Tag: churu

  • ದೇಶ ಸುರಕ್ಷಿತರ ಕೈಯಲ್ಲಿದೆ, ದೇಶಕ್ಕಿಂತ ದೊಡ್ಡದು ಏನಿಲ್ಲ: ವಾಯು ದಾಳಿ ಬಳಿಕ ಮೋದಿ ಮೊದಲ ಭಾಷಣ

    ದೇಶ ಸುರಕ್ಷಿತರ ಕೈಯಲ್ಲಿದೆ, ದೇಶಕ್ಕಿಂತ ದೊಡ್ಡದು ಏನಿಲ್ಲ: ವಾಯು ದಾಳಿ ಬಳಿಕ ಮೋದಿ ಮೊದಲ ಭಾಷಣ

    ಜೈಪುರ: ಪಕ್ಷಕ್ಕಿಂತಲೂ ದೇಶ ದೊಡ್ಡದು. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪಾಕ್ ಮೇಲೆ ವಾಯು ದಾಳಿ ನಡೆದ ಬಳಿಕ ಪ್ರಧಾನಿ ಮೋದಿ ಇಂದು ರಾಜಸ್ಥಾನದ ಚುರುವಿನಲ್ಲಿ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಿದರು. ಇಂದು ನಿಮ್ಮೆಲ್ಲರ ಜೋಶ್ ನನಗೆ ಅರ್ಥವಾಗುತ್ತಿದೆ. ಇಂದು ನಮ್ಮ ದೇಶ ಸುರಕ್ಷಿತವಾಗಿದ್ದು, ಸುರಕ್ಷಿತರ ಕೈಯಲ್ಲಿದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದರು.

    2014ರಲ್ಲಿ ಮೊದಲ ಬಾರಿಗೆ ನನ್ನ ಹೃದಯದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ. ಇಂದು ಇನ್ನೊಮ್ಮೆ 2014ರ ನನ್ನ ಮಾತುಗಳನ್ನು ನಿಮ್ಮ ಮುಂದೆ ಹೇಳುತ್ತೇನೆ. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ. ನಾನು ಯಾವತ್ತು ದೇಶ ತಲೆ ತಗ್ಗಿಸುವ ಕೆಲಸ ಮಾಡಲ್ಲ ಎಂದು ಈ ಭಾರತದ ಪ್ರಧಾನ ಸೇವಕನಾದ ನಾನು ಚುರು ಭೂಮಿಯಲ್ಲಿ ಭಾರತ ಮಾತೆಗೆ ವಾಗ್ದಾನ ಮಾಡುತ್ತೇನೆ ಎಂದು ಹೇಳಿದರು.

    ಒನ್ ರ‍್ಯಾಂಕ್ ಒನ್ ಪೆನ್ಷನ್ (ಏಕ ಶ್ರೇಣಿ ಏಕ ಪಿಂಚಣಿ) ಜಾರಿ ಮಾಡಿದ್ದೇವೆ. ನಿನ್ನೆ ಸೈನಿಕರ ನೆನಪಿಗಾಗಿ ಸ್ಮಾರಕವನ್ನು ಅರ್ಪಿಸಲಾಗಿದೆ. ಎರಡು ದಿನಗಳ ಹಿಂದೆ ರೈತರಿಗಾಗಿ ಆರಂಭಿಸಿದ ಯೋಜನೆಯನ್ನು ಬಾಬಾ ಗೊರಖಪುರನಾಥನ ಆಶೀರ್ವಾದದೊಂದಿಗೆ ಪಿಎಂ ಕಿಸಾನ್ ಮಹತ್ವದ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಆರಂಭಿಸಲಾಗಿದೆ. ಅಂದು ಒಂದು ಬಟನ್ ಒತ್ತುವ ಮೂಲಕ 12 ಕೋಟಿಗೂ ಅಧಿಕ ಸಣ್ಣ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ಎರಡು ದಿನದ ಹಿಂದೆ ಯೋಜನೆಯ ಮೊದಲ ಕಂತು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

    ಚುರುವಿನಲ್ಲಿ 50 ಲಕ್ಷಕ್ಕೂ ಅಧಿಕ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದ್ರೆ ಇದೂವರೆಗೂ ರಾಜಸ್ಥಾನದ ಯಾವ ರೈತರಿಗೂ ಹಣ ಜಮೆ ಆಗಿಲ್ಲ ಎಂದು ಹೇಳಲು ನನಗೆ ದುಃಖವಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸರ್ಕಾರಗಳು ರೈತರ ದತ್ತಾಂಶಗಳನ್ನು ನೀಡಿದ್ದರಿಂದ ಹಣ ವರ್ಗಾವಣೆಯಾಯ್ತು. ಆದ್ರೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ರೈತರ ದತ್ತಾಂಶ ನೀಡಲು ಹಿಂದೇಟು ಹಾಕುತ್ತಿದೆ. ರೈತರ ವಿಷಯದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಹಣದಿಂದ ರೈತರಿಗೆ ಸಹಾಯವಾಗಲಿದೆ. ರೈತರಿಗಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇಲ್ಲಿಯ ಸರ್ಕಾರ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸೇರ್ಪಡೆಯಾಗುತ್ತಿಲ್ಲ. ಕಾಂಗ್ರೆಸ್ ರಾಜಕೀಯ ಏನಿದ್ರೂ, ನಾವು ಮಾತ್ರ ರೈತರಿಗೆ ಹಣ ಮುಟ್ಟಿಸಿಯೇ ತೀರುತ್ತೇನೆ ಎಂದು ಮೋದಿ ವಾಗ್ದಾನ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಡಿಯೋ: ಆಟೋ ಚಾಲಕನನ್ನ ಸಿಮೆಂಟ್ ಸ್ಲ್ಯಾಬ್‍ನಿಂದ ಹೊಡೆದು ಕೊಂದೇ ಬಿಟ್ಟ ಬೈಕ್ ಸವಾರ

    ವಿಡಿಯೋ: ಆಟೋ ಚಾಲಕನನ್ನ ಸಿಮೆಂಟ್ ಸ್ಲ್ಯಾಬ್‍ನಿಂದ ಹೊಡೆದು ಕೊಂದೇ ಬಿಟ್ಟ ಬೈಕ್ ಸವಾರ

    ಜೈಪುರ: ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರ ಮತ್ತು ಆಟೋ ಚಾಲಕನ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಇಲ್ಲಿನ ಚುರು ಜಿಲ್ಲೆಯ ಸರ್ದಾರ್ ಶಹರ್ ನಗರದಲ್ಲಿ ಬೈಕ್ ಸವಾರನೊಬ್ಬ ಆಟೋ ಚಾಲಕನಿಗೆ ಸಿಮೆಂಟ್ ಸ್ಲ್ಯಾಬ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಬೈಕ್ ಸವಾರನನ್ನು ಬಂಧಿಸಲಾಗಿದೆ.

    ನಡೆದಿದ್ದೇನು?: ಆಟೋ ಚಾಲಕ ಮಸ್ತಾಕ್ ಹಿಂದಿನಿಂದ ವಾಹನವೊಂದನ್ನ ಓವರ್ ಟೇಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಹಾಲಿನ ಕ್ಯಾನ್‍ಗಳೊಂದಿಗೆ ಹೀರಾಲಾಲ್ ದ್ವಿಚಕ್ರ ವಾಹನದಲ್ಲಿ ವಿರುದ್ಧ ದಿಕ್ಕಿನಿಂದ ಬಂದಿದ್ದಾನೆ. ಮಸ್ತಾಕ್‍ನ ಆಟೋ ಮತ್ತು ಹೀರಾಲಾಲ್‍ನ ದ್ವಿಚಕ್ರ ವಾಹನ ಇನ್ನೇನು ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಮುಂದಕ್ಕೆ ಸಾಗಿವೆ. ಆದ್ರೆ ಇದು ಇಷ್ಟಕ್ಕೇ ಮುಗಿಯಲಿಲ್ಲ. ಸಿಟ್ಟಿಗೆದ್ದ ಹೀರಾಲಾಲ್ ಗಾಡಿಯಿಂದ ಇಳಿದು ಬಂದು ಆಟೋ ಚಾಲಕನೊಂದಿಗೆ ವಾದಕ್ಕೆ ಇಳಿದಿದ್ದಾನೆ.

    ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ನಂತರ ಅಲ್ಲಿದ್ದ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಬಳಿಕ ಹೀರಾಲಾಲ್ ಬೈಕ್ ಏರಿ ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಮುಸ್ತಾಕ್ ತನ್ನ ಆಟೋದಲ್ಲಿದ್ದ ಬ್ಯಾಗ್‍ನಿಂದ ಸ್ಕ್ರೂ ಡ್ರೈವರ್ ತೆಗೆದು ಹೀರಾಲಾಲ್ ಮೇಲೆ ದಾಳಿ ನಡೆಸಿ ಇರಿಯಲು ಯತ್ನಿಸಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಹೀರಾಲಾಲ್, ಅಲ್ಲೇ ಇದ್ದ ದೊಡ್ಡ ಸಿಮೆಂಟ್ ಸ್ಲ್ಯಾಬ್‍ವೊಂದನ್ನು ತೆಗೆದುಕೊಂಡು ಮುಸ್ತಾಕ್ ತಲೆಗೆ ಹೊಡೆದಿದ್ದಾನೆ.

    ಪರಿಣಾಮ ಮುಸ್ತಾಕ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮುಸ್ತಾಕ್‍ನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವರದಿಯಾಗಿದೆ.

    https://www.youtube.com/watch?v=r34qOrRHowM

     

    ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನ ನೋಡಿದವರಲ್ಲಿ ಕೆಲವರು ಆಟೋ ಚಾಲಕನದ್ದೇ ತಪ್ಪು ಎಂದಿದ್ದರೆ ಇನ್ನೂ ಕೆಲವರು ಸೀಮೆಂಟ್ ಸ್ಲ್ಯಾಬ್‍ನಿಂದ ಹೊಡೆದ ಬೈಕ್ ಸವಾರನ ತಪ್ಪು ಎಂದಿದ್ದಾರೆ. ಸದ್ಯಕ್ಕೆ ಬೈಕ್ ಸವಾರ ಹೀರಾಲಾಲ್‍ನನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ.