Tag: coach

  • ಟೀಂ ಇಂಡಿಯಾ ಕೋಚ್ ಆಯ್ಕೆ – ಕೊಹ್ಲಿ ನಡೆಗೆ ಹರ್ಷ ಭೋಗ್ಲೆ ಕಿಡಿ

    ಟೀಂ ಇಂಡಿಯಾ ಕೋಚ್ ಆಯ್ಕೆ – ಕೊಹ್ಲಿ ನಡೆಗೆ ಹರ್ಷ ಭೋಗ್ಲೆ ಕಿಡಿ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಪ್ರಧಾನ ಕೋಚ್ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಬೆಂಬಲ ರವಿಶಾಸ್ತ್ರಿ ಅವರಿಗೆ ಎಂದು ಹೇಳುವ ಬಗ್ಗೆ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಸಿಸಿಐ ಕೋಚ್ ಆಯ್ಕೆ ಮಾಡುವ ಕುರಿತ ಕಾರ್ಯಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದೆ. ಈ ಸಂದರ್ಭದಲ್ಲಿ ಈ ರೀತಿ ಬಹಿರಂಗವಾಗಿ ಮಾತನಾಡುವುದು ಎಷ್ಟು ಸರಿ? ಈ ಪ್ರತಿಕ್ರಿಯೆ ಇನ್ನು ನಡೆಯುತ್ತಿರುವುದರಿಂದ ಕೋಚ್ ಆಯ್ಕೆಯಲ್ಲಿ ಮುಖ್ಯ ಪಾತ್ರವಹಿಸುವ ವ್ಯಕ್ತಿಗಳು ಇಂತಹ ಹೇಳಿಕೆ ನೀಡುವುದು ಸರಿಯಲ್ಲ ಎದು ಭೋಗ್ಲೆ ಕಿಡಿಕಾರಿದ್ದಾರೆ.

    ಕಳೆದ ವಾರ ಕೋಚ್ ಆಯ್ಕೆ ಮಾಡುವ ಸಮಿತಿಯಲ್ಲಿದ್ದ ಸದಸ್ಯರಾದ ಅಂಶುಮಾನ್ ಗಾಯಕ್ವಾಡ್ ಕೂಡ ಕೋಚ್ ರವಿಶಾಸ್ತ್ರಿ ಪರವೇ ಹೇಳಿಕೆ ನೀಡಿದ್ದರು. ರವಿಶಾಸ್ತ್ರಿ ಕೋಚಿಂಗ್ ಅವಧಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಿದೆ ಎಂದಿದ್ದರು. ಇಬ್ಬರ ಹೇಳಿಕೆಯನ್ನು ಗಮನಿಸಿರುವ ಭೋಗ್ಲೆ ಈ ಕುರಿತು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ವೆಸ್ಟ್ ಇಂಡೀಸ್ ಟೂರ್ನಿಗೆ ತೆರಳುವ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ವಿರಾಟ್ ಕೊಹ್ಲಿ, ರೋಹಿತ್‍ರೊಂದಿಗೆ ತನಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಸಂದರ್ಭದಲ್ಲಿ ಕೋಚ್ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿ, ರವಿಶಾಸ್ತ್ರಿ ಅವರನ್ನ ಮುಂದುವರಿಸಿದರೆ ತಮಗೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಅಲ್ಲದೇ ಇದುವರೆಗೂ ಆಯ್ಕೆ ಸಮಿತಿ ಕೋಚ್ ನೇಮಕ ಬಗ್ಗೆ ಯಾವುದೇ ಅಭಿಪ್ರಾಯವನ್ನು ಕೇಳಿಲ್ಲ. ನನಗೂ ರವಿಶಾಸ್ತ್ರಿ ಅವರ ನಡುವೆ ಉತ್ತಮ ಸಮನ್ವಯ ಇದ್ದು, ಅವರೆ ಕೋಚ್ ಆಗಿ ಮುಂದುವರಿಯಬೇಕೆಂದು ಕೇಳಿಕೊಳ್ಳುತ್ತೇನೆ. ನನ್ನ ಅಭಿಪ್ರಾಯವನ್ನು ಸಮಿತಿ ಮುಂದೆ ಹೇಳುತ್ತೇನೆ ಎಂದಿದ್ದರು.

  • ಕೋಚ್ ಬದಲಾವಣೆ ಭಾರತ ತಂಡಕ್ಕೆ ಒಳ್ಳೆಯದು – ರಾಬಿನ್ ಸಿಂಗ್

    ಕೋಚ್ ಬದಲಾವಣೆ ಭಾರತ ತಂಡಕ್ಕೆ ಒಳ್ಳೆಯದು – ರಾಬಿನ್ ಸಿಂಗ್

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಒಳಿತಿಗೆ ಕೋಚ್ ಬದಲಾವಣೆ ಒಳ್ಳೆಯದು ಎಂದು ಟೀಂ ಇಂಡಿಯಾದ ಮಾಜಿ ಆಲ್‍ರೌಂಡರ್ ರಾಬಿನ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ಕಳೆದ 15 ವರ್ಷಗಳಲ್ಲಿ ವಿವಿಧ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿರುವ ರಾಬಿನ್ ಸಿಂಗ್ ಅವರು, ಕಳೆದ ಎರಡು ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ನಾಕೌಟ್ ಹಂತದಲ್ಲಿ ಹೊರಬಿದ್ದ ಭಾರತ ತಂಡಕ್ಕೆ ಕೋಚ್ ಬದಲಾವಣೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

    ಬಿಸಿಸಿಐ ಕೋಚ್ ಹುದ್ದೆಗೆ ಆಹ್ವಾನ ಕರೆದಿರುವ ಹಿನ್ನೆಲೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ರಾಬಿನ್ ಸಿಂಗ್, ಭಾರತದ ತಂಡಕ್ಕೆ ಕೋಚ್ ಬದಲಾವಣೆಯ ಅಗತ್ಯವಿದೆ. ಭಾರತ ತಂಡ ಪ್ರಮುಖ ಹಂತದಲ್ಲಿ ಸರಿಯಾದ ಪ್ರದರ್ಶನ ತೋರುತ್ತಿಲ್ಲ. ಅದ್ದರಿಂದ ಮುಂದಿನ ವಿಶ್ವಕಪ್‍ನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ತಯಾರಿ ಆರಂಭ ಮಾಡಬೇಕು ಎಂದು ಹೇಳಿದ್ದಾರೆ.

    ಪ್ರಸ್ತುತ ಕೋಚ್ ಅವರ ನೇತೃತ್ವದಲ್ಲಿ, ಭಾರತ ಸತತ ಎರಡು ಏಕದಿನ, ವಿಶ್ವಕಪ್‍ಗಳ ಸೆಮಿಫೈನಲ್‍ನಲ್ಲಿ ಮತ್ತು ವಿಶ್ವ ಟ್ವೆಂಟಿ -20 ಚಾಂಪಿಯನ್‍ಶಿಪ್‍ನ ಕೊನೆಯ ನಾಲ್ಕು ಹಂತಗಳಲ್ಲಿ ಸೋತಿದೆ. ಈಗ ಭಾರತ 2023 ರ ವಿಶ್ವಕಪ್‍ಗೆ ತಯಾರಿ ನಡೆಸುವ ಸಮಯ ಮತ್ತು ಬದಲಾವಣೆಯು ತಂಡಕ್ಕೆ ಒಳ್ಳೆಯದು ಎಂದು ರಾಬಿನ್ ಸಿಂಗ್ ಹೇಳಿದ್ದಾರೆ.

    ಈ ವೇಳೆ 2019ರ ವಿಶ್ವಕಪ್‍ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದ ವೇಳೆ ನಾನು ಭಾರತ ತಂಡದ ಕೋಚ್ ಆಗಿದ್ದರೆ ಯಾವ ರೀತಿಯಲ್ಲಿ ತೀರ್ಮಾನ ಮಾಡುತ್ತಿದ್ದೆ ಎಂಬುದನ್ನು ಹೇಳಿರುವ ಅವರು, ನಾವು ಒಂದು ಪಂದ್ಯವನ್ನು ಗೆಲ್ಲಬೇಕು ಎಂದರೆ ಆಟವನ್ನು ತಾಂತ್ರಿಕಾವಾಗಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ನಾನು ಕೋಚ್ ಆಗಿದ್ದರೆ, ಮಳೆಯಾದ ಕಾರಣ ಬಾಲ್ ಸ್ವಿಂಗ್ ಆಗುತ್ತಿದ್ದ ಕಾರಣ ಭಾರತವು ರೋಹಿತ್ ಶರ್ಮಾ ಅವರನ್ನು ಮೊದಲೇ ಕಳೆದುಕೊಂಡಿತ್ತು. ಆಗ ನಾನು ಇದ್ದರೆ ವಿರಾಟ್ ಕೊಹ್ಲಿಯನ್ನು 4 ನೇ ಕ್ರಮಾಂಕದಲ್ಲಿ ಆಡಿಸುತ್ತಿದೆ. ಆ ಆಟಕ್ಕಾಗಿ ನಾನು ಮೊದಲೇ ಮತ್ತೊಬ್ಬ ಉನ್ನತ ಕ್ರಮಾಂಕದ ಬ್ಯಾಟ್ಸ್ ಮನ್ ಮಾಯಾಂಕ್ ಅಗರ್‍ ವಾಲ್ ಅವರನ್ನು ಆಯ್ಕೆ ಮಾಡಿ ನಂ.3 ರಲ್ಲಿ ಆಡಿಸುತ್ತಿದೆ.

    ಧೋನಿ ಅವರನ್ನು 5 ನೇ ಕ್ರಮಾಂಕದಲ್ಲಿ ಆಡಿಸುತ್ತಿದ್ದೆ ಆಗ ಅವರಿಗೆ ಬ್ಯಾಟ್ ಬೀಸಲು ಹೆಚ್ಚಿನ ಸಮಯ ಸಿಗುತ್ತಿತ್ತು. ಇದರ ನಡುವೆ ಕೊಹ್ಲಿ ಮತ್ತು ಧೋನಿ ಒಟ್ಟಿಗೆ ಬ್ಯಾಟಿಂಗ್ ಮಾಡಬಹುದಿತ್ತು. ಆಗ ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಎಂಬ ಮೂರು ಪವರ್ ಹಿಟ್ಟರ್‍ ಗಳನ್ನು ನಾವು ಕೆಳ ಕ್ರಮಾಂಕದಲ್ಲಿ ಆಡಿಸಿ ಪಂದ್ಯವನ್ನು ಗೆಲ್ಲಬಹುದಿತ್ತು ಎಂದು ಹೇಳಿದ್ದಾರೆ.

    2007ರಿಂದ 2009ರ ವರೆಗೆ ಭಾರತದ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರಾಬಿನ್ ಸಿಂಗ್ ಭಾರತದ ಅಂಡರ್-19 ಎ ತಂಡಕ್ಕೂ ತರಬೇತುಗಾರನಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ.

    ಭಾರತ ತಂಡದ ಎಲ್ಲಾ ವಿಭಾಗದ ಕೋಚ್‍ಗಳಿಗೂ ಅರ್ಜಿ ಹಾಕಲು ಬಿಸಿಸಿಐ ಆಹ್ವಾನ ನೀಡಿದೆ. ಅದರಂತೆ ದಿಗ್ಗಜ ಆಟಗಾರರಾದ ಟಾಮ್ ಮೂಡಿ, ಮಹೇಲಾ ಜಯವರ್ಧನೆ ಮತ್ತು ಮೈಕ್ ಹೆಸ್ಸೆನ್‍ನಂತವರು ಅರ್ಜಿ ಹಾಕಿದ್ದು, ಬಿಸಿಸಿಐ ಯಾರನ್ನು ದೃಢೀಕರಣ ಪಡಿಸಿಲ್ಲ.

  • ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

    ನೀಶಮ್ ಸಿಕ್ಸರ್ ಹೊಡೆಯುತ್ತಿದ್ದಂತೆ ಮ್ಯಾಚ್ ವೀಕ್ಷಿಸುತ್ತಿದ್ದ ಬಾಲ್ಯದ ಕೋಚ್ ಸಾವು

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿಯ ಸೂಪರ್ ಓವರ್ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಕಿವೀಸ್ ಪರ ಪ್ರಮುಖ ಪಾತ್ರವಹಿಸಿದ ಆಲ್‍ರೌಂಡರ್ ಜಿಮ್ಮಿ ನೀಶಮ್ ಬಾಲ್ಯದ ಕೋಚ್ ಸೂಪರ್ ಓವರ್ ವೇಳೆಯೇ ಸಾವನ್ನಪ್ಪಿದ್ದರು. ಈ ಕುರಿತು ಅವರ ಪುತ್ರಿ ಮಾಹಿತಿ ನೀಡಿದ್ದಾರೆ.

    ಆಕ್ಲೆಂಡ್ ಗ್ರಾಮರ್ ಸ್ಕೂಲ್ ಮಾಜಿ ಶಿಕ್ಷಕರಾಗಿರುವ ಕೋಚ್ ಡೇವಿಡ್ ಜೇಮ್ಸ್ ಸಾವನ್ನಪ್ಪಿದ್ದು, ಮ್ಯಾಚ್ ಫಲಿತಾಂಶವನ್ನು ವೀಕ್ಷಿಸುತ್ತಿದ್ದ ಅವರು ನೀಶಮ್ ಬ್ಯಾಟಿಂಗ್‍ಗೆ ವೇಳೆ ಹೆಚ್ಚು ಉತ್ಸಾಹದಲ್ಲಿದ್ದರು. ಸೂಪರ್ ಓವರಿನ 2ನೇ ಎಸೆತದಲ್ಲಿ ನೀಶಮ್ ಸಿಕ್ಸರ್ ಸಿಡಿಸಿದ್ದರು. ಈ ಸಂದರ್ಭದಲ್ಲೇ ಜೇಮ್ಸ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೂಪರ್ ಓವರ್ ಆಡುತ್ತಿದ್ದ ಸಂದರ್ಭದಲ್ಲಿ ಅವರು ಸಾವನ್ನಪ್ಪಿದ ಮಾಹಿತಿ ನಮಗೆ ಲಭಿಸಿತ್ತು. ನಮ್ಮ ತಂದೆ ಹಾಸ್ಯ ಪ್ರಿಯರಾಗಿದ್ದು, ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಎಲ್ಲರೊಂದಿಗೂ ಪ್ರೀತಿಯಿಂದ ಬೇರೆಯುತ್ತಿದ್ದ ಅವರನ್ನು ಕಾಳೆದುಕೊಂಡಿದ್ದೇವೆ ಎಂದು ಕೋಚ್ ಪುತ್ರಿ ಲಿಯೋನಿ ಹೇಳಿದ್ದಾರೆ.

    ತಮ್ಮ ಬಾಲ್ಯದ ಕೋಚ್ ಮೃತಪಟ್ಟ ಕುರಿತು ನೀಶಮ್ ಕೂಡ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಡೇವಿಡ್ ಜೇಮ್ಸ್.. ನನ್ನ ಸ್ಕೂಲ್ ಟೀಚರ್, ಕೋಚ್, ಸ್ನೇಹಿತರು. ಕ್ರಿಕೆಟ್ ಎಂದರೆ ಅವರಿಗೆ ಇಷ್ಟ. ಅವರಿಂದ ಕೋಚಿಂಗ್ ಪಡೆದಿದ್ದು ನನ್ನ ಅದೃಷ್ಟವಾಗಿದ್ದು, ನಮ್ಮದೇ ರೀತಿಯಲ್ಲಿ ಬೆಳೆಯಲು ಅವಕಾಶ ನೀಡಿದ ಅವರಿಗೆ ಧನ್ಯವಾದ ಎಂದು ಸಂತಾಪ ಸೂಚಿಸಿದ್ದಾರೆ. ಆಕ್ಲೆಂಡ್ ಗ್ರಾಮರ್ ಸ್ಕೂಲಿನಲ್ಲಿ 25 ವರ್ಷ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಅವರು ಹಲವು ವಿದ್ಯಾರ್ಥಿಗಳಿಗೆ ಕ್ರಿಕೆಟ್ ಹಾಗೂ ಹಾಕಿ ಕೋಚಿಂಗ್ ನೀಡಿದ್ದರು. ನೀಶಮ್, ಫಾರ್ಗೂಸನ್ ಸೇರಿದಂತೆ ನ್ಯೂಜಿಲೆಂಡ್ ಪರ ಹಲವರು ಇವರ ಗರಡಿಯಲ್ಲೇ ಬೆಳೆದಿದ್ದಾರೆ.

  • ಮತ್ತೆ ಬ್ಲೂ ಜೆರ್ಸಿಯಲ್ಲಿ ಧೋನಿಯನ್ನ ನೋಡಲು ಪೋಷಕರೇ ಇಷ್ಟಪಡುತ್ತಿಲ್ಲ: ಬಾಲ್ಯದ ಕೋಚ್

    ಮತ್ತೆ ಬ್ಲೂ ಜೆರ್ಸಿಯಲ್ಲಿ ಧೋನಿಯನ್ನ ನೋಡಲು ಪೋಷಕರೇ ಇಷ್ಟಪಡುತ್ತಿಲ್ಲ: ಬಾಲ್ಯದ ಕೋಚ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ಬಾಲ್ಯದ ಕೋಚ್ ಕೇಶವ್ ಬ್ಯಾನರ್ಜಿ ಅವರು, ಧೋನಿ ಅವರ ಪೋಷಕರೇ ಆತನನ್ನು ಮತ್ತೆ ಬ್ಲೂ ಜೆರ್ಸಿಯಲ್ಲಿ ನೋಡಲು ಇಷ್ಟ ಪಡುವುದಿಲ್ಲ ಎಂದಿದ್ದಾರೆ.

    ವಿಶ್ವಕಪ್ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಧೋನಿ ನಿವೃತ್ತಿಯ ಬಗ್ಗೆ ಸಾಕಷ್ಟು ರೂಮರ್ ಗಳು ಹರಿದಾಡುತ್ತಿದೆ. ಆದರೆ ಬಿಸಿಸಿಐ ಅಧಿಕಾರಿಗಳು ಮಾತ್ರ ಧೋನಿ ಈ ಬಗ್ಗೆ ತಮ್ಮ ಬಳಿ ಯಾವುದೇ ಚರ್ಚೆ ನಡೆಸಿಲ್ಲ. ಈಗಲೂ ಧೋನಿ ಆಡುವ ಸಾಮಥ್ರ್ಯವನ್ನ ಹೊಂದಿದ್ದು, ಅವರು ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು.

    ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಶವ್ ಬ್ಯಾನರ್ಜಿ ಅವರು, ಧೋನಿಯ ಪೋಷಕರು ತಮ್ಮ ಬಳಿ ಮಾತನಾಡಿದ್ದಾರೆ. ದೇಶದ ಎಲ್ಲಾ ಮಾಧ್ಯಮಗಳು ಕೂಡ ಇದನ್ನೇ ಹೇಳುತ್ತಿವೆ. ಭಾನುವಾರಷ್ಟೇ ಅವರ ಮನೆಗೆ ಭೇಟಿ ನೀಡಿದ್ದೆ. ಅವರು ಕೂಡ ಧೋನಿ ನಿವೃತ್ತಿಗೆ ಇದು ಉತ್ತಮ ಸಮಯ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ಒಂದು ವರ್ಷದ ಹಿಂದೆಯೇ ಧೋನಿ ಪೋಷಕರು ಈ ಬಗ್ಗೆ ಅವರೊಂದಿಗೆ ಮಾತನಾಡಿದ್ದು, ನಿವೃತ್ತಿಯ ಸಮಯವನ್ನು ಒಂದು ವರ್ಷದ ಬಳಿಕ ನಿರ್ಧಾರ ಮಾಡಲು ಹೇಳಿದ್ದರು. ಆದರೆ ನಾನು ಅವರಲ್ಲಿ ಮನವಿ ಮಾಡಿದ್ದು, ಧೋನಿ 38 ವರ್ಷ ಆಗುವವರೆಗೂ ಆಟದಲ್ಲಿ ಮುಂದುವರಿಸಲು ಹೇಳಿದ್ದೇನೆ. 2020ರ ಟಿ20 ಟೂರ್ನಿಯ ಬಳಿಕ ಅವರು ತಮ್ಮ ನಿರ್ಧಾರವನ್ನ ಕೈಗೊಳ್ಳಬಹುದು ಎಂದಿದ್ದಾರೆ.

    ಇತ್ತ ವಿಶ್ವಕಪ್ ಬಳಿಕ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, 3 ಟಿ20, 3 ಏಕದಿನ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ. ಈ ಸರಣಿಯಲ್ಲಿ ಧೋನಿ ಭಾಗವಹಿಸುವುದಿಲ್ಲ ಎನ್ನಲಾಗಿದ್ದು, ಆದರೆ ವೆಸ್ಟ್ ಇಂಡೀಸ್ ಮಾತ್ರವಲ್ಲದೇ ಇತರ ಟೂರ್ನಿಗಳಲ್ಲೂ ಧೋನಿ ತಂಡದ ಜೊತೆ ಇರುವುದು ಬಹುತೇಕ ಅನುಮಾನ ಎನ್ನಲಾಗಿದೆ.

    ಧೋನಿ ಸ್ಥಾನವನ್ನು ಯುವ ಆಟಗಾರ ರಿಷಬ್ ಪಂತ್ ತುಂಬಲಿದ್ದು, ಮತ್ತೊಬ್ಬ ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಂಡದಲ್ಲಿದ್ದಾರೆ. ಆದರೆ ಧೋನಿ ಅವರನ್ನು ಮುಂದಿನ ಟೂರ್ನಿಗಳಿಗೆ ಆಯ್ಕೆ ಸಮಿತಿ ಪರಿಗಣಿಸುತ್ತಾ ಎಂಬ ಕುತೂಹಲವೂ ಅಭಿಮಾನಿಗಳಲ್ಲಿದೆ.

  • ಭಾರತದ ವಿರುದ್ಧ ಸೋಲು – ಆತ್ಮಹತ್ಯೆಗೆ ಚಿಂತಿಸಿದ್ದ ಪಾಕ್ ಕೋಚ್

    ಭಾರತದ ವಿರುದ್ಧ ಸೋಲು – ಆತ್ಮಹತ್ಯೆಗೆ ಚಿಂತಿಸಿದ್ದ ಪಾಕ್ ಕೋಚ್

    ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಅರ್ಥರ್ ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಸೋಲಿನ ಬಳಿಕ ಆತ್ಮಹತ್ಯೆಗೆ ಚಿಂತನೆ ನಡೆಸಿದ್ದೆ ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

    ಜೂನ್ 16 ರಂದು ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 89 ರನ್ ಗಳ ಜಯ ಪಡೆದಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧದ ತನ್ನ ಅಮೋಘ ಜಯದ ದಾಖಲೆಯನ್ನು ಮುಂದುವರಿಸಿತ್ತು. ಭಾರತ ವಿರುದ್ಧದ ಸೋಲು ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‍ಗೆ ಹೋಗುವ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಿರ್ಣಯಕ ಪಂದ್ಯದಲ್ಲಿ ಭಾನುವಾರ ಗೆಲುವು ಪಡೆಯುವ ಮೂಲಕ ತನ್ನ ಸೆಮಿ ಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

    ಪಂದ್ಯದ ಬಳಿಕ ಮಾತನಾಡಿರುವ ಮಿಕ್ಕಿ, ಕಳೆದ ಭಾನುವಾರ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದೆ. ಭಾರತ ವಿರುದ್ಧ ಪಂದ್ಯ ನಮಗೆ ಬಹಳ ಮುಖ್ಯವಾಗಿತ್ತು. ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ಮೇಲೆ ಸೋಲು ಸ್ವೀಕರಿಸುವುದು ಕಷ್ಟಸಾಧ್ಯವಾಗುತ್ತದೆ. ಜನರು ನಿರೀಕ್ಷೆ ಹಾಗೂ ಮಾಧ್ಯಮಗಳ ಒತ್ತಡದಿಂದ ಇಕ್ಕಟ್ಟಿಗೆ ಸಿಲುಕಿದ್ದೆ. ಈ ವೇಳೆ ಆತ್ಮಹತ್ಯೆ ಚಿಂತನೆ ಬಂದಿತ್ತು ಎಂದಿದ್ದಾರೆ.

    ಭಾರತದ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದ ವಿರುದ್ಧ ಕಟು ಟೀಕೆಗಳು ಕೇಳಿ ಬಂದಿದ್ದವು. ಸದ್ಯ ಮಿಕ್ಕಿ ಇಂದಿನ ಹೇಳಿಕೆಗಳಿಗೂ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೋಚ್‍ರ ಮಾತುಗಳು ಕೆಟ್ಟ ಅಭಿರುಚಿಯನ್ನು ತೋರುತ್ತದೆ ಎಂದಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿ ಫೈನಲ್ ಹಂತ ತಲುಪಬೇಕಾದರೆ ಉಳಿರುವ 3 ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಪಾಕ್ ರನ್ ರೇಟ್ ಕೂಡ ಇದರ ಮೇಲೆ ಪ್ರಾಮುಖ್ಯತೆ ಪಡೆದಿದೆ. ಪಾಕಿಸ್ತಾನ ತಂಡ ನಾಳಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

  • ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಕ್ರೀಡಾಂಗಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಎಸ್‌ಆರ್‌ಎಚ್ ಕೋಚ್ -ವಿಡಿಯೋ

    ಹೈದರಾಬಾದ್: ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ ಡೆಲ್ಲಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿತ್ತು. ಪಂದ್ಯದಲ್ಲಿ ತಂಡದ ಸೋಲುತ್ತಿದಂತೆ ತಂಡದ ಕೋಚ್ ಟಾಮ್ ಮೂಡಿ ಕ್ರೀಡಾಂಗಣದಲ್ಲೇ ದುಃಖದಿಂದ ಅತ್ತಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಬಳಗ ರಿಷಬ್ ಪಂತ್, ಪೃಥ್ವಿ ಶಾರ ಅಬ್ಬರ ಬ್ಯಾಟಿಂಗ್ ನಿಂದ 2 ವಿಕೆಟ್ ಅಂತರದಲ್ಲಿ ಗೆಲುವು ಪಡೆದಿತ್ತು. ಆ ಮೂಲಕ ಟೂರ್ನಿಯಲ್ಲಿ ತಮ್ಮ ಮುಂದಿನ ಜರ್ನಿಯನ್ನು ಜೀವಂತವಾಗಿರಿಸಿ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಿತು.

    2016ರ ಟೈಟಲ್ ಗೆದ್ದಿದ್ದ ಸನ್ ರೈಸರ್ಸ್ ಹೈದರಬಾದ್ ತಂಡ 2ನೇ ಬಾರಿಗೆ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದು, 2017ರಲ್ಲೂ ಪ್ಲೇ ಆಪ್ ಹಂತದಲ್ಲಿ ಚೆನ್ನೈ ವಿರುದ್ಧ ಸೋತು ತಂಡ ಟೂರ್ನಿಯಿಂದ ನಿರ್ಗಮಿಸಿತ್ತು. ಪಂದ್ಯ ಗೆದ್ದ ಸಂಭ್ರಮದಲ್ಲಿದ್ದ ಡೆಲ್ಲಿ ಆಟಗಾರರು ಕ್ರೀಡಾಂಗಣದಲ್ಲಿ ಸಂತಸದಿಂದ ಸಂಭ್ರಮಿಸುತ್ತಿದ್ದರೆ, ಇತ್ತ ಡಗೌಟ್ ನಲ್ಲಿ ಕುಳಿತ್ತಿದ್ದ ಟಾಮ್ ಮೂಡಿ ಮಾತ್ರ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದರು.

  • ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

    ಪಾಕಿಸ್ತಾನಕ್ಕೂ ಪ್ರೇರಣೆಯಾದ ರಾಹುಲ್ ದ್ರಾವಿಡ್!

    ಇಸ್ಲಾಮಾಬಾದ್: ಟೀಂ ಇಂಡಿಯಾ ಅಂಡರ್ 19 ಹಾಗೂ ಎ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರು ಪಾಕಿಸ್ತಾನದ ಕ್ರಿಕೆಟ್ ಮಂಡಳಿಗೂ ಪ್ರೇರಣೆಯಾಗಿದ್ದು, ಅವರ ಹಾದಿಯಲ್ಲೇ ಪಿಸಿಬಿ ಕೂಡ ನಡೆಯಲು ನಿರ್ಧರಿಸಿದೆ.

    ದ್ರಾವಿಡ್ ಯುವ ತಂಡದ ಆಟಗಾರರಿಗೆ ಕೇವಲ ಕೋಚ್ ಆಗಿ ಮಾತ್ರವಲ್ಲದೇ ಜೀವನದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವ ಆಟಗಾರರು ಕ್ರಿಕೆಟ್ ಹೊರತುಪಡಿಸಿ ಇತರೇ ಕ್ಷೇತ್ರಗಳ ಕೌಶಲ್ಯಗಳಲ್ಲಿ ಪರಿಣಿತಿ ಪಡೆಯಬೇಕು ಎಂದು ದ್ರಾವಿಡ್ ಮನವಿ ಮಾಡಿದ್ದರು.

    ಒಬ್ಬ ರಾಷ್ಟ್ರೀಯ ತಂಡದ ಹಿರಿಯ ಆಟಗಾರ ತಂಡದ ಕೋಚ್ ಆದರೆ ಹೇಗೆ ಯುವ ಆಟಗಾರರಿಗೆ ಪ್ರೇರಣೆ ಆಗಬಲ್ಲರು ಎಂದು ಪಿಸಿಬಿಗೆ ರಾಹುಲ್ ಸಾಕ್ಷಿಯಾಗಿದ್ದಾರೆ. ರಾಹುಲ್ ಅವರ ಗರಡಿಯಲ್ಲಿ ಪಳಗಿದ ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಮಯಾಂಕ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲದೇ ಅಂಡರ್ 19 ವಿಶ್ವಕಪ್ ಟೂರ್ನಿಯನ್ನು ಪೃಥ್ವಿ ಶಾ ನಾಯಕತ್ವ ತಂಡ ಗೆದ್ದು ಬಂದಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

    ಸದ್ಯದ ಒಂದು ವರದಿಯ ಪ್ರಕಾರ ಪಿಸಿಬಿ ಕೂಡ ರಾಹುಲ್ ಅವರ ಪ್ರೇರಣೆಯಂತೆ ತಮ್ಮ ಅಂಡರ್ 19 ತಂಡಗಳಿಗೆ ಯೂನಿಸ್ ಖಾನ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಲು ತೀರ್ಮಾನಿಸಿದೆ. ಈ ಬಗ್ಗೆ ಪಿಸಿಬಿ ಅಧ್ಯಕ್ಷ ಈಶನ್ ಮನಿ ಪ್ರತಿಕ್ರಿಯೆ ಕೂಡ ನೀಡಿದ್ದು, ಅಂಡರ್ 19 ತಂಡದ ಕೋಚ್ ಆಗಿ ಭಾರತದಲ್ಲಿ ರಾಹುಲ್ ದ್ರಾವಿಡ್ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.

    ವಿದೇಶಿ ಕೋಚ್‍ಗಳಿಗೆ ಹೆಚ್ಚಿನ ಅವಕಾಶವನ್ನು ನೀಡುವ ಬದಲು ದೇಶದ ಸ್ವತಃ ಕೋಚ್‍ಗಳಿಗೆ ಭಾರತ ನೀಡುತ್ತಿರುವ ಅವಕಾಶದಂತೆ ನಮ್ಮಲ್ಲೂ ಪ್ರಾಮುಖ್ಯತೆ ನೀಡಲು ಚಿಂತನೆ ನಡೆದಿದೆ. ತಂಡದ ಆಟಗಾರರು ದೇಶದ ರಾಯಭಾರಿಗಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಸಿಬಿ ಮೊಹಮ್ಮದ್ ಯೂಸುಫ್ ರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಕೂಡ ನಿರ್ಧರಿಸಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮ್ಮು ಕಾಶ್ಮೀರದ ಮಾಜಿ ಆಟಗಾರ ಆರ್‌ಸಿಬಿಯ ಸಹಾಯಕ ಕೋಚ್

    ಜಮ್ಮು ಕಾಶ್ಮೀರದ ಮಾಜಿ ಆಟಗಾರ ಆರ್‌ಸಿಬಿಯ ಸಹಾಯಕ ಕೋಚ್

    ಬೆಂಗಳೂರು: 2019 ಐಪಿಎಲ್ ಆವೃತ್ತಿಗೆ ಭರ್ಜರಿ ಸಿದ್ಧತೆಯಲ್ಲಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸಹಾಯಕ ಕೋಚ್ ಆಗಿ ಜಮ್ಮು ಕಾಶ್ಮೀರದ ಮಾಜಿ ಆಟಗಾರ ಮಿಥುನ್ ಮನ್ಹಾಸ್ ಆಯ್ಕೆ ಆಗಿದ್ದಾರೆ.

    ಈ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪಡೆ ಇದ್ದು, ತಂಡದ ಫ್ರಾಂಚೈಸಿಗಳು ತಂಡದ ಬೆಂಬಲಕ್ಕೆ ಇರುವ ಸಿಬ್ಬಂದಿಯನ್ನು ಕೂಡ ಈ ಬಾರಿ ಬದಲಾವಣೆ ಮಾಡಿ ಹೊಸ ಹುರುಪಿನೊಂದಿಗೆ ಕಣಕ್ಕೆ ಇಳಿಯಲು ಸಿದ್ಧತೆ ನಡೆಸಿವೆ. ಇದರ ಭಾಗವಾಗಿಯೇ ತಂಡದ ಮುಖ್ಯ ಕೋಚ್ ಆಗಿ ಗ್ಯಾರಿ ಕಸ್ರ್ಟನ್, ಬೌಲಿಂಗ್ ಕೋಚ್ ಆಗಿ ಆಶಿಶ್ ನೆಹ್ರಾರನ್ನು ನೇಮಕ ಮಾಡಲಾಗಿತ್ತು.

    ಸದ್ಯ ಸಹಾಯಕ ಕೋಚ್ ಆಗಿ ಆಯ್ಕೆ ಆಗಿರುವ ಮಿಥುನ್ ಅವರು ಜಮ್ಮು ಕಾಶ್ಮೀರದ ಆಟಗಾರರಾಗಿದ್ದು, ದೆಹಲಿ ತಂಡದ ಪರ ನಾಯಕತ್ವವನ್ನು ಕೂಡ ವಹಿಸಿದ್ದರು. 7 ಐಪಿಎಲ್ ಆವೃತ್ತಿಗಳಲ್ಲಿ ವಿವಿಧ ತಂಡಗಳ ಆಡಿರುವ ಮಿಥುನ್ ಅವರು, ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಸಹಾಯಕ ಕೋಚ್ ಆಗಿದ್ದರು. ಅಲ್ಲದೇ ಬಾಂಗ್ಲಾದೇಶದ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಅಂದಹಾಗೇ ಮಿಥುನ್ ಅವರು ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ 4ನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಈ ಕುರಿತು ಸಂತಸ ವ್ಯಕ್ತಪಡಿಸಿರುವ ಮಿಥುನ್, ಗ್ಯಾರಿ ಕಸ್ರ್ಟನ್ ಹಾಗೂ ದೆಹಲಿ ತಂಡದ ಒಟ್ಟಿಗೆ ಆಡಿದ್ದ ಸ್ನೇಹಿತ ಆಶಿಶ್ ನೆಹ್ರಾ ಅವರೊಂದಿಗೆ ಕಾರ್ಯ ನಿರ್ವಹಿಸಲು ಉತ್ಸುಕನಾಗಿದ್ದು, ಟ್ರೋಫಿ ಗೆಲ್ಲುವತ್ತ ಹೆಚ್ಚಿನ ಗಮನಹರಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲ್ ಹಿಡ್ಕೊಂಡ್ರೆ ನಿವೃತ್ತಿ ಅಂತಾರೆ : ಹಾಸ್ಯ ಚಟಾಕಿ ಹಾರಿಸಿ ಧೋನಿ ಟಾಂಗ್ – ವಿಡಿಯೋ

    ಬಾಲ್ ಹಿಡ್ಕೊಂಡ್ರೆ ನಿವೃತ್ತಿ ಅಂತಾರೆ : ಹಾಸ್ಯ ಚಟಾಕಿ ಹಾರಿಸಿ ಧೋನಿ ಟಾಂಗ್ – ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಉತ್ತರಿಸಿದ್ದ ಧೋನಿ ಪಂದ್ಯದ ಬಳಿಕವೂ ಹಾಸ್ಯ ಚಟಾಕಿ ಹಾರಿಸಿ ಟೀಕಕಾರರಿಗೆ ಟಾಂಗ್ ಕೊಟ್ಟಿರುವ ಘಟನೆ ನಡೆದಿದೆ.

    ಆಸೀಸ್ ವಿರುದ್ಧ 3ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಗೆದ್ದು ದಾಖಲೆ ನಿರ್ಮಿಸಿದ್ದ ಟೀಂ ಇಂಡಿಯಾ ಆಟಗಾರರು ಪಂದ್ಯದ ಬಳಿಕ ಸಂಭ್ರಮದಲ್ಲಿ ತೊಡಗಿದ್ದರು. ಈ ವೇಳೆ ಎಲ್ಲಾ ಆಟಗಾರರು, ಸಿಬ್ಬಂದಿಗೂ ಶುಭಾಶಯ ತಿಳಿಸುತ್ತಿದ್ದ 38 ವರ್ಷದ ಧೋನಿ ತಂಡದ ಬ್ಯಾಟಿಂಗ್ ಕೋಚ್ ಬಂದ ಕೂಡಲೇ ತಮ್ಮ ಕೈಯಲ್ಲಿದ್ದ ಚೆಂಡನ್ನು ಕೋಚ್‍ಗೆ ನೀಡಿದರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ‘ಬಾಲ್ ತೆಗೆದುಕೊಳ್ಳಿ, ಇಲ್ಲಂದ್ರೆ ನಿವೃತ್ತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ’ ಎಂದು ಕೋಚ್ ಸಂಜಯ್ ಬಂಗರ್ ಅವರಿಗೆ ಹಾಸ್ಯ ಚಟಾಕಿ ಹಾರಿಸಿರುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿದೆ.

    ಪಂದ್ಯದ ಬಳಿಕ ಮಾತನಾಡಿದ ಧೋನಿ, ನಾನು ಯಾವ ಕ್ರಮಾಂಕದಲ್ಲಿ ಆಡಬೇಕು ಎನ್ನುವುದು ಸಮಸ್ಯೆ ಅಲ್ಲ. 14 ವರ್ಷಗಳು ತಂಡದ ಪರ ಆಡಿದ ಬಳಿಕ ನಾನು 6ನೇ ಕ್ರಮಾಂಕ ಬೇಡ ಎಂದು ಹೇಳಲು ಸಾಧ್ಯವಿಲ್ಲ. ನಾನು ಯಾವುದೇ ಕ್ರಮಾಂಕ ಆದರೂ ಆಡಲು ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ರವಿಶಾಸ್ತ್ರಿ

    ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ರವಿಶಾಸ್ತ್ರಿ

    ಸಿಡ್ನಿ: ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಪಡೆದು ದಾಖಲೆ ನಿರ್ಮಿಸಿದ ಕೆಲವೇ ಕ್ಷಣಗಳಲ್ಲಿ ತಂಡದ ಕೋಚ್ ರವಿಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

    ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರವಿಶಾಸ್ತ್ರಿ, ನನಗೆ ಈ ಟೆಸ್ಟ್ ಸರಣಿಯ ಗೆಲುವು ಎಷ್ಟು ಸಮಾಧಾನ ತಂದಿದೆ ಎಂದರೆ, 1983 ವಿಶ್ವಕಪ್ ಮತ್ತು 1985ರ ವಿಶ್ವ ಚಾಂಪಿಯನ್‍ಶಿಪ್ ಗೆಲುವಿಗಿಂತ ದೊಡ್ಡದು. ಏಕೆಂದರೆ ಇದು ಕ್ರಿಕೆಟ್‍ನ ಟೆಸ್ಟ್ ಮಾದರಿಯಲ್ಲಿ ಪಡೆದ ಗೆಲುವಾಗಿದೆ ಎಂದು ಹೇಳಿದ್ದಾರೆ.

    ರವಿಶಾಸ್ತ್ರಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಅವರ ಹೇಳಿಕೆ ಟೆಸ್ಟ್ ಕ್ರಿಕೆಟ್ ಸಂಬಂಧಿಸಿದ್ದು, 1983 ಮತ್ತು 1985 ರ ಗೆಲುವು ಸಿಮೀತ ಓವರ್ ಗಳ ಟೂರ್ನಿಗಳ ಭಾಗವಾಗಿದ್ದು, ಅವರಿಗೆ ಆಸೀಸ್ ಟೆಸ್ಟ್ ಸರಣಿ ಬಹುದೊಡ್ಡ ಗೆಲುವಾಗಿದೆ. ಏಕೆಂದರೆ ಈ ಹಿಂದಿನ ಗೆಲುವುಗಳು ಕ್ರಿಕೆಟ್ 50 ಓವರ್ ಗಳ ಮಾದರಿಯಲ್ಲಿ ಲಭಿಸಿತ್ತು. ಆದರೆ ಟೆಸ್ಟ್ ಮಾದರಿಯಲ್ಲಿ ಈ ಗೆಲುವು ತಂಡದ ಕೋಚ್ ಆಗಿರುವ ಅವರಿಗೆ ಹೆಚ್ಚು ಸಂತಸ ತಂದಿದೆ. ಆದ್ದರಿಂದಲೇ ರವಿಶಾಸ್ತ್ರಿ ಈ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ತಮ್ಮ ಹೇಳಿಕೆ ವೇಳೆ ಕ್ರಿಕೆಟ್ ದೇವರ ಹೆಸರನ್ನು ಪ್ರಸ್ತಾಪ ಮಾಡಿರುವ ಕೋಚ್ ರವಿಶಾಸ್ತ್ರಿ, ಈ ತಂಡ ದೇವರು, ದೇವಾಂಶ ಸಂಭೂತರು, ಹಿರಿಯ, ಕಿರಿಯ ಆಟಗಾರರು ಎಂಬ ಬೇದ ಇರುವ ತಂಡವಲ್ಲ. ದೇಶಕ್ಕಾಗಿ ಆಡುವ ಯುವ ಆಟಗಾರರ ತಂಡವಾಗಿದೆ ಎಂದು ಪರೋಕ್ಷವಾಗಿ ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಟಾಂಗ್ ನೀಡಿದ್ದಾರೆ.

    ರವಿಶಾಸ್ತ್ರಿ ಅವರ ಹೇಳಿಕೆಗೆ ಕೆಲ ವಿಶ್ಲೇಷಕರು ಸಾಥ್ ನೀಡಿ ಸ್ಪಷ್ಟನೆ ನೀಡಿದ್ದರೆ, ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv