಥ ಸಂಘಟನೆಯೊಂದಿಗೆ ಶಾಮೀಲಾಗಿದ್ದಾರೆ ಎನ್ನುವುದನ್ನು ತನಿಖೆ ಮಾಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿಕೊಂಡು ತನಿಖೆಯನ್ನು ಚುರುಕುಗೊಳಿಸುತ್ತದೆ. ಭಯೋತ್ಪಾದಕ ಚುಟುವಟಿಕೆಯಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ಕೊಡಿಸಿ ತಪ್ಪಿತಸ್ಥರ ಮುಖವಾಡ ಕಳಚುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

    ಪಿಎಫ್‍ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರ ಮಾಹಿತಿಯನ್ನು ಕಲೆ ಹಾಕುತ್ತಿದೆ. ಎಸ್‍ಡಿಪಿಐ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧ ಮಾಡಬೇಕು. ಕಾರಣ ಈ ಸಂಘಟನೆಯ ಹಲವರು ಸಮಾಜ ದ್ರೋಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ಕೊಲೆ ಪ್ರಕರಣದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಮಾಜಿ ಸಚಿವ ತನ್ವಿರ್ ಸೇಠ್ ಅವರಿಗೂ ಕೂಡ ಚೂರಿ ಹಾಕಿ ಹತ್ಯೆ ಮಾಡುವ ಸಂಚು ರೂಪಿಸಿದ್ದ ಇಂಥ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂದರು.

  • ಕರಾವಳಿಯಲ್ಲಿ ಮುಂದುವರಿದ ಮಳೆಯ ಆರ್ಭಟ!

    ಕರಾವಳಿಯಲ್ಲಿ ಮುಂದುವರಿದ ಮಳೆಯ ಆರ್ಭಟ!

    ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡು ನೆರೆಯ ಭೀತಿ ಸೃಷ್ಟಿಯಾಗಿದೆ.

    ಕರಾವಳಿ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ನೆರೆಯ ಭೀತಿ ಎದುರಾಗಿದೆ. ನದಿಗಳು ಮೈದುಂಬಿ ಹರಿಯುತ್ತಿದ್ದು, ಹಳ್ಳಕೊಳ್ಳಗಳು ಸಹ ತುಂಬಿ ಹೋಗಿವೆ. ಇದರಿಂದ ಕಿಂಡಿ ಅಣೆಕಟ್ಟು ಸಂಪೂರ್ಣ ತುಂಬಿ ತುಳುಕುತ್ತಿದೆ.

    ಜಿಲ್ಲೆಯಲ್ಲಿ ಇನ್ನು ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯಬಾರದೆಂದು ಎಚ್ಚರಿಕೆ ನೀಡಲಾಗಿದೆ. ಕುಂದಾಪುರ, ಕಾರ್ಕಳ, ಕೊಲ್ಲೂರು ಹಾಗೂ ಬೈಂದೂರಿನಲ್ಲಿಯೂ ಮಳೆ ತನ್ನ ಆರ್ಭಟ ಮುಂದುವರೆಸಿದ್ದು, ಸಮುದ್ರ ಹಾಗೂ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿದೆ.

  • ಕಡಲ ತಡಿಯಲ್ಲಿ ಆಕೆಯ ಘರ್ಜನೆ ಕೇಳಿ ಪೋರ್ಚುಗೀಸರು ಥಂಡಾ ಹೊಡೆದುಬಿಟ್ಟಿದ್ದರು!

    ಕಡಲ ತಡಿಯಲ್ಲಿ ಆಕೆಯ ಘರ್ಜನೆ ಕೇಳಿ ಪೋರ್ಚುಗೀಸರು ಥಂಡಾ ಹೊಡೆದುಬಿಟ್ಟಿದ್ದರು!

    ಓರಗೆಯ ಗಂಡು ಮಕ್ಕಳೊಂದಿಗೆ ಬೆಳೆದವಳಿಗೆ ತಾನು ಹೆಣ್ಣು ಅನ್ನೋದೇ ಮರೆತು ಹೋಗಿತ್ತೇನೋ. ಶಸ್ತ್ರ ಶಾಸ್ತ್ರ ಪಾರಂಗತೆಯಾದವಳಿಗೆ ಯುದ್ಧ ಭೂಮಿಯೇ ಕರ್ಮಸ್ಥಾನವಾಗಿಬಿಟ್ಟಿತ್ತು. ಉಳ್ಳಾಲ ರಾಜ್ಯದ ಪಟ್ಟಕ್ಕೇರಿದ ಮಹಾರಾಣಿ ಪೋರ್ಚುಗೀಸರ ವಿರುದ್ಧ ತೊಡೆತಟ್ಟಿ ನಿಂತುಬಿಟ್ಟಾಕೆ. ಓಡುವ ಕುದುರೆಗೆ ಲಗಾಮು ಹಾಕುತ್ತಿದ್ದ ಛಲಗಾತಿ. ಮದವೇರಿದ ಗಜಕ್ಕೆ ಅಂಕುಶ ಹಾಕಿ ಹತೋಟಿಗೆ ತರುತ್ತಿದ್ದ ದಿಟ್ಟೆ. ಗಂಡನೇ ಶತ್ರುಪಾಳಯದ ಜೊತೆ ಸೇರಿ ಕತ್ತಿ ಮಸೆದಾಗ ಅಂಜದೆ ಕಚ್ಚೆ ಕಟ್ಟಿ ನಿಂತ ರಣ ಚಂಡಿ. ಮಂಗಳೂರು-ಉಳ್ಳಾಲ ರಾಜ್ಯಗಳ ರಕ್ಷಣೆಗಾಗಿ ತನ್ನ ವೈಯುಕ್ತಿಕ ಜೀವನವನ್ನೇ ಬಲಿಕೊಟ್ಟ ಆ ಗಂಡೆದೆಯ ಹೆಣ್ಣೇ ವೀರ ರಾಣಿ ಅಬ್ಬಕ್ಕ.

    ಉಳ್ಳಾಲ…ಇಲ್ಲಿ ಹರಡಿರುವ ವಿಶಾಲ ಸಾಗರದ ತಟದಲ್ಲಿರುವ ಪ್ರಶಾಂತವಾದ ಊರು. ಭೋರ್ಗರೆಯುತ್ತಾ ದಡಕ್ಕೆ ತಾಕಿ ಮತ್ತೆ ಹಿಮ್ಮುಖವಾಗಿ ಹೋಗೋ ಅಲೆಗಳು. ಕಣ್ಣು ಹಾಯಿಸಿದಷ್ಟು ನೀಲಾಗಾಸವನ್ನೇ ಚುಂಬಿಸುತ್ತಿದೆಯೇನೋ ಅನ್ನೋ ಹಾಗಿರೋ ಕಡಲು. ತುಳುವರ ವೀರಪರಂಪರೆ ಸಾರುವ ಉಳ್ಳಾಲದಲ್ಲಿದ್ದವಳೇ ರಾಣಿ ಅಬ್ಬಕ್ಕ.

    ಉಳ್ಳಾಲ ಕೋಟೆ ರಾಣಿ ಅಬ್ಬಕ್ಕನ ರಾಜಧಾನಿಯಾಗಿತ್ತು. ಅಷ್ಟರಲ್ಲಾಗ್ಲೇ ಗೋವಾವನ್ನು ಆಕ್ರಮಿಸಿಕೊಂಡಿದ್ದ ಪೋರ್ಚುಗೀಸರು ಉಳ್ಳಾಲದತ್ತ ತಮ್ಮ ಗಮನಹರಿಸಿದ್ರು. 1525ರಲ್ಲಿ ದಕ್ಷಿಣ ಕರಾವಳಿಯ ಭಾಗಕ್ಕೆ ದಾಳಿ ಮಾಡಿ ಮಂಗಳೂರು ಕೋಟೆಯನ್ನೇ ಹೊಡೆದುರುಳಿಸಿಬಿಟ್ಟಿದ್ರು. ಉಳ್ಳಾಲದ ಮೂಲಕವಾಗಿ ಸಾಂಬಾರ ಸಾಮಾಗ್ರಿಗಳು ಸೇರಿದಂತೆ ಇತರೆ ವಸ್ತುಗಳ ಸಾಗಾಣೆಗೆ ಅನುಕೂಲಕರವಾಗಿತ್ತು. ಹೀಗಾಗಿ ಪೋರ್ಚುಗೀಸರು, ಡಚ್ಚರು ಹಾಗೂ ಬ್ರಿಟೀಷರ ಕಾಲಾವಧಿಯಲ್ಲೂ ಉಳ್ಳಾಲಕ್ಕಾಗಿ ಕಾದಾಟ ನಡೀತಾನೇ ಇತ್ತು. ಆದ್ರೆ, ಪೋರ್ಚುಗೀಸರು ಭಾರತದಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಲು ಬಂದಾಗ ಅವರನ್ನು ಹೊಡೆದೋಡಿಸುವಲ್ಲಿ ರಾಣಿ ಅಬ್ಬಕ್ಕನ ಪಾತ್ರವನ್ನು ನೆನಪಿಸಿಕೊಳ್ಳಲೇಬೇಕು. 1525ರಲ್ಲಿ ನಡೆದ ಮೊದಲ ದಾಳಿಯ ಬಳಿಕ ಅಬ್ಬಕ್ಕ ತನ್ನ ಸೇನೆಯನ್ನು ಬಲಪಡಿಸುವಲ್ಲಿ ಮುತುವರ್ಜಿವಹಿಸಿದ್ದಳು.

    ಆದ್ರೆ, 1558ರಲ್ಲಿ ನಡೆದ ಯುದ್ಧ ಮಾತ್ರ ಅಬ್ಬಕ್ಕನ ಜಂಗಾಬಲವನ್ನೇ ಉಡುಗಿಸಿಬಿಟ್ಟಿತ್ತು. ಮಕ್ಕಳು, ಹಿರಿಯರೆನ್ನದೆ ಸಾವಿರಾರು ಜನರನ್ನು ಪೋರ್ಚುಗೀಸರ ಸೇನೆ ಸಜೀವವಾಗಿ ದಹಿಸಿಬಿಟ್ಟಿತ್ತು. ಇಡೀ ನಗರವೇ ಬೆಂಕಿಯ ಕೆಂಡದಂತೆ ನಿಗಿ ನಿಗಿ ಉರೀತಾ ಇತ್ತು. ತದ ನಂತರ 1568ರ ದಾಳಿಯಲ್ಲಿ ಅಬ್ಬಕ್ಕ ಎಲ್ಲವನ್ನೂ ಕಳೆದುಕೊಂಡು ಮಸೀದಿಯೊಂದರಲ್ಲಿ ಆಶ್ರಯ ಪಡೆಯುವ ಸ್ಥಿತಿಗೆ ತಲುಪ್ಪಿದ್ದಳು. ಆದ್ರೆ ಇಷ್ಟಕ್ಕೇ ಸುಮ್ಮನಾಗದ ಅಬ್ಬಕ್ಕ ಕೇವಲ 200 ಸೈನಿಕರನ್ನು ಕಟ್ಟಿಕೊಂಡು ಶತ್ರುಪಾಳಯಕ್ಕೆ ಎದೆಯೊಡ್ಡಿ ನಿಂತಿದ್ಲು.

    1569ರಲ್ಲಿ ಮತ್ತೆ ಅಂತಹದ್ದೇ ದಾಳಿ ನಡೆದಿತ್ತು. ಆದ್ರೆ ಇದೊಂದು ರೀತಿಯಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗದ ಮಾದರಿಯಲ್ಲಿ ನಡೆದು ಹೋಯ್ತು. ಇಷ್ಟಾದ್ರೂ ಅಬ್ಬಕ್ಕ ಮಾತ್ರ ಪೋರ್ಚುಗೀಸರ ಕೈಗೆ ಸಿಗ್ತಾನೇ ಇರಲಿಲ್ಲ. ಬಿಜಾಪುರದ ಸುಲ್ತಾನರು ಹಾಗೂ ಕಲ್ಕತ್ತಾದ ಝಮೋರಿನ್‍ಗಳ ಸಾಥ್ ತೆಗೆದುಕೊಂಡ ಅಬ್ಬಕ್ಕ ರಿಪುಗಳ ರುಂಡ ಚೆಂಡಾಡಲು ಟೊಂಕ ಕಟ್ಟಿ ನಿಂತಿದ್ಲು. ಅದೇ ಕೊನೆ ಆ ಯುದ್ಧದಲ್ಲಿ ಅಬ್ಬಕ್ಕ ಸೆರೆಮನೆ ಸೇರಿದ್ಲು.

    ಅಬ್ಬಕ್ಕ ಈಗ ಒಂಟಿಯಾಗಿಬಿಟ್ಟಿದ್ಲು. ಅತ್ತದರಿ ಇತ್ತ ಪುಲಿ ಅನ್ನೋ ಪರಿಸ್ಥಿತಿಯಲ್ಲಿ ವಿಲವಿಲ ಒದ್ದಾಡಿಬಿಟ್ಳು. ಆದ್ರೆ ಈಕೆಯ ಧೈರ್ಯ ಹಾಗೂ ಸಾಹಸೀ ಪ್ರವೃತ್ತಿಯಿಂದಾಗಿ ಅಂತರಾಷ್ಟ್ರೀಯ ಪ್ರಸಿದ್ಧಿ ಪಡೆದಿದ್ಲು. ಇದೇ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಾಬಲ್ಯ ಕ್ಷೀಣಿಸುತ್ತಾ ಬಂದಿತ್ತು. ಪೋರ್ಚುಗೀಸ ಕಡಲುಗಳ್ಳರು ದಕ್ಷಿಣ ಭಾರತದ ನೌಕಾ ವ್ಯಾಪಾರವನ್ನು ಪೋರ್ಚುಗೀಸರು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದ್ರು. ಇದಕ್ಕೆ ಹೊಡೆತಕೊಡುವ ಉದ್ದೇಶದಿಂದ ಕೆಳದಿ ನಾಯಕರ ನೆರವು ಪಡೆದ ಅಬ್ಬಕ್ಕ ಮಧ್ಯಪ್ರಾಚ್ಯ ದೇಶಗಳೊಂದಿಗೆ ವ್ಯಾಪಾರ ಶುರುಹಚ್ಚಿಕೊಂಡಿದ್ಲು. ಮಂಗಳೂರಿನ ಕೋಟೆಯನ್ನು ವಶಪಡಿಸಿಕೊಂಡಿದ್ದ ಪೋರ್ಚುಗೀಸರಿಗೆ ತಕ್ಕ ಶಾಸ್ತಿ ಮಾಡಲು ಅಬ್ಬಕ್ಕ ಕಾಯ್ತಾ ಇದ್ಲು. ತನ್ನ ಕುಶಲ ರಾಜತಂತ್ರದೊಂದಿಗೆ ಕ್ಯಾಲಿಕಟ್‍ನ ಝಾಮೋರಿನ್, ಅರಬ್‍ನ ಮೂರ್ ರು, ಮೊಪ್ಲಾ ಜನಾಂಗ ಹಾಗೂ ಕೆಳದಿ ರಾಜರ ನೆರವಿನೊಂದಿಗೆ ಮತ್ತೆ ಯುದ್ಧ ಘೋಷಿಸಿದ್ಲು.

    ಅಂದಹಾಗೆ ಅಬ್ಬಕ್ಕಳಿಗೆ ವಿಶೇಷವಾದ ಯುದ್ಧಕಲೆಯೊಂದು ಕರತಲಾಮಲಕವಾಗಿರುತ್ತೆ. ಅದುವೇ ಅಗ್ನಿವನ. ಈ ವಿಶೇಷ ತಂತ್ರ ಗೊತ್ತಿದ್ದ ಕೊನೆಯ ರಾಣಿಯೂ ಈಕೆಯೇ ಆಗಿದ್ದಳು. ಈ ಯುದ್ಧದಲ್ಲಿ ಪೋರ್ಚುಗೀಸರು ಮಣ್ಣುಮುಕ್ತಾರೆ. ಅಬ್ಬಕ್ಕಳ ಸೇನಾನಿಯಂತ್ರಣ ಕಂಡು ಯುದ್ಧಭೂಮಿಗೆ ಬಂದ ಪರಕೀಯರು ಒಂದು ಕ್ಷಣ ದಂಗಾಗಿ ಹೋಗ್ತಾರೆ. ಬೇಕ, ಬಸರೂರುಗಳಿಂದಲೂ ಹರಿದು ಬಂದ ನೆರವನ್ನು ಕಂಡು ಅಬ್ಬಕ್ಕಳಿಗೆ ಆನೆಬಲಬಂದಂತಾಗಿತ್ತು. ಆದ್ರೆ, ಅವೆಲ್ಲಾ ಬಂದು ಸೇರುವವವರೆಗೆ ಸ್ವಲ್ಪ ದೂರದ ತಲಪಾಡಿಯಲ್ಲಿ ತಲೆಮರೆಸಿಕೊಳ್ಳುವುದು ಸೂಕ್ತ ಅಂತಾ ಮಂತ್ರಿಗಳು ಅಬ್ಬಕ್ಕ ರಾಣಿಗೆ ತಿಳಿಸಿದ್ರು. ಆದ್ರೆ ಮಕ್ಕಳಂತಿರುವ ಪ್ರಜೆಗಳನ್ನು ಕಷ್ಟದಲ್ಲಿ ದೂಡಿ ತಾನು ಹೇಡಿಯಂತೆ ಕೂರುವುದು ಅಬ್ಬಕ್ಕಳಿಗೆ ಬೇಕಿರಲಿಲ್ಲ.

    ಇದಾದ ಬಳಿಕ 1568ರಲ್ಲಿ ಮತ್ತೊಮ್ಮೆ ಉಳ್ಳಾಲದ ಮೇಲೆ ಸೇನೆಯನ್ನು ಪೋರ್ಚುಗೀಸರು ಛೂ ಬಿಡ್ತಾರೆ. ಈ ಕಾಳಗದಲ್ಲಿ ಅಬ್ಬಕ್ಕ ವೈರಿ ಪಡೆಯ ಸೇನಾಧಿಕಾರಿಯನ್ನೇ ನೆಲಕ್ಕುರುಳಿಸುತ್ತಾಳೆ. ಈ ಯುದ್ಧದಲ್ಲಿ ವೈರಿಪಡೆ ಶಾಂತಿಯ ಒಡಂಬಡಿಕೆಗೆ ಬರುತ್ತಾರೆ. ಅಬ್ಬಕ್ಕಳನ್ನು ಹೇಗಾದ್ರೂ ಮಣಿಸಲೇಬೇಕೆಂದು ನಿರ್ಧರಿಸಿದ್ದ ಗೋವಾದ ವೈಸ್ ರಾಯ್ ತನ್ನ 3000 ಜನ ಸೇನಾ ಬಲ ಹಾಗೂ ಅನೇಕ ಯುದ್ಧ ನೌಕೆಗಳೊಂದಿಗೆ ಉಳ್ಳಾಲಕ್ಕೆ ಲಗ್ಗೆ ಇಡುತ್ತಾನೆ. ಆಕ್ರಮಣದ ಸುದ್ದಿ ಕೇಳಿದ ಅಬ್ಬಕ್ಕ ಯುದ್ಧವಸ್ತ್ರ ಧರಿಸಿ ಪ್ರತಿರೋಧ ಒಡ್ಡುತ್ತಾಳೆ.

    ಆದ್ರೆ ಈ ಯುದ್ಧವೇ ಅಬ್ಬಕ್ಕಳ ಬಾಳಿನ ಕೊನೆಯ ಯುದ್ಧವಾಗುತ್ತದೆ. ಆಕೆಯ ಮೇಲೆ ಗುಂಡಿನ ಸುರಿಮಳೆಯೇ ಬಂದೆರಗುತ್ತದೆ. ಸೈನಿಕರನ್ನು ಯುದ್ಧಕ್ಕಾಗಿ ಹುರಿದುಂಬಿಸುತ್ತಾ ವೀರಮರಣವನ್ನು ಹೊಂದುತ್ತಾಳೆ. ಇದು ಅಬ್ಬಕ್ಕ ಅನ್ನೋ ಧೀರ ಮಹಿಳೆಯ ರೋಚಕ ಕಥೆಯ ಸಂಕ್ಷಿಪ್ತವಷ್ಟೇ. ಭಾರತದ ಇತಿಹಾಸದುದ್ದಕ್ಕೂ ಕಾಣುವುದು ಇಂತಹಾ ವೀರ ಮಹಿಳೆ, ಪುರುಷರ ಕಥೆಗಳನ್ನೇ. ಅರಬ್ ಹಾಗೂ ಪೋರ್ಚುಗೀಸರ ದಾಖಲೆಗಳಲ್ಲಿ ಈಕೆ ಸರಳ,ಸಜ್ಜನ, ದೃಢ ವಿಚಾರಗಳ ಬಗ್ಗೆ ವಿವರಿಸಲಾಗಿದ್ದು ಈಕೆಯನ್ನು ಕೊಂಡಾಡಿದ್ದಾರೆ. ಇತಿಹಾಸದ ಪುಟಗಳಲ್ಲಿ ವೀರಗಾಥೆಯನ್ನ ಬರೆದ ಕಡಲ ತಡಿಯ ಅಬ್ಬಕ್ಕ ಅನ್ನೋ ಸಿಂಹಿಣಿಗೆ ನಮ್ಮದೊಂದು ಸಲಾಂ.

    ಕ್ಷಮಾ ಭಾರದ್ವಾಜ್, ಉಜಿರೆ