Tag: Chowkidar

  • ರಾಜ್ಯಕ್ಕೂ ಕಾಲಿಟ್ಟ ಚೌಕಿದಾರ್ ಹವಾ!

    ರಾಜ್ಯಕ್ಕೂ ಕಾಲಿಟ್ಟ ಚೌಕಿದಾರ್ ಹವಾ!

    – ಹೆಸರಿನ ಮುಂದೆ ಚೌಕಿದಾರ್ ಬರೆದ ನಾಯಕರು
    – ಅಂದು `ಚಾಯ್ ಪೇ ಚರ್ಚಾ’ ಇಂದು ‘ನಾನು ಕೂಡ ಚೌಕಿದಾರ’

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಚೌಕಿದಾರ್ ಹವಾ ರಾಜ್ಯಕ್ಕೂ ಕಾಲಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಬಿಜೆಪಿ ನಾಯಕರು, ಸಂಸದರು ತಮ್ಮ ಹೆಸರಿನ ಮೊದಲು ‘ಚೌಕಿದರ್’ ಎಂದು ಬರೆದುಕೊಂಡಿದ್ದಾರೆ.

    ಶನಿವಾರ ಪ್ರಧಾನಿ ಮೋದಿ ಅವರು ‘ನಾನೂ ಕೂಡ ಚೌಕಿದಾರ’ #MainBhiChowkidar ಎಂದು ಹೇಳಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಇಂದು ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿರುವ ಹೆಸರಿನಲ್ಲಿ ‘ಚೌಕಿದಾರ’ ಎಂದು ಬರೆದುಕೊಂಡಿದ್ದಾರೆ. ಮೋದಿ ಹೆಸರು ಬದಲಾಯಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಮತ್ತು ಮೋದಿ ಅಭಿಮಾನಿಗಳು ತಮ್ಮ ಹೆಸರಿನ ಮುಂದೆ ಚೌಕಿದಾರ ಎಂದು ಸೇರಿಸಿದ್ದಾರೆ.

    ಸಂಸದ ಪ್ರತಾಪ್ ಸಿಂಹ, ಶಾಸಕ ಸಿಟಿ ರವಿ, ಅಮಿತ್ ಶಾ, ಪಿಯೂಶ್ ಗೋಯಲ್, ಜೆಪಿ ನಡ್ಡಾ ಸೇರಿದಂತೆ ಹಲವು ಮಂದಿ ತಮ್ಮ ಹೆಸರಿನ ಮುಂದುಗಡೆ ಚೌಕಿದಾರ ಎಂದು ಬರೆದುಕೊಂಡಿದ್ದಾರೆ.

    ನಾವೇಲ್ಲರೂ ನಮ್ಮ ಹೆಸರಿನ ಮುಂದೆ ಚೌಕಿದಾರ ಸೇರಿಸಿಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದ ತೆರಿಗೆ ವಿನಾಯತಿ ಕುರಿತು ಮಾಹಿತಿ ಸಂಚಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ದ ‘ನಾನೂ ಕೂಡ ಚೌಕಿದಾರ’ #MainBhiChowkidar ಆಂದೋಲನ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ವಿಶ್ವದಲ್ಲಿ ಟ್ರೆಂಡ್ ಆಗಿತ್ತು. ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿಯೊಬ್ಬರು ಚೌಕಿದಾರರೇ ಎಂದು ಮೋದಿ ಹೇಳಿದ್ದರು. ಪ್ರಧಾನಿ ಮೋದಿ ಅವರು ಮಾರ್ಚ್ 15ರಂದು ಬೆಳಗ್ಗೆ ಮಾಡಿದ್ದ ಟ್ವೀಟನ್ನು ಭಾನುವಾರ ಮಧ್ಯಾಹ್ನದ ವೇಳೆಗೆ 49 ಸಾವಿರ ಜನರು ಮಂದಿ ರೀ ಟ್ವೀಟ್ ಮಾಡಿದ್ದು, 1.3 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.

    ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಾಯಕರು ಮೋದಿಯನ್ನು ವಿರೋಧಿಸುವ ಸಮಯದಲ್ಲಿ ‘ಚೌಕಿದಾರ ಚೋರ್ ಹೈ’ ಎಂದು ಹೇಳಿ ಟೀಕಿಸುತ್ತಿದ್ದರು. ಹೀಗಾಗಿ ದೇಶದಲ್ಲಿ ಚೌಕಿದಾರ ಪದ ಹೆಚ್ಚು ಚರ್ಚೆಯಾಗುತಿತ್ತು. ಈಗ ತನ್ನನ್ನು ಟೀಕಿಸಲು ಬಳಕೆ ಮಾಡುತ್ತಿದ್ದ ‘ಚೌಕಿದಾರ್’ ಪದವನ್ನೇ ಬಳಸಿ ಮೋದಿಯವರು ಅಸ್ತ್ರವನ್ನಾಗಿ ಬಳಸಿ ಪ್ರಚಾರ ಅಭಿಯಾನದಲ್ಲಿ ತೊಡಗಿದ್ದಾರೆ.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಯೂಥ್ ಕಾಂಗ್ರೆಸ್ ರೀತಿಯಲ್ಲೇ ಮೋದಿಯನ್ನ ‘ಚಾಯ್ ವಾಲಾ’ ಅಂತಾ ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಅಂತಾ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.