Tag: Cinema Review

  • ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

    ಎಲ್ಲಿದ್ದೆ ಇಲ್ಲಿತನಕ: ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟಿದ ಸೃಜಾ!

    ಬೆಂಗಳೂರು: ಕಿರುತೆರೆಗೂ ಸಿನಿಮಾಗೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ ಪ್ರೇಕ್ಷಕರ ನಾಡಿಮಿಡಿತವನ್ನು ಸ್ಪಷ್ಟವಾಗಿ ಗ್ರಹಿಸುವ ತಾಕತ್ತಿರುವ ನಿರ್ದೇಶಕನ ಪಾಲಿಗೆ ಆ ವ್ಯತ್ಯಾಸ ಸವಾಲಿನ ಸಂಗತಿಯಲ್ಲ. ನಿರ್ದೇಶಕ ತೇಜಸ್ವಿ ಮೊದಲ ಹೆಜ್ಜೆಯಲ್ಲಿಯೇ ಅದನ್ನು ಸಾಬೀತುಗೊಳಿಸಿದ್ದಾರೆ. ಅವರು ನಿರ್ದೇಶನ ಮಾಡಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರ ಭಾರೀ ಸದ್ದು ಮಾಡುತ್ತಲೇ ಸಾಗಿ ಬಂದಿತ್ತು. ಹಾಡು, ಟ್ರೈಲರ್, ಪೋಸ್ಟರ್ ಸೇರಿದಂತೆ ಫ್ರೆಶ್ ಆದ ಕಥೆಯ ಹಿಂಟ್ ಬಿಟ್ಟು ಕೊಡುತ್ತಲೇ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿತ್ತು. ಅದೀಗ ಬಿಡುಗಡೆಯಾಗಿದೆ. ಈ ಮೂಲಕ ತಾಜಾತನದ ಅನುಭೂತಿಯೊಂದಿಗೆ ಪ್ರೇಕ್ಷಕರ ಮನಮುಟ್ಟುವಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಗೆದ್ದಿದ್ದಾರೆ.

    ಸೃಜನ್ ಲೋಕೇಶ್ ಇಲ್ಲಿ ಸೂರ್ಯ ಎಂಬ ಪಾತ್ರವನ್ನು ಸಂಪೂರ್ಣವಾಗಿ ಒಳಗಿಳಿಸಿಕೊಂಡು ನಟಿಸಿದ್ದಾರೆ. ತಂದೆಯ ಪಾಲಿಗೆ ಸೂರ್ಯ ಮುದ್ದಿನ ಮಗ. ಆತ ಅದೆಲ್ಲಿ ಸಹವಾಸ ದೋಷದಿಂದ ಹಾಳಾಗುತ್ತಾನೋ ಎಂಬ ಭಯದಿಂದ ಆತನನ್ನು ತಂದೆ ವಿದೇಶಕ್ಕೆ ಕರೆದೊಯ್ಯುತ್ತಾನೆ. ಆದರೆ ಅಲ್ಲಿ ಅದೇನೇ ಸೌಕರ್ಯಗಳು ಸಿಕ್ಕರೂ ಸೂರ್ಯನನ್ನು ಕಳ್ಳುಬಳ್ಳಿಯ ಬಂಧ ಸದಾ ಸೆಳೆಯುತ್ತಿರುತ್ತೆ. ಒಂದಷ್ಟು ವರ್ಷಗಳ ನಂತರ ಆತ ಹಳೇ ಗೆಳೆಯರನ್ನರಸಿ ಸ್ವದೇಶಕ್ಕೆ ಮರಳುತ್ತಾನೆ. ಈ ನಡುವೆ ಮದುವೆ ಮನೆಯೊಂದರಲ್ಲಿ ದಂತದ ಬೊಂಬೆಯಂಥಾ ಹುಡುಗಿ ಆತನ ಮನ ಸೆಳೆದಿರುತ್ತಾಳೆ. ಅದೇ ಗುಂಗಿನಲ್ಲಿ ತೇಲಾಡುತ್ತಲೇ ಸೂರ್ಯ ಗೆಳೆಯನ ಚಾಲೆಂಜು ಸ್ವೀಕರಿಸಿ ಕೆಲಸ ಹುಡುಕ ಹೋದರೆ ಆ ಕಂಪನಿಯಲ್ಲಿಯೂ ಸಾಕ್ಷಾತ್ತು ನಂದಿನಿಯ ದರ್ಶನವಾಗಿ ಸೂರ್ಯನೊಳಗೆ ಪ್ರೀತಿಯ ಪ್ರಭೆ ಮತ್ತಷ್ಟು ಪ್ರಕಾಶಮಾನವಾಗುತ್ತೆ.

    ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆಂಬುದಕ್ಕಿಂತಲೂ ನಂದಿನಿಯನ್ನು ಒಲಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸೂರ್ಯ ಅದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಆ ನಂತರದದ್ದು ಆಕೆಯನ್ನು ಒಲಿಸಿಕೊಳ್ಳೋ ಪಡಿಪಾಟಲು. ನಂದಿನಿ ಸುಳ್ಳಿನ ನೆರಳು ಸೋಕಿದರೂ ಕೊಸರಾಡುವ ಪೈಕಿ. ಆದರೆ ಸೂರ್ಯ ಸುಳ್ಳಿನ ಮಹಲಿನಲ್ಲಿಯೇ ಪ್ರೇಮಸೌಧ ಕಟ್ಟಿ ಬಿಟ್ಟಿರುತ್ತಾನೆ. ಅದಕ್ಕೆ ಮದುವೆ ಮೂಲಕ ಬ್ರೇಕ್ ಹಾಕೋ ಉದ್ದೇಶದಲ್ಲಿ ಸೂರ್ಯನಿರುವಾಗಲೇ ಮದುವೆ ಮನೆಯಲ್ಲಿಯೇ ಆತನ ಸುಳ್ಳಿನ ಪುರಾಣ ನಂದಿನಿ ಮುಂದೆ ಬಿಚ್ಚಿಕೊಳ್ಳುತ್ತೆ. ಆ ನಂತರದಲ್ಲಿ ಏನಾಗುತ್ತೆಂಬುದೂ ಸೇರಿದಂತೆ ಇಡೀ ಚಿತ್ರ ರೋಚಕವಾಗಿ ಮೂಡಿ ಬಂದಿದೆ.

    ತೇಜಸ್ವಿ ಪ್ರೇಕ್ಷಕರ ಅಭಿಲಾಶೆ ಮತ್ತು ಸೃಜನ್ ಲೋಕೇಶ್ ಅವರಿಗೆ ತಕ್ಕುದಾಗಿಯೇ ಕಥೆ ಹೊಸದು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಳಿಕೇಳಿ ಸೃಜನ್ ಲೋಕೇಶ್ ಟಾಕಿಂಗ್ ಸ್ಟಾರ್. ಇಲ್ಲಿ ಆ ಬಿರುದು ಮತ್ತಷ್ಟು ಮಿರುಗುವಂಥ ಮಾತಿನ ಜುಗಲ್ಬಂಧಿ ಇದೆ. ಅಚ್ಚರಿಯಾಗೋದು ಸೃಜನ್ ಅವರ ಬದಲಾವಣೆ. ಸೃಜನ್ ಅದ್ಭುತ ನಟನಾಗಿ ಬದಲಾಗಿದ್ದಾರೆ. ಡ್ಯಾನ್ಸು, ಫೈಟಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಸೃಜಾ ತಾಜಾ ತಾಜ. ಇನ್ನುಳಿದಂತೆ ನಾಯಕಿಯಾಗಿ ಹರಿಪ್ರಿಯಾ ನಟನೆ ಬಗ್ಗೆ ಎರಡು ಮಾತಿಲ್ಲ. ಅಮ್ಮನಾಗಿ ನಟಿಸಿರೋ ತಾರಾ ಅವರದ್ದು ಎಂದಿನಂತೆ ಮಂತ್ರಮುಗ್ಧಗೊಳಿಸೋ ನಟನೆ. ಮಿಕ್ಕೆಲ್ಲ ತಾರಾಗಣವೂ ಅದಕ್ಕೆ ಸಾಥ್ ಕೊಟ್ಟಿದೆ. ಎಲ್ಲಿಯೂ ಬೋರು ಹೊಡೆಸದಂತೆ, ಮನೋರಂಜನೆಗೆ ತುಸುವೂ ತತ್ವಾರವಾಗದಂತೆ ತೇಜಸ್ವಿ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ.

    ರೇಟಿಂಗ್: 3.5/5

  • ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

    ಉದ್ದಿಶ್ಯ: ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ!

    ಬೆಂಗಳೂರು: ಹಾಲಿವುಡ್ ಕಥೆಗಾರನ ಕಥೆ ಮತ್ತು ಒಂದಷ್ಟು ಹೊಸತನಗಳ ಜೊತೆಗೇ ಹೇಮಂತ್ ಕೃಷ್ಣಪ್ಪ ನಿರ್ದೇಶನದ ಉದ್ದಿಶ್ಯ ಚಿತ್ರ ತೆರೆಗೆ ಬಂದಿದೆ. ಪ್ರೇಕ್ಷಕರು ಮೃಗಾಲಯದಿಂದ ಮಾಂತ್ರಿಕ ಮಂಡಲದವರೆಗೆ ಥ್ರಿಲ್ಲಿಂಗ್ ಜರ್ನಿ ಮಾಡಿದ ಹಾರರ್ ಅನುಭವವೊಂದನ್ನು ಮನಸು ತುಂಬಿಕೊಂಡಿದ್ದಾರೆ!

    ಅಮೆರಿಕ ಕನ್ನಡಿಗ ಹೇಮಂತ್ ಕೃಷ್ಣಪ್ಪ ಅವರೇ ನಿರ್ಮಾಣ ಮಾಡಿ, ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರೋ ಚಿತ್ರ ಉದ್ದಿಶ್ಯ. ಆರಂಭದಿಂದಲೂ ಹೊಸತೇನೋ ಇದೆ ಎಂಬ ಕುತೂಹಲ ಕಾಯ್ದಿಟ್ಟುಕೊಂಡಿದ್ದ ಈ ಚಿತ್ರವೀಗ ಅದಕ್ಕೆ ತಕ್ಕುದಾದ ಫೀಲ್ ಒಂದನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಸಫಲವಾಗಿದೆ.

    ಮೈಸೂರು ಮೃಗಾಲಯದಲ್ಲಿ ಹಠಾತ್ತನೆ ಸತ್ತು ಬಿದ್ದ ಪ್ರಾಣಿಗಳು ಮತ್ತು ಕೆಲ ವ್ಯಕ್ತಿಗಳು. ಇದೊಂದು ಕೊಲೆ ಎಂಬುದು ಮೇಲು ನೋಟಕ್ಕೇ ಗೊತ್ತಾಗುವಂತಿದ್ದರೂ ಅದಕ್ಕೆ ಕಾರಣವೇನು, ಇದರ ಹಿಂದಿರೋರು ಯಾರೆಂಬುದು ಕಗ್ಗಂಟು. ಅದನ್ನು ಬಿಡಿಸಲು ಯಂಗ್ ಆಂಡ್ ಎನರ್ಜೆಟಿಕ್ ಸಿಐಡಿ ಆಫೀಸರ್ ಆಗಮನ. ಯಾವುದಕ್ಕೂ ಕೇರ್ ಮಾಡದ ಈ ಅಧಿಕಾರಿಯನ್ನು ತನಿಖೆಯ ಜಾಡು ಭೀಕರ ಮಾಂತ್ರಿಕನೊಬ್ಬನ ಮಾಂತ್ರಿಕ ಮಂಡಲಕ್ಕೆ ತಂದು ನಿಲ್ಲಿಸುತ್ತೆ. ಈತನ ಸುತ್ತ ಮೂವರು ಹುಡುಗೀರ ದರ್ಶನವೂ ಆಗುತ್ತೆ. ಅಲ್ಲಿಂದಲೇ ಹಾರರ್ ಕಥನವೂ ತೆರೆದುಕೊಳ್ಳುತ್ತೆ. ಆದರೆ ಈ ಹಾರರ್ ವಿಧಾನವೂ ತಾಂತ್ರಿಕ ಶ್ರೀಮಂತಿಕೆ ಹೊಂದಿದೆ ಎಂಬುದು ಈ ಚಿತ್ರದ ಅಸಲೀ ಶಕ್ತಿ.

    ಒಟ್ಟಾರೆಯಾಗಿ ಸಿಐಡಿ ಅಧಿಕಾರಿಯಾಗಿಯೂ ಅಬ್ಬರಿಸಿರುವ ಹೇಮಂತ್ ಕೃಷ್ಣಪ್ಪ, ಮಾಮೂಲಾದ ಕಥೆಯನ್ನೂ ಭಿನ್ನ ಬಗೆಯಲ್ಲಿ ನಿರೂಪಣೆ ಮಾಡಿದ್ದಾರೆ. ಈ ಮೂಲಕ ನಿರ್ದೇಶಕರಾಗಿಯೂ ಅವರ ಕೆಲಸ ಮುಖ್ಯವಾಗುತ್ತದೆ. ಇದಕ್ಕೆ ಎಲ್ಲ ಪಾತ್ರಧಾರಿಗಳೂ ಸಾಥ್ ನೀಡಿದ್ದಾರೆ. ಅರ್ಚನಾ ಗಾಯಕವಾಡ್, ಅಕ್ಷತಾ ಮತ್ತು ಇಚ್ಚಾ ಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

    ಹಿನ್ನೆಲೆ ಸಂಗೀತ ಇಡೀ ಚಿತ್ರಕ್ಕೆ ಶಕ್ತಿ ತುಂಬಿದರೆ ತಾಂತ್ರಿಕ ಶ್ರೀಮಂತಿಕೆ ಅದಕ್ಕೆ ಸಾಥ್ ನೀಡಿದೆ. ಒಂದಷ್ಟು ಕೊರತೆಗಳಿದ್ದರೂ ಒಂದೊಳ್ಳೆ ಚಿತ್ರ ನೋಡಿದ ಅನುಭವವನ್ನಂತೂ ಉದ್ದಿಶ್ಯ ನೀಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv