Tag: Child lifting

  • ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನೊಂದಿಗಿದ್ದ ತಂದೆಯ ಮೇಲೆಯೇ ಹಲ್ಲೆ!

    ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನೊಂದಿಗಿದ್ದ ತಂದೆಯ ಮೇಲೆಯೇ ಹಲ್ಲೆ!

    ಮಂಗಳೂರು: ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಗೇ ಸಾರ್ವಜನಿಕರು ಸೇರಿ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.

    ಉಜಿರೆ ಪೇಟೆಯಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಮಗುವಿನೊಂದಿಗೆ ಆಟೋದಲ್ಲಿ ಬರುತ್ತಿದ್ದ ವ್ಯಕ್ತಿ ಸಂಶಯಾಸ್ಪದವಾಗಿ ಕಂಡು ಬಂದಿದ್ದರಿಂದ ಅನುಮಾನಗೊಂಡ ಸ್ಥಳೀಯರು ಆಟೋ ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಿಮಗ್ಯಾಕ್ರೀ ಎಂದು ಉತ್ತರಿಸಿದ ಕಾರಣ ಸಾರ್ವಜನಿಕರು ಆತನಿಗೆ ಥಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಕೊನೆಗೆ ತನ್ನದೇ ಮಗುವೆಂದು ಹೇಳಿಕೊಂಡಿದ್ದಾನೆ. ಕೂಡಲೇ ಬೆಳ್ತಂಗಡಿ ಪೊಲೀಸರು ಆಗಮಿಸಿ ವಿಚಾರಿಸಿದ್ದು, ಯುವಕ ಬೆಳ್ತಂಗಡಿಯ ಕಕ್ಕಿಂಜೆ ನಿವಾಸಿ ಖಲೀದ್ ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಖಲೀದ್‍ಗೆ ಎರಡು ಮದುವೆಯಾಗಿದ್ದು, ಬೇಲೂರು ಮೂಲದ ಯುವತಿ ಎರಡನೇ ಪತ್ನಿಯಾಗಿದ್ದಳು. ಆಕೆಯ ಎರಡು ವರ್ಷದ ಹೆಣ್ಣು ಮಗುವನ್ನು ಆಟೋದಲ್ಲಿ ಕರೆದುಕೊಂಡು ಬರುತ್ತಿದ್ದನು. ಈ ವೇಳೆ ಖಲೀದ್ ತನ್ನ ಮಗುವಿಗೆ ಹೊಡೆದಿದ್ದನ್ನು ಬೈಕಿನಲ್ಲಿ ಬರುತ್ತಿದ್ದ ಕೆಲ ಯುವಕರು ಗಮನಿಸಿದ್ದರು.

    ಈ ಹಿನ್ನೆಲೆಯಲ್ಲಿ ಉಜಿರೆ ಪೇಟೆಯಲ್ಲಿ ವಿಚಾರಿಸಿದ್ದಲ್ಲದೆ, ಮಕ್ಕಳ ಕಳ್ಳನೆಂದು ಭ್ರಮಿಸಿ ಹೊಡೆದಿದ್ದಾರೆ. ದಕ್ಷಿಣ ಕನ್ನಡ ಭಾಗದಲ್ಲಿ ಕೂಡ ಮಕ್ಕಳ ಕಳ್ಳರ ವದಂತಿ ಇರುವುದರಿಂದ ಇಂಥಹ ಘಟನೆ ನಡೆದಿದ್ದು, ಬೆಳ್ತಂಗಡಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.

  • ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆ ತ್ರಿಪುರದಲ್ಲಿ ನಡೆದಿದೆ.

    ಸುಕಾಂತ್ ಚಕ್ರವರ್ತಿ(33) ಕೊಲೆಯಾದ ವ್ಯಕ್ತಿ. ಸುಕಾಂತ್‍ರನ್ನು ಮಕ್ಕಳು ಕಳ್ಳ ಎಂದು ಭಾವಿಸಿದ ಗ್ರಾಮದ ಜನರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮೃತಿ ರಂಜನ್ ದಾಸ್ ತಿಳಿಸಿದ್ದಾರೆ.

    ಸುಕಾಂತ್ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಸದಸ್ಯರಾಗಿದ್ದು, ಮಕ್ಕಳ ಕಳ್ಳರು ವದಂತಿ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುಲು ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಯೇ ಕೊಲೆಯಾಗಿದ್ದಾರೆ.

    ಸುಕಾಂತ್ ಜನಸಂದಣಿ ಪ್ರದೇಶಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮಕ್ಕಳ ಕಳ್ಳರ ಜಾಗೃತಿಯ ಬಗ್ಗೆ ಅಭಿಯಾನ ನಡೆಸುತ್ತಿದ್ದರು. ಆಗ ಗ್ರಾಮಸ್ಥರು ಇವರೇ ಮಕ್ಕಳ ಕಳ್ಳ ಎಂದು ತಿಳಿದು ಅವರನ್ನು ಹೊಡೆದು ಕೊಂದಿದ್ದಾರೆ. ಅಲ್ಲದೇ ಸುಕಾಂತ್ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಹಲ್ಲೆ ನಡೆಸಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿದ್ದಾರೆ. ಜನರಿಗೆ ಒಳ್ಳೆಯದಾಗಲು ಸರ್ಕಾರದವರೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಹೇಳಿದರು ಅವರ ಮಾತನ್ನು ಕೇಳದೇ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಡೆದ ನಂತರ ತ್ರಿಪುರಾ ಮುಖ್ಯಮಂತ್ರಿ ಬಿಪ್‍ಲಾಬ್ ಕುಮಾರ್ ದೇಬ್ ಜನರಲ್ಲಿ ಯಾವುದೇ ವದಂತಿಗೆ ಕಿವಿ ಕೊಡದೇ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗುರುವಾರದಿಂದ 48 ಗಂಟೆ ಎಸ್‍ಎಂಎಸ್ ಹಾಗೂ ಇಂಟರ್ ನೆಟ್ ಸ್ಥಗಿತಗೊಳಿಸಿದ್ದಾರೆ.