Tag: cm bsyeddyurappa

  • ಬಜೆಟ್‍ನಲ್ಲಿ ಮಹದಾಯಿಗೆ ಹಣ ಬಿಡುಗಡೆ: ಬಿಎಸ್‍ವೈ ಭರವಸೆ

    ಬಜೆಟ್‍ನಲ್ಲಿ ಮಹದಾಯಿಗೆ ಹಣ ಬಿಡುಗಡೆ: ಬಿಎಸ್‍ವೈ ಭರವಸೆ

    ಬೆಂಗಳೂರು: ಕೇಂದ್ರ ಸರ್ಕಾರದಿಂದ ಮಹದಾಯಿ ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಫುಲ್ ಆಕ್ಟೀವ್ ಆಗಿದೆ. ಯೋಜನೆಗೆ ಅಗತ್ಯವಾದ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಲು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಲ್ಲದೆ ಯೋಜನೆಗಾಗಿ ಈ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡೋದಾಗಿ ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

    ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಪ್ರಧಾನಿ ಮೋದಿ, ಅಮಿತ್ ಶಾ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಬಹಳ ವರ್ಷಗಳ ಬೇಡಿಕೆ ಈಡೇರಿಕೆ ಆಗಿದೆ. ಈ ಅಧಿಸೂಚನೆಯಿಂದ ಆ ಭಾಗದ ಜನರಿಗೆ ಕುಡಿಯುವ ನೀರು ಮತ್ತು ನೀರಾವರಿಗೆ ಅನುಕೂಲ ಆಗುತ್ತೆ ಅಂತ ತಿಳಿಸಿದರು. ಅಧಿಸೂಚನೆ ಹೊರಡಿಸಿರೋದರಿಂದ 13.5. ಟಿಎಂಸಿ ನೀರು ನಮಗೆ ಸಿಗುತ್ತೆ. ಈ ನೀರಿನಿಂದ ಆ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗುತ್ತೆ ಅಂತ ತಿಳಿಸಿದರು.

    ಮಹದಾಯಿಗಾಗಿ ಅನೇಕ ವರ್ಷಗಳು ಹೋರಾಟದ ಆಯ್ತು. ಹೋರಾಟದ ಫಲವಾಗಿ ಈ ಅಧಿಸೂಚನೆ ಆಗಿದೆ. ಮೋದಿ ಮತ್ತು ಅಮಿತ್ ಶಾ ಹೆಚ್ಚಿನ ಆಸಕ್ತಿಯಿಂದ ನೀರಾವರಿ ಸಚಿವರ ಮೇಲೆ ಒತ್ತಡ ತಂದು ಅಧಿಸೂಚನೆ ಹೊರಡಿಸಿದ್ದಾರೆ. ಈ ಬಜೆಟ್ ನಲ್ಲಿ ಹೆಚ್ಚು ಹಣ ನೀಡುತ್ತೇನೆ. ಆದಷ್ಟು ಬೇಗ ಕೆಲಸ ಪ್ರಾರಂಭ ಮಾಡ್ತೀನಿ ಅಂತ ಆ ಭಾಗದ ಜನರಿಗೆ ನಾನು ಭರವಸೆ ಕೊಡ್ತೀನಿ ಅಂತ ತಿಳಿಸಿದರು.

    ಕೇಂದ್ರಕ್ಕೆ ಜೋಷಿ ಅಭಿನಂದನೆ:
    ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಸಿಎಂ ಯಡಿಯೂರಪ್ಪರನ್ನ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಜೋಷಿ, ಗುರುವಾರ ರಾತ್ರಿ ಕೇಂದ್ರ ಸರ್ಕಾರ ಮಹದಾಯಿ ಅಧಿಸೂಚನೆ ಹೊರಡಿಸಿದೆ. ಸುಪ್ರೀಂಕೋರ್ಟ್ ತೀರ್ಪು ಬಂದ ಒಂದೇ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಹೊರಡಿಸಲು ನಾವು ಕೆಲಸ ಮಾಡಿದ್ವಿ ಅಂತ ತಿಳಿಸಿದ್ರು. ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟಿನಲ್ಲಿ ಉತ್ತಮವಾಗಿ ವಾದ ಮಾಡಿತ್ತು. ಕರ್ನಾಟಕ ಸರ್ಕಾರ ಮತ್ತು ಪ್ರಧಾನಿ ಮೋದಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‍ಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದರು.

  • ಸಿಎಂ ಭೇಟಿಯಾಗಿ ಬೇಡಿಕೆಗಳನ್ನು ಮುಂದಿಟ್ಟ ನೂತನ ಶಾಸಕರು

    ಸಿಎಂ ಭೇಟಿಯಾಗಿ ಬೇಡಿಕೆಗಳನ್ನು ಮುಂದಿಟ್ಟ ನೂತನ ಶಾಸಕರು

    – 17 ಮಂದಿಯೂ ಒಟ್ಟಿಗಿದ್ದೇವೆ ಅಂದ್ರು ಎಸ್‍ಟಿಎಸ್

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಬೆಳಗ್ಗೆ ಉಪಚುನಾವಣೆಯಲ್ಲಿ ಗೆದ್ದ ಶಾಸಕರು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.

    ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಉಳಿದ ಶಾಸಕರಾದ ಎಸ್ ಟಿ ಸೋಮಶೇಖರ್, ಡಾ.ಕೆ.ಸುಧಾಕರ್, ಬಿ ಸಿ ಪಾಟೀಲ್, ಮಹೇಶ್ ಕುಮಟಳ್ಳಿ, ಬೈರತಿ ಬಸವರಾಜು, ಗೋಪಾಲಯ್ಯ ಭೇಟಿ ಕೊಟ್ಟಿದ್ದಾರೆ. ಇವರ ಜೊತೆ ಪರಾಜಿತ ಅಭ್ಯರ್ಥಿ ಎಚ್ ವಿಶ್ವನಾಥ್, ಅನರ್ಹ ಶಾಸಕರಾದ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್ ಸಹ ಆಗಮಿಸಿದರು.

    ಹುಣಸೂರು ಉಪಚುನಾವಣೆ ಸೋಲಿನ ಬಳಿಕ ಮೊದಲ ಬಾರಿಗೆ ಎಚ್ ವಿಶ್ವನಾಥ್ ಸಿಎಂ ಅವರನ್ನು ಭೇಟಿ ಮಾಡಿದರು. ಜೆಡಿಎಸ್ ಉಚ್ಛಾಟಿತ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಿಎಂ ನಿವಾಸಕ್ಕೆ ಬಂದರು. ಇದೇ ಸಂದರ್ಭದಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಮುಖ್ಯಮಂತ್ರಿಗಳಿಗೆ ನೂತನ ಶಾಸಕರು ಅಭಿನಂದಿಸಿ ಸನ್ಮಾನಿಸಿದರು. ಇದೇ ವೇಳೆ ಮಂಗಳವಾರದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಸಿಎಂಗೆ ರಮೇಶ್ ಜಾರಕಿಹೊಳಿ ತಿಳಿಸಿದರು.

    ಗೆದ್ದವರ ಬೇಡಿಕೆಗಳೇನು?
    ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಮತ್ತು ಪ್ರಮುಖ ಖಾತೆಗಳು ಕೊಡಬೇಕು. ಹಾಗೆಯೇ ಸೋತವರಿಗೂ ಸಚಿವ ಸ್ಥಾನ ಅಥವಾ ಸೂಕ್ತ ಸ್ಥಾನಮಾನ ನೀಡಬೇಕು. ಮುನಿರತ್ನ ಮತ್ತು ಪ್ರತಾಪ್ ಗೌಡ ಪಾಟೀಲ್ ವಿರುದ್ಧ ದೂರುಗಳನ್ನು ವಾಪಸ್ ಪಡೆಯಬೇಕು. ಅಲ್ಲದೆ ಅವರಿಬ್ಬರ ಕ್ಷೇತ್ರಗಳಿಗೆ ಬೇಗ ಚುನಾವಣೆ ಆಗುವಂತೆ ನೋಡಿಕೊಳ್ಳಬೇಕು. ಜೊತೆಗೆ ಅವರಿಬ್ಬರಿಗೂ ಎರಡು ಸಚಿವ ಸ್ಥಾನಗಳನ್ನು ಕಾಯ್ದಿರಿಸಬೇಕು. ಹೀಗೆ ಹಲವು ಬೇಡಿಕೆಗಳನ್ನು ನೂತನ ಶಾಸಕರು ಸಿಎಂ ಎದುರು ಇಟ್ಟಿದ್ದಾರೆ. ಸುಮಾರು ಒಂದು ಗಂಟೆ ಕಾಲದ ಚರ್ಚೆಯ ಬಳಿಕ ಸಿಎಂ ಜೊತೆ ಮಾತುಕತೆ ಮುಗಿಸಿ ಶಾಸಕರು ಹೊರಟಿದ್ದಾರೆ.

    ಸಿಎಂ ಜೊತೆಗಿನ ಸಭೆ ನಂತರ ಮಾತನಾಡಿದ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್, ಸಚಿವ ಸ್ಥಾನ ಮತ್ತು ಖಾತೆಗಳ ವಿಚಾರದಲ್ಲಿ ಬಿಜೆಪಿ ಶಾಸಕರ ಜೊತೆ ನಾವು ಯಾವುದೇ ರೀತಿಯ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ ಅಮಿತ್ ಶಾ ಭೇಟಿ ಮಾಡಬೇಕಿದೆ ಆದರೆ ಲೋಕಸಭೆ ಕಲಾಪ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಸಾಧ್ಯವಿಲ್ಲ. ಅಧಿವೇಶನ ಮುಗಿದ ನಂತರ ಭೇಟಿ ಮಾಡಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದರು.

    ಮುನಿರತ್ನ ಅವರ ಆರ್.ಆರ್.ನಗರ ಮತ್ತು ಮಸ್ಕಿ ಕ್ಷೇತ್ರಗಳ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದೇವೆ. ಆದರೆ ಸಚಿವ ಸಂಪುಟದ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಎಲ್ಲರೂ ಸೇರಿ ಮುಖ್ಯಮಂತ್ರಿಗಳ ಜೊತೆ ಉಪಹಾರಕ್ಕೆ ಬಂದಿದ್ದೇವೆ. ಜೊತೆಗೆ ನಮ್ಮ ಪರ ಅವಿರತ ಪ್ರಚಾರ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದೇವೆ ಎಂದರು.

    ಸೋತವರನ್ನು ಏನು ಮಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆದರೆ ಅವರನ್ನು ಕೂಡ ಜೊತೆಗೆ ಸೇರಿಸಿಕೊಂಡು ಹೋಗುತ್ತೇವೆ. ನಾವು ಎಲ್ಲರೂ ಒಟ್ಟಿಗೆ ಇದ್ದೇವೆ. ಯಾರನ್ನು ಕೂಡ ಬಿಡುವ ಪ್ರಶ್ನೆಯೇ ಇಲ್ಲ 17 ಜನ ಒಟ್ಟಿಗೆ ಇದ್ದೇವೆ. ನಿಮ್ಮ ಸಹಕಾರಕ್ಕೆ ನಾವಿದ್ದೇವೆ. ನಮ್ಮ ಸರಕಾರಕ್ಕೆ ನೀವು ಇರಬೇಕು ಎಂದು ಮುಖ್ಯಮಂತ್ರಿಗಳಿಗೆ ಹೇಳಿದ್ದೇವೆ ಎಂದು ಸೋಮಶೇಖರ್ ತಿಳಿಸಿದರು.