ಮೈಸೂರು: ಮೈಸೂರು ಜಿಲ್ಲೆಯ ಕಬಿನಿ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಇದರಿಂದ ನಾಡಿನ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಕಬಿನಿಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸುವುದು ವಿಶೇಷ. ಅಂತರರಾಜ್ಯ ನೀರಿನ ವಿಚಾರ ಇದೆ. ನೀರು ತುಂಬಿರುವುದರಿಂದ ತಮಿಳುನಾಡಿಗೂ ನೀರು ಕೊಡಬಹುದು, ನಾಲೆಗಳಿಗೂ ನೀರು ಹರಿಸಬಹುದು ಎಂದರು. ಇದನ್ನೂ ಓದಿ: ಮೊದಲೇ ಪೈಪೋಟಿ ನಿರೀಕ್ಷಿಸಿದ್ದೆವು, ಫಲಿತಾಂಶಕ್ಕೆ ಸಮಯವಿದೆ: ಬೊಮ್ಮಾಯಿ
ಕಳೆದ ವರ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಕಬಿನಿ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಬಂದಿದ್ದೆ. ನಾನು ಮುಖ್ಯಮಂತ್ರಿಯಾದ ನಂತರ ಅಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೀನಿ. ಈಗ ಕಾವೇರಿ ಜಲಾನಯನ ಪ್ರದೇಶದ ಎರಡು ಜಲಾಶಯಗಳಿಗೆ ಬಾಗಿನ ಸಲ್ಲಿಸುತ್ತಿದ್ದೇನೆ ಎಂದರು. ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆ – ಕಾಂಗ್ರೆಸ್ ಮುನ್ನಡೆ
ಕಬಿನಿ ಜಲಾಶಯದ ಕೆಳಭಾಗದಲ್ಲಿ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣವನ್ನು ಪಿ.ಪಿ.ಪಿ. ಮಾದರಿಯಲ್ಲಿ ಕೈಗೊಳ್ಳಲು ಪ್ರಸ್ತಾವನೆ ಬಂದಿದೆ. ಸರ್ಕಾರದಿಂದ ನೇರವಾಗಿಯೂ ಮಾಡಬೇಕು ಎಂಬ ವಿಚಾರವೂ ಇದೆ. ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕಬಿನಿ ಜಲಾಶಯದಲ್ಲಿ ಕೆಳಭಾಗದಲ್ಲಿ ಪ್ರವಾಹ ಬಂದಾಗ ನೀರು ನುಗ್ಗುವ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. ಇದಕ್ಕೆ ಅವರ ಸಹಕಾರವೂ ಬೇಕು ಎಂದು ಹೇಳಿದರು.
ಇದೇ ವೇಳೆ ಪುನಿತ್ ರಾಜ್ಕುಮಾರ್ ಅವರಿಗೆ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪುನಿತ್ ರಾಜ್ಕುಮಾರ್ ಅವರ ಬಗ್ಗೆ ತಮಗೆ ಅಪಾರ ಗೌರವ ಪ್ರೀತಿ ಇದೆ. ಈ ವಿಚಾರವನ್ನು ಸರ್ವಾನುಮತದಿಂದ ಎಲ್ಲರೂ ಒಪ್ಪುತ್ತಾರೆ. ಶಿಫಾರಸ್ಸು ಮಾಡಲು ಅದಕ್ಕೊಂದು ಪದ್ಧತಿ ಇದೆ. ಸರ್ಕಾರ ಎಲ್ಲವನ್ನು ಯೋಚನೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು: ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
ನವದೆಹಲಿ: ಇಂದು ಕನ್ನಡಿಗರಿಗೆ 66 ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ಕನ್ನಡದಲ್ಲಿ ಸಂದೇಶ ಕಳುಹಿಸುವ ಮೂಲಕ ಕನ್ನಡಿಗರಿಗೆ ಶುಭಕೋರಿದ್ದಾರೆ.
ಮೋದಿ ಟ್ವಿಟ್ಟರ್ ನಲ್ಲಿ, ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಶುಭ ಹಾರೈಕೆಗಳು. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕøಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ ಎಂದು ಹಾರೈಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಸ್ಮರಣಾರ್ಥ – ಅಭಿಮಾನಿಗಳಿಗಾಗಿ ಥಿಯೇಟರ್ಗೆ ಬಂದ `ರಾಜಕುಮಾರ’
#ಕರ್ನಾಟಕರಾಜ್ಯೋತ್ಸವ ಶುಭ ಸಂದರ್ಭದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಶುಭಕೋರಿ, ಕರ್ನಾಟಕದ ಉನ್ನತಿಯ ತುಡಿತವನ್ನು ಶ್ಲಾಘಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಕರ್ನಾಟಕವು ಅಭಿವೃದ್ಧಿಯ ಪಥದಲ್ಲಿ ಶರವೇಗದಲ್ಲಿ ಸಾಗಲಿದೆ; ಎಂದು ವಾಗ್ದಾನ ಮಾಡುತ್ತೇನೆ.@narendramodihttps://t.co/phIOQbTt7p
ಈ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಶುಭಕೋರಿ, ಕರ್ನಾಟಕದ ಉನ್ನತಿಯ ತುಡಿತವನ್ನು ಶ್ಲಾಘಿಸಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ಕರ್ನಾಟಕವು ಅಭಿವೃದ್ಧಿಯ ಪಥದಲ್ಲಿ ಶರವೇಗದಲ್ಲಿ ಸಾಗಲಿದೆ, ಎಂದು ವಾಗ್ದಾನ ಮಾಡುತ್ತೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಇಂದು ಕನ್ನಡಿಗರಿಗೆ ಶುಭದಿನ. ಎಲ್ಲರೂ ಸಂಭ್ರಮದಲ್ಲಿ ಇರುವಂತಹ ದಿನ. ಆದರೆ ಕೋವಿಡ್ ಕಾರಣದಿಂದ ಅದ್ದೂರಿ ಆಚರಣೆಗೆ ಸ್ವಲ್ಪ ಕಡಿವಣವಿದ್ದು, ಈ ಹಿನ್ನೆಲೆ ಸರಳವಾಗಿ ರಾಜ್ಯೋತ್ಸವನ್ನು ಆಚರಿಸಲು ಸೂಚನೆಯನ್ನು ನೀಡಲಾಗಿದೆ.
ಮಂಡ್ಯ: ಕಳೆದ ಹದಿನೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಬೀಳುತ್ತಿರುವ ಹಿನ್ನೆಲೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಿದೆ.
ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದ ಕಾರಣ ಕೆಆರ್ಎಸ್ ಜಲಾಶಯ ಭರ್ತಿಯಾಗುವುದು ಡೌಟ್ ಎಂದು ಹೇಳಲಾಗುತ್ತಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರಿಂದ ಇಂದು ಕೆಆರ್ಎಸ್ ಸಂಪೂರ್ಣವಾಗಿ ಭರ್ತಿಯಾಗಿದೆ. 11 ವರ್ಷದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಬೀಳದ ಕಾರಣವಾಗಿ ಇಂದು ಭರ್ತಿಯಾಗಿದೆ. 2009ರಲ್ಲಿ ಅಕ್ಟೋಬರ್ 28 ರಂದು ಭರ್ತಿಯಾಗಿತ್ತು. ಇದನ್ನೂ ಓದಿ: ಅವಳಿ ಮಕ್ಕಳಿಗೆ ತಂದೆಯಾದ ದಿನೇಶ್ ಕಾರ್ತಿಕ್
ಈ ಬಾರಿ ಕೆಆರ್ಎಸ್ ಭರ್ತಿಯಾಗುವುದಿಲ್ಲ ಎಂಬ ಆತಂಕ ಇದ್ದ ಕಾರಣ ಅಕ್ಟೋಬರ್ 7 ರಂದು ಜ್ಯೋತಿಷಿ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಕೆಆರ್ಎಸ್ ಡ್ಯಾಂ ಬಳಿ ಹೋಮ ಹಾಗೂ ವಿಶೇಷ ಪೂಜೆಯಲ್ಲಿ ಮಾಡಲಾಗಿತ್ತು. ಈ ಹೋಮ ಹಾಗೂ ಪೂಜೆಯಲ್ಲಿ ಸಿಎಂ ಬಸವರಾಜ ಬೊಮ್ಮಯಿ ಅವರು ತಮ್ಮ ಕುಟುಂಬ ಸಮೇತ ಭಾಗಿಯಾಗಿದ್ದರು. ಇದಾದ ಬಳಿಕ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಇಂದು ಕೆಆರ್ಎಸ್ ಸಂಪೂರ್ಣ ಭರ್ತಿಯಾಗಿದೆ. ಕೆಆರ್ಎಸ್ ಭರ್ತಿಯಾಗಿರುವ ಹಿನ್ನೆಲೆ ಬಸವರಾಜ ಬೊಮ್ಮಯಿ ಅವರು ಕೆಲವೇ ದಿನಗಳಲ್ಲಿ ಬಾಗಿನ ಅರ್ಪಿಸಲು ಕೆಆರ್ಎಸ್ಗೆ ಆಗಮಿಸಲಿದ್ದಾರೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು
124.80 ಅಡಿಗಳ ಗರಿಷ್ಟ ಸಾಮರ್ಥ್ಯವಿರುವ ಕೆಆರ್ಎಸ್ ಜಲಾಶಯ ಇದೀಗ ಸಂಪೂರ್ಣ 124.80 ಅಡಿಗಳು ಭರ್ತಿಯಾಗಿದೆ. ಇನ್ನೂ ಇಂದಿನ ಒಳಹರಿವಿನ ಪ್ರಮಾಣ 8,767 ಸಾವಿರ ಕ್ಯೂಸೆಕ್ ಇದ್ದು, ಇಂದಿನ ಹೊರ ಹರಿವಿನ ಪ್ರಮಾಣ 3,667 ಸಾವಿರ ಕ್ಯೂಸೆಕ್ ಇದೆ. ಇನ್ನೂ ಕೆಆರ್ಎಸ್ ಅಣೆಕಟ್ಟೆಯ ಸಾಮರ್ಥ್ಯವನ್ನು ಟಿಎಂಸಿಯಲ್ಲಿ ನೋಡುವುದಾದರೆ, ಈ ಜಲಾಶಯ 49.452 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಇಂದು 49.452 ಟಿಎಂಸಿ ನೀರು ಅಣೆಕಟ್ಟೆಯಲ್ಲಿ ಇದೆ.
ಬಳ್ಳಾರಿ: 130 ಕೋಟಿ ಜನರು ಆಯ್ಕೆ ಮಾಡಿದ ಪ್ರಧಾನ ಮಂತ್ರಿಗಿಂತ ಈತ ದೊಡ್ಡವನಾ? ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ 60 ವರ್ಷದಲ್ಲಿ ದಲಿತರು ಹಾಗು ಅಲ್ಪ ಸಂಖ್ಯಾತರಿಗೆ ಏನು ಮಾಡಿದೆ ಎನ್ನುವುದನ್ನು ಸಾಬೀತುಪಡಿಸಲಿ ಹಾಗೂ ರಾಜ್ಯದಲ್ಲಿ ಮುಂದಿನ ನಿಮ್ಮ ಸಿಎಂ ಅಭ್ಯರ್ಥಿ ದಲಿತರನ್ನು ಘೋಷಣೆ ಮಾಡಲಿ ಎಂದು ನಾನು ಹಾಕಿದ ಸವಾಲಿಗೆ ಮೊದಲ ಸಿದ್ದರಾಮಯ್ಯ ಅವರು ಉತ್ತರ ನೀಡಲಿ. ಆ ಮೇಲೆ ಸಿಎಂ ಬಸವರಾಜ್ ಬೊಮ್ಮಾಯಿ ನಿಮ್ಮ ಸವಾಲಿಗೆ ಉತ್ತರ ನೀಡಲಿದ್ದಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಜವಳಿ ಇಲಾಖೆಯಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿ: ಶಂಕರ್ ಪಾಟೀಲ್ ಮುನೇನಕೊಪ್ಪ
ಸಿದ್ದರಾಮಯ್ಯ ಅವರು ಅಭಿವೃದ್ಧಿ ಹಾಗೂ ದಲಿತರ ವಿಷಯದಲ್ಲಿ ಬೊಮ್ಮಾಯಿ ಅವರಿಗೆ ಸವಾಲು ಹಾಕಿದ್ದಾರೆ. ಆ ಸವಾಲಿಗೆ ಉತ್ತರ ಪಡೆಯುವ ಮೊದಲು ನಾನು ಹಾಕಿದ ಸವಾಲಿಗೆ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ. ನಾನು ದೊಡ್ಡವನು ಎಂದು ಸಿದ್ದರಾಮಯ್ಯ ಅವರು ಅನ್ಕೊಳ್ತಾ ಇರೋದು ಅವರ ಭ್ರಮೆ. ಸಿದ್ದರಾಮಯ್ಯ ಅವರು ಏನು ಡೊಡ್ಡ ಮನುಷ್ಯನಾ? 130 ಕೋಟಿ ಜನ ಅಯ್ಕೆ ಮಾಡಿದ ಪ್ರಧಾನಿಮಂತ್ರಿಗಿಂತ ಈತ ದೊಡ್ಡವನಾ? ಎಂದು ಪ್ರಶ್ನೆ ಮಾಡಿದ್ದಾರೆ.
ಆತ ಯಾರ ಬಗ್ಗೆ ಬೇಕಾದ್ರು ಮಾತನಾಡಬಹುದು, ಯಾರನ್ನು ಬೇಕಾದ್ರೂ ಗಿರಾಕಿ ಅನ್ನಬಹುದು. ಲೂಟಿಕೊರ ಅನ್ನಬಹುದಾ? ಸಿದ್ದರಾಮಯ್ಯ ಅವರು ಒಬ್ಬ ಪಳಗಿದ ರಾಜಕಾರಣಿಯಾಗಿ ಹೇಗಿರಬೇಕು? ಮುಂದಿನ ರಾಜಕಾರಣಿಗಳಿಗೆ ಅವರು ಒಂದು ಶಕ್ತಿಯಾಗಬೇಕು. ಅದನ್ನು ಬಿಟ್ಟು ನಾನು ದೊಡ್ಡವನು ಎಂದು ಎಲ್ಲರ ಬಗ್ಗೆ ಲಘುವಾಗಿ ಮಾತಾಡಬಹುದು ಎಂದು ತಿಳಿದುಕೊಂಡಿದ್ದಾರೆ. ಇದು ಅವರ ವಿನಾಶದ ಪರಮಾವಧಿ, ಮುಂದಿನ ಚುನಾವಣೆಯಲ್ಲಿ ಜನರು ಇದಕ್ಕೆ ತಕ್ಕ ಉತ್ತರ ಸಿಗಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುತ್ಯಾಲಮಡುವು ಗಡಿಭಾಗದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಮಧ್ಯಪ್ರದೇಶದ ಚಂಬಲ್ ಕಣಿವೆಯಲ್ಲಿ ಕುಖ್ಯಾತ ಡಕಾಯಿತರ ಮನವೊಲಿಸಿ, ಶರಣಾಗತರಾಗುವಂತೆ ಮಾಡುವಲ್ಲಿ ಹಾಗೂ ಆ ಡಕಾಯಿತರ ಕುಟುಂಬಗಳ ಪುನರ್ವಸತಿಗಾಗಿ ತಮ್ಮ ಗಾಂಧಿ ಸೇವಾ ಆಶ್ರಮದ ಮೂಲಕ ಶ್ರಮಿಸಿದ್ದರು ಎಂದು ಬೊಮ್ಮಾಯಿ ಅವರು ಸ್ಮರಿಸಿಕೊಂಡಿದ್ದಾರೆ.
ವಿಜಯಪುರ: ನೀವೆಂದಾದ್ರು ಕುರಿ ಕಾದಿದ್ದಿರಾ, ಖಂಡಿತವಾಗಿಯೂ ನಾನು ಕುರಿ ಕಾದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ಮೊರಟಿಗಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಡಿಯಾ ಟೀಮ್ಗೆ ಶುಭ ಕೋರಿದ್ದು, ಇಂಡಿಯಾ ಗೆದ್ದು ಬರಲೆಂದು ಹಾರೈಸಿದ್ದಾರೆ. ಈ ವೇಳೆ ಕುರಿ ಕಾದಿದ್ದಿದಿಯಾ, ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ಕುರಿ ಕಾದಿದ್ದಿದಿಯಾ, ನೀವೆಂದಾದ್ರು ಕುರಿ ಕಾದಿದ್ದಿರಾ, ಖಂಡಿತವಾಗಿಯೂ ನಾನು ಕುರಿ ಕಾದಿದ್ದೇನೆ. 2008ರಲ್ಲಿ ಕುರಿ ಕಾದಿದ್ದೇನೆ. ಸಿದ್ದರಾಮಯ್ಯ ಅವರು ಯಾವತ್ತಾದ್ರೂ ಕಾದಿದ್ದಾರಾ? ಆ ಕಂಬಳಿಯ ಯೋಗ್ಯತೆ ನನಗೆ ಗೊತ್ತಿದೆ. ಆ ಕುರಿಗಾರ ಬಿಸಿಲು, ಮಳೆ ಎನ್ನದೆ ಕಾದು, ಉಣ್ಣೆಯನ್ನು ಉತ್ಪಾದನೆ ಮಾಡಿದ್ದೇವೆ. ಅದರ ನೂಲನ್ನ ತಗೆದು, ನೇಯ್ದು ಕಂಬಳಿ ಮಾಡಿರ್ತಾನೆ. ಅದರ ಶ್ರಮ ಗುರುತ್ತಿಟ್ಟುಕೊಂಡು ನಾನು ಮಾಡ್ತಾ ಇದ್ದೇನೆ. ಈ ಕಂಬಳಿಯ ಗೌರವವನ್ನು ಉಳಿಸುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ.
ಎಳನೀರು ಎಷ್ಟು ಸಿಹಿ ಆಗಿದೆ. ಸಿಂದಗಿ ಜನ ಅಷ್ಟೇ ಸಿಹಿ ಆಗಿ ವಿಶ್ವಾಸವನ್ನ ತೋರಿಸಿದ್ದಾರೆ. ಅಭೂತ ಪೂರ್ವವಾದ ಬೆಂಬಲವನ್ನ ಕೊಟ್ಟಿದ್ದಾರೆ. ನಮ್ಮ ಜಯ ನಿಶ್ಚಿತ. ಜನರು ನಮಗೆ ನಿರಾವರಿ ಆಗಬೇಕು, ರಸ್ತೆಗಳು ಆಗಬೇಕು, ವಿದ್ಯುತ್ ಶಕ್ತಿ ಸಮಸ್ಯೆ ಬಗೆ ಹರಿಸಬೇಕು ಎಂದು ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ. ಇವೆಲ್ಲವನ್ನು ಮಾಡಲು ಸಾಧ್ಯವಿದೆ. ಅವನ್ನೆಲ್ಲವನ್ನು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆಗಳನ್ನ ಕೊಟ್ಟಿದ್ದು ನಾವು!
ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಲಸಿಕೆ ಉಚಿತವಾಗಿ ಕೊಟ್ಟವರು. ಕೋವಿಡ್-19 ಅನ್ನು ಯಶಸ್ವಿಯಾಗಿ ಮಾಜಿ ಸಿಎಂ ಯಡಿಯೂರಪ್ಪ, ನರೇಂದ್ರ ಮೋದಿ ಎದುರಿಸಿದ್ದಾರೆ. ಬಡವರ ಪರ ಇರೋ ಸರ್ಕಾರ ನಮ್ಮದು. ಯಡಿಯೂರಪ್ಪ ಅವರು ಮಕ್ಕಳಿಗೆ ಸೈಕಲ್ ಕೊಟ್ಟರು. ಸಿದ್ದರಾಮಯ್ಯ ಅವರು ಏನು ಕೊಟ್ಟರು? ಎಂದು ಪ್ರಶ್ನಿಸಿದ್ದಾರೆ. ಹಾಲು ಉತ್ಪಾದಕರಿಗೆ ಸಹಾಯ ಧನ ಕೊಟ್ಟರು. ಭಾಗ್ಯಲಕ್ಷ್ಮಿ, ವೃದ್ಧಾಪ್ಯ ವೇತನ ಯಡಿಯೂರಪ್ಪ ಅವರು ಕೊಟ್ಟರು. ಗರೀಬ್ ಕಲ್ಯಾಣ ಯೋಜನೆ ಮೋದಿ ಅವರು ತಂದಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಮೋದಿ ಅವರು ತಂದಿದ್ದಾರೆ. ಅಮೃತ್ ಯೋಜನೆಯಲ್ಲಿ ಗ್ರಾಮಗಳ ಅಭಿವೃದ್ಧಿ ಮಾಡ್ತಿದ್ದೇವೆ ಎಂದು ಹೇಳಿದರು.
ಸಿಂದಗಿಗೆ ಒಂದು ವರ್ಷದಲ್ಲಿ 7 ಸಾವಿರ ಮನೆ ಕಟ್ಟಿಸಿಕೊಡುತ್ತೇವೆ. ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸುತ್ತೇವೆ. ಕಾಂಗ್ರೆಸ್ ಅಭಿವೃದ್ಧಿ ಮಾಡಿಲ್ಲ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ, ಏನು ಯೋಜನೆ ಕೊಟ್ಟಿಲ್ಲ. ಯಾವುದೇ ನೀರಾವರಿ ಯೋಜನೆಯನ್ನು ಅವರು ಮುಕ್ತಾಯ ಮಾಡಿಲ್ಲ. ಈ ತಾಲೂಕಿನ ಬಗ್ಗೆ ಸಿದ್ದರಾಮಯ್ಯ ಅವರು ತಿರುಗಿ ನೋಡಿಲ್ಲ. ಈಗ ಅನುಕಂಪದ ಮಾತು ಆಡ್ತಿದ್ದಾರೆ. ಸಿಂದಗಿಯಲ್ಲಿ 1 ಲಕ್ಷ ಹೆಕ್ಟೇರ್ ನೀರಾವರಿ ಯೋಜನೆ ಮಾಡ್ತೀವಿ ಎಂದು ತಿಳಿಸಿದರು.
ಗೋಣಿ ಚೀಲದ ಆರೋಪ!
ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೋಣಿ ಚೀಲದ ಆರೋಪ ಮಾಡ್ತಾರೆ. ಗೋಣಿ ಚೀಲ ಇರೋದು ಡಿ.ಕೆ.ಶಿವಕುಮಾರ್ ಅವರ ಬಳಿ. ಈಗ ಡಿಕೆ ಸುರೇಶ್ ಬಂದಿದ್ದಾರೆ ಅಂತೆ. ಹುಷಾರು ಎಲ್ಲೆಲ್ಲಿ ಗೋಣಿ ಚೀಲ ಇಡ್ತಾರೋ. ಕತ್ತಲ ರಾತ್ರಿ ಮಾಡೋ ಸಂಸ್ಕೃತಿ ಕಾಂಗ್ರೆಸ್ದು, ಡಿಕೆಶಿ ಅವರದ್ದು ಗೋಣಿ ಚೀಲ ಸಂಸ್ಕೃತಿ ಎಂದು ಕಾಂಗ್ರೆಸ್, ಡಿಕೆಶಿ, ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮ ಮತಕ್ಕೆ ಬೆಲೆ ಕೊಡೋ ಕೆಲಸ ನಾವು ಮಾಡ್ತೀವಿ. ಕಾಂಗ್ರೆಸ್ ಈಗಾಗಲೇ ಸೋತು ಹೋಗಿದೆ. ಹೀಗಾಗಿ ಹಣ ಹಂಚಿಕೆ ಮಾಡ್ತಿದ್ದಾರೆ ಅಂತ ಆರೋಪ ಮಾಡ್ತಿದೆ. ಸೂರ್ಯ-ಚಂದ್ರ ಇರೋವಷ್ಟು ಸತ್ಯ ಭೂಸನೂರು 25 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ಬೊಮ್ಮಾಯಿ ಅವರು ಪ್ರಚಾರವನ್ನು ಮುಂದುವರೆಸಿದ್ದು, ಕಕ್ಕಳಮೇಲಿಯಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಸಚಿವರಾದ ಸಿಸಿ ಪಾಟೀಲ್, ಕಾರಜೋಳ, ಭೈರತಿ ಬಸವರಾಜ್ ಅವರು ಇದಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಅಭ್ಯರ್ಥಿ ರಮೇಶ್ ಭೂಸನೂರು ಪ್ರಚಾರದಲ್ಲಿ ಭಾಗಿಯಾಗಿದ್ದರು.
-ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಶೇ.90 ರಷ್ಟು ಲಸಿಕಾಕರಣ ಗುರಿ
ಹುಬ್ಬಳ್ಳಿ: ಕೋವಿಡ್ ಅಲೆ ಎದುರಿಸುವ ಕಾರ್ಯವು ರಾಜ್ಯ ಮತ್ತು ದೇಶದ ಆರೋಗ್ಯ ವ್ಯವಸ್ಥೆಯ ಸಾಮಥ್ರ್ಯ ಮತ್ತು ಕೊರತೆಗಳೆರಡನ್ನೂ ಪರಿಚಯಿಸಿದೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳಲ್ಲಿ ಗುಣಾತ್ಮಕ ಮತ್ತು ಗಮನಾರ್ಹ ಅಭಿವೃದ್ಧಿ ತರಲು ಕಾರಣವಾಗಿದೆ. ಭಾರತ ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಹೆಮ್ಮೆ ಪಡೋಣ ಆದರೆ ವಿಶ್ರಮಿಸುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಆವರಣದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ ಕಾರ್ಯಕ್ರಮ ಹಾಗೂ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಸಮರ್ಪಣೆ ಮಾಡಿ ಮಾತನಾಡಿದ ಅವರು, ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು (Convert calamity into opportunity) ಎಂಬ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಎಂದು ಮಾಡಿ ತೋರಿಸಿದೆ. ಕೋವಿಡ್ ವೈರಾಣು ಕಾಲಿಟ್ಟಾಗ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್, ಕೈಗವಸುಗಳಿರಲಿಲ್ಲ. ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ ಎಂದರು. ಇದನ್ನೂ ಓದಿ: ರಮೇಶ್ಕುಮಾರ್ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ. ಕಳೆದ ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಲಾಯಿತು. ಹಂತ ಹಂತವಾಗಿ ಹೆಚ್ಚಳ ಮಾಡುತ್ತಾ ಇದೀಗ ಕೇವಲ ಹತ್ತು ತಿಂಗಳ ಅವಧಿಯಲ್ಲಿ ನೂರು ಕೋಟಿ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಇದರ ಹಿಂದೆ ವೈದ್ಯರು, ಅರೆವೈದ್ಯಕೀಯ, ಆರೋಗ್ಯ ಕಾರ್ಯಕರ್ತರ,ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯ ಶ್ರಮವಿದೆ. ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಅಭಿನಂದಿಸುತ್ತೇನೆ. ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಇದೆ. ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ.90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನಿಮ್ಮಪ್ಪನ ಮನೆ ಆಸ್ತಿನಾ? – ರಮೇಶ್ ಕುಮಾರ್ ವಿರುದ್ಧ ಸುಧಾಕರ್ ವಾಗ್ದಾಳಿ
ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು ನೂರು ವರ್ಷಗಳ ಹಿಂದೆಯೇ ಸಾಬೀತಾಗಿದೆ. ಪೆನ್ಸಿಲಿನ್ನಿಂದ ಪೋಲಿಯೋವರೆಗೆ ಅನೇಕ ಲಸಿಕೆಗಳು ಮನುಷ್ಯನಿಗೆ ಬಾಹ್ಯವಾಗಿ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗಿದೆ. ವೈರಾಣುಗಳಿಗೆ ಭೌಗೋಳಿಕ ಮತ್ತು ಖಗೋಳಿಯ ಗಡಿಗಳು ಇರುವುದಿಲ್ಲ. ಅಣುಸ್ಫೋಟದಂತೆ ಅದು ವೇಗವಾಗಿ ಹರಡಬಲ್ಲದು. ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ. ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ಕಾರ್ಯತತ್ಪರರಾಗಿದ್ದಾರೆ. ಕೋವಿಡ್ನಿಂದಾಗಿ ದೇಶ ಮಾತ್ರವಲ್ಲ, ಇಡೀ ವಿಶ್ವ ಸಮುದಾಯದ ಒಟ್ಟು ಆರೋಗ್ಯ ಸದೃಢವಾಗಿರಬೇಕು ಎಂಬ ಪಾಠ ಕಲಿತಿದ್ದೇವೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ. ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ. ನಾಲ್ಕು ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಬೆಡ್ಗಳ ಸೌಲಭ್ಯ ಸ್ಥಾಪನೆಯಾಗಿವೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದ : ಸಿದ್ದರಾಮಯ್ಯ
ಕಿಮ್ಸ್ ಸೇವೆ ಶ್ಲಾಘನೆ:
ಉತ್ತರ ಕರ್ನಾಟಕದ ಹೆಮ್ಮೆಯ ಹಾಗೂ ಬಡವರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯನ್ನು ಈ ಪ್ರದೇಶದ 6 ರಿಂದ 7 ಜಿಲ್ಲೆಗಳು ಅವಲಂಬಿಸಿವೆ. ಕೋವಿಡ್ ಮೊದಲ ಮತ್ತು ಎರಡನೇ ಅವಧಿಯಲ್ಲಿ ಕಿಮ್ಸ್ ನೀಡಿದ ಸೇವೆ ಶ್ಲಾಘನೀಯವಾಗಿದೆ. ಈ ಸಂಸ್ಥೆ ತನ್ನ ಒಟ್ಟು ಸಾಮರ್ಥ್ಯವನ್ನು ಕ್ರೂಢೀಕರಿಸಿ ಸೇವೆ ನೀಡಿದ ಪರಿಣಾಮ ಸಾವಿರಾರು ಜನರ ಪ್ರಾಣ ಉಳಿದಿದೆ. ಬ್ಲ್ಯಾಕ್ ಫಂಗಸ್ ಖಾಯಿಲೆಗೂ ಕೂಡ ಕಿಮ್ಸ್ನಲ್ಲಿ ಪರಿಣಾಮಕಾರಿ ಚಿಕಿತ್ಸೆ ದೊರೆತಿರುವುದಕ್ಕೆ ಶ್ಲಾಘಿಸಿದರು. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ
ಆರೋಗ್ಯ, ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಮಾತನಾಡಿ, ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ನೂರು ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ವೈದ್ಯರು, ದಾದಿಯರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ ಇದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದ ಜನತೆ ಸಹಕಾರ ನೀಡಿದ್ದಾರೆ. ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಗಡಿ, ಬೆಟ್ಟ, ಗುಡ್ಡ, ನದಿ, ಸರೋವರಗಳನ್ನು ದಾಟಿ ಲಸಿಕೆಗಳನ್ನು ನೀಡಿದ ಉದಾಹರಣೆಗಳಿವೆ. ಚೀನಾದ ನಂತರ ಅತಿಹೆಚ್ಚು ಲಸಿಕೆ ನೀಡಿದ ದೇಶ ಭಾರತವಾಗಿದೆ. ಮಕ್ಕಳಿಗೆ ನೀಡುತ್ತಿರುವ ಲಸಿಕೆಗಳ ಜೊತೆಗೆ ನ್ಯುಮೋನಿಯಾ ತಡೆಯಲು ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ನೀಡಿಕೆಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಚಾಲನೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮಕ್ಕಳು ದೇಶದ ಹಾಗೂ ಸಮಾಜದ ಆಸ್ತಿ, ಅವರ ಆರೋಗ್ಯ ಸುರಕ್ಷತೆಗೆ ಈ ಲಸಿಕೆ ಪೂರಕವಾಗಲಿದೆ. ಮಗುವಿನ ಒಂದೂವರೆ, ಮೂರುವರೆ ಹಾಗೂ ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಈ ಲಸಿಕೆ ಹಾಕಿಸಬೇಕು ಎಂದರು. ಇದನ್ನೂ ಓದಿ: ಚಲಿಸುವ ವಾಹನಗಳಿಂದ ಹತ್ತಿ ಕಳ್ಳತನ – ಪ್ರಾಣವನ್ನೇ ಪಣಕ್ಕಿಟ್ಟು ಓಡುತ್ತಿದ್ದಾರೆ ಮಕ್ಕಳು
ಲಸಿಕಾಕರಣಕ್ಕೆ ಶ್ರಮಿಸಿದ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು, ಸಿಬ್ಬಂದಿಯನ್ನು ಗೌರವಿಸುವುದರ ಸಂಕೇತವಾಗಿ ಎಲ್ಲಾ ದರ್ಜೆಗಳ ಅಧಿಕಾರಿ ಹಾಗೂ ಸಿಬ್ಬಂದಿಯ ಪ್ರತಿನಿಧಿಗಳನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ, ಗೌರವಿಸಿದರು.
ಈ ವೇಳೆ, ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನರಾಜ್ಸಿಂಗ್, ಆರೋಗ್ಯ ಇಲಾಖೆಯ ಆಯುಕ್ತ ಡಾ.ರಂದೀಪ್, ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರುಂಧತಿ, ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.
ಕೊಪ್ಪಳ: ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಆರ್ಎಸ್ಎಸ್ ಕುರಿತು ಟೀಕೆ ಮಾಡ್ತಿದ್ದಾರೆ. ಆರ್ಎಸ್ಎಸ್ ಬಗ್ಗೆ ಮಾತನಾಡೋ ಯೋಗ್ಯತೆ ಇವರಲ್ಲಿ ಯಾರಿಗೂ ಇಲ್ಲ ಎಂದು ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಸಿಂದಗಿ ಉಪಚುಣಾವಣೆ ಹಿನ್ನೆಲೆ ಮಾರ್ಗ ಮಧ್ಯ ಕೊಪ್ಪಳದ ಗವಿಶ್ರೀ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ. ಅಲ್ಪಸಂಖ್ಯಾತರ ಓಲೈಕೆ ಮಾಡುವುದಕ್ಕಾಗಿ ಹಲವು ದಶಕಗಳಿಂದ ಆರ್ಎಸ್ಎಸ್ ಸಮಾಜಸೇವೆ ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್ಡಿಕೆ ತರಾಟೆ
ಚುನಾವಣೆಯಲ್ಲಿ ಇಂತಹ ಹೇಳಿಕೆಯಿಂದ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದ್ದಾರೆ. ಈ ತರಹದ ಹೇಳಿಕೆ ಇಂದ ಅವರು ದೊಡ್ಡ ಮನುಷ್ಯರಾಗುತ್ತಾರೆ. ಆದರೆ ಅದು ಅವರ ಮೂರ್ಖತನದ ಪರಮಾವಧಿ. ಕಾಂಗ್ರೆಸ್ ನಾಯಕರು ಹತಾಶೆ ಇಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಕೊಟ್ಟ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಕಾಂಗ್ರೆಸ್ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಆಸ್ತಿತ್ವ ಕಳೆದಿಕೊಂಡಿದೆ. ಹೀಗಾಗಿ ಹತಾಶರಾಗಿ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಜನರ ಮುಂದೆ ಹೇಳೋ ಯಾವುದೇ ಕಾರ್ಯಕ್ರಮ ಕಾಂಗ್ರೆಸ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿತ್ತಿದ್ದಾರೆ. ಇದು ಅವರಿಗೆ ಶೋಭೆ ತರೋದಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – 88ಕ್ಕೆ ಏರಿದ ಸಾವಿನ ಪ್ರಮಾಣ
– ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲು ಮಾಡುತ್ತೇನೆ
– ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಹೋಗಿದ್ದು ಯಾಕೆ?
ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ನ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯುತ್ತೇನೆ ಎಂದು ಪರೋಕ್ಷವಾಗಿ ಜೈಲಿಗೆ ಹಾಕಿಸೋವರೆಗೂ ನಾನು ವಿರಮಿಸೋದಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜರಬಂಡಹಳ್ಳಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ಸಾಲ ವಿತರಣಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ನ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಮಹಾಭಾರತದಂತಹ ಪುಸ್ತಕ ಬರೆಯಬಹದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಡಿಸಿಸಿ ಬ್ಯಾಂಕ್ ರಿಂಗ್ ಮಾಸ್ಟರ್ ಆಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ ಕೇವಲ ಆಕ್ಟರ್ ಅಷ್ಟೇ. ಶ್ರೀನಿವಾಸಗೌಡರಿಗೂ ಡೈರೆಕ್ಷನ್ ಮಾಡೋಕೆ ಗೊತ್ತಿಲ್ಲ. ಡೈರೆಕ್ಟರ್ ಪ್ರೊಡ್ಯೂಸರ್ ಎಲ್ಲ ರಮೇಶ್ ಕುಮಾರ್ ಎಂದು ಆರೋಪಿಸಿದರು. ಇದನ್ನೂ ಓದಿ: ಎರಡು ಕ್ಷೇತ್ರಗಳಲ್ಲಿ ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ: ಸಿಎಂ
ಯಾರೇ ಬಂದ್ರೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್) ವಿಭಜನೆ ಮಾಡೇ ಮಾಡ್ತೇನೆ. ರಮೇಶ್ ಕುಮಾರ್, ಗೌರಿಬಿದನೂರು ಶಾಸಕ ಹಾಗೂ ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅಂತಹ 100 ಜನ ಬಂದರೂ ನಾನು ಬಿಡಲ್ಲ, ಮಾಡೇ ಮಾಡ್ತೇನೆ. ಇದು ನನ್ನ ಘೋಷಣೆ ಎಂದು ಪ್ರಕಟಿಸಿದರು.
ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ರಮೇಶ್ ಕುಮಾರ್ ಯತ್ನಿಸುತ್ತಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ಎಂಎಲ್ಎಗಳು ಅವರ ಮಾತು ಕೇಳಬೇಕು ಅನ್ನೋದು ಅವರ ಆಸೆ. ಶ್ರೀನಿವಾಸಗೌಡರ ತಲೆ ಕೆಡಿಸಿ ದಳದಿಂದ ಕಾಂಗ್ರೆಸ್ ಗೆ ಕರೆತರುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್ ನಲ್ಲಿದ್ದವರು ರಮೇಶ್ ಕುಮಾರ್ ಅವರಿಂದಲೇ ದಳಕ್ಕೆ ಹೋಗಿದ್ದವರು. ಈಗ ಮತ್ತೆ ಕಾಂಗ್ರೆಸ್ ಗೆ ಬಂದು ಮಕ್ಮಲ್ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಡಿಸಿಸಿ ಬ್ಯಾಂಕ್ ನಿಂದ ಕೆಜಿಎಫ್, ಶ್ರೀನಿವಾಸಪುರದಲ್ಲಿ 400-500 ಕೋಟಿ ರೂ. ಸಾಲ ಕೊಡ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಅವರು ಏನು ಮಾಡಿದ್ರು? ಸಹಕಾರ ಕ್ಷೇತ್ರ ಸರ್ವರಿಗೂ ಸಮಪಾಲು ಸಮಬಾಳು. ಎಲ್ಲರಿಗೂ ಕೊಡಲು ಇರೋದು. ಆದರೆ ಡಿಸಿಸಿ ಬ್ಯಾಂಕನ್ನು ರಾಜಕೀಯ ಬೆರೆಸಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ನ್ನ ರಾಜಕೀಯ ವಾಗಿ ದುರ್ಬಳಕೆ ಮಾಡಿಕೊಳ್ಳೋದ್ರಲ್ಲಿ ಮೊದಲ ಬ್ಯಾಂಕ್ ಆಗಿದೆ ಎಂದು ಟೀಕಿಸಿದರು.
ಪಾರದರ್ಶಕ ತನಿಖೆ ಆಗಬೇಕು
ನಾನು ಡಿಸಿಸಿ ಬ್ಯಾಂಕ್ ನ ಅವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಎಂದು ಅಗ್ರಹಿಸಿದ್ದೇನೆ. ಆದರೆ ನ್ಯಾಯಾಲಯಕ್ಕೆ ಹೋಗಿ ತನಿಖೆ ಬೇಡ ಅಂತ ತಡೆಯಾಜ್ಞೆ ತಂದಿದ್ದಾರೆ. ಸತ್ಯ ಹರಿಶ್ಚಂದ್ರ ಆಗಿದ್ರೆ ಯಾಕೆ ತಡೆಯಾಜ್ಞೆ ತಂದ್ರು? ಇದರಲ್ಲಿ ಗೊತ್ತಾಗುದಿಲ್ವೇ ಕಳ್ಳ ಯಾರು ಅಂತ? ನೀವು ಸಾಚಾ ಆಗಿದ್ರೆ ನ್ಯಾಯಾಲಯಕ್ಕೆ ಯಾಕೆ ಹೋಗ್ತಿದ್ರೀ ಎಂದು ಪ್ರಶ್ನೆಗಳನ್ನು ಕೇಳಿದರು. ಇದನ್ನೂ ಓದಿ: ಉತ್ತರಾಖಂಡ್ ಪ್ರವಾಹಪೀಡಿತ ಭಾಗದಲ್ಲಿ 10 ಕನ್ನಡಿಗರಿಗೆ ಸಂಕಷ್ಟ
ಸತ್ಯ ಆಚೆ ಬಂದರೆ ಜೈಲಿಗೆ ಹೋಗ್ತೀರಿ ಎಂದು ನಿಮಗೆ ಗೊತ್ತಿದೆ. ಅದಕ್ಕೆ ತಡೆಯಾಜ್ಞೆ ತಂದಿದ್ದೀರಿ. ಆದರೆ ನಾನು ಬಿಡೋದಿಲ್ಲ ತಿಳ್ಳೊಳ್ಳಿ, ಸುಧಾಕರ್ ಬಿಡೋದಿಲ್ಲ. ನಿಮ್ಮ ಅನಿಷ್ಟ ಭ್ರಷ್ಟಾಚಾರದ ಕೂಪವನ್ನು ಹೊರೆಗೆ ಎಳೆಯೋವರೆಗೂ ನಾನು ಬಿಡೋದಿಲ್ಲ. ನಾನು ವಿರಮಿಸೋದಿಲ್ಲ ಎಂದು ಸವಾಲು ಹಾಕಿದ್ದಾರೆ.
ರಮೇಶ್ ಕುಮಾರ್ ಭ್ರಷ್ಟಾಚಾರಕ್ಕೆ ಸಹಕಾರ ಇಲಾಖೆಯ ಅಧಿಕಾರಿಗಳು ಸಹ ಸಾಥ್ ನೀಡಿದ್ದು, ತನಿಖೆಯಾಗಲಿ ಎಂದು ನಾನು ಸಿಎಂ ಬೊಮ್ಮಾಯಿ ಹಾಗೂ ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಬಳಿ ಒತ್ತಾಯಿಸಿದ್ದೇನೆ ಎಂದರು.
– ಈ ದೇಶದ ಪ್ರತಿಯೊಬ್ಬರು ಸಹ ಆರ್ಎಸ್ಎಸ್
– ಮೋದಿ ಬಂದ ಮೇಲೆ ಅಚ್ಚೇ ದಿನ ಬಂದಿದೆ
ಬೆಳಗಾವಿ: ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಸಿಂದಗಿ ಉಪಚುನಾವಣೆ ಆಲಮೇಲ ಗ್ರಾಮದ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಕಾಂಗ್ರೆಸ್ ಸರ್ಕಾರದ ಭಾಗ್ಯ ಯಾರ ಮನೆಗೂ ಸಹ ಬರಲಿಲ್ಲ. ಕಾಂಗ್ರೆಸ್ ಅವರು ಬಂದಿದ್ದೇ ನಮಗೆ ದೌರ್ಭಾಗ್ಯ. ಕಾಂಗ್ರೆಸ್ ಅಧಿಕಾರ ಬಿಟ್ಟು ಇರಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತೆ ಇರ್ತಾರೆ, ಅಧಿಕಾರ ಇಲ್ಲದಿದ್ದಾಗ ಹತ್ತಿಯಂತೆ ಇರ್ತಾರೆ. ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದವರು ಕಾಂಗ್ರೆಸ್ ನವರು ಎಂದು ಕಿಡಿಕಾರಿದರು.
ಮೈತ್ರಿ ಸರ್ಕಾರ ಜನರ ಸರ್ಕಾರ ಅಲ್ಲ, ಕೆಲವರು ಅಲ್ಲಿಂದ ಬಂದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಹೌದು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ, ಆದರೆ ಸುಭಾಷ್ ಚಂದ್ರ ಬೋಸ್, ಲೋಕಮಾನ್ ತಿಲಕ್, ಭಗತ್ಸಿಂಗ್, ಚಂದ್ರಶೇಖರ್ ಆಜಾದ್, ವೀರಸಾವರ್ಕರ್ ಇವರೆಲ್ಲ ಏನು ಕಾಂಗ್ರೆಸ್ಸಿನವರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ಜಗಳಕ್ಕೆ ಹೋಗಲು ನನಗೆ ಬೇರೆ ಕೆಲಸ ಇಲ್ಲವೇ?: ಹೆಚ್ಡಿಕೆ
ಪ್ರತಿ ಒಬ್ಬರು ಸಹ ಆರ್ಎಸ್ಎಸ್!
ಲಕ್ಷಾಂತರ ಜನ ದೇಶಕ್ಕಾಗಿ ಜೀವ ನೀಡಿದ್ರು. ಆದರೆ ಇವರಿಗೆ ಇಂದಿರಾ ಗಾಂಧಿ ಹಾಗೂ ಅವರ ಮನೆತನದವರು ಮಾತ್ರ ಗೊತ್ತು. ಬೊಮ್ಮಾಯಿ ನಮ್ಮ ಜೊತೆ ಇದ್ದವರು, ಆರ್ಎಸ್ಎಸ್ ಅವರಾ ಎಂದು ಕೇಳುತ್ತಾರೆ. ಈ ದೇಶದ ಪ್ರತಿ ಒಬ್ಬರು ಸಹ ಆರ್ಎಸ್ಎಸ್ ನವರು. ಆರ್ಎಸ್ಎಸ್ ಅವರು ನಾವಲ್ಲ ಅಂದ್ರೆ ಅವರು ಯಾರು ನೀವೇ ತಿಳಿದುಕೊಳ್ಳಿ. ಸಿದ್ದರಾಮಣ್ಣ ನಮ್ಮ ಜೊತೆ ಚೆನ್ನಾಗಿದ್ದರು, ಕಾಂಗ್ರೆಸ್ ಹೋಗಿ ಕೆಟ್ಟರು ಎಂದು ತಿರುಗೇಟು ನೀಡಿದರು.
ಗುತ್ತಿ ಬಸವಣ್ಣ ಯೋಜನೆಗೆ ಬಿಜೆಪಿ ಅಭ್ಯರ್ಥಿ ಬೂಸನೂರ ಹೋರಾಟ ನಡೆಸಿದ್ದರು. ಕೆಲಸ ಮಾಡುವ ಛಲ ಇರಬೇಕು. ಮಾಡಿಲ್ಲ ಅಂದ್ರೆ ಕೇಳುವ ಗಂಡಸುತನ ಇರಬೇಕು. ಈ ಯೋಜನೆಗಾಗಿ ಭೂಸನೂರ ಅವರ ಹೋರಾಟ ಅಪಾರವಾಗಿದೆ. 2009ರ ನವಂಬರ್ ಚಿಮ್ಮಲಗಿ ಏತ ನೀರಾವರಿಗೆ ಚಾಲನೆ ನೀಡಿದೆ. ನಮ್ಮ ಸರ್ಕಾರದಲ್ಲಿ ಯೋಜನೆಗೆ ಜಾರಿಗೆ ತಂದಿದ್ದು, ನಮ್ಮ ಸರ್ಕಾರದಲ್ಲಿ ನೀರು ಹರಿಸುವ ಕೆಲಸ ಸಹ ನಡೆಯಲ್ಲಿದೆ. ಹೀಗಾಗಿ ಭೂಸನೂರ ಅವರ ಮೇಲೆ ಆಶೀರ್ವಾದ ಇರಲ್ಲಿ ಎಂದು ಕೇಳಿಕೊಂಡರು. ಇದನ್ನೂ ಓದಿ: ದಾಖಲೆಗಳಿದ್ರೂ ಮನೆ ಕೆಡವಿ ದರ್ಪ ತೋರಿದ ಅಧಿಕಾರಿಗಳು
ವಚನ ಭ್ರಷ್ಟರಾಗಿದ್ದಾರೆ!
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕೃಷ್ಣೆ ನಡೆಗೆ ಅಂದ್ರು, ಆದರೆ 5 ವರ್ಷದಲ್ಲಿ ಅದಕ್ಕೆ ಬೇಕಾದ ಅನುದಾನ ಸಹ ನೀಡಲಿಲ್ಲ. ಈ ಮೂಲಕ ಕೃಷ್ಣೆಯ ಮೇಲೆ ಆಣೆ ಮಾಡಿ ಕಾಂಗ್ರೆಸ್ ಅವರು ವಚನ ಭ್ರಷ್ಟರಾಗಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.
ಟ್ವೀಟ್ ವಾರ್ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಅವರು ಸಣ್ಣವರಾಗಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಯಾರು ಎಂದು ಕೇಳ್ತಿದ್ದಾರೆ. ಸೋನಿಯಾ ಗಾಂಧಿ ನಾನೇ ಅಧ್ಯಕ್ಷೆ ಎಂದರು. ಗಾಂಧಿಜೀ ಅವರು ಅವತ್ತೆ ಕಾಂಗ್ರೆಸ್ ಪಕ್ಷವನ್ನ ತ್ಯಾಗ ಮಾಡಿ ಎಂದಿದ್ದರು. ಆದರೆ ಅಧಿಕಾರದ ಆಸೆಗೆ ಅಂದಿನ ನಾಯಕರು ಕಾಂಗ್ರೆಸ್ ಬಿಡಲಿಲ್ಲ. ಆದರೆ ಜನ ಇದೀಗ ಕಾಂಗ್ರೆಸ್ ಮುಗಿಸಲಿದ್ದಾರೆ ಎಂದರು.
ಮೋದಿ ಅವರು ಬಂದ ಮೇಲೆ ಅಚ್ಚೆ ದಿನ ಬಂದಿದೆ. 10 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡಿದ್ದಾರೆ. ಬಡ ಕುಟುಂಬಗಳಿಗೆ ಗ್ಯಾಸ್ ನೀಡಿದ್ದರು. ಬಡವರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದ್ದಾರೆ. ಮೋದಿ ಅವರು ತಮ್ಮ ದಿಟ್ಟತನದಿಂದ ಕೋವಿಡ್ ನಿರ್ವಹಣೆ ಮಾಡಿದ್ದಾರೆ. ದೇಶದ ಪ್ರತಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಶೇ.83 ಮೊದಲ ಡೋಸ್ ಹಾಗೂ ಶೆ. 34 ಎರಡನೇ ಡೋಸ್ ನೀಡಲಾಗಿದೆ ಎಂದು ತಿಳಿಸಿದರು.